ಕನ್ನಡದ ಮೇರು ನಟ ಬಾಲಕೃಷ್ಣ ಅವರ
ಜೊತೆ ಜೊತೆಯಲ್ಲಿಯೇ ಗುಬ್ಬಿ ನಾಟಕದ ಕಂಪನಿಯಲ್ಲಿದ್ದು ನಂತರ ರಾಧಾ ರಮಣ ಚಿತ್ರದ ಮೂಲಕವೇ ಒಟ್ಟೊಟ್ಟಿಗೆ ಚಿತ್ರರಂಗ ಪ್ರವೇಶಿಸಿ ಮುಂದೆ ದಿಗ್ಗಜರಾಗಿ ಬೆಳೆದ ಮಹಾನ್ ನಟ, ಚಿತ್ರಸಾಹಿತಿ, ಸಂಭಾಷಣೆಕಾರ, ಗೀತರಚನೆಕಾರ, ನಿರ್ಮಾಪಕ, ನಿರ್ದೇಶಕ ಎಲ್ಲದಕ್ಕಿಂತಲೂ ಹೆಚ್ಚಾಗಿ ಜನಾನುರಾಗಿ, ಕನ್ನಡ ಚಿತ್ರರಂಗದ ರಾಜರ್ಷಿ, ಕನ್ನಡ ಚಿತ್ರ ರಂಗದ ಭೀಷ್ಮ ಪಿತಾಮಹ ಎಂದರೂ ತಪ್ಪಾಗಲಾರದ ಶ್ರೀ ಗಣಪತಿ ವೆಂಕಟರಮಣ ಅಯ್ಯರ್ ಅರ್ಥಾತ್ ಜಿ.ವಿ.ಐಯ್ಯರ್ ಅವರ ಸಾಧನೆಗಳನ್ನು ಮೆಲುಕು ಹಾಕೋಣ.
1917ರ ಸೆಪ್ಟೆಂಬರ್ 3ರಂದು ನಂಜನಗೂಡಿನ ವೈದೀಕ ಮನತನದಲ್ಲಿ ಶ್ರೀ ಜಿ.ವಿ.ಅಯ್ಯರ್ ಅವರ ಜನನವಾಗುತ್ತದೆ. ಕೇವಲ ಎಂಟು ವರ್ಷದಲ್ಲಿರುವಾಗಲೇ ಬಣ್ಣದ ಗೀಳನ್ನು ಹಿಡಿದು ಮನೆ ಬಿಟ್ಟು ಹೋರಟಾಗ ಅವರಿಗೆ ಆಶ್ರಯ ನೀಡಿದ್ದೇ ಗುಬ್ಬಿ ವೀರಣ್ಣನವರ ಕಂಪನಿ. ಬಾಲಣ್ಣನವರಂತೇ ಇವರು ಸಹಾ ಭಿತ್ತಿ ಪತ್ರ ಅಂಟಿಸುವುದು, ಕರ ಪತ್ರ ಹಂಚುವುದು, ಪ್ರಚಾರ ಮಾಡುವುದು, ಬೋರ್ಡ್ ಬರೆಯುವುದರ ಮೂಲಕವೇ ಅರಂಭವಾಗಿ ನಂತರ ಸಣ್ಣ ಪುಟ್ಟ ಪಾತ್ರಗಳ ನಂತರ, ನರಸಿಂಹ ರಾಜು, ಬಾಲಕೃಷ್ಣ ಅವರ ಜೊತೆಗೂಡಿದ ಜಿ.ವಿ. ಅಯ್ಯರ್ ಅತ್ಯುತ್ತಮ ಹಾಸ್ಯ ಕಲಾವಿದರುಗಳು ಜೋಡಿ ಆದರು. ಅನಂತರ ಅವಕಾಶಗಳನ್ನರಸಿ ಪೂನಾಗೆ ಹೋಗಿ, ಅಲ್ಲಿ ಹೋಟೆಲ್ ಒಂದರಲ್ಲಿ ಮಾಣಿಯಾಗಿದ್ದುಕೊಂಡೇ ಚಲನಚಿತ್ರಗಳಲ್ಲಿ ಅವಕಾಶಗಳಿಗೆ ಪ್ರಯತ್ನಿಸಿದರಾದರೂ, ಅದು ಫಲಕಾರಿಯಾಗದೆ ಮತ್ತೆ ಕರ್ನಾಟಕಕ್ಕೆ ಹಿಂದಿರುಗಿ, ಕರ್ನಾಟಕ ನಾಟಕ ಸಭಾ ಕಂಪನಿಗೆ ಸೇರಿ ಬೇಡರ ಕಣ್ಣಪ್ಪ, ಭಾರತಲಕ್ಷ್ಮಿ, ಟಿಪ್ಪೂಸುಲ್ತಾನ್, ವಿಶ್ವಾಮಿತ್ರ, ಮುಂತಾದ ನಾಟಕಗಳಲ್ಲಿ ಅಭಿನಯಿಸುತ್ತಿರುವ ಸಮಯದಲ್ಲಿಯೇ ಎಂ.ವಿ.ರಾಜಮ್ಮನವರು ನಿರ್ಮಿಸಿದ ರಾಧಾರಮಣ ಚಿತ್ರದ ಮೂಲಕ ಬಾಲಕೃಷ್ಣ ಅವರ ಜೊತೆಯಲ್ಲಿಯೇ ಕನ್ನಡ ಚಲನಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
ಮುಂದೆ 1954ರಲ್ಲಿ ಎಚ್ ಎಲ್ ಎನ್ ಸಿಂಹರ ಬೇಡರ ಕಣ್ಣಪ್ಪ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ದಿಗ್ಗಜರಾದ ರಾಜ್’ಕುಮಾರ್ ಮತ್ತು ನರಸಿಂಹರಾಜು ಅವರ ಜೊತೆ ಜಿ.ವಿ.ಅಯ್ಯರ್ ಅವರಿಗೂ ಕೂಡಾ ಆ ಚಿತ್ರ ಖ್ಯಾತಿಯನ್ನು ತಂದು ಕೊಟ್ಟಿತು. ಆನಂತರ ಮೂವರೂ ಅನೇಕ ಚಿತ್ರಗಳಲ್ಲಿ ಒಟ್ಟೊಟ್ಟಿಗೆ ಅಭಿನಯಿಸತೊಡಗಿದರೆ, ಅಯ್ಯರ್ ಅವರು ನಟನೆಯ ಜೊತೆಗೆ ಬರವಣಿಗೆಯಲ್ಲಿ ಕೈಯ್ಯಾಡಿಸತೊಡಗಿ ಹಲವಾರು ಜನಪ್ರಿಯ ಗೀತೆಗಳ ರಚನಕಾರರಾಗಿಯೂ ಮತ್ತು ಅತ್ಯುತ್ತಮ ಸಂಭಾಷಣೆಕಾರರಾಗಿಯೂ ಖ್ಯಾತಿ ಪಡೆಯತೊಡಗಿದರು.
ವಾಲ್ಮೀಕಿ ಚಿತ್ರದ ‘ಜಲಲ ಜಲಲ ಜಲ ಧಾರೆ’, ದಶಾವತಾರ ಚಿತ್ರದ ‘ಗೋದಾವರಿ ದೇವಿ ಮೌನವಾಗಿಹೆ ಏಕೆ’, ‘ವೈದೇಹಿ ಏನಾದಳು’, ಎಮ್ಮೆ ತಮ್ಮಣ್ಣ ಚಿತ್ರದ ‘ನೀನಾರಿಗಾದೆಯೋ ಎಲೆ ಮಾನವ’, ಕಿತ್ತೂರು ಚೆನ್ನಮ್ಮ ಚಿತ್ರದ ‘ಸನ್ನೆ ಏನೇನೋ ಮಾಡಿತು ಕಣ್ಣು’, ರಣಧೀರ ಕಠೀರವ ಚಿತ್ರದ ‘ಕರುನಾಡ ಕಣ್ಮಣಿಯೇ ಕಂಠೀರವ’, ರಾಜಶೇಖರ ಚಿತ್ರದ ‘ಮುತ್ತಂಥ ಮಗನಾಗಿ ಹೆತ್ತವಳ ಸಿರಿಯಾಗಿ’, ಸಂಧ್ಯಾರಾಗದ ‘ನಂಬಿದೆ ನಿನ್ನ ನಾದ ದೇವತೆಯೇ’, ‘ಕನ್ನಡತಿ ತಾಯೆ ಬಾ’, ಕಣ್ತೆರೆದು ನೋಡು ಚಿತ್ರದ ‘ಕನ್ನಡದ ಮಕ್ಕಳೆಲ್ಲಾ ಒಂದಾಗಿ ಬನ್ನಿ’, ಗಾಳಿಗೋಪುರ ಚಿತ್ರದ ‘ಗಾಳಿಗೋಪುರ ನಿನ್ನಾಶಾ ತೀರ ನಾಳೆ ಕಾಣುವ’, ‘ನನ್ಯಾಕೆ ನೀ ಹಾಗೇ ನೋಡುವೆ ಮಾತಾಡೇ ಬಾಯಿಲ್ಲವೇ’, ಪೋಸ್ಟ್ ಮಾಸ್ಟರ್ ಚಿತ್ರದ ‘ಕನ್ನಡದ ಕುಲದೇವಿ ಕಾಪಾಡು ಬಾ ತಾಯೆ’, ತಾಯಿ ಕರುಳು ಚಿತ್ರದ ‘ಬಾ ತಾಯೆ ಭಾರತಿಯೇ ಭಾವ ಭಾಗೀರಥಿಯೇ’ ಮುಂತಾದ ಜನಪ್ರಿಯ ಗೀತೆಗಳೊಂದಿಗೆ ಸರಿ ಸುಮಾರು 850 ಅಧ್ಭುತ ಗೀತೆಗಳು ಅಯ್ಯರ್ ಅವರ ಲೇಖನಿಯಿಂದ ಮೂಡಿಬಂದವು.
ನಂತರ ಬರವಣಿಗೆಯಿಂದ ನಿಧಾನವಾಗಿ ನಿರ್ದೇಶನದತ್ತ ಗಮನ ಹರಿಸಿ ಭೂದಾನ ಚಿತ್ರವನ್ನು ನಿರ್ದೇಶಿಸಿದರು. ಅವರು ನಿರ್ದೇಶಿಸಿದ ಪ್ರಪ್ರಥಮ ಚಿತ್ರಕ್ಕೇ ರಾಷ್ಟ್ರಪ್ರಶಸ್ತಿ ಗಳಿಸಿದ ಹೆಗ್ಗಳಿಗೆ ಅವರದ್ದು. ಕನ್ನಡದ ಕಲಾವಿದರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾಗ ರಾಜಕುಮಾರ್, ಬಾಲಕೃಷ್ಣ, ನರಸಿಂಹರಾಜು ಮುಂತಾದ ಹಿರಿಯ ಕಲಾವಿದರ ಜೊತೆಗೆಗೂಡಿ ಕನ್ನಡ ಕಲಾವಿದರ ತಂಡವನ್ನು ರಚಿಸಿಕೊಂಡು ರಾಜ್ಯಾದ್ಯಂತ ಪ್ರವಾಸ ಹಲವಾರು ನಾಟಕಗಳನ್ನು ಮಾಡಿ ನೂರಾರು ಕಲಾವಿದರುಗಳಿಗೆ ಆಶ್ರಯದಾತರಾಗಿದ್ದಲ್ಲದೇ, ಅದೇ ಗೆಳೆಯರೊಡನೆ ಸೇರಿ ಕೊಂಡು ರಣಧೀರ ಕಂಠೀರವ ಚಲನಚಿತ್ರದ ಸಹ ನಿರ್ಮಾಪಕರಾಗಿದ್ದಲ್ಲದೇ, ನಿರ್ದೇಶನವನ್ನೂ ಮಾಡಿದರು. ನಂತರ ಪೋಸ್ಟ್ ಮಾಸ್ಟರ್, ಕಿಲಾಡಿ ರಂಗ, ರಾಜಶೇಖರ, ಮೈಸೂರು ಟಾಂಗ, ಚೌಕದ ದೀಪ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದರು. ಮುಂದೆ ಬಿ.ವಿ.ಕಾರಂತ ಮತ್ತು ಗಿರೀಶ್ ಕಾರ್ನಾಡ್ ಜಂಟಿ ನಿರ್ದೇಶನದ ಎಸ್. ಎಲ್. ಭೈರಪ್ಪನವರ ಪ್ರಸಿದ್ಧ ಕಾದಂಬರಿ ವಂಶವೃಕ್ಸವನ್ನು ನಿರ್ಮಾಣ ಮಾಡಿದರು. ಆ ಚಿತ್ರವೂ ಕೂಡಾ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಜಿಕೊಂಡಿತು.
ಇದಾದ ನಂತರ ತರಾಸು ಅವರ ಕಾದಂಬರಿ ಆಧಾರಿತ. ಹಂಸಗೀತೆ ಎಂಬ ಸಂಗೀತಮಯ ಚಿತ್ರವನ್ನು ನಿರ್ದೇಶಿಸಿದರು. ಈ ಚಿತ್ರ ನಟ ಅನಂತನಾಗ್ ಅವರ ಜೊತೆ ಜೊತೆಯಲ್ಲಿ ಸಂಗಿತಗಾರ ಬಿ.ವಿ.ಕಾರಂತ, ಗಾಯಕರಾದ ಬಾಲಮುರಳಿಕೃಷ್ಣ, ಎಂ.ಎಲ್ ವಸಂತಕುಮಾರಿ, ಪಿ.ಲೀಲಾ, ಬಿ.ಕೆ.ಸುಮಿತ್ರ ಆವರಿಗೂ ಕೂಡಾ ರಾಷ್ಟ್ರಮಟ್ಟದಲ್ಲಿ ಖ್ಯಾತಿ ತಂದು ಕೊಟ್ಟಿತು.
ವಂಶವೃಕ್ಷ ಮತ್ತು ಹಂಸಗೀತೆ ಗಳಂತಹ ಸೃಜನಶೀಲ ವಿಶಿಷ್ಟ ಕಲಾತ್ಮಕ ಚಿತ್ರಗಳನ್ನು ನಿರ್ದೇಶನ ಮಾಡಿ ದೇಶ ವಿದೇಶಗಳಲ್ಲಿ ಪ್ರಖ್ಯಾತರಾದ ಮೇಲೆ ಮುಂದೆಂದೂ ವ್ಯಾಪಾರೀ ಚಿತ್ರಗಳತ್ತ ಹರಿಯಲಿಲ್ಲ ಅವರ ಚಿತ್ತ. ಅಯ್ಯರ್ ಅವರು ಚಿಕ್ಕಂದಿನಿಂದಲೂ ಮಹಾತ್ಮ ಗಾಂಧಿಯವರ ವಿಚಾರಧಾರೆಗಳಿಂದ ಬಹಳವಾಗಿ ಪ್ರೇರಿತರಾಗಿದ್ದರು. ಮಹಾತ್ಮ ಗಾಂಧಿಯವರ ಹತ್ಯೆಯಾದಾಗ ಬಹಳವಾಗಿ ನೊಂದು ಅವರ ನೆನಪಿನಲ್ಲಿಯೇ ಅಯ್ಯುರ್ ಅವರು ಪಾದರಕ್ಷೆಗಳನ್ನು ಧರಿಸುವುದನ್ನು ನಿಲ್ಲಿಸಿದವರು, ಮುಂದೇ ಇಡೀ ಜೀವನ ಪರ್ಯಂತ ದೇಶ ವಿದೇಶ ಸುತ್ತಿದರೂ ಮತ್ತೆಂದೂ ಪಾದರಕ್ಷೆಗಳನ್ನು ಧರಿಸಲೇ ಇಲ್ಲ. ಅದೇ ರೀತಿ ಗಾಂಧಿಯವರು ಪ್ರತಿಪಾದಿಸಿದಂತೆ ಸದಾ ಖಾದಿಯ ಬಟ್ಟೆಗಳನ್ನೇ ಧರಿಸುತ್ತಿದ್ದದ್ದು ಮತ್ತೊಂದು ಗಮನಾರ್ಹ ಅಂಶ. ಈ ರೀತಿಯ ಪ್ರತಿಜ್ಞೆ ಮಾಡಿ ಅದನ್ನು ಕಡೆಯ ತನಕ ಪಾಲಿಸುವ ಮೂಲಕ ಕನ್ನಡ ಚಿತ್ರಗಳ ಭೀಷ್ಮರಾಗಿ ಬರಿಗಾಲು ನಿರ್ದೇಶಕ ಎಂದೇ ಹೆಸರಾದರು.
ಹಿಂದೂ ಧರ್ಮದ ಆಚಾರ್ಯತ್ರಯರಲ್ಲಿ ಅಗ್ರಗಣ್ಯರಾದ ಶ್ರೀ ಶಂಕರಾಚಾರ್ಯರ ಕುರಿತು 1983ರಲ್ಲಿ ಸಂಸ್ಕೃತ ಭಾಷೆಯಲ್ಲಿ ಅವರು ನಿರ್ದೇಶಿಸಿದ ಆದಿ ಶಂಕರಾಚಾರ್ಯ ಅವರ ನಿರ್ದೇಶನವನ್ನು ಉತ್ತುಂಗಕ್ಕೆ ಏರಿಸಿ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ತಂದು ಕೊಟ್ಟಿತು ಇದರಿಂದ ಪ್ರೇರಿತರಾಗಿ, ಕನ್ನಡ ಭಾಷೆಯಲ್ಲಿ ಶ್ರೀ ಮಧ್ವಾಚಾರ್ಯ ಮತ್ತು ತಮಿಳು ಭಾಷೆಯಲ್ಲಿ ಶ್ರೀ ರಾಮಾನುಜಾಚಾರ್ಯ ಚಿತ್ರಗಳನ್ನು ನಿರ್ದೇಶಿಸಿ ಮತ್ತು ನಿರ್ಮಾಣ ಮಾಡಿದರೂ ಆರ್ಥಿಕವಾಗಿ ಕೈಹಿಡಿಯಲಿಲ್ಲವಾದರೂ ಅವರೆಂದೂ ಅದರಿಂದ ವಿಚಲಿತರಾಗದೇ ಸಮಾಜದ ಪರಿವರ್ತನೆಗೆ ಕಾರಣರಾದ ಆ ಮೂರು ಮಹಾನುಭಾವರನ್ನು ಜನರಿಗೆ ತಲುಪಿಸಿದ ಕೀರ್ತಿ ತಮ್ಮದೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು.
ಮುಂದೆ ಭಗವದ್ಗೀತೆಯನ್ನೂ ತೆರೆಯ ಮೇಲೆ ತಂದು ಮತ್ತೆ ರಾಷ್ಟ್ರಪ್ರಶಸ್ತಿಯ ಜೊತೆಗೆ ಹಲವಾರು ಅಂತರರಾಷ್ಟ್ರೀಯ ಚಿತ್ರೋತ್ಸವಗಳ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡು, ನಂತರ ದೂರದರ್ಶನಕ್ಕಾಗಿ ನಾಟ್ಯ ರಾಣಿ ಶಾಂತಲ ಎಂಬ ಧಾರಾವಾಹಿಯನ್ನು ಹಿಂದಿ ಮತ್ತು ಕನ್ನಡ ಭಾಷೆಯಲ್ಲಿ ನಿರ್ದೇಶಿಸಿದರೆ, ಹೇಮಾಮಾಲಿನಿ, ಮಿಥುನ್ ಚಕ್ರವರ್ತಿ, ಸರ್ವದಮನ್ ಬ್ಯಾನರ್ಜಿಯಂತಹ ಹೆಸರಾಂತ ಕಲಾವಿದರೊಂದಿಗೆ ವಿವೇಕಾನಂದ, ಶ್ರೀಕೃಷ್ಣ ಲೀಲಾ ಎಂಬ ಧಾರಾವಾಹಿಗಳನ್ನು ನಿರ್ದೇಶಿಸಿದ ಕೀರ್ತಿಗೆ ಭಾಜನರಾದರು.
ವಾಲ್ಮೀಕಿ ರಾಮಾಯಣವನ್ನು ತೆರೆಗೆ ತರಲು ನಿರ್ಧರಿಸಿ ರಾವಣನ ಪಾತ್ರಕ್ಕೆ ಹೆಸರಾಂತ ಕಲಾವಿದ ಸಂಜಯ ದತ್ ಅವರನ್ನು ಒಪ್ಪಿಸಲು ಮುಂಬೈಗೆ ತೆರಳಿದ್ದಾಗಲೇ ಡಿಸೆಂಬರ್ 21, 2003 ರಂದು ಮತ್ತೆಂದೂ ಹಿಂದಿರುಗಿ ಬಾರದ ಶಾಶ್ವತ ಲೋಕದತ್ತ ಪಯಣಿಸಿದರು.
ಹೀಗೆ ವೃತ್ತಿ ರಂಗಭೂಮಿಯಲ್ಲಿ ನಾನಾ ರೀತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು, ನಂತರ ನಟರಾಗಿ, ಸಂಭಾಷಣಕಾರರಾಗಿ, ಗೀತ ರಚನೆಕಾರರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ, ಇವೆಲ್ಲಕ್ಕೂ ಮಿಗಿಲಾಗಿ ಭಾರತೀಯ ಸಂಸ್ಕೃತಿಯನ್ನು ತಮ್ಮ ಸೃಜನಶೀಲ ಚಿತ್ರಗಳ ಮೂಲಕ ವಿಶ್ವಕ್ಕೆ ತೋರಿಸಿದ ಶ್ರೀ ಜಿ.ವಿ.ಅಯ್ಯರ್ ಹೆಮ್ಮೆಯ ಕನ್ನಡ ಕಲಿಗಳು ಎನ್ನುವುದೇ ಕನ್ನಡಿಗರೆಲ್ಲರ ಹೆಗ್ಗಳಿಕೆ.
ಏನಂತೀರೀ?
ನಿಮ್ಮವನೇ ಉಮಾಸುತ
ಅತ್ಯುತ್ತಮ ಬರಹ. ಅಭಿನಂದನೆಗಳು ನಿಮಗೆ. ಒಳ್ಳೆಯ ಮಾಹಿತಿಗಳನ್ನು ನೀಡಿದ್ದೀರಿ. ಇಂಥಾ ಮಹಾನುಭಾವರ ಬಗ್ಗೆ ಕಾರ್ನಾಡರು ಇಲ್ಲದ ಸಲ್ಲದ್ದನ್ನು ಬರೆದಿದ್ದಾರೆ.
LikeLike