Google ಮತ್ತು ಗುರು ನಡುವಿನ ಅಂತರ, ಮಹತ್ವ

ಇತ್ತೀಚಿನ ಯುವ ಜನರಿಗೆ ಹಿರಿಯರು ಏನು ಹೇಳಿದರೂ ಅಸಡ್ಡೆಯೇ. ಮೊನ್ನೆ ನನ್ನ ಮಗಳಿಗೆ ಅಡುಗೆ ಮಾಡುವುದು ಕಲಿಯಮ್ಮ ನಾಳೇ ನೀನೇ Higher Studies ಅಂತಾ ಬೇರೆ ಎಲ್ಲಾದ್ರೂ ಹೋದ್ರೇ ಅಥವಾ, ಮದುವೆ ಮಾಡಿಕೊಂಡು ಹೋದ್ಮೇಲೆ ಅಡುಗೆ ಬರ್ದೇ ಹೋದ್ರೇ ನಿನಗೇ ಕಷ್ಟ ಆಗುತೇ ಅಂದ್ರೆ, ಹೋಗಮ್ಮಾ, ಈಗ್ಲಿಂದಾನೇ ಅಡುಗೆ ಗಿಡುಗೆ ಅಂತ ಯಾರು ಕಲೀತಾರೆ. ಹೇಗೂ Google ಇದೇ, YouTube ಇದೇ. ಅಪ್ಪಂದೇ Blog & Channel ನಲ್ಲಿ ಎಷ್ಟೋಂದು ಅಡುಗೆ ತೋರ್ಸಿದ್ದಾರೆ ಅದನ್ನ ನೋಡಿ ಮಾಡ್ತೀನಿ ಬಿಡಮ್ಮಾ ಅನ್ನೋದೇ?

ಅದೇ ರೀತಿ ಮಗನಿಗೆ online class ನಡೀತಾ ಇದ್ರೂ ಅವನು ತನ್ನ ಪಾಡಿಗೆ ತಾನು ಏನೋ ಮಾಡ್ಕೋತಾ ಇದ್ದದ್ದನ್ನು ನೋಡಿ. ಏನೋ ಮಗೂ ಪಾಠ ಕೇಳಲ್ವೇನೋ? ಅಂದ್ರೇ, ಹೇ, ಹೋಗಪ್ಪಾ, ಆದನ್ನು ಯಾರು ಕೇಳ್ತಾರೆ, Teacher ಪಾಠ ಮಾಡೋದು ಬೋರು ಅಂದ? ಇದೇನೋ ಮಗು, ಗುರುಗಳಿಗೇ ಹಾಗೆ ಹೇಳ್ತೀಯಾ? ಅವರು ಹೇಳಿದ್ದನ್ನೆಲ್ಲಾ ಚೆನ್ನಾಗಿ ಕೇಳಿ ಸದಾಕಾಲವೂ ನೆನಪಿನಲ್ಲಿ ಇಟ್ಕೋಬೇಕಪ್ಪಾ ಅಂದ್ರೇ, ಹಿರಿಯಕ್ಕನ ಚಾಳೀ ಮನೆ ಮಂದಿಗೆಲ್ಲಾ ಅನ್ನುವಂತೆ, ಏ ಹೋಗಪ್ಪಾ ಇದನ್ನೆಲ್ಲಾ ನಾವುಗಳು ಏಕೆ ನೆನಪಿನಲ್ಲಿ ಇಟ್ಕೋಬೇಕು. ಬೇಕಾದಾಗ Google ಮಾಡಿ ತಿಳ್ಕೋತೀವಿ ಅನ್ನೋದೇ?

ಇವತ್ತಿನ ಮಕ್ಕಳಿಗೆ ಯಾವುದನ್ನೂ ಓದಿ ಅಥವಾ ತಿಳಿದವರಿಂದ ಕೇಳಿ ತಿಳಿದುಕೊಳ್ಳಬೇಕು ಅನ್ನೋ ಮನಸ್ಥಿತಿನೇ ಇಲ್ಲ. ಎಲ್ಲದಕ್ಕೂ internet & Google. ಅದಕ್ಕೇ ಯೋಗರಾಜ್ ಭಟ್ರೂ ಸಹಾ ಲೈಫು ಇಷ್ಟೇನೇ ಹಾಡಿನಲ್ಲಿ ಮನೇಲೀ ಇಲಿ ಹಿಡಿಯೋದಕ್ಕೂ internetನಲ್ಲಿ ಹುಡುಕುವ ಪರಿಸ್ಥಿತಿ ಬಂದಿದೆ ಎಂದು ವ್ಯಂಗವಾಡಿರುವುದು ನಿಜಕ್ಕೂ ಕಠು ಸತ್ಯ ಎನಿಸುವುದಲ್ಲದೇ ಮಾರ್ಮಿಕವೂ ಎನಿಸುತ್ತದೆ.

G ಎಂದರೆ ಇಂದಿನ ಮಕ್ಕಳಿಗೆ ತಿಳಿದಿರುವುದೇ G for Google ಇಲ್ಲವೇ, 4G ಅಥವಾ 5G. ಆದರೇ ಇವೆಲ್ಲದ್ದಕ್ಕಿಂತಲೂ ಮುಖ್ಯವಾದ 3G ಇದ್ದು ಅದುವೇ ಮಾತಾಜಿ, ಪಿತಾಜಿ ಮತ್ತು ಗುರೂಜಿ. ಜೀವನದಲ್ಲಿ ಎಲ್ಲದ್ದಕ್ಕೂ Google ನೆಚ್ಚಿಕೊಳ್ಳೊದಕ್ಕೆ ಆಗೋದಿಲ್ಲ. ಮನೆಯೇ ಮೊದಲ ಪಾಠ ಶಾಲೆ ತಂದೆ ತಾಯಿಯರೇ ಮೊದಲು ಗುರುಗಳಾದರೆ, ನಮ್ಮ ಏಳಿಗೆಯಲ್ಲಿ ಗುರುಗಳ ಪಾತ್ರ ತುಂಬಾನೇ ಮುಖ್ಯ ಆಗುತ್ತದೆ ಎನ್ನುವುದಕ್ಕೆ ಶ್ರೀ ರಾಮಕೃಷ್ಣ ಪರಮಹಂಸ ಮತ್ತು ವಿವೇಕಾನಂದರ ನಡುವೆ ನಡೆದ ಈ ಸುಂದರ ಪ್ರಸಂಗ ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆ ಆಗ್ತಾ ಇದೆ.

ಅದೊಮ್ಮೆ ಸ್ವಾಮಿ ವಿವೇಕಾನಂದರು ರಾಮಕೃಷ್ಣ ಪರಮಹಂಸರನ್ನು ಭೇಟಿ ಮಾಡಿದಾಗ, ನಾನು ಭಗವದ್ಗೀತೆ ಮತ್ತು ಇತರ ಗ್ರಂಥಗಳನ್ನು ಹಲವಾರು ಬಾರಿ ಓದಿದ್ದೇನೆ, ನಾನು ಗೀತಾ ಮತ್ತು ರಾಮಾಯಣದ ಬಗ್ಗೆ ಉಪನ್ಯಾಸ ಮತ್ತು ಪ್ರವಚನಗಳನ್ನು ನೀಡುವಷ್ಟು ಜ್ಞಾನಾರ್ಜನೆ ಆಗಿದೆ ಮತ್ತು ಈಗಾಗಲೇ ಕೆಲವು ಕಡೆ ಪ್ರವಚನಗಳನ್ನೂ ಮಾಡಿದ್ದೇನೆ. ಇಷ್ಟೆಲ್ಲಾ ಅದ್ಮೇಲೂ ನನಗೆ ಇನ್ನೂ ಸಂತರ ಆಶ್ರಯ ಬೇಕೇ? ನನಗೆ ಇನ್ನೂ ಗುರುಗಳ ದೀಕ್ಷೇ ಬೇಕೇ? ಎಂದು ಕೇಳುತ್ತಾರೆ. ವಿವೇಕಾನಂದರನ್ನೊಮ್ಮೆ ದಿಟ್ಟಿಸಿ ನೋಡಿದ ರಾಮಕೃಷ್ಣರು ಉತ್ತರಿಸದೇ, ಮುಂದೆ ಸಮಯ ಬಂದಾಗ ನಿನಗೇ ಗೊತ್ತಾಗುತ್ತದೆ ಎಂದು ತಿಳಿಸಿ ಸುಮ್ಮನಾಗುತ್ತಾರೆ.

ಕೆಲವು ದಿನಗಳ ನಂತರ ರಾಮಕೃಷ್ಣರು ವಿವೇಕಾನಂದರನ್ನು ಕರೆದು ಅವರ ಕೈಯ್ಯಲ್ಲೊಂದು ವಸ್ತುವೊಂದನ್ನು ಕೊಟ್ಟು ಅದನ್ನು ಅಲ್ಲೇ ಸಮುದ್ರ ಮಾರ್ಗದಲ್ಲಿ ಕೆಲವು ಗಂಟೆಗಳಷ್ಟು ದೂರದಲ್ಲಿರುವ ಹತ್ತಿರದ ಹಳ್ಳಿಯೊಂದಕ್ಕೆ ತಲುಪಿಸಲು ತಿಳಿಸುತ್ತಾರೆ.

ಗುರುಗಳು ಹೇಳಿದ್ದೇ ವೇದವಾಕ್ಯ ಎಂದು ನಂಬಿದ್ದ ವಿವೇಕಾನಂದರೂ ಅದಕ್ಕೊಪ್ಪಿ ಮಾರನೇಯ ದಿನ ಸಮುದ್ರ ದಂಡೆಗೆ ಹೋಗಿ ಸಿದ್ಧವಾಗಿದ್ದ ದೋಣಿಯನ್ನೇರಿ ನಾವಿಕನಿಗೆ ಇನ್ನೇನ್ನು ಹೊರಡಲು ತಿಳಿಸಬೇಕು ಎನ್ನುವಷ್ಟರಲ್ಲಿ ಅವರಿಗೆ ಹಳ್ಳಿಗೆ ಹೋಗುವ ದಾರಿ ಗೊತ್ತಿಲ್ಲ ಎಂಬುದು ಅರಿವಾಗಿ, ನಾವಿಕನಿಗೆ ಆ ಹಳ್ಳಿಗೆ ಹೋಗುವ ದಾರಿಗೊತ್ತೇ ಎಂದು ಕೇಳಿದರೆ, ಅತನಿಗೂ ಅದರ ಬಗ್ಗೆ ಯಾವುದೇ ಸುಳಿವು ಇಲ್ಲ ಎಂಬುದನ್ನು ಅರಿತುಕೊಳ್ಳುತ್ತಾರೆ.

ಆ ಕೂಡಲೇ, ವಿವೇಕಾನಂದರು ತಮ್ಮ ಗುರುಗಳ ಬಳಿಗೆ ಆ ಹಳ್ಳಿಗೆ ಹೋಗುವ ದಾರಿ ಕೇಳುತ್ತಾರೆ.

ವೀವೇಕಾನಂದರ ಆಗಮನದ ನಿರೀಕ್ಷೆಯಲ್ಲಿದ್ದ ರಾಮಕೃಷ್ಣರು, ನಸುನಗುತ್ತಾ ನರೇಂದ್ರ ನೀನು ಗುರುವಿನ ಅವಶ್ಯಕತೆ ಬೇಕೆ ಎಂದು ಕೇಳಿದ ಪ್ರಶ್ನೆಗೆ ಇಂದು ಉತ್ತರ ನೀಡುವ ಸಮಯ ಬಂದಿದೆ ಎಂದು ಹೇಳುತ್ತಾ,

ನೋಡು ನಿನ್ನ ಬಳಿ ಹೋಗಲು ಮಾಧ್ಯಮ ಅಂದರೆ ದೋಣಿ ಇದೆ.

ಅದರ ಜೊತೆಗೆ ಕರೆದೊಯ್ಯಲು ಸಂಪನ್ಮೂಲವಾದ ನಾವಿಕನಿದ್ದಾನೆ. ಹೋಗುವ ಮಾರ್ಗ ಅಂದರೆ ಸಮುದ್ರ ಇದೆ,

ನಿನಗೆ ಕೊಟ್ಟ ವಸ್ತುವನ್ನು ತಲುಪಿಸಬೇಕು ಎಂಬ ಕಾರ್ಯದ ಅರಿವಿದೆ. ಎಲ್ಲಿ ಮತ್ತು ಯಾರಿಗೆ ಅದನ್ನು ತಲುಪಿಸಬೇಕೆಂದೂ ನಿಮಗೆ ತಿಳಿದಿದೆ

ಆದರೆ ನಿನಗೆ ಆಲ್ಲಿಗೆ ಹೋಗುವ ಸರಿಯಾದ ಮಾರ್ಗ ತಿಳಿದಿಲ್ಲ ಏಕೆಂದರೆ ನಿನಗೇ ಮಾರ್ಗ ಮತ್ತು ಹಳ್ಳಿ ಹೊಸದು. ಹಾಗಾಗಿ ನೀನು ಹಳ್ಳಿಯ ಮತ್ತು ಆದಕ್ಕೆ ಹೋಗುವ ಮಾರ್ಗವನ್ನು ತಿಳಿದಿರುವ ನನ್ನ ಬಳಿಗೆ ತಿಳಿದುಕೊಳ್ಳಲು ಬಂದಿರುವೆ.

ಅಂತೆಯೇ ನೀನು ಎಲ್ಲಾ ಧರ್ಮಗ್ರಂಥಗಳನ್ನು ಓದಿರಬಹುದು ಮತ್ತು ನೀವು ಅವುಗಳ ಕುರಿತಂತೆ ಅದ್ಭುತ ಪ್ರವಚನಗಳನ್ನೂ ಮಾಡಿರಬಹುದು

ಆದರೆ, ಅ ಧರ್ಮಗ್ರಂಥಗಳ ನಿಜವಾದ ಗೂಡಾರ್ಥಗಳನ್ನು ಅರಿತುಕೊಳ್ಳಲು ಈಗಾಗಲೇ ಹಾದಿಯಲ್ಲಿ ಸಾಗಿದ ಒಬ್ಬ ಸಮರ್ಥವಾದ ಅರಿವಿರುವ ಗುರುವಿನ ಮಾರ್ಗದರ್ಶನದ ಅವಶ್ಯಕತೆ ಇದೆ. ನೀವು ಈಗಾಗಲೇ ಓದಿ ತಿಳಿದಿದ್ದ ಗ್ರಂಥಗಳಿಗೆ ಗುರುವಿನಿಂದ ಅದರ ಭಾಷ್ಯವನ್ನೊಮ್ಮೆ ಕೇಳಿದಾಗ ನಿಮಗೆ ಗ್ರಂಥದ ಸಮಗ್ರ ಚಿತ್ರಣ ಮೂಡುವುದಲ್ಲದೇ ಅದರ ಸಾರಂಶ ಸ್ಪಷ್ಟವಾಗಿ ಮನದಟ್ಟಾಗುತ್ತದೆ. ಹಾಗಾಗಿ ನಿನಗೆ ಸಂತರ ಅಶ್ರಯ ಮತ್ತು ಸಮರ್ಥ ಗುರುವಿನ ಅವಶ್ಯಕತೆ ಇದೆ ಎಂದಾಗ ಗುರುಗಳಿಗೆ ಸಾಷ್ಟಾಂಗ ನಮಸ್ಕರಿಸುತ್ತಾರೆ.

Google ಮತ್ತು ಗುರುವಿನ ನಡುವೆ ಇರುವ ಅಂತರವೂ ಇದೇ. Google ನಾವು ಕೇಳಿದ ಪ್ರಶ್ನೆಗೆ ತನ್ನ ಬಳಿ ಮತ್ತೊಬ್ಬರು ತಿಳಿಸಿದಂತಹ ಉತ್ತರವನ್ನು ಮಾತ್ರ ಕೊಡಬಲ್ಲದೇ ಹೊರತು ನಮ್ಮ ಪ್ರಶ್ನೆಯ ಹಿಂದೆ ಇರುವ ನಿಜವಾದ ಅವಶ್ಯಕತೆಯನ್ನು ಅರಿತು ನಮ್ಮ ಭಾವನೆಗಳನ್ನು ಅನುಭವಿಸಿ ಅದು ಉತ್ತರಿಸಲಾಗದು.

ಗುರು ಎಂದರೆ, ತನ್ನ ಅನುಯಾಯಿಗಳು ಯಾವುದೇ ಒಂದು ಸಂಗತಿಯನ್ನು ಅರಿಯಲು ಅಸಮರ್ಥರಾದಾಗ ಅವರಿಗೆ ಜ್ಞಾನದ ಹಾದಿಯನ್ನು ತೋರಿಸುವ ಮತ್ತು ಮುನ್ನಡೆಸುವ ವ್ಯಕ್ತಿ ಎಂದರ್ಥ. ಗುರುವಿನಲ್ಲಿ ಸರಳತೆ, ತ್ಯಾಗ, ಸಹಿಷ್ಣುತೆ, ನಿಸ್ವಾರ್ಥತೆ, ಭಾವನಾತ್ಮಕತೆಗಳಂತಹ ವಿವಿಧ ಗುಣಗಳಿರುತ್ತವೆ.

ಇನ್ನೂ ಸರಳವಾಗಿ ಹೇಳಬೇಕೆಂದರೆ, ಆತ್ಮಹತ್ಯೆ ಮಾಡಿಕೊಳ್ಳುವುದು ಹೇಗೆ ಎಂದು Google ಮತ್ತು ಗುರುಗಳ ಬಳಿ ಕೇಳಿದರೆ,  ಆತ್ಮಹತ್ಯೆ ಮಾಡಿಕೊಳ್ಳುವ ನೂರಾರು ವಿಧಾನಗಳನ್ನು ಕ್ಷಣಾರ್ಧ ಮಾತ್ರದಲ್ಲಿ Google ಪರದೆಯ ಮೇಲೆ ನೂರಾರು ವಿಧಾನಗಳನ್ನು ತೋರಿಸುತ್ತದೆ. ಆದರೆ ಅದೇ ಗುರುವು ಅರೇ, ಆತ್ಮಹತ್ಯೆ ಮಾಡಿಕೊಳ್ಳುವಂತಹ ಅನಿವಾರ್ಯ ನಿನಗೆ ಏಕೆ ಬಂದಿತು ಎಂದು ಕೇಳಿ, ಆತ್ಮಹತ್ಯೆ ಮಾಡಿಕೊಳ್ಳುವುದು ಮಹಾಪಾಪ ಎಂದು ಶಾಸ್ತ್ರ ಪುರಾಣಗಳ ವೃತ್ತಾಂತಗಳನ್ನು ತಿಳಿಹೇಳಿ ಅವರನ್ನು ಆತ್ಮಹತ್ಯೆ ಮಾಡುಕೊಳ್ಳುವುದಕ್ಕಿಂತ ಜೀವನದಲ್ಲಿ ಹೇಗೆ ಮುಂದು ಬರಬಹುದೆಂಬುದನ್ನು ತೋರಿಸುತ್ತಾರೆ.

ಪ್ರಪಂಚದ ಬಹುತೇಕ ಎಲ್ಲ ಜ್ಞಾನವೂ Googleನಲ್ಲಿ ಅಳವಡಿಸಲಾಗಿದೇ ಎಂದರೂ, ಅದಕ್ಕೆ ಗುರುವಿನ ಸ್ಥಾನವನ್ನು ಕೊಡಲಾಗದು ನಮಗೆ ಸದಾಕಾಲವೂ ನಿಜವಾದ ಗುರುವಿನ ಅನುಗ್ರಹದ ಅವಶ್ಯಕತೆ ಇದೆ. Googleಗೆ ಒಂದು ಪ್ರಶ್ನೆಯನ್ನು ಯಾರೇ ಕೇಳಿದರೂ ಅದು ಒಂದೇ ರೀತಿಯ ಉತ್ತರವನ್ನೇ ನಮಗೆ ಕೊಡುತ್ತದೆ. ಆದರೆ ಗುರುವಿಗೆ ಆಲೋಚನಾ ಶಕ್ತಿಯಿದ್ದು, ಅವರು, ಶಿಷ್ಯರಿಂದ ಶಿಷ್ಯರಿಗೆ ಅವರವರ ಭಾವನೆ ಮತ್ತು ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಅದಕ್ಕೆ ಅನುಗುಣವಾಗಿ ಉತ್ತರಿಸುವ ಶಕ್ತಿ ಇರುತ್ತದೆ, ಅವರು ಹಾಗೆ ಉತ್ತರವನ್ನು ನೀಡುವಾಗ ಅದರಲ್ಲಿ ಪ್ರಾಮಾಣಿಕತೆ ಮತ್ತು ನಿಸ್ವಾರ್ಥವಾಗಿರುತ್ತದೆ.

ಇಂದು ಆಟೊಪೈಲಟ್ ಕಾರ್ಯಕ್ಷಮತೆ ಇರುವ ವಿಮಾನಗಳು ಮತ್ತು ಸ್ವಯಂ ಚಾಲಿತ ಡ್ರೈವರ್ಲೆಸ್ ಕಾರುಗಳು ಬಳಕೆಯಲ್ಲಿದ್ದರೂ ಅದನ್ನು ಸಮರ್ಥವಾಗಿ ನಿರ್ವಹಿಸಲು ಪೈಲೆಟ್ ಅಥವಾ ಡ್ರೈವರ್ ಇರಲೇ ಬೇಕು. ಏಕೆಂದರೆ ಮಾನವನ ಹಸ್ತಕ್ಷೇಪದಿಂದ ಮಾತ್ರವೇ ಸಮಸ್ಯೆಗಳನ್ನು ಸೂಕ್ತ ರೀತಿಯಲ್ಲಿ ಪರಿಹರಿಸಬಹುದೇ ಹೊರತು ಇದೇ ಕಾರ್ಯಕ್ಷಮತೆಯನ್ನು ಯಂತ್ರಗಳಿಂದ ನಿರೀಕ್ಷಿಸಲು ಸಾಧ್ಯವಿಲ್ಲ.

ಊಟದ ರುಚಿಯನ್ನು ಹೆಚ್ಚಿಸುವ ಸಲುವಾಗಿ ಉಪ್ಪಿನಕಾಯಿಯನ್ನು ತಿನ್ನಬಹುದೇ ಹೊರತು, ಹೊಟ್ಟೆಯನ್ನು ತುಂಬಿಸುವುದಕ್ಕೆ ಉಪ್ಪಿನಕಾಯಿಯನ್ನು ತಿನ್ನಲಾಗುವುದಿಲ್ಲ. ಅದೇ ರೀತಿ ನಾವು ಗುರುಮುಖೇನ ಸರಿಯಾಗಿ ತಿಳಿದಂತ ವಿಷಯದ ಕುರಿತು ತಾಳೆ ಹಾಕಲು ಅಥವಾ ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯಲು Google ಬಳಸ ಬಹುದೇ ಹೊರತು, ಗುರುವಿನ ಜಾಗದಲ್ಲಿ Googleನ್ನು ಬದಲಿಸಲಾಗದು. ಅದಕ್ಕೇ ಅಲ್ಲವೇ ಪುರಂದರ ದಾಸರು ಹೇಳಿರುವುದು. ಗುರುವಿನ ಗುಲಾಮನಾಗದ ತನಕ ದೊರೆಯದಣ್ಣ ಮುಕುತಿ ಎಂದು ಎಲ್ಲರಿಗೂ ಗುರುಗಳ ಅನುಗ್ರಹದಿಂದ ಉತ್ತಮ ಸಂಸ್ಕಾರ, ಸದ್ವಿದ್ಯೆ, ಸದ್ಬುದ್ಧಿ ದೊರೆಯುವಂತಾಗಲೀ ಎಂದು ಪ್ರಾರ್ಥಿಸೋಣ ಅಲ್ವೇ?

ಏನಂತೀರೀ?

ನಿಮ್ಮವನೇ ಉಮಸುತ

4 thoughts on “Google ಮತ್ತು ಗುರು ನಡುವಿನ ಅಂತರ, ಮಹತ್ವ

  1. ಸಕಾಲಿಕ ಲೇಖನ ತುಂಬಾ ಚೆನ್ನಾಗಿದೆ. ಗುರು ಮತ್ತು ಗೂಗಲ್ ನಡುವಿನ ವ್ಯತ್ಯಾಸ ಅರ್ಥ ಮಾಡಿಕೊಳ್ಳುವ ಅವಶ್ಯಕತೆ ಇಂದು ಇದೆ.

    Liked by 1 person

Leave a reply to BN Yalamalli Cancel reply