ಇವರು ಎಸ್.ಎ.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೇ ಮೊದಲ ರ್ಯಂಕ್ ಇನ್ನು ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ ಎರಡನೇ ರ್ಯಾಂಕ್ ಪಡೆದು ಪ್ರತಿಷ್ಟಿತ ಚೆನೈನ ಐಐಟಿಯಲ್ಲಿ ಪ್ರವೇಶ ಸುಲಭವಾಗಿ ಸಿಕ್ಕಿದರೂ ಅಲ್ಲಿಗೆ ಹೋಗದೇ ಬೆಂಗಳೂರಿನಲ್ಲಿಯೇ ಇಂಜೀನಿಯರಿಂಗ್ ಮುಗಿಸಿ, ನೆಮ್ಮದಿಯಾಗಿ ಕೈ ತುಂಬಾ ಸಂಬಳ ತರುವ ಉದ್ಯೋಗವನ್ನು ಬಿಟ್ಟು ಭಾರತೀಯ ವಾಯುಸೇನೆಗೆ ಸೈನಾಧಿಕಾರಿಗಳಾಗಿ ಸೇರಿ, 21ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ ರಂಗಭೂಮಿ ಮತ್ತು ರೇಡಿಯೋ ನಾಟಕಗಳ ಕಡೆ ಆಕರ್ಷಿತರಾಗಿ, ಯಶಸ್ವೀ ನಟ ಎಂದು ಪ್ರಖ್ಯಾತರಾದ ನಂತರ ನೂರಾರು ಹಿಂದಿ ಮತ್ತು ಕನ್ನಡವೂ ಸೇರಿದಂತೆ ನೂರಾರು ಚಲನಚಿತ್ರಗಳಲ್ಲಿ ನಟಿಸಿ ರಾಜ್ಯ ಮತ್ತು ರಾಷ್ಟ್ರಪ್ರಶಸ್ತಿಗಳನ್ನು ಪಡೆದವರು. ಹೀಗೆ ಬಹುಮುಖ ಪ್ರತಿಭೆಯಾದ ಶ್ರೀ ದತ್ತಾತ್ರೇಯ ಎಲ್ಲರ ಪ್ರೀತಿಯ ದತ್ತಣ್ಣನವರೇ ನಮ್ಮ ಇಂದಿನ ಕನ್ನಡದ ಕಲಿಗಳು ಕಥಾನಾಯಕರು.
ಚಿತ್ರದುರ್ಗದಲ್ಲಿ ವಕೀಲರಾಗಿದ್ದ ಶ್ರೀ ಹರಿಹರ ಗುಂಡೂರಾಯರು ಮತ್ತು ವೆಂಕಮ್ಮ ದಂಪತಿಗಳ ಜನ್ಮದಲ್ಲಿ ಏಪ್ರಿಲ್ 20, 1942 ರಂದು ಚಿತ್ರದುರ್ಗದ ಸಂಪ್ರದಾಯ ಕುಟುಂಬದಲ್ಲಿ ದತ್ತಾತ್ರೇಯ ಅವರು ಜನಿಸಿದರು. ಅವರ ಪೂರ್ತಿ ಹೆಸರು, ಹರಿಹರ ಗುಂಡೂರಾವ್ ದತ್ತಾತ್ರೇಯ ಮತ್ತು ಎಲ್ಲರ ಪ್ರೀತಿಯ ದತ್ತಣ್ಣ ಎಂದೇ ಖ್ಯಾತರಾಗಿದ್ದಾರೆ. ಅವರು ಬಾಲ್ಯವನ್ನೆಲ್ಲಾ ಚಿತ್ರದುರ್ಗದ ಮಠದ ಕೇರಿಯಲ್ಲಿಯೇ ತುಂಬು ಕುಟುಂಬದಲ್ಲಿ ಕಳೆಯುತ್ತಾರೆ. ಅವರನ್ನೂ ಸೇರಿ ಅವರ ಒಡಹುಟ್ಟಿದವರು ಐದು ಗಂಡು ಮತ್ತು ಎರಡು ಹೆಣ್ಣು ಮಕ್ಕಳು. ಮನೆಯಲ್ಲಿ ಎಲ್ಲರೂ ಪ್ರತಿಭಾವಂತರೇ. ಇತ್ತೀಚೆಗಷ್ಟೇ ನಿಧನರಾದ ಶ್ರೀ ಹೆಚ್. ಜಿ. ಸೋಮಶೇಖರ್ ಅವರು ದತ್ತಣ್ಣ ಅವರ ಖಾಸ ಅಣ್ಣ.
ದತ್ತಣ್ಣ ಚಿಕ್ಕಂದಿನಿಂದಲೂ ಆಟ ಪಾಠಗಳಲ್ಲಿ ಹೇಗೆ ಚುರುಕೋ ಹಾಗೇಯೇ ತುಂಟತನದಲ್ಲೂ ಒಂದು ಕೈ ಮುಂದೆಯೇ. ಅಂದಿನ ಕಾಲದಲ್ಲಿ ಚಿತ್ರದುರ್ಗಕ್ಕೆ ಬರುತ್ತಿದ್ದ ಜಮಖಂಡಿ ಕಂಪನಿ, ಗುಬ್ಬಿ ನಾಟಕ ಕಂಪನಿ ನಾಟಕಗಳ ಪ್ರಭಾವದಿಂದಾಗಿ ಶಾಲೆಯಿಂದಲೇ ನಾಟಕದ ಗೀಳನ್ನು ಹತ್ತಿಸಿಕೊಂಡ ದತ್ತಣ್ಣನವರು ತಮ್ಮ ನೆರೆಹೊರೆಯ ಹುಡುಗರೊಂದಿಗೆ ಮಾಡಿದ ಸೊಹ್ರಾಬ್-ರುಸ್ತುಂ ನಾಟಕ ಅವರಿಗೆ ಪ್ರಖ್ಯಾತಿ ತಂದುಕೊಟ್ಟಿತ್ತು. ತುಮಕೂರಿನ ಪ್ರೌಢಶಾಲೆಯ ನಾಟಕದಲ್ಲಿ ಮದಕರಿ ನಾಯಕನ ಪಾತ್ರ ಮಾಡಿದರೆ, ಚಿತ್ರದುರ್ಗದ ಪ್ರೌಢ ಶಾಲೆಯಲ್ಲಿ ಅಳಿಯ ದೇವರು ನಾಟಕದಲ್ಲಿ ರುಕ್ಕುಪಾತ್ರದಲ್ಲಿ ಮಿಂಚಿದ್ದರು. ದುರ್ಗದ ಹವ್ಯಾಸಿ ತಂಡ ಅಭಿನಯಿಸಿದ ದೇವದಾಸಿ ನಾಟಕದಲ್ಲಿ ಸೀತಾಲಕ್ಷ್ಮಿ ಪಾತ್ರ. ನೋಡಲು ತೆಳ್ಳಗೆ, ಬೆಳ್ಳಗಿದ್ದ ದತ್ತಣ್ಣನವರಿಗೆ ಹೆಣ್ಣುಪಾತ್ರಗಳೇ ಹುಡುಕಿ ಕೊಂಡು ಬರ ತೊಡಗಿದವು. ಮೆಟ್ರಿಕ್ಯುಲೇಷನ್ ಪರೀಕ್ಷೆ ಹತ್ತಿರ ಬಂದಂತೆ ನಾಟಕಗಳಿಗೆ ವಿರಾಮ ಹಾಕಿ ಓದಿನ ಕಡೆ ಗಮನ ಹರಿಸಿ ರಾಜ್ಯಕ್ಕೇ ಮೊದಲ ರ್ಯಾಂಕಿನೊಂದಿಗೆ ತಮ್ಮ ಹತ್ತನೇ ತರಗತಿ ಮುಗಿಸುತ್ತಾರೆ.
ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದು ಪದವಿ ಪೂರ್ವ ಶಿಕ್ಷಣದ ಜೊತೆ ಜೊತೆಯಲ್ಲಿಯೇ ಅಭಿನಯಿಸಿದ ಬೆಂಗಳೂರಿನ ಅಂತರ ಕಾಲೇಜು ನಾಟಕ ಸ್ಪರ್ಧೆಯಲ್ಲಿ ಡನ್ಲಪ್ ಗರ್ಲ್ ನಾಟಕದಲ್ಲೂ ಅವರದ್ದು ಹೆಣ್ಣಿನ ಪಾತ್ರವೇ. ದ್ವಿತೀಯ ಪಿಯೂಸಿ ಪರೀಕ್ಷೆಯಲ್ಲಿ ರಾಜ್ಯಕ್ಕೇ ಎರಡನೇ ರ್ಯಾಂಕ್ ನೊಂದಿಗೆ ತೇರ್ಗಡೆಯಾಗಿ ಅಂದಿನ ಮದರಾಸಿನ ಪ್ರತಿಷ್ಠಿತ ಐಐಟಿಯಲ್ಲಿ ಸುಲಭವಾಗಿ ಪ್ರವೇಶ ಸಿಕ್ಕಿದರೂ ಅಲ್ಲಿಗೆ ಹೋಗಲು ಮನಸ್ಸಾಗದೇ ಬೆಂಗಳೂರಿನಲ್ಲಿಯೇ ವಿಶ್ವೇಶ್ವರಯ್ಯ ತಾಂತ್ರಿಕ ಕಾಲೇಜಿನಲ್ಲಿ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿ ಪಡೆದು ಭಾರತೀಯ ವಾಯುಸೇನೆಯ ತಾಂತ್ರಿಕ ಅಧಿಕಾರಿ ಆಗಿ ಸೇನೆಗೆ ಸೇವೆ ಸಲ್ಲಿಸಲು ಸೇರಿಕೊಳ್ಳುತ್ತಾರೆ. ಈ ಅವಧಿಯಲ್ಲಿ ಬೆಂಗಳೂರು, ಚಂಡೀಗಢ, ಕಾನ್ಪುರ್, ಭಟಿಂದಾ, ಅಂಡಮಾನ್ ಮೊದಲಾದ ಕಡೆ ಭಾರತೀಯ ವಾಯುಸೇನೆಯ ಕರ್ತವ್ಯ ನಿರ್ವಹಣೆ ಮಾಡುತ್ತಲೇ, ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ( IISC) ಸ್ನಾತಕೋತ್ತರ ಇಂಜಿನಿಯರಿಂಗ್ ಪದವಿಯನ್ನೂ ಸಹಾ ಪಡೆದುಕೊಳ್ಳುತ್ತಾರೆ. Commissioned Officer ಆಗಿ ವಾಯುಸೇನೆಯ ಉನ್ನತ ಅಧಿಕಾರಿಯಾಗಿ ಸುಮಾರು ಮುಂದೆ 21 ವರ್ಷಗಳ ಕಾಲ ಸೇವೆ ಸಲ್ಲಿಸಿ 1986ರಲ್ಲಿ ವಿಂಗ್ ಕಮ್ಯಾಂಡರ್ ಆಗಿ ನಿವೃತ್ತಿ ಹೊಂದುತ್ತಾರೆ.
ಸೇನೆಯಿಂದ ನಿವೃತ್ತಿ ಹೊಂದಿದ ನಂತರ ಹಿಂದುಸ್ಥಾನ್ ಏರೋನಾಟಿಕಲ್ ಲಿಮಿಟೆಡ್ (HAL) ಸಂಸ್ಥೆಯ ಆಡಳಿತ ತರಬೇತಿ ಸಂಸ್ಥೆಯಲ್ಲಿ ಮೊದಲು ಪ್ರಾಧ್ಯಾಪಕರಾಗಿ ಸೇರಿಕೊಂಡರು. ನಂತರ ಡಿಜಿಎಂ ಕಡೆಗೆ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದರು. ಅವರ ವಿದ್ಯಾರ್ಥಿಗಳು ಹೇಳುವ ಪ್ರಕಾರ ಸಿನಿಮಾದಲ್ಲಿ ನೋಡಲು ಸರಳವಾಗಿ ಕಂಡರೂ ಅಧ್ಯಾಪಕರಾಗಿ ಅವರು ಬಲು ಖಡಕ್ ಮತ್ತು ಪರಿಪೂರ್ಣವಾಡ ಪ್ರಾಧ್ಯಾಪಕರು. ನಿವೃತ್ತರಾದ ಮೇಲಂತೂ ತಮ್ಮನ್ನು ಸಂಪೂರ್ಣವಾಗಿ ನಾಟಕ ಮತ್ತು ಸಿನೆಮಾರಂಗಕ್ಕಾಗಿಯೇ ಮೀಸಲಿಟ್ಟರು.
ಶಾಲಾ ಕಾಲೇಜು ದಿನಗಳಲ್ಲಿ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ದತ್ತಣ್ಣ ಮುಂದೆ HAL ಸೇರಿ ಅಲ್ಲಿನ ಕರ್ತವ್ಯದ ನಿಮಿತ್ತ ಸುಮಾರು ವರ್ಷಗಳ ಕಾಲ ದೆಹಲಿಯಲ್ಲಿಯೇ ಇರಬೇಕಾದ ಸಂಧರ್ಭ ಬಂದಾಗ ಅಲ್ಲಿನ ಕನ್ನಡ ಭಾರತಿ ಸಂಸ್ಥೆಗೆ ಸೇರಿಕೊಂಡು ಅಲ್ಲಿಯ ಸಹಸದ್ಯರೊಂದಿಗೆ ಸೇರಿ ಬಿ.ವಿ.ಕಾರಂತರ ನಹಿ ನಹಿ ರಕ್ಷತಿ, ಸಿಕ್ಕು, ಎಚ್ಚಮನಾಯಕ, ನಾನೇ ಬಿಜ್ಜಳ ಮುಂತಾದ ಹತ್ತಾರು ನಾಟಕಗಳಲ್ಲಿ ದತ್ತಣ್ಣ ನಟಿಸಿದ್ದರು. ಅದರಲ್ಲೂ ನಾನೇ ಬಿಜ್ಜಳ ನಾಟಕದಲ್ಲಿ ಬಿಜ್ಜಳನ ಪಾತ್ರ ದತ್ತಣ್ಣನವರಿಗೆ ಬಹಳ ಖ್ಯಾತಿ ತಂದು ಕೊಟ್ಟ ಪಾತ್ರ. ಹಲವಾರು ಗಣ್ಯರ ಅಪೇಕ್ಷೆಯ ಮೇರೆಗೆ ಅದು ಹಲವು ಬಾರಿ ಮರು ಪ್ರದರ್ಶನಗೊಂಡ ನಾಟಕವೂ ಹೌದು. ಎಂ.ಎಸ್.ಸತ್ಯು ರವರ ಕುರಿ ನಾಟಕಕ್ಕೆ ನೇಪಥ್ಯದಲ್ಲಿ ದತ್ತಣ್ಣನವರದು ಪ್ರಮುಖ ಪಾತ್ರ. ಅಲ್ಲಿಂದ ಬೆಂಗಳೂರಿಗೆ ಹಿಂದಿರುಗಿದ ನಂತರವಂತೂ ನೂರಾರು ನಾಟಕಗಳಲ್ಲಿ ಅಭಿನಯಿಸಿದರು. ಅದೇ ಸಮಯದಲ್ಲಿ ತಮ್ಮ 46ನೇ ವಯಸ್ಸಿನಲ್ಲಿ ನಾಗಾಭರಣ ಅವರ ನಿರ್ದೇಶನದ ಆಸ್ಫೋಟ ಚಿತ್ರದ ಮೂಲಕ ಚಿತ್ರರಂಗಕ್ಕೆ 1988ರಲ್ಲಿ ಪಾದಾರ್ಪಣೆ ಮಾಡುತ್ತಾರೆ. ತಮ್ಮ ಮೊತ್ತ ಮೊದಲ ಸಿನೆಮಾಕ್ಕೇ ಅವರಿಗೆ ಶ್ರೇಷ್ಟ ನಟ ರಾಜ್ಯ ಪ್ರಶಸ್ತಿ ದೊರೆತ ನಂತರ ಕನ್ನಡ ಚಿತ್ರರಂಗದ ಪೋಷಕ ಪಾತ್ರಕ್ಕೆ ದತ್ತಣ್ಣ ಅನಿವಾರ್ಯದ ನಟನಾಗಿ ಬಿಟ್ಟರು. ಪಿ.ಶೇಷಾದ್ರಿ, ನಾಗಾಭರಣ ಮುಂತಾದ ಕಲಾತ್ಮಕ ಚಿತ್ರಗಳ ನಿರ್ದೇಶಕರು ಅವರ ಒಳಗಿರುವ ಅದ್ಭುತ ನಟನೆಯನ್ನು ಹೊರತಂದು ದತ್ತಣ್ಣ ಅವರನ್ನು ಪ್ರಸಿದ್ಧಿಗೆ ತಂದರೆ ಇನ್ನೂ ಮಾಸ್ ಚಿತ್ರಗಳಲ್ಲಿಯೂ ವಿಭಿನ್ನವಾದ ಪಾತ್ರಗಳು, ಹಾಸ್ಯ ಪಾತ್ರಗಳನ್ನು ಮಾಡಿ ನೋಡ ನೋಡುತ್ತಿದ್ದಂತೆಯೇ ದತ್ತಣ್ಣ ಕನ್ನಡಿಗರ ಮನಗಳಲ್ಲಿ ಶಾಶ್ವತವಾದ ಮನೆಯನ್ನು ಮಾಡಿಯೇ ಬಿಟ್ಟರು.
ದತ್ತಣ್ಣನವರು ಕನ್ನಡಿಗರಿಗೆ ಬಹಳ ಹತ್ತಿರ ಮತ್ತು ಆಪ್ಯಾಯಮಾನರಾಗಿದ್ದು ಟಿ.ಎನ್. ಸೀತಾರಾಂ ಅವರ ಮಾಯಾ ಮೃಗ ಧಾರವಾಹಿಯ ಮೂಲಕ. ಆ ಧಾರಾವಾಹಿಯ ಶಾಸ್ತ್ರೀಗಳ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ ಅಭಿನಯವನ್ನು ಯಾರೂ ಸಹಾ ಮರೆಯಲು ಸಾಧ್ಯವಿಲ್ಲ. ಮೌನಿ, ಚಿನ್ನಾರಿ ಮುತ್ತ, ಮೈಸೂರು ಮಲ್ಲಿಗೆ, ಅಮೇರಿಕಾ.. ಅಮೇರಿಕಾ.., ರಾಮ ಭಾಮ ಶಾಮ, ಸಂತ ಶಿಶುನಾಳ ಶರೀಫ, ಕೊಟ್ರೇಶಿ ಕನಸು, ಅಂಡಮಾನ್, ಅನಂತು ವರ್ಸಸ್ ನುಸೃತ್ ಚಿತ್ರಗಳಲ್ಲಿನ ವಿಭಿನ್ನ ಪೋಷಕ ಪಾತ್ರಗಳಲ್ಲಿ ನಟಿಸಿದ್ದರೆ, ಜಗ್ಗೇಶ್ ಮತ್ತು ಹರಿಪ್ರಿಯಾ ಜೊತೆ ಅಭಿನಯಿಸಿದ ನೀರ್ ದೋಸೆ ಚಿತ್ರ ಅವರ ಅಭಿನಯದ ಮತ್ತೊಂದು ಮಜಲನ್ನು ತೋರಿಸುತ್ತದೆ. ವಯಸ್ಸಾದ ಚಪಲ ಚನ್ನಿಗರಾಯನ ಆಭಿನಯವನ್ನು ನೋಡಿದ ಕನ್ನಡಿಗರು, ದತ್ತಣ್ಣ ಹೀಗೂ ಅಭಿನಯಿಸುತ್ತಾರಾ? ಎಂದು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದರು. ಹೀಗೆ ಇದುವರೆಗೂ 200ಕ್ಕೂ ಹೆಚ್ಚು ಸಿನೆಮಾಗಳಲ್ಲಿ ಒಂದಕ್ಕಿಂತ ಒಂದು ಭಿನ್ನವಾದ ಪಾತ್ರಗಳಲ್ಲಿ ದತ್ತಣ್ಣ ಅಭಿನಯಿಸಿದ್ದಾರೆ. ಎರಡು ರಾಷ್ಟ್ರ ಪ್ರಶಸ್ತಿಗಳನ್ನು ಒಳಗೊಂಡಂತೆ, ಎರಡು ರಾಷ್ಟ್ರೀಯ ತೀರ್ಪುಗಾರರ ಮಂಡಳಿಯ ಪ್ರಶಸ್ತಿ, ಎರಡು ರಾಜ್ಯ ಪ್ರಶಸ್ತಿ, ಫಿಜಿ ರಾಷ್ಟ್ರದ ಫಿಲ್ಮ್ ಉತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ, ಹಲವು ಫಿಲ್ಮ್ ಫೇರ್ ಪ್ರಶಸ್ತಿಗಳು ಅವರ ಬತ್ತಳಿಕೆಯಲ್ಲಿವೆ.
ಹಿಂದೆ ಒಂದೆರಡು ಹಿಂದಿ ಚಿತ್ರರಂಗದಲ್ಲಿ ಕಾಣಿಸಿಕೊಂಡಿದ್ದ ದತ್ತಣ್ಣ, ಕಳೆದ ವರ್ಷದ ಅಕ್ಷಯ್ ಕುಮಾರ್ ಅವರ ಪ್ರಖ್ಯಾತ ಮಿಷನ್ ಮಂಗಲ್ ಚಿತ್ರದಲ್ಲಿ ವಿಜ್ಞಾನಿಗಳಾಗಿ ನಟಿಸಿದ್ದರು. ದತ್ತಣ್ಣ ಅವರ ಬಗ್ಗೆ ಅಕ್ಷಯ್ ಕುಮಾರ್ ಅವರಿಗಂತೂ ವಿಶೇಷ ಮಮಕಾರ. ಆ ಚಿತ್ರದ ಪ್ರತಿಯೊಂದು ಸಂದರ್ಶನದಲ್ಲೂ ದತ್ತಣ್ಣ ಅವರ ವ್ಯಕ್ತಿತ್ವ ಮತ್ತು ಅಭಿನಯದ ಬಗ್ಗೆ ಮುಕ್ತಕಂಠದಿಂದ ಹೊಗಳುತ್ತಿದ್ದಿದ್ದಲ್ಲದೇ, ಎಲ್ಲರ ಬಳಿಯೂ ಇವರು ಮೂರು ಬಾರಿ ರಾಷ್ಟ್ರಪ್ರಶಸ್ತಿ ಪಡೆದ ಮಹನೀಯರು ಅವರ ಜೊತೆ ನಾವುಗಳು ಅಭಿನಯಿಸುತ್ತಿರುವುದು ನಮ್ಮ ಪೂರ್ವಜನ್ಮದ ಸುಕೃತ ಎಂದೇ ಪರಿಚಯಿಸುತ್ತಿದ್ದರು ಎಂದಾಗ ವಿದ್ವಾನ್ ಸರ್ವತ್ರ ಪೂಜ್ಯತೇ ಎಂಬ ಸಂಸ್ಕೃತದ ಗಾದೆ ನೆನಪಿಗೆ ಬರುತ್ತದೆ.
ಇಷ್ಟೆಲ್ಲಾ ಅವರ ಕಾರ್ಯಸಾಧನೆಗಳ ಬಗ್ಗೆ ಹೇಳಿದರೆ, ಆವರ ವಯಕ್ತಿಕ ವಿಷಯವೊಂದನ್ನು ಹೇಳದೇ ಹೋದರೆ ದತ್ತಣ್ಣನವರ ಪರಿಚಯ ಪೂರ್ಣವಾಗುವುದಿಲ್ಲ. ಈಗ 78 ವರ್ಷದವರಾದ ದತ್ತಣ್ಣನವರು ಬ್ರಹ್ಮಚಾರಿಗಳಾಗೇ ಉಳಿದಿದ್ದಾರೆ. ಮನೆಯವರು ಅನೇಕ ಬಾರಿ ಅವರಿಗೆ ಮದುವೆ ಮಾಡಲು ಯತ್ನಿಸಿದರಾದರೂ ಅದು ಫಲಪ್ರದವಾಗಿಲ್ಲ. ಕಡೆಗೆ. ನೀನು ಯಾರನ್ನಾದ್ರೂ ಪ್ರೀತಿ ಮಾಡಿದ್ರೆ ಹೇಳು. ನಮಗೆ ಜಾತಿಯ ಪ್ರಶ್ನೆ ಇಲ್ಲ. ಯಾವ ಹುಡುಗಿ ಆದರೂ ಪರವಾಗಿಲ್ಲ! ಎಂದು ಮುಕ್ತವಾಗಿ ಮನೆಯವರು ಕೇಳಿದ್ದರು ಎನ್ನುತ್ತಾರೆ ದತ್ತಣ. ಸರಿ ನೀವೇಕೆ ಮದುವೆ ಆಗಲಿಲ್ಲ? ಎಂದು ದತ್ತಣ್ಣ ಅವರನ್ನು ಕೇಳಿದಾಗ, ಎರಡು ಕಾರಣಕ್ಕೆ ತಾನು ಮದುವೆ ಆಗಿಲ್ಲ ಎಂದ ದತ್ತಣ್ಣ, ಒಂದು ವೃತ್ತಿ ಜೀವನ, ನಾಟಕಗಳ ನಡುವೆ ಪುರುಸೊತ್ತು ಸಿಗಲಿಲ್ಲ. ಮತ್ತೊಂದು ಮದುವೆ ಅನಿವಾರ್ಯ ಅಂತ ಅವರಿಗೆ ಅನ್ನಿಸಲೇ ಇಲ್ಲ! ಹಾಗಾಗಿ ನಾನು ಬ್ರಹ್ಮಚಾರಿಯಾಗಿಯೇ, ಸಂತೋಷವಾಗಿ ಇದ್ದೇನೆ. ನನ್ನ ನೆಮ್ಮದಿ ಹಾಳು ಮಾಡ್ಬೇಡಿ. ಈ ಸ್ವಾತಂತ್ರ್ಯವನ್ನು ನಾನು ಕಳೆದು ಕೊಳ್ಳಲು ಇಷ್ಟಪಡುವುದಿಲ್ಲ! ಎಂದು ಹೇಳಿ ಗಟ್ಟಿಯಾಗಿ ನಗುತ್ತಾರೆ.
ಒಂದೆಡೆ ಕಲಾತ್ಮಕ ಚಿತ್ರಗಳು, ಇನ್ನೊಂದೆಡೆ ಕಮರ್ಷಿಯಲ್ ಚಿತ್ರಗಳು, ಅದರ ಮಧ್ಯೆ ಹುಟ್ಟಿಕೊಂಡ ಬ್ರಿಜ್ ಚಿತ್ರಗಳು ಇವೆಲ್ಲವಕ್ಕೂ ಸರಿದೂಗಿಸಿಕೊಂಡು ಹೋಗಬಲ್ಲ ನಟನೆಂದರೆ ಅದು ದತ್ತಣ್ಣ ಎನ್ನುವುದು ನಿರ್ವಿವಾದವೇ ಸರಿ. ತಮ್ಮ ಕಾಯಕವನ್ನು ಗೌರವಿಸುವವರನ್ನು ಇಡೀ ಸಮಾಜವೇ ಗೌರವಿಸುತ್ತದೆ. ಹಾಗಾಗಿ ದತ್ತಣ್ಣನವರನ್ನು ಎಲ್ಲೆಡೆಯೂ, ಎಲ್ಲರೂ ಗೌರವಿಸುತ್ತಾರೆ. ಇಂದಿಗೂ ಅತ್ಯಂತ ಸರಳವಾಗಿ, ನಿಗರ್ವಿಯಾಗಿ, ಸಹ ನಟರುಗಳಿಗೆ ಆದರ್ಶಪ್ರಾಯರಾಗಿ ತಮ್ಮ ಅಭಿನಯದ ಮೂಲಕ ಕನ್ನಡ ಚಿತ್ರರಂಗಕ್ಕೆ ಗಣನೀಯ ಕೊಡುಗೆ ನೀಡುತ್ತಿರುವ, ಸಜ್ಜನಿಕೆಯ ಸಾಕಾರಮೂರ್ತಿಯಾಗಿರುವ ದತ್ತಣ್ಣ ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.
ಏನಂತೀರೀ?
ವಿದ್ಯಾ ದಧಾತಿ ವಿನಯಂ ಎಂಬ ಮಾತಿಗೆ ಅನ್ವರ್ಥಕವಾಗಿ ಕಾಣುವ ಪ್ರೀತಿಯ ದತ್ತಣ್ಣ ನವರು ಸವೆಸಿರುವ ಹಾದಿ ನೋಡಿದರೆ ಇಂದಿನ ಯುವಕರಿಗೆ ಸ್ಫೂರ್ತಿ ಸೆಲೆ…
ತಮ್ಮ ಶಕ್ತಿ ಸಾಮರ್ಥ್ಯ ಗಳನ್ನು ಜಗದ ಒಳಿತಿಗೆ ಹೇಗೆಲ್ಲಾ ಬಳಸಬಹುದೆಂಬುದಕ್ಕೆ ಅತ್ಯಂತ ಉತ್ತಮ ಉದಾಹರಣೆಯಾಗಿ ನಿಲ್ಲುತ್ತಾರೆ.
ಅವರಲ್ಲಿನ ನಟ ರಂಗಕ್ಕೆ ಬಂದರೆ ಅವರು ನಟಿಸುತ್ತಿದ್ದಾರೆಂಬ ಲವಲೇಶ ಅನುಮಾನ ಬಾರದಂತೆ ಅತ್ಯಂತ ಸಹಜವಾಗಿ ಅನಾವರಣಗೊಳ್ಳುತ್ತಾನೆ..
ನಿಜಕ್ಕೂ ಇವರು ಕರ್ನಾಟಕದ ಹೆಮ್ಮೆಯ ಪುತ್ರ …
LikeLiked by 1 person