ಕನ್ನಡ ಚಿತ್ರರಂಗದ ದಿಗ್ಗಜರುಗಳಾದ ರಾಜಕುಮಾರ್, ವಿಷ್ಣುವರ್ಧನ್, ಅಂಬರೀಷ್ ಮತ್ತು ಅನಂತ್ ನಾಗ್ ಈ ಎಲ್ಲಾ ನಟರುಗಳ ನಡುವೆ ಒಂದು ಸಾಮ್ಯವಾದ ಅಂಶವಿದೆ ಎಂದರೆ ಅಶ್ವರ್ಯವಾಗುತ್ತದೆಯಲ್ಲವೇ? ಹೌದು ಎಲ್ಲಾ ನಟರುಗಳ ಹೆಮ್ಮೆಯ ಚಿತ್ರಗಳು ಇಲ್ಲವೇ ಅವರ ಮೊದಲ ಚಿತ್ರದ ಕಥೆಗಳು ಒಬ್ಬನೇ ಮಹಾನ್ ಲೇಖಕನ ಕಾದಂಬರಿಯನ್ನು ಆಧರಿದ್ದಾಗಿದೆ. ಹಾಗಾದರೇ ಆ ಮಹಾನ್ ಲೇಖಕರು ಯಾರು ಎಂದರೆ, ಅವರೇ, ನಮ್ಮೆಲ್ಲರ ಹೆಮ್ಮೆಯ ಲೇಖಕ ಶ್ರೀ ತಳುಕು ರಾಮಸ್ವಾಮಯ್ಯ ಸುಬ್ಬರಾಯ. ಎಲ್ಲರೂ ಅವರನ್ನು ಪ್ರೀತಿಯಿಂದ ತರಾಸು ಎಂದೇ ಕರೆಯುತ್ತಿದ್ದರು.
21 ಏಪ್ರಿಲ್ 1920 ರಂದು ಅಂದಿನ ಚಿತ್ರದುರ್ಗ ಜಿಲ್ಲೆಯ ಮಲೆಬೆನ್ನೂರು ಎಂಬ ಗ್ರಾಮದಲ್ಲಿ ತಳುಕಿನ ವೆಂಕಣ್ಣಯ್ಯನವರ ಮನೆತನದಲ್ಲಿ ಜನಿಸಿದರು ಶ್ರೀ ಸುಬ್ಬರಾಯರು. ಅವರ ಹಿರೀಕರು ಮೂಲತಃ ಆಂಧ್ರದಿಂದ ಕರ್ನಾಟಕಕ್ಕೆ ಬಂದವರಾದ್ದರಿಂದ ಮನೆಯ ಆಡು ಭಾಷೆ ತೆಲುಗು. ಆದರೆ ಕಲಿತದ್ದು ಮತ್ತು ಬರೆದದ್ದು ಎಲ್ಲವೂ ಕನ್ನಡವೇ. ಓದಿನಲ್ಲಿ ಎಷ್ಟು ಚುರುಕೋ ಹಾಗೆಯೇ ತುಂಟತನದಲ್ಲಿಯೂ ಒಂದು ಕೈ ಹೆಚ್ಚೇ ಎಂದರೂ ತಪ್ಪಾಗಲಾರದು. ಬಹುಶಃ ಮುಂದೇ ಸುಬ್ಬರಾಯರೇ ಬರೆದ, ಪುಟ್ಟಣ್ಣನವರು ನಿರ್ದೇಶಿಸಿದ ನಾಗರಹಾವು ಚಿತ್ರದ ವಿಷ್ಣುವರ್ಧನ್ ಅವರ ರಾಮಾಚಾರಿ ಪಾತ್ರ ಸುಬ್ಬರಾಯರ ಬಾಲ್ಯದ ತುಂಟತನ, ಹುಂಬತನ ಮತ್ತು ಛಲವಂತಿಕೆಯ ತದ್ರೂಪು ಎಂದರೂ ಅತಿಶಯೋಕ್ತಿಯೇನಲ್ಲ. ಅಂದೆಲ್ಲಾ ದೇಶಾದ್ಯಂತ ಸ್ವಾತಂತ್ರ್ಯ ಚಳುವಳಿಯ ಕಿಚ್ಚು ಹಬ್ಬಿತ್ತು. ಗಾಂಧಿಯವರ ಸ್ವಾತಂತ್ರ ಚಳುವಳಿಯಿಂದ ಪ್ರೇರಿತರಾಗಿ ಲಕ್ಷಾಂತರ ಯುವಕರುಗಳು ಮತ್ತು ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸಕ್ಕೆ ತಿಲಾಂಜಲಿ ಇತ್ತು ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕುತ್ತಿದ್ದರು. ಅದಕ್ಕೆ ನಮ್ಮ ಸುಬ್ಬರಾಯರೂ ಹೊರತಾಗಿರಲಿಲ್ಲ. ತಮ್ಮ ಇಂಟರ್ ಮುಗಿಯುತ್ತಿದ್ದಂತೆಯೇ ಓದಿಗೆ ಸಲಾಂ ಹೇಳಿ, ಸ್ವಾತಂತ್ರ್ಯ ಸಂಗ್ರಾಮದ ಚಳುವಳಿಯಲ್ಲಿ ಸ್ವಪ್ರೇರಣೆಯಿಂದ ಧುಮುಕುತ್ತಾರೆ.
ಈ ಹೋರಾಟದ ಕಿಚ್ಚು ನಂತರ ನಾನಾ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕರ್ನಾಟಕ ಏಕೀಕರಣದತ್ತ ತಿರುಗಿ ಏಕೀಕರಣದ ಪಿತಾಮಹಾ ಆಲೂರು ವೆಂಕಟರಾಯರು, ತಮ್ಮ ಗುರುಗಳಾದ ಅ.ನ.ಕೃಷ್ಣರಾಯರು, ಕನ್ನಡದ ಹೋರಾಟಗಾರರಾಗಿದ್ದ ಮ.ರಾಮಮೂರ್ತಿಗಳ ಜೊತೆಗೂಡಿ ರಾಜ್ಯಾದ್ಯಂತ ಸುತ್ತಾಡಿ ಕನ್ನಡಿಗರಲ್ಲಿ ಕನ್ನಡದ ಅಸ್ಮಿತೆ ಮತ್ತು ಕನ್ನಡಿಗರ ಒಗ್ಗೂಡಿಗೆಯ ಬಗ್ಗೆ ಜಾಗೃತಿ ಮೂಡಿಸಲು ಬಹಳಷ್ಟು ಶ್ರಮವಹಿಸುತ್ತಾರೆ.
ಇವೆಲ್ಲದರ ಮಧ್ಯೆಯೇ ತಮ್ಮ ಸಂಬಂಧಿಗಳೇ ಆಗಿದ್ದ ಅಂಬುಜ ಅವರನ್ನು ವರಿಸಿ ನಾಗಪ್ರಸಾದ್, ಪೂರ್ಣಿಮಾ ಮತ್ತು ಪ್ರದೀಪ ಎಂಬ ಮುದ್ದಾದ ಮೂರು ಮೂವರು ಮಕ್ಕಳ ತಂದೆಯೂ ಆಗುತ್ತಾರೆ. ತಮ್ಮ ಹೋರಾಟದ ನಡುವೆಯೂ ಮೈಸೂರಿನ ಯಾದವಗಿರಿಯಲ್ಲಿ ಗಿರಿಕನ್ಯಕಾ ಎಂಬ ಮನೆಯೊಂದನ್ನು ಕಟ್ಟಿಸಿ ಅಲ್ಲಿ ತಮ್ಮ ಸಂಸಾರವನ್ನಿರಿಸಿ ಯಥಾ ಪ್ರಕಾರ ಕನ್ನಡ ಪರ ಹೋರಾಟ, ಸಂಘಟನೆಗಳು ಮತ್ತು ಸಾಹಿತ್ಯ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.
ಈ ರೀತಿಯ ಚಳುವಳಿಗಳು ಮತ್ತು ಜನರ ಪರ ಹೋರಾಟಗಳ ಮಧ್ಯೆಯೇ ಹಲವಾರು ಕಾದಂಬರಿಗಳನ್ನು ಬರೆಯುತ್ತಾರೆ. ಆರಂಭದಲ್ಲಿ ಅವರು ಹೆಚ್ಚಾಗಿ ಐತಿಹಾಸಿಕ ಕಾದಂಬರಿಗಳನ್ನು ರಚಿಸಿದರೆ ನಂತರದ ದಿನಗಳಲ್ಲಿ ಅನೇಕ ಸಾಮಾಜಿಕ ಕಳಕಳಿಯ ವಿಷಯದ ಕಾದಂಬರಿಗಳತ್ತ ಹರಿಸುತ್ತಾರೆ ತಮ್ಮ ಚಿತ್ತ. ಇನ್ನೂ ವಿಶೇಷವೆಂದರೆ, ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಕಥೆಗಳೇ ಇಲ್ಲಾ ಎನ್ನುವ ಕೊರಗು ಈಗ ಇರುವಂತೆ ಅಂದೆಯೂ ಇತ್ತು. ಅಂತಹ ಒಳ್ಳೆಯ ಕಥೆಗಳ ಬರದ ಸಮಯದಲ್ಲಿ ತರಾಸು ಅವರ ಕಾದಂಬರಿಗಳು ಬಹುತೇಕ ಚಿತ್ರ ನಿರ್ದೇಶಕರುಗಳಿಗೆ ಚಿನ್ನದ ಗಣಿಯಂತೆ ಕಂಡು ಅವರ ಬಹುತೇಕ ಕಾದಂಬರಿಗಳು ಚಲನಚಿತ್ರವಾಗಿ ನಿರ್ದೇಶಕರಿಗೆ, ಕಲಾವಿದರಿಗೆ ಮತ್ತು ನಿರ್ಮಾಪಕರಿಗೆ ಒಳ್ಳೆಯ ಹೆಸರು ಮತ್ತು ಹಣ ಗಳಿಸಿ ಕೊಟ್ಟಿತೇ ಹೊರತು ತರಾಸು ಅವರಿಗೆ ಅದರಿಂದ ಹೆಚ್ಚಿನ ಲಾಭ ಸಿಗಲಿಲ್ಲವಾದರೂ ಅಂದಿಗೂ, ಇಂದಿಗೂ ಮತ್ತು ಮುಂದೆಂದಿಗೂ ಕನ್ನಡಿಗರ ಜನಮಾನಸದಲ್ಲಿ ಅಚ್ಚಳಿಯದೇ ಉಳಿಯುವಂತಹ ಸಾಹಿತ್ಯವನ್ನು ಕೊಟ್ಟಿರುವ ಹೆಗ್ಗಳಿಗೆ ತರಾಸು ಅವರದ್ದು ಎಂಬುದನ್ನು ಯಾರೂ ಅಲ್ಲಗಳಿಯಲು ಸಾಧ್ಯವಿಲ್ಲ.
ಚಂದವಳ್ಳಿಯ ತೋಟ, ಹಂಸಗೀತೆ, ನಾಗರಹಾವು, ಚಂದನದ ಗೊಂಬೆ, ಬೆಂಕಿಯ ಬಲೆ, ಗಾಳಿಮಾತು, ಬಿಡುಗಡೆಯ ಬೇಡಿ ಮಸಣದ ಹೂ, ಆಕಸ್ಮಿಕ ಉಫ್ ಹೀಗೆ ಒಂದೇ ಎರಡೇ, ಅವರು ಬರೆದ ಬಹುತೇಕ ಕಾದಂಬರಿಗಳು ಯಶಸ್ವಿಯಾದ ಚಲನಚಿತ್ರಗಳಾದವು.
ಸಾಮಾನ್ಯಾವಾಗಿ ಬಹುತೇಕ ಖ್ಯಾತ ಸಾಹಿತಿಗಳು ಒಂದಲ್ಲಾ ಒಂದು ಚಟಗಳಿಗೆ ಬಲಿಯಾಗುವುದು ದೌಭ್ಯಾಗ್ಯವೇ ಸರಿ. ಅದೇ ರೀತಿ ತರಾಸು ಅವರಿಗೂ ಮಧ್ಯಪಾನ ಮತ್ತು ಸಿಗರೇಟಿಗೂ ಬಿಡಿಸಲಾಗದ ನಂಟಿತ್ತು . ತರಾಸು ಎಂದರೆ ಮೊದಲಿಗೆ ನಮ್ಮ ಕಣ್ಣ ಮುಂದೆ ಬರುವುದೇ ಅವರು ಸಿಗರೇಟ್ ಹಿಡಿದುಕೊಂಡಿರುವ ಚಿತ್ರವೇ ಎನ್ನುವುದು ವಿಪರ್ಯಾಸವೇ ಸರಿ. ಮೊದಲೇ ನರ ದೌರ್ಬಲ್ಯದಿಂದ ನರಳುತ್ತಿದ್ದ ಅವರಿಗೆ ಗುಂಡು ಮತ್ತು ಸಿಗರೇಟ್ ಸೇರಿಕೊಂಡು ತರಾಸು ಅವರನ್ನು ಇನ್ನಷ್ಟು ಹೈರಾಣಾಗಿಸಿತ್ತು. ಕುಡಿತದ ಚಟದಿಂದ ವಿಮುಕ್ತರಾಗಲೆಂದೇ ಮಲ್ಲಾಡಿಹಳ್ಳಿಯ ತಿರುಕ ಎಂದೇ ಖ್ಯಾತರಾಗಿದ್ದ ರಾಘವೇಂದ್ರ ಸ್ವಾಮಿಗಳ ಸೇವಾಶ್ರಮದಲ್ಲಿ ಚಿಕಿತ್ಸೆಗಾಗಿ ಸೇರಿಕೊಂಡಿದ್ದರು. ಚಿಕಿತ್ಸೆ ಪಾಡಿಗೆ ಚಿಕಿತ್ಸೆ ನಡೆದರೂ ತರಾಸು ಮಧ್ಯದ ವ್ಯಸನದಿಂದ ಹೊರಬರಲಾಗದೇ, ಆಶ್ರಮದಿಂದಲೇ ಹೊರಬಿದ್ದರು. . ಇದೇ ಸಂದರ್ಭದಲ್ಲಿ ಅವರ ಅಭಿಮಾನಿಗಳು ಅವರಿಗೆ ಸನ್ಮಾನ ಸಮಾರಂಭವನ್ನು ಏರ್ಪಡಿಸಿದ್ದರು. ಕಾರ್ಯಕ್ರಮಕ್ಕೆ ನೆರೆದಿದ್ದ ಸಾವಿರಾರು ಜನಸಂದಣಿಯನ್ನು ವೇದಿಕೆ ಮೇಲಿಂದ ನೋಡಿದ ತರಾಸು ಮನಸ್ಸಂತೋಷವಾಗಿ ಅಲ್ಲಿಂದಲೇ ತಾವು ಚಿತ್ರದುರ್ಗದ ಕೊನೆಯ ರಾಜ ಮದಕರಿನಾಯಕನ ಕುರಿತಾಗಿ ಬರೆಯುವುದಾಗಿ ಘೋಷಿಸಿಯೇ ಬಿಟ್ಟರು.
ಈ ಮಾತನ್ನು ಕೇಳಿದ ಹಲವರು ಮೊದಲೇ ಆರೋಗ್ಯ ಸರಿ ಇಲ್ಲಾ. ಪೆಗ್ಗುಗಳಿಂದ ನಡುಗುತ್ತಿರುವ ಕೈಗಳಲ್ಲಿ ಪೆನ್ನು ನಿಲ್ಲ ಬಲ್ಲದೇ ?ಎಂದು ಅಣಕವಾಡಿದರೂ ಅವರೆಲ್ಲರೂ ಮುಟ್ಟಿ ನೋಡಿಕೊಳ್ಳುವಂತೆ ಕೆಲವೇ ಕೆಲವು ದಿನಗಳಲ್ಲಿ ಅವರ ತವರೂರಾದ ಚಿತ್ರದುರ್ಗದ ಮದಕರಿ ನಾಯಕನ ಕುರಿತು ದುರ್ಗಾಸ್ತಮಾನ ಎಂಬ ಐತಿಹಾಸಿಕ ಕಾದಂಬರಿಯನ್ನು ಬರದೇ ಬಿಟ್ಟರು. ಈ ಕೃತಿಗೆ ಮುಂದೆ 1985 ರಲ್ಲಿ ಮರಣೋತ್ತರವಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಒಲಿದು ಬಂದ್ದಿತ್ತು. ಇದೇ ಕಾದಂಬರಿಯನ್ನು ವಿಷ್ಣುವರ್ಧನ್ ಅವರ ನಾಯಕತ್ವದಲ್ಲಿ ಬೆಳ್ಳಿ ತೆರೆಗೆ ತರಲು ರಾಜೇಂದ್ರ ಸಿಂಗ್ ಬಾಬು ಅವರು ಪ್ರಯತ್ನಿಸಿದರಾದರೂ ಆ ಕನಸು ನನಸಾಗಿಯೇ ಉಳಿದು ಹೋದದ್ದು ವಿಷಾಧನೀಯವೇ ಸರಿ.
ತರಾಸು ಅವರು ಬಳೆಸುತ್ತಿದ್ದ ಈ ಟೈಪ್ರೈಟರ್ ನನ್ನ ಸ್ನೇಹಿತ ಮೈಸೂರಿನ ಶ್ರೀ ವೆಂಕಟರಂಗ ಅವರ ತಂದೆಯವರು 1969 ರಲ್ಲಿ ತರಾಸು ಅವರಿಂದಲೇ ಖರೀದಿಸಿದ್ದು, ಅದು ಅವರ ಬೆಂಗಳೂರಿನ ಮನೆಯಲ್ಲಿ ಇಂದಿಗೂ ಅಚ್ಚು ಕಟ್ಟಾಗಿ ಉಪಯೋಗಿಸುವಂತಹ ಸುಸ್ಥಿತಿಯಲ್ಲಿದೆ.
ತಮ್ಮ ಜೀವಿತಾವಧಿಯಲ್ಲಿ 20 ಕಾದಂಬರಿಗಳು ಸೇರಿದಂತೆ ಒಟ್ಟು 68 ಕೃತಿಗಳನ್ನು ರಚಿಸಿದ್ದ ಸುಬ್ಬರಾಯರು 1984ರ ಏಪ್ರಿಲ್ ತಿಂಗಳಿನಲ್ಲಿ ಹೃದಯಾಘಾತವಾಗಿ ಬೆಂಗಳೂರಿನ ರಾಜಾಜಿ ನಗರದಲ್ಲಿರುವ ವರಲಕ್ಷ್ಮಿ ನರ್ಸಿಂಗ್ ಹೋಂ ಗೆ ಸೇರಿದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಏಪ್ರಿಲ್ 10, 1984ರಂದು ನಮ್ಮನ್ನಗಲಿದರು. ಕಾಕತಾಳೀಯವೆಂಬಂತೆ ಏಪ್ರಿಲ್ ತಿಂಗಳಿನಲ್ಲಿಯೇ ಜನನ ಮತ್ತು ಮರಣ ಹೊಂದಿದ ಅಪರೂಪದ ವ್ಯಕ್ತಿ ತರಾಸು ಅವರು.
ಕನ್ನಡಡ ಖ್ಯಾತ ಸಾಹಿತಿ, ಕಾದಂಬರಿಕಾರ, ಚಳುವಳಿಗಾರ, ಪತ್ರಿಕೋದ್ಯಮಿ, ಚಲನಚಿತ್ರ ಗೀತೆಕಾರ ಹೀಗೆ ಬರೆದಂತೆ ಬದುಕಿದ, ಬರವಣಿಗೆಗಿಂತ ಬದುಕೇ ದೊಡ್ಡದು ಎಂದು ನಂಬಿಕೊಂಡಿದ್ದ ಶ್ರೀ ತಳುಕು ರಾಮಸ್ವಾಮಯ್ಯ ಸುಬ್ಬರಾಯರು (ತರಾಸು) ನಮ್ಮ ಹೆಮ್ಮೆಯ ಕನ್ನಡ ಕಲಿಗಳೇ ಸರಿ.
ಏನಂತೀರೀ?