ನೀರು ಸಕಲ ಜೀವರಾಶಿಗಳಿಗೆ ಅತ್ಯಾವಶ್ಯಕವಾದದ್ದು. ಒಂದು ಪಕ್ಷ ಆಹಾರವಿಲ್ಲದೇ ಬದುಕ ಬಹುದೇನೋ? ಆದರೆ ನೀರಿಲ್ಲದೆ ಜೀವನವನ್ನು ಊಹಿಸಲೂ ಅಸಾಧ್ಯ. ಎಲ್ಲರ ಪ್ರಾತರ್ವಿಧಿಯಿಂದ ಹಿಡಿದು ರಾತ್ರಿ ಮಲಗುವ ವರೆಗೆ ನೀರು ಅತ್ಯಾವಶ್ಯಕ. ಇನ್ನೂ ಕೃಷಿ ಹೈನುಗರಿಕೆ ಮತ್ತಾವುದೇ ಉದ್ಯೋಗಗಳೇ ಆಗಲಿ ಅದು ಒಂದಲ್ಲಾ ಒಂದು ರೀತಿಯಿಂದ ಅದು ನೀರಿನ ಮೇಲೆ ಅವಲಂಭಿತವಾಗಿದೆ. ಇಡೀ ಭೂ ಮಂಡಲದ ಶೇ 60ಕ್ಕೂ ಹೆಚ್ಚಿನ ಭಾಗ ಜಲಾವೃತವಾಗಿದ್ದರೂ ಇಡೀ ವಿಶ್ವದಲ್ಲಿ ಇಂದು ನೀರಿಗೆ ಹಾಹಾಕಾರವಾಗಿರುವುದು ನಿಜಕ್ಕೂ ಕಳಕಳಕಾರಿಯಾಗಿದೆ.
ಭಾರತದಲ್ಲಿ ಗಂಗಾ, , ಯಮುನಾ, ಗೋದಾವರಿ, ಸರಸ್ವತಿ,ನರ್ಮದಾ, ಸಿಂಧೂ, ಕಾವೇರಿ ಬ್ರಹ್ಮಪುತ್ರ, ಕೃಷ್ಣಾ, ಶರಾವತಿ, ತುಂಗಭದ್ರಾ ಇನ್ನೂ ಮುಂತಾದ ಅನೇಕ ನದಿಗಳು ನಮ್ಮ ದೇಶಾದ್ಯಂತ ಹರಿಯುತ್ತವಾದರೂ ಈ ರೀತಿಯ ನೀರಿನ ಬರಕ್ಕೆ ಕಾರಣವೇನು ಎಂದು ಯೋಚಿಸಿ ನೋಡಿದಲ್ಲಿ, ಈ ಎಲ್ಲಾ ನದಿಗಳಲ್ಲಿ ಅಂದಿನ ಸೊಬಗು ಇಂದು ಮಾಯವಾಗಿದೆ. ಹರಿಯುತ್ತಿರುವ ನೀರಿನ ಪ್ರಮಾಣವೂ ಅತ್ಯಂತ ಗಣನೀಯವಾಗಿ ಕಡಿಮೆಯಾಗಿದೆ. ಹಿಮಾಲಯ ತಪ್ಪಲು ಪ್ರದೇಶಗಳಲ್ಲಿ ಉಗಮವಾಗಿ ಹರಿಯುವ ಕೆಲವು ಪ್ರಮುಖ ನದಿಗಳನ್ನು ಹೊರತು ಪಡಿಸಿ ಉಳಿದ ಎಲ್ಲಾ ನದಿಗಳು ಮಳೆಯನ್ನೇ ಆಶ್ರಯಿಸಿವೆ. ವರ್ಷದಿಂದ ವರ್ಷಕ್ಕೆ ಮಳೆಯ ಪ್ರಮಾಣವೂ ಗಣನೀಯವಾಗಿ ಕಡಿಮೆಯಾದ ಪರಿಣಾಮವಾಗಿಯೇ ಇಂದು ಹಲವಾರು ನದಿಗಳು ಕೇವಲ ಮಳೆಗಾಲದಲ್ಲಿ ಮಾತ್ರವೇ ಪ್ರಸ್ತುತವಾಗಿದ್ದು ಉಳಿದ ಸಮಯದಲ್ಲಿ ಬತ್ತಿ ಹೋಗುತ್ತಿರುವುದು ನೀರಿನ ಸಮಸ್ಯೆಯ ಉಲ್ಬಣಕ್ಕೆ ಕಾರಣವಾಗಿವೆ. ನದಿಗಳು ತುಂಬಿ ಹರಿಯುತ್ತಿದ್ದಲ್ಲಿ ನದಿ ಪಾತ್ರಗಳ ಪ್ರದೇಶಗಳ ಕರೆ ಕಟ್ಟೆಗಳು ತುಂಬುತ್ತವೆ. ಕೆರೆ ಕಟ್ಟೆಗಳು ತುಂಬಿದ್ದಲ್ಲಿ ಸಹಜವಾಗಿ ಅ ಭಾಗಗಳಲ್ಲಿ ಅಂತರ್ಜಲ ಉತ್ತಮವಾಗಿದ್ದು ಜೀವನ ಅವಶ್ಕಕ್ಕೆ ಮತ್ತು ಕೃಷಿಗೆ ಅಗತ್ಯವಾದ ನೀರು ದೊರಕಿ ಎಲ್ಲವೂ ಸುಭಿಕ್ಷವಾಗಿರುತ್ತವೆ. ಹಾಗೆ ನದಿಗಳು ತುಂಬಿ ಹರಿಯಬೇಕಿದ್ದಲ್ಲಿ ಮಳೆಯ ಅವಶ್ಯಕವಿದೆ. ಸರಿಯಾದ ಸಮಯದಲ್ಲಿ ಸರಿಪ್ರಮಾಣದ ಮಳೆ ಸುರಿಯಲು ಗಿಡ ಮರಗಳ ಅವಶ್ಯಕವಿದೆ. ಭೂಮಿಯ ಮೇಲಿನ ನೀರು ಆವಿಯಾಗಿ ಮೋಡಗಳಾಗಿ ಮಾರ್ಪಾಡಗಿರುವುದನ್ನು ಈ ಎತ್ತರೆತ್ತರದ ಮರಗಿಡಗಳು ಆಕರ್ಷಿಸಿ ನಿಲ್ಲಿ ಮೋಡಗಳೇ, ಎಲ್ಲಿ ಹೋಗುವಿರಿ ನಾಲ್ಕು ಹನಿಯ ಚೆಲ್ಲೀ ಎಂಬ ಕವಿ ಶಿವರುದ್ರಪ್ಪನವರ ಕವಿತೆಯಂತೆ ಮಳೆ ಸುರಿಸುತ್ತವೆ. ಇಳೆಯನ್ನು ತಂಪಾಗಿಸುತ್ತವೆ.
ದುರದೃಷ್ಟವಶಾತ್ ನದಿ ಪಾತ್ರಗಳಲ್ಲಿ ಮರಗಳ್ಳರ ಹಾವಳಿ ಹೆಚ್ಚಾದ ಪರಿಣಾಮ ಸದ್ದಿಲ್ಲದೆ ಮರಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾದ ಪರಿಣಾಮ ಆ ನದೀ ಪಾತ್ರಗಳಲ್ಲಿ ಸರಿಯಾಗಿ ಮಳೆಯೇ ಆಗುತ್ತಿಲ್ಲ. ಮಳೆಯೇ ಆಗದಿದ್ದರೆ ಇನ್ನು ನದಿಗಳು ತುಂಬುವುದು ಎಲ್ಲಿಂದ ಬಂತು? ನದಿಗಳೇ ತುಂಬದಿದ್ದರೆ ಕೆರೆ ಕಟ್ಟೆಗಳಿಗೆ ನೀರು ಎಲ್ಲಿಂದ ಬರಬೇಕು? ಮಾನವ ತನ್ನ ದುರಾಸೆಯಂದ ನಿತ್ಯಹರಿದ್ವರ್ಣ ಕಾಡುಗಳನ್ನು ಬರಿದು ಮಾಡುತ್ತಾ ಕಾಂಕ್ರೀಟ್ ನಾಡನ್ನು ಕಟ್ಟುವ ಭರದಲ್ಲಿ ನದಿಪಾತ್ರಗಳ ಮರಳನ್ನು ಸದ್ದಿಲ್ಲದೆ, ಎಗ್ಗಿಲ್ಲದೆ ದೋಚುತ್ತಿರುವ ಪರಿಣಾಮವೂ ನೀರಿನ ಆಭಾವಕ್ಕೆ ಕಾರಣವಾಗಿದೆ. ಇನ್ನು ಅಲ್ಪ ಸ್ವಲ್ಪ ಹರಿಯುವ ನದಿಗಳಿಗೆ ಅಥವಾ ಕೆರೆಗಳಿಗೆ ವಿವಿಧ ಕಾರ್ಖಾನೆಗಳ ಮತ್ತು ಜನರ ತ್ಯಾಜ್ಯದ ನೀರನು ಹರಿಸಿ ನೀರನ್ನು ಮಲಿನಗೊಳಿಸುತ್ತಿರುವ ಪರಿಣಾಮ ಅಂತಹ ನೀರು ಕಲುಷಿತಗೊಂಡು ಕುಡಿಯಲು ಮತ್ತು ಬಳೆಸಲು ಅಯೋಗ್ಯವಾಗುತ್ತಿರುವುದು ಮಾರಕವಾಗಿದೆ.
ಸುಮಾರು ಇಪ್ಪತ್ತು ಮೂವತ್ತು ವರ್ಷಗಳ ಹಿಂದೆ ಕೇವಲ ಎಂಟು ಹತ್ತು ಅಡಿ ಭಾವಿ ತೋಡಿದರೆ ಸಾಕಷ್ಟು ದೊರಕುತ್ತಿದ್ದ ನೀರು ಇಂದು ಸಾವಿರಾರು ಅಡಿಗಳಷ್ಟು ಕೊರೆದರೂ ಕೊಳವೆ ಭಾವಿಗಳಲ್ಲಿ ಚಿಲುಕು ನೀರು ದೊರೆಯುತ್ತಿರುವುದು ಅತ್ಯಂತ ಕಳವಳಕಾರಿಯಾಗಿದೆ. ಇದೇ ರೀತಿ ಮುಂದುವರಿದರೆ ಇನ್ನು ಕೆಲವೇ ಕೆಲವು ವರ್ಷಗಳಲ್ಲಿ ನೀರು ಸಂಪೂರ್ಣವಾಗಿ ಬಟ್ಟ ಬರಿದಾಗುವ ಅಪಾಯವೇ ಕಣ್ಣಮುಂದಿದೆ. ಈ ಸಮಸ್ಯೆಗಳಿಗೆ ಪರಿಹಾರವೇ ಇಲ್ಲವೇ? ಇದೆ. ಖಂಡಿತವಾಗಿಯೂ ಈ ಸಮಸ್ಯೆಗೆ ನಮ್ಮಲ್ಲಿಯೇ ಪರಿಹಾರವಿದೆ. ಅದರೆ ಅದಕ್ಕಾಗಿ ನಮ್ಮ ಜೀವನ ಶೈಲಿಯಲ್ಲಿ ಅಲ್ಪಸ್ವಲ್ಪ ಬದಲಾವಣೆ ಮಾಡಿಕೊಳ್ಳಬೇಕಿದೆ.
ಮೊಟ್ಟ ಮೊದಲಿಗೆ ಅಗತ್ಯವಿದ್ದಷ್ಟೇ ನೀರನ್ನು ಬಳಸಬೇಕಿದೆ. ಸ್ನಾನ ಮಾಡಲು, ಶೌಚಾಲಯಗಳಲ್ಲಿ, ಪಾತ್ರೆ ತೊಳಯಲು, ಬಟ್ಟೆ ಒಗೆಯುವಾಗ ಧಾರಳವಾಗಿ ನೀರನ್ನು ಬಳೆಸದೆ ಎಷ್ಟು ಬೇಕೋ ಅಷ್ಟನ್ನೇ ಬಳೆಸುವ ಅಭ್ಯಾಸ ರೂಡಿಸಿಕೊಳ್ಳ ಬೇಕಾಗಿದೆ. ಹಿಂದಿನ ಕಾಲದಲ್ಲಿ ಈ ರೀತಿಯಾಗಿ ಬಳೆಸಿದ ಎಲ್ಲಾ ನೀರೂ, ಮನೆಯ ಹಿಂದಿನ ಹಿತ್ತಲಿಗೆ ಹೋಗುತ್ತಿತ್ತು. ಆಹಿತ್ತಲಿನಲ್ಲಿಯೇ ಸುಂದರವಾದ ಕೈತೋಟವಿದ್ದು, ಅಲ್ಲಿ ಮನೆಗೆ ಬೇಕಾದ ಹಣ್ಣು ವಿಶೇಷವಾಗಿ ಬಾಳೆಹಣ್ಣು, ವಿವಿಧ ತರಕಾರಿಗಳು ಹೂವಿನ ಗಿಡಗಳನ್ನು ಹಾಗಿ ಬಳೆಸಿದ ನೀರನ್ನು ಮರುಬಳಕೆ ಮಾಡುತ್ತಿದ್ದರು. ಇಂದು ಎಲ್ಲವನ್ನೂ ಒಳ ಚೆರಂಡಿಗೆ ಹಾಯಿಸಿ ನೀರನ್ನು ವ್ಯರ್ಥ ಮಾಡದೆ ಮೊದಲಿನಂತೆಯೇ ಉಪಯೋಗ ಮಾಡಿಕೊಳ್ಳಬೇಕಾಗಿದೆ.
ಹಿಂದೆ ಯಾವುದೇ ಪಾಳೇಗಾರರಿರಲಿ, ಸಾಮಂತರಿರಲಿ ಇಲ್ಲವೇ ರಾಜ ಮಹಾರಾಜರುಗಳೇ ಇರಲಿ ಪ್ರತೀ ನಾಲ್ಕೈದು ಹಳ್ಳಿಗಳ ಮಧ್ಯೆ ಒಂದು ದೊಡ್ಡದಾದ ಕೆರೆಯನ್ನು ನಿರ್ಮಿಸಿ ಎಲ್ಲಾ ಹಳ್ಳಿಗಳಿಂದಲೂ ರಾಜ ಕಾಲುವೆಗಳ ಮುಖಾಂತರ ಮಳೆಯ ನೀರೆಲ್ಲವೂ ಆ ಕೆರೆಯನ್ನು ತುಂಬಿಸುವುದರ ಮೂಲಕ ಆ ಎಲ್ಲಾ ಹಳ್ಳಿಗಳ ನೀರಿನ ಅವಶ್ಯಕತೆಗಳನ್ನು ಪೂರೈಸುತ್ತಿದ್ದರು. ಆದರೆ ಇಂದು ಇದ್ದ ರಾಜಕಾಲುವೆ ಮತ್ತು ಕೆರೆಗಳನ್ನೆಲ್ಲಾ ಮುಚ್ಚಿ ದೊಡ್ದದೊಡ್ಡ ಗಗನಚುಂಬಿ ಕಟ್ಟಡಗಳನ್ನು ಕಟ್ಟಿರುವುದರಿಂದಲೇ ನೀರಿಗೆ ಹಾಹಾಕಾರವಾಗಿದೆ. ಅಳಿದುಳಿದಿರುವ ಕೆರೆ ಕಟ್ಟೆಗಳ ಹೂಳನ್ನು ಎತ್ತಿಸಿ, ದಂಡೆಗಳನ್ನು ಭದ್ರಪಡಿಸಿ ರಾಜಕಾಲುವೆಗಳನ್ನು ಒತ್ತುವರಿಯನ್ನು ತೆರವು ಮಾಡಿಸಿ ಮಳೆ ನೀರು ಸರಾಗವಾಗಿ ಹರಿದು ಕೆರೆ ಕಟ್ತೆಗಳನ್ನು ತುಂಬುವಂತೆ ಮಾಡಬೇಕಿದೆ.
ದೇಶಾದ್ಯಂತ ಎಲ್ಲರ ಮನೆಗಳಲ್ಲಿಯೂ ಖಡ್ಡಾಯವಾಗಿ ಮಳೆಯ ನೀರಿನ ಕೊಯ್ಲಿನ ಪದ್ದತಿಯನ್ನು ಅಳವಡಿಸಿಕೊಂಡು ಮನೆಯ ಮಾಳಿಗೆಯ ಮೇಲೆ ಬಿದ್ದ ಪ್ರತಿ ಹನಿ ನೀರನ್ನೂ ಸಂಗ್ರಹಿಸಿ ಅದರ ಸದ್ಬಳಕೆ ಮಾಡಿಕೊಳ್ಳಬೇಕಿದೆ. ಹಾಗೆ ಹೆಚ್ಚಾದ ಮಳೆ ನೀರನ್ನು ಅಲ್ಲಿಯೇ ಇಂಗು ಗುಂಡಿಗಳನ್ನು ನಿರ್ಮಿಸಿ ಅಂತರ್ಜಲ ಹೆಚ್ಚಿಸಿಕೊಳ್ಳಬಹುದಾಗಿದೆ.
ಎಲ್ಲದ್ದಕ್ಕಿಂತಲೂ ಹೆಚ್ಚಾಗಿ ಎಲ್ಲರ ಮನೆಯ ಮುಂದೆಯೂ ಖಡ್ಡಾಯವಾಗಿ ಮರಗಳನ್ನು ನೆಟ್ಟು ಅದರ ಸಂಪೂರ್ಣ ಪೋಷಣೆಯ ಜವಾಬ್ದಾರಿ ಅವರದ್ದೇ ಆಗಬೇಕಿದೆ. ಹಾಗೆ ಮರ ಗಿಡಗಳನ್ನು ನೆಡುವುದರಿಂದ ಶುಧ್ಧವಾದ ಆಮ್ಲಜನಕವನ್ನು ನಮ್ಮಲ್ಲೇ ಪಡೆಯಬಹುದಲ್ಲದೆ ಆ ಮರಗಳು ಅನೇಕ ಪಕ್ಷಿಗಳ ಆಶ್ರಯ ತಾಣವಾಗುವುದಲ್ಲದೇ, ಮೋಡಗಳನ್ನು ಆಕರ್ಷಿಸಿ ಮಳೆಯನ್ನು ಸುರಿಸಬಲ್ಲದಾಗಿದೆ.
ಮಾರ್ಚ್ 22 ವಿಶ್ವನೀರಿನ ದಿನ. ನೀರನ್ನು ಸದ್ಬಳಕೆ ಮಾಡಿಕೊಳ್ಳುವುದು ಕೇವಲ ಇದೊಂದೇ ದಿನಕ್ಕೆ ಸೀಮಿತವಾಗಿರದೆ ಪ್ರತಿ ದಿನವೂ, ಪ್ರತಿಕ್ಷಣವೂ ನಮ್ಮ ಮನಸ್ಸಿನಲ್ಲಿದ್ದು ಎಲ್ಲೆಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನು ಉಳಿಸಬೇಕಾದ ಜವಾಬ್ಧಾರಿ ನಮ್ಮ ಮೇಲಿಯೇ ಇದೆ. ದಕ್ಷಿಣ ಆಫ್ರಿಕಾದ ಕೇಪ್ ಟೌನ್ ನಗರ ಈಗಾಗಲೇ ಅಕ್ಷರಶಃ ನೀರಿಲ್ಲದ ಪ್ರದೇಶ ಎಂದು ಘೋಷಿಸಲಾಗಿದೆ ಮತ್ತು ಅದೇ ರೀತಿ ನಮ್ಮದೇಶದಲ್ಲೂ 21 ನಗರಗಳಲ್ಲಿ ಅಂತರ್ಜಲ ಸಂಪೂರ್ಣವಾಗಿ ಬತ್ತಿಹೋಗಿದೆ ಎಂದು ಫೋಷಿಸಲಾಗಿದೆ. ಮಿಂಚಿ ಹೋದರೆ ಚಿಂತಿಸಿ ಫಲವಿಲ್ಲ ಎಂಬಂತೆ, ಪ್ರತಿ ಹನಿ ಹನಿ ಸರಿಯಾದ ರೀತಿಯಲ್ಲಿ ಬಳಸದೇ ಉಳಿಸದೇ ಹೋದಲ್ಲಿ , ನೀರಲ್ಲ, ಕಣ್ಣೀರನ್ನೂ ಸುರಿಸಲು ಆಗದಂತಹ ಪರಿಸ್ಥಿತಿ ಬರುವ ಎಲ್ಲ ಸಂಭವೂ ಹೆಚ್ಚಾಗಿದೆ. ಹಾಗಾಇ ಹನಿ ಹನಿ ಗೂಡಿದರೆ ಹಳ್ಳ ಎನ್ನುವಂತೆ ನಾವು ಬಳೆಸುವ ಪ್ರತಿಯೊಂದು ಹನಿ ಹನಿ ನೀರನ್ನೂ ಎಚ್ಚರಿಕೆಯಂದ ಬಳಸಲೇ ಬೇಕಿದೆ
ಏನಂತೀರೀ?