ಎಪ್ಪತ್ರ ದಕದದಲ್ಲಿ ಭಾರತದ ಕ್ರಿಕೆಟ್ ತಂಡಕ್ಕೆ ಕರ್ನಾಟಕದ ಕೊಡುಗೆ ಅತ್ಯಮೂಲ್ಯ ಎಂದರೆ ತಪ್ಪಾಗಲಾದರು ಅದರಲ್ಲಿಯೂ ಗುಂಡಪ್ಪಾ ವಿಶ್ವನಾಧ್, ಭಗವತ್ ಚಂದ್ರಶೇಖರ್,ಸೈಯ್ಯದ್ ಕಿರ್ಮಾನಿ, ಬ್ರಿಜೇಶ್ ಪಟೇಲ್, ಸುಧಾಕರರಾವ್ ಅಂತಹ ಘಟಾನುಘಟಿಗಳು ಏಕ ಕಾಲದಲ್ಲಿ ಭಾರತ ತಂಡ ಪ್ರವೇಶಿಸಬೇಕಾದರೇ ಅದಕ್ಕೆ ರೂವಾರಿ ಎಂದರೆ ಅಂದಿನ ಕರ್ನಾಟಕ ಕ್ರಿಕೆಟ್ ತಂಡದ ನಾಯಕರಾಗಿದ್ದ ಎರಾಪಳ್ಳಿ ಅನಂತರಾವ್ ಶ್ರೀನಿವಾಸ ಪ್ರಸನ್ನ ಅರ್ಥಾಥ್ ಇ ಎ ಎಸ್ ಪ್ರಸನ್ನ ಎಂದರೆ ತಪ್ಪಾಗಲಾರದೇನೋ? ಅನೇಕ ವರ್ಷಗಳ ಕಾಲ ರಣಜೀ ಪಂದ್ಯಾವಳಿಗಳಲ್ಲಿ ಭಾಗವಹಿಸುತ್ತಿದ್ದರೂ ಪ್ರಶಸ್ತಿಯ ಬರವನ್ನು ಎದುರಿಸುತ್ತಿದ್ದ ಕರ್ನಾಟಕ ತಂಡಕ್ಕೆ 1973-74 ರಾಜಸ್ಥಾನದ ವಿರುದ್ಧ ಮತ್ತು 1977-78ರಲ್ಲಿ ಉತ್ತರ ಪ್ರದೇಶದ ವಿರುದ್ದ ಪ್ರಸನ್ನ ಅವರ ನಾಯಕತ್ವದಲ್ಲಿ ರಣಜಿ ಟ್ರೋಫಿಯನ್ನು ಗೆಲ್ಲಿಸಿ ಕೊಟ್ಟಿದ್ದರು.
1940, ಮೇ 22 ರಂದು ಬೆಂಗಳೂರಿನ ಜನಿಸಿದ ಶ್ರೀ ಪ್ರಸನ್ನರವರು ಆಟದಂತೆ ಓದಿನಲ್ಲೂ ಅತ್ಯಂತ ಬುದ್ಧಿವಂತರೆನಿಸಿಕೊಂದಿದ್ದವರು. ತಮ್ಮ ಪರಿಣಾಮಕಾರಿ ಆಫ್ ಸ್ಪಿನ್ ದಾಳಿಯ ಮುಖಾಂತರ ಕರ್ನಾಟಕ ತಂಡಕ್ಕೆ ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಆಯ್ಕೆಯಾಗಿ ಅಲ್ಲಿಯೂ ಸಹಾ ಉತ್ತಮ ಪ್ರದರ್ಶನ ನೀಡಿದ ಪರಿಣಾಮವಾಗಿ ತಮ್ಮ 21ನೆಯ ವಯಸ್ಸಿನಲಿಯೇ ಭಾರತ ತಂಡಕ್ಕೆ ಆಯ್ಕೆಯಾಗಿ 1961ರಲ್ಲಿ ವರ್ಷದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕ್ರಿಕೆಟ್ ಟೆಸ್ಟ್ ಪಂದ್ಯವೊಂದನ್ನು ಆಡಿದ ನಂತರವೂ ತಮ್ಮ ಇಂಜಿನಿಯರಿಂಗ್ ಪದವಿ ಮುಗಿಸುವವರೆಗೆ ಕ್ರಿಕೆಟ್ ಆಡುವುದಿಲ್ಲ ಎಂದು ಫಣ ತೊಟ್ಟು ಮೈಸೂರಿನ ಎನ್ ಐ ಇ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿ ಪುನಃ 1966ರಲ್ಲಿ ಕ್ರಿಕೆಟ್ ಆಟ ಮುಂದಿವರೆಸಿ ಮತ್ತೆ ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ಬಿ. ಎಸ್. ಚಂದ್ರಶೇಖರ್ ಮತ್ತು ಪ್ರಸನ್ನರವರ ಜೋಡಿಯ ಸ್ಪಿನ್ ಮೋಡಿ ಅಕ್ಷರಶಃ ಕರ್ನಾಟಕ ಮತ್ತು ಭಾರತ ತಂಡ ಪರವಾಗಿ ಎಲ್ಲಾ ಎದುರಾಳಿ ತಂಡದ ಬ್ಯಾಟ್ಸ್ ಮನ್ ಗಳಿಗೆ ಸಿಂಸಸ್ವಪ್ನವಾಗಿ ಕಾದಿದ್ದಂತೂ ಸುಳ್ಳಲ್ಲ.
ಸಪೂರ ದೇಹದ ಚಂದ್ರಶೇಖರ್ ಬಲಗೈ ಗೂಗ್ಲಿ ಬೋಲರ್ ಆದರೆ, ಧಡೂತಿ ದೇಹದ ಪ್ರಸನ್ನ ಶ್ರೇಷ್ಠ ಬಲಗೈ ಆಫ್ ಸ್ಪಿನ್ ಬೌಲರ್. ಸ್ವಲ್ಪ ದೂರದಿಂದ ನಿಧಾನವಾಗಿ ಓಡಿಬಂದು ಗಾಳಿಯಲ್ಲಿ ತೂರಿಬಿಟ್ಟ ಚೆಂಡು ಪುಟ ಬಿದ್ದು ಸ್ಪಿನ್ ಆಗುತ್ತಿದ್ದ ವೈಖರಿ, ಅವರು ಫ್ಲೈಟ್ ಮಾಡುತ್ತಿದ್ದ ಚೆಂಡಿಗೆ ದಾಂಡಿಗರು ಪರದಾಡುತ್ತಿದ್ದದ್ದು,ಅವರ ಶಾರ್ಟ್ ಪಿಚ್ ಡೆಲಿವರಿಗಳಿಗೆ ಬಾರಿಸಲು ಹೋಗಿ ಔಟಾಗುತ್ತಿದ್ದ ದಾಂಡಿಗರನ್ನು ಹೇಳುವುದಕ್ಕಿಂತಲೂ ನೋಡಿದ್ದರೆ ಮಹದಾನಂದವಾಗುತ್ತಿತ್ತು. ವೇಗದ ಬೋಲಿಂಗ್ಗಿಗೆ ಸಹಕರಿಸುವ ನ್ಯೂಜಿಲೆಂಡಿನಲ್ಲಿಯೂ ಅವರು ಮೂರು ಬಾರಿ ಇನ್ನಿಂಗ್ಸ್ ಒಂದರಲ್ಲಿ ಎಂಟು ವಿಕೆಟ್ಗಳನ್ನು ಪಡೆದದ್ದು ಮತ್ತು ಕೇವಲ ಇಪ್ಪತ್ತೇ ಟೆಸ್ಟ್ ಪಂದ್ಯಗಳಲ್ಲಿ ನೂರು ವಿಕೆಟ್ ಗಳಿಸಿದ ದಾಖಲಿ ಇನ್ನೂ ಕೂಡಾ ಅಭಾತವಾಗಿಯೇ ಉಳಿದಿದೆ ಎಂದರೆ ಅವರ ಬೋಲಿಂಗ್ ವೈಖರಿಯ ಅರಿವಾಗುತ್ತದೆ.
ಚಂದ್ರರಂತೆ ಪ್ರಸನ್ನರಿಗೂ ಅಂದಿನ ನಾಯಕರ ಬೆಂಬಲ ಇಲ್ಲದಿದ್ದ ಕಾರಣ ಕೇವಲ 49 ಟೆಸ್ಟ್ ಪಂದ್ಯಗಳಲ್ಲಿ, 189 ವಿಕೆಟ್ ಪಡೆದಿದ್ದರು, ಅದರಲ್ಲಿ ಪಂದ್ಯವೊಂದರಲ್ಲಿ 5 ವಿಕೆಟ್ 10 ಮತ್ತು 10 ವಿಕೆಟ್ 2 ಸಲ ಪಡೆಯುವುದರೊಂದಿಗೆ 76ರನ್ನುಗಳಿಗೆ 8 ವಿಕೆಟ್ ಪಡೆದದ್ದು ಅವರ ಶ್ರೇಷ್ಠ ಬೋಲಿಂಗ್ ಆಗಿತ್ತು.
ಇನ್ನು ಬ್ಯಾಟಿಂಗ್ಗಿನಲ್ಲಿಯೂ ತಕ್ಕ ಮಟ್ಟಿನ ಪ್ರದರ್ಶನ ನೀಡುತ್ತಿದ್ದ ಪ್ರಸನ್ನ 735 ರನ್ನುಗಳನ್ನು ಗಳಿಸಿ ಅದರಲ್ಲಿ 37 ರನ್ ಅಧಿಕ ಸ್ಕೋರ್ ಆಗಿತ್ತು. ಪಂದ್ಯದ ಅಂತ್ಯದಲ್ಲಿ ಬಾಲಂಗೋಚಿಯಾಗಿ ತಮ್ಮಉಪಯುಕ್ತ ಬ್ಯಾಟಿಂಗ್ ಮೂಲಕ ತಂಡಕ್ಕೆ ಹಲವಾರು ಬಾರಿ ಆಪದ್ಭಾಂಧವರಾಗಿದ್ದರು ಟೆಸ್ಟ್ ಪಂದ್ಯವೊಂದರಲ್ಲಿ ಭಾರತ ತಂಡ ಸೋಲುವ ಸ್ಥಿತಿಯಲ್ಲಿದ್ದಾಗ ಇಡೀದಿನ ಸರ್ದೇಸಾಯ್ ಅವರಿಗೆ ಸಾಥ್ ನೀಡಿ ಪಂದ್ಯವನ್ನು ಡ್ರಾ ಮಾಡಿಕೊಳ್ಳುವುದರಲ್ಲಿ ಸಫಲಾಗಿದ್ದರು.
ಕ್ರಿಕೆಟ್ ಅವರ ಪ್ರವೃತ್ತಿಯಾಗಿದ್ದರೆ ಇಂಜಿನಿಯರಿಂಗ್ ಅವರ ವೃತ್ತಿಯಾಗಿತ್ತು. ಕ್ರಿಕೆಟ್ಟಿನಿಂದ ನಿವೃತ್ತಿಯಾದ ಬಳಿಕ ರೆಮ್ಕೋ, ಬಿ. ಎಚ್. ಇ. ಎಲ್, ಕುದುರೆ ಮುಖ ಕಬ್ಬಿಣ ಅದಿರು ಕಾರ್ಖಾನೆ ಮತ್ತು ಎನ್.ಜಿ. ಇ. ಎಫ್ ಮುಂತಾದ ಕಾರ್ಖಾನೆಗಳಿಗೆ ಪ್ರಮುಖ ತಾಂತ್ರಿಕ ಅಧಿಕಾರಿಗಳಾಗಿ ಕೆಲಸ ಮಾಡಿದ್ದಲ್ಲದೇ, ಭಾರತ ಕ್ರಿಕೆಟ್ ತಂಡ ಮ್ಯಾನೇಜರ್ ಆಗಿಯೂ ಕರ್ತವ್ಯ ನಿರ್ವಹಿಸಿದ್ದರು. ಇಂದಿಗೂ ಸಹಾ ತಮ್ಮ ಬಳಿ ಸಹಾಯ ಕೋರಿ ಬರುವ ಅನೇಕ ಯುವ ಆಟಗಾರರಿಗೆ ತಮ್ಮ ಅಪಾರವಾದ ಅನುಭವವನ್ನು ನಿಸ್ಸಂಕೋಚವಾಗಿ ಮತ್ತು ನಿಸ್ವಾರ್ಥವಾಗಿ ಧಾರೆ ಎರೆಯುತ್ತಿರುವುದು ಶ್ಲಾಘನೀಯವೇ ಸರಿ.
ತಮ್ಮ ಸ್ಪಿನ್ ಕೈಚಳಕದಿಂದ ಭಾರತ ತಂಡಕ್ಕೆ ಹಲವಾರು ಗೆಲುವನ್ನು ತಂದುಕೊಡುವುದರಲ್ಲಿ ಸಹಕರಿಸಿದ್ದಲ್ಲದೆ, ಕರ್ನಾಟಕದ ಹೆಸರನ್ನೂ ಸಹಾ ಕ್ರಿಕೆಟ್ ಜಗತ್ತಿನಲ್ಲಿ ಉತ್ತುಂಗಕ್ಕೆ ಕೊಂಡೊಯ್ದ ಕಾರಣದಿಂದಾಗಿಯೇ ಅವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳು
ಅವರು ನಮ್ಮ ಶ್ರೇಷ್ಠ ಕನ್ನಡ ಕಲಿಗಳು.
ಏನಂತೀರೀ?