ವಿದ್ಯಾರಣ್ಯ ಪುರ ಮಂಥನದ ಇಂದಿನ ಕಾರ್ಯಕ್ರಮ ನಿಗಧಿತ ಸಮಯದಂತೆ ಮನೆ ಮದ್ದು ಕಾರ್ಯಕ್ರಮದ ವಕ್ತಾರರಾದ *ಡಾ. ಎ. ಎಸ್ ಚಂದ್ರಶೇಖರ್* ಮತ್ತು ಅಧ್ಯಕ್ಷತೆ ವಹಿಸಿದ್ದ *ಶ್ರೀಮತಿ ಜಿ. ಸ್ವಪ್ನರ* ಅಮೃತ ಹಸ್ತದಿಂದ ಭಾರತಮಾತೆಗೆ ಪುಷ್ಪಾರ್ಚನೆ ಮತ್ತು ಶ್ರೀಮತಿ ಪ್ರೀತಿ ಜಯಂತ್ ಅವರ ಸುಶ್ರಾವ್ಯ ಕಂಠದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.
ಇತ್ತೀಚಿನ ಜೀವನ ಶೈಲಿ ಮತ್ತು ಆಹಾರ ಪದ್ದತಿ(Junkfood), ಕಲಬೆರಕೆ ಅಡುಗೆ ಎಣ್ಣೆ, ಆಹಾರ ಪದಾರ್ಧಗಳಿಂದಾಗಿ ಪ್ರತಿಯೊಬ್ಬರೂ ಒಂದಲ್ಲಾ ಒಂದು ರೋಗದಿಂದ ನರಳುವಂತಾಗಿದೆ. ಇದರ ಸಲುವಾಗಿ ಪ್ರತೀ ಬಾರಿಯೂ ವೈದ್ಯರ ಬಳಿ ಹೋಗಲು ಸಾವಿರಾರು ರೂಪಾಯಿಗಳನ್ನು ತೆತ್ತು ಆ ಕ್ಷಣಕ್ಕೆ ಆರೋಗ್ಯವಂತರಾದರೂ, ಔಷಧಿಗಳ ಅಡ್ಡ ಪರಿಣಾಮದಿಂದಾಗಿ ಮತ್ತೊಂದು ಕಾಯಿಲೆಗೆ ತುತ್ತಾಗಿರುವ ಹಲವಾರು ನಿದರ್ಶನಗಳು ನಮ್ಮ ಮುಂದಿರುವಾಗ ಇಂತಹದ್ದಕ್ಕೆಲ್ಲಾ ನಮ್ಮ ಪೂರ್ವಜರು ಮನೆಯಲ್ಲಿಯೇ ಮದ್ದನ್ನು ತಯಾರಿಸಿ ಆರೋಗ್ಯವಂತರಾಗಿರುತ್ತಿದ್ದರು ಎಂಬುದನ್ನು ಸವಿರವಾಗಿ ಸಚಿತ್ರ ಸಮೇತವಾಗಿ ಇಂದು ನಮ್ಮೆಲ್ಲರ ಮಂದೆ ಪ್ರಸ್ತುತ ಪಡಿಸಿದವರು ಶ್ರೀ. ಎ. ಎಸ್ ಚಂದ್ರಶೇಖರ್. ತಮ್ಮ ತಂದೆಯವರಿಂದ ಪಾರಂಪರಾಗತವಾಗಿ ಕಲಿತದ್ದಲ್ಲದೆ, ಆಯುರ್ವೇದದಲ್ಲಿ ವೈದ್ಯಕೀಯ ಪದವಿಯನ್ನು ಪಡೆದು ಪ್ರಸ್ತುತ ಮೈಸೂರಿನಲ್ಲಿ ವೈದ್ಯರಾಗಿರುವ ಶ್ರೀಯುತರ ಪಾಂಡಿತ್ಯವನ್ನು ಹೊಗಳಲು ಪದಗಳೇ ಸಾಲವು ಎಂದರೆ ಅತಿಶಯೋಕ್ತಿಯೇನಲ್ಲ.
ಮಾತು ಬಲ್ಲವನಿಗೆ ಜಗಳವಿಲ್ಲ , ಊಟ ಬಲ್ಲವನಿಗೆ ರೋಗವಿಲ್ಲ ಎನ್ನುವ ಹಾಗೆಯೇ, ಚಂದ್ರಶೇಖರರ ಶುಶ್ರೋಶೆಯಿಂದ ವಾಸಿಯಾಗದ ಖಾಯಿಲೆಯೇ ಇಲ್ಲವೇನೂ ಎನ್ನುವಂತಿತ್ತು. ವೈದ್ಯೋ ನಾರಾಯಣೋ ಹರಿಃ ಎಂಬುದನ್ನು ಅಕ್ಷರಶಃ ತೋರಿಸಿದ ಶ್ರೀಯುತರು, ಸಾಮಾನ್ಯ ರೋಗಗಳಾದ ನೆಗಡಿ, ಶೀತ, ಕೆಮ್ಮು, ತಲೆನೋವು, ಮೈಗ್ರೇನ್ ವಾತ, ಪಿತ್ತ, ಹುಳಿತೇಗು, ಹೊಟ್ಟೆ ಉಬ್ಬರ ಮುಂತಾದ ರೋಗಗಳಿಗೆ ತಮ್ಮ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಉಪಯೋಗಿಸುವ, ಉಪ್ಪು, ಮೆಣಸು, ಜೀರಿಗೆ, ಸೋಂಪು, ಮೆಂತ್ಯ , ಇಂಗು, ಹುರಳೀ ಕಾಳು, ಕಲ್ಲುಸಕ್ಕರೆ, ತುಪ್ಪ, ಜೇನು ತುಪ್ಪ, ಸೈಂದ್ರ ಲವಣ, ಕರ್ಪೂರ ಬೆಣ್ಣೆ , ಹರಳೆಣ್ಣೆ, ಎಳ್ಳೆಣ್ಣೆ , ಅಕ್ಕಿ ಹಿಟ್ಟು, ಗೋದಿ ಹಿಟ್ಟು, ಲೋಳೆಸರ, ಕೊತ್ತಂಬರಿ ಸೊಪ್ಪು, ಕರಿಬೇವು, ಶುಂಠಿ, ಬದನೇಕಾಯಿ, ಹೂಕೋಸು, ಸಬ್ಬಸೀಗೆ ಸೊಪ್ಪುನಿಂದ ಹೇಗೆಲ್ಲಾ ನಿವಾರಿಸ ಬಹುದು ಎಂಬುದನ್ನು ಸುಂದರವಾಗಿ ತಿಳಿಸಿ ಕೊಟ್ಟರು.
ನೆರೆದಿದ್ದ ಪ್ರೇಕ್ಷಕರಲ್ಲಿ ಹೆಂಗಳೆಯರೇ ಹೆಚ್ಚಾಗಿದ್ದ ಕಾರಣ, ಹೆಣ್ಣು ಮಕ್ಕಳಿಗೆ ಮುಟ್ಟಿನ ಸಮಯದಲ್ಲಾಗುವ ಸಮಸ್ಯೆಗಳಿಗೆ , ಬಾಣಂತೀಯರಿಗೆ ಎದೆ ಹಾಲಿನ ಸಮಸ್ಯೆಗಳಿಗೆ ಮಲ್ಲಿಗೆ ಹೂ, ಮಲ್ಲಿಗೆ ಗಿಡದ ಎಲೆ, ಹೂ ಕೋಸಿನ ಎಲೆಗಳಿಂದ ಹೇಗೆ ಪರಿಹರಿಸ ಬಹುದೆಂದು ತಿಳಿಸಿ ಕೊಟ್ಟರು. ಪೈಲ್ಸ್, ಫಿಸ್ತುಲ, ಫಿಷರ್ ಮುಂತಾದ ಸಮಸ್ಯೆಗಳಿಗೆ ಶಸ್ತ್ರ ಚಿಕಿತ್ಸೆ ಇಲ್ಲದೆ ಸುಲಭವಾಗಿ ಹೇಗೆಲ್ಲಾ ನಿವಾರಿಸಬಹುದು ಎಂದು ಸರಳವಾಗಿ ತಿಳಿಸಿಕೊಟ್ಟರು.
ಆವರು ಹೇಳುವ ಪ್ರಕಾರ ಮಧುಮೇಹ ಮತ್ತು ರಕ್ತದೊತ್ತಡಗಳು ನಮ್ಮ ಜೀವನ ಶೈಲಿಯ ದುಷ್ಪರಿಣಾಗಳೇ ಹೊರತು ರೋಗವೇ ಅಲ್ಲ. ಕೆಲ ಮನೆ ಮದ್ದು, ಆಹಾರ ಪದ್ದತಿ ಮತ್ತು ಜೀವನ ಶೈಲಿಯನ್ನು ಬದಲಿಸಿಕೊಳ್ಳುವ ಮೂಲಕ ಅವುಗಳನ್ನು ನಿವಾರಿಸಿಕೊಳ್ಳಬಹುದೆಂದು ತಿಳಿಸಿಕೊಟ್ಟಿದ್ದು ನೆರದಿದ್ದ ಎಲ್ಲರ ಮೆಚ್ಚಿಗೆ ಪಡೆಯಿತು.
ಇಂದು ತಿಳಿಸಿದ ಎಲ್ಲಾ ಮನೆ ಮದ್ದುಗಳನ್ನು ಅವರು ಸರಳ, ಸುಂದರ ಮತ್ತು ಜನಸಾಮಾನ್ಯರಿಗೆ ಕೈಗೆಟುಕುವ ಬೆಲೆಯಲ್ಲಿ ( ಪ್ರತೀ ಪುಸ್ತಕದ ಬೆಲೆ ಕೇವಲ ಹತ್ತು ರೂಪಾಯಿ ) ಸದ್ಯಕ್ಕೆ ನಾಲ್ಕು ಭಾಗಗಳ ಪುಸ್ತಕದ ರೂಪದಲ್ಲಿ ಹೊರತಂದಿದ್ದು ಪ್ರಸ್ತುತ ಐದನೆಯ ಭಾಗ ಹೊರ ತರುವ ಸಿದ್ಧತೆಯಲ್ಲಿದ್ದಾರೆ.
ಅವರ ಇದುವರೆಗಿನ ಸುಮಾರು ಮೂವತ್ತೈದು ವರ್ಷಗಳ ವೈದ್ಯಕೀಯ ವೃತ್ತಿಯಲ್ಲಿ ಸಾವಿರಾರು ರೋಗಿಗಳಿಗೆ ಸುಲಭವಾಗಿ ಅತ್ಯಂತ ಸರಳ ಖರ್ಚಿನಲ್ಲಿ ಸಮಸ್ಯೆಗಲನ್ನು ಪರಿಹರಿಸಿರುವ ಹೆಗ್ಗಳಿಕೆ ಅವರದ್ದು. ಅತ್ಯಂತ ಸರಳ ಸಹಜ ಜೀವಿಯಾಗಿರುವ ಅವರನ್ನು 9481170530 ದೂರವಾಣಿ ಸಂಖ್ಯೆಯಲ್ಲಿ ಸಂಪರ್ಕಿಸಿ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳ ಬಹುದಾಗಿದೆ.
ಶ್ರೀಯುತ ಜಯಂತ್ ರವರ ಸುಂದರ ನಿರೂಪಣೆ, ಶ್ರೀಕಂಠ ಬಾಳಗಂಚಿಯವರ ವಂದನಾರ್ಪಣೆ ಮತ್ತು ಶ್ರೀಮತಿ ಶೃತಿ ಕೀರ್ತಿಯವರ ಕಂಚಿನ ಕಂಠದ ವಂದೇ ಮಾತರಂನೊಂದಿಗೆ ಈ ತಿಂಗಳಿನ ಮಂಥನ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಲ್ಪಟಿತು.
ಕಾರ್ಯಕ್ರಮವನ್ನು ಈ ಲಿಂಕ್ನಿಂದ ಡೌನ್ಲೋಡ್ ಮಾಡಿಕೊಂಡು ಕೇಳಿ ಆರೋಗ್ಯವಂತರಾಗಿರಿ https://drive.google.com/file/d/1tPkA-81NE_COQBMWFDWrw-OOPfKR2iKQ/view?usp=sharing