ಮೈಸೂರು ಮತ್ತು ಸುತ್ತ ಮುತ್ತಲಿನ ಪ್ರದೇಶ ದೇವಸ್ಥಾನಗಳಿಗೆ ಸುಪ್ರಸಿದ್ದವಾಗಿದೆ. ಇತಿಹಾಸ ಪ್ರಸಿದ್ಧವಾದ ಮತ್ತು ಅತ್ಯಂತ ಪುರಾತನವಾದ ಪುರಾಣ ಕ್ಷೇತ್ರವಾದ ನಂಜನಗೂಡಿನ ಶ್ರೀ ಶ್ರೀಕಂಠೇಶ್ವರಸ್ವಾಮಿಯ ದಿವ್ಯಸನ್ನಿಧಾನದಿಂದ ಚಾಮರಾಜ ನಗರದ ಕಡೆ ಸುಮಾರು 10 ಕಿಮೀ ನಷ್ಟು ದೂರ ಕ್ರಮಿಸಿದರೆ ಸಿಗುವುದೇ ಬದನವಾಳು.
ಮಹಾತ್ಮ ಗಾಂಧಿಯವರು, 1927ರಲ್ಲಿ ಬದನವಾಳು ಗ್ರಾಮದಲ್ಲಿ ಮೂರು ದಿನಗಳ ಕಾಲ ವಾಸ್ತವ್ಯ ಮಾಡಿ ಅಲ್ಲಿನ ಜನರಿಗೆ ಗುಡಿ ಕೈಗಾರಿಕೆ ಆರಂಭಿಸಲು ಪ್ರೇರಣೆ ನೀಡಿದ್ದಲ್ಲದೆ, ಬದನವಾಳು ನೂಲುವ ಪ್ರಾಂತ್ಯ ಎಂಬ ಕಲ್ಲನ್ನು ಶಿಲಾನ್ಯಾಸ ಮಾಡುವ ಮೂಲಕ ಬದನವಾಳು ಖಾದಿ ಗ್ರಾಮೋದ್ಯೋಗ ಸಹಕಾರ ಸಂಘ ಎಂಬ ಸಂಸ್ಥೆ ಉದಯಕ್ಕೆ ಕಾರಣಭೂತರಾದರು. ಅಂದಿನಿಂದ ಬದನವಾಳಿನಲ್ಲಿ ಖಾದಿ ಬಟ್ಟೆ, ಅವಲಕ್ಕಿ, ಎಣ್ಣೆ, ಬೆಂಕಿ ಪೊಟ್ಟಣ, ಕಾಗದ ತಯಾರಿ ಸೇರಿದಂತೆ ಸರಿ ಸುಮಾರು 10 – 15 ಬಗೆಯ ಸ್ವದೇಶಿ ಉತ್ಪನ್ನಗಳನ್ನು ತಯಾರಿಸುವ ಕಾರ್ಯ ಆರಂಭಗೊಂಡಿತ್ತು. ಆದಾದ ನಂತರ 1932ರಲ್ಲಿ ಮತ್ತೊಮ್ಮೆ ಬದನವಾಳಿಗೆ ಭೇಟಿ ನೀಡಿದ ಗಾಂಧೀಜಿ, ನೂರಾರು ಜನರಿಗೆ ಗುಡಿ ಕೈಗಾರಿಕೆಯ ಮೂಲಕ ಉದ್ಯೋಗಾವಕಾಶ ನೀಡಿ ಗ್ರಾಮೀಣಾಭಿವೃದ್ಧಿಯಾಗಿದ್ದನ್ನು ನೋಡಿ ಸಂತಸ ಪಟ್ಟಿದ್ದರು.
ಮಹಾತ್ಮ ಗಾಂಧಿಯವರು ಎರೆಡೆರಡು ಬಾರಿ ಭೇಟಿ ಕೊಟ್ಟಿದ್ದ ಹೆಮ್ಮೆಯ ಪ್ರದೇಶವಾಗಿದ್ದರೆ, ಅದಕ್ಕೆ ಕಪ್ಪು ಚುಕ್ಕೆ ಇಟ್ಟಂತೆ ಅದೇ ಬದನವಾಳು ಗ್ರಾಮದಲ್ಲಿರುವ ಸಿದ್ದೇಶ್ವರ ಸ್ವಾಮಿ ದೇವಾಲಯದ ಜೀರ್ಣೋದ್ಧಾಕ್ಕೆ ದೇಣಿಗೆ ಸಂಗ್ರಹಿಸುವ ವಿಚಾರದಲ್ಲಿ ಸವರ್ಣೀಯರು ಮತ್ತು ದಲಿತರ ನಡುವೆ 1993 ರಲ್ಲಿ ನಡೆದ ಸಂಘರ್ಷ 3 ದಲಿತರು ಹತ್ಯೆಯೊಂದಿಗೆ ಅಂತ್ಯವಾದದ್ದು ಅತ್ಯಂತ ನೋವಿನ ಸಂಗತಿಯಾಗಿದೆ.
ಆದರೆ ಈ ಎರಡೂ ಸಂಗತಿಗಳಿಗಿಂತಲೂ ಪುರಾತನವಾದ ನಂಜನಗೂಡಿನ ಹೆದ್ದಾರಿಯಿಂದ ಬದನವಾಳು ಗ್ರಾಮ ತಲುಪಿ ಬಲಕ್ಕೆ ನೋಡಿದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಅತ್ಯಂತ ದೊಡ್ಡದಾದ ಶ್ರೀ ಕೌಂಡಿನ್ಯ ಮಹರ್ಷಿ ಕ್ಷೇತ್ರ ಸಂತಾನ ವೇಣುಗೋಪಾಲಸ್ವಾಮಿ ದೇವಾಲಯ , ಹೆಮ್ಮರಗಾಲ ಎಂಬ ಕಮಾನು ನಮ್ಮನ್ನು ಸ್ವಾಗತಿಸುತ್ತದೆ. ಆ ಕಮಾನನ್ನು ದಾಟಿ ಕೇವಲ 5 ಕಿಮೀ ದೂರ ಕ್ರಮಿಸಿದರೆ ಸಿಗುವುದೇ ಹೆಮ್ಮರಗಾಲದ ಪುರಾಣ ಪ್ರಸಿದ್ಧ ಸುದರ್ಶನ ನಾರಸಿಂಹ ಕ್ಷೇತ್ರ.
ದೇವಸ್ಥಾನದ ಮುಂಭಾಗದ ಪ್ರಾಂಗಣ ದಕ್ಷಿಣ ಕನ್ನಡದ ಶೈಲಿಯ ಮಂಗಳೂರು ಹೆಂಚಿನ ಸೂರಿದ್ದು ಒಳಗೆ ಒಂದು ಪುರಾಣ ಪ್ರಸಿದ್ದ ದೇವಾಲಯವಿದೇ ಎಂಬುದನ್ನೇ ಮರೆಮಾಚುತ್ತಾದಾದರೂ ಅದರೊಳಗೆ ಪ್ರವೇಶಿಸಿ ಮುಂದೆ ಹೋದಲ್ಲಿ ಸುಮಾರು ದ್ವಾಪರ ಯುಗದಲ್ಲಿ ಮಹರ್ಷಿ ಕೌಂಡಿನ್ಯರಿಂದ ಪ್ರತಿಷ್ಟಾಪಿಸಲ್ಪಟ್ಟು 1800 ವರ್ಷಗಳಷ್ಟು ಹಿಂದೆ ಚೋಳ ರಾಜನಿಂದ ಕಟ್ಟಿಸಲ್ಪಟ್ಟ ಸುಂದರವಾದ ಶ್ರೀ ವೇಣುಗೋಪಾಲನ ದೇವಾಲಯವಿದೆ.
ದ್ವಾಪರಯುಗದಲ್ಲಿ ಹೇಮಪುರಿ ಎಂದು ಹೆಸರಾಗಿದ್ದ ಈ ಊರಿನಲ್ಲಿ ಕೌಂಡಿನ್ಯ ಮಹರ್ಷಿಗಳು ವಾಸಿಸುತ್ತಿದ್ದರಂತೆ. ಅಲ್ಲೊಬ್ಬ ರಾಕ್ಷಸ ಅವರ ತಪಸ್ಸನ್ನು ಭಂಗ ಮಾಡುತ್ತಿದ್ದಲ್ಲದೇ, ಊರ ಜನರಿಗೂ ತೊಂದರೆ ಕೊಡುತ್ತಿದ್ದನಂತೆ. ಆ ರಾಕ್ಷಸನ ಹಾವಳಿಯಿಂದ ಎಲ್ಲರನ್ನೂ ಪಾರು ಮಾಡೆಂದು ಭಗವಾನ್ ವಿಷ್ಣುವನ್ನು ಕೌಂಡಿನ್ಯರು ಪ್ರಾರ್ಥಿಸಿದಾಗ, ಶ್ರೀಮನ್ನಾರಾಯಣ ನರಸಿಂಹನ ರೂಪದಲ್ಲಿ ಬಂದು ಅ ರಾಕ್ಷಸನನ್ನು ಸಂಹಾರ ಮಾಡಿದನಂತೆ. ಹೀಗೆ ರಾಕ್ಷಸ ಸಂಹಾರ ಮಾಡುವಾಗ ರಾಕ್ಷಸನ ದೊಡ್ಡ ಮರದಂಥ ಕಾಲು ಮುರಿದು ಬಿದ್ದ ಈ ಊರನ್ನು ಅಂದಿನಿಂದ ಹೆಮ್ಮರಗಾಲ ಎಂದು ಕರೆಯಲಾರಂಭಿಸಿದರು ಎಂಬ ಕಥೆ ಪ್ರಚಲಿತದಲ್ಲಿದೆ.
ಹೀಗೆ ಕೌಂಡಿನ್ಯರು ತಪಸ್ಸು ಮಾಡಿದ ಕಾರಣ ಇದು ಕೌಂಡಿನ್ಯ ಮಹರ್ಷಿ ಗೋವರ್ಧನ ಕ್ಷೇತ್ರವೆಂದೂ ಮತ್ತು ಅವರೇ ಪ್ರತಿಷ್ಟಾಪಿಸಿದ ಶ್ರೀ ವೇಣುಗೋಪಾಲ ಸ್ವಾಮಿಯ ದೇವಾಲಯದ ಗರ್ಭಗುಡಿಯ ದ್ವಾರದ ಮೇಲಿರುವ ಸರಸಿಂಹ ಸ್ವಾಮಿಯ ಪ್ರತೀಕವಾಗಿ ಇದು ಶ್ರೀ ಸುದರ್ಶನ ನಾರಸಿಂಹ ಕ್ಷೇತ್ರ ಎಂದೂ ಪ್ರಸಿದ್ದವಾಗಿದೆ.
ಮಂಗಳೂರು ಹೆಂಚಿನ ಪ್ರಾಂಗಣ ದಾಟಿ ಒಳಹೋಗುತ್ತಿದ್ದಂತೆಯೇ ಇತ್ತೀಚೆಗೆ ಗ್ರಿಲ್ಲಿನಿಂದ ನಿರ್ಮಿಸಲಾಗಿರುವ ವಿಶಾಲವಾದ ಪ್ರಾಂಗಣ ಎಡ ಭಾಗದಲ್ಲಿ ಭಾವಿ ಮತ್ತು ಅದರ ಪಕ್ಕದಲ್ಲೇ ಕೌಂಡಿನ್ಯ ಪ್ರಚಚನ ಮಂದಿರ ಕಾಣಸಿಕ್ಕರೆ, ದೇವಾಲಯದ ಮಂದೆ ನವೀಕೃತ ಹಿತ್ತಾಳೆ ಕವಚ ಹೊಂದಿರುವ ಗರುಡ ಗಂಬ ಎದುರಾಗುತ್ತದೆ. ದೇವಸ್ಥಾನದ ಎಡಭಾಗದಿಂದ ಸುಮಾರು ಏಳೆಂಟು ಮೆಟ್ಟಿಲು ಹತ್ತಿಕೊಂಡು ಒಳಗೆ ಪ್ರವೇಶಿದಲ್ಲಿ ಕೊಳಲನ್ನು ಹಿಡಿದ ಸುಂದರವಾದ ವೇಣುಗೋಪಾಲನ ದರ್ಶನವಾಗುತ್ತದೆ, ಹಾಗೆ ಗರ್ಭ ಗುಡಿಯ ಎಡಭಾಗದಲ್ಲಿ ಉತ್ಸವ ಮೂರ್ತಿ ಇದ್ದರೆ ಗರ್ಭಗುಡಿಯ ಅಕ್ಕ ಪಕ್ಕದಲ್ಲಿ ರುಕ್ಮಿಣಿ ಮತ್ತು ಸತ್ಯಭಾಮೆಯರ ಸುಂದರವಾದ ವಿಗ್ರಹಗಳಿವೆ. ಅಡ್ಡಗಾಲನ್ನು ಹಾಕಿಕೊಂಡು ಕೊಳಲನ್ನು ಊದುತ್ತಾ ನಿಂತಿರುವ ಸುಮಾರು ಎರಡು ಅಡಿ ಎತ್ತರವಿರುವ ಮುದ್ದಾದ ವೇಣುಗೋಪಾಲನನ್ನು ನೋಡಲು ಎರಡು ಕಣ್ಣುಗಳು ಸಾಲವು. ಈ ಮೂರ್ತಿಯ ಪ್ರಭಾವಳಿಯ ಎರಡೂ ಕಡೆ ಗೋಪಾಲಕ ಹಾಗೂ ಗೋವುಗಳಿದ್ದರೆ, ಶಿರದಲ್ಲಿ ಆದಿಶೇಷನ ಕೆತ್ತನೆ ಇದೆ. ಇನ್ನು ಗರ್ಭಗುಡಿಯ ದ್ವಾರದ ಮೇಲೆ ನರಸಿಂಹನ ಕೆತ್ತನೆ ಇದ್ದು, ಪ್ರತೀ ಬಾರಿ ಶ್ರೀ ವೇಣುಗೋಪಾಲ ಮತ್ತು ನರಸಿಂಹ ಸ್ವಾಮಿ ಇಬ್ಬರಿಗೂ ಮಂಗಳಾರತಿ ಮಾಡಲಾಗುತ್ತದೆ.
ಈ ಕ್ಷೇತ್ರದ ಮತ್ತೊಂದು ಖ್ಯಾತಿ ಎಂದರೆ ಸಂತಾನ ಪ್ರಾಪ್ತಿ . ಮಕ್ಕಳಿಲ್ಲದವರು ಇಲ್ಲಿಗೆ ಬಂದು ಭಕ್ತಿಯಿಂದ ಹರಕೆ ಹೊತ್ತರೆ ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ ಈ ವೇಣುಗೋಪಾಲನನ್ನು ಸಂತಾನ ವೇಣುಗೋಪಾಲನೆಂದೂ ಕರೆಯುತ್ತಾರೆ. ಹಾಗೆ ಹರಕೆ ಇಡೇರಿ ಮಕ್ಕಳಾದ ಬಳಿಕ ಕೃಷ್ಣನ ಹರಕೆ ತೀರಿಸಲು ತೊಟ್ಟಿಲು ಕಟ್ಟುವ ಸಂಪ್ರದಾಯ ಇಲ್ಲಿ ಪ್ರಚಲಿತದಲ್ಲಿದೆ.
ಈ ಸಂತಾನಕ್ಕೆ ಸಂಬಂಧಿಸಿದಂತೆ ಇಲ್ಲಿ ಮತ್ತೊಂದು ಸ್ವಾರಸ್ಯಕರವಾದ ಕಥೆ ಇಲ್ಲಿ ಕಾಣ ಸಿಗುತ್ತದೆ. ಹಿಂದೆ ಚೋಳ ರಾಜನ ಪಟ್ಟದ ರಾಣಿಗೆ ಬರೀ ಹೆಣ್ಣು ಮಕ್ಕಳೇ ಹುಟ್ಟುತ್ತಿದ್ದವಂತೆ. ನಮ್ಮದು ಹೇಳಿ ಕೇಳಿ ಪುರುಷ ಪ್ರಾಧಾನ್ಯವಾದ ಸಂಸ್ಕೃತಿ, ಗಂಡು ಮಕ್ಕಳಿಲ್ಲದಿದ್ದರೇ ರಾಜ್ಯಕ್ಕೆ ಉತ್ತರಾಧಿಕಾರಿಯೇ ಇಲ್ಲದೇ ಹೋಗುತ್ತದೆ ಎಂಬ ಕೊರಗಿನಲ್ಲಿದ್ದ ರಾಜಾ ರಾಣಿಯರಿಗೆ ಯಾರಿಂದಲೋ ಈ ಸಂತಾನ ಗೋಪಾಲನ ಮಹಿಮೆಯನ್ನು ತಿಳಿದು, ರಾಜ ರಾಣಿಯರು ಈ ಶ್ರೀ ಕ್ಷೇತ್ರಕ್ಕೆ ಬಂದು ಭಕ್ತಿಯಿಂದ ತಮಗೆ ಪುತ್ರ ಸಂತಾನ ಪ್ರಾಪ್ತಿಯಾಗುವಂತೆ ಬೇಡಿಕೊಂಡು ಹೋದ ನಂತರವೂ ಮತ್ತೆ ಅವರಿಗೆ ಹೆಣ್ಣು ಮಗುವೇ ಜನಿಸಿದಾಗ. ಮನನೊಂದ ರಾಣಿ, ವೇಣುಗೋಪಾಲನ ಪದತಲದಲ್ಲಿ ನವಜಾತ ಹೆಣ್ಣು ಮಗುವನ್ನು ಇಟ್ಟು, ಭಗವಂತಾ ನಾನು ಗಂಡು ಸಂತಾನಕ್ಕೆ ನಿನ್ನನ್ನು ಕೋರಿದರೆ ಮತ್ತದೇ ಹೆಣ್ಣು ಸಂತಾನ ಪ್ರಾಪ್ತಿಸಿದ್ದೀಯಲ್ಲಾ ಎಂದು ಕಣ್ಣೀರಿಡುತ್ತಾ , ಬೆಳಗಾಗುವುದರೊಳಗೆ ಈ ಹೆಣ್ಣು ಮಗು ಗಂಡು ಮಗುವಾಗದಿದ್ದಲ್ಲಿ ನಿನ್ನೀ ಪಾದದ ಬಳಿಯೇ ಪ್ರಾಣತ್ಯಾಗ ಮಾಡುತ್ತೇನೆ ಎಂದು ಶಪಥಗೈದು ಮಹಾದ್ವಾರದ ಬಳಿಯೇ ಧ್ಯಾನಕ್ಕೆ ಕುಳಿತಳಂತೆ. ರಾಣಿಯ ಅನನ್ಯ ಭಕ್ತಿಗೆ ಮೆಚ್ಚಿದ ಈ ವೇಣುಗೋಪಾಲ ತನ್ನ ಪದತಲದಲ್ಲಿದ್ದ ಹೆಣ್ಣು ಮಗುವನ್ನು ಗಂಡು ಮಗುವಾಗಿ ಪರಿವರ್ತಿಸಿದನಂತೆ. ಈ ಪವಾಡವನ್ನು ನೋಡಿದ ರಾಣಿ ಅಪ್ಪಾ ತಂದೆ ಭಕ್ತರ ಭವರೋಗವನ್ನು ನಿವಾರಿಸುವ ನಿನ್ನದೇನಿದು ಈ ರೀತಿಯ ಹುಚ್ಚಾಟ? ಮೊದಲು ಹೆಣ್ಣು ಮಗವನ್ನು ಕರುಣಿಸುವುದು ನಂತರ ಅದನ್ನು ಗಂಡು ಮಗುವಾಗಿ ಪರಿವರ್ತಿಸುವುದು? ನಿಜಕ್ಕೂ ನೀನೊಬ್ಬ ಹುಚ್ಚನಪ್ಪ ಎಂದು ಆನಂದಭರಿತಳಾಗಿ ಉಧ್ಘರಿಸಿದಳಂತೆ. ಅಂದಿನಿಂದ ಈ ಸಂತಾನ ವೇಣು ಗೋಪಾಲನಿಗೆ ಹುಚ್ಚು ಗೋಪಾಲ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ತನ್ನ ಇಷ್ಟಾರ್ಥಗಳನ್ನು ಈಡೇರಿಸಿದ ಖುಷಿಗಾಗಿ ಈ ಭವ್ಯವಾದ ದೇವಾಲಯವನ್ನು ನಿರ್ಮಿಸಿದನು ಎಂದು ತಿಳಿದು ಬರುತ್ತದೆ.
ಇನ್ನು ಅಲಮೇಲಮ್ಮ, ತಲಕಾಡು ಮರಳಾಗಿ, ಮಾಲಂಗಿ ಮಡುವಾಗಿ, ಮೈಸೂರು ರಾಜರಿಗೆ ಮಕ್ಕಳಾಗದಿರಲಿ ಎಂದು ಶಾಪ ಹಾಕಿದ ಪರಿಣಾಮವಾಗಿ ದತ್ತು ಪುತ್ರರ ಹೊರತಾಗಿ ಮೈಸೂರು ಮಹಾರಾಜರಿಗೆ ಮಕ್ಕಳಾಗದಿರುವ ಸಂಗತಿ ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಅದೇ ರೀತಿ ಅಂದಿನ ಮೈಸೂರಿನ ಒಡೆಯರಾದ ಶ್ರೀ ಕಂಠೀರವ ನರಸಿಂಹರಾಜ ಒಡೆಯರ್ ದಂಪತಿಗಳು ಕೂಡ ಈ ದೇವರಿಗೆ ಹರಕೆ ಹೊತ್ತ ಬಳಿಕವೇ, ಮುಮ್ಮಡಿ ಕೃಷ್ಣರಾಜ ಒಡೆಯರು ಜನಿಸಿದರೆಂದು ಪ್ರತೀತಿ ಇದ್ದು , ಅದಕ್ಕೆ ಪ್ರತಿಫಲದಂತೆ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಮೈಸೂರು ಅರಸರು ಕಾಣಿಕೆ ನೀಡಿದ್ದಾರೆ.
ಎಲ್ಲಾ ದೇವಸ್ಥಾನಗಳಿಗೂ ಪೂಜೆ ಮಾಡಿಸಲು ಹಣ್ಣು ಕಾಯಿ ತೆಗೆದುಕೊಂಡು ಹೋಗುವುದು ವಾಡಿಕೆ. ಆದರೆ, ಈ ದೇವಸ್ಥಾನದಲ್ಲಿ ಭಕ್ತಾದಿಗಳು ಹೂ, ಹಣ್ಣು ಕಾಯಿಯ ಜೊತೆಗೆ ಅವಲಕ್ಕಿ ಮತ್ತು ತುಪ್ಪವನ್ನು ವಿಶೇಷವಾಗಿ ಅರ್ಪಿಸುತ್ತಾರೆ. ಭಕ್ತರು, ಭಕ್ತಿಯಿಂದ ಸಮರ್ಪಿಸಿದ ಅವಲಕ್ಕಿ ಮತ್ತು ತುಪ್ಪನ್ನು ದೇವರಿಗೆ ನೈವೇದ್ಯ ಮಾಡಿ ನಂತರ ಅದರಿಂದಲೇ ರುಚಿಕರವಾದ ಖಾರದ ಅವಲಕ್ಕಿಯನ್ನು ತಯಾರಿಸಿ ಅದನ್ನೇ ಪ್ರಸಾದ ರೂಪದಲ್ಲಿ ದೇವಾಲಯಕ್ಕೆ ಬಂದ ಭಕ್ತಾದಿಗಳಿಗೆ ಹಂಚುವುದು ಇಲ್ಲಿನ ಸಂಪ್ರದಾಯ.
ದೇವಸ್ಥಾನಕ್ಕೆ ಬರುವ ಸಕಲ ಭಕ್ತಾದಿಗಳನ್ನು ನಗುಮುಖದಿಂದಲೇ ಸ್ವಾಗತಿಸುವ ಅರ್ಚಕರಾದ ಶ್ರೀ ವೀರರಾಘವ ಭಟ್ಟರ್ ಮತ್ತು ಶ್ರೀ ಮಧುಸೂದನ ಭಟ್ಟರ್, ತಾಳ್ಮೆಯಿಂದ ಎಲ್ಲರಿಗೂ ದೇವಾಲಯದ ಇತಿಹಾಸವನ್ನು ವಿವರಿಸಿ ಸಾಂಗೋಪಾಂಗವಾಗಿ ಭಕ್ತರ ಮನಸ್ಸಿಗೆ ಒಪ್ಪುವಂತೆ ಪೂಜಾಕೈಂಕರ್ಯಗಳನ್ನು ನೆರೆವೇರಿಸಿ ಕೊಡುತ್ತಾರೆ. ಈ ದೇವಾಲಯದ.ಅರ್ಚಕರು, ದೇವಸ್ಥಾನದ ಪಕ್ಕದಲ್ಲೆ ಇದ್ದು ಕಾಲ ಮೀರಿ ಬರುವ ಆಸ್ತಿಕರಿಗೂ ಕ್ಷೇತ್ರದ ಬಗ್ಗೆ ಮಾಹಿತಿ ನೀಡಿ,ದೇವರ ದರ್ಶನ ಮತ್ತು ಅರ್ಚನೆ ಮಾಡಿಸುತ್ತಾರೆ. ಇಲ್ಲಿ ಯಾವುದೇ ಜಾತಿಯ ತಾರತಮ್ಯವಿಲ್ಲದೆ ಎಲ್ಲರಿಗೂ ದೇವರ ದರ್ಶನ ಪಡೆಯುವಂತಹ ಮುಕ್ತ ಅವಕಾಶವಿದೆ.
ದೇವಾಲಯದ ಮಂಗಳೂರು ಹೆಂಚಿನ ಪ್ರಾಂಗಣದಲ್ಲಿ ಸ್ಥಳೀಯವಾಗಿ ಬೆಳೆದ ಹೆಸರುಕಾಳು, ಕಡಲೇ ಕಾಳು, ಹುರಳೀಕಾಳು, ಹುಚ್ಚೆಳ್ಳು, ಸಾಸಿವೆ ಮುಂತಾದ ಬೇಳೇ ಕಾಳುಗಳನ್ನು ಕೈಗೆಟುಕುವ ಬೆಲೆಯಲ್ಲಿ ವಯಸ್ಸಾದ ಹೆಂಗಸರು ಮಾರಾಟ ಮಾಡುತ್ತಿದ್ದದ್ದು ಮತ್ತೊಂದು ವಿಶೇಷ.
ಈ ಪುರಾಣ ಪ್ರಸಿದ್ಧ ವೇಣುಗೋಪಾಲ ಸ್ವಾಮಿಯ ದೇವಸ್ಥಾನವಲ್ಲದೇ, ಇದೇ ಗ್ರಾಮದಲ್ಲಿರುವ ಬಿಸಿಎಂ ವಿದ್ಯಾರ್ಥಿ ನಿಲಯದ ಸಮೀಪ ಇರುವ ರೈತ ಗೋಪಯ್ಯ ಎಂಬುವವರ ಜಮೀನಿನಲ್ಲಿ ರುವ ವೀರಗಲ್ಲಿನ ಮೇಲ್ಭಾಗದಲ್ಲಿ ನಾಲ್ಕು ಸಾಲುಗಳ ಕನ್ನಡ ಭಾಷೆಯ ಅಪ್ರಕಟಿತ ಶಾಸನವಿದ್ದು, 17ನೇ ಶತಮಾನದ ಲಿಪಿ ಲಕ್ಷಣಗಳನ್ನು ಹೊಂದಿದೆ. ಹೆಮ್ಮರಗಾಲದ ಜವನಪ್ಪನ ಮಗ ಸಿರಿಸೆಟ್ಟಿಯು ತಮ್ಮ ಹೆತ್ತಪ್ಪ ಕುರುಳಪ್ಪ ಜವನಪ್ಪ ಕಾಮಣ ಎಂಬುವವರಿಗೆ ವೀರಗಲ್ಲನ್ನು ಕೆತ್ತಿಸಿದ್ದು ಹಾಗೂ ಈ ವೀರಗಲ್ಲನ್ನು ಕೆತ್ತಿದ ನಂಜೋಜ ಮತ್ತು ಚಿನ್ನೋಜರಿಗೆ ಕುದುರೆ ಹಾಗೂ ಸತ್ತಿಗೆಯನ್ನು ಉಡುಗೊರೆಯಾಗಿ ನೀಡಿದ ಬಗ್ಗೆ ಶಾಸನ ತಿಳಿಸುತ್ತದೆ. ಈ ವೀರಗಲ್ಲಿ ನಲ್ಲಿರುವ ಮೂರು ಮಂದಿ ವೀರರ ಶಿಲ್ಪಗಳನ್ನು ಶಾಸನೋಕ್ತ ವೀರರೆಂದು ಗುರುತಿಸಬಹುದಾಗಿದೆ ಎಂದು ಇತಿಹಾಸಕಾರರು ತಿಳಿಸಿರುತ್ತಾರೆ.
ಇನ್ನು ಮೂರು ಬಾರಿ ಶಾಸಕರಾಗಿದ್ದು ಎಸ್. ಎಂ ಕೃಷ್ಣಾರವರ ಸಂಪುಟದಲ್ಲಿ ಸಕ್ಕರೆ ಖಾತೆಯ ಸಚಿವರಾಗಿದ್ದ ಮಹದೇವು ಅರ್ಥಾಥ್ ಬೆಂಕಿ ಮಹದೇವ್ ಅವರ ಜನ್ಮಸ್ಥಳವೂ ಹೆಮ್ಮರಗಾಲವೇ. ಹೀಗೆ ಪೌರಾಣಿಕವಾಗಿಯೂ, ಐತಿಹಾಸಿಕಾವಾಗಿಯೂ ಮತ್ತು ರಾಜಕೀಯವಾಗಿಯೂ ಪ್ರಸಿದ್ಧವಾದ ಈ ಹೆಮ್ಮರಗಾಲದ ಸಕಲ ಇಷ್ಟಾರ್ಥಗಳನ್ನೂ ಈಡೇರಿಸುವ ಹುಚ್ಚು ಸಂತಾನ ಗೋಪಾಲ ಕೃಷ್ಣನ ಅನುಗ್ರಹ ಈ ಲೇಖನ ಓದಿದ ಎಲ್ಲರ ಮೇಲಿರಲಿ ಎಂದು ಪ್ರಾರ್ಥಿಸೋಣ. ಸಾಧ್ಯವಾದರೇ ಒಮ್ಮೆ ದೇವಾಲಯಕ್ಕೆ ಭೇಟಿಯನ್ನೂ ಕೊಡೋಣ.
ಏನಂತೀರೀ?
ಬಹಳ ಚೆನ್ನಾಗಿ, ಸಂಕ್ಷಿಪ್ತವಾಗಿ ಸಂಪೂರ್ಣ ಮಾಹಿತಿ ತಿಳಿಸಿದ್ದೀರಿ.
ಧನ್ಯವಾದಗಳು.
ಈ ಸ್ಥಳದ ಬಗ್ಗೆ ಇದೆ ಮೊದಲು ಓದಿದ್ದು.
LikeLike
ಸಮಯ ಮಾಡಿಕೊಂಡು ಒಮ್ಮೆ ದರ್ಶನ ಮಾಡಿಕೊಂಡು ಬನ್ನಿ
LikeLike
ಅವಶ್ಯವಾಗಿ, ಧನ್ಯವಾದಗಳು🙏
LikeLike
Nice 🙏
LikeLike
ಸುಂದರವಾಗಿ ವರ್ಣನೆ ಮಾಡಿದ್ದೀರಾ ಅಣ್ಣ ಧನ್ಯವಾದ
LikeLike
ಸುಂದರವಾಗಿ ವರ್ಣನೆ ಮಾಡಿದ್ದೀರಾ ಅಣ್ಣ ಧನ್ಯವಾದ
LikeLike
[…] ಎಂಬ ಜಾಗದಲ್ಲಿ ಬಿದ್ದಾಗ ಆ ಪ್ರದೇಶ ಹೆಮ್ಮರಗಾಲ ಎಂದು ಪ್ರಸಿದ್ಧವಾಯಿತು. ಅಲ್ಲಿ ಕೌಂಡಿನ್ಯ […]
LikeLike
[…] ಎಂಬ ಜಾಗದಲ್ಲಿ ಬಿದ್ದಾಗ ಆ ಪ್ರದೇಶ ಹೆಮ್ಮರಗಾಲ ಎಂದು ಪ್ರಸಿದ್ಧವಾಯಿತು. ಅಲ್ಲಿ ಕೌಂಡಿನ್ಯ […]
LikeLike
[…] ಎಂಬ ಜಾಗದಲ್ಲಿ ಬಿದ್ದಾಗ ಆ ಪ್ರದೇಶ ಹೆಮ್ಮರಗಾಲ ಎಂದು ಪ್ರಸಿದ್ಧವಾಯಿತು. ಅಲ್ಲಿ ಕೌಂಡಿನ್ಯ […]
LikeLike