ಎಲ್ಲರಿಗೂ ತಿಳಿದಿರುವಂತೆ ದಸರಾ ಮತ್ತು ದೀಪಾವಳಿ ಹಬ್ಬ ಬಂದಿತೆಂದರೆ ಇಡೀ ದೇಶಾದ್ಯಂತ ಸಂಭ್ರಮದ ಹಬ್ಬದ ವಾತಾವರಣ. ಈ ಸಂಭ್ರಮದ ಸಮಯದಲ್ಲಿ ಎಲ್ಲರ ಮನೆ ಮತ್ತು ಮನಗಳು ಏನಾದರೊಂದು ಹೊಸತೊಂದನ್ನು ಕೊಂಡು ತರಲು ಬಯಸಿ ವರ್ಷವಿಡೀ ಅದಕ್ಕಾಗಿ ಹಣವನ್ನು ಉಳಿಸಿ ಅದನ್ನು ಖರೀದಿಸಿ ತಂದರಂತೂ ಆಂದಕ್ಕೆ ಎಣೆಯೇ ಇಲ್ಲ. ಇದನ್ನೇ ನೆಪವಾಗಿಟ್ಟುಕೊಂಡು ಬಹುತೇಕ ದಕ್ಷಿಣ ಭಾರತದ ಕೈಗಾರಿಕೆಗಳು ಆಯುಧಪೂಜೆಯ ಸಂದರ್ಭಕ್ಕೆ ತಮ್ಮ ನೌಕರಿಗೆ ಬೋನಸ್ ನೀಡಿದರೆ, ಇನ್ನು ದೇಶಾದ್ಯಂತ ದೀಪಾವಳಿ ಹಬ್ಬಕ್ಕೆ ತಮ್ಮ ನೌಕರಿಗೆ ಯಥೇಚ್ಚವಾದ ಬೋನಸ್ ನೀಡುವ ಪರಿಪಾಠವನ್ನು ಹಲವಾರು ದಶಕಗಳಿಂದ ರೂಢಿಸಿಕೊಂಡು ಬಂದಿದೆ. ಇಂತಹ ಸುಸಂಧರ್ಭವನ್ನೇ ಬಂಡವಾಳ ಮಾಡಿಕೊಂಡು ದೇಶದಲ್ಲಿರುವ ಅನೇಕ online shopping ಕಂಪನಿಗಳು shoppig festivals ನಡೆಸಿ ಬಹುತೇಕ ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿಯನ್ನು ಕೊಡುವ ಮೂಲಕ ಗ್ರಾಹಕರನ್ನು ಸೆಳೆದುಕೊಂಡು ಕೋಟ್ಯಾಂತರ ರೂಪಾಯಿಗಳ ವ್ಯವಹಾರ ಮಾಡುತ್ತವೆ.
ಕೈಯ್ಯಲ್ಲಿ ಆಗದವನು ಮೈಯೆಲ್ಲಾ ಪರಚಿಕೊಂಡ ಎನ್ನುವಂತೆ ಕೆಲವು ವಿಕೃತ ಮನೋಭಾವದವರು ಈ online shopping ಕಂಪನಿಗಳ ಮೇಲೆ ತಲೆ ಬುಡವಿಲ್ಲದ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಾ, ಇಂತಹವರ ಬಳೀ ಖರೀದಿಸುವ ಬದಲು ಸ್ಥಳೀಯ ವ್ಯಾಪಾರಿಗಳನ್ನು ಪ್ರೋತ್ಸಾಹಿಸಿ ನಮ್ಮ ಹಬ್ಬ ಹರಿದಿನಗಳಲ್ಲಿ, ಲಾಕ್ಡೊನ್ ಸಮಯದಲ್ಲಿ ಇದೇ ಸ್ಥಳೀಯ ವ್ಯಾಪಾರಿಗಳೇ ನೆರವಾಗಿದ್ದಾರೆ, ಈ online shopping ಕಂಪನಿಗಳು ಯಾವುದೇ ರೀತಿಯ ಸಹಾಯ ಮಾಡಿರುವುದಿಲ್ಲಾ.. ಹೀಗೇ.. ಹಾಗೆ ಎಂಬ ಸಂದೇಶಗಳನ್ನು ಹರಿದು ಬಿಡುತ್ತಾ ಸಮಾಜದ ಸ್ವಾಸ್ಧ್ಯವನ್ನು ಹಾಳುಮಾಡುತ್ತಿದ್ದಾರೆ ಎಂದರೂ ತಪ್ಪಾಗಲಾರದು.
ಇಂತಹ ನೂರಾರು ಸಂದೇಶಗಳೂ ಬಂದರೂ ಸಾರ್ವಜನಿಕರು ಅದರಲ್ಲ ಗಮನ ಕೊಡದೇ, ಕೇವಲ ಐದಾರು ದಿನಗಳಲ್ಲಿಯೇ ತಾಮುಂದು ನಾಮುಂದು ಎಂದು ಮುಗಿಬಿದ್ದು ಕೊಳ್ಳುಬಾಕರ ರೀತಿಯಲ್ಲಿ ಖರೀದಿಸಿ ಆ ಎಲ್ಲಾ online shopping ಕಂಪನಿಗಳಿಗೆ ಸಾವಿರಾರು ಕೋಟಿ ರೂಪಾಯಿಗಳ ವ್ಯವಹಾರ ಮಾಡಿ ಹೆಮ್ಮೆಯಿಂದ ಬೀಗುತ್ತಾರೆ.
ನಿಜ ಹೇಳಬೇಕೆಂದರೆ, ಇಡೀ ದೇಶದಲ್ಲಿ Online ವ್ಯಾಪಾರ 18-20% ಕ್ಕೆ ಮೀರಿಲ್ಲ. ಇನ್ನೂ 80% ಜನಾ, ಪ್ರತಿಯೊಂದನ್ನು ಖರೀದೀಸುವ ಮುನ್ನಾ ಸ್ಥಳೀಯ ವ್ಯಾಪಾರಿಗಳ ಬಳಿ ಅದನ್ನು ಮುಟ್ಟಿ ನೋಡಿ ಸಂಭ್ರಮಿಸಿಯೇ ಖರೀದಿಸುವಂತ ಸಾಂಪ್ರದಾಯಕ ಖರೀದುದಾರರೇ ಇದ್ದಾರಾದರೂ ಕಲ ಪಟ್ಟ ಭದ್ರಹಿತಾಸಕ್ತಿಯ ಜನರು Online ವ್ಯಾಪಾರದಿಂದಾಗಿ ಸ್ಥಳೀಯ ವ್ಯಾಪಾರಿಗಳು ಹಾಳಾಗುತ್ತಿದ್ದಾರೆ ಎಂಬ ಅಪಪ್ರಚಾರ ಮಾಡುತ್ತಲೇ ಇರುವುದು ನಿಜಕ್ಕೂ ಶೋಚನೀಯ. Online ವ್ಯಾಪಾರದಿಂದಾಗಿ ನಷ್ಟವಾಗುತ್ತಿದೆ ಎನ್ನುವುದಾರೆ, ಸಂಗೀತ, ಪೂರ್ವಿಕ, ಪೈ, ಗಿರಿಯಾಸ್ ಆದೀಶ್ವರ್ ಮುಂತಾದ ಕಂಪನಿಗಳ ಅಲ್ಲದೇ ಇನ್ನೂ ಅನೇಕ ಕಂಪನಿಗಳು ಒಂದರ ಮೇಲೊಂದರಂತೆ ಹೊಸಾ ಹೊಸಾ ಶೋರೂಂಗಳನ್ನು ತೆರೆಯುತ್ತಿರುವ ಹಿಂದಿರುವ ರಹಸ್ಯವಾದರೂ ಏನೂ?
ಇದಕ್ಕೊಂದು ಸಣ್ಣ ಉದಾಹರಣೆಯನ್ನು ನೀಡಿದರೆ ಎಲ್ಲರಿಗೂ ಸುಲಭವಾಗಿ ಅರ್ಥವಾಗುತ್ತದೆ. ಕೋವಿಡ್ ಸಮಯದಲ್ಲಿ, ಉಸಿರಾಟದ ಲೆಖ್ಖಾಚಾರವನ್ನು ಹಾಕಲು pulse oximeter ಬಹಳ ಮುಖ್ಯವಾದ ಸಾಧನವಾಗಿದೆ. ಆ ಸಾಧನದ ಮುಖಬೆಲೆ ಸುಮಾರು3500-4000/- ಇದ್ದು ಸ್ಥಳೀಯ medical store ಗಳು 20-30% ರಿಯಾಯಿತಿ ಎಂದು ಜನರನ್ನು ನಂಬಿಸಿ, ಈ ಸಾಧನವನ್ನು ರೂ. 2500-2800/-ರ ಆಸುಪಾಸಿನಲ್ಲಿ ಮಾರಾಟ ಮಾಡುತ್ತಿದ್ದಾರೆ. ಅದೇ ಕಂಪನಿಯ ಅದೇ ಸಾಧನವು online ಕಂಪನಿಗಳಲ್ಲಿ ಕೇವಲ 600-750/- ಕ್ಕೆ ಲಭ್ಯವಿದೆ. ಒಂದು ಸಣ್ಣ pulse oximeter ಸಾಧನದಲ್ಲಿಯೇ ಇಷ್ಟೊಂದು ಬೆಲೆಯ ವೆತ್ಯಾಸ ಇರುವಾಗ, ಜನಾ ಏಕೆ ಸ್ಥಳೀಯರಲ್ಲಿ ಕೊಂಡುಕೊಳ್ಳುತ್ತಾರೆ? ಮತ್ತು ಏಕ ಕೊಳ್ಳಬೇಕು? ಇಂದಿನ ಗ್ರಾಹಕರು ಬಹಳ ಬುದ್ಧಿವಂತರಾಗಿದ್ದು ಯಾವುದೇ ವಸ್ತುಗಳನ್ನು ಕೊಳ್ಳಬೇಕಾದಲ್ಲಿ ಹತ್ತಾರು ಕಡೆ ವಿಚಾರಿಸಿ, ಬೆಲೆ, ಗುಣಮಟ್ಟ, ವ್ಯಾಪಾರದ ನಂತರದ ಸೇವಾ ಸೌಲಭ್ಯಗಳನ್ನು ಕೂಲಂಕುಶವಾಗಿ ವಿಚಾರಿಸಿಯೇ ಕೊಂಡುಕೊಳ್ಳುವ ಆಭ್ಯಾಸವನ್ನು ರೂಢಿಮಾಡಿಕೊಂಡಿದ್ದಾರೆ.
ಇನ್ನು ಈ ಎಲ್ಲಾ Online companies, ಇಲ್ಲಿಯ ನಿಯಮಗಳ ಅನುಗುಣವಾಗಿಯೇ ವ್ಯಾಪಾರ ಮಾಡಲು ಬಂದಿದ್ದು, ಈ ಕಂಪನಿಗಳಿಂದಾಗಿ ದೇಶಾದ್ಯಂತ ಲಕ್ಷಾಂತರ ಜನರಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಉದ್ಯೋಗ ದೊರೆಯುವಂತಾಗಿದೆ ಅಲ್ಲದೇ, ಕೋಟ್ಯಾಂತರ ಉದ್ಯಮಿಗಳಿಗೆ ಮತ್ತು ವ್ಯಾಪಾರಿಗಳಿಗೆ ತಮ್ಮ market place ಮುಖಾಂತರ ಸೂಕ್ತವಾದ ವ್ಯಾಪಾರದ ವೇದಿಕೆ ಕಲ್ಪಿಸಿಕೊಟ್ಟಿದೆ. ಇದರ ಸದ್ಬಳಕೆ ಮಾಡಿಕೊಂಡು ಕನ್ಯಾಕುಮಾರಿಯ ಗುಡಿ ಕೈಗಾರಿಕಾ ವಸ್ತುಗಳ ತಯಾರಕ ತನ್ನ ಉತ್ಪನ್ನವನ್ನು ಕಾಶ್ಮೀರಕ್ಕೆ ಬೆರಳ ತುದಿಯಲ್ಲಿ ಕಳುಹಿಸಿಕೊಡಬಹುದಾಗಿದೆ. ಅದೇ ರೀತಿ ಅಸ್ಸಾಮಿನ ಬುಡಕಟ್ಟು ಜನಾಂಗದ ವಸ್ತುಗಳನ್ನು ಕ್ಷಣಾರ್ಧದಲ್ಲಿ ದೇಶದ ಯಾವುದೇ ಮೂಲೆಯಲ್ಲಿಂದಾರೂ ಖರೀದಿಸಬಹುದಾದಂತಹ ವೇದಿಕೆಯನ್ನು ಕಲ್ಪಿಸಿಕೊಟ್ಟಿದ್ದಾರೆ ಎಂಬುದನ್ನು ಅಲ್ಲಗಳೆಯಲಾಗದು. ಮನೆಯಲ್ಲಿಯೇ ಕುಳಿತುಕೊಂಡು ಬೆರಳ ತುದಿಯಲ್ಲಿಯೇ ನಮಗೆ ಬೇಕಾದಂತಹ ಎಲ್ಲಾ ವಸ್ತುಗಳನ್ನು ಒಂದೇ ಕಡೆಯಲ್ಲಿ ಕಡಿಮೆ ಬೆಲೆಗೆ ಖರೀದಿಸಬಹುದಾದ ಸೌಲಭ್ಯ ಒದಗಿಸಿರುವುದು ನಿಜಕ್ಕೂ ಶ್ಲಾಘನೀಯ.
ಹಾಗೆಂದ ಮಾತ್ರಕ್ಕೆ Online ವ್ಯಾಪಾರದಲ್ಲಿ ಎಲ್ಲವೂ ಸಲೀಸು ಎಲ್ಲವೂ ಸರಿ ಎಂದು ವಾದಿಸುತ್ತಿಲ್ಲ. ಕೆಲವೊಮ್ಮೆ ಸಮಸ್ಯೆಗಳು ಬರಬಹುದಾದರೂ ಈ ಕಂಪನಿಗಳ ಗ್ರಾಹಕ ಸೇವಾ ಸಿಬ್ಬಂಧಿಗಳು ಆದನ್ನು ಸರಿಪಡಿಸಲು ದಿನದ 24 ಗಂಟೆಯೂ ಸಿದ್ಧವಿರುತ್ತಾರೆ. ಇನ್ನು ಮೊಬೈಲ್ ಖರೀದಿಸಿದಾಗ ಮೊಬೈಲ್ ಬದಲು ಸೋಪ್ ಬಂದಿತು. ಇಲ್ಲವೇ ಮತ್ತೊಂದು ಬಂದಿತು ಎಂದು ಹೇಳುವವರಿಗೇನೂ ಕಡಿಮೆ ಇಲ್ಲ. ನಿಜ ಹೇಳಬೇಕೆಂದರೆ, ಈ ಸಮಸ್ಯೆಗಳನ್ನು ಸೂಕ್ಷ್ಮವಾಗಿ ತನಿಖೆ ನಡೆಸಿದಾಗ ಅದರಲ್ಲಿ ಕಂಪನಿಗಳ ತಪ್ಪಾಗಿರದೇ, ಈ ವಸ್ತುಗಳನ್ನು ವಿತರಿಸಲು ಬರುವ ಹುಡುಕರ ಕರಾಮತ್ತಿನಿಂದ ಇಂತಹ ಅಚಾತುರ್ಯಗಳು ನಡೆಯುತ್ತಿತ್ತು, ಇತ್ತೀಚೆಗೆ ಅಂತಹ ತಪ್ಪು ಮಾಡುವ ಸಿಬ್ಬಂಧಿಗಳ ಮೇಲೆ ಬಹಳ ಕಠಿಣಾತೀತ ಕಾನೂನು ಕ್ರಮಗಳನ್ನು ಜರುಗಿಸುವ ಮೂಲಕ ಇಂತಹ ಸಮಸ್ಯೆಗಳನ್ನು ಬಹುತೇಕ ಬಗೆಹರಿಸಿಕೊಂಡಿವೆ.
ನಿಜವಾಗಿಯೂ Online companies, ಗ್ರಾಹಕರಿಗೆ ಮೋಸ ಮಾಡುತ್ತಿದ್ದಲ್ಲಿ ಅಥವಾ ತೆರಿಗೆ ವಂಚಿಸುತ್ತಿದ್ದಲ್ಲಿ ಅವರ ವಿರುದ್ಧ ನ್ಯಾಯಾಲಯದಲ್ಲಿ ದಾವೇ ಹೂಡಿ ಸಮಸ್ಯೆಗಳನ್ನು ಬಗಹರಿಸಿಕೊಳ್ಳ ಬಹುದಾಗಿದೆ. ಆದರೆ ಕೆಲ ಕಾಣದ ಕೈಗಳು ಇಂತಹ ಕಾನೂನಾತ್ಮಕ ಅಂಶಗಳತ್ತ ಗಮನ ಹರಿಸಿದದೇ, ಸುಮ್ಮನೇ ತಮ್ಮ ಬೇಳೆ ಬೇಯಿಸಿಕೊಳ್ಳು ಅಥವಾ ರೋಲ್ ಕಾಲ್ಗಳಿಗೆ ಇಂತಹ ಕಂಪನಿಗಳ ಎಡತಾಗುತ್ತವೆ. ಈ ಕಂಪನಿಗಳು ಇವರ ಬೇಡಿಕೆಗಳಿಗೆ ಮಣಿದು ಅವರು ಕೇಳಿದ್ದಷ್ಟು ಕೊಟ್ಟಲ್ಲಿ ಇಂದ್ರ ಚಂದ್ರ ದೇವೇಂದ್ರ ಎಂದು ಹಾಡಿ ಹೊಗಳಿ ಸುಮ್ಮನಾಗುತ್ತವೆ. ಒಂದು ಪಕ್ಷ ಇಂತಹ ವಸೂಲಿಗಳಿಗೆ ಸೊಪ್ಪು ಹಾಕದಿದ್ದದ್ದಲ್ಲಿ, ಇಲ್ಲ ಸಲ್ಲದ ಸುಳ್ಳು ಸುಳ್ಳು ಆರೋಪಗಳನ್ನು ಮಾಡುತ್ತಾ ಜನರ ಜನರ ಮನಸ್ಸುಗಳನ್ನು ಒಡೆಯುವಂತಹ ಇಂತಹ ಬರಹಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ತೇಲಿ ಬಿಡುವುದು ನಿಜಕ್ಕೂ ಅಸಹ್ಯಕರ.
ಇನ್ನು ಎಲ್ಲರ ಗಮನಕ್ಕೆ ತಿಳಿಸ ಬಯಸಲು ಇಚ್ಚಿಸುವುದೇನೆಂದರೆ, ಕೋವಿಡ್ ಆಗಲೀ ಅಥವಾ ಮತ್ತಾವುದೇ ಪ್ರಕೃತಿಕ ವಿಕೋಪವಾದಾಗ ಈ ಎಲ್ಲಾ online ಕಂಪನಿಗಳು ತಮ್ಮ ತಮ್ಮ ಸಿಬ್ಬಂಧಿಗಳ ಬಳಿ ಹಣವನ್ನು ಒಟ್ಟುಗೂಡಿಸಿ ಕೊಡುವುದಲ್ಲದೇ ತಮ್ಮ CSR ಅಡಿಯಲ್ಲಿ ಯಥೇಚ್ಛವಾಗಿ ದಾನ ಧರ್ಮ ಮಾಡುತ್ತಿರುವುದನ್ನು ಬೇಕೆಂದೇ ಈ ನಕಲೀ ಹೋರಾಟಗಾರರು ಮರೆಮಾಚುತ್ತಾರೆ. ಯಾವ ಕಂಪನಿಗಳು ಯಾವ ರೀತಿಯಲ್ಲಿ ಎಷ್ಟೆಷ್ಟು ಸಹಾಯ ಮಾಡಿವೆ ಎಂಬುದನ್ನು ಅರಿಯಲು ಅವರ web site ನೋಡಿ ತಿಳಿಯ ಬಹುದಾಗಿದೆ.
Make in India ಅಡಿಯಲ್ಲಿ ಬಹುರಾಷ್ಟ್ರೀಯ ಕಂಪನಿಗಳನ್ನು ರತ್ನಗಂಬಳಿ ಹಾಸಿ ಕರೆತಂದು ಇಲ್ಲಿ ತಯಾರಾದ ಅವರ ವಸ್ತುಗಳನ್ನು ಈ ರೀತಿಯಾಗಿ ಕ್ಷುಲ್ಲಕ ಕಾರಣಗಳಿಗಾಗಿ ಬಹಿಷ್ಕರಿಸಿದರೆ ಜಾಗತೀಕ ಮಟ್ಟದ ಕಂಪನಿಗಳು ಭಾರತಕ್ಕೆ ಏಕೆ ಬರುತ್ತವೆ ಹೇಳಿ? ಇಂದು online ಮೂಲಕ ಮಾರಟವಾಗುತ್ತಿರುವ ಬಹುತೇಕ mobileಗಳಾಗಲೀ ಟಿವಿಗಳಾಗಲಿ ಅಥವಾ ಇನ್ನಾವುದೇ ಎಲೆಕ್ಟ್ರಾನಿಕ್ಸ್ ಉಪಕರಣಗಳು ಹೆಸರಿಗೆ ಬಹುರಾಷ್ಟ್ರೀಯ ಕಂಪನಿಯದ್ದೇ ಆಗಿದ್ದರೂ ಅದು ಭಾರತದಲ್ಲೇ Assemble ಆಗಿರುತ್ತದೆ. ಅಂತಹ ವಸ್ತುಗಳನ್ನೇ ಜನರು ಧೃಡೀಕರಿಸಿ ತೆಗೆದುಕೊಳ್ಳಲಿ. ಪ್ರತಿಷ್ಠಿತApple IPhone ಕೂಡಾ ಭಾರತದಲ್ಲಿಯೇ ತನ್ನ ಉತ್ಪಾದನೆ ಮಾಡಲು ರೂಪುರೇಷೆಗಳನ್ನು ಮಾಡುತ್ತಿರುವುದು ಸ್ವಾಗತಾರ್ಹ ಅಲ್ಲವೇ?
ಕೋವಿಡ್ ಲಾಕ್ಡೌನ್ ಸಮಯದಲ್ಲಿ ಅಂಗಡಿ ಮುಗ್ಗಟ್ಟುಗಳು ಮುಚ್ಚಿ ಸಾಮಾನು ಸರಂಜಾಮುಗಳಿಗೆ ತೊಂದರೆಯಾಗಿದ್ದಾರೆ ಇದೇ Online ಕಂಪನಿಗಳೇ ಸಮಾನು ಸರಂಜಾಮು ಹಣ್ಣು ಮತ್ತು ತರಕಾರಿಗಳನ್ನು ಎಲ್ಲರ ಮನೆಗಳಿಗೆ ತಂದೊಗಿಸಿದ್ದು ಎನ್ನುವುದು ನಿರ್ವಾದವೇ ಸರಿ.
ಸುಮಾರು 7.5 ವರ್ಷಗಳ ಕಾಲ ಪ್ರತಿಷ್ಠಿತ Online ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದು ಅಲ್ಲಿಯ ಒಳಗು ಹೊರಗಿನ ವಿಷಯಗಳ ಬಗ್ಗೆ ಅರಿವಿರುವ ಕಾರಣ ಇಷ್ಟು ಖಡಾಖಂಡಿತವಾಗಿ ಈ ಎಲ್ಲಾ ವಿಚಾರಗಳನ್ನು ನಿಮ್ಮೊಂದಿಗೆ ಮಂಡಿಸುತ್ತಿದ್ದೇನೆಯೇ ಹೊರತು, ನಾನು ಯಾವುದೇ ಕಂಪನಿಗಳ ರಾಯಭಾರತ್ವವನ್ನು ಹೊರುತ್ತಿಲ್ಲ ಮತ್ತು Online ಮೂಲಕವೇ ಖರೀದಿಸಬೇಕು ಎಂಬ ಒತ್ತಾಯವನ್ನೂ ಮಾಡುತ್ತಿಲ್ಲ ಹಾಗಾಗಿ ಅನ್ಯಥಾ ಭಾವಿಸದೆ ಯಾವುದೋ ಕೆಲ ಕ್ಷುಲ್ಲಕ ಸಂದೇಶಗಳಿಗೆ ಕಿವಿಕೊಡದಿರಿ ಎಂದು ಎಚ್ಚರಿಸುವುದಷ್ಟೇ ನನ್ನ ಆಶಯ. ಪ್ರತ್ಯಕ್ಷ ನೋಡಿದರೂ ಪರಾಮರ್ಶಿಸಿ ನೋಡಿ, online ಅಥವಾ ಸ್ಥಳೀಯ ವ್ಯಾಪಾರಿಗಳು ಉತ್ತಮ ಗುಣಮಟ್ಟದ ಸಾಮಗ್ರಿಗಳು ಕಡಿಮೆ ಬೆಲೆಯಲ್ಲಿ ಸಿಗುತ್ತದೋ ಅಲ್ಲಿಯೇ ಖರೀದಿಸೋಣ.
ಏನಂತೀರೀ?