ದೀಪಾವಳಿ ಬೆಳಕಿನ ಹಬ್ಬ ನಮ್ಮ ಸಂಪ್ರದಾಯದಲ್ಲಿ ಆಬಾಲ ವೃದ್ದರಾಗಿ ಸಡಗರ ಸಂಭ್ರಮದಿಂದ ಭರಪೂರ ಐದು ದಿನಗಳು ಆಚರಿಸುವ ಹಬ್ಬ. ಆದರೆ ನೆನ್ನೆ ಈ ಕೆಳಕಂಡ ಫೋಟೋ ನೋಡಿ ಮನಸ್ಸಿಗೆ ಬೇಸರ ತರಿಸಿತು ಏನೂ ಅರಿಯದ ಎರಡು ಪುಟ್ಟ ಕಂದಮ್ಮಗಳ ಕೈಯಲ್ಲಿ ಪಟಾಕಿ ಬಿಡಿ, ಬಡ ಮಕ್ಕಳಿಗೆ ಎರಡು ಹೊತ್ತು ಒಪ್ಪತ್ತು ಊಟ ಕೊಡಿ ಎಂದು ಬರೆದಿತ್ತು.
ಅರೇ ಬಡಮಕ್ಕಳಿಗೆ ಊಟ ಹಾಕುವುದಕ್ಕೂ ದೀಪಾವಳಿಯ ಹಬ್ಬದಲ್ಲಿ ಪಟಾಕಿ ಹೊಡೆಯುವುದಕ್ಕೂ ಏನು ಸಂಬಂಧ? ಹಾಗಾದರೆ ನಾವು ಹಬ್ಬಗಳನ್ನು ಮಾಡದಿದ್ದ ಮಾತ್ರಕ್ಕೇ ಆ ಮಕ್ಕಳಿಗೆ ಊಟ ದೊರೆಯುತ್ತದೆಯೇ? ಆ ಮಕ್ಕಳು ಊಟ ಮಾಡುವುದು ಕೇವಲ ನಮ್ಮ ಹಬ್ಬಗಳ ಸಮಯದಲ್ಲಿ ಮಾತ್ರವೇ? ಆ ಮಕ್ಕಳಿಗೆ ಹೊತ್ತು ಹೊತ್ತಿಗೆ ಊಟ ಹಾಕುವುದು ಅವರವರ ಪೋಷಕರ ಜವಾಬ್ದಾರಿಯಲ್ಲವೇ? ಆ ಮಕ್ಕಳಿಗೆ ಹೊತ್ತಿನ ಊಟವನ್ನು ಹಾಕುವ ಸಲುವಾಗಿ ಸಾರ್ವಜನಿಕರು ತಮ್ಮ ಹಬ್ಬದ ಆಚರಣೆಯನ್ನು ಬದಿಗೊತ್ತಬೇಕೇ? ತಂದೆ ತಾಯಂದಿರು ತಮ್ಮ ಮಕ್ಕಳಿಗೆ ಒಪ್ಪತ್ತು ಊಟವನ್ನೂ ಹಾಕದಿರುವಷ್ಟು ಬಡವರಾದರೂ ಸ್ವಾಭಿಮಾನಿಗಳೇ ಹೊರತು ಇನ್ನೊಬ್ಬರ ಬಳಿ ಕೈ ಚಾಚುವುದಿಲ್ಲ. ಎಲ್ಲಾ ಸರ್ಕಾರೀ ಶಾಲೆಗಳಲ್ಲಿಯೂ ಮಧ್ಯಾಹ್ನದ ಬಿಸಿಯೂಟದ ವ್ಯವಸ್ಥೆಮಾಡಿ ಯಾವ ಮಕ್ಕಳೂ ಹಸಿದುಕೊಂಡು ಇರದಂತೆ ನೋಡಿಕೊಳ್ಳುತ್ತಿದೆ. ಸರ್ಕಾರವೂ ಸಹಾ ಜನ ಹಸಿದುಕೊಂಡು ಇರಬಾರದೆಂದೇ ನಾನಾ ರೀತಿಯ ಭಾಗ್ಯಗಳ ಮೂಲಕ ಅವರಿಗೆ ಅವಶ್ಯಕವಾದ ಆಹಾರಗಳನ್ನು ಉಚಿತವಾಗಿಯೋ ಇಲ್ಲವೇ ಅತ್ಯಂತ ಕಡಿಮೆ ಬೆಲೆಗಳಲ್ಲಿ ಕೊಡುತ್ತಿರುವಾಗ ಇದೆಂತಹಾ ಪ್ರತಿಭಟನೆ.
ದೀಪಾವಳಿ ಹಬ್ಬದಂದು ಪಟಾಕಿ ಹೊಡೆಯಬೇಡಿ. ಗಣೇಶ ಹಬ್ಬದಂದು ಬಣ್ಣದ ಗಣೇಶ ಉಪಯೋಗಿಸಬೇಡಿ, ಕೃಷ್ಣ ಜನ್ಮಾಷ್ಟಮಿಯಂದು ಬೆಣ್ಣೆಯ ಮಡಿಕೆ ಒಡೆಯಬೇಡಿ, ನಾಗರಪಂಚಮಿಯಂದು ಹುತ್ತಗಳಿಗೆ ಹಾಲನ್ನು ಎರೆಯಬೇಡಿ. ಶೋಭಾಯಾತ್ರೆ ಮಾಡಬೇಡಿ, ರಥಯಾತ್ರೆ ನಿಷಿದ್ದ, ಇತ್ತೀಚೆಗೆ ಮತ್ತೊಬ್ಬ ಪ್ರಭೂತಿ ದೀಪಾವಳಿಯ ರಾಮಲೀಲಾವನ್ನು ಮಕ್ಕಳಿಗೆ ಅಶ್ಲೀಲ ಚಿತ್ರ ತೋರಿಸಿದ ಹಾಗೆ ಎಂದು ತನ್ನ ಬಾಯಿಯನ್ನು ಹರಿಬಿಟ್ಟಿದ್ದಾನೆ. ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಶುಭಸಮಾರಂಭಗಳಲ್ಲಿ ಅಕ್ಷತೆಯನ್ನೇ ಹಾಕಬೇಡಿ ಅದರಿಂದ ಅಕ್ಕಿ ಹಾಳು. ಅರೇ ಏನಾಕ್ತಾ ಇದೆ? ನಮ್ಮ ಸಮಾಜದಲ್ಲಿ?
ಸ್ವಲ್ಪ ಗಮನವಿಟ್ಟು ಯೋಚಿಸಿದಲ್ಲಿ ಇದೆಲ್ಲದರ ಹಿಂದೆ ಒಂದು ವ್ಯವಸ್ಥಿತ ಸಂಚಿದೆ ಎಂದನಿಸುತ್ತದಲ್ಲವೇ? ನಮ್ಮ ಹಿಂದೂ ಸಂಪ್ರದಾಯಗಳನ್ನು ವ್ಯವಸ್ಥಿತವಾಗಿ ಹತ್ತಿಕ್ಕುವ ಷಡ್ಯಂತರ ಇದೆ ಎಂದಿನಿಸುತ್ತಿಲ್ಲವೇ? ನಮ್ಮ ಪ್ರತಿಯೊಂದು ಹಬ್ಬಕ್ಕೂ ಒಂದಲ್ಲಾ ಒಂದು ರೀತಿಯ ಕ್ಯಾತೆ ತೆಗೆಯುತ್ತಾ ಅಂದು ಬ್ರಿಟಿಷರು ನಮ್ಮನ್ನು ಒಡೆದಂತೆಯೇ ಇಂದು ಕೆಲವೊಂದು ಪಟ್ಟಭಧ್ರ ಹಿತಾಸಕ್ತಿಗಳೂ ನಮ್ಮ ನಮ್ಮನ್ನೇ ಎತ್ತಿ ಕಟ್ಟುತ್ತಿರುವುದು ಎಲ್ಲರ ಗಮನಕ್ಕೆ ಬರುತ್ತಿಲ್ಲವೇ?
ವರ್ಷದ ಮುನ್ನೂರೈವತ್ತು ದಿನಗಳೂ ಹಬ್ಬವನ್ನು ಆಚರಿಸುವ ಮೂಢಜನರು ಎಂದು ನಮ್ಮನ್ನು ಹಳಿಯುವ ಮಂದಿಯಾದರೂ ಮಾಡುತ್ತಿರುವುದಾದರೂ ಏನು? ಹೊಸ ವರ್ಷ, ಪ್ರೇಮಿಗಳ ದಿನ, ಧನ್ಯವಾದ ಅರ್ಪಿಸುವ ದಿನ, ಹ್ಯಾಲೋವಿನ್ ಡೇ, ಕ್ರಿಸ್ಮಸ್ ಹೀಗೇ ಹಾಗೆ ಎಂದು ಎಗ್ಗಿಲ್ಲದೇ ನೂರಾರು ಹಬ್ಬಗಳನ್ನು ಆಚರಿಸಿತ್ತಾ ಅವುಗಳಿಗೆ ನೂರಾರು ರೂಪಾಯಿ ಬೆಲೆಯ ಗ್ರೀಟಿಂಗ್ಸ್, ಜೊತೆಗೆ ಸಾವಿರಾರು ಬೆಲೆ ಬಾಳುವ ಉಡುಗೊರೆಗಳು ಜೊತೆಗೆ ತರ ತರಹದ ಚಾಕ್ಲೆಟ್ಗಳು, ಸಾವಿರಾರು ರೂಪಾಯಿಗಳ ಕೇಕ್ ಕತ್ತರಿಸುವಂತಹ ಹೊಸಾ ಸಂಪ್ರದಾಯ ಹಬ್ಬಿಸಿರುವುದು ಯಾರಿಗೂ ತಿಳಿಯುತ್ತಿಲ್ಲವೇ? ಅದೇ ರೀತಿ ಇನ್ನು ಯುವಜನತೆಗೆ ವಾರಾಂತ್ಯದಲ್ಲಿ ಖಡ್ಡಾಯವಾಗಿ ಪಾರ್ಟಿಗಳಿಗೇ ಹೋಗಲೇ ಬೇಕು ಅಲ್ಲಿ ಸಿಗರೇಟ್ ಮತ್ತು ಮದ್ಯಪಾನ ಸೇವಿಸಿದರೆ ಮಾತ್ರವೇ ಸಮಾಜದಲ್ಲಿ ದೊಡ್ಡ ವ್ಯಕ್ತಿಯಾಗುತ್ತಾರೆ ಎಂಬ ಹುಸಿ ಭ್ರಮೆ ಹುಟ್ಟಿಸುತ್ತಿರುವುದು ನಿಜಕ್ಕೂ ಗಾಭರಿ ಹುಟ್ಟಿಸುತ್ತಿದೆ. ಈಗಂತೂ ಕೇವಲ ಸಿಗರೇಟ್ ಮತ್ತು ಮಧ್ಯಪಾನಗಳಿಗಷ್ಟೇ ಸೀಮಿತವಾಗಿಲ್ಲದೇ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ರೇವ್ ಪಾರ್ಟಿ ಎಂಬ ಹೆಸರಿನಲ್ಲಿ ಯುವಜನತೆಯನ್ನು ಮಾದಕವಸ್ತುಗಳ ವ್ಯಸನಿಗಳನ್ನಾಗಿ ಮಾಡುತ್ತಿದ್ದಾರಲ್ಲಾ ಅವರ ಬಗ್ಗೆ ಏನನ್ನಬೇಕು?
ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ, ಎಲ್ಲಿ ಮಹಿಳೆಯರನ್ನು ಆದರದಿಂದ ಕಾಣಲಾಗುತ್ತದೆಯೋ ಅಲ್ಲಿ ದೇವಾನುದೇವತೆಗಳಿರುತ್ತಾರೆ. ಎಲ್ಲಿ ಮಹಿಳೆಯರನ್ನು ಅಪಮಾನದಿಂದ ಕಾಣಲಾಗುತ್ತದೆಯೋ ಅಲ್ಲಿ ಧರ್ಮಕರ್ಮಗಳು ನಿಷ್ಫಲವಾಗುತ್ತವೆಯೆಂದು ನಮ್ಮ ಮನು ಸ್ಮೃತಿ ತಿಳಿಸುತ್ತದೆ. ಹಾಗಾಗಿ ನಮ್ಮಲ್ಲಿ ಹೆಣ್ಣು ಮಕ್ಕಳನ್ನು ತಾಯಿಯಂತೆ ಕಾಣುತ್ತೇವೆ. ಆದರೆ ಅದೇ ಹೆಣ್ಣು ಮಕ್ಕಳನ್ನು ನಾಲ್ಕು ಗೋಡೆಗಳ ಮಧ್ಯೆಯೇ ಕತ್ತಲ ಕೋಣೆಯಲ್ಲಿಯೇ ಉಳಿಸುವ, ಒಂದು ಪಕ್ಷ ಮನೆಯಿಂದ ಹೊರಬರಲು ಅನುವು ಮಾಡಿಕೊಟ್ಟರೂ, ಚಳಿ ಇರಲೀ, ಮಳೆ ಇರಲೀ, ಬೇಸಿಗೆ ಇರಲೀ, ಹೊರ ಜಗತ್ತೇ ಕಾಣದಂತೆ ಪರದೆ ಹಾಕಿಕೊಂಡು ಓಡಾಡಿಸುವ ಮಂದಿ, ಇನ್ನು ಪ್ರತೀ ಹಬ್ಬಕ್ಕೂ ಲಕ್ಷಾಂತರ ಪ್ರಾಣಿಗಳನ್ನು ಬಲಿಹಾಕಿ ರಕ್ತದ ಕೋಡಿಯನ್ನೇ ಹರಿಸುವ, ದೇಶ ಮತ್ತು ಧರ್ಮಕ್ಕೂ ವೆತ್ಯಾಸ ಕಾಣದೆ, ಈ ಜಾತ್ಯಾತೀತ ದೇಶದಲ್ಲಿಯೂ, ಎಲ್ಲರಿಗೂ ಒಂದೇ ಕಾನೂನು ಎಂಬುದನ್ನು ದಿಕ್ಕರಿಸಿ ತಮ್ಮ ಧರ್ಮ ಹೇಳಿದಂತೆಯೇ ನಡೆಯುವ ಮತ್ತು ಅದನ್ನು ಎಲ್ಲರೂ ಅನುಸರಿಸುವಂತೆ ದಬ್ಬಾಳಿಕೆ ಮಾಡುವವರನ್ನು ಯಾರೂ ಯಾಕೆ ಕೇಳುವುದಿಲ್ಲ?
- ದೊಡ್ಡವರ ಹುಟ್ಟುಹಬ್ಬದ ದಿನ ಲಕ್ಷಂತರ ರೂಪಾಯಿ ಖರ್ಚು ಮಾಡಿ ಕೇಕು ಕತ್ತರಿಕೊಂಡು ಕೇಕೇ ಹಾಕುತ್ತಾ ಶಾಂಪೇನ್ ಮಳೆ ಹರಿಸುವಾಗ, ಬಡ ಮಕ್ಕಳ ಹಸಿವು ನೆನಪಾಗೊಲ್ವಾ?
- ಶ್ರೀಮಂತರ ಮದುವೆ ಮನೆಗಳಲ್ಲಿ ನೂರಾರು ರೀತಿಯ ಆಹಾರಗಳನ್ನು ತಯಾರಿಸಿ, ಬಂದ ಅಥಿತಿಗಳು ಅದನ್ನು ತಿನ್ನದೆ ಉಳಿದಾಗ ಆಹಾರ ವ್ಯರ್ಥವಾದಾಗ, ಬಡ ಮಕ್ಕಳ ಹಸಿವು ನೆನಪಾಗೊಲ್ವಾ?
- ತಮ್ಮ ನೆಚ್ಚಿನ ಸಿನಿಮಾ ನಟರ ಸಿನಿಮಾ ರಿಲೀಸ್ ಆದಾಗ ಅವರ ಫ್ಲೆಕ್ಸ್ ಗಳಿಗೆ ಹಾಲನ್ನು ಸುರಿವಾಗ, ಕುರಿ ಕೋಳಿ ಬಲಿ ಕೊಡುವಾಗ, ಬಡ ಮಕ್ಕಳ ಹಸಿವು ನೆನಪಾಗೊಲ್ವಾ?
- ಗ್ರಾಮ ಪಂಚಾಯಿತಿ,ನಗರಸಭೆ, ವಿಧಾನಸಭೆ, ಲೋಕಸಭೆ ಈ ರೀತಿಯ ಯಾವುದೇ ಚುನಾವಣೆಗಳ ಸಮಯದಲ್ಲಿ ಹಣ ಹೆಂಡದ ಮಳೆ ಸುರಿಸುವಾಗ ಮತ್ತು ಫಲಿತಾಂಶದ ಸಂಧರ್ಭದಲ್ಲಿ ಸಾವಿರಾರು ರೂಪಾಯಿಯ ಪಟಾಕಿ ಹೊಡೆಯುವಾಗ, ಪರಿಸರ ಹಾಳೋಗೋಲ್ವಾ?
- ಪ್ರತೀ ಐಪಿಎಲ್ ಪಂದ್ಯಾವಳಿಗಳು ಮುಗಿದಾಗ ಲಕ್ಷಾಂತರ ರೂಪಾಯಿಗಳ ಪಟಾಕಿ ಸುಡುವಾಗ, ಪರಿಸರ ಹಾಳೋಗೋಲ್ವಾ?
- ಕೆಟ್ಟ ರಸ್ತೆಗಳಲ್ಲಿ, ವಾಹನ ದಟ್ಟಣೆಯಿಂದ, ಪ್ರತೀ ನಿತ್ಯ ಲಕ್ಷಾಂತರ ವಾಹನಗಳು ಹೊರಸೂಸುವ ಹೊಗೆಯಿಂದ, ಪರಿಸರ ಹಾಳೋಗೋಲ್ವಾ?
- ಪ್ರತೀ ದಿನವೂ ಹೊತ್ತಲ್ಲದ ಹೊತ್ತಿನಲ್ಲಿ ಲೌಡ್ ಸ್ಪೀಕರಿನಲ್ಲಿ ಆಜಾನ್ ಕೂಗುವಾಗ, ಶಬ್ಧಮಾಲಿನ್ಯವಾಗುವುದಲ್ವಾ?
- ನಾಯಿ ಕೊಡೆಗಳಂತೆ ನಗರದಾದ್ಯಂತ ತಲೆ ಎತ್ತಿರುವ ಮೊಬೈಲ್ ಟವರ್ಗಳ ಹೊರ ಸೂಸುವ ತರಂಗಾತಂರಗಳಿಂದ ಕಾಣೆಯಾಗಿರುವ ಗುಬ್ಬಿಗಳು, ಇವರ ಕಣ್ಣಿಗೆ ಕಾಣುವುದೇ ಇಲ್ವಾ?
ನಮ್ಮ ಪೂರ್ವಜರು ಹಬ್ಬಗಳ ಆಚರಣೆಯನ್ನು ತಂದಿರುವುದೇ ಸಮಾಜದ ಸ್ವಾಸ್ಥತ್ಯೆಯನ್ನು ಕಾಪಾಡುವುದಕ್ಕೆ,ಎಲ್ಲರೂ ಒಟ್ಟಿಗೆ ಸಂಭ್ರಮ ಪಡುವುದಕ್ಕೆ ಮತ್ತು ಸಮಾಜದ ಆರ್ಥಿಕತೆಯನ್ನು ಸುಭದ್ರಗೊಳಿಸುವುದಕ್ಕಾಗಿ. ಒಂದು ಹಬ್ಬದ ಆಚರಣೆ ಮಾಡುವಾಗಿನ ಸಡಗರದಲ್ಲಿ, ಲಕ್ಷಾಂತರ ಕುಟುಂಬಗಳು ಭಾಗಿಯಾಗುತ್ತವೆ. ಆಹಾರ ಬೆಳೆದ ರೈತ, ಹಾಲು ಉತ್ಪಾದಕ, ಬಟ್ಟೆಗಳ ತಯಾರಕರು, ಹೂವು ಮಾರಾಟಗಾರರು, ದೇವರ ಮೂರ್ತಿಗಳ ತಯಾರಕರು, ಪಟಾಕಿ ತಯಾರಕರು, ಸಿಹಿ ತಿಂಡಿ ತಯಾರಕರುಗಳು ಹೀಗೆ ಸಾವಿರಾರು ಮನೆಗಳು ಸಂಭ್ರಮಿಸುತ್ತಾರೆ.
ಒಂದು ಪಕ್ಷ ಇಂತಹ ವಿಕೃತಿಗಳ ಮಾತಿನಂತೆ ಹಬ್ಬವನ್ನೇ ಆಚರಣೆ ಮಾಡದೇ ಹೋದರೇ ಸಮಾಜದ ಆರ್ಥಿಕತೆಯನ್ನೇ ಬುಡಮೇಲು ಮಾಡಿದಂತಾಗುವುದಿಲ್ಲವೇ? ಸಮಾಜದಲ್ಲಿ ಆಗುವ ಪ್ರತೀ ಪ್ರಕೃತಿ ವಿಕೋಪ ಸಂದರ್ಭಗಳಲ್ಲಿಯೂ ಎಲ್ಲರೂ ಸ್ವಯಂಪ್ರೇರಿತವಾಗಿ ತಮ್ಮ ಕೈಲಾಗುವ ಅಳಿಲು ಸೇವೆಯನ್ನು ಮಾಡುತ್ತಿರುವಾಗ ಹಬ್ಬವನ್ನೇ ಆಚರಿಸಬೇಡಿ. ಸಂಭ್ರಮಿಸಲೇ ಬೇಡಿ ಅನ್ನುವಂತಹ ಇದೆಂತಾ ಪ್ರತಿಭಟನೇ? ಇಷ್ಟಾದ ಮೇಲೂ ಆ ಮಕ್ಕಳಿಗೆ ಸಹಾಯ ಮಾಡಬೇಕೆಂದಿದ್ದಲ್ಲಿ ಅಂತಹವರು ತಮ್ಮ ಸಂಪಾದನೆಯ ಹಣದಲ್ಲಿ ಮಾಡಲಿ. ಅದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ. ಅದು ಬಿಟ್ಟು ಸುಮ್ಮನೆ ಇತರ ಮೇಲೆ ತಮ್ಮ ಧ್ತ್ಯೇಯಗಳನ್ನು ಹೇರುವುದು ತರವಲ್ಲ.
ಇಂತಹ ಪ್ರಭೂತಿಗಳ ಈ ರೀತಿಯ ದಬ್ಬಾಳಿಕೆಯನ್ನು ನೋಡುತ್ತಿರುವಾಗ ಇತ್ತೀಚೆಗೆ ನಮ್ಮ ಹಿರಿಯ ಹಿತೈಷಿಗಳಿಬ್ಬರು ಹೇಳಿದ ಈ ಪ್ರಸಂಗ ನೆನಪಾಯಿತು.
ಛೇರ್ಮನ್ ತಿಮ್ಮ ತನ್ನ ಮಗನನ್ನು ಶಾಲೆಗೆ ಸೇರಿಸಲು ಹೊರಟ. ಶಾಲೆಯಲ್ಲಿ,ಮೇಸ್ಟ್ರು ತುಂಬ ಸ್ಟ್ರಿಕ್ಟು.ತಪ್ಪು ಮಾಡಿದರೆ ಹೊಡೆತ ಗ್ಯಾರಂಟಿ.ಛೇರ್ಮನ್ನರ ಮಗ, ತಪ್ಪು ಮಾಡಿದರೆ ಏನು ಮಾಡಬೇಕು? ಎನ್ನುವ ಗೊಂದಲ. ಸ್ವತಃ ಛೇರ್ಮನ್ನರೇ ಆ ಗೊಂದಲಕ್ಕೆ ಪರಿಹಾರ ಸೂಚಿಸಿದರು.
ಮೇಸ್ಟ್ರೆ, ಒಂದು ವೇಳೆ ನನ್ನ ಮಗ ತಪ್ಪು ಮಾಡಿದರೆ, ಅವನ ಬದಲು ಬೇರೆ ಯಾರಾದರೂ ಒಬ್ಬನಿಗೆ ಸರಿಯಾಗಿ ನಾಲ್ಕು ಬಾರಿಸಿ. ಆಗ ನನ್ನ ಮಗ ಹುಷಾರಾಗ್ತಾನೆ ಅಂತ. ದಯವಿಟ್ಟುಅವನಿಗೆ ಹೊಡೆಯೋದು ಬೇಡ ಎಂದರು.
ಅಂದಿನಿಂದ, ಹೇಗಿದ್ದರೂ ಏಟು ತಿನ್ನಲು,ಮತ್ತೊಬ್ಬ ಅಬ್ಬೇಪಾರಿ ಸಿಕ್ಕಿದ್ದಾನಲ್ಲಾ ಎಂದು ಛೇರ್ಮನ್ ಮಗ ತಪ್ಪು ಮಾಡುತ್ತಲೇ ಹೋದ.
ಇಲ್ಲಿ
ಶಾಲೆ -> ನಮ್ಮ ದೇಶ
ಛೇರ್ಮನ್ ಮತ್ತು ಅವನ ಮಗ -> ನಮ್ಮ ಸಂಸ್ಕೃತಿಯನ್ನು ವಿರೋಧಿಸುವ ಪ್ರಭೂತಿಗಳು ಮತ್ತು ಅನ್ಯಧರ್ಮೀಯರು
ಏಟು ತಿನ್ನುವ ಹುಡುಗ -> ಹಿಂದೂಗಳು
ಛೇರ್ಮನ್ ಮತ್ತವನ ಮಗ ಪ್ರತೀ ಬಾರಿಯೂ ತಪ್ಪು ಮಾಡುತ್ತಲೇ ಹೋಗುತ್ತಾರಾದರೂ ಅವರಿಗೆ ಯಾವುದೇ ಶಿಕ್ಷೆಯಾಗುವುದಿಲ್ಲ ಮತ್ತು ಅವನಿಗೆ ಆವನು ಮಾಡುತ್ತಿರುವ ತಪ್ಪಿನ ಅರಿವಾಗುವುದೇ ಇಲ್ಲ. ಆದರೆ, ತನ್ನದಲ್ಲದ ತಪ್ಪಿಗೆ ಏಟು ತಿನ್ನುವ ಹಣೆ ಬರಹ ಮಾತ್ರ ನಮ್ಮ ಹಿಂದೂಗಳಿಗೆ ತಪ್ಪುವುದಿಲ್ಲ.
ಹಾಗಾಗಿ ಯಾರು ಏನೇ ಹೇಳಲಿ, ಬಿಡಲಿ. ಹೇಳೀ ಕೇಳಿ ನಮ್ಮದು ಜಾತ್ಯಾತೀತ ದೇಶ. ಅವರಿಗೆ ಹೇಗೆ ಅವರ ಸಂಸೃತಿ ಮತ್ತು ಸಂಪ್ರದಾಯಗಳ ಅಚರಣೆಗೆ ಅವಕಾಶವಿಯೋ ಹಾಗೆ ನಮಗೂ ಅವಕಾಶವಿದೆ. ಹಾಗಾಗಿ ಅಂತಹವರ ಮಾತುಗಳನ್ನು ಹೆಚ್ಚಿಗೆ ತಲೆಗೆ ಹಾಕಿಕೊಳ್ಳದೆ ನಮ್ಮ ಹಿರಿಯರು ಸಾವಿರಾರು ವರ್ಷಗಳಿಂದ ಆಚರಣೆ ಮಾಡಿಕೊಂಡು ಬಂದಿರುವ ಹಬ್ಬ ಮತ್ತು ಸಂಪ್ರದಾಯಗಳನ್ನು ಸಂಭ್ರಮ ಸಡಗರಗಳಿಂದ ಆಚರಿಸೋಣ.. ಹಾಂ!! ಇನ್ನೊಂದು ಕೋರಿಕೆ. ಯಾರ ಮನೆಗಳಲ್ಲಿ ನಮ್ಮ ಹಬ್ಬಗಳನ್ನು ಆಚರಿಸುತ್ತಾರೋ ಅವರ ಬಳಿಯಲ್ಲಿಯೇ ಪದಾರ್ಥಗಳನ್ನು ಖರೀದಿಸೋಣ. ಏಕೆಂದರೆ ನಾವು ಕೊಟ್ಟ ಹಣದಲ್ಲಿ ಅವರ ಮನೆಗಳಲ್ಲಿಯೂ ಹಬ್ಬದ ಸಡಗರ ಸಂಭ್ರಮ ಮೂಡಿಸೋಣ ಮತ್ತು ಅವರನ್ನು ಮತ್ತೊಬ್ಬರ ಬಳಿ ಊಟಕ್ಕಾಗಿ ಕೈ ಚಾಚದಿರುವಂತೆ ಸ್ವಾಭಿಮಾನಿಗಳಾಗಿಸೋಣ.
ಏನಂತೀರೀ?