ಹಬ್ಬ ಹರಿದಿನಗಳೆಂದರೆ ದೇವರು ಭಕ್ತಿ , ಪೂಜೆ ಒಂದು ಕಡೆಯಾದರೇ, ದೇವರ ನೈವೇದ್ಯದ (https://wp.me/paLWvR-3H) ಹೆಸರಿನಲ್ಲಿ ಬಗೆ ಬಗೆಯ ಭಕ್ಷ್ಕಗಳನ್ನು ತಯಾರಿಸಿ ದೇವರಿಗೆ ನಿವೇದಿಸಿ ನಂತರ ಪ್ರಸಾದ ರೂಪದಲ್ಲಿ ಅದನ್ನು ಸೇವಿಸುವುದು ನಡೆದು ಬಂದ ಸಂಪ್ರದಾಯ. ದಿನ ನಿತ್ಯ ತಟ್ಟೆಗಳಲ್ಲಿ ಸೇವಿಸಿದರೆ ವಿಶೇಷ ದಿನಗಳಂದು ಬಾಳೆಎಲೆಯ ಮೇಲೆ ಊಟ ಮಾಡುವುದೇ ಒಂದು ವಿಸಿಷ್ಟ ಅನುಭವ. ಮದುವೆ ಮುಂಜಿ , ನಾಮಕರಣ ಮುಂತಾದ ಶುಭ ಕಾರ್ಯಕ್ರಮವಿರಲೀ ಇಲ್ಲವೇ ತಿಥಿಯಂತ ಅಶುಭ ಕಾರ್ಯಕ್ರಮಗಳಲ್ಲಿ ಹಲವಾರು ಜನರಿಗೆ ಊಟ ಬಡಿಸಲು ಅಷ್ಟೊಂದು ತಟ್ಟೆಗಳನ್ನು ಎಲ್ಲಿಂದ ತರಲು ಸಾಧ್ಯ? ಅಂತಹ ಸಮಯದಲ್ಲಿ ಬಾಳೆಎಲೆ ಸುಲಭವಾಗಿ ಸಿಗುವ ಸಾಧನವಾಗಿದೆ. ಬಿಸಿ ಬಿಸಿಯಾದ ಆಹಾರವನ್ನು ಬಾಳೆ ಎಲೆಯ ಮೇಲೆ ಹರಡಿ ಅದರ ಮೇಲೆ ಒಂದು ಮಿಳ್ಳೆ ತುಪ್ಪಾ ಜೊತೆಗೆ ಸಾರು ಇಲ್ಲವೇ ಹುಳಿಯನ್ನು ಕಲಿಸಿ ಸೊರ್ ಸೊರ್ ಎಂದು ತಿನ್ನುವಾಗ ಆಗುವ ಮಜವೇ ಬೇರೆ.ಆ ಮಜವನ್ನು ರಸವತ್ತಾಗಿ ವಿವರಿಸುವುದಕ್ಕಿಂತ ಅನುಭವಿಸಿದರೇ ಹೆಚ್ಚಿನ ಖುಷಿ ಕೊಡುತ್ತದೆ. ಅದಕ್ಕಾಗಿಯೇ ಇಂದು ಅನೇಕ ಹೋಟೆಲ್ಗಳಲ್ಲಿ ತಟ್ಟೆಯ ಮೇಲೆ ಅಲಂಕಾರಿಕವಾಗಿ ಬಾಳೇ ಎಲೆಗಳನ್ನು ಕತ್ತರಿಸಿ ಹರಡಿ ತಮ್ಮ ಗ್ರಾಹಕರಿಗೆ ಬಾಳೇ ಎಲೆ ಊಟದ ಅನುಭವವನ್ನು ಕೊಟ್ಟರೇ, ಇನ್ನೂ ಅನೇಕ ಹೋಟೇಲ್ಗಳು ಬಾಳೇಎಲೆಯ ಊಟದ ಹೋಟೆಲ್ ಎಂದೇ ಖ್ಯಾತಿ ಪಡೆದು ಕೊಂಡಿವೆ. ಈ ರೀತಿಯಾಗಿ ಗ್ರಾಹಕರನ್ನು ಮರಳು ಮಾಡಿ ಸ್ವಾಮಿ ಕಾರ್ಯದ ಜೊತೆಗೆ ಸ್ವಹಿತಾಸಕ್ತಿಯ ಕಾರ್ಯವನ್ನು ಸಾಧಿಸುತ್ತಿದ್ದಾರೆ ಎಂದರೂ ತಪ್ಪಾಗಲಾರದು. ಆದರೆ ಈ ಬಾಳೇ ಎಲೆಯ ಊಟ ಕೇವಲ ರುಚಿಯನ್ನು ಹೆಚ್ಚಿಸುವುದಷ್ಟೇ ಅಲ್ಲದೇ, ನಮ್ಮ ದೇಹಕ್ಕೆ ಆರೋಗ್ಯಕರವೂ ಹೌದು. ಇದರ ಇತರೇ ಅನುಕೂಲಗಳು ಈ ರೀತಿಯಾಗಿವೆ.
ಸಾಮಾನ್ಯವಾಗಿ ಬಾಳೆ ಎಲೆಯ ಮೇಲೆ ಬಿಸಿ ಬಿಸಿಯಾದ ಆಹಾರವನ್ನು ಬಡಿಸಿದಾಗ ಬಾಳೆ ಎಲೆ ಕಪ್ಪಾಗುವುದನ್ನು ಗಮನಿಸಿರಬಹುದು. ಬಾಳೆ ಎಲೆಯ ಮೇಲ್ಪದರದಲ್ಲಿ ನೈಸರ್ಗಿಕವಾದ ಕ್ಯಾಟೆಚಿನ್ ಗ್ಯಾಲೆಟ್ ಎಂಬ ಪಾಲಿಫಿನಾಲ್ ಅಂಶ ಆವರಿಸಿರುತ್ತದೆ. ಬಿಸಿಯಾದ ಆಹಾರವನ್ನು ಇದರ ಮೇಲೆ ಹಾಕಿದಾಗ ಇದು ಆಹಾರದೊಂದಿಗೆ ಬೆರೆತು ನಮ್ಮ ಹೊಟ್ಟೆ ಸೇರುತ್ತದೆ. ಇದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ. ಅದೇ ರೀತಿ ಬಾಳೆಎಲೆಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣವಿದ್ದು, ಎಲೆಯ ಮೇಲಿನ ಮೇಣದ ರೀತಿಯ ಪದರವಿದ್ದು , ಜಲನಿರೋಧಕ ಶಕ್ತಿಯನ್ನು ಹೊಂದಿದ್ದು, ಎಲೆ ಕೊಳಕಾಗದಂತೆ ನೋಡಿಕೊಳ್ಳುವುದಲ್ಲದೇ, ಕೀಟಾಣುಗಳನ್ನು ಕೊಲ್ಲುವ ಕೆಲಸವನ್ನೂ ಮಾಡುತ್ತದೆ. ಇದರಿಂದಾಗಿ ಊಟ ಮಾಡುವರರ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಬಾಳೆ ಎಲೆಯಲ್ಲಿ ಅನೇಕ ಪೌಷ್ಠಿಕ ಸತ್ವವಿದ್ದು ಎಲೆಯಲ್ಲಿ ಎಲೆಗೆ ಬಿಸಿ ಆಹಾರ ಹಾಕುವುದರಿಂದ ಆ ಸತ್ವಗಳು ಆಹಾರದ ಜೊತೆ ಬೆರೆತು ಆರೋಗ್ಯ ವೃದ್ಧಿಯಾಗುತ್ತದೆ.
ಒಂದು ಕಾಲದಲ್ಲಿ ಯಥೇಚ್ಚವಾಗಿ ಸಿಗುತ್ತಿದ್ದ ನೀರಿಗೆ ಇಂದು ಹಾಹಾಕಾರವೆದ್ದಿದ್ದು, ಅನೇಕ ಕಡೆಯಲ್ಲಿ ಕುಡಿಯಲು ನೀರೇ ಸಿಗದಿರುವಂತಹ ಸಂಧರ್ಭದಲ್ಲಿ ಇನ್ನು ಪಾತ್ರೆ ಪಡಗಗಳನ್ನು ಹೇಗೆ ತೊಳೆಯಲು ಎಲ್ಲಿಂದ ನೀರು ತರಲು ಸಾಧ್ಯ? ತಟ್ಟೆಗಳನ್ನು ಶುದ್ಧೀಕರಿಸಲು ಮಾರ್ಜಕಗಳನ್ನು ಬಳೆಸುವುದು ಸಹಜ. ಒಂದು ಪಕ್ಷ ಆ ಮಾರ್ಜಕಗಳನ್ನು ನೀರಿನ ಅಭಾವದಿಂದಾಗಿ ಸರಿಯಾಗಿ ತೊಳೆಯದಿದ್ದ ಪಕ್ಷದಲ್ಲಿ ಅದು ನೇರವಾಗಿ ಊಟ ಮಾಡುವವರ ಹೊಟ್ಟೆಗೆ ಸೇರಿ ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಅದರೆ ಅದೇ ಬಾಳೆ ಎಲೆಗಳು ಕೇವಲ ಒಮ್ಮೆ ಬಳೆಸಿ ಬಿಸಾಡುವುದರಿಂದ ತೊಳೆಯುವ ಸಮಸ್ಯೆಗಳೂ ಇರುವುದಿಲ್ಲ. ತಿಂದು ಬಿಸಾಡಿದ ಅದೇ ಬಾಳೇ ಎಲೆಗಳನ್ನೇ ದನಕರುಗಳಿಗೆ ಹಾಕಿದಲ್ಲಿ ಉತ್ತಮ ಮೇವು ಆಗಬಲ್ಲದು. ಇಲ್ಲವೇ ಅದೇ ಎಲೆಗಳನ್ನು ತಿಪ್ಪೆಯಲ್ಲಿ ಬಿಸಾಡಿದರೇ ಕೆಲವೇ ಕೆಲವು ದಿನಗಳಲ್ಲಿ ಜೈವಿಕವಾಗಿ ಕರಗಿ ಹೋಗಿ ಉತ್ತಮ ರಸಗೊಬ್ಬರವಾಗಬಲ್ಲದು. ಇದೇ ಕಾರಣಕ್ಕಾಗಿಯೇ ಹಿಂದೆಲ್ಲಾ ಎಲ್ಲರ ಮನೆಯ ಹಿತ್ತಲಿನಲ್ಲಿ ಬಾಳೇಗಿಡಗಳನ್ನು ನೆಟ್ಟು ತಮ್ಮ ಮನೆಯಲ್ಲಿ ಬಳೆಸಿದ ಅಷ್ಟೂ ತ್ರಾಜ್ಯ ನೀರು ನೇರವಾಗಿ ಆ ಬಾಳೇಗಿಡಗಳಿಗೇ ತಲುಪುವಂತೆ ವ್ಯವಸ್ಥೆ ಮಾಡಿರುತ್ತಿದ್ದರು.
ತೆಂಗಿನ ಮರದಂತೆ ಬಾಳೇ ಗಿಡವೂ ಸಹಾ ಒಂದು ರೀತಿಯ ಮರಿ ಕಲ್ಪವೃಕ್ಷವೇ ಸರಿ. ಬಾಳೆ ಗಿಡದ ಪ್ರತಿಯೊಂದು ಭಾಗವೂ ಸಂಪೂರ್ಣವಾಗಿ ಉಪಯೋಗಕ್ಕೆ ಬರುತ್ತದೆ. ಬಾಳೆ ಎಲೆ, ಬಾಳೆ ಹಣ್ಣು, ಬಾಳೇ ಹೂವಿನಿಂದ ರುಚಿಕರವಾದ ಗೊಜ್ಜನ್ನು ತಯಾರಿಸುತ್ತಾರೆ. ಇನ್ನು ಬಾಳೇ ದಿಂಡಿನಿಂದ ಪಲ್ಯ ಮತ್ತು ಕೋಸಂಬರಿ ತಯಾರಿಸಲು ಬಳಸುತ್ತಾರೆ. ಮೂತ್ರಪಿಂಡ/ಕೋಶ ಸಂಬಂಧಿತ ಖಾಯಿಲೆಗಳಿಗೆ ಬಾಳೇದಿಂಡು ರಾಮಬಾಣವೇ ಸರಿ. ಕಿಡ್ನಿಯಲ್ಲಿ ಕಲ್ಲುಗಳು ಇದ್ದರೆ ಅದನ್ನು ಕರಗಿಸುತ್ತದೆ. ಬಾಳೆ ದಿಂಡಿನ ಪಲ್ಯವನ್ನು ತಿಂಗಳಿಗೊಮ್ಮೆ ತಿಂದಲ್ಲಿ ಕರುಳಿನಲ್ಲಿರುವ ವಿಷ ಕ್ರಿಮಿಗಳು ನಾಶವಾಗುತ್ತದೆ. ಬಾಳೇದಿಂಡಿನ ನಾರು ದೇಹಕ್ಕೆ ಅಗತ್ಯವಾದ ನಾರಿನಂಶವನ್ನು ಹೆಚ್ಚಿಸುತ್ತದೆ. ಬಾಳೇ ದಿಂಡಿನ ಪಲ್ಯ ಅಥವಾ ಕೋಸಂಬರಿಯ ಹೊರತಾಗಿ ಜ್ಯೂಸ್ ಮುಖಾಂತರವೂ ಸೇವಿಸ ಬಹುದಾಗಿದೆ. ಬಾಳೆದಿಂಡು ಮತ್ತು ಬಾಳೇ ಕಾಯಿಗಳು ಪಚನಕ್ರಿಯೆಗೆ ಅತ್ಯತ್ತಮ ಆಹಾರವಾಗಿರುವುದರಿಂದ ಶ್ರಾಧ್ಧದ ಅಡುಗೆಯಲ್ಲಿ ಕಡ್ದಾಯವಾಗಿ ಬಾಳೆ ಎಲೆಯ ಊಟ ಮತ್ತು ಬಾಳೇ ದಿಂಡನದ್ದೋ ಇಲ್ಲವೇ ಬಾಳೇ ಕಾಯಿಯ ಪಲ್ಯವನ್ನು ಮಾಡಿರುತ್ತಾರೆ. ಬಾಳೇ ಕಾಯಿಯಿಂದ ರುಚಿಕರವಾದ ಪಲ್ಯವನ್ನಲ್ಲದೇ ಗರಿ ಗರಿಯಾದ ಉಪ್ಪೇರಿ (ಚಿಪ್ಸ್) ಕೂಡಾ ತಯಾರಿಸುತ್ತಾರೆ. ಇನ್ನು ಬಾಳೇ ನಾರನ್ನು ಹೂವು ಕಟ್ಟಲು ಬಳೆಸಿದರೆ, ಬಾಳೆ ಕಂದು ಮತ್ತು ಬಾಳೇ ಪಟ್ಟೆಗಳು ಹಬ್ಬ ಹರಿದಿನಗಳಲ್ಲಿ ಮತ್ತು ಸಭೆ ಸಮಾರಂಭಗಳಲ್ಲಿ ಆಲಂಕಾರಿಕವಾಗಿ ಬಳಸಲ್ಪಡುತ್ತದೆ. ಉದ್ದುದ್ದನೆಯ ಬಾಳೇದಿಂಡುಗಳನ್ನು ಒಟ್ಟಿಗೆ ಜೋಡಿಸಿ, ಸೇರಿಸಿ ಕಟ್ಟಿ, ತೆಪ್ಪವಾಗಿಯೂ ಬಳೆಸಿ ನದಿ, ಕೆರೆ ಕುಂಟೆಗಳನ್ನು ದಾಟುವ ರೂಢಿ ಅನೇಕ ಕಡೆಗಳಲ್ಲಿವೆ.
ಬಾಳೆ ಹಣ್ಣಿನ ಪ್ರಯೋಜನಗಳು
- ಬಾಳೆ ಹಣ್ಣಿನಲ್ಲಿ ಕಾರ್ಬೋಹೈಡ್ರೇಟ್, ನಾರಿನಾಂಶ, ವಿಟಮಿನ್ ಬಿ6, ಖನಿಜಾಂಶಗಳಾದ ಪೊಟ್ಯಾಶಿಯಂ, ಮೆಗ್ನಿಸಿಯಂ ಗಳನ್ನು ಹೇರಳವಾಗಿ ಹೊಂದಿರುವ ಕಾರಣ ಒಂದು ಸಂಪೂರ್ಣ ಬಾಳೆ ಹಣ್ಣನ್ನು ತಿಂದರೆ 90 ನಿಮಿಷ ವ್ಯಾಯಾಮ ಮಾಡಿದಾಗ ಸಿಗುವಷ್ಟು ಶಕ್ತಿ ಸಿಗುತ್ತದೆ. ಕೇವಲ ಶಕ್ತಿ ಮಾತ್ರವಲ್ಲದೇ ದೇಹ ಸಧೃಡವಾಗುವ ಜೊತೆಗೆ ಆರೋಗ್ಯವನ್ನೂ ಸುಧಾರಿಸುತ್ತದೆ.
- ಬಾಳೆಹಣ್ಣಲ್ಲಿ ಟ್ರಿಪ್ಟೋಫಾನ್ ಎಂಬ ಅಮೀನೋ ಆಸಿಡ್ ಮತ್ತು ವಿಟಮಿನ್ ಬಿ-6 ಇರುತ್ತವೆ. ಇವೆರಡೂ ಸೇರಿ ನಮ್ಮ ದೇಹದಲ್ಲಿ ಸೆರಟೋನಿನ್ ಎನ್ನುವ ರಾಸಾಯನಿಕವನ್ನು ಹೆಚ್ಚಿಸುವುದರಿಂದ ಖಿನ್ನತೆ, ಬೇಜಾರು ಮುಂತಾದವು ಕಡಿಮೆಯಾಗುತ್ತವೆ.ಇನ್ನು ಊಟವಾದ ನಂತರ ಬಾಳೆಹಣ್ಣು ತಿನ್ನುವುದರಿಂದ ಆಹಾರ ಚೆನ್ನಾಗಿ ಪಚನವಾಗುವದಲ್ಲದೇ ವೀರ್ಯವನ್ನೂ ವೃದ್ಧಿ ಮಾಡುತ್ತದೆ. ಇದೇ ಕಾರಣಕ್ಕಾಗಿ ಪ್ರತೀ ಸಮಾರಂಭಗಳಲ್ಲಿ ಊಟವಾದ ನಂತರ ಎಲೆ ಆಡಿಕೆಯೊಂದಿಗೆ ಬಾಳೇ ಹಣ್ಣನ್ನೂ ಸಹಾ ಕೊಡುವ ಸಂಪ್ರದಾಯವಿದೆ.
- ಬಾಳೆಹಣ್ಣಿನಲ್ಲಿ ಟ್ರಿಸ್ಟೋಫಾನ್ ಎಂಬ ಪ್ರೋಟೀನ್ ಇದ್ದು, ಶರೀರವು ಈ ಪ್ರೋಟೀನನ್ನು ಸೆರಟೋನಿನ್ ಆಗಿ ಪರಿವರ್ತಿಸುತ್ತದೆ. ಈ ಸೆರಟೋನಿನ್ ಶರೀರವನ್ನು ವಿಶ್ರಾಂತಿಯನ್ನು ಕೊಡುವುದಲ್ಲದೇ ಸ್ಫೂರ್ತಿಯನ್ನೂ ನೀಡುತ್ತದೆ. ಇದೇ ಕಾರಣಕ್ಕಾಗಿಯೇ ಬಹುತೇಕ ಟಿನಿಸ್ ಆಟಗಾರರು ತಮ್ಮ ಆಟದ ಮಧ್ಯೆ ಮಧ್ಯೆ ಒಂದೊಂದು ಚೂರು ಚೂರು ಬಾಳೆ ಹಣ್ಣನ್ನು ತಿನ್ನುತ್ತಾ ಹೆಚ್ಚಿನ ಚೈತನ್ಯ ಪಡೆದು ಕೊಳ್ಳುತ್ತಿರುತ್ತಾರೆ.
- ಪ್ರತಿನಿತ್ಯ ಬಾಳೇ ಹಣ್ಣುಗಳನ್ನು ಸೇವಿಸುವುದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ. ಬಿಪಿ ಇರುವವರಿಗೆ ಬಾಳೇಹಣ್ಣು ಉತ್ತಮ ಫಲಕಾರಿ.
ಇತ್ತೀಚೆಗೆ ಎಲ್ಲಾ ಕಡೆಯಲ್ಲೂ ಪ್ಲಾಸ್ಟಿಕ್ ಮಯವಾಗಿ ಅದರಿಂದ ದೇಹಕ್ಕೆ ಮತ್ತು ಪರಿಸರಕ್ಕೆ ನಾನಾ ರೀತಿಯ ದುಷ್ಪರಿಣಾಮಗಳನ್ನು ಉಂಟು ಮಾಡುತ್ತಿರುವುದು ನಮಗೆಲ್ಲಾ ತಿಳಿದಿರುವಂತಹ ವಿಷಯವಾಗಿದೆ. ಬಾಳೆಯ ಉತ್ಪನ್ನಗಳು ಪ್ಲಾಸ್ಟಿಕ್ಕಿಗೆ ಪರ್ಯಾಯವಾಗಿ ಉಪಯೋಗಿಸಬಹುದಾಗಿದೆ. ಈಗಾಗಲೇ ಅನೇಕ ಕಡೆ ಊಟಕ್ಕೆ ಸಣ್ಣ ಸಣ್ಣ ಬಟ್ಟಲುಗಳ ಬದಲಾಗಿ ಬಾಳೇ ಎಲೆಯ ದೊನ್ನೆಗಳನ್ನು ಬಳೆಸುತ್ತಿದ್ದಾರೆ. ಅದೇ ರೀತಿ ಹೂವು ಹಣ್ಣುಗಳ ಪ್ಯಾಕಿಂಗ್ ಗಳಲ್ಲಿಯೂ ಬಾಳೇ ಎಲೆಗಳನ್ನು ಬಳೆಸುತ್ತಿದ್ದಾರೆ.
ಸಾಮಾನ್ಯವಾಗಿ ಕೇರಳದ ಕಡೆಯವರ ತಲೆಕೂದಲು ನೀಳವಾಗಿಯೂ ಮತ್ತು ಕಪ್ಪಗೆ ಇರುವುದು ನಮಗೆಲ್ಲಾ ಗೊತ್ತಿದೆಯಷ್ಟೇ. ಅವರ ಕಪ್ಪಾದ ಕೇಶರಾಶಿಯ ಹಿಂದಿನ ರಹಸ್ಯ ಕೊಬ್ಬರೀ ಎಣ್ಣೆಯ ಜೊತೆ ಇದೇ ಬಾಳೆ ಎಂದರೆ ಆಶ್ವರ್ಯವಾದರೂ ಸತ್ಯವೇ ಸರಿ.
ಕೇರಳದ ಆಹಾರ ಪದ್ದತಿಗಳಲ್ಲಿ ಬಾಳೆ ಮತ್ತು ಬಾಳೆಯ ಉತ್ಪನ್ನಗಳು ಹಾಸು ಹೊಕ್ಕಾಗಿರುವುದರಿಂದ ಬಾಳೆಯಲ್ಲಿರುವ ಪೋಷಕಾಂಶಗಳಿಗೆ ಕೂದಲುಗಳು ಬೆಳ್ಳಗಾಗುವುದನ್ನು ನಿವಾರಿಸುತ್ತದೆ. ಪ್ರತಿದಿನ ಬಾಳೆ ಎಲೆ ಯಲ್ಲಿ ಊಟ ಮಾಡುವುದರಿಂದ ಮತ್ತು ಬಾಳೇಯ ಪದಾರ್ಥಗಳನ್ನು ಸೇವಿಸುವುದರಿಂದ ಬೆಳ್ಳಗಾಗಿರುವ ಕೂದಲು ಹೊಳಪು ಪಡೆದು ಮತ್ತೆ ಕಪ್ಪುಬಣ್ಣಕ್ಕೆ ತಿರುಗುತ್ತದೆ ಎಂದು ವೈಜ್ಞಾನಿಕವಾಗಿ ಧೃಢೀಕರಿಸಲ್ಪಟ್ಟಿದೆ.
ಇನ್ನು ಬಾಳೆಎಲೆಯಲ್ಲಿ ವಿಟಮಿನ್ ಡಿ ಅಂಶ ಹೆಚ್ಚಾಗಿರುವ ಕಾರಣ ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳು ದೂರವಾಗುತ್ತವೆ. ಬಾಳೆ ಎಲೆಯೊಂದಿಗೆ ಕೊಬ್ಬರಿ ಎಣ್ಣೆಯನ್ನು ಮೈ ಕೈಗಳಿಗೆ ಸವರುವ ಮೂಲಕ ಚರ್ಮ ರೋಗವನ್ನು ತಡೆಗಟ್ಟಬಹುದಾಗಿದೆ. ಇದೇ ಕಾರಣಕ್ಕಾಗಿಯೇ ಎಳೇ ಮಕ್ಕಳಿಗೆ ಎಣ್ಣೆ ಹಚ್ಚಿ ಬಾಳೇ ಎಲೆಯ ಮೇಲೆ ಮಲಗಿಸಿ ಬೆಳಗಿನ ಎಳೇ ಬಿಸಿಲಿಗೆ ಒಡ್ಡುವುದರಿಂದ, ಹಸುಗೂಸಿನ ದೇಹದಲ್ಲಿ ವಿಟಮಿನ್ ಡಿ ಅಂಶ ಹೆಚ್ಚಾಗುತ್ತದೆ. ವಿಟಮಿನ್ ಡಿ ಹೆಚ್ಚಾಗುವುದರಿಂದ ತಲೆ ಕೂದಲು ಉದುರುವ ಸಮಸ್ಯೆಯೂ ಕಡಿಮೆಯಾಗುತ್ತದೆ.
ದೇಹದ ಆರೋಗ್ಯಕ್ಕೆ, ಕೇಶ ತೈಲಗಳಿಗೆ ಮತ್ತು ಸೌಂದರ್ಯವರ್ಧಕಗಳಿಗೆ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುವ ಬದಲು ಅತ್ಯಂತ ಸುಲಭವಾಗಿ ಬಾಳೇ ಎಲೆಯ ಊಟ ಮತ್ತು ಅದರ ಉತ್ಪನ್ನಗಳನ್ನು ಮೇಲೆ ತಿಳಿಸಿರುವಂತೆ ಬಳಸುತ್ತಾ ಖರ್ಚಿಲ್ಲದೇ ಆರೋಗ್ಯಕರವಾಗಿರಲೂ ಬಹುದು ಮತ್ತು ನೀರನ್ನೂ ಉಳಿಸಬಹುದು. ಇದರ ಮೂಲಕ ಸ್ವಚ್ಚ ಭಾರತ ಆಭಿಯಾನವನ್ನು ಅಕ್ಷರಶಃ ಪಾಲಿಸಲೂ ಬಹುದು.
ಬಾಳ ಸಂಜೀವಿನಿಯಾದಂತಹ ಬಾಳೇ ಗಿಡದ ಮಹತ್ವವನ್ನು ಚೆನ್ನಾಗಿಯೇ ಅರಿತಿದ್ದ ನಮ್ಮ ಪೂರ್ವಜರು ಅಚಾರ ವಿಚಾರ ಮತ್ತು ಸಂಪ್ರದಾಯದ ಮುಖಾಂತರ ಎಷ್ಟು ಚೆನ್ನಾಗಿ ಅದನ್ನು ದಿನ ನಿತ್ಯವೂ ಒಂದಲ್ಲಾ ಒಂದು ರೂಪದಲ್ಲಿ ಸೇವಿಸುತ್ತಾ ಅದರ ಪ್ರಯೋಜನಗಳನ್ನು ಪಡೆದವಂತೆ ರೂಢಿಗೆ ತಂದಿದ್ದರು. ಏನೇ ಹೇಳಿ, ನಮ್ಮ ಪ್ರತೀ ಸಂಪ್ರದಾಯ, ರೂಢಿಗಳು ಮತ್ತು ಅಚಾರ ವಿಚಾರಗಳ ಹಿಂದೆ ನಾನಾ ರೀತಿಯ ವೈಜ್ಞಾನಿಕ ಕಾರಣಗಳು ಮತ್ತು ಪ್ರಯೋಜನಗಳು ಇದ್ದೇ ಇರುತ್ತವೆ. ನಾವುಗಳು ತಾತ್ಸಾರ ಮಾಡದೇ, ಅದನ್ನು ಅರ್ಥ ಮಾಡಿತೊಂಡು ಅದರ ಸದುಪಯೋಗ ಪಡೆದು ಕೊಳ್ಳಬೇಕಷ್ಟೇ.
ಏನಂತೀರೀ?
ಚೆನ್ನಾಗಿದೆ ನಿಮ್ಮ ಲೇಖನ.. ಉಪಯುಕ್ತ ಮಾಹಿತಿಗಳನ್ನು ನೀಡಿದ್ದೀರಿ. ಧನ್ಯವಾದಗಳು..
LikeLiked by 1 person
ಲೇಖನ ಬಹಳ ಸೊಗಸಾದ ಉಣಿಸು. ಧನ್ಯವಾದಗಳು. ಆದರೆ ಇಂದಿನ ದಿನಗಳಲ್ಲಿ ನಾವೇ ಬೆಳಸಿದ ಬಾಳೆಯ ಎಲೆ,ಹಣ್ಣು ,ದಿಂಡು ಬಳಸಿದರೆ ಅತ್ಯುತ್ತಮ ಆರೋಗ್ಯ ನಮ್ಮದಾಗುತ್ತೆ . ಮಾರುಕಟ್ಟೆಯಲ್ಲಿ ಸಿಗುವ ಬಾಳೆಹಣ್ಣು,ಎಲೆ,ದಿಂಡು ಎಲ್ಲವೂ ರಸಾಯನಿಕ ಗೊಬ್ಬರದ ಜೊತೆಗೆ ಕೀಟನಾಶಕಗಳ ಬಳಕೆಯಿಂದ ಬೆಳೆದವಾಗಿ ಆರೋಗ್ಯಕ್ಕೆ ಮಾರಕವಾಗುವ ಸಂಭವನೀಯತೆ ಹೆಚ್ಚಿರುವುದು ವಿಷಾದಕರ. ಎಂದಿನಂತೆ ಉತ್ತಮ ಲೇಖನ.
LikeLiked by 1 person
ಬಾಳೆ ಗಿಡ ಮತ್ತದರ ಪ್ರಯೋಜನಗಳು ಲೇಖನ ತುಂಬಾ ಚೆನ್ನಾಗಿದೆ. ಬಾಳೆಯ ಮಹತ್ವ ಮತ್ತು ಅದರ ವಿವಿಧ ಉಪಯೋಗಗಳನ್ನು ರಸವತ್ತಾಗಿ ವಿವರಿಸಿದ್ದೀರಿ. ಧನ್ಯವಾದಗಳು.
LikeLiked by 1 person
Plantain skin is very good for health. Eat the fruit and boil the skin after cutting in to small pieces.By drinking this one can get many minerals. A gymnast from China had swept most of the Medals in Gymnastics at Asian Games,and his diet was Plantain and Brinjal.The fiber from the long stem is used to create Fabrics now.After jute fabrics it’s the latest fashion fabric.Nice well written article with mouth watering details and picture.
LikeLiked by 1 person
“ತೆಂಗಿನ ಮರದಂತೆ ಬಾಳೇ ಗಿಡವೂ ಸಹಾ ಒಂದು ರೀತಿಯ ಮರಿ ಕಲ್ಪವೃಕ್ಷವೇ ಸರಿ. ಬಾಳೆ ಗಿಡದ ಪ್ರತಿಯೊಂದು ಭಾಗವೂ ಸಂಪೂರ್ಣವಾಗಿ ಉಪಯೋಗಕ್ಕೆ ಬರುತ್ತದೆ”
ನಮ್ಮ ಗುಂಪಿನಲ್ಲಿ ೨, ೩ ದಿನಗಳ ಮೊದಲು ಇದೆ ವಿಚಾರ ಚರ್ಚೆಗೆ ಬಂದಿತ್ತು.
LikeLiked by 1 person
ಈ ಲೇಖನವನ್ನು ನಿಮ್ಮ ಗುಂಪಿನಲ್ಲಿ ಹಾಕಿಬಿಡಿ ಅವರಿಗೆ ಬೇಕಾದ ಮಾಹಿತಿ ದೊರೆಯುತ್ತದೆ.
LikeLike