ಡಾ. ಪ್ರಭಾಕರ್ ಭಟ್ ಕಲ್ಲಡ್ಕ

ಅವರು ಓದಿದ್ದು ಎಂ.ಬಿ.ಬಿ.ಎಸ್. ಅವರು ಮದುವೆಯಾದದ್ಫೂ ವೈದ್ಯರನ್ನೇ. ಇಬ್ಬರೂ ಯಾವುದೋ ಸರ್ಕಾರೀ ಸೇವೆ ಮಾಡಿಕೊಂಡು ತಿಂಗಳಂತ್ಯದಲ್ಲಿ ಕೈತುಂಬಾ ಸಂಬಳ ಪಡೆದುಕೊಂಡು ನೆಮ್ಮದಿಯ ಜೀವನ ಸಾಗಿಸಬಹುದಾಗಿತ್ತು. ಇಲ್ಲವೇ ಗಂಡ ಹೆಂಡತಿ ಇಬ್ಬರೂ ಸೇರಿ ಒಂದು ಸುಸಜ್ಜಿತವಾದ ನರ್ಸಿಂಗ್ ಹೋಮ್ ಕಟ್ಟಿಸಿ ಲಕ್ಷ ಲಕ್ಷ ರೂಪಾಯಿಗಳನ್ನು ಸಂಪಾದಿಸಿಕೊಂಡು ಹಾಯಾಗಿ ಇರಬಹುದಿತ್ತು. ಅವರು ರಾಜಕಾರಣಕ್ಕೆ ಬಂದಿದ್ದರೆ ಇಷ್ಟು ಹೂತ್ತಿಗೆ ಶಾಸಕ ಇಲ್ಲವೇ ಸಂಸದರಾಗಿ ರಾಜ್ಯ ಸರ್ಕಾರವೋ ಇಲ್ಲವೇ ಕೇಂದ್ರ ಸರ್ಕಾರದಲ್ಲಿ ಮಂತ್ರಿಗಳಾಗ ಬಹುದಿತ್ತು. ಅವರು ಬಯಸಿದ್ದರೆ ಮುಖ್ಯಮಂತ್ರಿಗಳೂ ಆಗಬಹುದಿತ್ತು. ಆದರೆ ಆವರೆಂದೂ ಸ್ವಾರ್ಥಿಯಾಗಲೇ ಇಲ್ಲ. ಸದಾಕಾಲವೂ ಅವರದ್ದೇನಿದ್ದರೂ ದೇಶದ ಬಗ್ಗೆಯೇ ಚಿಂತೆ. ಅವರು King ಆಗಲು ಇಷ್ಟಪಡದೇ King Maker ಆಗಲು ಇಷ್ಟ ಪಟ್ಟರು. ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಕರ್ನಾಟಕ ಕಂಡ ಪ್ರಖರವಾಗ್ಮಿ ನಿಸ್ವಾರ್ಥ ಸಮಾಜ ಸೇವಕರಾದ ಕಲ್ಲಡ್ಕದ ಡಾ. ಪ್ರಭಾಕರ್ ಭಟ್ ಅವರನ್ನು ಪರಿಚಯ ಮಾಡಿಕೊಳ್ಳೋಣ.

ದಕ್ಷಿಣ ಕರ್ನಾಟಕದ ಮತ್ತು ಕೇರಳ ಗಡಿಯಲ್ಲಿನ ಸಣ್ಣ ಗ್ರಾಮವಾದ ಕಲ್ಲಡ್ಕದಲ್ಲಿ ಸುಮಾರು 80 ವರ್ಷಗಳ ಹಿಂದೆ ನವೆಂಬರ್ 15 ರಂದು, ಸಾಮಾನ್ಯ ಬಡತನದ ಕುಟುಂಬದಲ್ಲಿ ಜನಿಸಿದ ಪ್ರಭಾಕರ್ ಭಟ್ಟರು, ಓದಿನಲ್ಲಿ ಬಾಲ್ಯದಿಂದಲೂ ಅತ್ಯಂತ ಚುರುಕಾಗಿದ್ದ ಕಾರಣ ಉನ್ನತ ಶ್ರೇಣಿಯಲ್ಲಿಯೇ MBBS ಪದವಿಯನ್ನು ಮುಗಿಸುವ ಜೊತೆ ಜೊತೆಯಲ್ಲಿಯೇ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರಾಗಿದ್ದ ಕಾರಣ ದೇಶ ಮತ್ತು ಹಿಂದುತ್ವದಲ್ಲಿ ಅಪಾರವಾದ ಮತ್ತು ಅಧಮ್ಯವಾದ ಪ್ರೀತಿಯ ಕಾರಣ ಯಾವುದೇ ನೌಕರಿಯನ್ನೂ ಸೇರದೇ. ಸಂಘದ ಶಾಖೆಗಳನ್ನು ಅವಿಭಜಿತ ದಕ್ಷಿಣ ಕರ್ನಾಟಕಾದ್ಯಂತ ವಿಸ್ತರಣೆಯಲ್ಲಿ ಸಂಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಂಡರು.

60ರ ದಶಕದಲ್ಲಿ MBBS ಮುಗಿಸಿದ್ದ ಡಾ.ಕಮಲಾ ಭಟ್ ಅವರೊಂದಿಗೆ ವಿವಾಹವಾದರೂ, ತಮ್ಮ ಹುಟ್ಟು ಗುಣ ಬಿಡದೇ ತಮ್ಮ ಪತ್ನಿಯನ್ನೂ ಸೇರಿಸಿಕೊಂಡೇ ದಂಪತಿಗಳಿಬ್ಬರೂ ಸಮಾಜ ಸೇವೆ ಮತ್ತು ದೇಶ ಸೇವೆಗೆ ಟೊಂಕ ಕಟ್ಟಿ ನಿಂತಿದ್ದಲ್ಲದೇ, ಇಂದು ಭಾರತೀಯ ಜನತಾ ಪಕ್ಷದಲ್ಲಿ ಉನ್ನತ ಅಧಿಕಾರದಲ್ಲಿರುವ ಅವಿಭಜಿತ ದಕ್ಷಿಣ ಕರ್ನಾಟಕದ ಬಹುತೇಕ ರಾಜಕಾರಣಿಗಳನ್ನು ಬೆಳೆಸುವುದರಲ್ಲಿಯೇ ತಮ್ಮ ಜೀವನವನ್ನು ಸವೆಸಿದರು. 1975ರ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಸರ್ಕಾರದ ಧಮನಕಾರೀ ನೀತಿಯ ವಿರುದ್ಧ ಹೋರಾಟ ನಡೆಸಿದ್ದಕ್ಕಾಗಿ ಒಂದು ತಿಂಗಳುಕಾಲ ಸೆರೆಮನೆ ವಾಸ ಅನುಭವಿಸಿದ ಹೊರ ಬಂದ ನಂತರ ಕಂಡವರ ಉಸಾಬರೀ ನಮಗೇಕೆ? ಎಂದು ನೆಮ್ಮದಿಯಾಗಿ ಗಂಡ ಹೆಂಡತಿಯರಿಬ್ಬರೂ ನರ್ಸಿಂಗ್ ಹೋಮ್ ಆರಂಭಿಸಿ ನೆಮ್ಮದಿಯ ಜೀವನವನ್ನು ನಡೆಸಬಹುದಿತ್ತು. ಆದರೆ, ಪ್ರಭಾಕರ್ ಭಟ್ಟರು ಸೆರೆಮನೆ ವಾಸದ ನಂತರ ತಮ್ಮ ಹೋರಾಟವನ್ನು ಮತ್ತಷ್ಟೂ ತೀವ್ರಗೊಳಿಸಿದರು.

ಹೇಳೀ ಕೇಳೀ ಕಲ್ಲಡ್ಕದಲ್ಲಿ ಹಿಂದೂಗಳಿಗಿಂತಲೂ ಮುಸಲ್ಮಾನರ ಸಂಖ್ಯೆಯೇ ಹೆಚ್ಚಾಗಿದ್ದು ಅವರ ಹಾವಳಿಯೇ ಅತಿಯಾಗಿತ್ತು. ಅಂತಹವರ ಮಧ್ಯೆ ಹಿಂದೂಗಳನ್ನು ಒಗ್ಗೂಡಿಸಿ ಅವರಲ್ಲಿ ಹಿಂದುತ್ವವನ್ನು ಜಾಗೃತಗೊಳಿಸುವ ಸಲುವಾಗಿ ಎಷ್ಟೇ ವಿರೋಧ ವ್ಯಕ್ತವಾದರೂ ಅವುಗಳನ್ನೆಲ್ಲವೂ ಲೆಕ್ಕಿಸದೇ, ಪ್ರಭು ಶ್ರೀರಾಮ ಮಂದಿರವನ್ನು ಕಟ್ಟಿದ್ದಲ್ಲದೇ, ಅಲ್ಲಿನ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕಲಿಸುವ ಸಲುವಾಗಿ ಶ್ರೀರಾಮ ವಿದ್ಯಾ ಕೇಂದ್ರ ಆರಂಭಿಸಿ, ಶಾಲಾ ಉಧ್ಘಾಟನಾ ದಿನದಂದು ಪೋಲಿಸರು 4 ಜನರಿಗಿಂತ ಹೆಚ್ಚಿನ ಜನ ಸೇರಬಾರದು ಎಂದು ಸೆಕ್ಷನ್ 144 ಹೇರಿದ್ದರೂ, ಪೋಲೀಸರು ಚಾಪೇ ಕೆಳಗೆ ತೂರಿದರೆ, ಪ್ರಭಾಕರ್ ಭಟ್ ಅವರು ರಂಗೋಲಿ ಕೆಳಗೆ ತೂರಿ ಪೋಲೀಸರಿಗೇ ಚಳ್ಳೆ ಹಣ್ಣು ತಿನ್ನಿಸಿ, ನಾಲ್ಕು ನಾಲ್ಕು ಜನರನ್ನೇ ಸೇರಿಸಿ ತಮ್ಮ ಶಾಲೆಯ ಶಂಖು ಸ್ಥಾಪನೆಯನ್ನು ಉಡುಪಿಯ ಪೇಜಾವರ ಶ್ರೀಗಳನ್ನು ಕೈಯ್ಯಲ್ಲಿ ಮಾಡಿಸಿದ್ದ ಸಾಹಸಿಗಳು. ಗಾಯದ ಮೇಲೆ ಬರೆ ಎಳೆಯುವಂತೆ ತಮ್ಮ ಶಾಲೆ ಇದ್ದ ಜಾಗಕ್ಕೆ ಹನುಮಾನ್ ನಗರ ಎಂದು ನಾಮಕರಣ ಮಾಡಿ ಎಲ್ಲರ ಹುಬ್ಬೇರಿಸಿದ್ದರು.

ರಾಜ್ಯ ಸರ್ಕಾರದ ಶಿಕ್ಷಣ ನೀತಿಯಂತೆ ಪಾಠ ಪ್ರವಚನಗಳ ಜೊತೆ, ಹಿಂದೂ ಸಂಸ್ಕೃತಿಯಂತೆ ಸರಸ್ವತಿ ಪ್ರಾರ್ಥನೆಯೊಂದಿಗೆ ಶಾಲೆಯ ಆರಂಭ, ಓದಿನ ಜೊತೆ ಜೊತೆಯಲ್ಲಿಯೇ ದೇವರ ನಾಮ ಮತ್ತು ಭಜನೆಗಳ ಸಂಕೀರ್ತನೆಯಲ್ಲದೇ ಭಗವದ್ಗೀತೆಗಳನ್ನೂ ಹೇಳಿಕೊಡಲಾರಂಭಿಸಿದರು. ಮಕ್ಕಳಿಗೆ ಮಾತೃಭಾಷೆಯಲ್ಲಿ ಕಲಿಸಿದರೆ ಚೆನ್ನಾಗಿ ಅರ್ಥೈಸಿಕೊಳ್ಳುತ್ತಾರೆ ಎಂಬ ತತ್ವದಡಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಸರಿ ಸುಮಾರು ಮೂರು ಸಾವಿರಕ್ಕೂ ಅಧಿಕ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣ, ಸಮವಸ್ತ್ರದ ಜೊತೆಗೆ, ಅಂದಿನ ಕಾಲದಲ್ಲಿಯೇ ಬಡ ಮಕ್ಕಳಿಗೆ ಬಿಸಿಯೂಟವನ್ನು ಕೊಡುವ ಮೂಲಕ ಎಲ್ಲರ ಗಮನ ಸೆಳೆದರು. ಇವರ ನಿಸ್ವಾರ್ಥ ಸೇವೆಯನ್ನು ಗುರುತಿಸಿದ ಅನೇಕ ಹಿಂದೂಪರ ಸಂಘಟನೆಗಳು ಮತ್ತು ಸಿರಿವಂತರು ತಮ್ಮ ಕೈಲಾದ ಮಟ್ಟಿಗೆ ಧನ-ಧಾನ್ಯಗಳನ್ನು ಸಹಾಯ ಮಾಡುವ ಮೂಲಕ ರಾಜ್ಯದಲ್ಲಿ ಅತಿದೊಡ್ಡ ಉಚಿತ ಕನ್ನಡ ಮಧ್ಯಮ ಶಾಲೆ ಎಂಬ ಕೀರ್ತಿಗೆ ಪಾತ್ರವಾಯಿತು.

ಒಬ್ಬ ವ್ಯಕ್ತಿ ಪ್ರವರ್ಧಮಾನಕ್ಕೆ ಬರುತ್ತಿದ್ದಾನೆ ಎಂದರೆ ಅದಕ್ಕೆ ಅಡ್ಡಿ ಪಡಿಸುವವರು ಹುಟ್ಟಿಕೊಳ್ಳುವುದು ಈ ಸಮಾಜದಕ್ಕೆ ಅಂಟಿಕೊಂಡಿರುವ ಜಾಡ್ಯ! ಇದಕ್ಕೆ ಪ್ರಭಾಕರ್ ಭಟ್ಟರೂ ಹೊರತಾಗಿರಲಿಲ್ಲ. ಅವರ ಶಾಲೆಯ ಊಟೋಪಚಾರಕ್ಕಾಗಿ ಕೊಲ್ಲೂರಿನ ದೇವಾಲಯ ಧನ ಸಹಾಯವನ್ನು ಮಾಡುತ್ತಿತ್ತು. ಇದನ್ನು ಗಮನಿಸಿದ ಅಂದಿನ ಸರ್ಕಾರದ ಪ್ರಭಲ ಸಚಿವರೊಬ್ಬರು ಕೊಲ್ಲೂರು ದೇವಸ್ಥಾನಕ್ಕೆ ಪತ್ರ ಬರೆದು ಈ ಧನ ಸಹಾಯವನ್ನು ನಿಲ್ಲಿಸುವ ಮೂಲಕ ತಮ್ಮ ವಯಕ್ತಿಕ ದ್ವೇಷವನ್ನು ಮೆರೆದರು. ಆರಂಭದ ದಿನಗಳಲ್ಲಿ ಸರ್ಕಾರಕ್ಕೆ ಅನುದಾನ ಮುಂದುವರೆಸಲು ಪತ್ರ ಬರೆದ್ದಲ್ಲದೇ ಮಕ್ಕಳೊಂದಿಗೆ ಸಾಂಕೇತಿಕ ಪ್ರತಿಭಟನೆ ನಡೆಸಿದರೂ ಜಗ್ಗದ ಸರ್ಕಾರಕ್ಕೆ ಸೆಡ್ಡು ಹೊಡೆಯಲು ನಿರ್ಧರಿದ ಪ್ರಭಾಕರ್ ಭಟ್ಟರು, ತಮ್ಮ ಶಾಲೆಯ ಮಕ್ಕಳು ತಮ್ಮ ಊಟವನ್ನು ತಾವೇ ಬೆಳೆಯುವ ನಿರ್ಧಾರಕ್ಕೆ ಬಂದು ಶಾಲೆಯ ಪಕ್ಕದಲ್ಲೇ ಇರುವ ಸುದೇಕಾರು ಎಂಬಲ್ಲಿನ ಶಾಲೆಗೆ ಸೇರಿದ್ದ ಗದ್ದೆಯಲ್ಲಿ ಶಾಲಾ ಮಕ್ಕಳೇ ಶುದ್ಧ ಸಾವಯುವ ಆಧಾರಿತ ಕೃಷಿ ಪದ್ಧತಿಯಲ್ಲಿ ಕಾಯಕ ಮಾಡಿ ತಮ್ಮ ಮಧ್ಯಾಹ್ನದ ಊಟಕ್ಕೆ ಬೇಕಾದ ಅಕ್ಕಿ ಮತ್ತು ಬೇಳೆ ಮತ್ತು ಕಾಯಿಪಲ್ಲೆಗಳನ್ನು ಬೆಳೆದು ಮಾದರಿಯಾದರು. ಶಾಲಾ ಮಕ್ಕಳು ಬೆಳೆದ ಭತ್ತ ಆ ಮಕ್ಕಳ ಊಟಕ್ಕಾದರೆ, ಭತ್ತ ಬಡಿದ ನಂತರದ ಹುಲ್ಲು ತಮ್ಮದೇ ಶ್ರೀರಾಮ ಕಾಲೇಜಿನಲ್ಲಿ ನಡೆಸುತ್ತಿರುವ ವಸುಧಾರ ಗೋಶಾಲೆಯ ಗೋವುಗಳಿಗೆ ಆಹಾರವಾಗುವ ಮೂಲಕ ಕಸದಲ್ಲೂ ರಸವನ್ನು ತೆಗೆದದ್ದಲ್ಲದೇ, ಮಕ್ಕಳಿಗೆ ಎಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಧೃತಿಗೆಡದೆ ಸ್ವಾಭಿಮಾನಿಗಳಾಗಿ, ಸ್ವಾವಲಂಭಿಗಳಾಗಿ ಹೇಗೆ ಜೀವನವನ್ನು ನಡೆಸಬಹುದು ಎಂಬುದನ್ನು ಪ್ರಾಯೋಗಿವಾಗಿ ತೋರಿಸಿಕೊಟ್ಟರು.

ಇನ್ನು ತಮ್ಮ ಶಾಲೆಯ ಮಕ್ಕಳ ಸಾಂಸ್ಕೃತಿಕ ಮತು ಕ್ರೀಡಾ ಪ್ರತಿಭೆಗೆ ಸೂಕ್ತವಾದ ವೇದಿಕೆಯನ್ನು ಒದಗಿಸುವ ಸಲುವಾಗಿ ಅವರ ಶಾಲ ಆವರಣದಲ್ಲಿಯೇ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡೋತ್ಸವವನ್ನು ಏರ್ಪಡಿಸಿ ತಮ್ಮ ಶಾಲಾಮಕ್ಕಳಿಗೆ ಉತ್ಸಾಹವನ್ನು ತುಂಬಿದ ಪರಿಣಾಮ ಇಂದು ಅವರ ಶಾಲಾ ವಿದ್ಯಾರ್ಥಿಗಳು ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ನಾನಾ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಶಾಲೆಯ ಕೀರ್ತಿಯನ್ನು ಎತ್ತಿ ಹಿಡಿದಿದ್ದಾರೆ.

ಇನ್ನು ವಯಕ್ತಿವಾಗಿ ಹೇಳಬೇಕೆಂದರೆ ಎಂಭತ್ತರ ದಶಕದಲ್ಲಿ ಬಂಟ್ವಾಳದ ಬಳಿ ಇರುವ ನರಿಕೊಂಬು ಎಂಬ ಊರಿನಲ್ಲಿ ಶ್ರೀಕೃಷ್ಣ ಸೋಮಯಾಜಿಯವರು ಬೇಸಿಗೆ ಕಾಲದಲ್ಲಿ ನಡೆಸುತ್ತಿದ್ದ ವೇದ ಶಿಭಿರದಲ್ಲಿ ಪ್ರತೀ ವರ್ಷವೂ ತಪ್ಪದೇ ಎರಡು ಮೂರು ಬಾರಿ ಶಿಬಿರಕ್ಕೆ ಬಂದು ಶಿಭಿರಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದ ಸಂಧರ್ಭದಲ್ಲಿ ನನಗೆ ಅವರ ಪರಿಚಯವಾಗಿ ಅವರ ಅದ್ಭುತ ವಾಗ್ಜರಿ ಮತ್ತು ಹೇಳಬೇಕಾದದ್ದನ್ನು ಅತ್ಯಂತ ಸ್ಪಷ್ಟವಾಗಿ ಮತ್ತು ಕೇಳುಗರ ಮನಸ್ಸಿಗೆ ನಾಟುವಂತೆ ಹೇಳುತ್ತಿದ್ದದ್ದು ಅವರು ಹೇಳುತ್ತಿದ್ದ ದೇಶಭಕ್ತರ ಕಥೆಗಳು ಮೈಮನಗಳನ್ನು ರೋಮಾಂಚನಗೊಳಿಸುತ್ತಿದ್ದ ಕಾರಣ ನನಗೆ ಅರಿವಿಲ್ಲದಂತೆಯೇ ಅವರ ಅಭಿಮಾನಿಯಾಗಿ ಅವರನ್ನು ಅನುಸರಿಸುತ್ತಲೇ ಬಂದೆ. ಮುಂದೆ ನನ್ನ ಎರಡೂ OTCಯಲ್ಲಿಯೂ ಅವರ ಮಾರ್ಗದರ್ಶನ ದೊರೆತದ್ದು ನನ್ನ ಸೌಭಾಗ್ಯ. ಈಗಂತೂ ಸಾಮಾಜಿಕ ಜಾಲತಾಣಗಳಲ್ಲಿ ಅವರ ಬಹುತೇಕ ಭಾಷಣಗಳು ಬೆರಳ ತುದಿಯಲ್ಲಿ ಲಭ್ಯವಾಗಿರುವ ಕಾರಣ ಸಮಯ ಸಿಕ್ಕಾಗಲೆಲ್ಲಾ ಅವರ ಭಾಷಣಗಳಿಂದ ಪ್ರೇರಿತನಾಗುತ್ತಿದ್ದೇನೆ.

ಈಗಾಗಲೇ ತಿಳಿಸಿದಂತೆ ತೇನ ವಿನಾ ತೃಣಮಪಿ ನ ಚಲತಿ ಎನ್ನುವಂತೆ ಅವಿಭಜಿತ ದಕ್ಷಿಣಕನ್ನಡದಲ್ಲಿ ಸಂಘಪರಿವಾರದ ಯಾವುದೇ ಕೆಲಸಗಳು ನಡೆಯ ಬೇಕಾದರೂ ಪ್ರಭಾಕರ್ ಭಟ್ಟರ ನಿರ್ಧಾರಗಳೇ ಅಂತಿಮವಾಗಿರುತ್ತದೆ ಎಂದರೂ ಅತಿಶಯವಲ್ಲ. ಒಮ್ಮೆ ಅವರು ನಿರ್ಧಾರ ಮಾಡಿದರೇ ಸಾಕು ಅದನ್ನು ಸಾಧಿಸಿಯೇ ತೋರಿಸುವ ಛಲದಂಕಮಲ್ಲ ಎನ್ನುವುದಕ್ಕೆ ಉದಾರಣೆ 2009ರಲ್ಲಿ ಲೋಕಸಭಾ ಚುನಾವಣೆ. ಆ ಚುನಾವಣೆಯಲ್ಲಿ ಕಾಂಗ್ರೇಸ್ಸಿನಿಂದ ಹಿರಿಯ ರಾಜಕಾರಣಿ ಜನಾರ್ಧನ ಪೂಜಾರಿಯವರು ನಿಂತಿದ್ದರೇ, ಪಕ್ಷೇತರಾಗಿ ಬಿಜೆಪಿಯ ಮಾಜೀ ಶಾಸಕ ಮತ್ತು ಅವರ ಭಾವಮೈದುನ (ಹೆಂಡತಿಯ ಸ್ವಂತ ಅಣ್ಣ) ಉರಿಮಜಲು ರಾಮ್ ಭಟ್ ಕಣಕ್ಕಿಳಿದು ಪ್ರಭಾಕರ್ ಭಟ್ ಅವರನ್ನು ಮುಜುಗರಕ್ಕೀಡು ಮಾಡಿದ್ದರು. ಆದರೆ ತಮ್ಮ ನಂಬಿಕೆ ಸಿದ್ಧಾಂತಗಳ ಮುಂದೆ ವಯಕ್ತಿಕ ಸಂಬಂಧಗಳು ನಗಣ್ಯವಾಗುತ್ತದೆ ಎನ್ನುವಂತೆ, ಸಂಘದ ಕೇವಲ ಸಂಘದ ಪ್ರಚಾರಕರಾಗಿದ್ದ ಮತ್ತು ಹೆಚ್ಚಿನ ಜನರಿಗೆ ಪರಿಚಯವೇ ಇಲ್ಲದಿದ್ದ ತಮ್ಮ ಶಿಷ್ಯನಾದ ನಳಿನ್ ಕುಮಾರ್ ಕಟೀಲನ್ನು ಬಿಜೆಪಿಯ ಅಭ್ಯರ್ಥಿಯನ್ನಾಗಿಸಿ, ಸ್ವತಃ ತಾವೇ ಮಂಚೂಣಿಯಲ್ಲಿದ್ದು ತಾವೇ ಅಭ್ಯರ್ಥಿಯೇನೋ ಎನ್ನುವಂತೆ ಬೈಠಕ್ ಮೇಲೆ ಬೈಠಕ್ ನಡೆಸಿ, ಊರೂರು ಸುತ್ತಿ ಜನರನ್ನು ಹುರಿದುಂಬಿಸಿ ನಳೀನ್ ಕುಮಾರರನ್ನು ಜಯಶಾಲಿಯನ್ನಾಗಿ ಮಾಡಿ ತಮ್ಮ ಬಲವನ್ನು ತೋರಿಸಿದ್ದರು.

ಇನ್ನು 1992ರ ಅಯೋಧ್ಯಾ ರಾಮಜನ್ಮ ಭೂಮಿಯ ಹೋರಾಟದ ಸಮಯದಲ್ಲಿ, ಇತ್ತೀಚಿನ NRC & CAA ಹೋರಾಟದ ಸಂದರ್ಭದಲ್ಲಿ ಕೇವಲ ದಕ್ಷಿಣ ಕರ್ನಾಟಕವಲ್ಲದೇ, ಕಾಲಿಗೆ ಚಕ್ರ ಕಟ್ಟಿಕೊಂಡು ಇಡೀ ರಾಜ್ಯಾದ್ಯಂತ ಪ್ರವಾಸ ಮಾಡಿ ಜನರಿಗೆ ಸೂಕ್ತ ಮಾರ್ಗದರ್ಶನ ಮಾಡಿದ್ದಾರೆ. ಇತ್ತೀಚೆಗೆ ಕನಕಪುರದ ಬಳಿ ಅನಧಿಕೃತವಾಗಿ ಏಸು ಪ್ರತಿಮೆಯನ್ನು ಸ್ಥಾಪಿಸಿದ್ದರ ವಿರುದ್ದವೂ ಪ್ರಭಾಕರ್ ಭಟ್ ಅವರ ನೇತೃತ್ವದಲ್ಲಿ ನಡೆಸಿದ ಹೋರಾಟ ಫಲ ನೀಡಿ ಏಸು ಪ್ರತಿಮೆಯ ಸ್ಥಾಪನೆಗೆ ತಡೆಯಾಜ್ಞೆ ಪಡೆಯುವುದರ ಹಿಂದೆ ಪ್ರಭಾಕರ್ ಭಟ್ ಅವರ ಶ್ರಮವೂ ಇದೆ.

80ರ ವಯಸ್ಸಿನಲ್ಲಿಯೂ 20ರ ತರುಣರ ಹಾಗೆ ರಾಜ್ಯಾದಂತ ಪ್ರವಾಸ ಮಾಡುತ್ತಾ, ನೂರಾರು ಹಿಂದೂ ಸಾಮ್ರಾಜ್ಯ ದಿನೋತ್ಸವಗಳನ್ನು ನಡೆಸುತ್ತಾ, ಹಿಂದೂ ಧರ್ಮ ಉಳಿವಿಗಾಗಿ ಕಟಿ ಬದ್ಧರಾಗುವಂತೆ ತರುಣರಲ್ಲಿ ಪ್ರೇರೇಪಿಸುವ ಅಧ್ಭುತ ಕಾರ್ಯದಲ್ಲಿ ಎಲೆಮರೆಯ ‌ಕಾಯಿಯಂತೆ ತೊಡಗಿರುವ ಮತ್ತು ತಮ್ಮ ಶಾಲೆಯ ಮೂಲಕ ದೇಶಭಕ್ತ ಭಾವೀ ಪ್ರಜೆಗಳನ್ನು ರೂಪಿಸುವ ಸಲುವಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಕರ್ಮಯೋಗಿ ಕಲ್ಲಡ್ಕದ ಡಾ. ಪ್ರಭಾಕರ್ ಭಟ್ ಅವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಏನಂತೀರೀ?

2 thoughts on “ಡಾ. ಪ್ರಭಾಕರ್ ಭಟ್ ಕಲ್ಲಡ್ಕ

  1. ನಮಸ್ತೆ. ಲೇಖನ ಚೆನ್ನಾಗಿದೆ.
    ಆದರೆ ತುಂಬಾ ತಪ್ಪುಗಳು ಕಂಡುಬಂದವು. ಕರಡು ತಿದ್ದುಪಡಿ ಮಾಡಿಲ್ಲ ಎಂದು ಅನಿಸುತ್ತದೆ.

    Like

Leave a comment