ಕಳೆದ ವಾರ ನನ್ನ ಆತ್ಮೀಯ ಗೆಳೆಯರು ಅದರಲ್ಲೂ ವಿಶೇಷವಾಗಿ ಕನ್ನಡ ಪ್ರಾಧ್ಯಾಪಕರು ವಿದ್ಯೆ ಮತ್ತು ಸಂಸ್ಕಾರ ಎರಡೂ ಒಂದು ರೀತಿಯ ಜೋಡಿ ಪದಗಳು ಹೌದಾದರೂ ಇವರೆಡಲ್ಲಿರುವ ವೆತ್ಯಾಸ ಏನಿರಬಹುದು ಎಂದು ವ್ಯಾಟ್ಯಾಪ್ ಮುಖೇನ ಪ್ರಶ್ನಿಸಿದರು. ಅವರು ಕೇಳಿರುವ ಪ್ರಶ್ನೆ ನೋಡಲು ಸುಲಭವಾಗಿದ್ದರೂ ಉತ್ತರಿಸಲು ಸ್ವಲ್ಪ ಕಠಿಣ ಎಂದು ಸ್ವಲ್ಪ ಯೋಚಿಸಿದ ನಂತರ ಅರಿವಾಯಿತಾದರೂ, ಕೂಡಲೇ ಸಂಸ್ಕಾರ ಎನ್ನುವುದು ಜೀವನದ ತಳಹದಿ. ಬಹಳಷ್ಘು ಬಾರಿ ಅದು ನಮ್ಮ ತಂದೆ ತಾಯಿ, ಇಲ್ಲವೇ ಕುಟುಂಬ ಮತ್ತು ನೆರೆಹೊರೆಯವರ ಪ್ರಭಾವ, ಬೆಳೆದು ಬಂದ ಪರಿಸರದಿಂದ ಚಿಕ್ಕವಯಸ್ಸಿನಲ್ಲಿ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿರುವುದು. ಆ ಬುನಾದಿಯ ಮೇಲೆಯೇ ಕಟ್ಟುವ ಕಟ್ಟಡವೇ ವಿದ್ಯೆ. ಆ ತಳಹದಿಯ ಗಟ್ಟಿತನದ ಮೇಲೆಯೇ ವಿದ್ಯೆ ಎಂಬ ಕಟ್ಟಡದ ಆಯಸ್ಸು ಅವಲಂಭಿತವಾಗಿರುತ್ತದೆ ಎಂದು ನನಗೆ ತಿಳಿದ ಮಟ್ಟಿಗೆ ತಿಳಿಸಿದೆ.
ಅದಕ್ಕೆ ನನ್ನ ಸ್ನೇಹಿತರು ಸಂಸ್ಕಾರ ನಡವಳಿಕೆಗೆ ಸಂಬಂಧ ಪಟ್ಟದ್ದು. ಅದು ಪ್ರತ್ಯಕ್ಷ. ವಿದ್ಯೆ ಪರೋಕ್ಷ. ವಿದ್ಯೆ ಒಂದು ಕ್ಷೇತ್ರದಲ್ಲಿನ ಕುಶಲತೆಯೂ ಇರಬಹುದು. ಇವೆರಡರ ಆಶ್ರಯವೂ ಅಂತಃಕರಣವೇ. ಹೆಚ್ಚಿನ ಸಂದರ್ಭದಲ್ಲಿ ವಿದ್ಯೆಯಿಂದ ಸಂಸ್ಕಾರವುಂಟಾಗುತ್ತದೆ ಎಂದು ಪ್ರತ್ಯುತ್ತರಿಸಿದರು
ಅವರ ಆರಂಭಿಕ ಅಂಶಗಳನ್ನು ಒಪ್ಪಿಕೊಂಡನಾದರೂ ಅವರ ಕಡೆಯ ಅಂಶ ವಿದ್ಯೆಯಿಂದ ಸಂಸ್ಕಾರವುಂಟಾಗುತ್ತದೆ ಎನ್ನುವುದರ ಬಗ್ಗೆ ನನಗೆ ಸ್ವಲ್ಪ ವಿರೋಧವಿದ್ದು ಸಂಸ್ಕಾರವಿದ್ದರೆ ವಿದ್ಯೆ ತನ್ನಿಂದತಾನೇ ಬರುತ್ತದೆ ಎನ್ನುವುದು ನನ್ನ ವಾದವಾಗಿತ್ತು.
ಇದಕ್ಕೆ ಪೂರಕ ಎಂಬಂತೆ ಕೊಲ್ಹಾಪುರದಲ್ಲಿ ಆಶ್ಲೇಷ ಮಳೆಯಿಂದಾಗಿ ಜಲಾವೃತವಾದ ಊರುಗಳಿಂದ ನೆರೆಸಂತಸ್ತ್ರರನ್ನು ಎತ್ತರದ ಸುರಕ್ಷಿತ ಸ್ಥಳಗಳಿಗೆ ನಮ್ಮ ವೀರ ಯೋಧರು ತಮ್ಮ ಜೀವನದ ಹಂಗು ತೊರೆದು ರಕ್ಷಣಾ ಕಾರ್ಯದಲ್ಲಿ ನಿರತವಾಗಿದ್ದರೆ, ತನ್ನ ಜೀವವನ್ನು ಕಾಪಾಡಿದ ಆ ವೀರ ಯೋಧನಿಗೆ ಒಬ್ಬ ನಡುವಯಸ್ಸಿನ ಮಹಿಳೆ ಕಾಲು ಮುಟ್ಟಿ ನಮಸ್ಕಾರ ಮಾಡುವ ಮತ್ತು ಅದಕ್ಕೆ ಆ ಸೈನಿಕರ ಪ್ರತಿಕ್ರಿಯೆಯ ಮನಮಿಡಿಯುವ ದೃಶ್ಯ ನೋಡಿದಾಗ ನಮ್ಮ ಸ್ನೇಹಿತರ ವಿದ್ಯೆ ಮತ್ತು ಸಂಸ್ಕಾರ ನಡುವಿನ ಜಿಜ್ಞಾಸೆಗೆ ಉತ್ತರ ದೊರಕಿತು.
ಸೈನಿಕರು ತಾವು ಕಲಿತ ವಿದ್ಯೆಯಿಂದ ನೆರೆ ಸಂಸ್ತ್ರಸ್ತರನ್ನು ರಕ್ಷಿಸುವ ಮೂಲಕ ತಮ್ಮ ಕರ್ತವ್ಯ ನಿಭಾಯಿಸುತ್ತಿದ್ದರೆ, ಆ ಸಂಸ್ಕಾರವಂತ ಆ ಮಹಾತಾಯಿ ಆ ಕ್ಷಣದಲ್ಲಿ ತನ್ನ ಜೀವವನ್ನು ರಕ್ಷಿಸಿದ ಯೋಧರಲ್ಲಿ ಭಗವಂತನನ್ನು ಕಂಡು ಅವರ ಪರಿಶ್ರಮಕ್ಕೆ ಅಲ್ಲಿದ್ದ ಆಷ್ಟೂ ಯೋಧರಿಗೆ ಕಾಲು ಮುಟ್ಟಿ ನಮಸ್ಕರಿಸುವ ಮೂಲಕ ಅವರಿಗೆ ಪ್ರತಿಫಲವನ್ನು ಅರ್ಪಿಸುತ್ತಾಳೆ. ಅದಕ್ಕೆ ಆ ಸಂಸ್ಕಾರವಂತ ಸೈನಿಕರೂ ಮುಜುಗರದಿಂದ ಮತ್ತು ಧನ್ಯತಾಪೂರ್ವಕವಾಗಿ ಪ್ರತಿವಂದಿಸುತ್ತಾರೆ. ಅ ಕ್ಷಣದಲ್ಲಿ ಹಾಗೆ ಮಾಡಬೇಕೆಂದು ಆಕೆಗೆ ಯಾರೂ ಹೇಳಿರಲಿಲ್ಲ. ಆಕೆಯ ಹೊರತಾಗಿ ಆ ದೋಣಿಯಲ್ಲಿದ್ದ ಮತ್ತಾರೂ ಆ ರೀತಿಯಾಗಿ ಪ್ರತಿಕ್ರಿಯಿಸಲಿಲ್ಲ. ಇದಕ್ಕೇ ಹೇಳುವುದು ಸಂಸ್ಕಾರ ಎಂದು. ಖಂಡಿತವಾಗಿಯೂ ಇಂತಹ ಸಂಸ್ಕಾರವನ್ನು ನಮ್ಮ ಇಂದಿನ ವಿದ್ಯೆ ಕಲಿಸುವುದಿಲ್ಲ. ಇದು ಸಾವಿರಾರು ವರ್ಷಗಳಿಂದ ನಮ್ಮ ಪೂರ್ವಜರು ಹಾಕಿ ಕೊಟ್ಟ ಭಧ್ರ ಬುನಾದಿ. ಎಲ್ಲಿಯವರೆಗೂ ಇಂತಹ ಸಂಸ್ಕಾರವಂತರು ಇರುತ್ತಾರೋ ಅಲ್ಲಿಯವರೆಗೆ ನಮ್ಮ ದೇಶವನ್ನು ಯಾರೂ ಅಲುಗಾಡಸಲಾರರು. ಇಂತಹ ಸಂಸ್ಕಾರವಂತರ ಸಂಖ್ಯೆ ಅಗಣಿತವಾಗಲಿ.
ಏನಂತೀರೀ?
ನಿಮ್ಮವನೇ ಉಮಾಸುತ
ಹೌದು ಖಂಡಿತ ನಿಜ ಸರ್. ಕಣ್ಣಿನಲ್ಲಿ ನೀರು ತರಿಸುವಂತ ದೃಶ್ಯ ಆಕೆಯ ಕೃತಜ್ಞತ ಭಾವ .
LikeLike
ಅದುವೇ ಆಕೆಯ ಸಂಸ್ಕಾರ👍👍
LikeLike
ಸಂಸ್ಕಾರದಿಂದ ವಿದ್ಯೆಯೇ ಹೊರತು ವಿದ್ಯೆಯಿಂದ ಸಂಸ್ಕಾರ ಅಲ್ಲ… ಒಳ್ಳೆ ಲೇಖನ ಉಮಾಸುತರೆ..
LikeLiked by 1 person
ಧನ್ಯೋಸ್ಮಿ
LikeLike