ಮಾವಿನ ತಳಿರು ತೋರಣದ ಮಹತ್ವ

ನಮ್ಮ ಭಾರತೀಯ ಹಿಂದೂ  ಸಂಸ್ಕೃತಿಯಲ್ಲಿ ಹಬ್ಬ ಹರಿದಿನಗಳು ಸಹಜ ಮತ್ತು ಸರ್ವೇ ಸಾಮಾನ್ಯ. ಅದರಂತೆ   ಊರ ಹಬ್ಬ, ಜಾತ್ರೆ, ಸಾಮೂಹಿಕ ಸಮಾರಂಭಗಳಾಗಲೀ  ಅಥವಾ ಮನೆಗಳಲ್ಲಿ   ಮದುವೆ,ಮುಂಜಿ, ನಾಮಕರಣ ಮುಂತಾದ  ಧಾರ್ಮಿಕ ಕಾರ್ಯಕ್ರಮಗಳು ಸದಾ ನಡೆಯುತ್ತಲೇ ಇರುತ್ತವೆ. ಈ ಎಲ್ಲಾ ಕಾರ್ಯಕ್ರಮಗಳ ವಿಧಿ ವಿಧಾನಗಳು ಬೇರೆ ಬೇರೆ ತರಹದ್ದಾದರೂ, ಎಲ್ಲದರಲ್ಲೂ ಸಾಮಾನ್ಯವಾಗಿ ಎದ್ದು ಕಾಣುವ ಒಂದು ಅಂಶವೆಂದರೆ ಮಾವಿನ ತಳಿರು ತೋರಣ. ಅದು ಊರ ಹೆಬ್ಬಾಗಿಲೇ ಆಗಿರಬಹುದು, ದೇವಸ್ಥಾನದ ಮುಖ್ಯಾದ್ವಾರವಾಗಿರ ಬಹುದು,  ಮನೆಯ ಮುಂಬಾಗಿಲಾಗಿರಬಹುದು, ದೇವರ ಕೋಣೆಯ ಬಾಗಿಲಾಗಿರಬಹುದು ಅಥವಾ ಧಾರ್ಮಿಕ ಮಂಟಪ ಇಲ್ಲವೇ ತೆರೆದ ಚಪ್ಪರಗಳಾಗಿರಬಹುದು ಈ ಎಲ್ಲಾ   ಕಾರ್ಯಕ್ರಮಗಳಲ್ಲಿಯೂ ಮಾವಿನ ತಳಿರು ತೋರಣ ಕಣ್ಣಿಗೆ ಎದ್ದು ಕಾಣುತ್ತಿರುತ್ತದೆ ಮತ್ತು ಅತ್ಯಂತ ಮಹತ್ವವನ್ನು ಪಡೆದಿರುತ್ತದೆ. ಹಾಗಾದರೆ ಮಾವಿನ ಎಲೆಯ ತೋರಣವನ್ನೇ ಏಕೆ ಕಟ್ಟಬೇಕು? ಅದರ ಮಹತ್ವವೇನು? ಎಂದು ಯೋಚಿಸಿದರೆ,

ಮನೆಯ ಮುಂದೆ ರಂಗು ರಂಗಾದ  ರಂಗೋಲಿ ಇಡುವುದು, ಹೊಸಿಲಿಗೆ ತೋರಣ ಕಟ್ಟುವುದು,   ಹೆಂಗಸರು ಕೈತುಂಬಾ ಬಳೆ ತೊಟ್ಟು ಹಣೆಗೆ ಸಿಂಧೂರ ಧರಿಸುವುದು,  ಗಂಡಸರು ಹಣೆಯಲ್ಲಿ ಕುಂಕುಮ ಅಥವಾ ತಿಲಕಗಳನ್ನು ಧರಿಸುವುದು,ದೇವರಿಗೆ ಹೂವಿನ ಹಾರಗಳನ್ನು  ಹಾಕುವುದು ಇವುಗಳೆಲ್ಲವೂ  ಅಲಂಕಾರಿಕವೂ ಹೌದು ಮತ್ತು  ಶುಭ ಕಾರ್ಯಕ್ರಮಗಳ ಸಂಕೇತವೂ ಹೌದು. ಆದರೆ ಇವೆಲ್ಲವುಗಳ ಹಿಂದೆ ಕೆಲವು  ವೈಜ್ಞಾನಿಕ ಸತ್ಯಗಳಿವೆ. ಹಾಗಾಗಿಯೇ, ನಮ್ಮ ಪೂರ್ವಜರು ಸಂಪ್ರದಾಯದ ಹೆಸರಿನಲ್ಲಿ ಇಂತಹ ಪದ್ದತಿಗಳನ್ನು ರೂಢಿ ತಂದಿದ್ದಾರೆ.

ಮರಗಳ ಹಸಿರು ಎಲೆಗಳು ದ್ಯುತಿಸಂಶ್ಲೇಷಣ ಕ್ರಿಯೆಯ ಮೂಲಕ  ಇಂಗಾಲದ ಡೈಆಕ್ಸೈಡನ್ನು  ಹೀರಿಕೊಂಡು ಅದರ ಬದಲಿಗೆ ಶುಧ್ಧವಾದ  ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ.  ಶುಭ-ಸಮಾರಂಭಗಳಲ್ಲಿ ಅತಿ ಹೆಚ್ಚಿನ ಜನರು  ಒಂದೆಡೆ ಸೇರಿದಾಗ, ಜನದಟ್ಟಣೆಯಿಂದ ಆಮ್ಲಜನಕದ ಕೊರತೆ ಉಂಟಾಗಬಹುದು ಹಾಗಾಗಿ ಅಂತಹ  ಆಮ್ಲಜನಕದ ಕೊರತೆಯನ್ನು ನೀಗಿಸಲು ಸಮಾರಂಭದ  ಮಂಟಪದ ಸುತ್ತಮುತ್ತಲೂ  ತೋರಣ ಕಟ್ಟುವ ಸಂಪ್ರದಾಯವಿದೆ. ಅದರಲ್ಲೂ   ಮಾವಿನ ಎಲೆಯನ್ನೇ  ತೋರಣವನ್ನಾಗಿ ಏಕೆ  ಕಟ್ಟುತ್ತಾರೆಂದರೆ ಉಳಿದೆಲ್ಲಾ ಎಲೆಗಳಿಗಿಂತ ಮಾವಿನ ಎಲೆಯು ಅತ್ಯಂತ ಹೆಚ್ಚು ಕಾಲ ಹಚ್ಚ ಹಸಿರಾಗಿರುತ್ತದೆ ಮತ್ತು ಮರದಿಂದ ಕಿತ್ತು ತಂದ ಬಹಳ ಕಾಲಗಳ ನಂತರವೂ ದ್ಯುತಿಸಂಶ್ಲೇಷಣ ಕ್ರಿಯೆಯ ಮೂಲಕ ಆಮ್ಲಜನಕವವನ್ನು ಉತ್ಪತ್ತಿ ಮಾಡುವ ಶಕ್ತಿಯನ್ನು ಹೊಂದಿದೆ.  ಹಾಗಾಗಿ ಉಳಿದೆಲ್ಲಾ ಎಲೆಗಳಿಗಿಂತ ಮಾವಿನ ಎಲೆಗಳನ್ನೇ ತೋರಣಕ್ಕಾಗಿ ಬಳೆಸುತ್ತೇವೆ.

ಇನ್ನು  ಮನೆಯ ಮುಂಬಾಗಿಲು ಮತ್ತು ದೇವರ ಮನೆಯ ಬಾಗಿಲಿಗೆ  ಮಾವಿನ ತೋರಣ ಕಟ್ಟುವುದರಿಂದ  ಮನೆಯಲ್ಲಿ ಹಬ್ಬದ ವಾತಾವರಣ ಮೂಡಿ ಎಲ್ಲರ ಮನಸ್ಸು ಉತ್ಸಾಹ ಮತ್ತು ಆಹ್ಲಾದಕರವಾಗಿಡಲು ಸಹಾಯ ಮಾಡುತ್ತದೆ.  ಅದೆ ರೀತಿ ಮನೆಯನ್ನು ಪ್ರವೇಶಿಸುತಿದ್ದಂತೆಯೇ ಹಚ್ಚ ಹಸಿರ ತೋರಣ ಕಣ್ಣಿಗೆ ತಂಪನ್ನು ನೀಡುತ್ತದೆ ಮತ್ತು ಮನೆಯ ವಾತವಾರಣ ಶುಭ್ರವಾಗಿಗಿದ್ದು ಆ ವ್ಯಕ್ತಿಯ ಮನಸ್ಸು  ತಾಜಾತನವಾಗಿ ಮತ್ತು ಧನಾತ್ಮಕವಾಗಿ ಯೋಚಿಸಲು ಸಹಕಾರಿಯಾಗಿರುತ್ತದೆ.

ಹಾಗೆಯೇ ಮನೆಯ ಬಾಗಿಲಿಗೆ ಮಾವಿನ ತಳಿರು ತೋರಣದ ಜೊತೆಗೆ  ಬೇವಿನ ಸೊಪ್ಪಿನ ಎಲೆ ಅಥವಾ  ಟೊಂಗೆಗಳನ್ನು ಸಿಕ್ಕಿಸುವುದರಿಂದ,  ಮಾವು ಮತ್ತು ಬೇವಿನ ಎಲೆಯಲ್ಲಿ  ಔಷಧೀಯ ಗುಣಗಳು ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವುದರಿಂದ,  ಮನೆಯ ದ್ವಾರದ ಮೂಲಕ ಪ್ರವೇಶಿಸುವ ಗಾಳಿಯೊಂದಿಗೆ  ಮನೆಯೊಳಗೆಲ್ಲಾ ಹರಡಿ ಆರೋಗ್ಯ ದೃಷ್ಟಿಯಿಂದ ಮನೆಯಲ್ಲಿ ಉತ್ತಮ ವಾತಾವರಣ ಮೂಡಿಸುತ್ತದೆ.

ಮಾವಿನ ತೋರಣದ ಮತ್ತೊಂದು ಗಮನಿಸಬೇಕಾದ ಅಂಶವೆಂದರೆ, ಮನೆಯೊಳಗೆ ಪ್ರವೇಶಿಸುವ ಸಣ್ಣ ಸಣ್ಣ ಕ್ರಿಮಿ ಕೀಟಗಳನ್ನು ಆಕರ್ಷಿಸಿ ಅವುಗಳನ್ನು ತೋರಣದ ತುದಿಯಲ್ಲಿಯೇ   ಇರುವಂತೆ  ಮಾಡಿ, ಅವುಗಳು  ಮನೆಯೊಳಗೆ ಪ್ರವೇಶಿಸದಂತೆ ಬಾಗಿಲಿನ ಹೊರಗೇ ತಡೆಗಟ್ಟುತ್ತವೆ.

ಹೀಗೆ   ನಾವು  ಅನುಸರಿಸುವ  ಪ್ರತಿಯೊಂದು ಧಾರ್ಮಿಕ ವಿಧಿವಿಧಾನಗಳ ಅಥವಾ ಪದ್ದತಿಗಳ  ಮೂಲ ಆಶಯ ವೈಜ್ಞಾನಿಕ ಪ್ರಯೋಜನಗಳೇ ಆಗಿರುತ್ತವೆ. ನಮಗೆ ಅವುಗಳ ಕುರಿತಾಗಿ ಸರಿಯಾದ ಮಾಹಿತಿಯ ಕೊರತೆಯಿಂದಾಗಿ ಮೂಢನಂಬಿಕೆ ಎಂದು ತಿಳಿದು ಸರಿಯಾಗಿ ಆಚರಿಸದೇ ಹಬ್ಬ ಹರಿದಿನಗಳ  ಸದುಪಯೋಗ  ಪಡೆದುಕೊಳ್ಳಲು ಸಾಧ್ಯವಾಗದಿರುವುದು ನಿಜಕ್ಕೂ ನಮ್ಮ ದೌರ್ಭಾಗ್ಯವೇ ಸರಿ.

ಮಾವು ಮತ್ತು ಬೇವಿನ ತೋರಣದ ಇಷ್ಟೋಂದು  ಮಹತ್ವ ತಿಳಿದ ಮೇಲೆಯಾದರೂ  ಅಲಂಕಾರಕ್ಕೆಂದು ನಮ್ಮೆಲ್ಲರ ಮನೆಯ ಮಂದೆ ಕಟ್ಟಿರುವ ನಿಶ್ಪ್ರಯೋಜಕ ಪ್ಲಾಸ್ಟಿಕ್  ತೋರಣಗಳ ಜಾಗದಲ್ಲಿ  ಇಂದೇ ಹಚ್ಚ ಹಸಿರಿನ ಮಾವಿನ ಮತ್ತು ಬೇವಿನ ತೋರಣವನ್ನು ಕಟ್ಟೋಣ. ಹಾಗೆ ತೋರಣ ಕಟ್ಟುವಾಗ ಸುಲಭ ಮತ್ತು ಅನುಕೂಲ ಎಂದು ಸ್ಟಾಪ್ಲರ್ ಪಿನ್ ಬಳೆಸದೆ, ಹಂಚಿ ಕಡ್ಡಿಯನ್ನೋ ಇಲ್ಲವೇ ಉಪಯೋಗಿಸಿದಂತಹ ಊದುಕಡ್ಡಿಯ ತುದಿಯನ್ನೋ ಬಳಸೋಣ. ನಾಳೆಯ ಕೆಲಸ ಇಂದೇ ಮಾಡೋಣ. ಇಂದಿನ ಕೆಲಸ ಈಗಲೇ ಮಾಡೋಣ.

ಏನಂತೀರೀ?

One thought on “ಮಾವಿನ ತಳಿರು ತೋರಣದ ಮಹತ್ವ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s