ಕಳೆದ ತಿಂಗಳು ಏಪ್ರಿಲ್ 16 2020 ರಂದು, ಸೂರತ್ನಲ್ಲಿ ತಮ್ಮ ಗುರು ಶ್ರೀ ಮಹಂತ್ ರಾಮ್ಗಿರಿ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಇಬ್ಬರು ಜುನಾ ಅಖಾರ ಸಾಧುಗಳಾದ ಚಿಕ್ನೆ ಮಹಾರಾಜ್ ಕಲ್ಪವೃಕ್ಷಗಿರಿ (70 ವರ್ಷ) ಮತ್ತು ಸುಶೀಲ್ ಗಿರಿ ಮಹಾರಾಜ್ (35 ವರ್ಷ) ಈ ಇಬ್ಬರು ಸ್ವಾಮಿಗಳು ಕಾರಿನಲ್ಲಿ ನಿಲೇಶ್ ತೆಲ್ಗಡೆ (30 ವರ್ಷದ) ಚಾಲಕನೊಂದಿಗೆ ಪ್ರಯಾಣಿಸುತ್ತಿದ್ದಾಗ, ಉದ್ರಿಕ್ತ ಗುಂಪೊಂದು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಗಡ್ಚಿಂಚಲೆ ಗ್ರಾಮದಲ್ಲಿ ಮೂವರನ್ನೂ ಪೋಲೀಸರ ಸಮ್ಮುಖದಲ್ಲೇ ಬರ್ಬರವಾಗಿ ಹತ್ಯೆಮಾಡಿತು. ದೇಶಾದ್ಯಂತದ ಕರೋನ ವೈರಸ್ ಲಾಕ್ ಡೌನ್ ಸಮಯದಲ್ಲಿ ಈ ಪ್ರದೇಶದಲ್ಲಿ ಮಕ್ಕಳ ಕಳ್ಳರು ಓಡಾಡುತ್ತಿದ್ದಾರೆ ಎಂಬ ಎಂಬ ವಾಟ್ಸಾಪ್ ವದಂತಿ ಈ ಘಟನೆ ಕಾರಣವಾಗಿದೆ ಎಂದು ತಿಪ್ಪೇ ಸಾರಿಸಲು ಪ್ರಯತ್ನಿಸಲಾಯಿತಾದರೂ ಇದರ ಹಿಂದೆ ಒಂದು ದೊಡ್ಡ ಸಂಘಟನೆಯ ಕೈವಾಡವಿದೆ ಎಂದು ಅನೇಕರು ಅರೋಪ ಮಾಡಿದ ಕಾರಣ ಈ ಘಟನೆಯ ಸಂಬಂಧ ಈಗಾಗಲೇ ಪೊಲೀಸರು 100 ಕ್ಕೂ ಹೆಚ್ಚು ಶಂಕಿತರನ್ನು ಬಂಧಿಸಿರುವುದಲ್ಲದೇ ತನಿಖೆಯನ್ನೂ ನಡೆಸುತ್ತಿದ್ದಾರೆ.
ದೇಶದ ಯಾವುದೇ ಮೂಲೆಯಲ್ಲಿ ಇದಕ್ಕಿಂತಲೂ ಸಣ್ಣ ಘಟನೆಗಳು ನಡೆದಲ್ಲಿ ಕೂಡಲೇ ಅಲ್ಲಿಗೆ ತೆರಳುವ ಗಂಜೀಗಿರಾಕಿಗಳು, ಸ್ವಘೋಷಿತ ಬುದ್ಧಿ ಜೀವಿಗಳು ಮತ್ತು ವಿರೋಧ ಪಕ್ಷವಾದ ಕಾಂಗ್ರೇಸ್ ಪಕ್ಷ ಈ ಘಟನೆಯ ಕುರಿತಾಗಿ ಒಂದು ಚೂರೂ ಸೊಲ್ಲೆತ್ತದ್ದನ್ನು ರಿಪಬ್ಲಿಕ್ ಟಿವಿ ಸಂಸ್ಥಾಪಕ ಅರ್ನಾಬ್ ಗೋಸ್ವಾಮಿ ಅವರು ತಮ್ಮ ಸುದ್ದಿ ವಾಹಿನಿಯ ಕಾರ್ಯಕ್ರಮದಲ್ಲಿ ಕಠುವಾಗಿ ಟೀಕಿಸಿದ್ದಲ್ಲದೇ, ದೇಶದ ಯಾವುದೇ ಮೂಲೆಯಲ್ಲಿ ಇಂತಹ ಘಟನೆ ನೆಡೆದಲ್ಲಿ ಅದಕ್ಕೆ ಕೇಂದ್ರ ಸರ್ಕಾರವೇ ಹೊಣೆ ಎಂಬು ಬ್ಬೊಬ್ಬಿರಿವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ತಮ್ಮದೇ ಸಮ್ಮಿಶ್ರಸರ್ಕಾರ ನಡೆಸುತ್ತಿರುವ ಮಹಾರಾಷ್ಟ್ರದಲ್ಲಿ ಇಂತಹ ಬರ್ಬರ ಘಟನೆಯಾದಾಗ ಸುಮ್ಮನಿರುವುದು ಏಕೆ? ಇಟಲೀ ಮೂಲದ ರೋಮನ್ ಕ್ಯಾಥೋಲಿಕ್ ಧರ್ಮಕ್ಕೆ ಸೇರಿದವರಾದ ಸೋನೀಯಾ ಆಂಟೋನಿಯೋ ಮೈನೋ ಅವರಿಗೆ ಹಿಂದೂ ಸ್ವಾಮಿಗಳ ಹತ್ಯೆಯಾದಲ್ಲಿ ಮನಸ್ಸು ಕರಗುವುದಿಲ್ಲವೇ ಎಂದು ಸೋನಿಯಾ ಗಾಂಧಿಯವರ ಮೂಲ ಹೆಸರನ್ನು ತಮ್ಮ ಕಾರ್ಯಕ್ರಮದಲ್ಲಿ ಉಲ್ಲೇಖಿಸಿದ್ದರು.
ಸೋನಿಯಾ ವಿದೇಶದಲ್ಲಿ ಹುಟ್ಟಿ ಭಾರತೀಯರನ್ನು ಮದುವೆಯಾಗಿ, ಸೊಸೆಯ ಮೂಲಕ ಭಾರತಕ್ಕೆ ಬಂದು 14 ವರ್ಷಗಳಾದ ನಂತರ ಭಾರತದ ಪೌರತ್ವ ಪಡೆದ ವಿದೇಶೀ ಮಹಿಳೆ ಎಂಬುದು ಭಾರತದ ಪ್ರತಿಯೊಬ್ಬ ಪ್ರಜೆಗೂ ತಿಳಿದಿರುವ ಸತ್ಯ. ಆದರೆ ಇದೇ ಸತ್ಯವನ್ನು ಸಾರ್ವಜನಿಕವಾಗಿ ತಿಳಿಸಿದರೆ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರಿಗೆ ಅದೇಕೋ ಮುನಿಸು. ಕೇವಲ ಸೋನಿಯಾ ಅವರ ಮೂಲ ಹೆಸರನ್ನು ಹೇಳಿದ್ದನ್ನೇ ಮುಂದಿಟ್ಟುಕೊಂಡು ಮಾರನೇಯ ದಿನವೇ ದೇಶಾದ್ಯಂತ ಸುಮಾರು 200ಕ್ಕೂ ಅಧಿಕ ದೂರುಗಳು ದಾಖಲಾದವು. ಮತ್ತು ಇನ್ನೂ ಅತಿರೇಕದಂತೆ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಹಾಗೆ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ಅರ್ಣಾಬ್ ಮತ್ತು ಅವರ ಪತ್ನಿಯ ಮೇಲೆ ಕೆಲ ಗೂಂಡಾಗಳು ಧಾಳಿ ನಡೆಸಿದದ್ದು ಅಕ್ಷಮ್ಯ ಆಪರಾಧವೇ ಸರಿ,
ಅವರ ಮೇಲೆ ಹಲ್ಲೆ ಮಾಡಿದ ಗೂಂಡಾಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಅವರು ಸ್ಥಳೀಯ ಕಾಂಗ್ರೇಸ್ ಪಕ್ಷದ ಸದಸ್ಯರಾಗಿದ್ದು ತಮ್ಮ ಮುಖಂಡರ ಆಣತಿಯ ಮೇರೆಗೆ ಹಲ್ಲೆ ನಡೆಸಿದ್ದಾಗಿ ಒಪ್ಪಿಕೊಂಡರು. ಇದು ಕೇವಲ ಒಂದಿಬ್ಬರು ಗೂಂಡಾಗಳ ಮನಸ್ಥಿತಿಯಲ್ಲದೇ ಇಡೀ ಕಾಂಗ್ರೇಸ್ ಕಾರ್ಯಕರ್ತರ ಮನಸ್ಥಿತಿಯಾಗಿದೆ. ಈ ಹಲ್ಲೆಯ ಒಂದು ದಿನ ಮೊದಲು ಛತ್ತೀಸ್ ಘಡ್ ಮುಖ್ಯಮಂತ್ರಿಯೂ ಸಹಾ ಇದೇ ರೀತಿಯ ಧಮ್ಕಿಯನ್ನು ಹಾಕಿ ಈ ಜನ ಸಮೂಹ ಮಾಡಿದ ಹತ್ಯೆಯ ವಿಷಯವನ್ನು ಕೈಬಿಡದಿದ್ದರೆ ಬಾರೀ ಫಲವನ್ನು ಅನುಭವಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದರು. ಇದೆಲ್ಲಾ ನೋಡಿದಲ್ಲಿ ತಮ್ಮ ಅಧಿನಾಯಕಿಯ ಓಲೈಕೆಗಾಗಿ ಕಾಂಗ್ರೇಸ್ಸಿಗರು ಎಂತಹ ಘನ ಘೋರ ಅಪರಾಧಕ್ಕೂ ಕೈಹಾಕುತ್ತಾರೆ ಎಂಬುದು ತಿಳಿದು ಬರುತ್ತದೆ.
ನಿಜವಾಗಿಯೂ ನೋಡಿದಲ್ಲಿ, ಅರ್ನಾಬ್ ಕೇಳಿದ್ದ ಪ್ರಶ್ನೆಯೇನೂ ಅಂತಹ ಗಂಭೀರವಾಗಿರಲಿಲ್ಲ. ಅವರ ಮೇಲೆ ಈ ರೀತಿಯ ಹಲ್ಲೆ ಮಾಡುವಂತಹ ಅಪರಾಧವೇನೂ ಆಗಿರಲಿಲ್ಲ. ಸಾಮಾನ್ಯವಾಗಿ ಯಾವುದೇ ಜನಸಮೂಹ ಹಲ್ಲೆ ನಡೆದಾಗಲೆಲ್ಲಾ ಅಮ್ಮಾ ಮತ್ತು ಮಗ ಇತರ ಪಕ್ಷಗಳನ್ನೇ ದೂಷಿಸುತ್ತಾ ಅದನ್ನು ತೀವ್ರವಾಗಿ ಖಂಡಿಸುತ್ತಾ ಒಂದು ದೊಡ್ಡ ಮಟ್ಟದಲ್ಲಿ ಆಂದೋಲನ ನಡೆಸುತ್ತಿದ್ದವರು ಈಗ ಏಕಾಏಕಿ ತಮ್ಮ ಪಕ್ಷದ ಸಮ್ಮಿಶ್ರ ಸರ್ಕಾರ ಇರುವ ರಾಜ್ಯದಲ್ಲೇ ಇಂತಹ ಘನ ಘೋರ ಹತ್ಯೆ ನಡೆದಾಗ, ಸೋನಿಯಾ ಸಹಿತವಾಗಿ ಯಾವುದೇ ಕಾಂಗ್ರೆಸ್ ಮುಖಂಡರೂ ಒಂದು ಸಾಂತ್ವನ ಹೇಳದಿದ್ದದ್ದು ಎಲ್ಲರನ್ನು ಕೆರಳಿಸಿದ್ದಂತೂ ಸುಳ್ಳಲ್ಲ. ಸಾಧುಗಳ ಮೇಲೆ ಹಲ್ಲೆ ನಡೆದ ಸ್ಥಳದಲ್ಲಿ ಪೊಲೀಸರು ಇದ್ದರೂ ಅವರಿಂದ ಧಾಳಿಕೋರರನ್ನು ಹತ್ತಿಕ್ಕುವ ಯಾವುದೇ ಪ್ರಯತ್ನಗಳು ನೆಡೆದಿರಲಿಲ್ಲ ಎಂಬುದು ವೈರಲ್ ಆದ ವೀಡೀಯೋಗಳಲ್ಲಿ ಸ್ಪಷ್ಟವಾಗಿ ನೊಡಿದ್ದ ಜನ ಇದು ಅಮಾಯಕರರ ಕೃತ್ಯವಲ್ಲ ಇದೊಂದು ಪೂರ್ವಯೋಜಿತ ದಾಳಿ ಎಂಬುದು ಅರಿವಾಗುತ್ತದೆ. ಅದಕ್ಕಾಗಿಯೇ ಅರ್ನಾಬ್ ವಿಷಯವನ್ನು ಕೈಬಿಡಬೇಕೆಂದು ಕಾಂಗ್ರೇಸ್ ಮುಖಂಡರು ಒತ್ತಾಯಿಸುತ್ತಿರುವುದು ಸ್ಪಷ್ಟವಾಗಿ ತಿಳಿದುಬರುತ್ತದೆ ಅಲ್ಲವೇ?
- ಕಾಂಗ್ರೇಸ್ ಮುಖಂಡರು ಸಲ್ಲಿಸಿದ ದೂರಿನನ್ವಯ ಅರ್ನಾಬ್ ಗೋಸ್ವಾಮಿಯವರನ್ನು ಠಾಣೆಗೆ ಕರೆಸಿ ಸುಮಾರು 9 ಗಂಟೆಗಳ ವಿಚಾರಣೆಯನ್ನು ಮಾಡಿರುವ ಹಿನ್ನಲೆಯೇನು? ಆ ವಿಚಾರಣಾ ಸಂದರ್ಭದಲ್ಲಿ ಯಾವ ವಿಷಯದ ಬಗ್ಗೆ ಚರ್ಚೆ ನಡೆಯಿತು ಎನ್ನುವುದು ನಮ್ಮ ಗಮನಕ್ಕೆ ಬಂದಿಲ್ಲದಿದ್ದರೂ, ಸೋನೀಯಾ ಅವರ ಮೂಲ ಹೆಸರನ್ನು ಹೇಳಿದ್ದಕ್ಕೆ 9 ಗಂಟೆಗಳಷ್ಟು ವಿಚಾರಣೆಯ ಅಗತ್ಯವಿತ್ತೇ? ಅಥವಾ ಸಮ್ಮಿಶ್ರ ಸರ್ಕಾರವೂ ಸಹಾ ಪೋಲೀಸರ ಮೇಲೆ ತಮ್ಮ ಪ್ರಭಾವ ಬಳೆಸಿ ತಮ್ಮ ಅಧಿನಾಯಕಿಯನ್ನು ಸುಪ್ರೀತಗೊಳಿಸಲು ಪ್ರಯತ್ನಿಸಿದರೇ ಎಂಬ ಯಕ್ಷ ಪ್ರಶ್ನೆ ಕಾಡುತ್ತಿದೆ.
- ನಿಜವಾಗಿಯೂ ತೀವ್ರತರದಲ್ಲಿ ತನಿಖೆ ನಡೆಸಬೇಕಾಗಿದ್ದದ್ದು ಪಾಲ್ಘರ್ ಗಲಭೆಯ ಹತ್ಯಾಕೋರರು ಮತ್ತು ಅವರ ಹಿಂದಿರುರುವ ಶಕ್ತಿಗಳು ಮತ್ತು ಅರ್ಣಾಬ್ ಮೇಲಿನ ಧಾಳಿ ಕೋರರ ಹಿಂದಿರುವ ನಿಜವಾದ ವ್ಯಕ್ತಿಗಳ ಬಗ್ಗೆ ಅಲ್ಲವೇ?
- ಆದರೆ ಪೋಲೀಸರು ಇವೆರಡನ್ನೂ ಬಿಟ್ಟು ಎತ್ತಿಗೆ ಜ್ವರ ಬಂದರೆ, ಎಮ್ಮೆಗೆ ಬರೆ ಎಳೆದಂತೆ ವಿಷಯಾಂತರ ಮಾಡಲು ಅರ್ಣಾಬ್ ಅವರನ್ನು ಪ್ರಶ್ನಿಸಿರಬಹುದಲ್ಲದೇ?
- ದೇಶದಲ್ಲಿ ಪ್ರತೀ ದಿನ ನೂರಾರು ಸುಳ್ಳು ಆಪಾದನೆಗಳನ್ನೇ ಬ್ರೇಕಿಂಗ್ ನ್ಯೂಸ್ ಎಂಬ ಹೆಸರಿನಲ್ಲಿ ಪ್ರಸಾರ ಮಾಡುವ ಅದೆಷ್ಟೋ ಪತ್ರಕರ್ತರು ಧಿಮ್ಮಾಲೆ ರಂಗಾ ಎಂದು ಓಡಾಡುತ್ತಿರುವಾಗ ಸೋನಿಯಾ ಮೂಲ ಹೆಸರನ್ನು ಪ್ರಸ್ತಾಪಿಸಿದ್ದಕ್ಕೆ 9 ಗಂಟೆಗಳ ತನಿಖೆಯ ಅಗತ್ಯವಿತ್ತೇ?
- ತನಿಖೆ ನಡೆದು ಸುಮಾರು ಎರಡು ವಾರಗಳಾದರೂ ಈ ಬಗ್ಗೆ ಯಾವುದೇ ದೋಷಾರೋಪಣೆ ಪಟ್ಟಿಯಾಗಲೀ ಅಥವಾ ವಿಷಯಗಳಾಗಲೀ ಹೊರಬಾರದಿರುವುದು ಸಹಾ ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆಯಲ್ಲವೇ?
- ಕಾನೂನು ಎಂದ ಮೇಲೇ ಅದು ಇಡೀ ದೇಶಕ್ಕೇ ಅನ್ಚಯವಾಗುವುದೇ ಹೊರತು ಕಾಂಗ್ರೇಸ್ ಆಡಳಿತ ರಾಜ್ಯಗಳಿಗೆ ಈ ಕಾನೂನು ಅನ್ವಯವಾಗುವುದಿಲ್ಲ ಎಂಬ ಯಾವುದೇ ನಿಯಮಗಳು ಇಲ್ಲ ಅಲ್ಲವೇ?
- ಭಾರತೀಯ ಪ್ರಜೆ ಎಂದ ಮೇಲೆ ಕಾನೂನು ಎಲ್ಲರಿಗೂ ಒಂದೇ, ಸೋನಿಯಾ ಗಾಂಧಿಯವರೂ ಅದಕ್ಕೆ ಅತೀತರಲ್ಲ ಅಲ್ಲವೇ ?
ಪ್ರಸ್ತುತ ಕೋವಿಡ್ ಲಾಕ್ ಡೌನ್ ಪರಿಸ್ಥಿತಿಯಲ್ಲಿ, ಮತ್ತು ಮುಂಬೈನ ಗಂಭೀರ ಪರಿಸ್ಥಿತಿಯನ್ನು ಪರಿಗಣಿಸಿ, ಪಕ್ಷದ ಅಧ್ಯಕ್ಷರೊಬ್ಬರ ಬಗ್ಗೆ ಕೇವಲ ವಿಚಾರಣೆಗಾಗಿ 9 ರಿಂದ 10 ಗಂಟೆಗಳ ಕಾಲ ಪೊಲೀಸ್ ವ್ಯಕ್ತಿಗಳ ಸಮಯವನ್ನು ವ್ಯರ್ಥ ಮಾಡುವುದು ಸರ್ಕಾರ ಮತ್ತು ಪೊಲೀಸರ ಕಡೆಯಿಂದ ಸಂಪೂರ್ಣವಾಗಿ ಕರ್ತವ್ಯ ಲೋಪ ಆಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಸಾವಿರಾರು ಜನರ ಜೀವಗಳನ್ನು ಉಳಿಸುವ ಮತ್ತು ಪಾಲ್ಘಾರ್ ಹತ್ಯೆಕೋರ ವಿಚಾರಣೆ ನಡೆಸುವ ಬದಲು ಸಮ್ಮಿಶ್ರ ಪಾಲುದಾರರ ಅಧ್ಯಕ್ಷರ ಓಲೈಕೆಯೇ ರಾಜ್ಯ ಸರ್ಕಾರದ ಆದ್ಯತೆಯಾಗಿರುವುದು ಪ್ರಜಾಪ್ರಭುತ್ವಕ್ಕೆ ಮಾರಕವೇ ಹೌದು.
ಏನಂತೀರೀ?