ಶಂಕರಪ್ಪ ನಗರದ ಮಾರುಕಟ್ಟೆಯ ಬಳಿ ಸಣ್ಣದಾದ ಕಾಫಿ ಅಂಗಡಿಯನ್ನು ನಡೆಸಿಕೊಂಡು ಹೋಗುತ್ತಿರುತ್ತಾರೆ. ಪ್ರತೀ ದಿನ ನೂರಾರು ಜನರು ಅವರ ಅಂಗಡಿಗೆ ಬಂದು ಕಾಫೀ, ಟೀ ಕುಡಿದು ತಮ್ಮ ಮನಸ್ಸಿನ ದುಗುಡವನ್ನು ಕಳೆದುಕೊಂಡು ಉಲ್ಲಾಸಿತರಾಗಿ ಹೋಗುತ್ತಿರುತ್ತಾರೆ.
ಅದೋಂದು ಸಂಜೆ ಶಂಕರಪ್ಪನವರಿಗೆ ವಿಪರೀತ ತಲೆ ನೋವು ಕಾಡತೊಡಗಿ, ತಲೆ ಸಿಡಿದು ಹೋಗುವಷ್ಟು ನೋವು ಬಾಧಿಸ ತೊಡಗುತ್ತದೆ.
ಅದಾಗಲೇ ಮಬ್ಬುಗತ್ತಲು ಸಮೀಪಿಸುತ್ತಿದ್ದ ಕಾರಣ, ಅಂಗಡಿಯಲ್ಲಿಯೂ ಗ್ರಾಹಕರು ಕಡಿಮೆ ಇದ್ದದನ್ಬು ಕಂಡು, ತಮ್ಮ ಹುಡುಗನಿಗೆ ಅಂಗಡಿಯ ಉಸ್ತುವಾರಿ ವಹಿಸಿ ಹತ್ತಿರದ ಮೆಡಿಕಲ್ ಸ್ಟೋರಿಗೆ ಹೋಗಿ ತಲೆನೋವಿನ ಮಾತ್ರೆ ಕೊಂಡು ಕೊಂಡು ಅವರ ಬಳಿಯಲ್ಲಿಯೇ ನೀರನ್ನು ಪಡೆದುಕೊಂಡು ಮಾತ್ರೆಯನ್ನು ತೆಗೆದುಕೊಳ್ಳುತ್ತಾರೆ.
ಮಾತ್ರೆಯನ್ನು ತೆಗೆದುಕೊಂಡ ಸ್ವಲ್ಪವೇ ಸಮಯದಲ್ಲಿ ಅವರಿಗೆ ತಲೆನೋವು ಕಡಿಮೆಯಾಗಿ ನಿರಾಳರಾಗುತ್ತೇನೆ ಎನ್ನುವ ಭರವಸೆಯಲ್ಲಿ ಇನ್ನೇನು ತಮ್ಮ ಅಂಗಡಿಯ ಕಡೆ ಹೋಗಬೇಕು ಎನ್ನುವಷ್ಟರಲ್ಲಿ, ಆ ಮೆಡಿಕಲ್ಸ್ ಸ್ಟೋರಿನ ಮಾಲಿಕರಾದ ಮಹೇಶಪ್ಪನವರು ಅಂಗಡಿಯಲ್ಲಿ ಕಾಣದಿದ್ದದ್ದನ್ನು ಗಮನಿಸಿ, ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಯುವತಿಗೆ ಎಲ್ಲಮ್ಮಾ ಯಜಮಾನ್ರು ಕಾಣ್ತಾ ಇಲ್ಲಾ? ಎಂದು ಪ್ರಶ್ನಿಸುತ್ತಾರೆ.
ಸಂಜೆಯಿಂದ ಯಾಕೋ ಯಜಮಾನರಿಗೆ ಸಣ್ಣದಾಗಿ ತಲೆನೋಯುತ್ತಿತ್ತಂತೆ. ಹಾಗಾಗಿ ತಲೆನೋವಿನ ಶಮನಕ್ಕಾಗಿ ಒಂದು ಕಡಕ್ ಕಾಫೀ ಕುಡಿದರೆ ಎಲ್ಲವೂ ಸರಿ ಹೋಗುತ್ತದೆ ಎಂದು ಭಾವಿಸಿ ಅವರು ನಿಮ್ಮ ಅಂಗಡಿಗೇ ಹೋಗಿದ್ದಾರೆ ಎಂದು ತಿಳಿಸುತ್ತಾಳೆ.
ಆ ಯುವತಿಯ ಮಾತುಗಳನ್ನು ಕೇಳಿ ಶಂಕರಪ್ಪನವರು ಒಂದು ಕ್ಷಣ ತಬ್ಬಿಬ್ಬಾಗಿ, ಅವರ ಬಾಯಿ ಒಣಗಿದಂತಾಗಿ, ಬಾಯಿಯಿಂದ ಮಾತೇ ಬಾರದಂತಾಯಿತು. ಹಾಗೇ ಸಾವರಿಸಿಕೊಂಡು, ಸರಿ ಸರಿ ನಮ್ಮ ಅಂಗಡಿಯಲ್ಲೇ ಅವರನ್ನು ಭೇಟಿ ಮಾಡುತ್ತೇನೆ ಎಂದು ಯುವತಿಗೆ ತಿಳಿಸಿ, ಸರಸರನೆ ತಮ್ಮ ಅಂಗಡಿಯ ಕಡೆ ಹೆಜ್ಜೆ ಹಾಕತೊಡಗಿದರು.
ಅವರಿಗೇ ಅರಿವಿಲ್ಲದೆಯೇ ಅವರ ಬಾಯಿಯಿಂದ, ಸಮಸ್ಯೆಗೆ ಪರಿಹಾರ ನಮ್ಮ ಬಳಿಯೇ ಇದ್ದರೂ ನಾವು ಅದನ್ನು ಗ್ರಹಿಸದೇ, ನಮ್ಮ ಸಮಸ್ಯೆಗೆ ಬೇರೆಲ್ಲೋ ಪರಿಹಾರವನ್ನು ಹುಡುಕುತ್ತಿದ್ದೇವಲ್ಲಾ ಎಂಬ ಉದ್ಗಾರ ಹೊರಬಿದ್ದಿತ್ತು.
ಎಷ್ಟು ವಿಚಿತ್ರವಾದರೂ ಸತ್ಯ ಎನ್ನುವಂತೆ,
ಮೆಡಿಕಲ್ಸ್ ಅಂಗಡಿಯ ಮಾಲಿಕರು ಕಾಫಿ ಕುಡಿಯುವ ಮೂಲಕ ತಮ್ಮ ತಲೆನೋವನ್ನು ನಿವಾರಿಸುತ್ತಾರೆ ಮತ್ತು ಅದೇ ಕಾಫಿ ಅಂಗಡಿಯ ಮಾಲೀಕರು, ಮಡಿಕಲ್ಸ್ ಅಂಗಡಿಯ ನೋವು ನಿವಾರಕ ಮಾತ್ರೆಗಳಲ್ಲಿ ತಮ್ಮ ತಲೇ ನೋವಿಗೆ ಪರಿಹಾರವನ್ನು ಕಂಡುಕೊಳ್ಳುತ್ತಾರೆ!
ಇದಕ್ಕೇ ಹೇಳುವುದು, ನಮ್ಮ ನಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಲಕ್ಷಾಂತರ ರೂಗಳನ್ನು ವ್ಯಯಿಸುತ್ತಾ, ಬ್ರಹ್ಮಾಂಡದ ಉದ್ದಗಲಗಳನ್ನು ಸುತ್ತಾಡಿ, ನಾನಾ ಜನರನ್ನುಭೇಟಿ ಮಾಡಿ ನೆಮ್ಮೆದಿ ಮತ್ತು ಶಾಂತಿಯನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತೇವೆ ಈ ನಿಟ್ಟಿನಲ್ಲಿ ಹಲವಾರು ದೇವಾಲಯಗಳು ಮತ್ತು ಆಶ್ರಮಗಳಿಗೆ ಭೇಟಿ ನೀಡಿ ಅಲ್ಲಿ ನಮ್ಮ ಸಮಸ್ಯೆಗಳಿಗೆ ಇತರರು ಪರಿಹಾರ ಸೂಚಿಸಲೀ ಎಂದು ಪರಿತಪಿಸುತ್ತೇವೆ.
ನಿಜ ಹೇಳ ಬೇಕೆಂದರೆ ನಮ್ಮ ಬಹತೇಕ ಸಮಸ್ಯೆಗಳಿಗೆ ನಮ್ಮ ಬಳಿಯೇ ಪರಿಹಾರವಿರುತ್ತದೆ. ಅದನ್ನು ಕಂಡು ಕೊಳ್ಳುವ ತಾಳ್ಮೆ ಮತ್ತು ಮನಸ್ಥಿತಿಯನ್ನು ರೂಢಿಸಿಕೊಳ್ಳ ಬೇಕಷ್ಟೇ.
ಇಂತಹ ಸಮಯದಲ್ಲಿಯೇ, ಕವಿಗಳಾದ ಜಿ.ಎಸ್ ಶಿವರುದ್ರಪ್ಪನವರ
ಎಲ್ಲೋ ಹುಡುಕಿದೆ ಇಲ್ಲದ ದೇವರ,
ಕಲ್ಲು ಮಣ್ಣುಗಳ ಗುಡಿಯೊಳಗೆ,
ಇಲ್ಲೇ ಇರುವ ಪ್ರೀತಿ ಸ್ನೇಹಗಳ
ಗುರುತಿಸದಾದೆನು ನಮ್ಮೊಳಗೆ
ಎಂಬ ಕವನ ನೆನಪಿಗೆ ಬರುತ್ತದೆ.
ಅದೇಕೋ ಏನೋ ನಮ್ಮವರಿಗೆ ಹಿತ್ತಲ ಗಿಡ ಮದ್ದಲ್ಲ ಎನ್ನುವಂತೆ ತಮ್ಮ ಸಮಸ್ಯೆಗಳಿಗೆ ಮೂರನೆಯವರಲ್ಲಿಯೇ ಪರಿಹಾರ ಕಂಡುಕೊಳ್ಳಲು ಬಯಸುತ್ತಾರೆ. ಇದೇ ಮನೋಭಾವದಿಂದಲೇ ಬ್ರಿಟೀಷರು ನಮ್ಮನ್ನು ಒಡೆದು ನೂರಾರು ವರ್ಷಗಳ ಕಾಲ ದಬ್ಬಾಳಿಕೆ ನಡೆಸಿದ್ದರು.
ಇಂದಿಗೂ ಕೂಡಾ ಅದೇ ದಾಸ್ಯದಿಂದಲೇ,ನಮ್ಮ ಯುವ ಜನತೆ ವಿದೇಶಿ ವ್ಯಾಮೋಹಕ್ಕೆ ಬಲಿಯಾಗುತ್ತಿರುವುದು ವಿಪರ್ಯಾಸವೇ ಸರಿ. ನಮ್ಮ ದೇಶದ ಸಮಸ್ಯೆಗಳಿಗೆ ವಿದೇಶಿಗರಿಂದ ಪರಿಹಾರ ಕಂಡುಕೊಳ್ಳುವ ಬದಲು, ಸ್ವಾಭಿಮಾನಿಗಳಾಗಿ, ಸ್ವಾವಲಂಬಿಗಳಾಗಿ (ಆತ್ಮನಿರ್ಭರ) ದೇಶವನ್ನು ಮನ್ನಡೆಸೋಣ. ಭಾರತವನ್ನು ಪರಮ ವೈಭವ ಸ್ಥಿತಿಗೆ ಕೊಂಡ್ಯುವತ್ತ ಹರಿಸೋಣ ಚಿತ್ತ.
ಏನಂತೀರೀ?
ವಾಟ್ಸಾಪ್ಪಿನಲ್ಲಿ ಓದಿದ ಆಂಗ್ಲ ಸಂದೇಶವೊಂದರ ಭಾವಾನುವಾದ
Good article
LikeLiked by 1 person
ಲೇಖನ ಚೆನ್ನಾಗಿದೆ. ಹೌದು ನೀವು ಹೇಳುವುದು ಸರಿ. ನಮ್ಮ ಸಮಸ್ಯೆಗೆ ಮೊದಲು ನಾವು ಉಪಶಮನ ಆಚೆಯೇ ಹುಡುಕಲು ಪ್ರಯತ್ನಿಸುತ್ತೇವೆ.
LikeLiked by 1 person