ಕಡ್ಲೇಕಾಯ್..ಕಡ್ಲೇಕಾಯ್.. ತಾಜಾ ತಾಜಾ ಕಡ್ಲೇಕಾಯ್.. ಗರ್ಮಾ ಗರಂ ಕಡ್ಲೇಕಾಯ್ ಬಡವರ ಬಾದಾಮಿ ಕಡ್ಲೇಕಾಯ್ ಎಂಬ ಜನಪ್ರಿಯ ಹಾಡನ್ನು ಎಲ್ಲರೂ ಕೇಳಿಯೇ ಇರುತ್ತೇವೆ. ಕಡಲೇಕಾಯಿ ಆರೋಗ್ಯದಾಯಕವೂ ಮತ್ತು ಪೌಷ್ಟಿದಾಯಕವೂ ಹೌದು. ಹಾಗಾಗಿ ವಿವಿಧ ಖಾಧ್ಯಗಳ ರೂಪಗಳಲ್ಲಿ ಕಡಲೇಕಾಯಿಯನ್ನು ಸೇವಿಸುತ್ತೇವೆ. ನಾವು ಇಂದು ಮನೆಯಲ್ಲಿಯೇ ಸುಲಭವಾಗಿ ಖಾರದ ಕಡಲೇಕಾಯಿ ಬೀಜ (ಕಾಂಗ್ರೆಸ್ ಕಡಲೇ ಬೀಜ) ತಯಾರಿಸಿಕೊಳ್ಳುವುದನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ.
ಸುಮಾರು 4-5 ಜನರು ಸವಿಯಬಹುದಾದಷ್ಟು ಕಾಂಗ್ರೆಸ್ ಕಡಲೇ ಬೀಜ ತಯಾರಿಸಲು ಬೇಕಾಗುವ ಸಾಮಗ್ರಿಗಳು
- ಕಡಲೆಕಾಯಿ ಬೀಜ – 2 ಬಟ್ಟಲು
- ಅಚ್ಚ ಖಾರದ ಪುಡಿ – 1 ಚಮಚ
- ಕಾಳು ಮೆಣಸಿನ ಪುಡಿ – 1 ಚಮಚ
- ಅರಿಶಿನ ಪುಡಿ – 1/2 ಚಮಚ
- ಚಿಟುಕಿ ಇಂಗು
- ಅಡುಗೆ ಎಣ್ಣೆ – 1 ಚಮಚ
- ಕರಿಬೇವಿನ ಸೊಪ್ಪು – 10-15 ಎಲೆಗಳು
- ರುಚಿಗೆ ಉಪ್ಪು
ಕಾಂಗ್ರೆಸ್ ಕಡಲೇ ಬೀಜ ತಯಾರಿಸುವ ವಿಧಾನ
- ಅಗಲವಾದ ಗಟ್ಟಿ ತಳವುಳ್ಳ ಬಾಣಲೆಯನ್ನು ಒಲೆಯ ಮೇಲಿಟ್ಟು ಅದಕ್ಕೆ ಎರಡು ಕಪ್ ಕಡಲೇಕಾಯಿಯನ್ನು ಹಾಕಿ ಸುಮಾರು 5-6 ನಿಮಿಷಗಳಷ್ಟು ಚೆನ್ನಾಗಿ ಹುರಿಯಬೇಕು
- ಹುರಿದ ಕಡಲೇ ಕಾಯಿ ಆರಿದ ಮೇಲೆ ಒಂದು ಬಟ್ಟೆಯೊಳಗೆ ಹಾಕಿ ಚೆನ್ನಾಗಿ ಉಜ್ಜಿದರೆ ಕಡಲೇಕಾಯಿ ಮೇಲಿರುವ ಸಿಪ್ಪೆ ಉದುರುತ್ತದೆ ಮತ್ತು ಉಂಡೇ ಕಡಲೆಕಾಯಿ ಜೀಜಗಳು ಬೇಳೆಯ ರೂಪವನ್ನು ಪಡೆಯುತ್ತದೆ.
- ಬಾಣಲೆಯನ್ನು ಒಲೆಯ ಮೇಲಿಟ್ಟು ಅದಕ್ಕೆ ಒಂದು ಚಮಚ ಎಣ್ಣೆ ಹಾಕಿ
- ಎಣ್ಣೆ ಕಾದ ನಂತಾ ಕರಿಬೇವಿನ ಸೊಪ್ಪುಗಳನ್ನು ಹಾಕಿ ಚೆನ್ನಾಗಿ ಗರಿ ಗರಿಯಾಗುವಂತೆ ಕರಿಯಿರಿ
- ಈಗ ಅಚ್ಚಖಾರದ ಪುಡಿ, ಕಾಳು ಮೆಣಸಿನ ಪುಡಿ, ಅರಿಶಿನ, ಚಿಟುಕಿ ಇಂಗು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಒಂದೆರದು ನಿಮಿಷ ಹಸೀ ಹೋಗುವಂತೆ ಹುರಿಯಿರಿ
- ಈಗ ನಿಧಾನವಾಗಿ ಹುರಿದಿಟ್ಟುಕೊಂಡಿದ್ದ ಕಡಲೇಕಾಯಿ ಬೀಜವನ್ನು ಈ ಮಿಶ್ರಣಕ್ಕೆ ಸೇರಿಸಿ, ನಾಲ್ಕೈದು ನಿಮಿಷಗಳಷ್ಟು ಕಾಲ ಕಡಲೇಕಾಯಿ ಬೀಜಗಳಿಗೆ ಮಸಾಲೆ ಸೇರಿಕೊಳ್ಳುವಂತೆ ಹುರಿದರೆ, ರುಚಿಕರವಾದ, ಬಿಸಿ ಬಿಸಿಯಾಡ ಕಾಂಗ್ರೇಸ್ ಕಡಲೇಕಾಯಿ ಬೀಜ ಸಿದ್ದ.
ಈ ಖಾರದ ಕಡಲೇ ಕಾಯಿಬೀಜವನ್ನು ಹಾಗೆಯೇ ತಿನ್ನ ಬಹುದು ಇಲ್ಲವೇ ಸಂಜೆಯ ಹೊತ್ತು ಕಾಫೀ ಮತ್ತು ಟೀ ಜೊತೆಗೆ ಸವಿಯಲು ಮಜವಾಗಿರುತ್ತದೆ
ಇತ್ತೀಚೆಗೆ ಬಹುತೇಕ ಸಮಾರಂಭಗಳಲ್ಲಿ ಇದೇ ಕಾಂಗ್ರೇಸ್ ಕಡಲೇ ಬೀಜ ಬಳಸಿಕೊಂಡು ಕೋಸಂಬರಿ ಮಾಡುವ ಹೊಸಾ ಸಂಪ್ರದಾಯವನ್ನು ಮಾಡಿಕೊಂದಿದ್ದಾರೆ
ಕಾಂಗ್ರೇಸ್ ಕಡಲೇ ಬೀಜದ ಕೋಸಂಬರಿ ತಯಾರಿಸುವ ವಿಧಾನ
- ಒಂದು ಅಗಲವಾದ ಪಾತ್ರೆಯಲ್ಲಿ ಒಂದು ಬಟ್ಟಲು ಸಿದ್ಧ ಪಡಿಸಿಟ್ಟುಕೊಂಡಿರುವ ಕಾಂಗ್ರೇಸ್ ಕಡಲೇ ಬೀಜವನ್ನು ಹಾಕಿ
ಅದಕ್ಕೆ ಹೆಚ್ಚಿದ ಈರುಳ್ಳಿ, ಟೋಮೇಟೋ,ತುರಿದ ಕ್ಯಾರೆಟ್, ಮತ್ತು ಸ್ವಲ್ಪ ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ - ಈ ಮಿಶ್ರಣಕ್ಕೆ ಸ್ವಲ್ಪ ನಿಂಬೇ ರಸ ಸೇರಿಸಿ ಆದಕ್ಕೆ ಕೊತ್ತಂಬರಿ ಸೊಪ್ಪನ್ನು ಹಾಕಿ ಮತ್ತೊಮ್ಮೆ ಚೆನ್ನಾಗಿ ಮಿಶ್ರಣ ಮಾಡಿದಲ್ಲಿ ಕಾಂಗ್ರೇಸ್ ಕಡಲೇಬೀಜದ ಕೋಸಂಬರಿ ಸವಿಯಲು ಸಿದ್ಧ.
ಇನ್ನು ಈ ಖಾರದ ಕಡಲೇಕಾಯಿ ಬೀಜಕ್ಕೆ ಕಾಂಗ್ರೇಸ್ ಕಡಲೇ ಕಾಯಿ ಬೀಜ ಎಂಬ ಹೆಸರು ಹೇಗೆ ತಗುಲಿಕೊಂಡಿತು? ಎಂಬ ಜಿಜ್ಞಾಸೆ ಬಹಳ ದಿನಗಳಿಂದ ಕಾಡುತ್ತಿತ್ತು. ಕೆಲ ದಿನಗಳ ಹಿಂದೆ ತಿಳಿದು ಬಂದ ವಿಷಯವೇನೆಂದರೆ, ದೇಶದ ರಾಜಕೀಯಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿರುವ ಕಾಂಗ್ರೆಸ್ ಪಕ್ಷ ಒಂದು ಕಾಲದಲ್ಲಿ ದೇಶಾದ್ಯಂತ ಕಳೆಯಂತೆ ಹಬ್ಬಿತ್ತು ಎನ್ನುವ ಕಾರಣಕ್ಕಾಗಿ ದೇಶಾದ್ಯಂತ ಎಲ್ಲೆಡೆಯಲ್ಲಿಯೂ ಕಳೆಯ ರೂಪದಲ್ಲಿ ಹರಡಿದ್ದ ಪಾರ್ಥೇನಿಯಂ ಗಿಡವನ್ನು ಕಾಂಗ್ರೇಸ್ ಹುಲ್ಲು ಎಂದು ಕರೆದಂತೆ 1969 ರಲ್ಲಿ ಕಾಂಗ್ರೇಸ್ ಪಕ್ಷ ಅನೇಕ ಕಡಲೇ ಬೀಜದಂತೆ ಹೋಳಾಗುತ್ತಿದ್ದನ್ನು ನೋಡಿದ ಬಸವನಗುಡಿಯ ಡಿವಿಜಿ ರಸ್ತೆಯಲ್ಲಿರುವ ಶ್ರೀನಿವಾಸ ಬ್ರಾಹ್ಮಿನ್ಸ್ ಬೇಕರಿಯ ಅಂದಿನ ಮಾಲಿಕರದ ಶ್ರೀ ರಾಮಸ್ವಾಮಿ ಅಯ್ಯಂಗಾರ್ ಅವರು ತಮ್ಮ ಅಂಗಡಿಯಲ್ಲಿ ತಯಾರಿಸುತ್ತಿದ್ದ ಖಾರದ ಕಡಲೇ ಬೀಜಕ್ಕೆ ಕಾಂಗ್ರೆಸ್ ಕಡಲೆಬೀಜ ಎಂಬ ಹೆಸರಿತ್ತರಂತೆ. ಇಂದಿಗೂ ಅದೇ ಹೆಸರು ಮುಂದುವರಿದಿದೆ. ಕಳೆದ ವರ್ಷ ನರೇಂದ್ರ ಮೋದಿಯವರು ಎರಡನೇ ಬಾರೀ ಅಧಿಕಾರಕ್ಕೇರಿದಾಗ ಕೆಲವು ಅಭಿಮಾನಿಗಳು ಈ ಕಾಂಗ್ರೇಸ್ ಕಡಲೇಬೀಜವನ್ನು ಮೋದಿ ಮಸಾಲೆ ಎಂದು ಹೆಸರಿಬೇಕೆಂದು ಆಗ್ರಹಿದ್ದರು ಎಂಬ ಗುಲ್ಲೆದ್ದಿತ್ತು.
ರುಚಿಕರವಾದ ಕಾಂಗ್ರೇಸ್ ಕಡಲೇ ಬೀಜ ಮತ್ತು ಅದರ ಕೋಸಂಬರಿ ಮಾಡುವ ವಿಧಾನವನ್ನು ತಿಳಿಸಿ ಕೊಟ್ಟಿದ್ದೇವೆ. ಇನ್ನೇಕೆ ತಡಾ, ಓದ್ಕೋಳೀ, ಮಾಡ್ಕೊಳೀ, ತಿನ್ಕೋಳಿ
ಏನಂತೀರೀ?
ಮನದಾಳದ ಮಾತು : ಕಾಂಗ್ರೇಸ್ ಕಡಲೇಕಾಯಿ ಬೀಜವನ್ನು ಹಾಗೆಯೇ ಇಲ್ಲವೇ ಕೋಸಂಬರಿ ಮಾಡಿಕೊಳ್ಳುವ ಮುಖಾಂತರವಲ್ಲದೇ, ಮನೆಯಲ್ಲಿ ಮಾಡುವ ಪಲಾವ್, ಮೆಂತ್ಯಾಬಾತ್ ಪುಳಿಯೋಗರೇ, ಚಿತ್ರಾನ್ನದ ಇಲ್ಲವೇ ಯಾವುದೇ ಅನ್ನಕ್ಕೆ ಸಂಬಂಧ ಪಟ್ಟಿದ ಬಾತ್ ನೊಂದಿಗೆ ಕಲೆಸಿಕೊಂಡು ತಿನ್ನಲು ಮಜವಾಗಿರುತ್ತದೆ. ಮೊಸರನ್ನ ಮತ್ತು ಕಾಂಗ್ರೇಸ್ ಕಡಲೇ ಕಾಯಿ ಬೀಜ ಸೂಪರ್ ಕಾಂಬಿನೇಷನ್ ಕೂಡಾ.