1960ರ ಉತ್ತರಾರ್ಧದಲ್ಲಿ ಭಾರತೀಯ ಕಮ್ಯುನಿಸ್ಟ್ ಪಕ್ಷ ದೇಶಾದ್ಯಂತ ಕಮ್ಯೂನಿಸ್ಟ್ ಕ್ರಾಂತಿಯನ್ನು ತೀವ್ರವಾಗಿ ಹರಡ ಬೇಕೆಂಬ ಸಂಕಲ್ಪ ಮಾಡಿ ಅದನ್ನು ಕಾರ್ಯರೂಪಕ್ಕೆ ತರಲು ವಿವಿಧ ರೀತಿಯ ಯೋಜನೆ ಮಾಡುತ್ತಿರುವಾಗಲೇ ಅವರವರಲ್ಲಿಯೇ ಭಿನ್ನಾಭಿಪ್ರಾಯ ಮೂಡಿದ ಕಾರಣ ಕಮ್ಯೂನಿಷ್ಟ್ ಪಕ್ಷದವು ಎರಡು ಬಣಗಳಾಗಿ ಒಡೆದುಹೋಯಿತು. ಮೊದನೆಯ ಬಣ ಪ್ರಜಾಪ್ರಭುತ್ವ ರೀತಿಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ತನ್ನ ಶಕ್ತಿಯ ಮೂಲಕ ಅಧಿಕಾರಕ್ಕೆ ಬರಲು ಯೋಚಿಸಿದರೆ ಮತ್ತೊಂದು ಬಣಕ್ಕೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯನ್ನು ಹೊಂದಿರದೇ ಗೆರಿಲ್ಲಾ ಮಾದರಿಯಲ್ಲಿ ದೊಡ್ಡ ದೊಡ್ಡ ನಗರಗಳಲ್ಲಿ ದಂಗೆಯನ್ನು ಎಬ್ಬಿಸುವ ಮೂಲಕ ಶಕ್ತಿಯನ್ನು ಪಡೆಯಬೇಕು ಎಂದು ಯೋಚಿಸಿದ್ದಲ್ಲದೇ, ಅದಕ್ಕಾಗಿ ದೇಶದ ಆಮಾಯಕರಾದ ರೈತ ವರ್ಗವನ್ನು ಬಳಸಿಕೊಂಡು ಅವರ ಕೈಗೆ ಶಸ್ತ್ರಾಸ್ತ್ರಗಳನ್ನು ನೀಡಿ, ಸಶಸ್ತ್ರ ಬಂಡಾಯದ ಮೂಲಕ ಸರ್ಕಾರವನ್ನು ಉರುಳಿಸುವುದರ ಪರವಾಗಿ ಇತ್ತು. ಈ ಎರಡನೇ ಗುಂಪಿನ ನೇತೃತ್ವವನ್ನು ಚಾರು ಮಜುಮ್ದಾರ್ ವಹಿಸಿಕೊಂಡಿದ್ದಲ್ಲದೇ 1967 ರಲ್ಲಿ ಅವರು ಸ್ವತಃ ಕ್ರಾಂತಿ ಆರಂಭಿಸಲು ಹೊರಟರು.
ಇದೇ ಸಮಯದಲ್ಲಿ ಪಶ್ಛಿಮ ಬಂಗಾಲದಲ್ಲಿ ಭೂಮಾಲೀಕರ ವಿರುದ್ಧ ರೈತರ ಅಸಮಾಧಾನ ಉತ್ತಂಗಕ್ಕೇರಿದ್ದಲ್ಲದೇ , ರೈತರು ತಮ್ಮ ಜಮೀನಿಗಾಗಿ ಮತ್ತು ಭೂಮಾಲೀಕರ ಶೋಷಣೆಯ ವಿರುದ್ಧವಾಗಿ ದಂಗೆಯನ್ನು ಪ್ರಾರಂಭಿಸಿದರು. ಅರಂಭದಲ್ಲಿ ಅಹಿಂಸಾತ್ಮಕವಾಗಿ ಅರಂಭವಾಗಿ ಕೊನೆಗೆ ಹೊಡಿ ಬಡೀ ಕಡೀ ಮಾರ್ಗವನ್ನು ತಾಳಿತು. ಇಂತಹ ಸಂದರ್ಭಕ್ಕೇ ಕಾಯುತ್ತಿದ್ದ ಕಮ್ಯೂನಿಷ್ಟ್ ಎರಡನೇ ಬಣದ ನಾಯಕರದ ಚಾರು ಮಜುಂದಾರ್, ಕಾನು ಸನ್ಯಾಲ್ ಮತ್ತು ಜಂಗಲ್ ಸಂಥಾಲರು ರೈತರ ಕೈಗಳಿಗೆ ಶಸ್ತ್ರಾಸ್ತ್ರಗಳನ್ನು ಕೊಟ್ಟು ಸಾಮಾನ್ಯವಾದ ರೈತ ಚಳುವಳಿಯನ್ನು ಸಶಸ್ತ್ರ ಆಂದೋಲನವನ್ನಾಗಿ ಮಾಡುವುದರಲ್ಲಿ ಸಫಲರಾದರು.
ಹೀಗೆ ಪಶ್ಚಿಮ ಬಂಗಾಳದಲ್ಲಿ ನಕ್ಸಲ್ ಬರಿಯಲ್ಲಿ ಎಂಬ ಸಣ್ಣ ಗ್ರಾಮದಲ್ಲಿ ಆರಂಭವಾದ ಈ ಚಳುವಳಿಯಿಂದಾಗಿಯೇ ಮೇ 25, 1967ರಂದು ಪ್ರಪ್ರಥಮಬಾರಿಗೆ ಪಶ್ವಿಮ ಬಂಗಾಳದಲ್ಲಿ ಕಮ್ಯುನಿಸ್ಟ್ ಪಕ್ಷವನ್ನು ಅಧಿಕಾರಕ್ಕೆ ತರಲು ಸಾಧ್ಯವಾಯಿತು. ಈ ರೀತಿಯಾಗಿ ನಕ್ಸಲ್ ಬರಿ ಗ್ರಾಮದಿಂದ ಇಂತಹ ಬಂಡು ಕೋರತನ ಆರಂಭವಾದ ಕಾರಣ ಅಂತಹ ಬಂಡಾಯಗಾರರನ್ನು ಅಂದಿನಿಂದ ನಕ್ಸಲರು ಎಂದು ಗುರುತಿಸಲಾರಂಭಿಸಿದರು.
ಈ ಉಗ್ರ ಕಮ್ಯೂನಿಸ್ಟ ಪಾರ್ಟಿಯು ಈ ಮಾವೋ ರವರ ಉಗ್ರ ಸಮಾಜವಾದ ಸಿದ್ಧಾಂತವನ್ನು ನಂಬುತ್ತದೆ ಮತ್ತು ಅದನ್ನೇ ಅನುಸರಿಸುತ್ತದೆ. ಕಮ್ಯೂನಿಸ್ಟ್ ಪಾರ್ಟಿ (ಮಾವೊ) ಮೂಲ ಸಿದ್ದಾಂತಗಳ ಪ್ರಕಾರ, ಎಲ್ಲಾ ಆಸ್ತಿಗಳೂ ದೇಶದ ಅಥವಾ ರಾಜ್ಯದ ಆಸ್ತಿ – ಇಲ್ಲಿ ಯಾರದ್ದೂ ಸ್ವಂತ ಆಸ್ತಿ ಎಂಬುದಿರುವುದಿಲ್ಲ ಹಾಗಾಗಿ ಎಲ್ಲಾ ಆಸ್ತಿಯೂ ಸಮಾಜಕ್ಕೆ ಸೇರಿದ್ದು. ಜಮೀನ್ದಾರರು, ಬಂಡವಾಳಶಾಹಿಗಳು ಮತ್ತು ಶ್ರೀಮಂತರು ರೈತರು ಮತ್ತು ಕೂಲಿಕಾರರ ಶೋಷಕರು. ಹಾಗಾಗಿ ಅವರಿಗೆ ಜೀವಿಸುವ ಹಕ್ಕೇ ಇಲ್ಲ. ದೇಶದ ಪ್ರಜೆಗಳೆಲ್ಲಾ ಸಮಾನರು. ಪ್ರತಿಯೊಬ್ಬರೂ ಸಮಾಜಕ್ಕಾಗಿ ದುಡಿಯಬೇಕು. ತನ್ನ ಶಕ್ತಿಗೆ ಅನುಸಾರ ಕೆಲಸ ಮತ್ತು ಅಗತ್ಯಕ್ಕೆ ತಕ್ಕಂತೆ ಆಹಾರ (Work according to ability and Food according to need) ಇದೊಂದು ವೈಜ್ಞಾನಿಕ ಸಮಾಜವಾದದ ಧ್ಯೇಯ ಎಂಬ ಘೋಷವಾಕ್ಯವನ್ನು ಆರಂಭಿಸಿದ್ದಲ್ಲದೇ, ಇಂತಹ ಸಮಾನತೆಯ ಸಮಾಜವಾದಿ ರಾಜ್ಯ ಸ್ಥಾಪನೆ ಪ್ರಜಾಪ್ರಭುತ್ವದಿಂದ ಸಾಧ್ಯವಿಲ್ಲದೇ, ಕೇವಲ ಕೋವಿ, ಕತ್ತಿ ಮತ್ತು ರಕ್ತಪಾತದಿಂದ ಮಾತ್ರಾವೇ ಸಾಧ್ಯ. ಹಾಗಾಗಿ ಹಿಂಸೆಯಿಂದಲಾದರೂ ಸಮಾಜವಾದದ ರಾಜ್ಯಸ್ಥಾಪನೆ ಮಾಡಬೇಕು ಮತ್ತು ಯಾರೂ ಸಹಾ ಶಾಂತಿಯ ಮಾತಿಗೆ ತಮ್ಮ ಆಸ್ತಿ ಹಕ್ಕುಗಳನ್ನು ಬಿಟ್ಟುಕೊಡಬಾರದು ಎಂಬ ಫರ್ಮಾನನ್ನು ಹೊರಡಿಸಿದರು.
70 ರ ದಶಕದಲ್ಲಿ ಈ ರೀತಿಯ ದಂಗೆ ಜನಪ್ರಿಯವಾಯಿತಲ್ಲದೇ, ಸಹಸ್ರಾರು ಯುವಕರುಗಳನ್ನು ಆಕರ್ಷಿಸಿ ತಮ್ಮ ಹಕ್ಕುಗಳ ಬಗ್ಗೆ ಮಾತನಾಡಲಾರಂಭಿಸಿದ್ದಲ್ಲದೇ ತಮ್ಮ ಕೋರಿಕೆಗಳು ಈಡೇರದಿದ್ದಲ್ಲಿ ಶಸ್ತ್ರಾಸ್ತ್ರಗಳನ್ನು ಹಿಡಿದು ಹೋರಾಡಲಾರಂಭಿಸಿದಲ್ಲದೇ, ತಮ್ಮ ಉಗ್ರ ಘೋಷಣೆಗಳ ಮೂಲಕ ಯುವಕರ ನರ ನಾಡಿಗಳನ್ನು ಉಬ್ಬಿಸುತ್ತಿದ್ದಲ್ಲದೇ, ರಕ್ತವನ್ನು ಬಿಸಿಮಾಡುತ್ತಿತ್ತು. ಇದಕ್ಕೆ ಪೂರಕವಾಗಿ ಕೆಲವು ಕಮ್ಯೂನಿಷ್ಟ್ ಸಿದ್ಧಾಂತದಿಂದ ಪ್ರಭಾವಿತರಾಗಿದ್ದ ಪ್ರಾಧ್ಯಾಪಕರು ಬಹುತೇಕ ವಿದ್ಯಾಲಯಗಳಲ್ಲಿ ಭೂಮಾಲಿಕರಿಂದ ಕೃಷಿ ಭೂಮಿಯನ್ನು ಕಸಿದುಕೊಂಡು ಅದನ್ನು ಭೂರಹಿತರಿಗೆ ಹಂಚಿಕೆ ಮಾಡುವ ಮೂಲಕ ಭೂಹೀನ ರೈತರ ಪರ ಧ್ವನಿ ಎತ್ತುವ ಚಳವಳಿಯನ್ನು ಆರಂಭಿಸಲು ವಿದ್ಯಾರ್ಥಿಗಳನ್ನು ಮರಳು ಮಾಡುವುದರಲ್ಲಿ ಸಫಲರಾದರು. ವಿದ್ಯಾರ್ಥಿಗಳಿಗೆ ಇಂತಹ ಮಾತುಗಳು ಅತ್ಯಂತ ಪ್ರಭಾವವನ್ನು ಬೀರಿದ್ದಲ್ಲದೇ ಹುಡುಗು ಬುದ್ದಿಯ ಯುವಕರಿಗೆ ಶಸ್ತ್ರಾಸ್ಗ್ರಗಳನ್ನು ಬಳಸುವ ಖಾಯಾಲಿನಿಂದಾಗಿ ಎಲ್ಲೆಂದರಲ್ಲಿ ಇದ್ದಕ್ಕಿದ್ದಂತೆಯೇ ಬಂಡಾಯ ಏಳತೊಡಗಿದರು.
ಚೀನಾದ ನಾಯಕ ಮಾವೋತ್ಸೇತುಂಗ್ ಮತ್ತು ರಷ್ಯಾದ ಲೆನಿನ್ ಅವರಿಂದ ಬಹಳ ಪ್ರಭಾವಿತರಾಗಿ ಅವರ ಮಾದರಿಯಲ್ಲಿಯೇ ಚಳುವಳಿಯನ್ನು ನಡೆಸುತ್ತಿದ್ದ ಈ ಚಳವಳಿಯ ನಾಯಕರಾಗಿದ್ದ ಚಾರು ಮಜುಂದಾರ್ 1972 ರಲ್ಲಿ ಪೊಲೀಸ್ ಕಸ್ಟಡಿಯಲ್ಲಿ ನಿಧನರಾದರೆ ಮತ್ತೊಬ್ಬ ಮುಖಂಡ ಕಾನು ಸನ್ಯಾಲ್ ಇಂತಹ ದಂಗೆಯಿಂದ ದೂರ ಸರಿದರೂ ಅದಾಗಲೇ ಈ ದಾರಿಯಲ್ಲಿ ಬಹಳ ದೂರ ಸಾಗಿದ್ದ ಅನೇಕರು ನಕ್ಸಲ್ ಚಳುವಳಿಯನ್ನು ಮುಂದುವರೆಸಿಕೊಂಡು ಹೋದರು.
ನಗರ ಪ್ರದೇಶಗಳ ಜನರಿಗಿಂತ ಹಳ್ಳಿಗಾಡಿನ ಜನರನ್ನು ಸುಲಭವಾಗಿ ಮರಳು ಮಾಡಬಹುದೆಂಬುದನ್ನು ಅತ್ಯಂತ ಶೀಘ್ರವಾಗಿ ಅರಿತುಕೊಂಡ ಈ ನಕ್ಸಲರು ತಮ್ಮ ವಾಸ್ತ್ರವ್ಯವನ್ನು ಹಳ್ಳಿಗಾಡಿಗೆ ಸ್ಥಳಾಂತರಿಸಿದರು. ಆರಂಭದಲ್ಲಿ ಇಂತಹ ಬಂಡುಕೋರರಿಗೆ ಹಳ್ಳಿಗರು ಸಹಾಯ ಹಸ್ತವನ್ನು ಚಾಚಿದರಾದರೂ, ನಂತರ ಇವರ ಗೆರಿಲ್ಲಾ ಹೋರಾಟಗಳಿಂದ ವಿಮುಖರಾಗಿ ಇದೇ ನಕ್ಸಲರನ್ನು ದ್ವೇಷಿಸತೊಡಗಿದಾಗ ನಕ್ಸಲರು ತಮ್ಮ ವಾಸ್ತವ್ಯವನ್ನು ಕಾಡು ಮೇಡುಗಳಿಗೆ ಬದಲಾಯಿಸಿಕೊಂಡು ಆಗ್ಗಿಂದ್ದಾಗಿ ಹಳ್ಳಿಗಾಡುಗಳಿಗೆ ನುಗ್ಗಿ ಹಳ್ಳಿಗಳನ್ನು ದೋಚುವುದಲ್ಲದೇ ಸರ್ಕಾರೀ ಕಛೇರಿಗಳ ಮೇಲೆ ಧಾಳಿ ನಡೆಸುತ್ತಾ ತಮ್ಮ ಅಸ್ತಿತ್ವ ಮತ್ತು ಅಸ್ಮಿತೆಯನ್ನು ತೋರಿಸಿಕೊಂಡು ಹೋಗುತ್ತಿದ್ದಾರೆ.
ಇತ್ತೀಚಿನ ಅಂಕಿ ಅಂಶಗಳ ಪ್ರಕಾರ, ದೇಶದ 11 ರಾಜ್ಯಗಳಲ್ಲಿ ಇನ್ನೂ ಇಂತಹ ನಕ್ಸಲರು ಅಸ್ತಿತ್ವದಲ್ಲಿದ್ದು ಸುಮಾರು 90 ಜಿಲ್ಲೆಗಳಲ್ಲಿ ನಕ್ಸಲ್ ಹಿಂಸಾಚಾರ ಕಂಡುಬರುತ್ತದೆ. ಆಂಧ್ರ ಪ್ರದೇಶ, ಛತ್ತೀಸ್ಗಢ್, ಝಾರ್ಖಂಡ್, ಬಿಹಾರ ಮತ್ತು ಒರಿಸ್ಸಾಗಳಲ್ಲಿ ನಕ್ಸಲೈಟರ ಹಾವಳಿ ಹೆಚ್ಚಾಗಿರುವ ರಾಜ್ಯಗಳಾಗಿವೆ. ಈ ನಕ್ಸಲೈಟ್ಗಳು ಪ್ರತಿವರ್ಷ ಹಲವು ಬಾರಿ ಭದ್ರತಾ ಪಡೆಗಳ ಮೇಲೆ ಹಲ್ಲೆ ಮಾಡಿ. ಸಾವಿರಾರು ಅಮಾಯಕರ ಜೀವಗಳನ್ನು ಬಲಿತೆಗೆದುಕೊಳ್ಳುತ್ತಿರುವುದು ನಿಜಕ್ಕೂ ಖಂಡನಾರ್ಯ. ಇತ್ತೀಚಿನ ಛತ್ತೀಸ್ಗಢ್ ನಕ್ಸಲ್ ಧಾಳಿ ಇದಕ್ಕೆ ಜ್ವಲಂತ ಉದಾಹರಣೆಯಾಗಿದೆ. ಒಂದು ಅಂಕಿ ಅಂಶದ ಪ್ರಕಾರ ಇದುವರೆವಿಗೂ 7,839 ನಾಗರೀಕರು, 2,672 ಭದ್ರತಾ ಸಿಬ್ಬಂದಿಗಳು, 3,253 ಬಂಡಾಯಕೋರರು ಸೇರಿದಂತೆ ಒಟ್ಟು 13,920 ಜನರು ಇಂತಹ ಧಾಳಿಯಲ್ಲಿ ಮೃತಪಟ್ಟಿದ್ದಾರೆ.
ಈ ನಕ್ಸಲರು ತಾವು ಬುಡಕಟ್ಟು ಜನಾಂಗದವರ, ಸಣ್ಣ ರೈತರ ಮತ್ತು ಬಡವರ ಪರವಾಗಿ ಯುದ್ಧದಲ್ಲಿ ಹೋರಾಡುತ್ತಿದ್ದಾರೆಂದು ಹೇಳಿಕೊಳ್ಳುವ ಮುಖಾಂತರ ಸ್ಥಳೀಯ ಅಮಾಯಕ ಜನರ ಬೆಂಬಲವನ್ನು ಗಳಿಸಲು ಪ್ರಯತ್ನಿಸುತ್ತಾರೆ. ಅವರ ಮಾತನ್ನು ಕೇಳದಿದ್ದಲ್ಲಿ ದಂಡ ದಶಗುಣಂ ಎಂಬಂತೆ ಬಲವಂತದಿಂದಾದರೂ ಅವರನ್ನು ಹೆದರಿಸಿ, ಬೆದರಿಸಿ ಅವರ ಸಹಾಯದಿಂದ ಇಂತಹ ಧಾಳಿಗಳನ್ನು ಆಗ್ಗಿಂದ್ದಾಗೆ ನಡೆಸುವ ಮೂಲಕ ದೇಶದ ಆಂತರಿಕ ದಂಗೆಗಳನ್ನು ಎಬ್ಬಿಸುತ್ತಾ ದೇಶಕ್ಕೆ ತಲೆ ನೋವಾಗಿದ್ದಾರೆ.
ಕರ್ನಾಟಕದಲ್ಲಿ ನೇರವಾಗಿಯಲ್ಲದಿದ್ದರೂ ಪರೋಕ್ಷವಾಗಿ ಮಲೆನಾಡು ಮತ್ತು ಪಶ್ಚಿಮ ಘಟ್ಟದ ಕಾಡುಗಳಲ್ಲಿ ಲಾಲ್ ಸಲಾಂ ಎನ್ನುತ್ತಾ ಕೆಂಪು ಬಾವುಟಗಳನ್ನು ಅಲ್ಲಲ್ಲಿ ನೇತು ಹಾಕಿ ರಕ್ತ ಪ್ರಪಾತಕ್ಕೆ ಕಾಗಣರಾಗಿದ್ದಾರೆ. ನಕ್ಸಲ್ ಚಳುವಳಿಯಲ್ಲಿ ಮೂರು ದಶಕಗಳಿಂದಲೂ ಭಾಗವಾಗಿ ಈಗ ಅದರಿಂದ ಹೊರಬಂದು ಮುಖ್ಯವಾಹಿನಿಯಲ್ಲಿ ಬೆರೆತಿರುವ ನೂರ್ ಶ್ರೀಧರ್ (ನೂರ್ ಜುಲ್ಫಿಕರ್) 1980ರ ದಶಕದ ಉತ್ತರಾರ್ಧದಲ್ಲಿ ಪೀಪಲ್ಸ್ ವಾರ್ ಎಂಬ ಹೆಸರಿನಲ್ಲಿ ಚಳುವಳಿಯನ್ನು ಆರಂಭಿಸಿದರೆ, ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ’ದಲ್ಲಿ (ಜೆಎನ್ಯು) ಅಧ್ಯಯನ ನಡೆಸಿ ಮೇಧಾವಿ ಎನಿಸಿಕೊಂಡಿದ್ದ ಸಾಕೇತ್ ರಾಜನ್ (ಸಾಕಿ) ಅವರೊಂದಿಗೆ ಕೈಜೋಡಿಸಿ ರಾಜ್ಯದಲ್ಲಿ ನಕ್ಸಲೀಯ ಚಟುವಟಿಕೆಗಳ ಪ್ರಮುಖ ರೂವಾರಿಗಳಾದರು.
ಸಾಕೇತ್ ರಾಜನ್ ಮೇಕಿಂಗ್ ಹಿಸ್ಟರಿ ಎಂಬ ಪುಸ್ತಕವನ್ನು ಬರೆದದ್ದಲ್ಲದೇ, ಪಾಳೆಗಾರಿಕೆಯ ವಿರುದ್ಧ ಸಿಡಿದೆದ್ದಿದ್ದ ಆಂಧ್ರದ ವಿದ್ಯಾರ್ಥಿಗಳು ಹಳ್ಳಿಗಳಿಗೆ ತೆರಳಿ, ರೈತಾಪಿ ಜನರೊಂದಿಗೆ ಬೆರೆತು, ಅವರ ಹಕ್ಕುಗಳಿಗೆ ಹೋರಾಡುತ್ತಾ, ಪೊಲೀಸರೊಂದಿಗೆ ಘರ್ಷಣೆಯಲ್ಲಿ ಮಡಿದ ಯುದ್ಧದ ಕಥೆಗಳನ್ನು ಇಲ್ಲಿನ ಯುವಕರಿಗೆ ಹೇಳಿ ಅವರಲ್ಲಿ ಭಾವೋದ್ವೇಗದ ಕಿಚ್ಚನ್ನು ಎಬ್ಬಿಸಿ ಆಂಧ್ರದ ಕ್ರಾಂತಿಕಾರಿ ಚಳುವಳಿಯಾದ ಆರ್ಎಸ್ಯು ಚಟುವಟಿಕೆಗಳನ್ನು ಕರ್ನಾಟಕದ ಬಿಸಿರಕ್ತದ ತರುಣರಿಗೂ ಪರಿಚಯಯಿಸಿ ಅಲ್ಲಲ್ಲಿ ದಂಗೆಗಳನ್ನು ಏಳುವಂತೆ ಮಾಡುವುದರಲ್ಲಿ ಸಫಲರಾಗಿದ್ದ ಸಾಕೇತ್ ರಾಜನ್ ಪೋಲಿಸರ ಧಾಳಿಯಲ್ಲಿ ಅಸುನಿಗಿದರು.
ಕರ್ನಾಟಕದ ಪೋಲೀಸರ ದಿಟ್ಟ ಕಾರ್ಯಾಚರಣೆಯಿಂದಾಗಿ ಅನೇಕ ನಕ್ಸಲೀಯರು ಪೊಲೀಸರ ಗುಂಡಿಗೆ ಬಲಿಯಾದರು. ಇದರ ಪ್ರತೀಕಾರವಾಗಿ ಕೆಲವು ನಕ್ಸಲರು ಪೊಲೀಸರಿಗೆ ಮಾಹಿತಿಕೊಟ್ಟವರನ್ನು ಹತ್ಯೆ ಮಾಡುವ ಮುಖಾಂತರ ಸಿಟ್ಟನ್ನು ತೀರಿಸಿಕೊಂಡರೆ ಸಿರಿಮನೆ ನಾಗರಾಜ್ ಮತ್ತು ನೂರ್ ಜುಲ್ಫಿಕರ್ ಮುಂತಾದವರು ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟು ಸಮಾಜದ ಮುಖ್ಯವಾಹಿನಿಗೆ ಬರುವ ಮೂಲಕ ಕರ್ನಾಟಕದಲ್ಲಿ ನಕ್ಸಲರ ಹಾವಳಿ ತಗ್ಗಿದಂತಾಗಿದೆ.
ಪ್ರಪಂಚದ ಅತ್ಯಂತ ದೊಡ್ಡ ಪ್ರಜಾ ಪ್ರಭುತ್ವ ದೇಶವಾದ ಭಾರತದಲ್ಲಿ ಕಮ್ಯೂನಿಷ್ಟ್ ಸಿದ್ದಾಂತ ಮತ್ತು ನಕ್ಸಲ ಹೋರಾಟಗಳು ಸವಕಲು ನಾಣ್ಯವಾಗಿ ಜನರಿಂದ ತಿರಸ್ಕರಿಸಲ್ಪಟ್ಟಿದ್ದರೂ, ಅಧಿಕಾರ ವಂಚಿತ ಕೆಲ ಸಿಪಿಎಂ ನಾಯಕರುಗಳು, ಸ್ವಘೋಷಿತ ಬುಧ್ಧಿ ಜೀವಿಗಳು, ಜೆಎನ್ಯು ಕಾಲೇಜಿನ ತುಕ್ಡೇ ಗ್ಯಾಂಗ್ ಮತ್ತು ಕೆಲ ಮಾಧ್ಯಮಗಳು ನಿರಂತರವಾಗಿ ಈ ನಕ್ಸಲರಿಗೆ ಸಂಪನ್ಮೂಲಗಳನ್ನು ಒದಗಿಸುವ ಮೂಲಕ ಈ ನಕ್ಸಲ್ ಚಳುವಳಿಯನ್ನು ಜೀವಂತವಾಗಿ ಇರಿಸಿದ್ದಾರೆ ಎನ್ನುವುದು ನಿಜಕ್ಕೂ ದುಃಖಕರ ಸಂಗತಿಯಾಗಿದೆ. ಇದಲ್ಲದೇ ಈಶಾನ್ಯ ಪ್ರದೇಶದ ಕಲ್ಲಿದ್ದಲಿನ ಸಂಪನ್ಮೂಲಗಳ ಪ್ರದೇಶದ ಕೆಲವು ಪ್ರಭಾವಿ ಜನರು ಮತ್ತು ಗಣಿ ಮಾಲಿಕರ ಸುಲಿಗೆಯ ಮೂಲಕವೂ ತಮ್ಮ ಸಂಪನ್ಮೂಲಗಳನ್ನು ಪಡೆದುಕೊಂಡು ಅಗ್ಗಿಂದ್ದಾಗೆ ಹೇಡಿಗಳಂತೆ ಗೆರಿಲ್ಲಾ ಮಾದರಿದ ದಂಗೆಗಳನ್ನು ಎಬ್ಬಿಸುತ್ತಿರುವುದು ನಿಜಕ್ಕೂ ಅಕ್ಷಮ್ಯ ಅಪರಾಧವೇ ಸರಿ.
ಭಾರತ ಸರ್ಕಾರದಿಂದಲೂ ಇಂತಹ ನಕ್ಸಲರನ್ನು ಬುಡಸಮೇತ ಕಿತ್ತು ಹಾಕುವ ಪ್ರಯತ್ನ ನಿರಂತರವಾಗಿ ಜಾರಿಯಲ್ಲಿದೆ. ಇಂತಹ ದಿಕ್ಕು ತಪ್ಪಿದವರನ್ನು ನಕ್ಸಲ್ ಚಳುವಳಿಯಿಂದ ವಿಮುಖಗೊಳಿಸಿ ಮುಖ್ಯವಾಹಿನಿಗೆ ತರಲು ನಡೆಸಿದ ಅನೇಕ ಸಂಧಾನ ಪ್ರಯತ್ನಗಳು ನಕ್ಸಲರ ಅಹಂ ನಿಂದಾಗಿ ವಿಫಲವಾಗಿದೆ. ಬಾಹ್ಯ ಶತ್ರುಗಳನ್ನು ಧಾಳಿಯನ್ನು ಸುಲಭವಾಗಿ ಗುರುತಿಸಿ ಅದನ್ನು ಸಮರ್ಥವಾಗಿ ಎದುರಿಸಬಹುದಾದರೂ ದೇಶದ ಒಳಗೇ ಇರುವ ಆಂತರಿಕ ಹಿತಶತ್ರುಗಳನ್ನು ಗುರುತಿಸಿ ಮಟ್ಟ ಹಾಕುವುದು ಸ್ವಲ್ಪ ಕಷ್ಟವೇ ಸರಿ. ನೂರು ಅಪರಾಧಿಗಳಿಗೆ ಶಿಕ್ಷೆ ದೊರಕದಿದ್ದರೂ, ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು ಎಂಬ ಭಾವನಾತ್ಮಕ ಅಂಶದಿಂದಾಗಿಯೇ ಇಂತಹವವರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಲು ತೊಂದರೆಯಾಗಿರುವುದಂತೂ ಸತ್ಯ. ಅಕಸ್ಮಾತ್ ಇಂತಹವರ ಮೇಲೆ ಧಾಳಿ ನಡೆದ ತಕ್ಷಣವೇ ನಾನು ಅರ್ಬನ್ ನಕ್ಸಲ್ ಮೊದಲು ನನ್ನನ್ನು ಬಂಧಿಸಿ ಎಂದು ರಸ್ತೆಗಿಳಿಯುತ್ತಿದ್ದ ಗೌರೀ ಲಂಕೇಶ್, ಗಿರೀಶ್ ಕಾರ್ನಾಡ್ ರಂತಹ ಸ್ವಘೋಷಿತ ಬುದ್ಧಿ ಜೀವಿಗಳು ಮತ್ತು ತುಕ್ಡೇ ತುಕ್ಡೇ ಗ್ಯಾಂಗಿನ ಕನ್ನಯ್ಯಾ ಕುಮಾರ್ ಮತ್ತವನ ಸಂಡಿಗರು ನಕ್ಸಲರನ್ನು ಸಮರ್ಥಿಸುವ ಮೂಲಕ ದೇಶದ್ರೋಹವನ್ನು ಬೆಂಬಲಿಸಿದರೆ, ಭಾರತದಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದೆ ಎಂದು ದೇಶ ವಿದೇಶಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡುವ ಮಾಧ್ಯಮಗಳಿಂದಲೇ ಇಂತಹ ನಕ್ಸಲರನ್ನು ಬುಡ ಸಮೇತ ಕಿತ್ತು ಹಾಕುವುದಕ್ಕೆ ಅಡ್ಡಿಯಾಗುತ್ತಿದೆ.
ಕಮ್ಯೂನಿಸ್ಟರು SUCI ಎಂಬ ವಿದ್ಯಾರ್ಥಿ ಸಂಘಟನೆಯ ಹೆಸರಿನಲ್ಲಿ ಅಮಾಯಕ ಕಾಲೇಜು ವಿದ್ಯಾರ್ಥಿಗಳ ತಲೆಕೆಡಿಸಿ ರಸ್ತೆಗಳಲ್ಲಿ ಜನರಿಂದ ಚಂದ ಹೆಸರಿನಲ್ಲಿ ಭಿಕ್ಷೆ ಬೇಡಿಸುತ್ತಾರೆ.ಇಂತವರಿಗೆ ಹಣ ಕೊಟ್ಟಲ್ಲಿ, ಅದು ನೇರವಾಗಿ ನಕ್ಸಲರಿಗೆ ತಲುಪಿ ನಮ್ಮದೇ ಅಮಾಯಕ ನಾಗರೀಕರು, ಪೋಲೀಸರು ಮತ್ತು ಯೋಧರ ಮೇಲಿನ ದಾಳಿಗೆ ಬಳಕೆಯಾಗುತ್ತದೆ. ಆದ್ದರಿಂದ ದಯವಿಟ್ಟು ಇಂತಹ ಗೋಮುಖ ವ್ಯಾಘ್ರಗಳಿಗೆ ಹಣ ನೀಡದಿರೋಣ.
ವಿಷ್ಣುವರ್ಧನ್ ಅಭಿನಯದ ಜಿಮ್ಮಿಗಲ್ಲು ಚಿತ್ರದ ತುತ್ತು ಅನ್ನಾ ತಿನ್ನೋಕೆ ಹಾಡಿನಲ್ಲಿ ಬೊಗಸೇ ನೀರು ಕುಡಿಯೋಕೆ ಹಾಡಿನಲ್ಲಿ ಬರುವ ಚರಣ, ಕಾಡ್ನಾಗ್ ಒಂದು ಮರವೇ ಉರುಳಿ ಹೋದ್ರೇ ಏನಾಯ್ತು? ಊರ್ನಾಗ್ ಒಂದು ಮನೆಯೇ ಉರಿದು ಹೋದ್ರೇ ಏನಾಯ್ತು? ಎಂಬಂತೆ ದೇಶದ ಹಿತದೃಷ್ಟಿಯಿಂದ ದೇಶದ ಸುರಕ್ಷತೆ ಮತ್ತು ಭದ್ರತೆಗಾಗಿ, ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂಬ ಜಗದ ನಿಯಮದಂತೆ ಕಾಡಿನಲ್ಲಿರುವ ನಕ್ಸಲರನ್ನೂ ಮತ್ತು ನಾಡಿನಲ್ಲಿರುವ ಅರ್ಬನ್ ನಕ್ಸಲರನ್ನು ಮುಲಾಜಿಲ್ಲದೇ ಮಟ್ಟ ಹಾಕಿದಾಗಲೇ ಇಂತಹ ಅನಿಷ್ಟ ಸಮಾಜ ಘಾತಕ ಶಕ್ತಿಗಳನ್ನು ಈ ದೇಶದಿಂದ ನಿರ್ನಾಮ ಮಾಡಿ ಅಮಾಯಕರು ಬಲಿಯಾಗುವುದು ತಪ್ಪಲಿ ಎನ್ನುವುದೇ ಈ ದೇಶದ ಬಹುಜನರ ಅಭಿಪ್ರಾಯವಾಗಿದೆ.
ಏನಂತೀರೀ?
ನಿಮ್ಮವನೇ ಉಮಾಸುತ
ಈ ಲೇಖನವನ್ನು ಬರೆಯಲು ಪ್ರೇರೇಪಿಸಿದ ಆತ್ಮೀಯರಾದ ಶ್ರೀ ರವಿಶಂಕರ್ ಅವರಿಗೆ ಧನ್ಯವಾದಗಳು
Your all articles are very informative sir
On Wed, 7 Apr, 2021, 12:56 am ಏನಂತೀರೀ? Enantheeri?, wrote:
> ಶ್ರೀಕಂಠ ಬಾಳಗಂಚಿ posted: “1960ರ ಉತ್ತರಾರ್ಧದಲ್ಲಿ ಭಾರತೀಯ ಕಮ್ಯುನಿಸ್ಟ್ ಪಕ್ಷ
> ದೇಶಾದ್ಯಂತ ಕಮ್ಯೂನಿಸ್ಟ್ ಕ್ರಾಂತಿಯನ್ನು ತೀವ್ರವಾಗಿ ಹರಡ ಬೇಕೆಂಬ ಸಂಕಲ್ಪ ಮಾಡಿ ಅದನ್ನು
> ಕಾರ್ಯರೂಪಕ್ಕೆ ತರಲು ವಿವಿಧ ರೀತಿಯ ಯೋಜನೆ ಮಾಡುತ್ತಿರುವಾಗಲೇ ಅವರವರಲ್ಲಿಯೇ
> ಭಿನ್ನಾಭಿಪ್ರಾಯ ಮೂಡಿದ ಕಾರಣ ಕಮ್ಯೂನಿಷ್ಟ್ ಪಕ್ಷದವು ಎರಡು ಬಣಗಳಾಗಿ ಒಡೆದುಹೋಯಿತು.”
>
LikeLiked by 1 person
ಧನ್ಯೋಸ್ಮಿ
LikeLike
ಸಾಕಷ್ಟು ಮಾಹಿತಿಗಳ ಹೂರಣದೊಂದಿಗೆ ಲೇಖನ ಸತ್ವಪೂರ್ಣವಾಗಿದೆ.
ಎಷ್ಟೋ ಚಿಂತನೆ, ಸಿದ್ಧಾಂತಗಳು ಬದಲಾಗಿರುವ ಜಾಗತಿಕ ಸನ್ನಿವೇಶದಲ್ಲಿ ಅಪ್ರಸ್ತುತವೆನಿಸಿದರೂ ಅದನ್ನೇ ಜೀವಂತವಾಗಿಟ್ಟು ತಮ್ಮ ಬೇಳೆ ಬೇಯಿಸಿಕೊಳ್ಳುವ ಹುನ್ನಾರಗಳು ನಿಂತಿಲ್ಲ…
ಈ ಅಪ್ರಸ್ತುತ ಸಿದ್ಧಾಂತವನ್ನು ದೇಶದಲ್ಲಿ ಪಸರಿಸಿ ಆಂತರಿಕವಾಗಿ ಒಡೆಯಲು ಸಹಕರಿಸುತ್ತಿರುವ ಬಾಹ್ಯ ಶಕ್ತಿಗಳ ಕೈವಾಡವೂ ಸಹಾ ಈಗ ಗುಟ್ಟಾಗೇನೂ ಉಳಿದಿಲ್ಲ.
ದೇಶದ ಹಿತಾಸಕ್ತಿಗೆ, ಸೌಹಾರ್ದಭರಿತ ಸಾಮಾನ್ಯ ಜನ ಜೀವನಕ್ಕೆ ಮಾರಕವಾಗುವ ಇಂತಾ ಅಪ್ರಸ್ತುತ ನಡೆಗಳನ್ನು ಖಂಡಿಸಲೇಬೇಕು…
ಅದರಲ್ಲೂ ಯುವಜನತೆ ಪ್ರಜಾಸತ್ತಾತ್ಮಕ ಹಾದಿಗಳನ್ನು ಬಿಟ್ಟು ಶಸ್ತ್ರಾಸ್ತ್ರ ದ ಹಾದಿ ಹಿಡಿದರೆ ಸಮಾಜದ ಶಾಂತಿ ಕದಡದೇ ಇರದೆ ??
ನಮ್ಮ ಸೈನ್ಯ ,ನಮ್ಮ ಪೊಲೀಸರು, ಅಮಾಯಕ ಜನ ಇದಕ್ಕೆ ಬಲಿಯಾಗುತ್ತಿದ್ದರೆ ಇಂತಾ ಗೆರಿಲ್ಲಾ ಮಾದರಿಯ ಕಾದಾಟ ಯಾವ ಭಯೋತ್ಪಾದನೆಗೂ ಕಡಿಮೆಯಲ್ಲ..
ಕೇಂದ್ರ , ರಾಜ್ಯ ಸರ್ಕಾರಗಳು ಜಂಟಿಯಾಗಿ ಕಠಿಣ ನಿಲುವು ತಳೆಯುವುದು ಮತ್ತು ಹಾದಿ ತಪ್ಪಿದವರನ್ನು ಮುಖ್ಯ ವಾಹಿನಿಗೆ ತರುವ ಪೂರಕ ಅವಕಾಶ ಕಲ್ಪಿಸಿಕೊಟ್ಟು ಶಾಶ್ವತ ಪರಿಹಾರಕ್ಕೆ ಮುಂದಾಗಲೇ ಬೇಕಿದೆ..
ಅರ್ಥಪೂರ್ಣ ಲೇಖನವನ್ನು ವಸ್ತು ನಿಷ್ಠವಾಗಿ ಪ್ರಸ್ತುತಿಗೊಳಿಸಿರುವ ಲೇಖಕರ ಶ್ರಮಕ್ಕೆ ನನ್ನ
*ಹೃದಯದ ಸಲಾಂ*
LikeLiked by 1 person
ಲೇಖನದ ಕಡೆಯಲ್ಲಿಯೇ ಬರೆದಿರುವಂತೆ ಈ ಲೇಖನ ಬರೆಯಲು ಪ್ರೇರೇಪಿಸಿದ ನಿಮಗೊಂದು ದೊಡ್ಡ ನಮಸ್ಕಾರಗಳು. ನಿಮ್ಮಂತಹ ಓದುಗರು ಮತ್ತು ಹಿತೈಷಿಗಳಿಂದಾಗಿಯೇ ನಮ್ಮ ಜ್ಞಾನಾರ್ಜನೆ ಉತ್ತಮವಾಗಿ ಇಂತಹ ಲೇಖನಗಳಿಗೆ ಪ್ರೇರಣೆಯಾಗುತ್ತದೆ.
LikeLike