ಸಮಸ್ಯೆಗಳಿಗೆ ಸಾವೇ ಪರಿಹಾರವೇ?

ರಮೇಶ ಹಳ್ಳಿಯಲ್ಲಿ  ತಕ್ಕ ಮಟ್ಟಿಗೆ ಓದಿ ಬೆಂಗಳೂರಿಗೆ ಬಂದು ಕೆಲಸ ಗಿಟ್ಟಿಸಿಕೊಂಡು ಜೀವನ ನಡೆಸ ತೊಡಗಿದರು.  ಆವರದ್ದು ಸಂಪ್ರದಾಯಸ್ತ ಒಟ್ಟು ಕುಟಂಬವಾದ್ದರಿಂದ ಅಕ್ಕ ತಂಗಿಯರಿಗೆಲ್ಲ ಮದುವೆ ಮಾಡಿ ತಮ್ಮಂದಿರಿಗೆ ಒಂದು ದಾರಿ ತೋರಿಸಿ ಮದುವೆ ಆಗುವಷ್ಟರಲ್ಲಿ ಅವರ ಮದುವೆಯ ವಯಸ್ಸು ಮೀರಿದ್ದರೂ ಮದುವೆ ಆಗಿ ಆವರ ಸುಖಃ ದಾಂಪತ್ಯದ ಫಲವಾಗಿ  ವರ್ಷದೊಳಗೇ ಹೆಣ್ಣು ಮಗುವಿನ ಜನನವಾಗಿ ಮಗಳಿಗೆ ಆಶಾ ಎಂದು ಹೆಸರಿಟ್ಟು ಮುದ್ದಿನಿಂದ ಸಾಕುತ್ತಿದ್ದರು.

ಹೆಣ್ಣು ಗಂಡುಗಳ ನಡುವೆ ಬೇಧವಿಲ್ಲ  ಎಂದು ಎಷ್ಟೇ ಹೇಳಿದರೂ ಇಂದಿಗೂ ನಮ್ಮ ದೇಶದಲ್ಲಿ ಪುರುಷ ಪ್ರಧಾನ ಸಮಾಜವೇ ಹೆಚ್ಚಾಗಿರುವ ಕಾರಣ, ರಮೇಶ್ ಅವರ ಪೋಷಕರು ವಂಶೋದ್ಧಾರಕ್ಕೆ ಒಬ್ಬ ಗಂಡು ಮಗುವಾಗಲೀ ಎಂದು ಹಪಾಹಪಿಸುತ್ತಿದ್ದರು.  ವಯಸ್ಸಾದ ಮೇಲೆ ಮದುವೆಯಾಗಿದೆ. ಮೇಲಾಗಿ ಈಗಾಗಲೇ ಮಗಳೊಬ್ಬಳಿದ್ದಾಳೆ. ಅವಳನ್ನು ಸಾಕಿ ಸಲಹಿ ವಿದ್ಯಾಭ್ಯಾಸ ಕೊಡಿಸಿ ಒಳ್ಳೆಯ ಕಡೆ ಮದುವೆ ಮಾಡಿಕೊಟ್ಟರೆ ಸಾಕು ಎಂದು ಎಷ್ಟೇ ಹೇಳಿದರೂ ಒಪ್ಪದ ಪೋಷಕರ ಹಾರೈಕೆಯ ಫಲವೋ ದೇವರ ಆಶೀರ್ವಾದವೋ ಏನೋ? ಅಂತೂ ಇಂತು ತಡ ವಯಸ್ಸಿನಲ್ಲಿಯೂ ರಮೇಶರಿಗೆ ಗಂಡು ಮಗುವಾಗಿ, ಆ ಮಗುವಿಗೆ ಕಿರಣ ಎಂದು ಹೆಸರಿಡುತ್ತಾರೆ.  ಅಕ್ಕ ಮತ್ತು ತಮ್ಮಂದಿರ ನಡುವೆ ಸುಮಾರು ವರ್ಷಗಳ ಅಂತರವಿದ್ದರೂ ರಮೇಶ್ ದಂಪತಿಗಳು ತಮ್ಮ ಮಕ್ಕಳ ಬಗ್ಗೆ ಹೆಮ್ಮೆಯಿಂದ ನಮ್ಮ ಆಶಾ ಮತ್ತು ಕಿರಣರೇ ನಮ್ಮ  ಬಾಳಿನ ಆಶಾಕಿರಣ. ಅವರೇ ನಮ್ಮ ಮುಂದಿನ ಬಾಳಿನ ದೀಪ ಎಂದು  ಭಾವಿಸಿದ್ದರು.

ಮಗಳು ಪಿಯೂಸಿ ಓದಿ ಮುಗಿಸುವಷ್ಟರಲ್ಲಿಯೇ ಸಾಲ ಸೋಲ ಮಾಡಿ ತಮ್ಮ ಸಂಬಂಧೀಕರ ಹುಡುಗನಿಗೇ ಮದುವೆ ಮಾಡಿದಾಗ ಕಿರಣ ಇನ್ನೂ ಪ್ರೈಮರಿಯಲ್ಲಿ ಓದುತ್ತಿದ್ದ.  ಅಕ್ಕನ ಮದುವೆಯಲ್ಲಿ ಸಂಭ್ರಮದಿಂದ ಓಡಾಡುತ್ತಿದ್ದ. ಕಾಲ ಉರುಳಿದಂತೆಯೇ ಕಿರಣ ಕೂಡ ಪದವಿ ಮುಗಿಸಿ ಅಲ್ಲೇ ಒಂದು ಖಾಸಗಿ ಕಂಪನಿಯಲ್ಲಿ ಸೇಲ್ಸ್ ರೆಪ್ರೆಸೆಂಟೇಟಿವ್ ಆಗಿ ಕೆಲಸ ಗಿಟ್ಟಿಸಿಕೊಳ್ಳುವಷ್ಟರಲ್ಲಿ ರಮೇಶ್ ಅವರು  ತಮ್ಮ ಕೆಲಸದಿಂದ ನಿವೃತ್ತಿ ಹೊಂದಿ ಉಳಿಸಿದ್ದ ಹಣದಲ್ಲಿ ಜೀವನ ನಡೆಸುತ್ತಿದ್ದರು.  ದುಡಿಯುವ ಮಗನ ಸಂಪಾದನೆಯಲ್ಲಿಯೇ ಜೀವನ ಹಾಗೂ ಹೀಗೂ ಸಾಗುತ್ತಲಿತ್ತು.  ಮಗನಿಗೆ ಮದುವೆ ವಯಸ್ಸಾದಾಗ  ಎಲ್ಲಾ ತಂದೆ ತಾಯಿಯರಂತೆಯೇ ರಮೇಶ್ ದಂಪತಿಗಳೂ ಮಗನಿಗೆ ಹೆಣ್ಣು ನೋಡ ತೊಡಗಿದರು. ಬಹಳಷ್ಟು ಹೆಣ್ಣುಗಳು ಇವರ ಸಂಬಂಧವನ್ನು ಒಪ್ಪದಿದ್ದದರೆ, ಹಾಗೆ ಒಪ್ಪಿದ್ದ ಸಂಬಂಧವನ್ನು ಕಿರಣ  ಯಾವುದೋ ಕಂಟು ನೆಪವೊಡ್ಡಿ  ಸಂಬಂಧ ಕೆಡಿಸಿ ಬಿಡುತ್ತಿದ್ದ.  ಮಗನ ಈ ರೀತಿಯ ನಡವಳಿಕೆಯಿಂದ ಬೇಸತ್ತ ತಂದೆ ತಾಯಿಯರು ಕಾರಣ ಏನೆಂದು ಕೇಳಿದರೂ,  ಯಾರನ್ನಾದರೂ ಪ್ರೀತಿಸುತ್ತಿದ್ದೀಯಾ ಎಂದರೂ,  ಕಿರಣ ಸರಿಯಾದ ಕಾರಣ ತಿಳಿಸಿಸದೆ ಬಾಯಿ ಬಡಿದು ಬಿಡುತ್ತಿದ್ದ.  ಸರಿ ಕಂಕಣ ಕೂಡಿ ಬಂದಾಗ ಎಲ್ಲವೂ ಸರಿ ಹೋಗುತ್ತದೆ ಎಂದು ಸುಮ್ಮನಾಗಿದ್ದರು.

ಅದೊಂದು ದಿನ ಕೆಲಕ್ಕೆ ಹೋಗಿದ್ದ ಮಗ ಎಷ್ಟು ಹೊತ್ತಾದರೂ ಬರಲಿಲ್ಲವಾದ್ದರಿಂದ ರಮೇಶ್ ದಂಪತಿಗಳಿಗೆ ಆತಂಕವಾಗಿ ಕಿರಣನ ಮೊಬೈಲ್ಗೆ ಕರೆ ಮಾಡಿದರೆ ಮೊಬೈಲ್ ಸ್ವಿಜ್ ಆಫ್ ಎಂಬ ಸಂದೇಶ ಬರುತ್ತಿತ್ತು. ಬಹುಷಃ ಮೊಬೈಲ್ ಬ್ಯಾಟರಿ ಖಾಲಿಯಾಗಿರಬಹುದು ಎಂದು ಸ್ವಲ್ಪ ಹೊತ್ತು ನೋಡಿದ ನಂತರ ಮಗನ ಆಗಮನದ ಸುಳಿವೇ ಇಲ್ಲದ ಕಾರಣ ಅವನ ಸ್ನೇಹಿತನಿಗೆ ಕರೆ ಮಾಡಿದಾಗ ಕಿರಣ ಇಂದು ಕೆಲಸಕ್ಕೇ ಹೋಗಿಲ್ಲ  ಎಂಬ ವಿಚಾರ ಕೇಳಿ ಗಾಬರಿಯಾಗಿ ಕೂಡಲೇ ಪೋಲಿಸ್ ಸ್ಟೇಶನ್ನಿಗೆ ಹೋಗಿ ಮಗ ಕಾಣೆಯಾಗಿರುವ ಬಗ್ಗೆ ದೂರು ದಾಖಲಾತಿಸಿದರು. ಸರಿ ಹೊತ್ತಿನಲ್ಲಿ ಹೋಗಿದ್ದ ರಮೇಶ್ ಅವರಿಗೆ ಪೋಲೀಸರು ಮಗನ ಹವ್ಯಾಸ, ಸ್ನೇಹಿತರು ಕೆಲಸ ಮಾಡುತ್ತಿದ್ದ ಕಂಪನಿ ಎಲ್ಲವನ್ನೂ ವಿಚಾರಿಸಿ ಯಾವುದರಲ್ಲೂ ಅನುಮಾನ ಬಾರದಿದ್ದ ಕಾರಣ  ವಯಸ್ಸಿಗೆ ಬಂದ ಹುಡುಗನಿಗೆ ಏನೂ ಆಗಿರುವುದಿಲ್ಲ  ಒಂದೆರಡು ದಿನಗಳಲ್ಲಿ ಬಂದು ಬಿಡುತ್ತಾನೆ. ನಾವೂ ಕೂಡ ಈ ವಿಷಯವನ್ನು ಎಲ್ಲಾ ಸ್ಟೇಷನ್ಗಳಿಗೆ ಕಳಿಹಿಸಿ, ಏನಾದರೂ ವಿಷಯ ತಿಳಿದಲ್ಲಿ ತಿಳಿಸುತ್ತೇವೆ ಎಂದು ಹೇಳಿ ಕಳುಹಿಸಿದರು. ರಮೇಶ್ ಮತ್ತು ಕಿರಣನ ಗೆಳೆಯ ಭಾರವಾದ ಹೃದಯದಿಂದ ಮನೆಗೆ ಬಂದರೂ ಆ ರಾತ್ರಿ ಇಡೀ ರಮೇಶರಿಗೆ ನಿದ್ದೆಯೇ ಬರಲಿಲ್ಲ.

ಮಾರನೇಯದಿನ ಮಗ ಕೆಲಸ ಮಾಡುತ್ತಿದ್ದ ಕಂಪನಿಗೂ ಹೋಗಿ ವಿಚಾರಿಸಿದರೆ. ಅಲ್ಲೂ ಯಾರೂ ಕೂಡಾ ಆತನ ನಡತೆಯ ಬಗ್ಗೆ ಯಾವುದೇ ರೀತಿಯ ಅನುಮಾನ ವ್ಯಕ್ತಪಡಿಸಲ್ಲಿಲ್ಲವಾದರೂ ಇತ್ತೀಚೆಗೆ ಕಿರಣ ಎಲ್ಲರ ಬಳಿಯಲ್ಲೂ ತಂದೆಯವರಿಗೆ ಆರೋಗ್ಯ ಸರಿಯಿಲ್ಲ ಎಂಬ ನೆಪ ಹೇಳಿ ಆಗ್ಗಾಗೆ ರಜೆ ಹಾಕುತ್ತಿದ್ದ ಮತ್ತು ಎಲ್ಲರ ಬಳಿಯಲ್ಲೂ  ಕೈ ಸಾಲ ಮಾಡಿದ್ದ ಎಂಬ ವಿಷಯ ತಿಳಿದು ರಮೇಶ್ ಅವರಿಗೆ ಮತ್ತಷ್ಟೂ ಗಾಭರಿಯಾಗ ತೊಡಗಿತು. ಸಂಭಾವಿತ ಹುಡುಗ  ಏಕಾ ಏಕಿ ಮನೆಯಿಂದ ಈ ರೀತಿಯಾಗಿ ಎರಡು ದಿನಗಳಿಂದ ಹೇಗೆ ನಾಪತ್ತೆಯಾಗಿದ್ದಾನೆ ಎಂದು ಯೋಚಿಸುತ್ತಾ ದೂರದ ತಮ್ಮ ಸಂಬಂಧೀಕರ ಎಲ್ಲಾ ಮನೆಗಳಿಗೂ ಕರೆ ಮಾಡಿ ಕಿರಣ ನಿಮ್ಮ ಮನೆಗೆ ಬಂದಿದ್ದಾನಾ? ಅಥವಾ ಕಿರಣನ ಬಗ್ಗೆ ನಿಮಗೇನಾದರೂ ವಿಷಯ ತಿಳಿದಿದೆಯೇ ಎಂದು ವಿಚಾರಿಸುವಷ್ಟರಲ್ಲಿಯೇ ಪೋಲಿಸರಿಂದ ರಮೇಶ್ ಅವರಿಗೆ ಕರೆ ಬಂದು ಈ ಕೂಡಲೇ ಸ್ಟೇಷನ್ನಿಗೆ ಬರಲು ಹೇಳಿದರು.  ರಮೇಶ ಅವರು ಸ್ಟೇಷನ್ನಿಗೆ ಹೋದಾಗ, ಕಾರವಾರದಲ್ಲಿ ನಿಮಗೆ ಯಾರಾದರೂ ಸಂಬಂಧೀಕರು ಇದ್ದಾರೆಯೇ ಅಥವಾ ಅವನ ಕೆಲಸದ ಮೇಲೆ ಕಾರವಾರಕ್ಕೇನಾದರೂ ಹೋಗುತ್ತಿದ್ದನಾ ನಿಮ್ಮ ಮಗ ಎಂದು ವಿಚಾರಿಸಿದರು. ಕಾರವಾರದಲ್ಲಿ ನಮ್ಮ ಯಾರೂ ಸಂಬಂಧೀಕರು ಇಲ್ಲ ಮತ್ತು ಅವನು ಹೊರ ಊರಿಗೆ ಆಗಾಗ ಕೆಲಸದ ಮೇಲೆ ಹೋಗುತ್ತಿದ್ದನಾದರೂ ಮನೆಯವರಿಗೆ ತಿಳಿಸಿಯೇ ಹೋಗುತ್ತಿದ್ದ  ಎಂದು ತಿಳಿಸಿದರು.   ಪೋಲಿಸರು ಕಿರಣನ ಮೊಬೈಲ್ ಕರೆಗಳನ್ನೆಲ್ಲಾ ಟ್ರಾಕ್ ಮಾಡಿ ಅವನ ಕಡೆಯ ಮೂರ್ಲ್ನಾಲ್ಕು ಕರೆಗಳು ಕಾರವಾರದಿಂದಲೇ ಬಂದು ಆ ನಂತರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಕೂಡಲೇ ಅನುಮಾನ ಗೊಂಡ ಪೋಲಿಸರು ಕಾರವಾರದ ಠಾಣೆಗೆ ಕರೆಮಾಡಿ ಅಲ್ಲಿ  ಕಿರಣನ ಬಗ್ಗೆ ಏನಾದರೂ ವಿಷಯ ತಿಳಿದಿದೆಯಾ ಎಂದು ವಿಚಾರಿಸಿದಾಗ ಅಂದು ಬೆಳಿಗ್ಗೆಯೇ ಅಲ್ಲಿಯ ಸ್ಥಳಿಯ ಹೋಟೆಲ್ ಒಂದರಲ್ಲಿ ಒಬ್ಬ ಅಪರಿಚಿತ ತರುಣ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿಸಿದರು. ಕೂಡಲೇ ಆ ವ್ಯಕ್ತಿಯ ಫೋಟೋವನ್ನು ಮೊಬೈಲ್ನಲ್ಲಿ ಸೆರೆ ಹಿಡಿದು ಇಲ್ಲಿಯ ಠಾಣೆಗೆ ಕಳುಹಿಸಿದಾಗ  ಮೃತನ ದೇಹ ಕಿರಣನಿಗೆ ಹೋಲುತ್ತಿದ್ದರಿಂದ ಆ ಕೂಡಲೇ ರಮೇಶ್ ಮತ್ತು ಕಿರಣನ ಗೆಳೆಯನ ಸಮೇತ ಕಾರವಾರಕ್ಕೆ ಹೋಗಿ ನೋಡಿದರೆ, ಆ ಮೃತ ದೇಹ ಕಿರಣನದ್ದೇ ಆಗಿತ್ತು .

ಬಯಸೀ ಬಯಸೀ ವಂಶೋದ್ಧಾರಕ ಬೇಕು ಎಂದು ದೇವರಲ್ಲಿ ಕಾಡಿ ಬೇಡಿ ಪಡೆದಿದ್ದ ಮಗ,  ಇಂದು ಕಣ್ಣ ಮುಂದೆಯೇ ಮೃತನಾಗಿರುವುದನ್ನು ನೋಡಿದ ರಮೇಶ್ ಅವರಿಗೆ ಆಕಾಶವೇ ಕಳಚಿ ಬಿದ್ದಂತಾಗಿ ಕುಸಿದು ಬಿದ್ದರು. ಕೂಡಲೇ ಅವರಿಗೆ ನೀರು ಚುಮುಕಿಸಿ ಸ್ವಲ್ಪ ನೀರು ಕುಡಿಸಿ ಸಮಾಧಾನ ಪಡಿಸಿ ಪೋಲೀಸರು ಮಹಜರು ಪ್ರಾರಂಭಿಸಿದಾಗ, ಅವನ ಜೀಬಿನಲ್ಲಿ ಸ್ವಹಸ್ತದಿಂದ ಬರೆದಿದ್ದ ಪತ್ರದಿಂದ  ತಿಳಿದು ಬಂದ ವಿಷಯವೇನೆಂದರೆ, ಸೇಲ್ಸ್ ಕೆಲಸ ಮೇಲೆ  ಬೇರೆ ಬೇರೆ ಕಂಪನಿಗಳಿಗೆ ಹೋಗುತ್ತಿದ್ದಾಗ ಒಂದು ಕಡೆ ಅವನಿಗೆ ಒಂದು ಹುಡುಗಿ ಪರಿಚಯವಾಗಿ ಅದು ಸ್ನೇಹದಿಂದ ಪ್ರೀತಿಗೆ ತಿರುಗಿತ್ತು.  ಕೆಲಸಕ್ಕೆ ರಜೆ ಹಾಕಿ ಮನೆಯವರಿಗೆ ತಿಳಿಸಿಸದೆ ಆಗ್ಗಾಗೆ  ಕೆಲ ದಿನಗಳು ಆಕೆಯೊಂದಿಗೆ  ಸುತ್ತಾಡುತ್ತಿದ್ದ ಮತ್ತು ಅವಳಿಗಾಗಿ ಸಾಕಷ್ಟು ಹಣವನ್ನೂ ಖರ್ಚು ಮಾಡಿದ್ದ.   ಆಕೆ ಅನ್ಯ ಕೋಮಿನವಳು ಎಂದು ಗೊತ್ತಿದ್ದರೂ  ನೋಡಲು ಸುಂದರವಾಗಿದ್ದ ಕಾರಣ ಆಕೆಯ ಮೋಹದ ಪಾಶಕ್ಕೆ ಬಿದ್ದು ಮನೆಯವರಿಗೂ ಆಕೆಯ ಬಗ್ಗೆ ತಿಳಿಸಲು ಆಗದೆ ತಂದೆ ತಾಯಿಯರು ತೋರಿಸುತ್ತಿದ್ದ ಹುಡುಗಿಯರನ್ನೆಲ್ಲ ನಿರಾಕರಿಸುತ್ತಿದ್ದ.  ಕಿರಣನೊಂದಿಗೆ ಅಷ್ಟೊಂದು ಆಪ್ತಳಾಗಿದ್ದ  ಆ ಹುಡುಗಿ ಇದ್ದಕ್ಕಿದ್ದಂತೆಯೇ ಒಂದು ವಾರದಿಂದ ಯಾವುದೇ ಕರೆಗಳನ್ನೂ ಸ್ವೀಕರಿಸದೇ ಕಿರಣನಿಗೂ ಎಂದಿನ ಸ್ಥಳಗಳಲ್ಲಿ ಸಿಗದ ಕಾರಣ ಅನುಮಾನಗೊಂಡು ಅಕೆಯ ಬಗ್ಗೆ  ವಿಚಾರಿಸಿದಾಗ  ಆಕೆಯೂ ಕೂಡ ಮನೆಯವರ ಕಟ್ಟು ಪಾಡುಗಳಿಗೆ ಬಿದ್ದು ತನ್ನ ತಂದೆ ತಾಯಿಯರು ತೋರಿಸಿದ ತನ್ನದೇ ಕೋಮಿನ ಹುಡುಗನೊಂದಿಗೆ ಮದುವೆಯಾಗಿ ಬಿಟ್ಟಿದ್ದಳು.  ಗೆಳತಿಯ ಅಗಲಿಕೆ ಮತ್ತು ಸಾಲಗಾರ ಕಾಟ ತಾಳಲಾರದೇ,  ಬೇರೆ ದಾರಿ ಕಾಣದೆ ಕಿರಣ ದೂರದ ಕಾರವಾರಕ್ಕೆ ಹೋಗಿ ಹೋಟೆಲ್ ರೂಮ್ ಬಾಡಿಗೆ ಪಡೆದು ಅಲ್ಲಿ  ಬ್ಲೇಡಿನಿಂದ ತನ್ನ ರಕ್ತನಾಳಗಳನ್ನು ಕತ್ತರಿಸಿಕೊಂಡು ದೇಹದಿಂದ ರಕ್ತ ಒಸರಿ ಹೋಗಿ ಆತ್ಯಹತ್ಯೆ ಮಾಡಿ ಕೊಂಡಿದ್ದ.

ತಮ್ಮನ ಅಕಾಲಿಕ ಮರಣವನ್ನು ತಾಳಲಾರದ ಕಿರಣ ಅಕ್ಕನಿಗೆ  ಹೃದಯಾಘಾತವಾಗಿ ಆಕೆಯೂ ಕೂಡ ಆಸ್ಪತ್ರೆಗೆ ಸೇರಿಸಬೇಕಾಯಿತು. ತಮ್ಮ ಅಂತ್ಯಕಾಲದಲ್ಲಿ ನಮ್ಮ ಚಿತೆಗೆ ತಮ್ಮ ಮಗ ಅಂತ್ಯ ಸಂಸ್ಕಾರ ಮಾಡುತ್ತಾನೆ ಎಂದು ತಿಳಿದಿದ್ದ ರಮೇಶ್ ಅವರಿಗೆ ಅವರೇ ಅವರ ಮಗನ ಚಿತೆಗೆ ಕೊಳ್ಳಿ ಇಡಬೇಕಾದ ದುರ್ವಿಧಿ ಕಾಡಿತ್ತು. ಕಿರಣ ಅಕ್ಕ ಆಶಾ ಕೂಡಾ ತಮ್ಮನ ಅಕಾಲಿಕ ಅಗಲಿಕೆಯಿಂದ ನೊಂದು ಹೆಚ್ಚು ದಿನ ಇರಲಿಲ್ಲಪುತ್ರ ಶೋಕ ನಿರಂತರಂ ಎನ್ನುವಂತೆ  ಕಿರಣನ ತಾಯಿ ಮಗನ ಮರಣದ ಆಘಾತದಿಂದ ಇನ್ನೂ ಕೂಡಾ ಹೊರಬರಲಾಗದೇ ಮಾನಸಿಕವಾಗಿ ನರಳುತ್ತಿದ್ದಾರೆ.  ತಮ್ಮ ಬಾಳಿನ ಆಶಾಕಿರಣ ತಮ್ಮ ಮುಂದಿನ ದಾರಿ ದೀಪ ಎಂದು ತಿಳಿದಿದ್ದ ಮಕ್ಕಳಿಬ್ಬರನ್ನೂ ಕಳೆದುಕೊಂಡ ರಮೇಶ್ ಈ ಇಳೀ ವಯಸ್ಸಿನಲ್ಲಿ ನಾನಾ ರೀತಿಯ ಖಾಯಿಲೆಗಳಿಂದ ಬಳಲುತ್ತಿದ್ದರೂ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಾ ಜೀವನ ನಡೆಸುತ್ತಿದ್ದಾರೆ.

ಆತ್ಮಹತ್ಯೆ ಎಲ್ಲಾ  ಸಮಸ್ಯೆಗಳಿಗೂ ಪರಿಹಾರವಲ್ಲ. ಪ್ರತಿಯೊಂದು ಸಮಸ್ಯೆಗಳಿಗೂ ಹಲವಾರು ಪರಿಹಾರಗಳು ಇದ್ದೇ ಇರುತ್ತವೆ. ನಾವು  ತಾಳ್ಮೆಯಿಂದ ಕುಳಿತು ಯೋಚಿಸಿದರೆ ಬಹಳಷ್ಟು ಸಮಸ್ಯೆಗಳಿಗೆ ಪರಿಹಾರ ನಮಗೆ ಹೊಳೆಯುತ್ತದೆ. ಮಿಕ್ಕ ಸಮಸ್ಯೆಗಳನ್ನು ಗುರು ಹಿರಿಯರು  ಅಥವಾ ಸ್ನೇಹಿತರೊಂದಿಗೆ ಚರ್ಚಿಸಿ ಪರಿಹರಿಸಿ ಕೊಳ್ಳಬಹುದಾಗಿದೆ. ಎಲ್ಲಾ ಧರ್ಮಗಳಲ್ಲಿಯೂ ಆತ್ಮಹತ್ಯೆ ಮಾಡಿಕೊಳ್ಳುವುದು ಪಾಪ ಎಂದೇ ಹೇಳುತ್ತದೆ.  ಅದಕ್ಕಿಂತ ಒಂದು  ಹೆಜ್ಜೆ ಮುಂದುವರಿಸಿ ಹೇಳುವುದಾದರೇ ಆತ್ಮಹತ್ಯೆ ಮಾಡಿಕೊಳ್ಳುವವರು ಕೇವಲ ದುರ್ಬಲ ಮನಸ್ಸಿನವರ ಮಾತ್ರ. ಅಂತಹವರನ್ನು  ಹೇಡಿಗಳು ಎಂದು ಕರೆದರೂ ತಪ್ಪಾಗಲಾರದು. ಈಸ ಬೇಕು ಇದ್ದು ಜಯಿಸಬೇಕು ಎಂದು ಎಷ್ಟೋ ವರ್ಷಗಳ ಹಿಂದೆಯೇ ಪುರಂದರ ದಾಸರೇ ಹೇಳಿದ್ದಾರೆ. ಹಾಗಾಗಿ  ಯಾವುದೋ ಕ್ಷುಲ್ಲಕ ಕಾರಣಗಳಿಗಾಗಿ ಆತ್ಮ ಹತ್ಯೆ ಮಾಡಿಕೊಂಡರೆ ಅವರನ್ನೇ ನಂಬಿಕೊಂಡಿರುವ ಅವರ ಕುಟುಂಬದ ಗತಿ ಏನು? ಯಾರದ್ದೋ ತಪ್ಪಿಗೆ  ಕುಟುಂಬಕ್ಕೇಕೆ ಶಿಕ್ಷೆ? ಆಗಿದ್ದೆಲ್ಲ ಆಗಿ ಹೋಯಿತು. ಆ ಹುಡುಗಿ ಇಲ್ಲದಿದ್ದರೆ ಮತ್ತೊಬ್ಬಳು ಎಂದು ಕಿರಣ  ನಿರ್ಮಲ ಚಿತ್ತದಿಂದ ಯೋಚಿಸಿ, ನಿಶ್ಚಿಂತೆಯಾಗಿ ಕುಟುಂಬದೊಡನೆ ತುಂಬು ಜೀವನ ನಡೆಸಿಕೊಂಡು ಹೋಗಿದ್ದರೆ ಈ ಇಳಿ ವಯಸ್ಸಿನಲ್ಲಿ ಅವರ ತಂದೆ ಜೀವನೋಪಾಯಕ್ಕಾಗಿ ಕೆಲಸ ಮಾಡುವ ಅವಶ್ಯಕತೆ ಇರಲಿಲ್ಲ.  ಹುಟ್ಟಿಸಿದ ದೇವರು ಹುಲ್ಲು ಮೇಯಿಸಲಾರ. ಅವನು ನಮ್ಮ  ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಪರಿಹಾರ ಸೂಚಿಸಲು ಸಿದ್ಧನಾಗಿಯೇ ಇರುತ್ತಾನೆ.  ನಾವುಗಳು ಭಗವಂತನ ಸಹಾಯ ಕೇಳುವ ಮನಸ್ಸು ಮಾಡಬೇಕಷ್ಟೇ.  ಇಲ್ಲಿ ಭಗವಂತ ಎನ್ನುವುದು ಕೇವಲ ಸೂಚಕ ಪದವಾಗಿದ್ದು. ಭಗವಂತ  ಗಂಡ, ಹೆಂಡತಿ, ಮಕ್ಕಳು, ಅತ್ತೆ ,ಮಾವ, ಸಂಬಂಧಿಗಳು, ಸ್ನೇಹಿತರು ಹೀಗೆ ಯಾರ ಮುಖಾಂತರವಾದರೂ ಸಹಾಯ ಮಾಡಬಹುದು.  ಅವರ ಸಹಾಯದಿಂದ ಸಮಸ್ಯೆಗಳಿಂದ ಹೊರ ಬರುವ ಮನಸ್ಸನ್ನು ಆತ್ಯಹತ್ಯೆ ಮಾಡಿಕೊಳ್ಳುವವರು  ಮಾಡಬೇಕಷ್ಟೇ.

ಏನಂತೀರೀ?

One thought on “ಸಮಸ್ಯೆಗಳಿಗೆ ಸಾವೇ ಪರಿಹಾರವೇ?

Leave a comment