ಉಪಾಕರ್ಮ

ಹಿಂದಿನ ಕಾಲದಲ್ಲಿ ಇಂದಿನ ರೀತಿಯಲ್ಲಿ ಜಾತಿ ಪದ್ದತಿಗಳು ಇಲ್ಲದೇ ಬ್ರಾಹ್ಮಣ, ಕ್ಷತ್ರೀಯ, ವೈಶ್ಯ ಮತ್ತು ಶೂದ್ರ ಎಂದು ನಾಲ್ಕು ವರ್ಣಾಶ್ರಮ ಪದ್ದತಿ ಜಾರಿಯಲ್ಲಿತ್ತು. ಈ ವರ್ಣಾಶ್ರಮಗಳು ಹುಟ್ಟಿನಿಂದ ಬಾರದೇ ಅವರವರ ಪಾಲಿಸುವ ವೃತ್ತಿಯಿಂದ ನಿರ್ಧರಿಸಲ್ಪಡುತ್ತಿತ್ತು. ಜ್ಞಾನಾರ್ಜನೆಗಾಗಿ ಗುರುಕುಲಕ್ಕೆ ಮಕ್ಕಳನ್ನು ಕಳುಹಿಸುವ ಮುಂಚೆ ಉತ್ತಮವಾದ ಸಂಸ್ಕಾರ ಮತ್ತು ಮನಸ್ಸಿನ ಕೊಳೆಗಳನ್ನು ಕಳೆದು ಪರಬ್ರಹ್ಮಪ್ರಾಪ್ತಿಗಾಗಿ, ಮತ್ತು ತನ್ಮೂಲಕ ಸತ್ಪುರುಷರಾಗುವುದಕ್ಕಾಗಿ ಉಪನಯನವನ್ನು ಮಾಡುತ್ತಿದ್ದರು.

ಸಾಮಾನ್ಯವಾಗಿ ಆರರಿಂದ ಎಂಟು ವಯಸ್ಸಿನ ಒಳಗಿನ ಗಂಡು ಮಕ್ಕಳಿಗೆ ಉಪನಯನ ಮಾಡುವುದು ನಡೆದು ಬಂದಿರುವ ಸಂಪ್ರದಾಯ. ಹುಟ್ಟಿನಿಂದ ಅಲ್ಲಿಯವರೆಗೂ ತಾಯಿಯ ಮಡಿಲಲ್ಲೇ ಬೆಳೆದ ಗಂಡು ಮಕ್ಕಳು ಅಂದಿನ ಕಾಲದಲ್ಲಿ ಕೆಲವೊಂದು ಬಾರೀ ಇನ್ನೂ ತಾಯಿಯ ಹಾಲನ್ನೇ ಕುಡಿಯುತ್ತಿದ್ದ ಮಕ್ಕಳಿಗೆ ಕಡೆಯದಾಗಿ ಮಾತೃ ಭೋಜನ ಮಾಡಿಸಿ ಬ್ರಹ್ಮೋಪದೇಶ ಮಾಡಿಸುತ್ತಿದ್ದರು. ಈ ರೀತಿಯಾಗಿ ಬ್ರಹ್ಮೋಪದೇಶ ಮಾಡಿದ ನಂತರವೇ ಅವರಿಗೆ ಎರಡನೇ ಜನ್ಮ ಪ್ರಾಪ್ತಿಯಾದಂತೆ ಎಂದು ದ್ವಿಜ ಎಂದೂ ಕರೆಯುತ್ತಿದ್ದರು. ಮಕ್ಕಳಿಗೆ ಆಚಾರ್ಯ ಮುಖೇನ ಶಾಸ್ತ್ರೋಕ್ತವಾಗಿ ತಂದೆಯಿಂದ ಗಾಯತ್ರೀ ಮಂತ್ರದ ಉಪದೇಶವಾಗಿ ಸ್ವಸಾಮರ್ಥ್ಯ, ಪಾಂಡಿತ್ಯ ಮತ್ತು ಸಮೃದ್ಧಿಯ ಸಂಕೇತವಾದ ಮೂರು ಎಳೆಗಳ ಬ್ರಹ್ಮ ಗಂಟು ಉಳ್ಳ ಜನಿವಾರವನ್ನು ಧಾರಣೆ ಮಾಡಿಸುತ್ತಾರೆ. ಆ ಮೂರು ಎಳೆಗಳು, ಸ್ವಸಾಮರ್ಥ್ಯದ ದೇವಿ (ಪಾರ್ವತಿ), ಪಾಂಡಿತ್ಯದ ದೇವಿ (ಸರಸ್ವತಿ) ಮತ್ತು ಸಮೃದ್ದಿ ಅಥವಾ ಧನ ದೇವಿ (ಲಕ್ಷ್ಮಿ) ಈ ಮೂರೂ ದೇವಿಯರ ಆಶೀರ್ವಾದ ಸುಖಜೀವನ ನಡೆಸಲು ಇರಲೇ ಬೇಕಾದ ಕಾರಣ ಸದಾ ಕಾಲವೂ ಮೂರು ಎಳೆಗಳ ಜನಿವಾರವನ್ನು ಧರಿಸಿರುವುದು ಅವಶ್ಯಕವಾಗಿತ್ತು.

ಸಾಧಾರವಾಗಿ ಬ್ರಾಹ್ಮಣ, ವೈಶ್ಯ ಮತ್ತು ಕ್ಷತ್ರಿಯ ವರ್ಣಾಶ್ರಮ ಪಾಲಿಸುವವರು ತಮ್ಮ ಗಂಡು ಮಕ್ಕಳಿಗೆ ಬಾಲ್ಯಾವಸ್ಥೆಯಲ್ಲಿಯೇ ಈ ರೀತಿಯಲ್ಲಿ ಬ್ರಹ್ಮೋಪದೇಶ ಮಾಡಿಸಿ ಗುರು ಕುಲಕ್ಕೆ ವಿದ್ಯಾಭ್ಯಾಸಕ್ಕಾಗಿ ಕಳುಹಿಸಿ ಕೊಡುತ್ತಿದ್ದರು. ಗುರುಕುಲದಲ್ಲಿ ಆ ವಿದ್ಯಾರ್ಥಿಗಳು ಗಾಯತ್ರಿಯ ಔಪಾಸನೆಯೊಂದಿಗೆ ತ್ರಿಕಾಲ ಸಂಧ್ಯಾವಂದನೆ ಮಾಡುತ್ತಾ ತಮ್ಮ ಸ್ವಸಾಮಥ್ಯದ ಅನುಗುಣವಾಗಿ ವಿದ್ಯಾಭ್ಯಾಸ ಮಾಡುತ್ತಿದ್ದರು.

ಸಾಧಾರಣವಾಗಿ ಎಲ್ಲಾ ವಸ್ತುಗಳಿಗೆ ಒಂದು ನಿರ್ಧಿಷ್ಟ ಅವಧಿಯಿರುತ್ತದೆ. ಆ ಅವಧಿ ಮುಗಿದಂತೆಲ್ಲಾ ಅದನ್ನು ಬದಲಿಸುವುದು ಜಗದ ನಿಯಮ. ಹಾಗಾಗಿ ಕಾಲ ಕಾಲಕ್ಕೆ ಅನುಗುಣವಾಗಿ ನಮ್ಮ ಬಟ್ಟೆ, ಗೃಹೋಪಯೋಗಿ ವಸ್ತುಗಳು, ವಾಹನ ಇತ್ಯಾದಿಗಳನ್ನು ಹೊಸದರೊಂದಿಗೆ ಬದಲಾಯಿಸುತ್ತಿರುತ್ತೇವೆ. ಅಂತಯೇ ಈ ಜನಿವಾರವನ್ನೂ ಮೈಲಿಗೆ, ಪುರುಡು ಮತ್ತು ಸೂತಕಗಳ ಹೊರತಾಗಿ ವರ್ಷಕ್ಕೊಮ್ಮೆ ಬದಲಿಸುವ ಸಂಪ್ರದಾಯವಿದೆ. ಹಾಗೆ ಜನಿವಾರವನ್ನು ಬದಲಾಯಿಸುವ ದಿನವನ್ನು ಉಪಾಕರ್ಮ ಎನ್ನುತ್ತಾರೆ. ಉಪಾಕರ್ಮ ಪದದ ಅರ್ಥ “ಹೊಸ ಆರಂಭ”. ಸಮಯದೊಂದಿಗೆ ಹಳೆಯದಾದ ಯಾವುದನ್ನಾದರೂ ಬದಲಾಯಿಸಬೇಕು
ಅಥವಾ ನವೀಕರಿಸಬೇಕು ಇಲ್ಲವೇ ಪುನಃ ಶಕ್ತಿಯುತಗೊಳಿಸಬೇಕು ಎಂದರ್ಥ. ಉಪಾಕರ್ಮವನ್ನು ವರ್ಷಕ್ಕೆ ಒಂದು ಬಾರಿ ಶ್ರಾವಣ ಮಾಸದ ಶುಕ್ಲ ಪಕ್ಷದ ಶ್ರವಣ ನಕ್ಷತ್ರದ ದಿನದಂದು ಋಗ್ವೇದಿಗಳು ಮತ್ತು ಹುಣ್ಣಿಮೆಯ ದಿನ ಯಜುರ್ವೇದಿಗಳು ಆಚರಿಸುತ್ತಾರೆ. ಹಾಗಾಗಿ ಈ ದಿನವನ್ನು ನೂಲು ಹುಣ್ಣಿಮೆ ಎಂದೂ ಕರಾವಳಿಯ ಕಡೆ ಕರೆಯುವುದುಂಟು. ಅಂದು ಉಪನಯನವಾದವರು ಶಾಸ್ತ್ರೋಕ್ತವಾಗಿ ತಮ್ಮ ಜನಿವಾರವನ್ನು ಗೌತಮಾದಿ ಸಪ್ತ ಋಷಿಗಳಿಗೆ ಶ್ರಾದ್ಧ ತರ್ಪಣಗಳನ್ನು ನೀಡುವುದರ ಮೂಲಕ ಬದಲಾಯಿಸುತ್ತಾರೆ.

ಹಿಂದೆಲ್ಲಾ ಕುಲಪುರೋಹಿತರೇ ಮನೆಗಳಿಗೇ ಆಗಮಿಸಿ ನಡೆಸುತ್ತಿದ್ದ ಉಪಾಕರ್ಮ ಇಂದು ಸಮಯಾಭಾವದಿಂದ ದೇವಸ್ಥಾನಗಳಲ್ಲಿಯೋ ಇಲ್ಲವೇ ಕೆಲವು ಸಂಘ ಸಂಸ್ಥೆಗಳ ಮುಖಾಂತರವೋ ಇಲ್ಲವೇ ಹಿರಿಯ ಪುರೋಹಿತರ ಮನೆಗಳಲ್ಲಿ ಸಾಮೂಹಿಕವಾಗಿ ಆಚರಿಸಲ್ಪಡುತ್ತದೆ. ಹಾಗೆ ಸಾಮೂಹಿಕವಾಗಿ ಆಚರಿಸಲ್ಪಡುವ ಕಡೆ , ಮೊದಲು ವಿಘ್ನವಿನಾಶಕ ಗಣೇಶನ ಪೂಜೆ ಮಾಡಿ ನಂತರ ಸಪ್ತ ಋಷಿಗಳ ಮಂಡಲಗಳನ್ನು ಮಾಡಿ ಅಲ್ಲಿ ನವ ಋಷಿಗಳ ಆಹ್ವಾಹನೆ ಮಾಡಿ ಅವರಿಗೆ ಶ್ರಧ್ಧಾ ಭಕ್ತಿಯಿಂದ ಶೋಡಶೋಪಚಾರ ಪೂಜೆ ಮಾಡಿದ ನಂತರ ತಂದಿದ್ದ ಜನಿವಾರಗಳಿಗೆ ಪೂಜೆ ಮಾಡಿ ಆಚಾರ್ಯರಿಗೂ ಮತ್ತು ಅಲ್ಲಿರುವ ಹಿರಿಯರಿಗೂ ಯಥಾ ಶಕ್ತಿ ದಕ್ಷಿಣೆಯೊಂದಿಗೆ ಜನಿವಾರವನ್ನು ದಾನ ಮಾಡಿ, ಅಕ್ಕಿಯ ಹಿಟ್ಟಿನ ಗುಳಿಗೆಯನ್ನು ಹಲ್ಲಿಗೆ ತಾಕದಂತೆ ಸ್ವೀಕರಿಸಿ ಶ್ರೌತ ಸ್ಮಾರ್ತಾದಿ ನಿತ್ಯ ನೈಮಿತ್ತಿಕ ಕರ್ಮಾನುಷ್ಠಾನ ಯೋಗ್ಯತಾ ಸಿದ್ಯರ್ಥಂ ಎಂದು ಸಂಕಲ್ಪ ಮಾಡಿ ಮೂರು ವೇದಗಳ ಛಂದಸ್ಸನ್ನು ಮತ್ತು ಬ್ರಹ್ಮ , ವಿಷ್ಣು , ರುದ್ರ ಈ ಮೂವರು ದೇವತೆಗಳ ಹೆಸರಿನಲ್ಲಿ (ಜನಿವಾರದ 3 ದಾರಗಳು ಪ್ರತಿನಿಧಿಸುತ್ತವೆ ಎಂದೂ ನಂಬಿಕೆ ಇದೆ ) ಯಜ್ಞೋಪವೀತ ಧಾರಣ ಮಂತ್ರವನ್ನು ಕರ ಷಡಂಗ-ವಿನ್ಯಾಸ ಪೂರ್ವಕ, ದೇಹಕ್ಕೆ ಆವಾಹನೆ ಮಾಡಿಕೊಂಡು ಸೂರ್ಯನ ಮತ್ತು ಪೃಥಿವೀ ಸ್ತುತಿಯ ವೇದ ಮಂತ್ರಗಳೊಂದಿಗೆ – ದಾರಣಮಂತ್ರ ಹೇಳಿ ಧರಿಸಲಾಗುವುದು.

upa1

ಯಜ್ಞೋಪವೀತ ಧಾರಣ ಮಂತ್ರ

ಯಜ್ಞೋಪವೀತದ ಧಾರಣೆ ಗಾಯತ್ರಿ ಮಂತ್ರದಿಂದಾಗುತ್ತದೆ ಗಾಯತ್ರಿ ಮಂತ್ರ ಹಾಗೂ ಯಜ್ಞೋಪವೀತದ ಸಮ್ಮಿಲನವೇ ದ್ವಿಜತ್ವ. ಯಜ್ಞೋಪವೀತದಲ್ಲಿ ಮೂರು ಎಳೆಗಳಿರುತ್ತವೆ. ಹಾಗೇ ಗಾಯತ್ರಿ ಮಂತ್ರದಲ್ಲೂ ಸಹ ಮೂರು ಚರಣಗಳಿವೆ. “ತತ್ಸವಿತುರ್ವರೇಣ್ಯಮ್” ಮೊದಲ ಚರಣ. “ಭರ್ಗೋ ದೇವಸ್ಯ ಧೀಮಹೀ” ಎರಡನೇ ಚರಣ”. “ಧಿಯೋ ಯೋನಃ ಪ್ರಚೋದಯಾತ್” ಮೂರನೇ ಚರಣ.

ಯಜ್ಞೋಪವೀತಂ ಪರಮಂಪವಿತ್ರಂ | ಪ್ರಜಾಪತೇರ್ಯತ್ಸಹಜಂ ಪುರಸ್ತಾತ್ |
ಆಯುಷ್ಯಮಗ್ರ್ಯಂ ಪ್ರತಿಮಂಚಶುಭ್ರಂ |ಯಜ್ಞೋಪವೀತಂ ಬಲಮಸ್ತು ತೇಜಃ||

ಈ ಶ್ಲೋಕದ ಅರ್ಥ ಹೀಗಿದೆ: ಯಜ್ಞೋಪವೀತ ಪರಮ ಪವಿತ್ರವಾದದ್ದು, ಪ್ರಜಾಪತಿಗಿಂತಲೂ ಮೊದಲೇ ಉತ್ಪನ್ನಗೊಂಡಿದ್ದು, ಆಯುಷ್ಯವನ್ನು ಹೆಚ್ಚಿಸುವಂತದ್ದು, ಮನುಷ್ಯನನ್ನು ಶುಭ್ರ ಮಾಡುವಂತದ್ದು, ಯಜ್ಞೋಪವೀತ ನಮ್ಮ ಬಲ ಹಾಗೂ ತೇಜಸ್ಸನ್ನು ಹೆಚ್ಚಿಸುವಂತದ್ದು.

ಈ ಮಂತ್ರೋಚ್ಛಾರ ಮಾಡಿದ ನಂತರ ಜನಿವಾರವನ್ನು ಧಾರಣೆ ಮಾಡಿ ಯಥಾ ಶಕ್ತಿ 32, 64, 108 ಅಥವಾ 1000 ಗಾಯತ್ರಿ ಜಪ ಮಾಡಬೇಕು.

  • ಬ್ರಹ್ಮಚಾರಿಗಳು ಮೂರೆಳೆಯ ಒಂದು ಜನಿವಾರವನ್ನು ಮಾತ್ರಾ ಧರಿಸಿದರೆ,
  • ಗೃಹಸ್ಥರು / ವಿವಾಹಿತರು ಮೂರೆಳೆಯ ಎರಡನೇ ಜನಿವಾರವನ್ನು ಧಾರಣೆ ಮಾಡುತ್ತಾರೆ. ಮೊದಲನೇ ಜನಿವಾರ ತನ್ನದಾದರೆ ಮತ್ತೊಂದು ತನ್ನ ಪತ್ನಿಯ ಪರವಾಗಿ ಧರಿಸುತ್ತಾರೆ. ಅಕಸ್ಮಾತ್ ಎರಡನೇ ಮದುವೆ ಯಾದವರು ಮೂರನೇ ಜನಿವಾರವನ್ನೂ ಧರಿಸುತ್ತಾರೆ.
  • ಯಾವುದೇ ಧಾರ್ಮಿಕ ಕ್ರಿಯೆ ಮಾಡುವಾಗ, ದೇವರಿಗೆ ಅಥವಾ ಹಿರಿಯರಿಗೆ ನಮಸ್ಕರಿಸುವಾಗ ಹೆಗಲ ಮೇಲೆ ಉತ್ತರೀಯ(ಶಲ್ಯ) ಇರಲೇ ಬೇಕೆಂಬುದು ಒಂದು ರೂಢಿಯಲ್ಲಿರುವ ಧಾರ್ಮಿಕ ನಿಯಮ. ಹಾಗಾಗಿ ಉತ್ತರೀಯವಿಲ್ಲದಿದ್ದರೂ, ಅದಕ್ಕೆ ಲೋಪ ಬಾರದಂತೆ ಉತ್ತರೀಯದ ಬದಲಾಗಿ ಮತ್ತೊಂದು ಹೆಚ್ಚಿನ ಅಂದರೆ ಮೂರನೇ ಜನಿವಾರವನ್ನು ಧರಿಸುವುದು ರೂಢಿಯಲ್ಲಿದೆ.
  • ಇನ್ನೂ ಕೆಲವು ಗೃಹಸ್ಥರು ನಾಲ್ಕು ಜನಿವಾರ ಧರಿಸುವುದೂ ಉಂಟು. ಅಕಸ್ಮಾತ್ ಕಾರಾಣಾಂತರಗಳಿಂದ ಜನಿವಾರ ಕಿತ್ತು ಹೋದಲ್ಲಿ, ಅದನ್ನು ಆದಷ್ಟು ಬೇಗ ಬರುವ ಅಪರಾಹ್ನದೊಳಗೆ ಹೊಸ ಜನಿವಾರರ ಹಾಕಿಕೊಳ್ಳಬೇಕು. ಆದ್ದರಿಂದ ನಾಲ್ಕು ಜನಿವಾರ ಧರಿಸಿದರೆ ಒಂದು ಜನಿವಾರ ಅಕಸ್ಮಾತ್ ಕಿತ್ತು ಹೋದರೂ ಅದೊಂದು ಜನಿವಾರ ತೆಗೆದರೆ ಲೋಪವಾಗುವುದಿಲ್ಲ. ಬೇಗ ಪುನಃ ಹೊಸ ಜನಿವಾರ ಹಾಕಿಕೊಳ್ಳುವ ಅವಸರ-ಅಗತ್ಯವೂ ಇರುವುದಿಲ್ಲ. ಹಾಗಾಗಿ ಕೆಲವರು ಮುಂಜಾಗ್ರತಾ ಕ್ರಮವಾಗಿ ನಾಲ್ಕನೇ ಜನಿವಾರವನ್ನು ಹಾಕಿಕೊಳ್ಳುವರು.
  • ಇತ್ತೀಚೆಗೆ ಅನಾರೋಗ್ಯದ ನಿಮಿತ್ತ ನೆಲದ ಮೇಲೆ ಕುಳಿತು ಊಟ ಮಾಡಲಾಗದೇ ಟೇಬಲ್ ಮೇಲೆ ಕುಳಿತು ಊಟ ಮಾಡುವುದು ಸಹಜವಾಗಿದೆ. ಈ ಲೋಪದ ಪರಿಹಾರಾರ್ಥವಾಗಿ ಕೆಲವು ಶ್ರೋತ್ರೀಯರು ಐದನೇ ಜನಿವಾರವನ್ನು ಧರಿಸುವುದು ರೂಢಿಯಲ್ಲಿದೆ.

ಹಾಗೆ ಜನಿವಾರ ಬದಲಾಯಿಸಿದ ನಂತರ ತಂದೆ ಇಲ್ಲದವರು ತಮ್ಮ ಪಿತೃಗಳಿಗೆ ತರ್ಪಣ ನೀಡಿದ ನಂತರ ಸಪ್ತ ಋಷಿ ಮಂಡಲಗಳಿಗೆ
ಸತ್ವದ ಹಿಟ್ಟಿನ ನೈವೇದ್ಯ ಮಾಡಿ, ಮಹಾ ಮಂಗಳಾರತಿ ಮಾಡುವ ಮೂಲಕ ಉಪಾಕರ್ಮ ವಿಧಿ ವಿಧಾನಗಳು ಸಂಪೂರ್ಣಗೊಳ್ಳುತ್ತದೆ.

ಹಳೆಯ ಜನಿವಾರವನ್ನು ಮಾರನೇಯ ದಿನ ಸಂಧ್ಯಾವಂದನೆ ಮಾಡಿದ ನಂತರ ಸೊಂಟದ ಕೆಳಗಿನ ಮೂಲಕ ತೆಗೆದು ಅದನ್ನು ಛಿನ್ನ ಮಾಡಿ (ಒಂದೆಳೆಯನ್ನು ಕತ್ತರಿಸಿ) ಕೆರೆ/ನದಿಯ ನೀರಿಗೋ ಇಲ್ಲವೇ ಯಾರೂ ತುಳಿಯದ ಜಾಗದಲ್ಲಿ ವಿಸರ್ಜಿಸುತ್ತಾರೆ.

ಉಪಾಕರ್ಮದ ಸತ್ವದ ಹಿಟ್ಟು

ಉಪಾಕರ್ಮದ ದಿನ ಮಾತ್ರವೇ ಸಿದ್ಧ ಪಡಿಸುವ ವಿಶೇಷವಾದ ಪ್ರಸಾದವೇ ಸತ್ವದ ಹಿಟ್ಟು. ಪೂಜೆಗೆ ಬಂದವರೆಲ್ಲರೂ ತಂದಿದ್ದ ಬಗೆ ಬಗೆಯ ಹಣ್ಣುಗಳನ್ನು ಸಣ್ಣಗೆ ಹೆಚ್ಚಿ, ಅಕ್ಕಿ ಹಿಟ್ಟು, ಬೆಲ್ಲ, ಜೇನುತುಪ್ಪಾ, ಹಾಲು, ಮೊಸರು, ತುಪ್ಪಾ ಮತ್ತು ಎಳ್ಳನ್ನು ಜೊತೆಗೆ ಕಾಯಿ ತುರಿ ಸೇರಿಸಿ ಹದವಾಗಿ ಬೆರೆಸಿದರೆ ಸತ್ವದ ಹಿಟ್ಟು ಸಿದ್ಧವಾಗುತ್ತದೆ. ಎಲ್ಲಾ ಪರಿಕರಗಳು ಹಸಿ ಪದಾರ್ಥಗಳಾಗಿದ್ದರೂ ತಿನ್ನಲು ಬಹಳ ರುಚಿಯಾಗಿತ್ತದೆ. ಸಾಧಾರಣವಾಗಿ ಬಂದವರೆಲ್ಲರೂ ಯಥಾ ಶಕ್ತಿ ತಾವು ತಂದ ಡಬ್ಬಿಗಳಲ್ಲಿ ಈ ಪ್ರಸಾದವನ್ನು ತುಂಬಿ ಕೊಂಡು ಮನೆಗೆ ಹೋಗಿ ತಮ್ಮ ಕುಟುಂಬದೊಡನೆ ಉಪಾಕರ್ಮದ ಪ್ರದಾದವಾಗಿ ಸ್ವೀಕರಿಸುವ ಪದ್ದತಿ ಇದೆ.

ಹೀಗೆ ಉಪಾಕರ್ಮ ಮುಗಿಸಿಕೊಂಡು ಮನೆಯೊಳಗೆ ನೇರವಾಗಿ ನುಗ್ಗುವಂತಿಲ್ಲ. ಉಪಾಕರ್ಮದ ನಂತರ ಮನೆಗ ಮುಂಬಾಗಿಲಿನ ಹೊಸಿಲಿನಲ್ಲಿ ನಿಂತರೆ ಒಳಗಿನಿಂದ ಹಿರಿಯ ಮುತ್ತೈದೆಯರು ಇಲ್ಲವೇ ಚಿಕ್ಕ ಹೆಣ್ಣು ಮಕ್ಕಳು ನೂತನ ಜನಿವಾರಧಾರಿಗಳಿಗೆ ಆರತಿ ಬೆಳಗಿ ಒಳಗೆ ಬರಮಾಡಿಕೊಳ್ಳುತ್ತಾರೆ. ನಂತರ ಜನಿವಾರ ಧಾರಿಗಳೆಲ್ಲರೂ ಆರತಿ ಬೆಳಗಿದವರಿಗೆ ಯಥಾ ಶಕ್ತಿ ಕಾಣಿಕೆಯನ್ನು ನೀಡುವ ಸಂಪ್ರದಾಯ ಕೆಲವರ ಮನೆಯಲ್ಲಿ ರೂಢಿಯಲ್ಲಿದೆ. ಅಂದಿನ ಉಪಹಾರಕ್ಕೆ ಜನಿವಾರದ ಸಂಕೇತವಾಗಿ ಉದ್ದುದ್ದನೆಯ ಒತ್ತು ಶ್ಯಾವಿಗೆಯನ್ನು ಮಾಡುವ ರೂಢಿ ಹಲವರ ಮನೆಯಲ್ಲಿದೆ.

ಸಮಯಾಭಾವದಿಂದಲೋ ಇಲ್ಲವೇ ನಾನಾ ಕಾರಣಗಳಿಂದ ಈ ರೀತಿಯಾಗಿ ಶಾಸ್ತ್ರೋಕ್ತವಾಗಿ ಉಪಾಕರ್ಮದ ನಿಯಮಿತ ವಿಧಿ ವಿಧಾನಗಳ ಮುಖಾಂತರ ಜನಿವಾರ ಬದಲಿಸಿಕೊಳ್ಳಲು ಆಗದಿದ್ದವರು ಮನೆಯಲ್ಲಿಯೇ ಬೆಳಿಗ್ಗೆ ಸಂಧ್ಯಾವಂಧನೆ ಮಾಡಿ ಜನಿವಾರಗಳಿಗೆ ಅರಿಶಿನ ಹಚ್ಚಿ ಕುಂಕುಮದ ಮೂಲಕ ಪೂಜೆ ಮಾಡಿ ಯಜ್ಞೋಪವೀತ ಧಾರಣೆಯ ಮಂತ್ರ ಪಠಿಸುತ್ತಾ ನೂತನ ಜನಿವಾರ ಧರಿಸಿ ಯಥಾ ಶಕ್ತಿ ಗಾಯತ್ರೀ ಮಂತ್ರ ಜಪಿಸಿ ಮಾರನೆಯ ದಿನ ಸಂಧ್ಯಾವಂದನೆ ಮಾಡಿದ ನಂತರ ಹಳೆಯ ಜನಿವಾರವನ್ನು ವಿಸರ್ಜಿಸ ಬೇಕು.

up2

ಜನಿವಾರ ಕೇವಲ ಬ್ರಾಹ್ಮಣ, ವೈಶ್ಯ ಮತ್ತು ಕ್ಷತ್ರಿಯರಿಗೇ ಮಾತ್ರವೇ ಮೀಸಲಾಗಿಲ್ಲದೇ, ಪ್ರತಿಯೊಬ್ಬ ಹಿಂದುವೂ ಜನಿವಾರವನ್ನು ಧರಿಸ ಬಹುದಾಗಿದೆ . ಅದಕ್ಕೆ ನಮ್ಮ ಶಾಸ್ತ್ರ ಸಂಪ್ರದಾಯಗಳಲ್ಲಿ ಯಾವುದೇ ಅಡೆತಡೆಗಳಿಲ್ಲ. ಆದರೆ ಜನಿವಾರವನ್ನು ಧರಿಸಿದ ಮೇಲೆ ಅದರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸ ಬೇಕಾಗುತ್ತದೆ. ಆಗಲೇ ಯಜ್ಞೋಪವೀತ ಧಾರಣೆಯ ಉದ್ದೇಶ ಸಫಲವಾಗುತ್ತದೆ. ಹಾಗೆ ಸರಿಯಾಗಿ ನಿಯಮಗಳನ್ನು ಪಾಲಿಸದ ವ್ಯಕ್ತಿಯ ಯಜ್ಞೋಪವೀತ ಕೇವಲ ನೂಲಿನ ಎಳೆಯಾಗಿ ಹೋಗಿ ಯಜ್ಞೋಪವೀತ ಫಲ ಆತನಿಗೆ ಲಭಿಸುವುದಿಲ್ಲ.

ಪರಮ ಜ್ಞಾನಿಗಳೆಂದು ಪ್ರಖ್ಯಾತರಾಗಿದ್ದ ಗೋವಿಂದ ಭಟ್ಟರು ಮುಸಲ್ಮಾನ ಬಾಲಕ ಶರೀಫ, ಮುಂದೆ ಸಂತ ಶಿಶುನಾಳ ಶರೀಫರು ಎಂದೇ ಖ್ಯಾತಿಯಾದವರಿಗೆ ಜನಿವಾರ ಧಾರಣೆ ಮಾಡಿಸಿ ಮಂತ್ರೋಪದೇಶ ಮಾಡಿದ್ದು ನಮಗೆಲ್ಲರಿಗೂ ತಿಳಿದ ವಿಷಯವೇ ಆಗಿದೆ. ಅದನ್ನೇ ಷರೀಫರು ಹಾಕಿದ ಜನಿವಾರವಾ, ಸಧ್ಗುರುನಾಥ ಹಾಕಿದ ಜನಿವಾರವಾ.. ಎಂಬ ಹಾಡನ್ನು ರಚಿಸಿ ಮುಂದೆ ಅದು ದಿ. ಸಿ. ಅಶ್ವಥ್ ಅವರ ಕಂಠ ಸಿರಿಯಲ್ಲಿ ಜನಪ್ರಿಯವಾಗಿದೆ.

ಇಂದಿನ ಕಾಲದಲ್ಲಿ ಹೇಳೋದು ಶಾಸ್ತ್ರ. ತಿನ್ನೋದು ಬದನೇ ಕಾಯಿ ಎಂಬಂತೆ ಹೆಸರಿಗಷ್ಟೇ ಯಜ್ಞೋಪವೀತ ಧಾರಣೆ ಮಾಡಿ ಯಾವುದೇ ಆಚಾರ ವಿಚಾರಗಳನ್ನು ಪಾಲಿಸದವರೇ ಹೆಚ್ಚಾಗಿರುವಾಗ ಈ ಉಪಾಕರ್ಮ ಎನ್ನುವುದು ಒಂದು ರೀತಿಯ ಕಂದಾಚಾರವಾಗಿ ಮಾರ್ಪಾಡಾಗಿ ಹೋಗಿರುವುದು ವಿಷಾಧನೀಯವೇ ಸರಿ.

ಏನಂತೀರೀ?

ನಿಮ್ಮವನೇ ಉಮಾಸುತ

32 thoughts on “ಉಪಾಕರ್ಮ

  1. Amazingly and intricately written.Honestly I didn’t know 99% of it.Thanks for posting such a well researched article.I want everyone to read and understand the customs we are supposed to follow.

    Liked by 1 person

  2. ತುಂಬಾ ಚೆನ್ನಾಗಿ ಸಾಮಾನ್ಯರಿಗೂ ಅರ್ಥವಾಗುವಂತೆ ಅರ್ಥವತ್ತಾಗಿ ಈ ಉಪಾಕರ್ಮ ಧ್ಯೇಯ, ವಿಧಿ ನಿಯಮಗಳನ್ನು ವಿವರಿಸಿದ್ದೀರಿ. ಧನ್ಯವಾದಗಳು.

    Liked by 1 person

  3. ತುಂಬಾ ಚೆನ್ನಾಗಿದೆ, ಅನೇಕ ಹೊಸ ಮಾಹಿತಿಯನ್ನು ನೀಡಿದ್ದಕ್ಕೆ ಧನ್ಯವಾದಗಳು. ಕೆಲವರು ಪಂಕ್ತಿ ದೋಷ ಪರಿ‌ಹಾರಾರ್ಥಕ್ಕಾಗಿ ಐದನೇಯ ಯಜ್ಞೋಪವೀತ ಧರಿಸುತ್ತಾರೆ. ಈಗ ಎಲ್ಲೆಡೆ ಯಂತ್ರದಿಂದ ತಯಾರಾದ ಯಜ್ಞೋಪವೀತ ದೊರೆಯುತ್ತದೆ. ಹಿಂದೆ ತಕ್ಕಲಿಯಲ್ಲಿ ಮಾಡಿದ ಅಥವಾ ಕೈಯಿಂದಲೇ ಹೊಸೆದ ಜನಿವಾರ ಸಿಗುತ್ತಿತ್ತು. ತಂತು ದೇವತೆಗಳ ಆವಾಹನೆಯಾದ ಸಂಸ್ಕಾರಗೊಂಡ ಜನಿವಾರ ಸಿಗುವುದು ಈ ದಿನಗಳಲ್ಲಿಅಪರೂಪವೇ ಸರಿ.

    Liked by 1 person

  4. ಸೃಷ್ಟಿ, ಸ್ಥಿತಿ, ಲಯ… ಗಳು ತ್ರಿಗುಣಗಳು. ತ್ರಿಗುಣ ಸಾಧನೆಯೇ ಜನಿವಾರ ಧಾರಣೆ -ಆಚರಣೆಯ- ಸಿದ್ಧಾಂತ ಈ ಮೂರೂ ತತ್ವಗಳನ್ನು ತಿಳಿಸುವದೇ ಗಾಯತ್ರಿ ಮಂತ್ರ.
    ಸವಿತು: ಅಂದರೆ ಅಹಂ ಒಳಗೊಂಡ ಆತ್ಮ.ಸೂರ್ಯತತ್ವ. ಪ್ರತಿಯೊಂದು ಜೀವಿಯಲ್ಲಿರುವದು.

    ಸವಿತುರ್ವರೇಣ್ಯ … ನರ.
    ನರನವರೆಗೆ ಅವತೀರ್ಣಗೊಂಡ ಪ್ರಜ್ಞೆಯೇ ನಾರಾಯಣ.
    ವ್ಯಕ್ತಿಭಾವ ಲಯವಾಗಿ ತತ್ವಭಾವ ಅಳವಡುವದೇ ನರನಿಂದ ನಾರಾಯಣ ಪಯಣ.
    ಉತ್ತಮ ಲೇಖನ
    ಧನ್ಯವಾದಗಳು

    Liked by 1 person

  5. Very informative. Need such information at this point of time to youngsters. Now a days, even elders do not know / hesitate to practice / teach to their children. Samskara cannot be learner by only reading. It is the rituals which we teach and practice in our daily lives.
    Expecting more articles like this.

    Liked by 1 person

    1. ಧನ್ಯೋಸ್ಮಿ. ನನ್ನ ಬ್ಯಾಗ್ನಲ್ಲಿ ಬಹುತೇಕ ಎಲ್ಲಾ ಹಬ್ಬಗಳ ಆಚರಣೆ ಮತ್ತು ವೈಶಿಷ್ಟ್ಯಗಳ ಬಗ್ಗೆ ಬರೆದಿದ್ದೇನೆ. ಓದಿ ನಿಮ್ಮ ಅಭಿಪ್ರಾಯ ತಿಳಿಸಿ

      Like

    1. ಸಾಧಾರಣವಾಗಿ ನಿತ್ಯ ಸಂಧ್ಯಾವಂದನೆ ಮಾಡುವವರು ಮಾರನೇಯ ದಿನ ಪ್ತಾತರ್ ಸಂಧ್ಯಾವಂದನೆ ಮುಗಿಸಿದ ನಂತರ ಹಳೇಯ ಜನಿವಾರ ವಿಸರ್ಜಸುತ್ತಾರೆ. ನಿತ್ಯ ಸಂಧ್ಯಾವಂದನೆ ಮಾಡವವರು ಅಂದೇ ವಿಸರ್ಜನೆ ಮಾಡುತ್ತಾರೆ

      Like

  6. ಉಪಾಕರ್ಮದ ಉದ್ದೇಶ, ಅರ್ಥ,ಮಹತ್ವ, ಮಂತ್ರಗಳ ಅರ್ಥ ಉಪಯೋಗ ಇವುಗಳನ್ನು ತುಂಬಾ ಅರ್ಥಪೂರ್ಣವಾಗಿ ವಿವರಿಸಿದ್ದೀರಿ. ನೀವು ಯಾವುದೇ ವಿಚಾರವನ್ನು ತಿಳಿಸಿದರೂ ತುಂಬಾ ವಿವರವಾಗಿ ಎಲ್ಲರಿಗೂ ಅರ್ಥವಾಗುವಂತೆ ತಿಳಿಸುವುದು ನಿಮ್ಮ ವೈಶಿಷ್ಟ್ಯ . ಹೃತ್ಪೂರ್ವಕ ವಂದನೆಗಳು.

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s