ಈಗಾಗಾಲೇ ಎಲ್ಲರಿಗೂ ತಿಳಿದಿರುವಂತೆ ಎರಡು ದಿನಗಳ ಹಿಂದೆ ಖ್ಯಾತ ಪತ್ರಕರ್ತ ಮತ್ತು ರಿಪಬ್ಲಿಕ್ ಟಿವಿಯ ಮುಖ್ಯಸ್ಥರಾದ ಅರ್ನಾಬ್ ಗೋಸ್ವಾಮಿಯವರನ್ನು ಮುಂಬೈ ಪೋಲಿಸರು ರಾತ್ರೋ ರಾತ್ರಿ ಅವರ ಮನೆಯಿಂದ ಬಂಧಿಸಿ ವಿಚಾರಣೆಗೆ ಕರೆದೊಯ್ದಿದ್ದಾರೆ. ಈ ಕುರಿತಂತೆ ದೇಶದಲ್ಲಿ ಭೂಕಂಪವೇ ಆಗಿಹೋದಂತೇ ಪತ್ರಿಕಾ ವೃತ್ತಿ ಧರ್ಮಕ್ಕೇ ಕೊಳ್ಳಿ ಬಿದ್ದಂತಾಗಿದೆ ಎಂದು ಕೆಲವು ಮಾಧ್ಯಮಗಳು ಬಿಂಬಿಸಿದರೇ, ಅರ್ನಾಬ್ ಅವರ ವಿರೋಧಿ ಮಾಧ್ಯಮಗಳು ಪೋಲೀಸರ ಕ್ರಮವನ್ನು ಸಮರ್ಥನೆ ಮಾಡಿಕೊಳ್ಳುತ್ತಿವೆ. ಇಬ್ಬರ ಪರವಾಗಿಯೂ ಎಗ್ಗಿಲ್ಲದೇ, ದಿನದ 24 ಗಂಟೆಗಳೂ ಜೋರು ಗಂಟಲಿನ ಚರ್ಚೆ ಎಂಬ ಹೆಸರಿನಲ್ಲಿ ಕೆಸರಾಟ ನೆಡೆಯುತ್ತಿರುವುದು ನಿಜಕ್ಕೂ ಒಳ್ಳೆಯ ಸಂಗತಿಯಲ್ಲ.
ಆರಂಭದಲ್ಲಿ NDTV ಯಲ್ಲಿ ವೃತ್ತಿಯನ್ನು ಆರಂಭಿಸಿ ನಂತರ Times Now ಮಾಧ್ಯಮದ ಮುಖಾಂತರ Nation wants to know ಎಂಬ ಪ್ರತೀ ದಿನದ ಚರ್ಚೆಯ ಮುಖಾಂತರ ಪ್ರವರ್ಧಮಾನಕ್ಕೆ ಬಂದ ಅರ್ನಾಬ್ ಕೆಲ ವರ್ಷಗಳ ಹಿಂದೆ ತಮ್ಮದೇ ಆದ Republic TV ಸಂಸ್ಥೆಯನ್ನು ಆರಂಭಿಸಿ, ಭಾರತೀಯ ಪತ್ರೀಕೋದ್ಯಮದಲ್ಲಿ ಎಡಪಂಥೀಯರದ್ದೇ ಪ್ರಾಭಲ್ಯ ಹೆಚ್ಚಾಗಿರುವಾಗ ಅವರೆಲ್ಲರನ್ನೂ ಧೈರ್ಯದಿಂದ ಎದುರು ಹಾಕಿಕೊಂಡು ತಮ್ಮ ಬಲಪಂಥೀಯ ನಿಲುವುಗಳ ಮೂಲಕ ದೇಶದ ಮನೆ ಮಾತಾಗಿದ್ದಾರೆ ಅರ್ನಾಬ್ ಎಂದರೂ ತಪ್ಪಾಗಲಾರದು
ಕೆಲವು ತಿಂಗಳುಗಳ ಹಿಂದೆ ರಾಷ್ಟ್ರೀಯ ಕಾಂಗ್ರೇಸ್ಸಿನ ಅಧ್ಯಕ್ಷೆ ಸೋನಿಯಾಗಾಂಧಿಯವರ ನಿಜವಾದ ಹೆಸರಾದ ಆಂಟೋನಿಯೋ ಮೈನೋ ಹೆಸರನ್ನು ತಮ್ಮ ಕಾರ್ಯಕ್ರಮದಲ್ಲಿ ಹೇಳಿದ್ದಕ್ಕಾಗಿ ದೇಶಾದ್ಯಂತ ಸುಮಾರು 200ಕ್ಕೂ ಹೆಚ್ಚಿನ ದೂರುಗಳನ್ನು ಕಾಂಗ್ರೇಸ್ಸಿಗರು ದಾಖಲಿದ್ದಲ್ಲದೇ ಕೆಲವು ಗೂಂಡಗಳು ಅವರ ಮತ್ತು ಅವರ ಪತ್ನಿಯ ಮೇಲೆ ಆಕ್ರಮಣ ಮಾಡಿದ್ದಾಗ ದೇಶದ ಬಹುತೇಕರು ಅವರ ಪರ ನಿಂತು ಧೈರ್ಯ ತುಂಬಿದ್ದರು. ಸುಶಾಂತ್ ಸಿಂಗ್ ಪ್ರಕರಣ ಆತ್ಮಹತ್ಯೆಯಲ್ಲಾ ಅದೊಂದು ಕೊಲೆ ಅದರ ಹಿಂದೆ ಮಹಾರಾಷ್ಟ್ರಮುಖ್ಯಮಂತ್ರಿಯವರ ಮಗನ ಕೈವಾಡವಿದೆ ಎಂಬ ಸಂಗತಿಯನ್ನು ಪದೇ ಪದೇ ಅರ್ನಾಬ್ ಹೇಳಿ ಇದರ ಕುರಿತಂತೆ ಸಿ.ಬಿ.ಐ ತನಿಖೆ ಆಗಬೇಕೆಂದು ಒತ್ತಾಯಿಸಿ, ಮಹಾರಾಷ್ಟ್ರದ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದರು. ಕೆಲ ವಾರಗಳ ಹಿಂದೆ ಟಿ.ಆರ್.ಪಿ ಕುರಿತಂತೆ ಮಾಧ್ಯಮಗಳು ಮಾಡುತ್ತಿರುವ ಕೆಲ ಅಕ್ರಮಗಳಲ್ಲಿ ರಿಪಬ್ಲಿಕ್ ಟಿವಿಯ ಹೆಸರು ಕೇಳಿಬಂದಾಗ ಇದೇ ಅರ್ನಾಬ್ ಮಹಾರಾಷ್ಟ್ರ ಸರ್ಕಾರ ತಮ್ಮ ವಿರುದ್ದ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಕೂಗಾಡಿ ಮಾನನಷ್ಟ ಮೊಕ್ಕದ್ದಮೆ ಹಾಕುತ್ತೇನೆ ಎಂದೂ ತಿಳಿಸಿದ್ದರು.
ರಿಪಬ್ಲಿಕ್ ಟಿವಿ ಛಾನೆಲ್ ಆರಂಭಿಸುವಾಗ ಅನ್ವಯ್ ನಾಯಕ್ ಎಂಬುವರ ಜೊತೆ ಅರ್ನಾಬ್ ಗೋಸ್ವಾಮಿ ಕೆಲವು ವ್ಯವಹಾರವನ್ನು ಮಾಡಿದ್ದಾರೆ. ಅನ್ವಯ್ ನಾಯಕ್ ಎನ್ನುವವರು ತಮಗೆ ಅರ್ನಾಬ್ ಗೋಸ್ವಾಮಿಯವರ ಕಡೆಯಿಂದ ಐವತ್ತು ಲಕ್ಷ ರೂ ಬಾಕಿ ಬರಬೇಕಾಗಿದೆ ಎಂದು ಡೆತ್ ನೋಟ್ ಬರೆದು ತಮ್ಮ ತಾಯಿಯವರನ್ನು ದಿಂಬಿನ ಮುಖಾಂತರ ಉಸಿರು ಗಟ್ಟಿಸಿ ಕೊಂದಿದ್ದಲ್ಲದೇ, ತಾವೂ ಕೂಡಾ ಅತ್ಮಹತ್ಯೆ ಮಾಡಿಕೊಂಡಿದ್ದರು. ಈ ಕೊಲೆ ಮತ್ತು ಅತ್ಮಹತ್ಯೆಗೆ ಅರ್ನಾಬ್ ಅವರೇ ಪ್ರಚೋದಿಸಿದ್ದಾರೆ ಎಂದು ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿ ಇದರಲ್ಲಿ ಅರ್ನಾಬ್ ಅವರ ಪಾತ್ರವಿಲ್ಲವೆಂದು ಪೊಲೀಸರು ಕೋರ್ಟ್ ಗೆ ಬಿ ತನಿಖಾ ವರದಿ ಅಂತಿಮ ನೀಡಿ ಅರ್ನಾಬ್ ಅವರನ್ನು ದೋಷ ಮುಕ್ತರಾಗಿಸಿದ್ದರು.
ಕಾಕತಾಳೀಯವೋ, ಇಲ್ಲವೇ ಸ್ವಪ್ರೇತಳಾಗಿಯೋ, ಇಲ್ಲವೇ ಕಾಣದ ಕೈಗಳ ಹಿಂದಿನ ಒತ್ತಡದಿಂದಾಗಿಯೋ, ಮೃತರ ಮಗಳು, ಅರ್ನಾಬ್ ಅವರ ಪ್ರಭಾವದಿಂದ ಪೊಲೀಸರು ಸರಿಯಾಗಿ ತನಿಖೆಯನ್ನು ಮಾಡದೇ ತಮ್ಮ ತಂದೆಯವರ ಆತ್ಮಹತ್ಯಾ ತನಿಖೆಯನ್ನು ಮುಚ್ಚಿ ಹಾಕಿದ್ದಾರೆ. ಇದಕ್ಕೆ ಸಂಬಂಧ ಪಟ್ಟಂತೆ ಕೆಲವು ಪುರಾವೆಗಳನ್ನು ನೀಡಿ, ಹೊಸದಾಗಿ ತನಿಖೆಯನ್ನು ನಡೆಸಿ ತನ್ನ ತಂದೆಯ ಸಾವಿನ ಹಿಂದೆ ಇರಬಹುದಾದ ಅರ್ನಬ್ ಅವರಿಗೆ ಶಿಕ್ಷೆ ಕೊಡಿಸಬೇಕೆಂದು ದೂರು ದಾಖಲೆ ಸಲ್ಲಿಸಿದ್ದಾಳೆ. ಪ್ರಾಯಶಃ ಇಂತಹದ್ದೇ ಅವಕಾಶಕ್ಕಾಗಿ ಕಾಯುತ್ತಿದ್ದ ಮಹಾರಾಷ್ಟ್ರ ಸರ್ಕಾರವೂ ಸಹಾ ಕೂಡಲೇ ಕೇಸಿನ ತನಿಖೆಯನ್ನು ವಿಶೇಷ ತಂಡಕ್ಕೆ ವಹಿಸಿದೆ.
ಈ ಕೇಸಿನ ಕುರಿತಂತೆ ಹೆಚ್ಚಿನ ವಿಚಾರಣೆ ನಡೆಸಲು ಆ ವಿಶೇಷ ತಂಡ ಅರ್ನಾಬ್ ಅವರನ್ನು ಬಂಧಿಸಲು ಬಂದಾಗಲೇ ಇಷ್ಟೆಲ್ಲಾ ಅವಾಂತರಗಳು ನಡೆದು ರಂಪ ರಾಮಾಯಣವಾಗುತ್ತದೆ. ನಿಜ ಹೇಳಬೇಕೆಂದರೆ, ಅರ್ನಾಬ್ ಅವರ ನೇರ ಪ್ರಚೋದನೆಯಿಂದ ನಾಯಕ್ ಆತ್ಮಹತ್ಯೆ ಮಾಡಿಕೊಂಡಿದ್ದರೆ ಅರ್ನಬ್ ಅವರನ್ನು ದೋಷಿ ಎನ್ನಬಹುದಾಗಿತ್ತು. ಆದರೆ ಇಲ್ಲಿ ಅವರಿಬ್ಬರ ಮಧ್ಯೆ ಐವತ್ತು ಲಕ್ಷ ರೂಪಾಯಿಗಳ ಬಾಕಿ ವ್ಯವಹಾರದಲ್ಲಿ ಎನೋ ಸಮಸ್ಯೆಯಾಗಿರುವ ಕಾರಣ, ಈಗ ಮೃತರ ಮಗಳು ಹೊಸದಾಗಿ ದೂರು ದಾಖಲಿಸಿದರೂ ಅರ್ನಬ್ ಅವರಿಗೆ ಯಾವುದೇ ತೊಂದರೆಯಾಗದೇ ಮತ್ತೊಮ್ಮೆ ನಿರ್ದೋಷಿಯಾಗಿ ಹೊರಬರುತ್ತಾರೆ ಎಂದು ಒಬ್ಬ ಸಾಮಾನ್ಯ ಮನುಷ್ಯರಿಗೂ ತಿಳಿದಿರ ಬಹುದಾದ ಕಾನೂನಿನ ವ್ಯವಸ್ಥೆಯಾಗಿದೆ.
ಆದರೆ ತಮ್ಮನ್ನು ಹಳಿಯಲು ಮಹಾರಾಷ್ಟ್ರ ಸರ್ಕಾರವೇ ಷಡ್ಯಂತ್ರದಿಂದ ಖುಲಾಸೆಯಾಗಿದ್ದ ಪ್ರಕರಣದಲ್ಲಿ ಮತ್ತೊಮ್ಮೆ ಮೃತರ ಮಗಳ ಮೂಲಕ ಹೊಸಾ ದೂರನ್ನು ದಾಖಲಿಸಿದೆ ಎಂಬುದನ್ನು ಬಲವಾಗಿ ನಂಬಿರುವ ಅರ್ನಾಬ್ ಸ್ವಲ್ಪ ಹೆಚ್ಚಾಗಿಯೇ ದೇಶದ ಜನರ ಅನುಕಂಪ ತಮ್ಮಡೆಗೆ ಸೆಳೆಯುವಂತೆ ಪ್ರತಿಕ್ರಿಯಿಸಿದ್ದಾರೆ ಎಂದೇ ನನ್ನ ಭಾವನೆ.
ಅರೋಪ ಬಂದಾಗ ಅರೋಪಿಗಳನ್ನು ವಿಚಾರಣೆಗಾಗಿ ಬಂಧಿಸಿ, ವಿಚಾರಣೆ ನಡೆಸಿ, ನಂತರ ನ್ಯಾಯಾಯಲದಲ್ಲಿ ತನಿಖೆ ಮುಂದುವರೆಸಿ, ಅರೋಪಿಗಳನ್ನು ಬಿಡುಗಡೆ ಮಾಡುವುದು ಸಹಜ ಪ್ರಕ್ರಿಯೆ. ಇದರ ಅರಿವಿದ್ದ ಅರ್ನಾಬ್ ಮತ್ತವರ ಕುಟುಂಬ ಸಂಭಾವಿತರಂತೆ, ಪೋಲೀಸರ ತನಿಖೆಗೆ ಸಹಕರಿಸಿ, ಬಂಧನಕ್ಕೆ ಒಳಗಾಗಿ ತಮ್ಮ ವಕೀಲರ ಮುಖಾಂತರ ಕಾನೂನು ಪ್ರಕ್ರಿಯೆಗಳನ್ನು ಮುಂದುವರೆಸಿ ಆರೋಪ ಮುಕ್ತರಾಗಿ ಹೊರಬಂದಿದ್ದಲ್ಲಿ ರಾವಣನಿಂದ ಸೀತಾಮಾತೆಯನ್ನು ಬಿಡಿಸಿಕೊಂಡು ಬಂದಾಗ ಸೀತಾ ದೇವಿ ತನ್ನ ಪತಿವ್ರತೆಯ ಶುದ್ಧತೆಯನ್ನು ತೋರಿಸಲು ಅಗ್ನಿ ಪರೀಕ್ಷೆಗೆ ಒಳಗಾಗಿ, ಪರಿಶುದ್ಧಳಾಗಿ ಹೊರಬಂದಿದ್ದಂತೆ ಅರ್ನಾಬ್ ಅವರ ಘನತೆ ಮತ್ತಷ್ಟು ಹೆಚ್ಚುತ್ತಿತ್ತೇನೋ?
ಆದರೆ ಇಲ್ಲಿ ಹಾಗಾಗದೇ, ಸುಮಾರು ಎರಡ್ಮೂರು ಗಂಟೆಗಳ ಕಾಲ ಅರಚಾಟ, ತಳ್ಳಾಟ ಮತ್ತು ಎಳೆದಾಟ ಪ್ರಕರಣವಾಗಿ ಕೆಲ ದಶಕಗಳ ಹಿಂದೆ ತಮಿಳುತಾಡಿನಲ್ಲಿ ಜಯಲಲಿತಾ ಆಡಳಿತ ಸಮಯದಲ್ಲಿ ತಡ ರಾತ್ರಿಯಲ್ಲಿ ವಯೋವೃದ್ಧ ಕರುಣಾನಿಧಿಯವರನ್ನು ಪ್ರಕರಣವೊಂದರಲ್ಲಿ ಬಂಧಿಸಲು ಬಂದಾಗ ಜನರ ಅನುಕಂಪ ಗಿಟ್ಟಿಸಲು ಇದೇ ರೀತಿಯಲ್ಲಿಯೇ ಎನೈ ಸಾವ್ ಅಡಿಚ್ಚಿರಾಂಗಾ, ಎನೈ ಕೊಲೈ ಪಂಡ್ರಾಂಗಾ ಎಂದು ಕೂಗಾಡಿ ಅದನ್ನೇ ತಮ್ಮ ಸನ್ ಟಿವಿಯ ಮುಖಾಂತರ ಎರಡು ಮೂರು ದಿನಗಳ ಕಾಲ ಬಿಟ್ಟೂ ಬಿಡದೇ ತೋರಿಸಿ ಕೊನೆಗೆ ಅಪಹಾಸ್ಯಕ್ಕೆ ಈಡಾಗಿದ್ದು ಅರ್ನಾಬ್ ಅವರಿಗೆ ತಿಳಿದಿತ್ತು ಎಂದು ಭಾವಿಸುತ್ತೇನೆ.
ಇನ್ನು ಈ ಪ್ರಕರಣ ಕುರಿತಂತೆ ಇತರೇ ಸುದ್ದಿ ಮಾಧ್ಯಮಗಳು ಸೊಲ್ಲೆತ್ತದಿರುವುದನ್ನು ಖಂಡಿಸಿ ಅರ್ನಾಬ್ ಪರ ಇರುವ ಕೆಲವರು ಆ ಲೂಟಿಯನ್ಸ್ ಮೇಲೆ ಅನೇಕ ಅರೋಪಗಳನ್ನು ಮಾಡುತ್ತಾ, ಈ ದೇಶದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಹರಣವಾಗಿದೆ ಎಂದು ಟ್ರೋಲ್ ಮಾಡುತ್ತಿದ್ದರೇ, ಇನ್ನು ಬಿಜೆಪಿ ಮತ್ತು ಮೋದಿಯವರನ್ನು ವಿರೋಧಿಸುವ ತಂಡದವರು ಇದೇ ಪ್ರಕರಣವನ್ನು ದುರ್ಬಳಕೆ ಮಾಡಿಕೊಂಡು, ಸದಾಕಾಲವೂ ಹಿಂದೂ ಪರ ಮತ್ತು ಮೋದಿಯವರನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದ ಅರ್ನಾಬ್ ಅವರನ್ನು ಬಿಜೆಪಿ ಸಮರ್ಥನೆ ಮಾಡಿಕೊಳ್ಳದೇ ಅಥವಾ ಪ್ರತಿಭಟನೆ ನಡೆಸದೇ ತಟಸ್ಥರಾಗಿರುವುದನ್ನು ಎತ್ತಿ ತೋರಿಸುತ್ತಾ ಅರ್ನಾಬ್ ಅಂತಹವರಿಗೇ ಬಿಜೆಪಿ ಈ ರೀತಿಯಾಗಿ ನಡೆಸಿಕೊಂಡರೆ ಇನ್ನು ಸಾಮಾನ್ಯ ಕಾರ್ಯಕರ್ತರನ್ನು ಬಿಜೆಪಿ ಹೇಗೆ ಕಾಪಾಡುತ್ತದೆ ಎಂಬ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವಂತೆ ಮಾಡಿ ಒಂದು ರೀತಿಯಲ್ಲಿ ಪ್ರಚೋದನೆ ಮಾಡುತ್ತಿದ್ದಾರೆ ಎಂದರೂ ತಪ್ಪಾಗಲಾರದು.
ಈ ಪ್ರಕರಣದ ಹಿಂದೆ ಯಾವುದೇ ವಯಕ್ತಿಕ ಷಡ್ಯಂತರವೇನೇ ಇದ್ದರೂ ಅದನ್ನು ಕಾನೂನು ಬಲ್ಲ ಅರ್ನಾಬ್ ಅತ್ಯಂತ ಸರಳವಾಗಿ ಬಗೆ ಹರಿಸಿಕೊಂಡು ಬಂದು ಸುಖಾ ಸುಮ್ಮನೆ ಈ ರೀತಿಯಾಗಿ ಮುಚ್ಚಿಹೊದ ಪ್ರಕರಣಗಳಿಗೆ ಯಾರದ್ದೋ ಕುಮ್ಮಿಕ್ಕಿನಿಂದಲೋ, ಬೆದರಿಕೆಯಿಂದಲೋ ಮತ್ತೆ ಜೀವ ತುಂಬುತ್ತಿದ್ದವರ ಮೇಲೆ ವಿರುದ್ಧ ಸಾತ್ವಿಕವಾದ ಜನಜಾಗೃತಿಯನ್ನು ಉಂಟು ಮಾಡ ಬಹುದಾಗಿತ್ತು.
ಇನ್ನು ಪೋಲೀಸರೂ ಸಹಾ ಸರ್ಕಾರಗಳು ಐದು ವರ್ಷಕ್ಕೊಮ್ಮೆ ಬರುತ್ತವೇ ಮತ್ತು ಹೋಗುತ್ತವೆ ಎಂಬುದನ್ನು ಅರಿತು, ಪೂರ್ವಾಗ್ರಹ ಪೀಡಿತ ಅಥವಾ ಯಾವುದೇ ರಾಜಕಾರಣಿಗಳ ಒತ್ತಡಕ್ಕೆ ಮಣಿಯದೇ, ಪ್ರಕರಣಗಳು ದಾಖಲಾದಾಗ ಅರೋಪಿಗಳನ್ನು ನೇರವಾಗಿ ಬಂಧಿಸುವ ಮೊದಲು ಮೇಲ್ನೋಟಕ್ಕೆ ಆ ಆರೋಪದ ಸತ್ಯಾಸತ್ಯೆಗಳ ಕುರಿತಂತೆ ಸಣ್ಣದಾಗಿ ತನಿಖೆ ನಡೆಸಿ, ಇದರ ಹಿಂದೆ ಭ್ರಷ್ಟ ರಾಜಕಾರಣಿಗಳು, ಅಧಿಕಾರಿಗಳು ಆಥವಾ ಅರೋಪ ಮಾಡಿದಂತಹವರ ವಯಕ್ತಿಕ ಹಿತಾಸಕ್ತಿ ಇಲ್ಲವೆಂದಾದಲ್ಲಿ ಮಾತ್ರವೇ ಆರೋಪಿಗಳನ್ನು ಬಂಧನ ಮಾಡಿ ನಿಷ್ಪಕ್ಷಪಾತ ತನಿಖೆಮಾಡಿ ನಿಜವಾದ ಅಪರಾಧಿಗಳಿಗೆ ಶಿಕ್ಷೆ ಕೊಡಿಸಿದಲ್ಲಿ ಜನರಿಗೆ ಪೋಲೀಸರ ಮೇಲಿನ ನಂಬಿಕೆ ಹೆಚ್ಚುತ್ತಿತ್ತು.
ಇಡೀ ಪ್ರಕರಣವನ್ನು ಸೂಕ್ಷ್ಮವಾಗಿ ಅವಲೋಕಿಸಿದಲ್ಲಿ ಮಹಾರಾಷ್ಟ್ರ ಸರ್ಕಾರ, ಮಹಾರಾಷ್ಟ್ರ ಪೋಲೀಸರು, ಅರ್ನಾಬ್, ಮತ್ತವರ ಕುಟುಂಬ ಮತ್ತು ಸಾಮಾಜಿಕ ಜಾಲತಾಣಗಳ ಅಂಡುಪಿರ್ಕೆಗಳು ತಮ್ಮ ತಮ್ಮ ವಯಕ್ತಿಕ ಹಿತಾಸಕ್ತಿ, ಸೈದ್ಧಾಂತಿಕ ವಿರೋಧ ಮತ್ತು ಅಹಂ ನಿಂದಾಗಿ, ಸಣ್ಣದಾಗಿ ಆಗಿದ್ದ ಗಾಯವನ್ನು ಸುಖಾ ಸುಮ್ಮನೇ ಕೆರೆದು ಕೆರೆದು ರಾಡಿ ಮಾಡಿ ಎಲ್ಲರ ಸಮಯವನ್ನೂ ಹಾಳು ಮಾಡುತ್ತಿರುವುದಲ್ಲದೇ ಪರೋಕ್ಷವಾಗಿ ಸಮಾಜದಲ್ಲಿ ಸಾಮರಸ್ಯವನ್ನು ಹಾಳು ಮಾಡುತ್ತಿದ್ದಾರೆ ಎಂದೆನಿಸುತ್ತಿದೆ.
ಏನಂತೀರೀ?
ವಸ್ತುನಿಷ್ಠ ಬರಹ.
LikeLiked by 1 person
ಧನ್ಯೋಸ್ಮಿ
LikeLike