ಮೂಲತಃ ರಾಮನಾಥಪುರಂ ಜಿಲ್ಲೆಯವರಾದ 47 ವರ್ಷದ ಶ್ರೀಯುತ ಮೋಹನ್ ಅವರು ನಾವು ಇಪ್ಪತ್ತು ವರ್ಷಗಳಿಂದ ದೇವಾಲಯಗಳ ಬೀಡಾದ ಮಧುರೈನಲ್ಲಿ ಕ್ಷೌರಿಕ ವೃತ್ತಿಯನ್ನು ಮಾಡುತ್ತಾ ಪ್ರತೀ ದಿನ ಸುಮಾರು 600 ರೂ. ಲಾಭ ಗಳಿಸುತ್ತಿದ್ದಾರೆ ಮತ್ತು ಅದನ್ನು ತಮ್ಮ ಮುದ್ದಿನ ಮಗಳಾದ 13 ವರ್ಷದ ನೇತ್ರಾಳ ವಿದ್ಯಾಭ್ಯಾಸಕ್ಕೆಂದು ಉಳಿಸುತ್ತಿದ್ದಾರೆ. ಕುಮಾರಿ ನೇತ್ರಾಳಿಗೆ ಐಎಎಸ್ ಅಧಿಕಾರಿಯಾಗಬೇಕೆಂದು ಆಸೆ ಅದಕ್ಕಾಗಿ ಆಕೆಯೂ ಸಹಾ ಸಾಕಷ್ಟು ಪರಿಶ್ರಮ ಪಡುತ್ತಿದ್ದಾಳೆ.
ಮಾರ್ಚ್ ತಿಂಗಳಿನಲ್ಲಿ ಕೂರೋನಾ ಮಹಾಮಾರಿಯ ಪ್ರಭಾವದಿಂದಾಗಿ ಪ್ರಪಂಚಾದ್ಯಂತ ಲಾಕ್ ಡೌನ್ ಪ್ರಾರಂಭವಾದಾಗ ಮೋಹನ್ ಅವರ ವೃತ್ತಿಗೂ ಪೆಟ್ಟು ಬಿತ್ತು ಅವರ ಸಲೂನ್ ಕೂಡಾ ಸುಮಾರು ಎರಡು ತಿಂಗಳ ಕಾಲ ಮುಚ್ಚಲ್ಪಟ್ಟಿತ್ತು. ಈ ಅವಧಿಯಲ್ಲಿ ಅವರಿಗೆ ಯಾವುದೇ ಆದಾಯವಿಲ್ಲ . ಎಲ್ಲಿಯೂ ಯಾರಿಗೂ ಕೆಲಸವಿಲ್ಲದಿದ್ದಾಗ ಎಲ್ಲರಿಗೂ ಆರ್ಥಿಕ ಬಿಕ್ಕಟ್ಟು ಉಂಟಾದಾಗಾ ಮಧುರೈ ಸುತ್ತಮುತ್ತಲಿನ ಅನೇಕ ಕುಟುಂಬಗಳು ಅಸಹಾಯಕರಾಗಿ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ಉಂಟಾದಾಗ ತಂದೆ ಮಗಳಿಗೆ ಅಂತಹ ಅಸಹಾಯಕರಿಗೆ ತಮ್ಮಿಂದ ಏನಾದರೂ ಸಹಾಯ ಮಾಡಲೇ ಬೇಕಂಬ ಮನಸ್ಸಾಯಿತು. ಕುಮಾರಿ ನೇತ್ರಾ ತನ್ನ ವಿದ್ಯಾಭ್ಯಾಸಕ್ಕೆ ತನ್ನ ತಂದೆ ಜನನದಿಂದ ಉಳಿಸಿಟ್ಟಿದ್ದ ಸುಮಾರು 5 ಲಕ್ಷ ರೂಪಾಯಿಗಳನ್ನು ಈ ರೀತಿ ಅಗತ್ಯವಿರುವವರಿಗೆ ಸಹಾಯ ಮಾಡ ಬಹುದೇ? ಎಂದು ತನ್ನ ತಂದೆಯನ್ನು ಕೇಳಿದಾಗ, ಮಗಳ ಆಕಾಂಕ್ಷೆಯನ್ನು ಮನಃಪೂರ್ವಕವಾಗಿ ಒಪ್ಪಿಕೊಂಡ ಮೋಹನ್ ರವರು ಒಂದು ಸಾಧಾರಣ ಕುಟುಂಬಕ್ಕೆ ದೈನಂದಿನ ಊಟಕ್ಕಾಗಿ ಅಗತ್ಯವಿರುವ ಆಹಾರ ಸಾಮಾಗ್ರಿಗಳ ಕಿಟ್ ತಯಾರಿಸಿ ಆದನ್ನು ಮಧುರೈನಲ್ಲಿ ಸುಮಾರು 600 ಕುಟುಂಬಗಳಿಗೆ ವಿತರಿಸಿದರು. ಉಳಿತಾಯ ಮಾಡಿದ್ದ 5 ಲಕ್ಷ ರೂಗಳನ್ನು ಮುಂದೆ ಯಾವಾಗಲಾದರೂ ಸಂಪಾದಿಸಬಹುದು. ಸದ್ಯಕ್ಕೆ ಆ ಬಡ ಜನರಿಗೆ ಸಹಾಯ ಮಾಡುವುದು ಆವರ ತಕ್ಷಣದ ಆದ್ಯತೆಯಾಗಿತ್ತು ನಂತರ ಕಠಿಣ ಪರಿಶ್ರಮದಿಂದ ಮಗಳನ್ನು ಐಎಎಸ್ ಅಧಿಕಾರಿಯನ್ನಾಗಿಸುವುದು ಅವರ ನಂತರದ ಆದ್ಯತೆಯಾಗಿತ್ತು.
ಮೋಹನ್ ಮತ್ತು ಅವರ ಕುಟುಂಬ ಮಾಡಿದ ಈ ಒಳ್ಳೆಯ ಕಾರ್ಯಗಳು ಜನರಿಂದ ಜನರಿಗೆ ಹರಡಿ ಕಡೆಗೆ ಅದು ದೇಶದ ಪ್ರಧಾನ ಮಂತ್ರಿಗಳ ಕಿವಿಗೂ ಬಿದ್ದು ಇಂತಹ ಮಹತ್ಕಾರ್ಯವನ್ನು ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ್ದಲ್ಲದ್ದೇ ಪ್ರಧಾನಿ ಮೋದಿಯವರು ಈ ಕಷ್ಟದ ಸಮಯದಲ್ಲಿ ಅವರು ಕಷ್ಟ ಪಟ್ಟು ಉಳಿಸಿದ್ದ ಸಂಪೂರ್ಣ ಮೊತ್ತವನ್ನು ನಿರ್ಗತಿಕರ ಮತ್ತು ದೀನದಲಿತರ ಸೇವೆಯಲ್ಲಿ ಖರ್ಚು ಮಾಡಿದ್ದನ್ನು ಮನಃ ಪೂರ್ವಕ ಅಭಿನಂಧಿಸಿದರು. ಮೋದಿಯವರ ಈ ಮಾತು ವಿಶ್ವಸಂಸ್ಥೆಯು ಯುನೈಟೆಡ್ ನೇಷನ್ಸ್ ಅಸೋಸಿಯೇಷನ್ ಫಾರ್ ಡೆವಲಪ್ಮೆಂಟ್ ಅಂಡ್ ಪೀಸ್ (ಯುಎನ್ಎಡಿಎಪಿ) ಅವರಿಗೂ ತಲುಪಿ ಅವರು ಆ ಕೂಡಲೇ ಜೂನ್ 5 ರಂದು ಕು.ನೇತ್ರಾಳನ್ನು ಬಡವರಿಗೆ ಸದ್ಭಾವನಾ ರಾಯಭಾರಿಯನ್ನಾಗಿ ಆ ಕೂಡಲೇ ನೇಮಿಸಿತು. ಈ ಜವಾಬ್ಧಾರಿಯ ಅಂಗವಾಗಿ ಕುಮಾರಿ ನೇತ್ರಾ ನ್ಯೂಯಾರ್ಕ್ನಲ್ಲಿ ನಡೆಯುವ ವಿಶ್ವಸಂಸ್ಥೆಯ (ಯುಎನ್) ಸಮಾವೇಶಗಳಲ್ಲಿ ಮತ್ತು ಜಿನೀವಾದಲ್ಲಿ ಸಿವಿಲ್ ಸೊಸೈಟಿ ವೇದಿಕೆಗಳಲ್ಲಿ ಆ ಸಭೆಯನ್ನು ಉದ್ದೇಶಿಸಿ ಮಾತನಾಡುವ ಅವಕಾಶ ನೀಡಲಾಗುತ್ತದೆ ಮತ್ತು ಆಕೆಗೆ ವಾರ್ಷಿಕ 1,00,000 ರೂಗಳ ವಿದ್ಯಾರ್ಥಿವೇತನವೂ ಸಿಗುತ್ತದೆ. ಈ ಸ್ಥಾನವು ವಿಶ್ವ ನಾಯಕರು, ಶಿಕ್ಷಣ ತಜ್ಞರು, ರಾಜಕಾರಣಿಗಳು ಮತ್ತು ನಾಗರಿಕರೊಂದಿಗೆ ಮಾತನಾಡಲು ಅವಕಾಶ ಮತ್ತು ಜವಾಬ್ದಾರಿಯನ್ನು ನೀಡುತ್ತದೆ ಮತ್ತು ಆಕೆ ಬಡವರನ್ನು ನೇರವಾಗಿ ತಲುಪಲು ಪ್ರೋತ್ಸಾಹಿಸುತ್ತದೆ ಎಂದು ಯುಎನ್ಎಡಿಎಪಿ ತಿಳಿಸಿದೆ.
ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಮಾಡುವಂತಹ ಜನರೇ ಈ ಸಮಾಜದಲ್ಲಿ ತುಂಬಿರುವಾಗ ತಮ್ಮ ಆರ್ಥಿಕ ಪರಿಸ್ಥಿತಿಯೇ ಅಷ್ಟೇನೂ ಚೆನ್ನಾಗಿಲ್ಲದಿರುವಾಗ ಮತ್ತು ಒಂದು ನಿರ್ಧಿಷ್ಟ ಧ್ಯೇಯಕ್ಕಾಗಿ ಕೂಡಿಟ್ಟ ಹಣವನ್ನು ನಿರ್ಗತಿಕರಿಗೆ ಸಹಾಯ ಮಾಡಲು ಬಳೆಸಿದ ಕುಮಾರಿ ನೇತ್ರಾ ಮತ್ತು ಆಕೆಯ ತಂದೆ ಮೋಹನ್ ಅವರ ನಿಸ್ವಾರ್ಥ ಸೇವೆ ನಿಜಕ್ಕೂ ಅನನ್ಯವಾಗಿದೆ ಮತ್ತು ಅನುಕರಣಿಯವಾಗಿದೆ. ತಾವು ಮಾಡಿದ ದಾನ ಧರ್ಮಗಳು ಮುಂದೆ ತಮ್ಮ ಮಕ್ಕಳನ್ನು ಕಾಪಾಡುತ್ತದೆ ಎನ್ನುವ ಮಾತಿನಂತೆ ಮೋಹನ್ ಮತ್ತವರ ಕುಟುಂಬದ ನಿಸ್ವಾರ್ಥ ಸೇವೆ ಈಗ ಪ್ರಪಂಚಾದ್ಯಂತ ಜಗಜ್ಜಾಹೀರಾತಾಗಿ ಅವರಿಗೆ ವಿಶ್ವ ಮನ್ನಣೆ ದೊರೆತಿದ್ದಲ್ಲದೇ ನೇಹಾ ದೊರೆತ ವಿದ್ಯಾರ್ಥಿ ವೇತನದ ಮೂಲಕ ಕುಮಾರಿ ನೇತ್ರಾಳ ಐ.ಎ.ಎಸ್. ಅಧಿಕಾರಿಯಾಗುವ ಕನಸೂ ಸಹಾ ನನಸಾಗುವಂತಿದೆ. ಇದನ್ನೇ ಅಲ್ಲವೇ ನಮ್ಮ ಹಿರಿಯರು ಹೇಳಿದ್ದು ಪರೋಪಕಾರಾಯ ಮಿದಂ ಶರೀರಂ ಎಂದು.
ಏನಂತೀರೀ?