ಗಮಕ ವಿದ್ವಾನ್ ಶ್ರೀ ಬಾ. ನಂ. ಶಿವಮೂರ್ತಿ

ಅಮ್ಮ ನಮ್ಮನ್ನು ಎಂಟು ತಿಂಗಳು ತನ್ನ ಹೊಟ್ಟೆಯಲ್ಲಿ ಹೊತ್ತು ನಂತರ ಹೆತ್ತು, ತುತ್ತು ನೀಡಿ ನಮ್ಮನ್ನು ಸಾಕಿ ಸಲಹಿದರೆ, ಅಪ್ಪ ನಮ್ಮನ್ನು ಜೀವಮಾನವಿಡೀ ಬಹಳ ಜತನದಿಂದ ಸಾಕಿ ಸಲಹುವ ದೇವರು ಎಂದರೂ ತಪ್ಪಾಗದು. ಕುಟುಂಬದ ಸುಖಃಕ್ಕಾಗಿ ತನ್ನ ಸಕಲ ಇಚ್ಚೆಗಳನ್ನೂ ಮರೆತು ಆಕಾಶದಷ್ಟು ಪ್ರೀತಿ ಕೊಡುವವರೇ ಅಪ್ಪಾ. ನಿಜ ಹೇಳಬೇಕೆಂದರೆ ಆತನೇ ನಮ್ಮೆಲ್ಲರ ಅಕ್ಕರೆಯ ಸಕ್ಕರೆಯ ಮೊದಲ ಗೆಳೆಯ. ನಮ್ಮೆಲ್ಲಾ ಕನಸುಗಳಿಗೆ ಧಾರೆಯೆರೆಯುವ ಗಣಿ. ಅಮ್ಮ ಕುಟುಂಬದೊಳಕ್ಕೆ ಮಾತ್ರವೇ ಸೀಮಿತಗೊಂಡರೆ, ಅಪ್ಪಾ ಕುಟುಂಬದ ಒಳಗೂ ಮತ್ತು ಹೊರಗೂ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ದಣಿ. ಹಾಗಾಗಿಯೇ ಅಪ್ಪ ಮತ್ತು ಅಮ್ಮ ಅಮ್ಮಂದಿರು ಕಣ್ಣಿಗೆ ಕಾಣುವ ಪ್ರತ್ಯಕ್ಷ ದೇವರ ಸಮಾನ. ಅಮ್ಮಾ ಎಂದರೆ ಬದುಕು ಮತ್ತು ಅಪ್ಪ ಎಂದರೆ ಬೆಳಕು. ನಮ್ಮ ಜೀವನದಲ್ಲಿ ಅಪ್ಪ ಮತ್ತು ಅಮ್ಮನ ಪ್ರೀತಿ ಅತ್ಯಮೂಲ್ಯವಾಗಿದ್ದು ಅವರ ಸ್ಥಾನವನ್ನು ಯಾರಿಂದಲೂ, ಎಂದಿಗೂ ತುಂಬಲು ಸಾಧ್ಯವಿಲ್ಲ ಎನ್ನುವುದು ಅಕ್ಷರಶಃ ಸತ್ಯವಾದ ಮಾತು.

WhatsApp Image 2024-10-14 at 11.23.06

ಎಲ್ಲಾ ಮಕ್ಕಳಂತೆಯೇ ನನಗೂ ಸಹಾ ನಮ್ಮ ಅಪ್ಪನೇ ಮೊದಲ ಹೀರೋ. ನಮ್ಮ ಮನೆಯಲ್ಲಿ ಅಪ್ಪನನ್ನು ಅಣ್ಣಾ ಎಂದು ಕರೆಯುವ ಪದ್ದತಿ. ನನ್ನ ಪ್ರತೀ ಬೆಳವಣಿಗೆಯ ಹಿಂದೆ ಅಪ್ಪನ ಶ್ರಮ ಬಹಳಷ್ಟು ಇದೆ. ಚೌಲದಲ್ಲಿ ಓಂಕಾರ ಬರೆಸಿ ಅಕ್ಷರಾಭ್ಯಾಸ ಮಾಡಿಸುವ ಮುನ್ನವೇ ದೈನಂದಿನ ಶ್ಲೋಕಗಳನ್ನು ಹೇಳಿಕೊಟ್ಟವರು. ಅಮ್ಮಾ ಕೋಡುಬಳೆಯ ಮೂಲಕ ಅಕ್ಷರಾಭ್ಯಾಸ ಮಾಡಿಸಿ, ಪ್ರಜಾವಾಣಿ, ಸುಧಾ, ತರಂಗ, ಮಯೂರ, ಬಾಲ ಮಂಗಳವನ್ನು ಓದುವ ಅಭ್ಯಾಸ ಮಾಡಿಸಿದರೆ, ಅಪ್ಪ ತನ್ನ ತೋರು ಬೆರಳು ಹಿಡಿದು ತನ್ನ ಸುತ್ತ ಮುತ್ತ ಇಡೀ ಜಗತ್ತನ್ನೇ ತೋರಿಸಿದ್ದಲ್ಲದೇ, ಗ್ರಂಥಾಲಯಕ್ಕೆ ಕರೆದುಕೊಂಡು ಹೋಗಿ ನೂರಾರು ಲೇಖಕರ ಸಾವಿರಾರು ಪುಸ್ತಕಗಳನ್ನು ಪರಿಚಯಿಸಿದ್ದಲ್ಲದೇ, ಪ್ರತಿ ರಾತ್ರಿ ಮಲಗುವ ಮುನ್ನಾ ತಪ್ಪದೇ, ರಾಮಾಯಣ, ಮಹಾಭಾರತ, ಭಾಗವತವಷ್ಟೇ ಅಲ್ಲದೇ ಸಾವಿರಾರು ಪೌರಾಣಿಕ ಕಥೆಗಳನ್ನು ಹೇಳುವ ಮೂಲಕ ನನ್ನ ಇಂದಿನ ಬರವಣಿಗೆಯ ಶಕ್ತಿ. ಅಂದು ತಾನು ತನ್ನ ಸಣ್ಣ ವಯಸ್ಸಿನಲ್ಲಿ ಪಡೆಯಲಾಗದ್ದೆಲ್ಲವನ್ನೂ ತನ್ನ ಮಕ್ಕಳಿಗೆ ಕೊಡಿಸಿದ ಪುಣ್ಯಾತ್ಮ. ನಾವುಗಳು ಕೇಳಿದ್ದನ್ನೆಲ್ಲಾ ಕೊಡಿಸಲಾಗದೇ ಇದ್ದರೂ, ತನ್ನ ಕೈಲಾಗಿದ್ದನ್ನು ಖಂಡಿತವಾಗಿಯೂ ಕೊಡಿಸಿದವರು. ತನ್ನಿಂದ ಸಾಧಿಸೋದಿಕ್ಕಾಗದ ಕೆಲಸಗಳನ್ನು ನಮ್ಮಗಳಿಂದ ಮಾಡಿಸೋದಕ್ಕೆ ಪ್ರಾಮಾಣಿಕ ಪ್ರಯತ್ನ ಪಟ್ಟವರು. ಅಮ್ಮ ಸೊಂಟದಲ್ಲಿ ಮಗುವನ್ನಿಟ್ಟುಕೊಂಡು ತಾನು ಕಾಣುವ ಸಂಪತ್ತನ್ನು ತೋರಿಸಿದರೆ, ಅಪ್ಪ ಹೆಗಲ ಮೇಲೆ ಮಕ್ಕಳನ್ನು ಹೊತ್ತು ತಾನು ಕಾಣದಿರುವ ಜಗತ್ತೂ ಸಹಾ ಮಕ್ಕಳಿಗೆ ಕಾಣುವಂತಾಗಲಿ ಎನ್ನುವ ಕಕ್ಕುಲತೆಯನ್ನು ಹೊಂದಿರುವವರು. ಭಗವಂತನ ಅನುಗ್ರಹ ಮತ್ತು ಪೂರ್ವಜನ್ಮದ ಸುಕೃತ ಎನ್ನುವಂತೆ ಅಂತಹ ಅಮ್ಮ ಅಪ್ಪಂದಿರನ್ನು ಪಡೆದ ನಾವೇ ಧನ್ಯರಾಗಿದ್ದು, ಅಂತಹ ತಂದೆಯವರ ಸರಳ ಪರಿಚಯ ಇದೋ ನಿಮಗಾಗಿ

ಶಿಲ್ಪ ಕಲೆಗಳ ತವರೂರಾದ ಹಾಸನ‌ ಜಿಲ್ಲೆಯ ಆರಂಭದ ಊರಾದ, ಗುರು ವಿದ್ಯಾರಣ್ಯರ ಹುಟ್ಟೂರು ‌ಎಂಬ ಪ್ರತೀತಿಯನ್ನು ಪಡೆದಿರುವಂತಹ ಪುಟ್ಟ ಗ್ರಾಮ ಬಾಳಗಂಚಿಯ ಖ್ಯಾತ ವಾಗ್ಗೇಯಕಾರರೂ, ಹರಿಕಥಾ‌ ವಿದ್ವಾನ್ ಮತ್ತು‌ ಗಮಕ ವಿದ್ವಾನ್ ಶ್ರೀ ನಂಜುಡಯ್ಯ ಹಾಗೂ ಶ್ರೀಮತಿ ಚೆನ್ನಮ್ಮ‌ನವರ ಗರ್ಭದಲ್ಲಿ‌ 1937ರ ‌ಜೂನ್‌‌ 6‌‌ ರಂದು‌ ಹಲವು‌ ವರ್ಷಗಳಿಂದ ದೇವರ ಪೂಜೆ ಮಾಡಿದ ಫಲವಾಗಿ ಹೋಳೇನರಸೀಪುರ‌ದಲ್ಲಿ‌ ಜನನವಾದ ಪುತ್ರ‌ ರತ್ನನಿಗೆ ಗುರು‌ಹಿರಿಯರ‌ ಸಮ್ಮುಖದಲ್ಲಿ‌ ಶಿವಮೂರ್ತಿಎಂದು ನಾಮಕರಣ ‌ಮಾಡಿದರು.

ಸತ್ಯಹರಿಶ್ಚಂದ್ರರ ಅಪರಾವತಾರ ಶಾನುಭೋಗ ತಂದೆ, ಹೆಸರಿಗೆ‌ ತಕ್ಕಂತೆ ವೀರ ವನಿತೆ ಚೆನ್ನಮ್ಮನವರ ಮುದ್ದು ಜೇಷ್ಠ ಕುವರನಾದರೂ ಬೆಳೆದದ್ದು ದೊಡ್ಡಮ್ಮ‌ನವರ‌ ಆರೈಕೆಯಲ್ಲೇ. ಬಹುಷಃ ಪ್ರಪಂಚದಲ್ಲೇ ತಂದೆ ತಾಯಿಯರನ್ನು ಚಿಕ್ಕಪ್ಪ, ಚಿಕ್ಕಮ್ಮ ಎಂದು ಕರೆದ ಪ್ರಪ್ರಥಮ ಪುತ್ರ ಇವರೇ ಇರಬೇಕು. ಹೆಸರಿಗೆ‌ ಶ್ಯಾನುಭೋಗ‌ ಕುಟುಂಬವಾದರೂ ಮನೆಯಲ್ಲಿ ಕಿತ್ತು ತಿನ್ನುವ ಬಡತನ. ದುಡಿಯುವ ಕೈ ಒಂದಾದರೆ, ತಿನ್ನುವ ಕೈ ಹದಿನಾಲ್ಕು. ರಾಮೋತ್ಸವ, ಗಣೇಶೋತ್ಸವ,‌ ರಾಮ ಸಾಮ್ರಾಜ್ಯ‌ ಪಟ್ಟಾಭಿಷೇಕದಲ್ಲಿ ಯಾರಾದರೂ ಕರೆಸಿ‌ ಹರಿಕಥೆ ಮಾಡಿಸಿದಲ್ಲಿ‌ ಮನೆಯಲ್ಲಿ ‌ನಾಲ್ಕು ಕಾಸು ಓಡಾಟ, ಹೊಟ್ಟೆ ‌ತುಂಬಾ ಊಟ. ಇಲ್ಲದಿದ್ದಲ್ಲಿ ಸೊಪ್ಪು,‌ ಸೆದೆ, ಬೇಯಿಸಿದ‌ ಅಳಿದುಳಿದ ಕಾಳುಗಳೇ‌ ಊಟ.

ಪ್ರಾಥಮಿಕ ಶಾಲಾಭ್ಯಾಸ ಹುಟ್ಟೂರಿನಲ್ಲಿ ಪ್ರಾರಂಭವಾಗಿ, ದೊಡ್ಡಪ್ಪನ ಊರಾದ‌ ತುರುವೇಕೆರೆ, ಅಜ್ಜಿ‌ಯ ಮನೆ ಹೋಳೆನರಸೀಪುರ, ತಂದೆ‌ ಮತ್ತು ಖ್ಯಾತ ಬರಹಗಾರ ರಾಮಸ್ವಾಮಿ ‌ಅಯ್ಯಂಗಾರರ ಗೆಳೆತನದ ಪ್ರತೀಕವಾಗಿ ‌ಗೋರೂರಿನಲ್ಲಿ ನಡೆಯಿತಾದರೂ ಜೀವನೋಪಾಯಕ್ಕಾಗಿ ಅಕ್ಕ ಪಕ್ಕದ ಮನೆಯ ವಾರಾನ್ನವೇ ಆಶ್ರಯವಾಯಿತು. ಮುಂದೆ ಹಿರಿಸಾವೆಯಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ‌ ಮುಂದುವರೆಸಿ‌ SSLCಯನ್ನು ಉತ್ತಮ‌ ಶ್ರೇಣಿಯಲ್ಲಿ ಮುಗಿಸಿದರಾದರೂ ಮನೆಯ ಪರಿಸ್ಥಿತಿಯ ಫಲವಾಗಿ ‌ಕಾಯಕಕ್ಕೆ‌ ಇಳಿಯಬೇಕಾಯಿತು.

ಇದ್ದ ಅಲ್ಪ ಸ್ವಲ್ಪ ಜಮೀನಿನಲ್ಲಿ ಬೇಸಾಯ ಆರಂಭಿಸಿ ಕುಟುಂಬದ ನಿರ್ವಹಣೆಗಾಗಿ ಅಕ್ಕ ಪಕ್ಕದವರ ಜಮೀನಿನಲ್ಲಿಯೂ ಕೆಲಸ ಮಾಡುತ್ತಾರೆ. ಮಳೆ ಇಲ್ಲದೆ ನೀರಿಗಾಗಿ ಹಾಹಾಕಾರವಾದಾಗ ಅಧಿಕ ದೈಹಿಕ ಪರಿಶ್ರಮದ ಭಾವಿ ತೋಡುವ ಕೆಲಸವನ್ನೂ ಮಾಡುತ್ತಾರೆ. ಇದೇ ಸಮಯದಲ್ಲಿ ಸಂಭಂಧಿಕರ ಸಲಹೆ ಮೇರೆಗೆ ತುಮಕೂರಿಗೆ ವಾಸ್ಥವ್ಯ ಬದಲಿಸಿ ಸರ್ಕಾರೀ ಹೊಲಿಗೆ ತರಬೇತಿಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದ ಪರಿಣಾಮವಾಗಿ ಹೊಲಿಗೆ ಯಂತ್ರವನ್ನೂ ಬಹುಮಾನವಾಗಿ ಪಡೆದು ಹೊಲಿಗೆ ವೃತ್ತಿಯನ್ನು ಆರಂಭಿಸಲು ಯೋಚಿಸಿದರಾದರೂ ತಂಗಿಯ ಮದುವೆಗೆ ದುಡ್ಡಿನ ಅಭಾವದ ಕಾರಣಕ್ಕಾಗಿ ಹೊಲಿಗೆ ಯಂತ್ರವನ್ನು ಮಾರಿ ಬಿಡುತ್ತಾರೆ. ನಂತರ ಸಹಕಾರ ಸಂಘದ ತರಬೇತಿಗೆ ಸೇರಿ‌ ಉತ್ತಮ ದರ್ಜೆಯಲ್ಲಿ ತೇರ್ಗಡೆ ಹೊಂದಿ ಕೆಲಸ ಪಡೆದರಾದರೂ ಅಂದಿನ ಸರ್ಕಾರದ ಬದಲಾದ ನಿಯಮದ ಅನುಗುಣವಾಗಿ ಇದ್ದ ಕೆಲಸವನ್ನು ಕಳೆದುಕೊಂಡು ಕೆಲವು ದಿನ ಅಕ್ಕನ ಊರಾದ ಕಗ್ಗರೆಯಲ್ಲೂ ಮತ್ತು ತಮ್ಮ ಊರಿನಲ್ಲೂ ಬೇಸಾಯವನ್ನು ಮುಂದುವರೆಸುತ್ತಾ ತಮ್ಮ ಆರಾಧ್ಯದೈವ ಲಕ್ಷ್ಮೀ ನರಸಿಂಹ ದೇವರ ಅರ್ಚಕರಾಗಿಯೂ ಜೀವನ ನಡೆಸುತ್ತಿದ್ದಾಗಲೇ‌ ತಮ್ಮ ಬಾಳಿನ ಮಹತ್ತರ ತಿರುವು ಅವರ ಮೈಸೂರು ದೊಡ್ಡಪ್ಪನವರ ಮೂಲಕ ಪಡೆಯುತ್ತಾರೆ. ಬುದ್ದಿವಂತನಾದರೂ ಪರಿಸ್ಥಿತಿಯ ಅನುಗುಣವಾಗಿ ಊರಿನಲ್ಲೇ ಕೊಳೆಯುತ್ತಿದ್ದ ಪ್ರತಿಭೆಗೆ ಆತ್ಮ ಸ್ಥೈರ್ಯ ತುಂಬಿದ ಅವರ ದೊಡ್ಡಪ್ಪ ಅವರನ್ನು ಮೈಸೂರಿಗೆ ಕರೆದೊಯ್ದು ತಮ್ಮ ಮನೆಯಲ್ಲಿ ಕೆಲವು ದಿನಗಳವರೆವಿಗೂ ಆಶ್ರಯ ಕೊಡುತ್ತಾರೆ.

ಮೈಸೂರಿಲ್ಲಿ‌ ದೊಡ್ಡಪ್ಪ-ದೊಡ್ಡಮ್ಮನ ಮನೆಯ ಪರಿಸ್ಥಿತಿಯನ್ನು ಕೊಡಲೇ ಅರಿತು ಅವರಿಗೆ ಹೆಚ್ಚು‌ ಹೊರೆ ಆಗಬಾರದೆಂದು ನಿರ್ಧರಿಸಿ, ಬೆಳ್ಳಂ ಬೆಳಗ್ಗೆಯೇ ಚುಮು ಚುಮು ಚಳಿ, ಗಾಳಿ, ಮಳೆಯನ್ನೂ ಲೆಕ್ಕಿಸದೆ ಮನೆ ಮನೆಗೆ ವೃತ್ತಪತ್ರಿಕೆ ಮಾರುವ ಕೆಲಸ ಆರಂಭಿಸಿ, ಹಗಲಿನಲ್ಲಿ ಅಂಗಡಿಗಳಲ್ಲಿ ಲೆಕ್ಕ ಬರೆಯುವ ಕೆಲಸವನ್ನು ಮಾಡಿದರಾದರೂ ಅದರಲ್ಲಿ ಹೆಚ್ಚಿನ ಆಸಕ್ತಿ ಇರದ ಕಾರಣ ಮೈಸೂರಿನ ಸರ್ಕಾರಿ ಐಟಿಐ ಫಿಟ್ಟರ್ ತರಬೇತಿಗೆ ಸೇರಿಕೊಳ್ಳುತ್ತಾರೆ. ಅಲ್ಲಿ ಶ್ರೀ ಸುಬ್ರಹ್ಮಣ್ಯಂರಂತ ಗುರುಗಳ ನೆಚ್ಚಿನ ಶಿಷ್ಯರಾಗಿ ಅವರ ಮಾರ್ಗದರ್ಶನದಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಅಂದಿನ‌ ದಿನದಲ್ಲೇ ಪ್ರಖ್ಯಾತ ಕಾರ್ಖಾನೆಯಾದ ಭಾರತ್‌ ಎಲೆಕ್ಟ್ರಾನಿಕ್ಸ್ (BEL) ನಲ್ಲಿ ಕೆಲಸ ಗಿಟ್ಟಿಸಿಕೊಳ್ಳುವ ಮೂಲಕ ಅವರ ಜೀವನದ ಎರಡನೇ ಮಗ್ಗಲು‌ ಬೆಂಗಳೂರಿನಲ್ಲಿ ಆರಂಭವಾಗುತ್ತದೆ.

WhatsApp Image 2024-10-14 at 11.24.53

ಕೆಲಸ‌‌ ಸಿಕ್ಕ‌ ಎರಡು‌ ವರ್ಷಗಳ‌ ನಂತರ ಕೆಜಿಎಫ್ ನ ರಾಜಾರಾವ್ ಮತ್ತು ವಿಶಾಲಾಕ್ಷಿಯವರ ಹಿರಿಯ ಪುತ್ರಿ ಉಮಾರವರನ್ನು ವರಿಸಿ‌ ಸುಖಃ ಸಂಸಾರದ ಫಲವಾಗಿ ಶ್ರೀಕಂಠ, ಸುಧಾ ಮತ್ತು ‌ಲಕ್ಷ್ಮಿ ಎಂಬ ಮಕ್ಕಳ ತಂದೆಯೂ ಆಗುತ್ತಾರೆ. ಈ ನಡುವೆ‌ ಮಾವನವರ ಅಕಾಲಿಕ ಮರಣದಿಂದಾಗಿ ಸಂಪೂರ್ಣ ಕುಟುಂಬದ ಹೊಣೆ ಹೊತ್ತು ಅವರ ಉಳಿದ‌ ನಾಲ್ಕೂ ನಾದಿನಿಯರ ಹಾಗೂ ಭಾವ ಮೈದುನನ ಮತ್ತು‌ ತಮ್ಮ, ತಂಗಿಯಂದಿರ‌ ಮದುವೆಯನ್ನು ಅವರ ಸಾರಥ್ಯದಲ್ಲಿಯೇ ಉತ್ತಮ ಸಂಬಂಧಗಳೊಂದಿಗೆ ಮಾಡಿ ಮುಗಿಸಿ, ತಮ್ಮ ಮಕ್ಕಳ‌ ವಿದ್ಯಾಭ್ಯಾಸದತ್ತ ಗಮನ ಹರಿಸುತ್ತಿರುವಾಗಲೇ ತಮ್ಮಲ್ಲಿ ಸುಪ್ತವಾಗಿ‌ ಅಡಗಿದ್ದ ಹಾಗೂ ಬಾಲ್ಯದಿಂದಲೂ ಹಂಬಲಿಸುತ್ತಿದ್ದ ಮತ್ತು ತಂದೆಯವರ ಪ್ರಭಾವದಿಂದಾಗಿ ಕರ್ನಾಟಕದ ಸಂಗೀತವನ್ನು ‌ವಿದ್ವಾನ್ ಶ್ರೀ ಚಿಂತಲಪಲ್ಲಿ‌‌ ರಂಗರಾಯರಲ್ಲೂ ಗಮಕ‌ವನ್ನು ಗುರುಗಳಾದ ಶ್ರೀ ‌ನಾರಾಯಣರಲ್ಲೂ ಮುಂದುವರೆಸಿ‌ ವಿದ್ವತ್‌ ಪರೀಕ್ಷೆಯನ್ನು ಪೂರ್ಣಗೊಳಿಸುತ್ತಾರೆ.‌

ಇವೆರಡರ ಜೊತೆ ಜೊತೆಯಲ್ಲಿ ಬಾಲ್ಯದಲ್ಲಿ ತಂದೆಯವರ ಒಡಗೂಡಿ ಮೈಸೂರಿನ ದಸರಾ ಸಂಗೀತೋತ್ಸವಕ್ಕೆ ಹೋಗಿದ್ದ ಸಂದರ್ಭದಲ್ಲಿ‌ ಮೋರ್ಚಿಂಗ್ ವಾದನವನ್ನು ‌ಕೇಳಿ ಅದರ ನಾದಕ್ಕೆ ಮನಸೋತು‌‌ ಏಕಲವ್ಯನಂತೆ ಸ್ವಸಾಮರ್ಥ್ಯದಿಂದ ಮೋರ್ಚಿಂಗ್ ವಾದನವನ್ನು ಕರಗರತ ಮಾಡಿಕೊಂಡು ಹಲವಾರು ಪ್ರಖ್ಯಾತ ‌ವಿದ್ವಾಂಸರ ಕಛೇರಿಗಳಲ್ಲೂ ಹೆಸರಾಂತ ‌ನೃತ್ಯ‌ ಕಾರ್ಯಕ್ರಮಗಳಲ್ಲಿ ಅಮೋಘವಾಗಿ‌ ನುಡಿಸಿ ವಿದ್ವತ್ ಜನರ ಮೆಚ್ಚುಗೆ ‌ಗಳಿಸುತ್ತಾರೆ. ತಮ್ಮ‌ ಗಾಯನ‌ ಸಿರಿಯಿಂದ ಅಂತರ್ ಕಾರ್ಖಾನೆಗಳ‌ ಅನೇಕ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಗಳಿಸಿ ತಮ್ಮ ಕಾರ್ಖಾನೆಯ ಹಿರಿಮೆಯನ್ನು ಎತ್ತಿ ಹಿಡಿದಿರುತ್ತಾರೆ. ಬೆಂಗಳೂರಿನ‌‌ ಹಲವಾರು ದೇವಸ್ಥಾನಗಳು ಮತ್ತು ‌ಭಜನಾ‌ ಮಂಡಳಿಗಳಲ್ಲಿ‌ ಸಕ್ರೀಯರಾಗಿ ತಮ್ಮ ಸುಶ್ರಾವ್ಯ ಕಂಠಸಿರಿಯಿಂದ ಭಗವಂತನ ನಾಮ‌ಸ್ಮರಣೆ ಮಾಡುತ್ತಾ ಹಲವಾರು ಪ್ರಶಸ್ತಿ‌ ಪುರಸ್ಕಾರಗಳಿಗೆ ಭಾಜನರಾಗುತ್ತಾರೆ.

ಅವುಗಳಲ್ಲಿ‌

  • ಶಂಕರ‌ ಸೇವಾ‌‌ ಸಮಿತಿಯ ಭಜನ‌‌ ಸಾಮ್ರಾಟ
  • ತ್ಯಾಗರಾಜ ಗಾನ ಸಭೆಯಲ್ಲಿ ಪಡೆದ ಗಮಕ-ಮುಖಶಂಖು ಕಲಾಭೂಷಣ
  • ಗಮಕ ಕಲಾ‌ ಪರಿಷತ್ತಿನಲ್ಲಿ‌ ಪಡೆದ ಗಮಕ ಕಲಾ‌ರತ್ನ ಪ್ರಶಸ್ತಿಗಳು ಪ್ರಮುಖವಾದವುಗಳು.

ತಮ್ಮ ಎಲ್ಲ‌ ಮಕ್ಕಳ ಮುಂಜಿ ಮದುವೆಗಳನ್ನು‌ ಸಕಾಲದಲ್ಲಿ ಮಾಡಿ ಆರು ಮೊಮಕ್ಕಳ ಮುದ್ದಿನ ತಾತನಾಗಿ ಅವರಿಗೆಲ್ಲಾ, ಶ್ಲೋಕ, ಭಗವದ್ಗೀತೆ, ಬಾಲಪಾಠ, ರಾಮಾಯಣ, ಮಹಾಭಾರತದ ಕಥೆಗಳನ್ನು ಹೇಳುತ್ತಾ ಸಂತೋಷದಿಂದ ಭಗವಂತನ ನಾಮಸ್ಮರಣೆ ಮಾಡುತ್ತಾ ನಿವೃತ್ತ ಜೀವನ ನಡೆಸುತ್ತಿರುವಾಗಲೇ ತಮ್ಮ ಮುದ್ದಿನ ಮಡದಿಯನ್ನು ಕಳೆದು ಕೊಳ್ಳುತ್ತಾರೆ. 2010ರಲ್ಲಿ ಪತ್ನಿಯ ಅಕಾಲಿಕ ಮರಣದ ದುಖಃದಿಂದ ಕೆಲಕಾಲ ಮಂಕಾದರೂ ಬಹಳ ಬೇಗ ಚೇತರಿಸಿಕೊಂಡು ರಾಷ್ಟ್ರೀಯ ಸ್ವಯಂಸೇವಕ ಸಂಘ, ವಿಶ್ವ ಹಿಂದೂ ಪರಿಷತ್, ಟಿಟಿಡಿ ಧರ್ಮ ಪ್ರಚಾರ ಸಮಿತಿಯ ಕಾರ್ಯಗಳಲ್ಲಿ, ಗುರು ನಾರಾಯಣರೊಂದಿಗೆ ಹಲವಾರು ಗಮಕ ಕಾರ್ಯಕ್ರಮಗಳಲ್ಲಿ ಕಾವ್ಯ ವಾಚನ ಮತ್ತು ವ್ಯಾಖ್ಯಾನ ಕಾರರಾಗಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡು ನಮ್ಮ ಸನಾತನ ಸಂಸ್ಕೃತಿಯ ಪರಿಚಯವನ್ನು ನಾಡಿನಾದ್ಯಂತ ಪಸರಿಸುವ ಹೆಮ್ಮೆಯ ಸಂಗತಿಯ ಭಾಗವಾಗುತ್ತಾರೆ.

ಇಷ್ಟಲ್ಲಾ ಬಹುಮುಖ ಪ್ರತಿಭೆಯ ಜೊತೆಗೆ ಕಾರ್ಮಿಕ ಕವಿ ಗಮಕಿ ಶಿವಮೂರ್ತಿ ಎಂಬ ಕಾವ್ಯ ನಾಮದೊಂದಿಗೆ ಹಲವಾರು ಹಾಡುಗಳನ್ನು ಅದರಲ್ಲೂ ವಿಶೇಷವಾಗಿ ಭಾಮಿನೀ ಷಟ್ಪದಿಯಲ್ಲಿ ರಚಿಸುತ್ತಿದ್ದ ಆಶೀರ್ವಚನಗಳನ್ನು ಕೇಳುವುದೇ ಮಹದಾನಂದವಾಗುತ್ತಿತ್ತು.

  • ಶ್ರೀ ವನಿತೆಯರಸನೆ…
  • ಶರಣ ಸಂಗವ್ಯಸನ..
  • ಭೂ ವ್ಯೋಮ ಪಾತಾಳ..
  • ಗೀತೆ ಶ್ರೀ ಹರಿ ಮುಖ ಜಾತೆ….
  • ಶೈಲ ಬಾಲೆ ಸ್ವರ್ಣಾಂಬೆ ..

ಮುಂತಾದವುಗಳನ್ನು ಅವರ ಕಂಚಿನ ಕಂಠದಲ್ಲಿ ಕೇಳಿದುದರ ನಿನಾದ ನಮ್ಮ ಕಿವಿಗಳಲ್ಲಿ ಇನ್ನೂ ಗುನುಗುಡುತ್ತಿದೆ.

Shivamurthy

ಆರೋಗ್ಯವೇ ಭಾಗ್ಯ ಎಂಬುದನ್ನು ಬಹಳವಾಗಿ ನಂಬಿದ್ದ ಶಿವಮೂರ್ತಿಗಳು ದೀರ್ಘ ನಡಿಗೆ, ಪ್ರಾಣಾಯಾಮ, ಯೋಗಸನಗಳನ್ನು ಚಾಚೂ ತಪ್ಪದೆ ಅಭ್ಯಾಸ ಮಾಡುತ್ತಾ ಉತ್ತಮವಾದ ಜೀವನ ನಡೆಸುತ್ತಿರುವಾಗಲೇ ಜಾತಸ್ಯ ಮರಣಂ ದೃವಂ ಅಂದರೆ ಹುಟ್ಟಿದವರು ಸಾಯಲೇ ಬೇಕೆಂಬ ಜಗದ ನಿಯಮದಂತೆ ದಿ. 2.10.2017ರ ಆಶ್ವಯುಜ ಶುಕ್ಲ ದ್ವಾದಶಿಯಂದು ತೀವ್ರ ಹೃದಯ ಸ್ಥಂಭನದಿಂದಾಗಿ ಅಕಾಲಿಕವಾಗಿ ಅಗಲಿ ನಮ್ಮನ್ನೆಲ್ಲಾ ತಬ್ಬಲಿಗಳನ್ನಾಗಿಸುತ್ತಾರೆ. ಒಟ್ಟಿನಲ್ಲಿ ಹೇಳ ಬೇಕೆಂದರೆ ಆಡು‌ ಮುಟ್ಟದ ಸೊಪ್ಪಿಲ್ಲ, ಶಿವಮೂರ್ತಿಗಳಿಗೆ ಗೊತ್ತಿಲ್ಲದಿದ್ದ ಕಲೆಯೇ ಇಲ್ಲ ಎಂದು ಹೇಳಿದರೂ‌‌ ಅತಿಶಯೋಕ್ತಿ ಆಗಲಾರದು. ಇಂತಹ ಹಿರಿಯ ಚೇತನದ ಅಗಲಿಕೆ ನಮ್ಮ ಕುಟುಂಬಕ್ಕೂ ಹಾಗೂ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವೇ ಸರಿ ಎಂದರೂ ತಪ್ಪಾಗದು.

ಪ್ರತಿದಿನ ಪೂಜಿಸುವಾಗ ಕೇಳಿಕೊಳ್ಳುವ ಹಾಗೆ, ಅನಾಯಾಸೇನ ಮರಣಂ ವಿನಾ ದೈನ್ಯೇನ ಜೀವನಂ ದೇಹಿಮೇ ಕೃಪಯಾ ಶಂಭೋ ತ್ವಹಿ ಭಕ್ತಿ ಅಚಂಚಲಾಂ ನಿರಾಯಾಸವಾಗಿ ಯಾವುದೇ ರೀತಿಯಲ್ಲಿ ನರಳದೆ, ಯಾರನ್ನೂ ನರಳಿಸದೆ, ಯಾರನ್ನೂ ನೋಯಿಸದೇ, ಯಾರಲ್ಲೂ ಬೇಡದೆ, ಸಾಧ್ಯವಾದಷ್ಟು ಕೊಡುಗೈ ದಾನಿಯಾಗಿಯೇ ಆ ಭಗವಂತನ ಸನ್ನಿಧಿಯನ್ನು ಸೇರಿದ ನಮ್ಮ ತಂದೆಯವರಿಗೆ ನಮ್ಮ ಭಕ್ತಿ ಪೂರ್ವಕ ಶ್ರಧ್ದಾಂಜಲಿಯನ್ನು ಅರ್ಪಿಸುತ್ತೇವೆ.

WhatsApp Image 2024-10-14 at 11.23.25

ಇಂತಹ ಮಹಾನ್ ಅಪ್ಪಾ ಇಂದು ಭೌತಿಕವಾಗಿ ನಮ್ಮೊಂದಿಗೆ ಇಲ್ಲದೇ ಇದ್ದರೂ, ಅವರು ಕಲಿಸಿದ ಸಂಸ್ಕಾರ, ಸಂಪ್ರದಾಯ, ಧೈರ್ಯ, ಸ್ಥೈರ್ಯ, ಸ್ವಾಭಿಮಾನ ದೇಶಾಭಿಮಾನ, ಕನ್ನಡ ಭಾಷೆಯ ಬರವಣಿಗೆ ಮತ್ತು ಮಾತನಾಡುವ ಕಲೆಗಳ ಮೂಲಕ ಖಂಡಿತವಾಗಿಯೂ ನಮ್ಮ ಜೀವಮಾನದುದ್ದಕ್ಕೂ ನಮ್ಮೊಂದಿಗೆ ಇದ್ದೇ ಇರುತ್ತಾರೆ ಎನ್ನುವ ಭಾವನೆ ನನ್ನದು. ನಮಗೆ ಸಿಕ್ಕಂತಹ ತಾಯಿ ತಂದೆಯರು ಎಲ್ಲರಿಗೂ ಸಿಗಲಿ ತನ್ಮೂಲಕ ನಾಡು, ನುಡಿ ಮತ್ತು ನಡೆಗಳ ಬಗ್ಗೆ ಸ್ವಾಭಿಮಾನ ಮೂಡುವಂತಾಗಲಿ ಎಂಬ ಆಶಯ ನಮ್ಮದು.
ಏನಂತೀರೀ?
ಸೃಷ್ಟಿಕರ್ತ ಉಮಾಸುತ

2 thoughts on “ಗಮಕ ವಿದ್ವಾನ್ ಶ್ರೀ ಬಾ. ನಂ. ಶಿವಮೂರ್ತಿ

Leave a comment