ಕನ್ನಡ ಚಲನಚಿತ್ರದ ಮಾಂತ್ರಿಕ ಬಿ. ವಿಠ್ಠಲಾಚಾರ್ಯ

ಇವತ್ತಿನ ನಮ್ಮ ಕನ್ನಡದ ಕಲಿಗಳು ಕಥಾನಾಯಕರನ್ನು ಹೇಗೆ ಪರಿಚರಿಸಿಕೊಡುವುದು ಎಂಬ ಗೊಂದಲ ನನ್ನ ಮನಸ್ಸಿನಲ್ಲಿ ಮೂಡುತ್ತಿದೆ. ಇವರು ತಮ್ಮ ಜೀವನ ಆರಂಭಿಸಿದ್ದು, ಕೂಲೀ ಕಾರ್ಮಿಕನಾಗಿ ನಂತರ ಹೊಟೇಲ್ ಮಾಲಿಕ, ತದನಂತರ ಸ್ವಾತಂತ್ರ್ಯ ಹೋರಾಟಗಾರ, ಆನಂತರ ಚಲನಚಿತ್ರ ಪ್ರದರ್ಶಕ, ಚಿತ್ರ ನಿರ್ದೇಶಕ, ಚಿತ್ರ ನಿರ್ಮಾಪಕ ಹೀಗೆ ಹಿಡಿದ ಕೆಲಸವನ್ನು ಅಚ್ಚು ಕಟ್ಟಾಗಿ ನಿರ್ವಹಿಸಿ ಜನರ ಮನವನ್ನು ಸೂರೆಗೊಂಡ ಅಪ್ರತಿಮ ಛಲಗಾರ ಬಿ. ವಿಠಲಾಚಾರ್ಯರು.

ವಿಠಲಾಚಾರ್ಯರು ಎಂದರೆ ನಮಗೆ ಥಟ್ ಅಂತಾ ನೆನಪಾಗೋದೇ ಪೌರಾಣಿಕ ಇಲ್ಲವೇ ಕ್ರಾಂತಿಕಾರಿ ಸಿನಿಮಾಗಳೇ. ಇಂದಿನ ಕಾಲದಲ್ಲಿ ಗ್ರಾಫಿಕ್ ತಂತ್ರಜ್ಞಾನ ಬಳಸಿಕೊಂಡು ಯಾವುದೇ ರೀತಿಯ ಎಫೆಕ್ಟ್ಗಳನ್ನು ಸುಲಭವಾಗಿ ಮಾಡಬಹುದು. ಅದ್ಧೂರಿಯ ಯುದ್ದ ಭೂಮಿಯ ಚಿತ್ರೀಕರಣವನ್ನು ಮಾಡದಯೇ ನಾಲ್ಕು ಗೋಡೆಗಳ ಮಧ್ಯದಲ್ಲಿಯೇ ಕುಳಿತು ಗ್ರಾಫಿಕ್ಸ್ ಸಹಾಯದಿಂದ ಸುಲಭವಾಗಿ ತಯಾರಿಸಿಬಿಡಬಹುದು. ಈ ರೀತಿಯ ಯಾವುದೇ ತಂತ್ರಜ್ಞಾನವೂ ಇಲ್ಲದಿದ್ದ 50-60ರ ದಶಕದಲ್ಲಿಯೇ ಪ್ರೇಕ್ಷಕರನ್ನು ಬೆಚ್ಚಿಬೀಳಿಸಿ, ಚಿಕ್ಕಮಕ್ಕಳಂತೂ ಚೆಟ್ಟಿಯನ್ನೇ ಒದ್ದೆ ಮಾಡಿಕೊಳ್ಳುವಷ್ಟು ರೋಚಕವಾಗಿ ತೋರಿಸುತ್ತಿದ್ದ ಕನ್ನಡಿಗನಾಗಿದ್ದರೂ, ಅಚಾನಕ್ಕಾಕಿ ಮದ್ರಾಸಿಗೆ ಹೋಗಿ ಕಡೆಗೆ ಯಶಸ್ವೀ ತೆಲುಗು ಮತ್ತು ತಮಿಳು ಚಿತ್ರಗಳ ನಿರ್ದೇಶಕ ಮತ್ತು ನಿರ್ಮಾಪಕ ಎನಿಸಿಕೊಂಡ ಬಿ ವಿಠಲಾಚಾರ್ಯರ ಸಿನಿಮಾ ಪಯಣ ನಿಜಕ್ಕೂ ಬಲು ರೋಚಕವಾಗಿದೆ.

ದಕ್ಷಿಣ ಕರ್ನಾಟಕದ ದೇವಾಲಯಗಳ ನಗರೀ ಎಂದೇ ಖ್ಯಾತವಾಗಿರುವ ಉಡುಪಿಯ ಆಯುರ್ವೇದ ವೈದ್ಯರೊಬ್ಬರ ಮಗನಾಗಿ ಉದ್ಯಾವರದಲ್ಲಿ ಮಧ್ಯಮ ವರ್ಗದ ಸಂಪ್ರದಾಯಸ್ಥರ ಕುಟುಂಬದ ಏಳನೆಯ ಮಗುವಾಗಿ ವಿಠಲಾಚಾರ್ಯರು ಜನವರಿ 20, 1920 ರಲ್ಲಿ ಜನಿಸುತ್ತಾರೆ. ಅವರಿಗೆ ಬಾಲ್ಯದಿಂದಲೂ ಯಕ್ಷಗಾನ, ನಾಟಕ ಮತ್ತು ಬಯಲಾಟಗಳಲ್ಲಿಯೇ ಆಸಕ್ತಿಯಿದ್ದ ಕಾರಣ, ಮೂರನೇ ತರಗತಿಯವರಗೇ ಓದಿ ನಂತರ ಶಾಲೆಯನ್ನೂ ಊರನ್ನೂ ಬಿಟ್ಟು ಜೀವನದ ಪಾಠವನ್ನು ಕಲಿಯಲಾರಂಭಿಸುತ್ತಾರೆ. ಹಾಗೇ ಸಾಗುತ್ತಲೇ ಹೋಗಿ ಹಾಸನ ಜಿಲ್ಲೆಯ ಅರಸೀಕೆರೆ ತಲುಪಿ ಅಲ್ಲಿ ಕೂಲೀ ಕೆಲಸದಿಂದ ಹಿಡಿದು ನಾನಾ ರೀತಿಯ ಕೆಲಸಗಳನ್ನು ಮಾಡುತ್ತಲೇ ಕೂಡಿಟ್ಟ ಅಲ್ಪ ಸ್ವಲ್ಪ ಹಣದಿಂದ ತಮ್ಮ ಸೋದರ ಸಂಬಂಧಿಯೊಬ್ಬರು ನಡೆಸುತ್ತಿದ್ದ ಉಡುಪಿ ಹೋಟೆಲೊಂದನ್ನು ಖರೀದಿಸಿ ಅದನ್ನು ಯಶಸ್ವಿಯಾಗಿ ನಡೆಸುತ್ತಾ ಜೀವನ ಇನ್ನೇನು ನೆಲೆಗೊಂಡಿತ್ತು ಎಂದು ತಿಳಿಯುತ್ತಿರುವಾಗಲೇ ದೇಶಾದ್ಯಂತ ಮಹಾತ್ಮಾ ಗಾಂಧಿಯವರ ನೇತೃತ್ವದಲ್ಲಿ ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಅಭಿಯಾನ ನಡೆಯುತ್ತಿದ್ದದ್ದನ್ನು ನೋಡಿ ಅವರಲ್ಲಿದ್ದ ದೇಶಾಭಿಮಾನ ಜಾಗೃತಗೊಂಡು ಕೆಲವು ಸ್ನೇಹಿತರೊಂದಿಗೆ ಬ್ರಿಟಿಷ್ ಸರ್ಕಾರದ ವಿರುದ್ಧದ ಚಳವಳಿಯಲ್ಲಿ ಭಾಗವಹಿಸಿದ ಕಾರಣ, ಪೋಲೀಸರು ಅವರನ್ನು ಬಂಧಿಸಿ ಸೆರಮನೆಗೂ ತಳ್ಳಲ್ಪಡುತ್ತಾರೆ. ಸೆರೆಮನೆಯಿಂದ ಬಿಡುಗಡೆಯಾಗಿ ಹೊರಗೆ ಬಂದಾಗ ಅವರ ತಮ್ಮ ಹೋಟೇಲನ್ನು ಚೆನ್ನಾಗಿ ನಡೆಸಿಕೊಂಡು ಹೋಗುತ್ತಿರುವುದನ್ನು ಗಮನಿಸಿ, ತಮ್ಮ ಹೋಟೆಲ್ ಉದ್ಯಮವನ್ನು ಸಹೋದರನಿಗೇ ಹಸ್ತಾಂತರಿಸಿ, ತನ್ನ ಸ್ನೇಹಿತರಾಗಿದ್ದ ಡಿ. ಶಂಕರ್ ಸಿಂಗ್ ಮತ್ತಿತರ ಜೊತೆಯಲ್ಲಿ ಅರಸೀಕೆರೆಯಲ್ಲಿಯೇ ಟೂರಿಂಗ್ ಟಾಕೀಸ್ ಅನ್ನು ಆರಂಭಿಸುತ್ತಾರೆ. ಟೂರಿಂಗ್ ಟಾಕೀಸ್ ಉದ್ಯಮ ಚೆನ್ನಾಗಿ ಕೈ ಹಿಡಿದ ಕಾರಣ ಅಕ್ಕ ಪಕ್ಕ ಊರುಗಳಲ್ಲಿಯೂ ಇನ್ನೂ ಮೂರ್ನಾಲ್ಕು ಟೂರಿಂಗ್ ಟಾಕೀಸ್ಗಳನ್ನು ಅರಂಭಿಸಿ ಯಶಸ್ವೀ ಪ್ರದರ್ಶಕರಾಗುತ್ತಾರೆ. ಇದೇ ಸಮಯದಲ್ಲಿಯೇ ಕೆ.ಆರ್.ಪೇಟೆಯ ರಾಮದಾಸ ಆಚಾರ್ಯರ ಮೂರನೇ ಮಗಳಾದ ಜಯಲಕ್ಷ್ಮಿಯೊಂದಿಗೆ ಮದುವೆಯಾಗುತ್ತದೆ.

ವಿಠಲಾಚಾರ್ಯರು ತಮ್ಮ ಟಾಕೀಸಿನಲ್ಲಿ ಪ್ರದರ್ಶಿತವಾಗುತ್ತಿದ್ದ ಪ್ರತಿಯೊಂದು ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಚಿತ್ರ ನಿರ್ದೇಶನ ಮತ್ತು ನಿರ್ಮಾಣವನ್ನು ಏಕಲವ್ಯನಂತೆ ಸ್ವತಃ ಕಲಿಯುತ್ತಾರೆ. ಅದೇ ಹುಚ್ಚು ಧೈರ್ಯದಿಂದ ತಮ್ಮ ಗೆಳೆಯರೊಂದಿಗೆ ಮೈಸೂರಿಗೆ ತೆರಳಿ ಮಹಾತ್ಮ ಪಿಕ್ಚರ್ಸ್ ಎಂಬ ಚಿತ್ರ ನಿರ್ಮಾಣ ಸಂಸ್ಥೆಯೊಂದನ್ನು ಸ್ಥಾಪಿಸಿ ಕನ್ನಡ ಚಿತ್ರಗಳನ್ನು ನಿರ್ಮಿಸುತ್ತಾರೆ. 1944 ರಿಂದ 1953ರ ವೆರೆಗಿನ 9 ವರ್ಷಗಳಲ್ಲಿ 18 ಕನ್ನಡ ಚಿತ್ರಗಳನ್ನು ನಿರ್ಮಿಸಿ ಧಾಖಲೆಯನ್ನು ನಿರ್ಮಿಸುತ್ತಾರೆ. ಅವರು ನಿರ್ಮಿಸಿದ ಬಹುತೇಕ ಚಿತ್ರಗಳು ಪೌರಾಣಿಕ ಚಿತ್ರಗಳೇ ಆಗಿದ್ದು ಅವುಗಳು ಬಹಳ ಯಶಸ್ವಿಯಾಗಿ ಅವರಿಗೆ ಕೈತುಂಬ ಹಣದ ಜೊತೆ ಮನ್ನಣೆಯೂ ದೊರೆಯುತ್ತದೆ. ವಿಠಲಾಚಾರ್ಯರ ಸಿನಿಮಾ ಎಂದರೆ Special effectsಗೆ ಬಲು ಖ್ಯಾತಿಯಾಗಿರುತ್ತದೆ. ಯುದ್ದದಲ್ಲಿ ಬಾಣ ಪ್ರಯೋಗಗಳು, ಭೂತ ಪಿಶಾಚಿಗಳ ಚೇಷ್ಟೇ, ಅಸ್ತಿ ಪಂಜರದ ಮನುಷ್ಯರ ಕುಚೇಷ್ಟೇ, ದೇವರುಗಳು ದಿಢೀರ್ ಪ್ರತ್ಯಕ್ಷವಾಗುವುದು,ದಿಢೀರ್ ಮಾಯವಾಗುವುದೆಲ್ಲವನ್ನು ಅತ್ಯಂತ ರೋಚಕವಾಗಿ ತೋರಿಸುವುದರಲ್ಲಿ ಸಿದ್ಧಹಸ್ತರಾಗಿರುತ್ತಾರೆ. ಬಹುತೇಕ ಸಿನಿಮಾಗಳನ್ನು ಸ್ವತಃ ವಿಠಲಾಚಾರ್ಯರೇ ನಿರ್ದೇಶಿಸಿದರೇ, ಉಳಿದ ಸಿನಿಮಾಗಳನ್ನು ಅವರ ಸ್ನೇಹಿತ ಶಂಕರಸಿಂಗ್ ಮತ್ತಿತರು ನಿರ್ದೇಶಿಸಿದ್ದರು. ಸಿನಿಮಾಗಳು ಯಶಸ್ವಿಯಾಗಿ ನಡೆಯುತ್ತಿದ್ದರೂ ಕೆಲವೊಂದು ಸಮಸ್ಯೆಗಳಿಂದಾಗಿ ಅವರ ಪಾಲುದಾರರಲ್ಲಿ ಒಬ್ಬೊಬ್ಬರಾಗಿ ಅವರನ್ನು ಬಿಟ್ಟು ಹೋಗಿ, ಕಡೆಗೆ ಶಂಕರಸಿಂಗ್ ಮಾತ್ರ ವಿಠ್ಠಲಾಚಾರ್ಯರೊಂದಿಗೆ ಉಳಿಯುತ್ತಾರೆ.

ವಿಠಲಾಚಾರ್ಯ, ಶಂಕರಸಿಂಗ್, ಹುಣಸೂರು ಕೃಷ್ಣಮೂರ್ತಿ, ಪಿ. ಶಾಮಣ್ಣ ಮುಂತಾದವರು ಕೈಗೂಡಿಸಿ ತಯಾರಿಸಿದ ಜಗನ್ಮೋಹಿನಿ ಚಿತ್ರವಂತೂ ಅನೇಕ ಕಡೆ, 25 ವಾರಗಳ ಪ್ರದರ್ಶನಗೊಂಡು ರಜತೋತ್ಸವ ಆಚರಿಸಿತು. ವಿಠಲಾಚಾರ್ಯ ಮತ್ತು ಶಂಕರ ಸಿಂಗ್ ಜೋಡಿ ಮಹಾತ್ಮ ಪಿಕ್ಚರ್ಸ್‌ ಲಾಂಛನದಲ್ಲಿ 1952ರಲ್ಲಿ ಶ್ರೀನಿವಾಸಕಲ್ಯಾಣ, ಚಂಚಲಕುಮಾರಿ, ಮತ್ತು ಸಾಮಾಜಿಕ ಚಿತ್ರ ದಳ್ಳಾಳಿ ಎಂಬ ಮೂರು ಚಿತ್ರಗಳನ್ನು ತಯಾರಿಸಿ ಕನ್ನಡ ಚಿತ್ರ ರಂಗಕ್ಕೆ ತನ್ನದೇ ಆದ ಸ್ಥಾನವನ್ನು ಗಳಿಸಿಕೊಡುವಲ್ಲಿ ಮಹತ್ತರ ಸಾಧನೆ ಮಾಡುತ್ತಾರೆ. ವಿಠಲಾಚಾರ್ಯರ ಚಿತ್ರಗಳಿಂದಲೇ, ಖ್ಯಾತ ನಟಿಯರಾದ ಹರಿಣಿ, ಪ್ರತಿಮಾ ದೇವಿ, ಜಯಶ್ರಿ, ಲಕ್ಷ್ಮಿದೇವಿ ನಟರುಗಳಾದ ವೀರಭದ್ರಪ್ಪ, ಮರಿರಾವ್, ಬಾಲಕೃಷ್ಣ, ಮಹಾಬಲರಾವ್ ಮುಂತಾದ ಅನೇಕ ರಂಗಭೂಮಿ ಕಲಾವಿದರುಗಳು ಬೆಳ್ಳಿ ತೆರೆಗೆ ಪದಾರ್ಪಣ ಮಾಡುವ ಅವಕಾಶ ದೊರಕುವಂತಾಗುತ್ತದೆ. ಪಿ.ಶಾಮಣ್ಣ ಸಂಗೀತ ನಿರ್ದೇಶಕರಾಗಿ, ಎಮ್.ಎಸ್. ಮಣಿ ಮತ್ತು ಜಿ. ದೊರೈ ಛಾಯಾಗ್ರಾಹಕರಾಗಿ, ಹುಣಸೂರು ಕೃಷ್ಣ ಮೂರ್ತಿಗಳು ಚಿತ್ರಕಥಾಕಾರರಾಗಿ ಚಲನಚಿತ್ರ ಜಗತ್ತಿಗೆ ಪ್ರವೇಶ ಮಾಡಿ ಮುಂದೆ ಇವರೆಲ್ಲರೂ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿ ದೊಡ್ಡ ಹೆಸರು ಮಾಡಿದ ವ್ಯಕ್ತಿಗಳಾಗಿದ್ದಲ್ಲದೇ ಕನ್ನಡ ಚಿತ್ರರಂಗ ಏಳಿಗೆಗೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಾರೆ. ಬಡ್ಡಿ ಗೋಪಾಲರಾಯರ ಹಗರಣವನ್ನು ಆಧರಿಸಿ, ಹುಣಸೂರು ಕೃಷ್ಣಮೂರ್ತಿಯವರು ರಚಿಸಿದ ಧರ್ಮರತ್ನಾಕರ ಎಂಬ ಜನಪ್ರಿಯ ಸಾಮಾಜಿಕ ನಾಟಕವನ್ನು ಸಿನಿಮಾಕ್ಕಾಗಿ ಅಲ್ಪ ಸ್ವಲ್ಪ ಬದಲಾವಣೆಗಳೊಂದಿಗೆ ನಿರ್ಮಿಸಿದ ದಳ್ಳಾಳಿ ಚಿತ್ರವು, ಆ ಕಾಲದಲ್ಲಿ ಹೊಸಾ ಪ್ರಯೋಗವೆಂದೇ ಪರಿಗಣಿಸಿ ಅಪಾರ ಯಶಸ್ಸು ಗಳಿಸುತ್ತದೆ.

ಆದರೆ 1953 ರಲ್ಲಿ ತಪ್ಪು ಕಲ್ಪನೆಗಳಿಂದಾಗಿಯೋ ಅಥವಾ ಯಾರದ್ದೋ ದುರುದ್ದೇಶದ ಫಲವಾಗಿಯೋ ವಿಠ್ಠಲಾಚಾರ್ಯ ಮತ್ತು ಶಂಕರಸಿಂಗ್ ಅವರ ಸಂಬಂಧ ಕೊನೆಯಾಗಿ ವಿಠಲಾಚಾರ್ಯರು ತಮ್ಮದೇ ಆದ ವಿಠ್ಠಲ್ ಪ್ರೊಡಕ್ಷನ್ಸ್ ಎಂಬ ಸಂಸ್ಥೆಯನ್ನು ಆರಂಭಿಸಿ ರಾಜ್ಯಲಕ್ಷ್ಮಿ ಎಂಬ ಯಶಸ್ವೀ ಚಿತ್ರವನ್ನು ನಿರ್ದೇಶಿಸಿ ನಿರ್ಮಾಣವನ್ನೂ ಮಾಡುತ್ತಾರೆ.

1954 ರಲ್ಲಿ, ಅವರು ನಿರ್ದೇಶಿಸಿ, ನಿರ್ಮಾಣ ಮಾಡಿದ ಕನ್ಯಾದಾನ ಎಂಬ ಕ್ರಾಂತಿಕಾರಿಯಾದ ಚಿತ್ರ ಯಶಸ್ವಿಯಾದ ನಂತರ ಅದನ್ನೇ ತೆಲುಗು ಭಾಷೆಯಲ್ಲಿ ರೀಮೇಕ್ ಮಾಡಲು ಮದ್ರಾಸ್ಸಿಗೆ ಹೋದವರು, ಅಲ್ಲಿನ ಚಿತ್ರರಂಗದ ಚಟುವಟಿಕೆಗಳಿಂದ ಆಕರ್ಷಿತರಾಗಿ ತಮ್ಮ ಜೀವಿತಾವಧಿಯವರೆಗೂ ಮದ್ರಾಸಿನಲ್ಲಿಯೇ ನೆಲೆಸಿ ತಮಿಳು ಮತ್ತು ಹೆಚ್ಚಾಗಿ ತೆಲುಗು ಚಿತ್ರಗಳನ್ನೇ ನಿರ್ಮಾಣ ಮತ್ತು ನಿರ್ದೇಶನ ಮಾಡಿದರೂ, ಕನ್ನಡವನ್ನು ಎಂದೂ ಮರೆಯದೇ ಮದರಾಸಿನಿಂದಲೇ ಕನ್ನಡ ಚಿತ್ರಗಳನ್ನು ನಿರ್ಮಾಣ ಮಾಡುತ್ತಾರೆ.

1963 ರಲ್ಲಿ ರಾಜ್ ಕುಮಾರ್, ಲೀಲಾವತಿ, ಉದಯ್ ಕುಮಾರ್, ನರಸಿಂಹರಾಜು, ಬಾಲಕೃಷ್ಣ ಅಷ್ಟೇ ಅಲ್ಲದೇ ಚಿತ್ರದ ಸಂಗೀತ ನಿರ್ದೇಶಕ ಮತ್ತು ಗಾಯಕರಾಗಿದ್ದ ಘಂಟಸಾಲಾ ಆವರಿಗೆ ತಕ್ಕ ಮಟ್ಟಿನ ಹೆಸರನ್ನು ತಂದುಕೊಟ್ಟ ಅಂದಿಗೂ ಇಂದಿಗೂ ಎಂದೆಂದಿಗೂ ಜನಮಾನದಲ್ಲಿ ಉಳಿದಿರುವ ವೀರಕೇಸರಿ ಚಿತ್ರವನ್ನು ವಿಠಲಾಚಾರ್ಯರು ನಿರ್ದೇಶನ ಮಾಡುತ್ತಾರೆ. ಆ ಕಾಲದಲ್ಲಿ ವಿಠಲಾಚಾರ್ಯರ ಸಿನಿಮಾದಲ್ಲಿ ಅಭಿನಯಿಸಲು ಅವಕಾಶ ಸಿಕ್ಕರೇ ಸಾಕು ಆ ಕಲಾವಿದರ ಬಣ್ಣದ ಬದುಕಿನ ಭವಿಷ್ಯವೇ ಬದಲಾಗುತ್ತದೆ ಎಂಬ ಮಾತು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಕೇಳಿ ಬರುತ್ತದೆ ಎಂದರೆ ಅದು ವಿಠಲಾಚಾರ್ಯರ ತಾಕತ್ತನ್ನು ತೋರಿಸುತ್ತದೆ.

ಇದೇ ವೀರಕೇಸರಿ ಸಿನಿಮಾವನ್ನು ಎನ್.ಟಿ.ಆರ್ ನಾಯಕತ್ವದಲ್ಲಿ ತೆಲುಗಿನಲ್ಲಿಯೂ ಬಂದಿಪೋಟ್ಟು ಎಂಬ ಹೆಸರಿನಲ್ಲಿ ನಿರ್ದೇಶಿಸಿ ಅದು ಅತ್ಯಂತ ಯಶಸ್ವಿಯಾದ ನಂತರವಂತೂ ಎನ್.ಟಿ.ಆರ್ ಮತ್ತು ವಿಠಲಾಚಾರ್ಯರ ನಡುವಿನ ಸಂಬಂಧ ಗಟ್ಟಿಯಾಗಿ ಸಾಲು ಸಾಲಾಗಿ ಸುಮಾರು 15 ಚಿತ್ರಗಳನ್ನು ನಿರ್ದೇಶಿಸಿದ ಗೌರವ ವಿಠಲಾಚಾರ್ಯದ್ದಾಗಿರುತ್ತದೆ. ಈ ಜೋಡಿಯ ಬಹುತೇಕ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾದ ಕಾರಣ ತೆಲುಗು ಅಭಿಮಾನಿಗಳು ಪ್ರೀತಿಯಿಂದ ಜನಪದ ಬ್ರಹ್ಮ ಎಂದರೆ, ಅವರ ಚಿತ್ರಗಳಲ್ಲಿನ ಅಧ್ಭುತ ದೃಶ್ಯಗಳು ಮತ್ತು special effect ಗಳಿಗೆ ಮಾರುಹೋದ ತಮಿಳು ಚಿತ್ರರಂಗದ ಅಭಿಮಾನಿಗಳು ವಿಠಲಾಚಾರ್ಯರನ್ನು ಮಾಯಾಜಾಲಾ ಮನ್ನನ್ ಎಂದು ಪ್ರೀತಿಯಿಂದ ಕರೆಯುವಷ್ಟರ ಮಟ್ಟಿಗೆ ಪ್ರಸಿದ್ಧರಾಗಿದ್ದರು.

ಹೀಗೆ ಕರಾವಳಿಯ ಮನುಷ್ಯ ತನ್ನ ಸ್ವಂತ ಶಕ್ತಿಯಿಂದ ಸಿನಿಮಾ ತಯಾರಿಕೆಯನ್ನು ಕಲಿತುಕೊಂಡು ಯಶಸ್ವೀ ಕನ್ನಡ ಚಿತ್ರಗಳನ್ನು ಪ್ರದರ್ಶಿಸಿ, ನಿರ್ಮಿಸಿ, ನಿರ್ದೇಶಿಸಿ, ಬಹುತೇಕ ರಂಗಭೂಮಿ ಕಲಾವಿದರುಗಳನ್ನು ಚಿತ್ರರಂಗಕ್ಕೆ ಪರಿಚಯಿಸಿ, ಕನ್ನಡ ಚಿತ್ರರಂಗಕ್ಕೆ ಭದ್ರ ಬುನಾದಿಯನ್ನು ಹಾಕಿ ನಂತರ ತೆಲುಗು ಮತ್ತು ತಮಿಳು ಚಿತ್ರರಂಗಕ್ಕೆ ವಲಸೆ ಹೋಗಿ ಪೌರಾಣಿಕ ಚಲನಚಿತ್ರವಲ್ಲದೇ ಸಾಮಾಜಿಕ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿ ಯಶಸ್ವಿಯಾಗಿದ್ದ ವಿಠಲಾಚಾರ್ಯರು, ತಮ್ಮ 79ನೇ ವಯಸ್ಸಿನಲ್ಲಿ ಮೇ 28, 1999ರಲ್ಲಿ ಚನ್ನೈ ನಗರದಲ್ಲಿ ನಿಧನರಾಗುತ್ತಾರೆ. ಬಿ.ವಿಠಲಾಚಾರ್ಯರು ಭೌತಿಕವಾಗಿ ನಮ್ಮನ್ನಿಂದು ಅಗಲಿದ್ದರೂ ಅವರ ತಮ್ಮ ಚಿತ್ರಗಳ ಮೂಲಕ ಎಲ್ಲೆಡೆಯಲ್ಲಿಯೂ ಹಬ್ಬಿಸಿದ್ದ ಕನ್ನಡದ ಕಂಪು ಮತ್ತು ಅವರ ಆ ರೋಚಕ ಅನುಭವ ಆಚಂದ್ರಾರ್ಕವಾಗಿ ನಮ್ಮೆಲ್ಲರನ್ನೂ ಪ್ರೇರೇಪಿಸುತ್ತಲೇ ಇರುವ ಕಾರಣ ಅವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s