ಶ್ರೀ ನರಸಿಂಹ ಜಯಂತಿ

ಉಗ್ರಂ ವೀರಂ ಮಹಾ ವಿಷ್ಣುಂ ಜ್ವಲಂತಂ ಸರ್ವತೋಮುಖಂ ನರಸಿಂಹಂ ಭೀಷಣಂ ಭದ್ರಂ ಮೃತ್ಯು ಮೃತ್ಯುಂ ನಮಾಮ್ಯಹಂ.

ಅರೇ ಈ ಶ್ಲೋಕವನ್ನು ಎಲ್ಲೋ ಕೇಳಿದ್ದೀವೀ ಅಲ್ವಾ? ಹೌದು ಉಗ್ರಂ ಸಿನಿಮಾದಲ್ಲಿ ನಾಯಕನನ್ನು ಪರಿಚಯಿಸುವಾಗ ಇದೇ ಶ್ಲೋಕವನ್ನು ಅಳವಡಿಸಿಕೊಂಡಿದ್ದಾರೆ. ಈಗಿನ ಕಾಲದವರಿಗೆ ನಮ್ಮ ಶ್ಲೋಕ ಆಚಾರ ವಿಚಾರ ಅಂದ್ರೇ ಅಷ್ಟಕ್ಕಷ್ಟೇ. ಶ್ಲೋಕ ಕಂಠ ಪಾಠ ಮಾಡಿ ಅಂದ್ರೇ ಆಗೋದಿಲ್ಲ. ಅದೇ ಸಿನಿಮಾ ಹಾಡುಗಳನ್ನು ಕೇಳಿ ಥಟ್ ಅಂತಾ ಹೇಳ್ತಾರೆ. ಇಷ್ಟೆಲ್ಲಾ ಪೀಠಿಕೆ ಯಾಕೆ ಅಂತ ಯೋಚಿಸ್ತಿದ್ದೀರಾ? ಇವತ್ತು ವೈಶಾಖ ಮಾಸ, ಶುಕ್ಲ ಪಕ್ಷದ ಚತುದರ್ಶಿ. ಅಂದರೆ ಶ್ರೀ ನರಸಿಂಹ ಜಯಂತಿ. ಮಹಾ ವಿಷ್ಣುವಿನ ದಶಾವತಾರಗಳಲ್ಲಿ ನಾಲ್ಕನೇಯ ಅವತಾರವೇ ನರಸಿಂಹ ಅವತಾರ. ದೇಹದ ಕೆಳಾರ್ಧ ಬಾಗ ಮನುಷ್ಯನಂತೆ ಮತ್ತು ಮೇಲಾರ್ಧ ಭಾಗ ಸಿಂಹ ರೂಪದಲ್ಲಿರುವುದರಿಂದ ನರ+ಸಿಂಹ= ನರಸಿಂಹ ಎಂಬುದಾಗಿದೆ. ಹಿರಣ್ಯಕಶಿಪು ಎಂಬ ರಾಕ್ಷಸನನ್ನು ಕೊಲ್ಲಲು ಮಹಾವಿಷ್ಣು ಈ ರೂಪದಲ್ಲಿ ಭೂಮಿಯಲ್ಲಿ ಅವತರಿಸಿದ ಎಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ. ನರಸಿಂಹಾವತಾರದ ಪುರಾಣವೂ ಬಲು ರೋಚಕವಾಗಿದೆ.

ಅಸುರರ ರಾಜ ಹಿರಣ್ಯಕಷಿಪುವಿನ ಸೋದರ ಹಿರಣ್ಯಾಕ್ಷ ಭೂಲೋಕ, ಅತಳ, ವಿತಳ, ಸುತಳ, ಮಾಹಾತಳ, ಸಚಾತಳ, ತಳಾತಳ, ಪಾತಾಳ ಲೋಕದಲ್ಲೆಲ್ಲಾ, ತನ್ನ ರಾಕ್ಷಸೀ ಕೃತ್ಯಗಳಿಂದ ಕಂಟಕ ಪ್ರಾಯನಾಗಿ ನಾನಾ ರೀತಿಯ ಉಪಟಗಳನ್ನು ಕೊಡುತ್ತಿದ್ದಾಗ ದೇವಾನು ದೇವತೆಗಳು ಭಗವಾನ್ ವಿಷ್ಣುವಿನಲ್ಲಿ ಇದಕ್ಕೆ ಶಾಶ್ವತವಾದ ಪರಿಹಾರವನ್ನು ಕೊಡುವಂತೆ ಕೇಳಿಕೊಂಡಾಗ ಶ್ರೀ ವಿಷ್ಣು ತನ್ನ ದಶಾವತರದ ಮೂರನೇ ರೂಪವಾದ ವರಾಹ ರೂಪದಲ್ಲಿ ಬಂದು ಸಂಹರಿಸುತ್ತಾನೆ, ತನ್ನ ಅಣ್ಣನ ಅಗಲಿಕೆಯಿಂದ ವಿಪರೀತ ದುಃಖಿತನಾದ , ಹಿರಣ್ಯಕಷಪವು, ಕೋಪೋದ್ರಕ್ತನಾಗಿ ವಿಷ್ಣುವಿನ ಪರಮ ವೈರಿಯಾಗಿ, ಋಷಿ ಮುನಿಗಳ ಯಜ್ಞಯಾಗಾದಿಗಳಿಗೆ ಮತ್ತು ಭೂಲೋಕ ವಾಸಿಗಳಿಗೆ ನಾನಾ ರೀತಿಯ ತೊಂದರೆಗಳನ್ನು ಕೊಡುವಂತೆ ತನ್ನ ರಾಕ್ಷಸ ಸಮುದಾಯವನ್ನು ಉದ್ರೇಕಗೊಳಿಸಿ ಎಲ್ಲರಿಗೂ ತೊಂದರೆಯನ್ನು ನೀಡಲು ಆರಂಭಿಸುತ್ತಾನೆ.

ಇದೇ ಸಮಯದಲ್ಲಿ ಹಿರಣ್ಯಕಷಪುವಿಗೆ ತನಗೆ ಸಾವೇ ಬಾರದಂತೆ ಅಮರನಾಗಬೇಕೆಂಬ ಆಸೆ ಉಂಟಾಗಿ ತನ್ನನ್ನು ಯಾರೂ ಸೋಲಿಸಬಾರದು ತಾನು ಯಾವುದೇ ರೋಗ ರುಜಿನಗಳಿಗೆ ತುತ್ತಾಗದೆ ಸದಾ ಚಿರಯೌವನಿಗನಾಗಿರಬೇಕು ಎಂಬೆಲ್ಲ ಆಸೆಯಾಗಿ ಅದನ್ನು ಪಡೆಯಲು ಮಂದಾರ ಪರ್ವತದಲ್ಲಿ ಬ್ರಹ್ಮ ದೇವನನ್ನು ಕುರಿತು ತಪಸ್ಸು ಮಾಡಲು ಆರಂಭಿಸುತ್ತಾನೆ. ದಿನ ಕಳೆದಂತೆಲ್ಲಾ ತಪ್ಪಸ್ಸು ಬಹಳ ಕಠಿಣ ರೂಪಕ್ಕೆ ಹೊರಳಿ ಅವನ ತಪೋಜ್ವಾಲೆಗಳು ಸುತ್ತ ಮುತ್ತಲೆಲ್ಲಾ ಹರಡಿ ಎಲ್ಲವೂ ಸುಟ್ಟು ಭಸ್ಮವಾಗಲು ಆರಂಭವಾಗುತ್ತದೆ. ಈ ಧಗೆಯನ್ನು ನಿಯಂತ್ರಿಸಲು ದೇವಾನು ದೇವತೆಗಳು ಬ್ರಹ್ಮನ ಬಳಿ ಕೇಳಿಕೊಂಡಾಗ ಬ್ರಹ್ಮನು ಭೃಗು ಮಹರ್ಷಿ ಮತ್ತು ದಕ್ಷರೊಂದಿಗೆ ಹಿರಣ್ಯಕಷಿಪು ತಪ್ಪಸ್ಸು ಮಾಡುತ್ತಿದ್ದ ಜಾಗಕ್ಕೆ ಬಂದು ಹಿರಣ್ಯಕಷಿಪುವಿನ ಮೇಲೆ ತನ್ನ ಕಮಂಡಲದ ನೀರನ್ನು ಸಿಂಪಡಿಸಿ ಎಚ್ಚರಗೊಳಿಸುತ್ತಾನೆ. ಸೃಷ್ಟಿಕರ್ತ ಬ್ರಹ್ಮನನ್ನು ನೋಡಿ ಸಾಷ್ಟಾಂಗ ವಂದಿಸಿ, ತನಗೆ ಯಾವುದೇ ಮಾನವ ಜೀವಿ, ದೇವತೆ ಅಥವಾ ಪ್ರಾಣಿಗಳಿಂದ ಸಾವು ಬರಬಾರದು ಹಗಲು ಅಥವಾ ರಾತ್ರಿಯಲ್ಲಿ ಆಕಾಶ ಮತ್ತು ಭೂಮಿಯಲ್ಲಿ, ಮನೆಯ ಒಳಗೆ ಆಥವಾ ಹೊರಗೆ, ಯಾವುದೇ ಅಸ್ತ್ರದಿಂದಲೂ ಸಾವಾಗಬಾರದು ಎಂಬ ವಿಚಿತ್ರವಾದ ವರವನ್ನು ಕೇಳುತ್ತಾನೆ. ಹೇಗಾದರೂ ಮಾಡಿ ಇವನ ತಪಸ್ಸನ್ನು ನಿಗ್ರಹಿಸುವ ಉದ್ದೇಶದಿಂದ ಬ್ರಹ್ಮನೂ ಸಹಾ ತಥಾಸ್ತು ಎಂದು ಒಪ್ಪಿಕೊಳ್ಳುತ್ತಾನೆ.

ಇಂತಹ ಅಭೂತ ಪೂರ್ವವಾದ ವರವನ್ನು ಪಡೆದ ಹಿರಣ್ಯಕಶಿಪು ತಾನು ಚಿರಂಜೀವಿ ತನಗೆ ಸಾವೇ ಇಲ್ಲ ಎಂಬ ಭ್ರಮೆಯಲ್ಲಿ ವಿಶ್ವದ ಮೇಲೆ ತನ್ನ ಅಧಿಪತ್ಯವನ್ನು ಸಾರಲು ಹೊರಡುತ್ತಾನೆ. ಇಡೀ ಭೂಮಿಯಲ್ಲಿ ದೇವರು ಎಂಬುವರೇ ಇಲ್ಲ. ಇಲ್ಲಿ ನಾನೇ ದೇವರು. ಇನ್ನು ಮುಂದೆ ಎಲ್ಲರೂ ತನ್ನನ್ನೇ ದೇವರು ಎಂದು ಪೂಜಿಸಬೇಕು ಹಾಗೆ ಪೂಜಿಸದವರಿಗೆ ಕಠಿಣ ರೀತಿಯಲ್ಲಿ ಶಿಕ್ಷೆಗೆ ಗುರಿಪಡಿಸುತ್ತಿರುತ್ತಾನೆ.

narasimha_hampe

ಆದರೆ ಪರಮ ಹರಿಭಕ್ತನಾದ ಆತನ ಪುಟ್ಟ ಮಗ ಪ್ರಹ್ಲಾದ ತಂದೆಯ ವಾದವನ್ನು ಒಪ್ಪದೇ, ಹರಿಯೇ ದೈವ ನೀನು ಕೇವಲ ದಾನವ ಎಂದು ಹಂಗಿಸುತ್ತಾನೆ. ಇಡೀ ಪ್ರಪಂಚವೇ ತನ್ನ ಮಾತನನ್ನು ಕೇಳುತ್ತಿರುವಾಗ ಈ ಯಕ್ಕಶ್ಚಿತ್ ಬಾಲಕ ಅದೂ ತನ್ನ ಮಗನೇ ತನ್ನನ್ನು ವಿರೋಧಿಸುತ್ತಿರುವನಲ್ಲಾ ಎಂದು ಕೋಪಗೊಂಡು ಮಗನೆಂದೂ ಲೆಕ್ಕೆಸದೇ ಆತನನ್ನು ಕೊಲ್ಲಲು ನಾನಾ ರೀತಿಯ ಪ್ರಯತ್ನಗಳನ್ನು ಮಾಡಿ ವಿಫಲನಾಗಿ ಕಡೆಗೊಮ್ಮೆ ತುಂಬಿದ ರಾಜ ಸಭೆಯಲ್ಲಿ ತನ್ನ ಮಗನನ್ನು ಕರೆದು ನಿನ್ನ ಹರಿ ಎಲ್ಲಿರುವನು? ಅವನನ್ನು ತೋರಿಸಬಲ್ಲೆಯಾ? ಎಂದು ಪ್ರಶ್ನಿಸಿದಾಗ , ಆ ಪುಟ್ಟ ಹರಿಭಕ್ತ ಪ್ರಹ್ಲಾದ ಹರಿ ಎಲ್ಲೆಡೆಯಲ್ಲಿಯೂ ಇರುವನು. ಹರಿ ಇಲ್ಲದ ಜಾಗವೇ ಇಲ್ಲ, ಹರಿ ಸರ್ವಾಂತರ್ಯಾಮಿ ಎಂದು ಹೇಳಿ ತನ್ನ ತಂದೆಯನ್ನು ಮತ್ತಷ್ಟೂ ಕೆರಳಿಸುತ್ತಾನೆ. ಹರಿ ಅಲ್ಲಿರುವನೇ, ಇಲ್ಲಿರುವನೇ? ಎಂದು ಕೇಳುತ್ತಾ ಕಡೆಗೆ ಆಲ್ಲಿದ್ದ ಕಂಬವನ್ನು ತೋರಿಸಿ ಈ ಕಂಬದಲ್ಲಿಯೂ ಇರುವನೇ ನಿನ್ನ ಹರಿ? ಎಂದು ಕೋಪದಿಂದ ಪ್ರಶ್ನಿಸಿದಾಗ, ಹೌದು ತಂದೇ ನನ್ನ ಶ್ರೀ ಹರಿ ಈ ಕಂಬದಲ್ಲಿಯೂ ಇದ್ದಾನೆ ಎಂದಾಗ ಕೋಪೋದ್ರಿತನಾಗಿ ತನ್ನ ಗಧೆಯಿಂದ ಕಂಬವನ್ನು ಹೊಡೆದಾಗ ಸೀಳಿದ ಕಂಬದಿಂದ ಅರ್ಧ ನರ, ಮತ್ತರ್ಧ ಸಿಂಹದ ರೂಪದ ನರಸಿಂಹ ಉಗ್ರ ಸ್ವರೂಪನಾಗಿ ಹೊರಬಂದು ಹಿರಣ್ಯಷಿಪುವಿನೊಂದಿಗೆ ಹೋರಾಡಿ ಕಡೆಗೆ ಅವನನ್ನು ಎಳೆದು ಕೊಂಡು ಅತ್ತ ಹಗಲೂ ಅಲ್ಲದ ಇರುಳೂ ಅಲ್ಲದ ಗೋಧೂಳೀ ಸಮಯದಲ್ಲಿ ಮನೆಯ ಹೊರಗೂ ಅಲ್ಲದ, ಒಳಗೂ ಅಲ್ಲದ ಹೊಸಿಲಿನ ಮೇಲೆ ನಿಂತು, ಆಕಾಶವೂ ಅಲ್ಲದ, ಭೂಮಿಯೂ ಅಲ್ಲದೆ ಮಧ್ಯದಲ್ಲಿ ತನ್ನ ತೊಡೆಯ ಮೇಲೆ ಹಿರಣ್ಯಕಷುಪಿವಿನನ್ನು ಮಲಗಿಸಿಕೊಂಡು ಯಾವುದೇ ಆಯುಧವಿಲ್ಲದೇ ತನ್ನ ಉಗುರುಗಳಿಂದಲೇ ಆತನ ಹೊಟ್ಟೆಯನ್ನು ಬಗೆದು ಹಿರಣ್ಯಕಷುಪುವಿವನ್ನು ಸಂಹರಿಸಿ ಅದೇ ಕೋಪೋದ್ರಿಕ್ತನಾಗಿಯೇ ಉಗ್ರ ನರಸಿಂಹನು ಹಿರಣ್ಯಕಷಪುವಿನ ಸಿಂಹಾಸನದಲ್ಲಿ ಆಸೀನನಾಗುತ್ತಾನೆ.

IMG_20180405_134719_HDR

ಹಿರಣ್ಯಕಷಪುವಿನ ದುರಾಡಳಿತದಿಂದ ಮುಕ್ತವಾದ ಸಮಸ್ತ ಲೋಕದ ಜನರೂ ಬಹಳ ಸಂತಸದಿಂದ ನರಸಿಂಹನಿಗೆ ಜೈಕಾರ ಹಾಕಿ ಉಗ್ರನಾಗಿದ್ದ ಉಗ್ರ ನರಸಿಂಹನ ಕೋಪವನ್ನು ತಣಿಸಲು ಕೇವಲ ಆತನ ಧರ್ಮ ಪತ್ನಿ ಲಕ್ಷ್ಮಿಯಿಂದ ಮಾತ್ರವೇ ಸಾದ್ಯ ಎಂದು ನಿರ್ಧರಿಸಿ ಆಕೆಯನ್ನು ನರಸಿಂಹನನ್ನು ಶಾಂತಗೊಳಿಸಲು ಕೋರುತ್ತಾರೆ. ದೇವಾನು ದೇವತೆಗಳ ಕರೆಗೆ ಓಗೊಟ್ಟ ಲಕ್ಷ್ಮೀ ದೇವಿಯು ನರಸಿಂಹನ ಎಡ ತೊಡೆಯ ಮೇಲೆ ಕುಳಿತಾಗ ಉಗ್ರ ನರಸಿಂಹನ ಕೋಪವೆಲ್ಲಾ ಕಡಿಮೆಯಾಗಿ ಲಕ್ಷ್ಮೀ ನರಸಿಂಹನಾದ ದಿನವೇ ನರಸಿಂಹ ಜಯಂತಿ.

ಅಂದಿನಿಂದ ಪ್ರತೀ ವರ್ಷದ ವೈಶಾಖ ಶುದ್ಧ ಚತುರ್ದಶಿಯಂದು ಭೂಲೋಕವಾಸಿಗಳು ಬಹಳ ಶ್ರದ್ಧಾ ಭಕ್ತಿಯಿಂದ ನರಸಿಂಹಸ್ವಾಮಿಯನ್ನು ಪೂಜಿಸಿ ಸದಾ ಕಾಲವೂ ಎಲ್ಲರನ್ನೂ ಸಂರಕ್ಷಣೆ ಮಾಡುವಂತೆ ಕೋರಿಕೊಳ್ಳುತ್ತಾರೆ. ನರಸಿಂಹ ಸ್ವಾಮಿಯ ಒಕ್ಕಲಿನವರು ಅಂದು ಮನೆಯನ್ನು ಸಾರಿಸಿ ಗುಡಿಸಿ ಶುದ್ದೀಕರಿಸಿ, ತಳಿರು ತೋರಣಗಳಿಂದ ಸಿಂಗರಿಸಿ ದೇವರ ಮನೆಯಲ್ಲಿ ಅಥವಾ ಮನೆಯ ಒಂದು ಕಡೆ ದೇವರ ಮಂಟಪ ಕಟ್ಟಿ ಅದರಲ್ಲಿ ಕಳಸ ಪ್ರತಿಷ್ಠಾಪಿಸಿ ಲಕ್ಷ್ಮೀ ನರಸಿಂಹ ಸ್ವಾಮಿಯ ವಿಗ್ರಹನ್ನೋ ಇಲ್ಲವೇ ಪಟವನ್ನೋ ಇಟ್ಟು ಶಾಸ್ತ್ರೋಕ್ತವಾಗಿ ಶೋಡಶೋಪಚಾರ ಪೂಜೆ ಮಾಡಿ , ವ್ರತಾಚರಣೆ ಮಾಡಿ, ಬಗೆ ಬಗೆಯ ಸಿಹಿಭಕ್ಷಗಳಿಂದ ನೈವೇದ್ಯ ಮಾಡಿ ನರಸಿಂಹಸ್ವಾಮಿಯ ಕೃಪಾಶೀರ್ವಾದಕ್ಕೆ ಪಾತ್ರರಾಗುತ್ತಾರೆ.

ಈ ರೀತಿ ಶಾಸ್ತ್ರೋಕ್ತ ರೀತಿಯಲ್ಲಿ ಪೂಜೆಯಾದ ನಂತರ ಮುತ್ತೈದೆಯರನ್ನು ಕರೆದು ಅವರಿಗೆ ಪಾನಕ ಕೋಸಂಬರಿಯ ಸಮಾರಾಧನೆ ಮಾಡಿದ ನಂತರ ಇಡೀ ಕುಟುಂಬದವರೆಲ್ಲಾ ಸೇರಿ ಒಟ್ಟಿಗೆ ಸಂತೋಷದಿಂದ ಊಟ ಮಾಡಿ ಸಂಭ್ರಮಿಸುತ್ತಾರೆ.

ನರಸಿಂಹನು ಸಂಜೆ ಗೋಧೂಳಿಯ ಸಮಯದಲ್ಲಿ ಅವತರಿಸಿದ ಕಾರಣವಾಗಿ ಕೆಲವರ ಮನೆಯಲ್ಲಿ ಬೆಳಗಿನಿಂದಲೂ ಉಪವಾಸವಿದ್ದು ಸಂಜೆಯ ಸಮಯದಲ್ಲಿ ಮೇಲೆ ತಿಳಿಸಿದಂತೆ ಪೂಜಾ ಕೈಂಕರ್ಯಗಳನ್ನು ಮಾಡಿ, ಮತ್ತೈದೆಯರಿಗೆ ಯಥಾಶಕ್ತಿ ಫಲತಾಂಬೂಲವನ್ನು ನೀಡಿದ ನಂತರವೇ, ಇಡೀ ಕುಟುಂಬದವರೆಲ್ಲಾ ಒಟ್ಟಿಗೆ ಸಂತೋಷದಿಂದ ಊಟ ಮಾಡಿ ಸಂಭ್ರಮಿಸುತ್ತಾರೆ.

Bal_nara

ಇನ್ನು ನರಸಿಂಹ ಸ್ವಾಮಿ ದೇವಾಲಯಗಳಲ್ಲಿ ಅತ್ಯಂತ ಸಡಗರ ಸಂಭ್ರಮಗಳಿಂದ ಅದ್ದೂರಿಯಾಗಿ ತಳಿರು ತೋರಣ ಕಟ್ಟಿ, ದೇವರಿಗೆ ಅಭಿಷೇಕ, ನಾನಾ ರೀತಿಯ ಪತ್ರೆಗಳು ಮತ್ತು ಪುಷ್ಪಗಳಿಂದ ಅಲಂಕರಿಸಿ ಬಗೆ ಬಗೆಯ ಫಲ ಪುಷ್ಪಗಳಿಂದ ನೈವೇದ್ಯ ಮಾಡಿ ಇಡೀ ದಿನವೂ ದೇವರ ದರ್ಶನಕ್ಕೆ ಬಂದ ಭಕ್ತಾದಿಗಳಿಗೆ ತೀರ್ಥಪ್ರಸಾದವನ್ನು ವಿತರಿಸಿ ಬಹಳ ಶ್ರದ್ಧಾ ಭಕ್ತಿಯಿಂದ ನರಸಿಂಹ ಜಯಂತಿಯನ್ನು ಆಚರಣೆ ಮಾಡುತ್ತಾರೆ.

ತಮ್ಮ ಮನೆಗಳಲ್ಲಿ ನರಸಿಂಹ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲು ಸಾಧ್ಯವಾಗದಿದ್ದಲ್ಲಿ ಹತ್ತಿರವಿರುವ ನರಸಿಂಹ ಸ್ವಾಮಿಯ ದೇವಾಲಯಕ್ಕೆ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದು ಆತನ ಕೃಪಾಶೀರ್ವಾದಕ್ಕೆ ಪಾತ್ರರಾಗಬಹುದಾಗಿದೆ. ಅಕಸ್ಮಾತ್ ಅದೂ ಸಹಾ ಸಾಧ್ಯವಾಗದಿದ್ದಲ್ಲಿ ಭಕ್ತಿಯಿಂದ

ಶ್ರೀ ಮತ್ಪಯೋನಿಧಿ ನಿಕೇತನ ಚಕ್ರಪಾಣೇ ಭೋಗೀಂದ್ರ ಭೋಗಮಣಿ ರಂಜಿತ ಪುಣ್ಯಮೂರ್ತೇ !
ಯೋಗೀಶ ಶಾಶ್ವತ ಶರಣ್ಯ ಭವಾಬ್ಧಿ ಪೋತ ಲಕ್ಷ್ಮೀ ನರಸಿಂಹ ಮಮದೇಹಿ ಕರಾವಲಂಬಮ್ !!

ಎಂಬ ಶ್ಲೋಕವನ್ನು ಪಠಿಸಿದರೂ ಆ ನಾರಸಿಂಹನ ಕೃಪೆಗೆ ಪಾತ್ರರಾಗಬಹುದು.

ಒಟ್ಟಿನಲ್ಲಿ ಯಾವುಡೇ ರೂಪದಲ್ಲಾದರೂ ಭಗವಂತನ ಸ್ಮರಣೆ ಮಾಡುತ್ತಾ , ಸರ್ವೇ ಜನಾಃ ಸುಖಿನೋ ಭವಂತು, ಸಮಸ್ಥ ಲೋಕಾನಿ ಸನ್ಮಾಂಗಳಾನಿ ಭವಂತು ಎಂದು ಕೇಳಿ ಕೊಳ್ಳುವ ಮೂಲಕ ಆ ನರಸಿಂಹ ಸ್ವಾಮಿ ನಮ್ಮಲ್ಲಿರುವ ಅಸುರೀ ಗುಣಗಳನ್ನು ಸಂಹರಿಸಿ ಸದ್ಗುಣವಂತರನ್ನಾಗಿ ಮಾಡಿ, ಆಯುರಾರೋಗ್ಯ ಸಕಲೈಶ್ವರ್ಯ, ಪುತ್ರಪೌತ್ರಾದಿಗಳನ್ನು ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸೋಣ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s