ಕಾಲೇಜಿಗೆ ಹೋಗುತ್ತಿರುವ ಇಂದಿನ ಕಾಲದ ಯುವಕ ಯುವತಿಯರನ್ನು ಕರೆದು ಮುಂದೆ ಏನಾಗ್ಬೇಕು ಎಂದು ಕೇಳಿದರೆ, ಒಂದು ಕ್ಷಣವೂ ಯೋಚಿಸದೇ Computer Sc. engineer ಆಗಿ ಯಾವುದದರೂ MNC companyಯಲ್ಲಿ ನಾಲ್ಕೈದು ವರ್ಷ ಕೆಲಸ ಮಾಡಿ Experience ಪಡೆದುಕೊಂಡು ನಂತರ Manager ಕಾಡೀ ಬೇಡೀ Onsite opportunity ಎಂದು USAಗೆ ಹೋಗಿ 8-10 ವರ್ಷ ಕೆಲಸ ಮಾಡುವಷ್ಟರಲ್ಲಿ ಹಾಗೂ ಹೀಗೂ Green Card ಪಡೆದುಕೊಂಡು life ನಲ್ಲಿ settle ಆಗಿ ಬಿಡ್ತೀವಿ ಅಂತಾರೆ. ಜನ್ಮ ಕೊಟ್ಟ ಅಪ್ಪಾ ಅಮ್ಮಾ, ತಾಯ್ನಾಡು ಎಲ್ಲವನ್ನೂ ಬಿಟ್ಟು ಬೇರೇ ದೇಶದಲ್ಲಿ ದುಡಿಯುವುದೇ ಅವರ ಜೀವನದ ದೊಡ್ಡ ಧ್ಯೇಯವಾಗಿರುತ್ತದೆ. ಇನ್ನು ಅಂತಹವರ ತಂದೆ ತಾಯಿಯರೂ ಅಷ್ಟೇ, ಹೆಮ್ಮೆಯಿಂದ ನಮ್ಮ ಮಕ್ಕಳು ಅಮೇರಿಕಾದಲ್ಲಿ ಇದ್ದಾರೆ ಎಂದು ಹೇಳಿಕೊಳ್ತಾರೆ. ಆದರೆ ಅವರಿಗೆ ಖಾಯಿಲೆ ಕಸಾಲೆ ಬಂದರೆ ನೋಡಿಕೊಳ್ಳುವುದಕ್ಕೆ ಯಾರೂ ಇಲ್ಲದೇ ಹೋದಾಗ ಅಯ್ಯೋ ಮಕ್ಕಳಿದ್ದೂ ಏನೂ ಪ್ರಯೋಜನ ಇಲ್ವಪ್ಪಾ ಎಂದು ತಮ್ಮನ್ನೇ ತಾವು ಹಳಿದುಕೊಳ್ಳುತ್ತಾರೆ.
ನಾವು ಪ್ರೌಢಶಾಲೆಯಲ್ಲಿದ್ದಾಗ ನಮಗೆ ರಮೇಶ್ (MSR) ಎಂಬ ಶಿಕ್ಷಕರೊಬ್ಬರು ಭೌತಶಾಸ್ತ್ರ ಮತ್ತು ರಸಾಯನ ಶಾಸ್ತ್ರವನ್ನು ಹೇಳಿಕೊಡುತ್ತಿದ್ದರು. ಬಹಳ ಸರಳ ಆದರೆ ಅಷ್ಟೇ ಕೋಪಿಷ್ಠರಾಗಿದ್ದ ಕಾರಣ, ಅವರೆಂದರೆ ಎಲ್ಲಾ ವಿದ್ಯಾರ್ಥಿಗಳಿಗೂ ಸ್ವಲ್ಪ ಭಯ. ತರಗತಿಯಲ್ಲಿ ಪಾಠ ಹೇಳಿಕೊಡುತ್ತಿರುವಾಗ, ವಿದ್ಯಾರ್ಥಿಗಳ ಗಮನ ಪಾಠದ ಕಡೆ ಇದೆಯೋ ಇಲ್ಲವೋ ಎನ್ನುವುದನ್ನು ಪರೀಕ್ಷೇ ಮಾಡುವ ಸಲುವಾಗಿ ಇದ್ದಕ್ಕಿಂದ್ದಂತೆಯೇ ಪಾಠದ ಮಧ್ಯೆ ಪ್ರಶ್ನೆಗಳನ್ನು ಕೇಳುವ ಆಭ್ಯಾಸವನ್ನು ಇಟ್ಟುಕೊಂಡಿದ್ದ ಕಾರಣ, ಎಲ್ಲರೂ ಭಯಮಿಶ್ರಿತ ಕುತೂಹಲದಿಂದ ಅವರ ಪಾಠವನ್ನು ಕೇಳುತ್ತಿದ್ದದ್ದಲ್ಲದೇ, ಅವರು ಕೇಳುವ ಪ್ರಶ್ನೆಗಳಿಗೆ ತಕ್ಕ ಮಟ್ಟಿಗೆ ಉತ್ತರವನ್ನು ಕೊಟ್ಟು ಅವರಿಂದ ಸೈ ಎನಿಸಿಕೊಳ್ಳುವುದೇ ಒಂದು ದೊಡ್ಡ ಸಾಧನೆ ಎಂದು ಭಾವಿಸಿದ್ದೆವು. ಅಕಸ್ಮಾತ್ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡದೇ ಹೋದಲ್ಲಿ ಹೋಗಿ ನೀನೂ ದನಾ ಮೇಯಿಸುವುದಕ್ಕೆ ಹೋಗು, ಕತ್ತೆ ಮೇಯಿಸುವುದಕ್ಕೆ ಹೋಗು, ನಿಮಗೆಲ್ಲಾ ಓದು ಯಾಕೇ? ನೀವೆಲ್ಲಾ ಕುರಿ ಮೇಯಿಸೋದಿಕ್ಕೆ ಲಾಯಕ್ಕು ಎಂದು ಬೈಯುತ್ತಿದ್ದರು.
ಆದರೆ ಮೊನ್ನೆ ಹೀಗೆ ಫೇಸ್ಬುಕ್ಕಿನಲ್ಲಿ ಹಾದು ಹೋದ ವೀಡೀಯೋವೊಂದನ್ನು ನೋಡಿದಾಗ, ಕುರಿ ಕಾಯೋದರ ಮೂಲಕ ಇಂದಿನ Software ಉದ್ಯೋಗಿಗಳಿಗಿಂತಲೂ ಹೆಚ್ಚಿನ ಆದಾಯ ಗಳಿಸಬಹುದು ಎಂಬುದನ್ನು ಕೇಳಿ ದಂಗಾಗಿ ಹೋಗಿದ್ದಲ್ಲದೇ, ಇವತ್ತೇನಾದರೂ ನಮ್ಮ MSR ಬದುಕಿದ್ದಲ್ಲಿ ಅದರಿಗೆ ಆ ವೀಡೀಯೋ ಲಿಂಕನ್ನು ಕಲುಹಿಸಿ ನೋಡೀ ಸಾರ್ ಕುರಿ ಸಾಕಣೆಯಿಂದಲೂ ಲಕ್ಷ ಲಕ್ಷ ಸಂಪಾದನೆ ಮಾಡಬಹುದು ಎಂದು ಹೇಳಬಹುದಾಗಿತ್ತು ಎಂದು ಕೊಂಡು ಅದರ ಕುರಿತಾದ ಕುತೂಹಲಕಾರಿಯಾದ ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಹೆದ್ದಾರಿಯಲ್ಲಿ ವಾಹನದಲ್ಲಿ ಹೋಗುತ್ತಿದ್ದ ಸ್ಥಳೀಯ ವಸಂತ ವಾಣಿ ಟಿವಿ ಯೂಟ್ಯೂಬ್ ಛಾನೆಲ್ಲಿನವರೊಬ್ಬರಿಗೆ ನೂರಾರು ಕುರಿಗಳ ಮಂದೆ ಅಡ್ಡ ಬಂದಾಗ, ಕೆಲ ಕಾಲ ತಮ್ಮ ವಾಹನವನ್ನು ನಿಲ್ಲಿಸಿ ಹಾಗೇ ಕುರಿಗಳನ್ನು ಕುತೂಹಲದಿಂದ ನೋಡುತ್ತಾ, ಅವುಗಳ ಜೊತೆ ಬಂದ ವ್ಯಕ್ತಿಯೊಬ್ಬನಿಗೆ ಏನಪ್ಪಾ ಯಾವೂರು ನಿಂದೂ? ಎಂದು ಆರಂಭವಾಗುವ ಅವರ ಸಂಭಾಷಣೆ ಕಡೆಯವರೆಗೂ ಕೇಳಿದ ನಂತರ ಅವರ ಬಾಯಿಯಿಂದ ಮಾತೇ ಹೊರಡುವುದಿಲ್ಲ. ಹಾಗೆ ಕುರಿಯನ್ನು ಮೇಯಿಸಿಕೊಂಡು ಊರೂರು ಅಲೆಯುತ್ತಿರುವವರ ಮೂಲ ಊರು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ದೇವರಹಳ್ಳಿ ಗೊಲ್ಲರಹಟ್ಟಿ ಗ್ರಾಮವಾಗಿದ್ದು ಸುಮಾರು ಹತ್ತು ಹದಿನೈದು ಜನರ ತಂಡವು ಸಾವಿರಾರು ಕುರಿಗಳನ್ನು ಮೇಯಿಸುವ ಸಲುವಾಗಿ ಸುಮಾರು ಆರು ತಿಂಗಳುಗಳ ಕಾಲ ಕೊಡಗಿನ ಕುಶಾಲ ನಗರದವರೆಗೂ ಹೋಗುತ್ತಾರಂತೆ.
ಹಾಗೆ ಕುರಿಗಳ ಹಿಂದೆ ಬರುತ್ತಿದ್ದ ಮತ್ತೊಬ್ಬ ಕಟ್ಟು ಮಸ್ತಿನ ಯುವಕನನ್ನು ನಿಮ್ಮ ಬಳಿ ಎಷ್ಟು ಕುರಿ ಇವೆ ಎಂದಾಗ, ಆತ ಸರ್ ಒಂದು thousand ಇರಬಹುದು ಎಂದು ಕೇಳಿದ ತಕ್ಷಣವೇ ಆ ಸಂದರ್ಶನಕಾರರು, ಏನಯ್ಯಾ ನೀರು ಕೋಟಿ ರೂಪಾಯಿ ಬಾಳ್ತೀಯಾ ಎಂದು ಹೇಳಿದಾಗ, ಆತ ಅಷ್ಟೇ ಸಂಕೋಚದಿಂದ ನಸು ನಕ್ಕು ಸುಮ್ಮನಾಗುತ್ತಾನೆ. ಅದು ಸರಿ ಒಂದು ಕುರಿಗೆ ಎಷ್ಟಾಗತ್ತೇ ಎಂದು ಮತ್ತೆ ಕುತೂಹಲದಿಂದ ಕೇಳಿದಾಗ, ಸಾಧಾರಣವಾಗಿ Fifteen to Twenty thousand ನಿಂದ ಆರಂಭವಾಗಿ ಒಳ್ಳೆಯ ಬಲಿತ ಕುರಿ ಸುಮಾರು 25 thousand ವರೆಗೂ ಮಾರಾಟವಾಗುತ್ತದೆ ಎಂದು ಹೆಮ್ಮೆಯಿಂದ ಪಟಪಟನೇ ಸುಸ್ಪಷ್ಟವಾಗಿ ಇಂಗ್ಲೀಷಿನಲ್ಲಿ ಹೇಳಿದಾಗ, ಅರೇ ನೋಡು ನಾನು ಸರಿಯಾಗಿ ಹೇಳಿದ್ದೀನೆ ನೀನೀಗ 2.5 ಕೋಟಿಯ ಬೆಲೆ ಬಾಳ್ತೀಯಾ ಎಂದು ಹೇಳಿ ದಂಗಾಗುತ್ತಾರೆ.
ಅಷ್ಟು ಚನ್ನಾಗಿ ಇಂಗ್ಲೀಷ್ ಮಾತನಾಡುತ್ತಿದ್ದದ್ದನ್ನು ಕಂಡು ಕುತೂಹಲದಿಂದ ಏನಪ್ಪಾ ನಿನ್ನ ಹೆಸರು ಏನು ಓದಿದ್ದೀಯಪ್ಪಾ? ಎಂದು ಕೇಳಿದಾಗ ಸರ್ ನನ್ನ ಹೆಸರು ಕಿರಣ್ ಯಾದವ್ ಅಂತಾ ನಾನು Diploma in Civil engineering ಮಾಡುವಷ್ಟರಲ್ಲಿ ಅಪ್ಪಾ ತೀರಿ ಹೋದರು. ಅಣ್ಣ ಒಬ್ಬನೇ ಇಷ್ಟೋಂದು ಕುರಿಗಳನ್ನು ನೋಡಿಕೊಳ್ಳಲು ಆಗದೇ ಇದ್ದ ಕಾರಣ, ನಾನೂ ಸಹಾ ನಮ್ಮ ಕುಲ ಕಸುಬಿಗೆ ಇಳಿದಿದ್ದೇನೆ ಎಂದು ಬಹಳ ಸಂತೋಷದಿಂದ ಹೇಳುತ್ತಾನೆ.
ಅಲ್ಲಪ್ಪಾ ಹೀಗೆ ಊರೂರು ತಿರುಗಿ ಕುರಿ ತಿರುಗಿ ಕುರಿ ಮೇಯಿಸ್ಕೋಂಡು ಹೋದ್ರೇ, ನಿಮ್ಮ ಊಟ ತಿಂಡಿಗೆಲ್ಲಾ ಎನು ಮಾಡ್ತೀರೀ? ಅಂದ್ರೇ, ಸರ್ ಪ್ರತೀ ರಾತ್ರಿ ಆಲ್ಲಿನ ಊರಿನ ಯಾವುದಾದರೂ ತೋಟದಲ್ಲಿ ಈ ಸಾವಿರಾರು ಕುರಿಗಳ ಮಂದೆ ಹಾಕಿದರೆ (ತೋಟ ಇಲ್ಲವೇ ಹೊಲಗಳಲ್ಲಿ ಕುರಿಗಳನ್ನು ರಾತ್ರಿ ಹೊತ್ತು ತಂಗುವಂತೆ ಮಾಡಿದಾಗ ಅವುಗಳ ಪಿಚಿಕೆಯು ಹೊಲ/ತೋಟಕ್ಕೆ ಉತ್ತಮ ಗುಣಮಟ್ಟದ ಗೊಬ್ಬರವಾಗುತ್ತದೆ) ನಮಗೆ 1500 ರಿಂದ 2000 ಸಾವಿರ ರೂಪಾಯಿ ಸಿಗುತ್ತದೆ. ಆ ಹಣವು ನಮಗೆ ದೈನಂದಿನದ ಖರ್ಚಿಗೆ ಸಾಕಾಗುತ್ತದೆ. ಅದಕ್ಕಿಂತಲೂ ಹೆಚ್ಚಿನ ಅವಶ್ಯಕತೆ ಬಿದ್ದಲ್ಲಿ ಒಂದೆರಡು ಬಲಿತ ಕುರಿಗಳನ್ನು ಮಾರಿಬಿಡುತ್ತೇವೆ. ಜೊತೆಗೆ ಕುರಿಗಳ ತುಪ್ಪಳದಿಂದಲೂ ತಕ್ಕ ಮಟ್ಟಿಗೆ ಆದಾಯ ಬರುತ್ತದೆ ಎನ್ನುತ್ತಾನೆ ಕಿರಣ್. ಹೀಗೆ ಪ್ರತೀ ದಿನವೂ 15-20 ಕಿಮೀ ದೂರ ಕ್ರಮಿಸುತ್ತಾ ತಮ್ಮ ಊರಿನಿಂದ ಸುಮಾರು 350-400 ಕಿಮೀ ದೂರದ ವರೆಗೂ ಕ್ರಮಿಸುತ್ತಾರೆ.
ಅಲ್ಲಪ್ಪಾ ಹೀಗೇ ಐದಾರೂ ತಿಂಗಳು ಊರಿನಿಂದ ದೂರ ಇದ್ದರೆ ನಿಮಗೆ ಬೇಸರವಾಗುವುದಿಲ್ಲವೇ? ಎಂದು ಕೇಳಿದಾಗ, ಹಾಗೇನಿಲ್ಲಾ ಸರ್, ಅಗ್ಗಾಗ್ಗೇ ಒಬ್ಬಿಬ್ಬರೂ ನಮ್ಮ ಗಾಡಿಗಳಲ್ಲಿ ಊರಿಗೆ ಹೋಗಿ ಬಂದು ಮಾಡ್ತಾ ಇರೋದರಿಂದ ನಮಗೆ ಬೇಜಾರು ಆಗೋದಿಲ್ಲಾ ಎಂದು ಹೇಳುತ್ತಾನೆ. ಅಲ್ಲಪ್ಪಾ ಇಷ್ಟು ಓದಿದ್ದೀಯೇ, ನೀನು ನಿನ್ನ ಸಹಪಾಠಿಗಳಂತೆ ಕೆಲಸಕ್ಕೆ ಸೇರಿಕೊಂಡು ಟಾಕೂ, ಠೀಕಾಗಿ ಹೋಗಬೇಕು ಎಂದು ಎನಿಸುವುದಿಲ್ಲವೇ? ಎಂದು ಕೇಳಿದಾಗ, ಸರ್ ನಾನು ಕೆಲಸಕ್ಕೆ ಸೇರಿಕೊಂಡರೆ ತಿಂಗಳಿಗೆ 20-30 ಸಾವಿರ ಸಂಬಳ ಸಿಗುತ್ತದೆ. ಮತ್ತು ಮತ್ತೊಬ್ಬರ ಕೈ ಕೆಳಗೆ ಕೆಲಸ ಮಾಡುವಾಗ ಅವರು ಹೇಳಿದ್ದನ್ನೆಲ್ಲಾ ಕೇಳಬೇಕಾಗುತ್ತದೆ. ಆದರೆ ಇಲ್ಲಿ ನಾನು ಸರ್ವ ಸ್ವತಂತ್ರವಾಗಿರುವುದಲ್ಲದೇ ಆರು ತಿಂಗಳಿನ ನಂತರ ಇದೇ ಕುರಿಗಳನ್ನು ಮಾರಿದಲ್ಲಿ ನಮ್ಮ ಮೂಲ ಬಂಡವಾಳ ಮತ್ತು ಖರ್ಚು ಎಲ್ಲವೂ ಸುಮಾರು 20-30 ಲಕ್ಷ ಲಾಭ ಬರುತ್ತದೆ. ಊರಿನಲ್ಲಿ ನನ್ನ ಬಳಿಯೂ ರಾಯಲ್ ಎನ್ಫೀಲ್ಡ್ ಇದೆ, ಎನ್ಎಸ್ ಬೈಕ್ ಇದೆ ಸರ್. ಊರಿಗೆ ಹೋದಾಗ ನಾಲ್ಕೈದು ದಿನ ಅಲ್ಲಿದ್ದು ಚೆನ್ನಾಗಿ ಶೋಕಿ ಮಾಡ್ತೀವಿ ಆದಾದ ನಂತರ ನಿಯತ್ತಾಗಿ ವಾಪಸ್ಸು ಬಂದು ಕುರಿ ಮೇಯಿಸುವ ಕೆಲಸ ಮಾಡುತ್ತೇನೆ. ಎಂದು ಹೇಳುವಾಗ ಆತನ ಕಣ್ಣುಗಳಲ್ಲಿನ ಹೊಳಪು ನಿಜಕ್ಕೂ ಅವರ್ಣನೀಯವೇ ಸರಿ.
ಮೂಲತಃ ಕೃಷಿ ಮತ್ತು ಕುರಿಕಾಯುವುದೇ ಇವರ ಕುಲ ಕಸುಬಾಗಿದ್ದು ತಮ್ಮ ಭಾಗದಲ್ಲಿ ಮಳೆ ಕಡಿಮೆಯಾದಾಗ ಅವರುಗಳು ಗುಂಪು ಗುಂಪಾಗಿ ಕುರಿಗಳನ್ನು ಮೇಯಿಸಿಕೊಂಡು ಮಂಡ್ಯ, ರಾಮನಗರ, ಮೈಸೂರು, ಹಾಸನ, ಮಡಕೇರಿ ಭಾಗಗಳಿಗೆ ವಲಸೆ ಹೋಗುತ್ತಾರೆ. ಮತ್ತೆ ಮಳೆಗಾಲ ಆರಂಭವಾಗುವಷ್ಟರಲ್ಲಿ ತಮ್ಮೂರಿಗೆ ಹಿಂದಿರುಗಿ ತಮ್ಮ ಎಂದಿನ ಕಾಯಕವನ್ನು ಮುಂದುವರೆಸಿಕೊಂಡು ಹೋಗುತ್ತಾರೆ. ಒಬ್ಬ ವಿದ್ಯಾವಂತನಾಗಿ ಇಂದಿನ ಹುಡುಗರಿಗೆ ನೀನು ಏನು ಹೇಳ್ತೀಯಾ ಎಂದು ಕೇಳಿದಾಗ, ಸರ್, ಜೀವನೋಪಾಯಕ್ಕಾಗಿ ಯಾವುದೇ ಕೆಲಸ ಮಾಡುವುದಕ್ಕೂ ಬೇಜಾರು ಮಾಡಿಕೊಳ್ಳದೇ ಎಲ್ಲವನ್ನೂ ಬಹಳ ಸಂತೋಷದಿಂದ ಮಾಡಬೇಕು. ಬೇರೆಯವರ ಕೈಯಲ್ಲಿ ಕೆಲಸ ಮಾಡುವ ಬದಲು ಯಾರು ಬೇಕಾದರೂ ಸ್ವಂತವಾಗಿ ಈ ರೀತಿಯಾಗಿ ಕುರಿ ಸಾಕಾಣಿಕೆ ಮಾಡಿ ಲಾಭವನ್ನು ಪಡೆಯಬಹುದು. ಆದರೆ ಮುಖ್ಯವಾಗಿ ಅವರಿಗೆ ಈ ರೀತಿಯ ಕೆಲಸಗಳಲ್ಲಿ ಆಸಕ್ತಿ ಇರಬೇಕು ಮತ್ತು ಹಮ್ಮು ಬಿಮ್ಮು ಇಲ್ಲದೇ ನಾಚಿಕೆ ಗೀಚಿಗೆ ಎಲ್ಲಾ ಊರಾಚೆಗೆ ಎಂದು ಮೈ ಬಗ್ಗಿಸಿ ಕಷ್ಟ ಪಟ್ಟು ದುಡಿಯಲು ಸಿದ್ದವಿದ್ದಲ್ಲಿ ಎಲ್ಲವೂ ಸಾಧ್ಯ ಎಂದು ಹೇಳಲು ಇಷ್ಟ ಪಡ್ತೀನಿ ಎಂದು ಹೇಳುವಾಗ ನಮ್ಮ ದೇಶದ ಪ್ರಧಾನಿಗಳು ಹೇಳುವ ಆತ್ಮ ನಿರ್ಭರ್ ಭಾರತಕ್ಕೆ ಕಿರಣ್ ಯಾದವ್ ನಂತಹವರಿಗಿಂಗಲೂ ಬೇರೆ ರಾಯಭಾರಿ ಬೇಕಿಲ್ಲಾ ಎನ್ನಿಸಿದ್ದಂತೂ ಸುಳ್ಳಲ್ಲ. ಕೈ ಕೆಸರಾದರೇ ಬಾಯ್ ಮೊಸರು ಎನ್ನೋ ಗಾದೇ ಮಾತು ಕಿರಣ್ ಯಾದವ್ ಅಂತಹವರಿಗೇ ಹೇಳಿ ಮಾಡಿಸಿದಂತೆಯೇ ಇದೇ ಅಲ್ವೇ?
ಏನಂತೀರೀ?
ಸೃಷ್ಟಿಕರ್ತ ಉಮಾಸುತ