ಜಾಫರ್ ಷರೀಫ್, 70-90ರ ದಶಕದಲ್ಲಿ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಅತ್ಯಂತ ಪ್ರಭಾವೀ ಹೆಸರು. ಮೂಲತಃ ಚಿತ್ರದುರ್ಗದ ಕಡೆಯವರಾದ ಷರೀಫರು, ನಿಜಲಿಂಗಪ್ಪನವರ ಸಹಾಯಕರಾಗಿ ಸಂಸ್ಥಾ ಕಾಂಗ್ರೇಸ್ ಮತ್ತು ಇಂದಿರಾ ಕಾಂಗ್ರೇಸ್ ಎಂದು ಇಬ್ಭಾಗವಾದಾಗ, ಇಂದಿರಾ ಕಿಚನ್ ಕ್ಯಾಬಿನೆಟ್ ಭಾಗವಾಗಿ ರಾಜಕಾರಣದ ಉತ್ತುಂಗದ ಸ್ಥಿತಿ ತಲುಪಿದ್ದವರು. ನರಸಿಂಹರಾಯರ ಆಳ್ವಿಕೆಯಲ್ಲಿ ಕೇಂದ್ರದ ರೈಲ್ವೇ ಸಚಿವರಾಗಿದ್ದ ಶ್ರೀಯುತರು ಒಂದು ಕಾಲಕ್ಕೆ ತಮ್ಮ ಪ್ರಭಾವೀ ವ್ಯಕ್ತಿತ್ವದಿಂದಾಗಿ ರಾಜ್ಯದಲ್ಲಿಯೇ ಮುಖ್ಯಮಂತ್ರಿ ಸ್ಥಾನದ ಮೇಲೂ ಕಣ್ಣಿಟ್ಟಿದ್ದದ್ದು ಅದು ಅವರಿಗೆ ಮರೀಚಿಕೆಯಾಗಿಯೇ ಉಳಿದು ಹೋದದ್ದು ವಿಪರ್ಯಾಸವೇ ಸರಿ.
ಸುಮಾರು 2001ರಲ್ಲಿ ಇಂದಿನ ಮಾನ್ಯತಾ ಟೆಕ್ಪಾರ್ಕಿನಲ್ಲಿ ನಡೆದ RSSನ ಸಮರತಾ ಸಂಗಮ ಸಮಯದಲ್ಲಿ ಅಂದಿನ ಆ ಭಾಗದ ಲೋಕಸಭಾ ಸದಸ್ಯರಾಗಿದ್ದ ಶ್ರೀಯುತರು ಶಿಭಿರಕ್ಕೆ ಬಂದು ಹಲವು ಸ್ವಯಂಸೇವಕರನ್ನು ಭೇಟಿ ಮಾಡಿ ತಾವೂ ಕೂಡಾ ಚಿಕ್ಕವಯಸ್ಸಿನಲ್ಲಿ ಸಂಘಕ್ಕೆ ಆಡಲು ಹೋಗಿದ್ದನ್ನು ನೆನೆಪಿಸಿಕೊಂಡು ಸಂಘದ ಪ್ರಾರ್ಥನೆಯಾದ ನಮಸ್ತೇ ಸದಾ ವತ್ಸಲೇಯ ಕೆಲವು ಸಾಲುಗಳನ್ನು ಹೇಳಿದ್ದದ್ದು ಇನ್ನೂ ಈಗಷ್ಟೇ ಕೇಳಿದಂತಿದೆ.
ಸುಮಾರು ಮೂರ್ನಾಲ್ಕು ಬಾರೀ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅನಭಿಶಕ್ತ ದೊರೆಯಾಗಿದ್ದವರು 2003ರ ನಂತರದಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದಲ್ಲದೆ, ಕುಟುಂಬದ ಬಹುತೇಕ ಸದಸ್ಯರನ್ನೂ ಕಳೆದುಕೊಂಡು ಜರ್ಜರಿರಾಗಿದ್ದರು. ಕೊನೆಯದಾಗಿ ತಮ್ಮ ಮೊಮ್ಮಗನನ್ನು ರಾಜಕೀಯವಾಗಿ ಬೆಳೆಸಲು ರಾಜ್ಯನಾಯಕರ ಪ್ರಭಲ ವಿರೋಧದ ಹೊರತಾಗಿಯೂ ತಮ್ಮ ಕೇಂದ್ರ ನಾಯಕರ ಸಂಪರ್ಕವನ್ನು ಬಳೆಸಿ ಪ್ರಯತ್ನಿಸಿದರಾದರೂ ಅದೂ ಕೂಡಾ ಕೈಗೂಡದೆ ನಿತ್ರಾಣನಾಗಿದ್ದರು.
ಕಳೆದ ವಿಧಾನಸಭಾ ಸಮಯದಲ್ಲಿ ದೇವೇಗೌಡರ ಸಖ್ಯಬೆಳೆಸಿ ಇನ್ನೇನು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿಯೇ ಬಿಡುತ್ತಾರೆ ಎಂಬ ಗುಲ್ಲೆಬ್ಬಿದ್ದರೂ, ಮಾತೃಪಕ್ಷದಲ್ಲೇ ಮುಂದುವರೆದಿದ್ದು ಈಗ ಇತಿಹಾಸ.
ಕರ್ನಾಟಕದ ಕುಳ್ಳ ಎಂದೇ ಖ್ಯಾತರಾದ ಶ್ರೀ ದ್ಚಾರಕೀಶ್ ಅವರ ಆರೋಗ್ಯ ವಿಪರೀತ ಕೆಟ್ಟು ಹೋಗಿದ್ದಾಗ ದುರ್ಗದ ಕಡೆಯವರಾದ ಅವರ ಪತ್ನಿ ಅಬುಂಜಾರವರ ಕರೆಗೆ ಓಗೊಟ್ಟು ದ್ವಾರಕೀಶ್ ಅವರಿಗೆ ಬೇಕಾದ ಸಕಲ ವೈದ್ಯಕೀಯ ಸವಲತ್ತುಗಳನ್ನು ಸರ್ಕಾರದ ಕಡೆಯಿಂದ ಒದಗಿಸಿ ಅವರ ಆರೋಗ್ಯವನ್ನು ಕಾಪಾಡಿ ಹೃದಯ ವೈಶಾಲ್ಯ ಮೆರೆದಿದ್ದ ಶ್ರೀ ಜಾಫರ್ ಷರೀಫ್ ಅವರು ತಮ್ಮ 85ನೇ ಇಳಿ ವಯಸ್ಸಿನಲ್ಲಿ ಉಸಿರಾಟ ತೊಂದರೆಯಿಂದಾಗಿ ಇಂದು ನಮ್ಮನ್ನು ಅಗಲಿರುವುದು ನಿಜಕ್ಕೂ ದುಃಖಕರ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬ ಹಾಗೂ ಅವರ ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಕೊಡಲಿ ಎಂದು ಭಗವಂತನಲ್ಲಿ ಕೋರಿಕೊಳ್ಳುತ್ತೇನೆ.
ಬಹುಶಃ ಕಳೆದ ಹದಿನೈದು ದಿನಗಳಿಂದ ಕರ್ನಾಟಕದ ರಾಜಕೀಯಕ್ಕೆ ಬರಸಿಡಿಲೆರಗಿದ್ದು ಮೂರು ಕೇಂದ್ರ ಸಚಿವರನ್ನು ಒಟ್ಟೊಟ್ಟಿಗೆ ಕಳೆದುಕೊಂಡಿರುವುದು ನಿಜಕ್ಕೂ ತುಂಬಲಾಗದ ನಷ್ಟವೇ ಸರಿ.
ಏನಂತೀರೀ?