ಹಿಂದಿನ ಕಾಲದಲ್ಲಿ ಹುಲುಮಾನವರು ಭಗವಂತನನ್ನು ಒಲಿಸಿಕೊಳ್ಳಲು ನಾನಾ ರೀತಿಯಲ್ಲಿ ಪೂಜೆ ಮಾಡುತ್ತಿದ್ದರು. ತಮ್ಮ ಭಕ್ತಿಗೆ ಆ ಭಗವಂತನು ಒಲಿಯದಿದ್ದಲ್ಲಿ ಅನ್ನ ನೀರು ಬಿಟ್ಟು ತಪಸ್ಸನ್ನು ಮಾಡುತ್ತಿದ್ದರು ಹಾಗೊಮ್ಮೆಯೂ ಒಲಿಯದಿದ್ದಲ್ಲಿ, ನಾನಾ ಭಂಗಿಗಳಲ್ಲಿ ನಿಂತು ಕಠೋರ ತಪಸ್ಸಿನ ಮೂಲಕ ಆ ಭಗವಂತನನ್ನು ಒಲಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ತನ್ನ ತಾಯಿಯ ಬಯಕೆಯಂತೆ ಶಿವನನ್ನು ಒಲಿಸಿಕೊಂಡು ಶಿವನ ಆತ್ಮ ಲಿಂಗವನ್ನು ತರಲು ರಾವಣನಂತೂ ತನ್ನ ಕರುಳು ಬಳ್ಳಿಯನ್ನೇ ಬಗೆದು ಹೊರತೆಗೆದು ರುದ್ರವೀಣೆಯನ್ನಾಗಿಸಿ ಪರಶಿವನನ್ನು ಒಲಿಸಿಕೊಂಡಿದ್ದನಂತೆ.
ಆದರಿಲ್ಲಿ ಭಗವಂತನೇ ತಲೆಕೆಳಗಾಗಿ ನಿಂತು ಭಕ್ತರ ಭವರೋಗವನ್ನು ಕಳೆಯುತ್ತಿರುವ ವಿಸ್ಮಯಕಾರಿ ದೇವಾಲಯವೊಂದು ಪಶ್ಚಿಮ ಗೋದಾವರಿ ಜಿಲ್ಲೆಯ ಆಂಧ್ರಪ್ರದೇಶದ ಭೀಮಾವರಂ ಬಳಿಯ ಯನಮದುರು ಗ್ರಾಮದಲ್ಲಿದೆ. ಸಾಮಾನ್ಯವಾಗಿ ಶಿವ ಎಂದರೆ ನಮ್ಮ ಮನಸ್ಸಿಗೆ ಬರುವುದೇ ಲಿಂಗರೂಪಿ ಇಲ್ಲವೇ ನಟರಾಜನ ರೂಪ ಮತ್ತು ಅಪರೂಪಕ್ಕೆ ಅಲ್ಲೊಂದು ಇಲ್ಲೊಂದು ನಿಂತಿರುವ ಅಥವಾ ತಪೋಭಂಗಿಯಲ್ಲಿರುವ ಈಶ್ವರ. ಆದರೆ ಈ ಯನಮದುರಿನಲ್ಲಿ ಮಹಾಶಿವನು ಶಿರ್ಷಾಸನದ ಭಂಗಿ ಅಂದರೆ ತಲೆ ಕೆಳಗೆ ಕಾಲು ಮೇಲಿರುವ ವಿಗ್ರಹದ ರೂಪದಲ್ಲಿದ್ದು, ಈ ದೇವರನ್ನು ನೋಡಲು ಭಕ್ತರೂ ಹರ ಸಾಹಸ ಪಡೆಬೇಕಾಗಿರುವ ಈ ಈಶ್ವರನನ್ನು ಶಕ್ತೇಶ್ವರ ಎಂದೂ ಕರೆಯುತ್ತಾರೆ.ಈ ಶಿರ್ಷಾಸನದ ರೂಪದ ಪರಮೇಶ್ವರನ ಪಕ್ಕದಲ್ಲಿಯೇ ಪಾರ್ವತಿಯ ವಿಗ್ರಹವಿದ್ದು ಆಕೆಯ ಮಡಿಲಲ್ಲಿ ಪುಟಾಣಿ ಕುಮಾರಸ್ವಾಮಿ ಮಲಗಿದ್ದಾನೆ. ಹೀಗೆ ಶಕ್ತಿ ಹಾಗೂ ಈಶ್ವರ ಜೊತೆ ಜೊತೆಯಾಗಿ ನೆಲೆಸಿರುವ ಕಾರಣದಿಂದಲೇ ಇದಕ್ಕೆ ಶಕ್ತೇಶ್ವರ ದೇವಾಲಯ ಎಂಬ ಹೆಸರು ಬಂದಿದೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.
ಈ ಊರಿಗೆ ಯನಮದೂರು ಎಂಬ ಹೆಸರು ಬರಲು ಒಂದು ಪುರಾಣವಿದೆ. ಸಂಭಾಸುರ ಎಂಬ ರಾಕ್ಷಸನೊಬ್ಬ ಶಿವನನ್ನು ತನ್ನ ತಪಸ್ಸಿನಿಂದ ಒಲಿಸಿಕೊಂಡು ಯಮಧರ್ಮನಿಂದ ಮಾತ್ರವೇ ಆತನ ಮರಣವಾಗ ಬೇಕೆಂಬ ವಿಶೇಷ ವರವನ್ನು ಪಡೆದು ಈ ಊರಿನಲ್ಲಿ ವಾಸವಾಗಿದ್ದ ಮನುಷ್ಯರಿಗೂ ಮತ್ತು ಋಷಿಮುನಿಗಳಿಗೆ ಬಹಳಷ್ಟು ಉಪಟಳವನ್ನು ಕೊಡುತ್ತಿರುತ್ತಾನೆ. ಆಗ ಆ ಋಷಿ ಮುನಿಗಳು ಯಮರಾಜನನ್ನು ಈ ಸಂಬಾಸುರನನ್ನು ಸಂಹರಿಸ ಬೇಕೆಂದು ಬೇಡಿ ಕೊಂಡಾಗ, ಯಮಧರ್ಮ ಮತ್ತು ಸಂಬಾಸುರನ ನಡುವೆ ಸುಮಾರು ವರ್ಷಗಳ ಕಾಲ ಯುದ್ಧವಾಗಿ ಅಂತಿಮವಾಗಿ ಯಮಧರ್ಮರಾಜನಿಗೆ ಸೋಲುಂಟಾಗುತ್ತದೆ. ಹೀಗೆ ಅವಮಾನಿತನಾದ ಯಮಧರ್ಮರಾಜ ಶಿವನ ಕುರಿತು ಘೋರ ತಪಸ್ಸನ್ನು ಮಾಡಿದನಾದರೂ ಶಿರ್ಷಾಸನ ಭಂಗಿಯಾಗಿದ್ದ ಶಿವ, ಎಷ್ಟು ಹೊತ್ತದರೂ ಪ್ರತ್ಯಕ್ಷನಾಗದಿದ್ದನ್ನು ಗಮನಿಸಿದ ಪಾರ್ವತಿ ದೇವಿಯು ಆ ರಾಕ್ಷಸನನ್ನು ಕೊಲ್ಲಲು ಯಮನಿಗೆ ವಿಶೇಷವಾದ ವರವೊಂದನ್ನು ನೀಡುತ್ತಾಳೆ. ಪಾರ್ವತಿ ದೇವಿಯ ಆಶೀರ್ವಾದದಿಂದ ಮತ್ತೊಮ್ಮೆ ಹೋರಾಡಿ ಸಂಬಾಸುರನನ್ನು ಸಂಹರಿಸಿದ ಈ ಸ್ಥಳವು ಯಮನಾಪುರಿ ಎಂದು ಹೆಸರಾಗುತ್ತದೆ. ನಂತರ ಕಾಲಾಂತರದಲ್ಲಿ ಜನರ ಆಡು ಭಾಷೆಯಲ್ಲಿ ಅಪಭ್ರಂಷವಾಗಿ ಯನಮದುರು ಎಂದು ಪ್ರಖ್ಯಾತವಾಗುತ್ತದೆ.
ಈ ಪುರಾತನ ಶ್ರೀ ಶಕ್ತೀಶ್ವರ ಸ್ವಾಮಿ ದೇವಸ್ಥಾನವು ಶಿಥಿಲವಾಗಿದ್ದ ಕಾರಣ ಕೆಲ ವರ್ಷಗಳ ಹಿಂದೆ ಈಗಿನ ಕಾಲಕ್ಕೆ ತಕ್ಕಂತೆ ಪುನರ್ನಿಮಾಣ ಮಾಡಿದ್ದಾರೆ. ಇಲ್ಲಿಯ ಶ್ರೀ ಶಕ್ತೇಶ್ವರ ಸ್ವಾಮಿಯ ಬಳಿ ಭಕ್ತರು ಬಂದು ಭಕ್ತಿಯಿಂದ ಭಜಿಸಿದರೆ ಅವರ ಸಕಲ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಎಂಬ ನಂಬಿಕೆ ಇದೆ. ರಸ್ತೆಯ ಮೂಲಕವೋ ಇಲ್ಲವೇ ರೈಲು ಮುಖಾಂತರವೋ ಭೀಮಾವರಂ ಪಟ್ಟಣಕ್ಕೆ ಬಂದು ಅಲ್ಲಿಂದ ಸುಮಾರು 10 ಕಿ.ಮೀ ದೂರದಲ್ಲಿರುವ ಈ ಯನಮದೂರನ್ನು ತಲುಪಬಹುದಾಗಿದೆ.
ಇಷ್ಟೆಲ್ಲಾ ವಿಷಯ ತಿಳಿದ ನಂತರ ಇನ್ನೇಕೆ ತಡಾ, ಅದಷ್ಟು ಶೀಘ್ರವೇ ಸಕುಟುಂಬ ಸಮೇತರಾಗಿ ಯನಮದುರಿನ ಶ್ರೀ ಶಕ್ತೇಶ್ವರ ಸ್ವಾಮಿಯ ದರ್ಶನ ಮಾಡಿ ಆ ಭಗವಂತನ ಅನುಗ್ರಹಕ್ಕೆ ಪಾತ್ರರಾಗೋಣ.
ಏನಂತೀರೀ?