ನಮ್ಮ ದೇಶದಲ್ಲಿ ಹಲವಾರು ಗಣೇಶನ ಪ್ರಸಿದ್ಧ ದೇವಾಲಯಗಳಿವೆ. ಆದರೆ, ಛತ್ತೀಸ್ ಘಡದ ರಾಯ್ಪುರದಿಂದ ಸುಮಾರು 350 ಕಿ.ಮೀ ದೂರದಲ್ಲಿರುವ ದಾಂತೇವಾಡ ಜಿಲ್ಲೆಯ ದಟ್ಟವಾದ ಕಾಡಿನ ಮಧ್ಯದಲ್ಲಿ ಧೋಲ್ಕಲ್ ಎಂಬ ಪರ್ವತದ ತುತ್ತ ತುದಿಯಲ್ಲಿ ಯಾವುದೇ ಮಂಟಪವಿಲ್ಲದೇ ಬಟ್ಟ ಬಯಲಿನಲ್ಲಿರುವ ಈ ಸುಂದರ ವಿಘ್ನವಿನಾಶಕನ ಬಗ್ಗೆ ಬಹುತೇಕರಿಗೆ ತಿಳಿದೇ ಇರಲಿಲ್ಲ.
ಸುಮಾರು 13,000 ಅಡಿಗಳಷ್ಟು ಎತ್ತರದ ಈ ಡೋಲ್ಕಲ್ ಬೆಟ್ಟದ ತುತ್ತ ತುದಿಯಲ್ಲಿರುವ ಈ ಗಣೇಶನ ಮೂರ್ತಿಯನ್ನು ಸ್ಥಳೀಯ ಪತ್ರಕರ್ತ ಮತ್ತು ಪುರಾತತ್ವ ಇಲಾಖೆಯಿಂದ ನಡೆಸುತ್ತಿದ್ದ ಭಾರಿ ಶೋಧ ಕಾರ್ಯಾಚರಣೆಯಲ್ಲಿ 2012 ರಲ್ಲಿ ಮೊದಲ ಬಾರಿಗೆ ಕಂಡು ಹಿಡಿದು ಎಲ್ಲರಿಗೂ ಇದನ್ನು ಪರಿಚಯಿಸಿದರು.
ಈ ಡೋಲ್ಕಲ್ ಗಣೇಶನ ಬಗ್ಗೆ ಸ್ಥಳೀಯರ ನಂಬಿಕೆಯಂತೆ, ಸಾವಿರಾರು ವರ್ಷಗಳ ಹಿಂದೆ ಪುರಾಣದ ಪ್ರಕಾರ ಶಿವನನ್ನು ಭೇಟಿಯಾಗ ಬೇಕೆಂದು ಬರುವ ಪರಶುರಾಮನನ್ನು ಗಣೇಶ ತಡೆಯುತ್ತಾನೆ. ಆಗ ಪರಶುರಾಮ ಹಾಗೂ ಗಣೇಶನ ಮಧ್ಯೆ ಭೀಕರ ಯುದ್ಧ ನಡೆಯುತ್ತದೆ. ಆಗ ಪರಶುರಾಮ ತನ್ನ ಪಾರ್ಸಾ ಅರ್ಥಾತ್ ಪರಶುವಿನಿಂದ ಗಣೇಶನ ಒಂದು ದಂತವನ್ನು ತುಂಡರಿಸಿದ ಸ್ಥಳವೇ ಇದು ಎನ್ನಲಾಗಿದೆ. ಹಾಗಾಗಿ ಈ ಬೆಟ್ಟದ ಬುಡದಲ್ಲಿರುವ ಗ್ರಾಮವನ್ನು ಫರ್ಸಪಾಲ್ ಎನ್ನುತ್ತಾರೆ. ಇದರ ಪಕ್ಕದಲ್ಲಿ ಪಹರೇದಾರ್ ಎನ್ನುವ ಇನ್ನೊಂದು ಊರಿದ್ದು ಅಲ್ಲಿ ಈ ಗಣೇಶನನ್ನು ಆ ಊರಿನ ರಕ್ಷಕ ಎಂದೇ ನಂಬುತ್ತಾರೆ.
ಹೀಗೆ ಪರಶುರಾಮ ಮತ್ತು ಗಣೇಶನ ನಡುವಿನ ಯುದ್ಧದ ನೆನಪಿಗಾಗಿ, ಚಿಂದಕ್ ನಾಗವಂಶಿ ರಾಜವಂಶದ ರಾಜರು 11 ನೇ ಶತಮಾನದಲ್ಲಿ ಬೆಟ್ಟದ ತುದಿಯ ಬಯಲಿನಲ್ಲಿ ಆಲಯವೇ ಇಲ್ಲದೇ, ಕುಳಿತ ಕಲ್ಲಿನ ಗಣೇಶನ ವಿಗ್ರಹವನ್ನು ಸ್ಥಾಪಿಸಿದ್ದಾರೆ ಎನ್ನಲಾಗಿದೆ. ಸುಮಾರು 3 ಅಡಿ ಎತ್ತರದ ಈ ವಿಗ್ರಹವನ್ನು ಶಾಸ್ತ್ರೀಯ ಸಂಗೀತದಲ್ಲಿ ಬಳಸುವ ಸಂಗೀತ ವಾದ್ಯವಾದ ಧೋಲಕ್ ಆಕಾರದಲ್ಲಿ ಕೆತ್ತಲಾಗಿರುವ ಕಾರಣ ಈ ಬೆಟ್ಟವನ್ನು ಧೋಲ್ಕಲ್ ಎಂದು ಕರೆಯುತ್ತಾರೆ. ಗಣೇಶನ ಈ ವಿಗ್ರಹವು ವಿಶಿಷ್ಟವಾದ ಲಲಿತಾಸನದ ಭಂಗಿಯಲ್ಲಿ ಕುಳಿತಿರುವಂತಿದೆ. ಗಣೇಶನ ಮೂರ್ತಿಯ ಹೊಟ್ಟೆಯ ಬಳಿ ಇರುವ ಹಾವು ನಾಗವಂಶಜರ ಸಂಕೇತವಾಗಿದೆ. ಸ್ಥಳೀಯರು ನಿವಾಸಿಗಳು ವರ್ಷಪೂರ್ತಿಯೂ ಇಲ್ಲಿ ಪೂಜೆ ನಡೆಸಿದರೆ, ಜನವರಿ-ಫೆಬ್ರವರಿ ನಡುವೆ ಬರುವ ಮಾಘ ಮಾಸದಲ್ಲಿ ಇಲ್ಲಿ ವಿಶೇಷ ಜಾತ್ರೆ ನಡೆದು ಸಾವಿರಾರು ಜನರು ಆ ಜಾತ್ರೆಯಲ್ಲಿ ಪಾಲ್ಗೊಂಡು ಗಣೇಶನ ಕೃಪೆಗೆ ಪಾತ್ರರಾಗುತ್ತಾರೆ.
ದಟ್ಟವಾದ ಕಾಡಿನ ಮಧ್ಯದಲ್ಲಿರುವ ಈ ಗಣೇಶ ಅನೇಕ ಚಾರಣಿಗರ ನೆಚ್ಚಿನ ತಾಣವಾಗಿದ್ದು ಎಲ್ಲರೂ ಫರ್ಸಪಾಲ್ ಗ್ರಾಮಕ್ಕೆ ಬಂದು ದಟ್ಟವಾದ ಕೋನಿಫರ್ ಕಾಡುಗಳ ಮಧ್ಯೆ ಸ್ಥಳೀಯ ಮಾರ್ಗದರ್ಶಿಗಳ ಸಹಾಯದಿಂದ ಸುಮಾರು ಸುಮಾರು ಐದು ಕಿಲೋ ಮೀಟರ್ಗಳ ದೂರವನ್ನು ಚಾರಣ ಮಾಡಿ ಬೆಟ್ಟದ ತುದಿಯನ್ನು ತಲುಪಿ ಗಣೇಶನ ದರ್ಶನ ಮಾಡಿ ಅಲ್ಲಿನ ತಂಗಾಳಿ ಮತ್ತು ಸುತ್ತಮುತ್ತಲಿನ ವಿಹಂಗಮ ನೋಟ ನೋಡುತ್ತಿದ್ದಂತೆಯೇ, ಅಲ್ಲಿಯವರೆಗೂ ಚಾರಣ ಮಾಡಿದ ಎಲ್ಲಾ ದಣಿವೂ ಕ್ಷಣ ಮಾತ್ರದಲ್ಲಿ ನಿವಾರಣೆಯಾಗುತ್ತದೆ. ಈ ಪ್ರದೇಶದಲ್ಲಿ ಯಾವುದೇ ಊಟೋಪಚಾರಗಳ ವ್ಯವಸ್ಥೆ ಇಲ್ಲದ ಕಾರಣ ಬಹುತೇಕರು ತಮ್ಮೊಂದಿಗೆ ಆಹಾರ ಮತ್ತು ನೀರನ್ನು ತಂದು ಇಲ್ಲಿ ನೆಮ್ಮದಿಯಿಂದ ಆಹಾರವನ್ನು ಸೇವಿಸಿ ಮತ್ತೊಮ್ಮೆ ಗಣೇಶನಿಗೆ ನಮಿಸಿ ಅಲ್ಲಿಂದ ನಿರ್ಗಮಿಸುವುದು ರೂಢಿಯಲ್ಲಿದೆ.
ಈ ಪ್ರದೇಶಕ್ಕೆ ವಿಮಾನದ ಮೂಲಕ ಬರಲು ಇಚ್ಚಿಸಿದಲ್ಲಿ, ರಾಯ್ಪುರ ಅಥವಾ ವಿಶಾಖಪಟ್ಟಣಕ್ಕೆ ಬಂದು ಅಲ್ಲಿಂದ ಸುಮಾರು 400 ಕಿ.ಮೀ. ರಸ್ತೆಯ ಪ್ರಯಾಣ ನಡೆಸಿ ದಂತೇವಾಡ ತಲುಪಬಹುದಾಗಿದೆ.
ಇನ್ನು ರೈಲಿನಿಂದ ಬರಲು ಇಚ್ಚಿಸಿದಲ್ಲಿ ವಿಶಾಖ ಪಟ್ಟಣಂ ಮೂಲಕ ದಂತೇವಾಡ ತಲುಪಬಹುದಾಗಿದೆ.
ಹೈದರಾಬಾದ್, ವಿಶಾಖ ಪಟ್ಟಣದಿಂದ ದಾಂತೇವಾಡಕ್ಕೆ ನಿಯಮಿತವಾಗಿ ಬಸ್ ಸೇವೆ ಲಭ್ಯವಿದ್ದು ರಸ್ತೆಯೂ ಕೂಡಾ ಅತ್ಯುತ್ತವಾಗಿದೆ.
ಎಂತಹ ದುರಂತ ಅಂದ್ರೇ, ಈ ಧೋಲ್ಕಲ್ ಪರ್ವತದ ಮೇಲಿರುವ 1000 ವರ್ಷಗಳಷ್ಟು ಹಳೆಯದಾದ ಗಣೇಶ ವಿಗ್ರಹವನ್ನು ಕೆಲ ತಿಂಗಳುಗಳ ಹಿಂದೆ ತಮ್ಮ ಹಗೆ ತನವನ್ನು ಸಾಧಿಸಲು, ಸರ್ಕಾರಕ್ಕೆ ಏನನ್ನೋ ಹೇಳಲು ಹೋದ ನಕ್ಸಲರು ಧ್ವಂಸ ಮಾಡಿ ಈ ವಿಗ್ರಹವನ್ನು ತುಂಡು ತುಂಡಾಗಿಸಿ ಅಟ್ಟಹಾಸವನ್ನು ಮೆರೀತಾರೆ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಅನೇಕ ಶಿಲ್ಪಿಗಳನ್ನು ಸಂಪರ್ಕಿಸಿ ಕೆಲವು ಆಧುನಿಕ ರಾಸಾಯನಿಕ ಪ್ರಕ್ರಿಯೆಗಳ ಮೂಲಕ, 56 ತುಂಡುಗಳಾಗಿ ಒಡೆದಿದ್ದ ಈ ವಿಗ್ರಹವನ್ನು ಪುನಃ ತಮ್ಮ ಸ್ವಂತ ಖರ್ಚಿನಲ್ಲಿ ಜೋಡಿಸಿ ಅದನ್ನು ಪುನಃ ಪ್ರತಿಷ್ಠಾಪಿಸಿ, ಇತಿಹಾಸ ಪ್ರಸಿದ್ದ ಗಣಪನಿಗೆ ತಮ್ಮ ಭಕ್ತಿಯ ಪರಾಕಾಷ್ಠೆಯನ್ನು ತೋರಿಸಿರುವುದು ಶ್ಲಾಘನೀಯವಾಗಿದೆ
ಭಾರತದ ಅತಿದೊಡ್ಡ ಖನಿಜ ನಿಕ್ಷೇಪಗಳ ಖನಿಜವಾಗಿರುವ ಈ ಛತ್ತೀಸ್ ಘಡದಲ್ಲಿ ಅನೇಕ ದಶಕಗಳಿಂದಲೂ ಮಾವೋವಾದಿ ದಂಗೆ ಮತ್ತು ಎಗ್ಗಿಲ್ಲದೆ ನಡೆಯುತ್ತಿರುವ ಮತಾಂತರದಿಂದಾಗಿ ರಾಜ್ಯದ ಶ್ರೀಮಂತ ಇತಿಹಾಸದ ಪರಿಶೋಧನೆಗೆ ಹೆಚ್ಚಾಗಿ ಅಡ್ಡಿಯಾಗುತ್ತಿದೆ. ಈ ಎಡಪಂಥೀಯ ಬಂಡುಕೋರರು ಮತ್ತು ಮತಾಂತರವಾದಿಗಳು ಛತ್ತೀಸ್ ಘಡ್ ರಾಜ್ಯದ ಅಭಿವೃದ್ಧಿಯನ್ನು ತಮ್ಮ ಧಾಳಿಗಳ ಮೂಲಕ ಹಾಳು ಗೆಡವುತ್ತಿರುವುದು ನಿಜಕ್ಕೂ ದುಃಖಕರ ಸಂಗತಿಯಾಗಿದೆ.
ಈ ನಕ್ಸಲ್ ವಾದಿಗಳು ಇನ್ನು ಏನಾದ್ರೂ ಮಾಡುವ ಮೊದಲು ಸ್ವಲ್ಪ ಪುರುಸೊತ್ತು ಮಾಡಿಕೊಂಡು ಮೈಯಲ್ಲಿ ಕಸುವಿದ್ದಾಗಲೇ,ಚಾರಣ ಮಾಡಿ ಈ ವಿಘ್ನ ವಿನಾಶಕನ ದರ್ಶನದ ಭಾಗ್ಯ ಪಡೆದುಕೊಳ್ಳೋಣ ಅಲ್ವೇ?
ಏನಂತೀರೀ?