ಕಳೆದ ಮೂರ್ನಾಲ್ಕು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ದೃಶ್ಯಮಾದ್ಯಮಗಳಲ್ಲಿ ಇದ್ದಕ್ಕಿದ್ದಂತೆಯೇ ಕೊರೋನಾ ಬಗ್ಗೆ ಅತ್ಯಂತ ಹೆಚ್ಚಿನ ಕಾಳಜಿ ಬಂದಿರುವಂತಿದೆ. ಇದಕ್ಕಿದ್ದಂತೆಯೇ ಜಾಗೃತರಾಗಿ ಈ ಕೊರೋನಾ ಮಾಹಾಮಾರಿ ಉಲ್ಪಣವಾಗುವುದಕ್ಕೆ ಈ ರಾಜ್ಯಸರ್ಕಾರವೇ ಕಾರಣ ಈ ಕೇಂದ್ರ ಸರ್ಕಾರದ ಕೆಟ್ಟ ಆಡಳಿತವೇ ಕಾರಣ ಎಂದು ಪುಂಖಾನುಪುಂಖವಾಗಿ ಹರಿಹಾಯುತ್ತಿರುವುದಲ್ಲದೇ, ಈ ಸರ್ಕಾರಗಳಿಗೆ ನಾಚಿಕೆಯಾಗಬೇಕು. ಆಡಳಿತ ನಡೆಸಲು ಅಸಮರ್ಥರಾದಲ್ಲಿ ರಾಜಿನಾಮೆ ನೀಡಿ ಹೊರ ಬನ್ನಿ ಎನ್ನುತ್ತಿದ್ದಾರೆ
ಇನ್ನೂ ಕೆಲವು ಕೆಲವರು ಮೋದಿ ಮತ್ತು ಬಿಜೆಪಿ ಪಕ್ಷದ ಮೇಲಿನ ತಮ್ಮ ವಯಕ್ತಿಕ ಹಿತಾಸಕ್ತಿಗಳಿಂದಾಗಿ ಸರ್ಕಾರವನ್ನು ಟೀಕಿಸುವ ಬರದಲ್ಲಿ ಇಂತಹ ಸಮಯದಲ್ಲಿ ಸರ್ಕಾರ ಆಸ್ಪತ್ರೆಗಳನ್ನು ಕಟ್ಟುವ ಬದಲು ಕೋಟ್ಯಾಂತರ ರೂಪಾಯಿಗಳ ಖರ್ಚು ಮಾಡಿ ಸ್ವಾತಂತ್ರ್ಯ ಹೋರಾಟಗಾರಾದ ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಪ್ರತಿಮೆಯನ್ನು ಕಟ್ಟಬೇಕಿತ್ತೇ? ಎಂದರೆ ಇನ್ನೊಬ್ಬ ಮಹನೀಯರು, ಇಂತಹ ಸಮಯದಲ್ಲಿ ದೆಹಲಿಯಲ್ಲಿ ಹೊಸಾ ಪಾರ್ಲಿಮೆಂಟ್ ಭವನ ಬೇಕಿತ್ತೇ? ಎಂದು ಪ್ರಶ್ನಿಸುತ್ತಾರೆ.
ಈ ದೇಶ ಕಂಡ ಮತ್ತೊಬ್ಬ ನಾಲಾಯಕ್ ನಾಯಕ ಚಿರಯೌವನಿಗ, ಮತ್ತು ಸದ್ಯದ ಪರಿಸ್ಥಿತಿಯಲ್ಲಿ ಸ್ವತಃ ಕೊರೋನಾದಿಂದ ನರಳುತ್ತಿರುವವನು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈ ದೇಶದಕ್ಕೆ ಕೊರೋನಾ ಬಂದಿರುವುದೇ ಮೋದಿ ಇಂದ ಎಂದು ಹೇಳಿದರೆ, ತನ್ನ ವಯಕ್ತಿಕ ತೆವಲುಗಳಿಂದ ಮನೆ ಮಠ ಕಳೆದುಕೊಂಡು ಅಂಡಲೆದು ಕೊರೋನಾ ರೋಗಕ್ಕೆ ತುತ್ತಾಗಿರುವ ನಿರ್ದೇಶಕನೊಬ್ಬ ತನ್ನ ಸಾವಿಗೆ ಈ ಸರ್ಕಾರವೇ ಕಾರಣ ಎಂದು ಷರಾ ಬರೆಯುತ್ತಾನೆ. ಮತ್ತೊಬ್ಬ ಮಾಜೀ ಮುಖ್ಯಮಂತ್ರಿ ಅನಾರೋಗ್ಯವಿದ್ದರೂ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ಹೋಗಿ ಸಾವಿರಾರು ಜನರ ಸಂಪರ್ಕಕ್ಕೆ ಬಂದು ರೋಗ ಹತ್ತಿಸಿಕೊಂಡಿದ್ದಕ್ಕೆ ಇಂತಹ ಸರ್ಕಾರವನ್ನೇ ಕಂಡಿಲ್ಲ ಎಂದು ಹೇಳುತ್ತಾನೆ.
ಹೀಗೆ ಪುಂಖಾನು ಪುಂಖವಾಗಿ ಅಸಂಬದ್ಧವಾದ ಹೋಲಿಕೆ ಮಾಡುವವರಿಗೆ ಯಾವುದಕ್ಕೆ ಯಾವುದನ್ನು ಹೋಲಿಸಬೇಕು ಎನ್ನುವ ಸಾಮಾನ್ಯ ಪರಿಜ್ಞಾನವೂ ಇರದೇ ಇರುವುದು ಅವರ ಬೌದ್ಧಿಕ ದೀವಾಳಿತನವನ್ನು ಎತ್ತಿತೋರಿಸುತ್ತದೆ. ಇಂತಹವರಿಗೆ ಸಮಸ್ಯೆಗಳನ್ನು ಪರಿಹರಿಸುವುದಕ್ಕಿಂತಲೂ ಇದೇ ಸಮಸ್ಯೆಯನ್ನು ಜೀವಂತವಾಗಿರಿಸಿಕೊಂಡು ಜನರನ್ನು ರೊಚ್ಚಿಗೆಬ್ಬಿಸುತ್ತಾ ಸರ್ಕಾರವದ ವಿರುದ್ಧ ಆಕ್ರೋಶವನ್ನು ಹೆಚ್ಚಿಸಿ ಮುಂದಿನ ಚುನಾವಣೆಯಲ್ಲಾದರೂ ತಮ್ಮ ರಾಜಕೀಯದ ಬೇಳೆ ಬೇಯಿಸಿಕೊಳ್ಳಬಹುದೇ ಎಂಬ ದೂ(ದು)ರಾಲೋಚನೆ ಇವರದ್ದಾಗಿದೆ.
ನಿಜ ಹೇಳಬೇಕೆಂದರೆ, ನಮಗಿಂತಲೂ ಆರ್ಥಿಕವಾಗಿ ಸಾಕಷ್ಟು ಬಲಿಷ್ಟವಾಗಿರುವ ಮತ್ತು ನಮಗಿಂತಲೂ ಅತ್ಯಂತ ಕಡಿಮೆ ಜನಸಂಖ್ಯೆ ಇರುವ ದೇಶಗಳೇ ಕಳೆದ ಒಂದು ವರ್ಷದಿಂದ ಈ ಮಹಾಮಾರಿಯನ್ನು ಎದುರಿಸಲು ತತ್ತರಿಸುತ್ತಿರುವಾಗ 130 ಕೋಟಿ ಜನ ಸಂಖ್ಯೆ ಹೊಂದಿರುವ ಈ ದೇಶವನ್ನು ಅತ್ಯಂತ ಸಮರ್ಥ ರೀತಿಯಲ್ಲಿ ಸಂಬಾಳಿಸುವುದರಲ್ಲಿ ಬಹುಮಟ್ಟಿಗೆ ಸಫಲರಾಗಿದ್ದಾರೆ. ಇಡೀ ಪ್ರಪಂಚವೇೀ ಮಹಾಮಾರಿಗೆ ತಲ್ಲಣತೊಂಡಿದ್ದಾಗ ಈ ದೇಶದ ವಿಜ್ಞಾನಿಗಳೊಂದಿಗೆ ಮಾತನಾಡಿ ಅತ್ಯಂತ ಕಡಿಮೆ ಸಮಯದಲ್ಲಿಯೇ ಈ ಮಹಾಮಾರಿಗೆ ಲಸಿಕೆಯನ್ನು ಕಂಡು ಹಿಡಿಯುವುದರಲ್ಲಿ ಯಶಸ್ವಿಯಾಗಿರುವುದಲ್ಲದೇ, ಇಡೀ ದೇಶದಲ್ಲಿ ಅದನ್ನು ಉಚಿತವಾಗಿ ಹಾಕುವ ಯೋಜನೆಯನ್ನು ಅತ್ಯಂತ ಯಶಸ್ವಿಯಾಗಿ ಮುಂದುವರೆಸಿಕೊಂಡು ಹೋಗುತ್ತಿರುವುದಲ್ಲದೇ ಜಗತ್ತಿನ ಅದೆಷ್ಟೋ ದೇಶಗಳಿಗೆ ಲಸಿಕೆಗಳನ್ನು ರಫ್ತು ಮಾಡುತ್ತಿರುವುದು ಗಮನಾರ್ಹವಾಗಿದೆ.
ಅಗತ್ಯವಿದ್ದಾಗಲೆಲ್ಲಾ ದೇಶವಾಸಿಗಳೊಂದಿಗೆ ಮಾತನಾಡುತ್ತಾ ಅವರಿಗೆ ದೈರ್ಯ ತುಂಬುತ್ತಾ ಅವರನ್ನೆಲ್ಲಾ ಒಗ್ಗೂಡಿಸುವ ಸಲುವಾಗಿ ಜಾಗಟೆ ಬಾರಿಸಲು, ದೀಪ ಬೆಳಗಿಸಲು ಕರೆ ನೀಡುತ್ತಾ, ಕೊರೋನಾ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂಧಿಗಳ ಕೆಲಸಗಳನ್ನು ಎಲ್ಲರಿಗೂ ಪರಿಚಯಿಸುವಂತಹ ಒಳ್ಳೆಯ ಕೆಲಸಗಳಿಗೆ ಜನರ ಸ್ಪಂದನೆ ಅವರ ವಿರೋಧಿಗಳಿಗೂ ಅಚ್ಚರಿ ಮೂಡಿಸಿದೆ.
ಇದೇ ಜನರು ಲಾಕ್ಡೌನ್ ಗೆ ಕರೆ ನೀಡಿದಾಗ ಮತ್ತು ಅದನ್ನು ಮತ್ತೆ ಮತ್ತೆ ವಿಸ್ತರಿಸಿದಾಗ ಈ ಸರ್ಕಾರ ಜನರ ವಿರೋಧಿಯಾಗಿದೆ. ಇವರಿಗೆ ಜನಸಾಮಾನ್ಯರೆ ಮೇಲೆ ಕಾಳಜಿ ಇಲ್ಲ ಎಂದು ಬೊಬ್ಬಿರಿದಿತ್ತು.
ಲಾಕ್ಡೌನ್ ಸಮಯದಲ್ಲಿ ಜನರ ಅನಗತ್ಯ ಓಡಾಟ ಬಹಳಷ್ಟು ಕಡಿಮೆಯಾಗಿ ಕೊರೋನ ಹಾವಳಿ ಕೂಡಾ ಸ್ವಲ್ಪ ನಿಯಂತ್ರಣಕ್ಕೆ ಬಂದಿದ್ದಂತೂ ಸುಳ್ಳಲ್ಲ.
ನಂತರ ಹಂತ ಹಂತವಾಗಿ ಲಾಕ್ದೌನ್ ಸಡಿಲೀಕರಿಸಿದರೂ, ಜನರೆಲ್ಲರೂ ಸ್ವಪ್ರೇರಣೆಯಿಂದ ಎಚ್ಚರಿಕೆಯಿಂದಿರಿ. ಅನಗತ್ಯವಾಗಿ ಹೊರಗೆ ಮಾಸ್ಕ್ ಇಲ್ಲದೇ ಓಡಾಡದಿರಿ. ಸಾಮಾಜಿಕ ಅಂತರ ಕಾಪಾಡಿ ಎಂಬ ಎಚ್ಚರಿಕೆಯನ್ನು ಸಾರಿ ಸಾರಿ ಹೇಳಿದರೂ, ಕೊಂಚವೂ ಕಿವಿಯ ಮೇಲೆ ಹಾಕಿಕೊಳ್ಳದೇ, ಧಿಮ್ಮಾಲೇ ರಂಗಾ ಎಂದು ಅಡ್ಡಾಡಿ ಈಗ ಮತ್ತೆ ಕೊರೋನಾ ಮಿತಿ ಮೀರಿದಾಗ ಅನಿಷ್ಟಕ್ಕೆಲ್ಲಾ ಶನೀಶ್ವರನೇ ಕಾರಣ ಎನ್ನುವಂತೆ ಸರ್ಕಾರವನ್ನು ಹೊಣೆ ಮಾಡುವುದು ಎಷ್ಟು ಸರಿ?
ಲಾಕ್ದೌನ್ ವಿರೋಧಿಸಿದ್ದ ಜನರೇ ಈಗ ಮತ್ತೇ ಈ ಸರ್ಕಾರ ಜನರ ವಿರೋಧಿಯಾಗಿದೆ. ಇವರಿಗೆ ಜನಸಾಮಾನ್ಯರೆ ಮೇಲೆ ಕಾಳಜಿ ಇಲ್ಲಾ ಇಂತಹ ಪರಿಸ್ಥಿತಿಯಲ್ಲಿ ಈ ಕೂಡಲೇ, ಲಾಕ್ದೌನ್ ಮಾಡಬೇಕು ಎಂದು ಬೊಬ್ಬಿರಿಯುತ್ತಿರುವುದು ನಿಜಕ್ಕೂ ಸೋಜಿಗವೆನಿಸುತ್ತಿದೆ.
ದೇಶಕ್ಕೆ ಯಾವುದೇ ವಿಪತ್ತುಗಳು ಎದುರಾದಾಗ ಅದನ್ನು ನಿಭಾಯಿಸುವುದು ಸರ್ಕಾರದ ಹೊಣೆಯಾದರೂ, ಆ ಸಮಸ್ಯೆಯನ್ನು ನಿಭಾಯಿಸುವುದರಲ್ಲಿ ದೇಶದ 130 ಕೋಟಿ ಜನರ ಜವಾಬ್ದಾರಿಯೂ ಇದೆ ಎನ್ನುವುದನ್ನು ಮಾತ್ರ ಈ ಜನರು ಮರೆತಂತಿದೆ. ಒಟ್ಟಿನಲ್ಲಿ ಈ ಜನರದ್ದು ಕೆಲಸಕ್ಕೆ ಕರೀ ಬೇಡಿ. ಊಟಕ್ಕೆ ಮಾತ್ರ ಮರೀ ಬೇಡಿ ಎನ್ನುವ ಮನೋಭಾವನೆ ಹೊಂದಿದೆ.
ಕೊರೋನಾ ಮಹಾಮಾರಿಯಿಂದಾಗಿ ಇಡೀ ಪ್ರಪಂಚದ ಆರ್ಥಿಕ ವ್ಯವಸ್ಥೆ ಬೋರಲು ಬಿದ್ದಿದೆ. ಎಲ್ಲೆಡೆಯಲ್ಲಿಯೂ ನಿರುದ್ಯೋಗದ ಸಮಸ್ಯೆ ಕಾಡುತ್ತಿದೆ ಎನ್ನುವುದು ಗೊತ್ತಿದ್ದರೂ, ಅರೇ ದೇಶದ ಜಿಡಿಪಿ ಏಕೆ ಇಷ್ಟು ಕೆಳಗಿದೆ? ಎಂದು ಹೀಯ್ಯಾಳಿಸುತ್ತಾರೆ. ಈಗ ದೇಶದ ಆರ್ಥಿಕ ವ್ಯವಸ್ಥೆ ನಿಧಾನವಾಗಿ ಮೇಲೇರುತ್ತಿರುವುದನ್ನು ಸಹಿಸದೇ ಮತ್ತೆ ಲಾಕ್ದೌನ್ ಮಾಡುವ ಮುಖಾಂತರ ದೇಶದ ಆರ್ಥಿಕತೆಗೆ ಹೊಡೆರ ಬೀಳುವುದನ್ನೇ ಎದುರು ನೋಡುತ್ತಿದೆ. ನೇರವಾಗಿ ಪ್ರಜಾತಾಂತ್ರಿಕವಾದ ಚುನಾವಣೆಗಳ ಮೂಲಕ ಈ ಸರ್ಕಾರವನ್ನು ಬೀಳಿಸುವುದು ಅಸಾಧ್ಯ ಎಂದು ಈಗಾಗಲೇ ತಿಳಿದಿರುವ ವಿರೋಧ ಪಕ್ಷಗಳು ಈ ರೀತಿಯ ಕುತಂತ್ರದ ಮುಖಾಂತರವಾದರೂ ದೇಶದ ಜನರನ್ನು ರೊಚ್ಚಿಗೆಬ್ಬಿಸಿ ಈ ಸರ್ಕಾರದ ಮೇಲೆ ಅಸಹಕಾರವನ್ನು ತರಲು ಪ್ರಯತ್ನಿಸುತ್ತಿರುವುದು ನಿಜಕ್ಕೂ ಹೇಸಿಗೆ ಎನಿಸುತ್ತಿದೆ.
ಹೀಗೆ ಹೇಳಿದ ಮಾತ್ರಕ್ಕೆ ಸರ್ಕಾರ ಮಾಡಿದ್ದೆಲ್ಲವೂ ಸರಿ ಎಂದು ವಾದಿಸುತ್ತಿಲ್ಲ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ದೇಶದಲ್ಲಿ ಚುನಾವಣೆ ಮತ್ತು ಉಪಚುನಾವಣೆಗಳನ್ನು ಮುಂದೂಡಬಹುದಾಗಿತ್ತು. ಕುಂಭಮೇಳವನ್ನು ಸಾಂಕೇತಿಕವಾಗಿ ಆಚರಿಸಲು ಕೇಳಿಕೊಳ್ಳಬಹುದಾಗಿತ್ತು. ತನ್ಮೂಲಕ ಭಾರಿ ಸಂಖ್ಯೆಯ ಜನರು ಒಂದೆಡೆ ಸೇರುವುದನ್ನು ತಪ್ಪಿಸಬಹುದಾಗಿತ್ತು ಸಿನಿಮಾ, ನಾಟಕ, ಮಾಲ್ ನಲ್ಲಿ ಸುತ್ತಾಟಗಳು ಜೀವನದ ಅತ್ಯವಶ್ಯಕ ವಸ್ತುಗಳಲ್ಲ ಎನ್ನುವುದನ್ನು ಅರಿತು ಅವುಗಳನ್ನು ಇನ್ನೂ ಕೆಲ ಕಾಲ ಮುಚ್ಚಬಹುದಾಗಿತ್ತು. ಹೀಗೆ ಪಟ್ಟಿ ಮಾಡುತ್ತಾ ಹೋದರೆ ಸರ್ಕಾರವೂ ಅನೇಕ ಕಡೆಯಲ್ಲಿ ಎಡವಿರುವುದು ತಿಳಿಯುತ್ತದೆ.
ಅದೇ ರೀತಿಯಲ್ಲಿ ಇಂತಹ ಪರಿಸ್ಥಿತಿಯನ್ನು ದುರುಪಯೋಗ ಪಡಿಸಿಕೊಳ್ಳುವುದರಲ್ಲಿ ಯಶಸ್ವಿಯಾದ ಕೆಲ ಪಟ್ಟಭಧ್ರ ಹಿತಾಸಕ್ತಿಗಳೂ ಸಹಾ ಜನರನ್ನು ಒಂದಕ್ಕೆರಡು ಪಟ್ಟು ಲೂಟಿ ಮಾಡಿದರೆ, ಇನ್ನೂ ಕೆಲ ಭ್ರಷ್ಟ ಸರ್ಕಾರಿ ಅಧಿಕಾರಿಗಳು ತಪ್ಪು ಲೆಖ್ಖ ತೋರಿಸುವ ಮುಖಾಂತರ ಗುಂಪಿನಲ್ಲಿ ಗೋವಿಂದ ಎನ್ನುವಂತೆ ಕೋಟ್ಯಾಂತರ ರೂಪಾಯಿಗಳ ಹಣವನ್ನು ಗುಳುಂ ಮಾಡುವ ಮೂಲಕ ಕೋತಿ ತಾನು ತಿಂದು ಮೇಕೆ ಬಾಯಿಗೆ ಒರಸಿದಂತೆ ಆಡಳಿತ ಸರ್ಕಾರಕ್ಕೆ ಕೆಟ್ಟ ಹೆಸರು ತರುವುದರಲ್ಲಿ ಯಶಸ್ವಿಯಾಗಿವೆ.
130 ಕೋಟಿ ಜನರಿಂದ ಬಹುಮತದಿಂದ ಎರಡು ಬಾರಿ ಆಡಳಿತಕ್ಕೆ ಬಂದಿರುವಂತಹ ಮತ್ತು ತನ್ನ ಇಡೀ ರಾಜಕೀಯ ಬದುಕಿನಲ್ಲಿ ಒಂದು ಚೂರು ಭ್ರಷ್ಟಾಚಾರದ ಕೊಳಕನ್ನು ಮೆತ್ತಿಕೊಳ್ಳದಿರುವ ಪ್ರಧಾನಿಗೆ ಜನರ ಕಷ್ಟ ಅರಿಯುತ್ತಿಲ್ಲವೇನು? ಸಾಮ, ಬೇಧ, ದಂಡಗಳನ್ನು ಅಗತ್ಯಕ್ಕೆ ತಕ್ಕಂತೆ ಬಳಸುತ್ತಾ ರಾಜ್ಯದ ಮೇಲೆ ರಾಜ್ಯವನ್ನು ಯಶಸ್ವಿಯಾಗಿ ಅಶ್ವಮೇಧಯಾಗದಂತೆ ಗೆಲ್ಲುತ್ತಾ, ಶತ್ರುಗಳಿಗೆ ಸಿಂಹಸ್ವಪ್ನವಾಗಿರುವ ಗೃಹ ಸಚಿವರಿಗೆ ಜನರ ಸಂಕಷ್ಟದ ಅರಿವಿಲ್ಲವೇನು? ಇಷ್ಟು ದೊಡ್ಡ ದೇಶದ ರಕ್ಷಣಾ ಮಂತ್ರಿಯಾಗಿ ಈಗ ವಿತ್ತೀಯ ಖಾತೆಯನ್ನು ಹೊಂದಿರುವವರಿಗೆ ಜನರ ನೋವು ಅರಿವಾಗುತ್ತಿಲ್ಲವೇನು?
ಖಂಡಿತವಾಗಿಯೂ ಇವರೆಲ್ಲರಿಗೂ ದೇಶವಾಸಿಗಳ ನೋವು ಮತ್ತು ಸಂಕಟಗಳು ಅರಿವಾಗುತ್ತಿದೆ ಮತ್ತು ಅದನ್ನು ನಿವಾರಿಸಲು ಅವರೆಲ್ಲರೂ ಹಗಲು ಇರಳು ಎನ್ನದೇ ಶ್ರಮವಹಿಸಿ ದುಡಿಯುತ್ತಿರುವುದು ಎಲ್ಲರ ಕಣ್ಣ ಮುಂದೆಯೇ ಇದೆ. ಇವರ್ಯಾರು ರಜೆ ಕಳೆಯಲು ಅಗ್ಗಿಂದ್ದಾಗ್ಗೆ ವಿದೇಶಗಳಿಗೆ ಹೋಗುವ ಹವ್ಯಾಸವಿಲ್ಲ. ಇವರ್ಯಾರೂ ಐಶಾರಾಮ್ಯದ ಜೀವನ ನಡೆಸುತ್ತಿಲ್ಲ. ಇವರೆಲ್ಲರ ವೇಶಭೂಷಣ, ಆಹಾರ ಮತ್ತು ವ್ಯವಹಾರವೆಲ್ಲವೂ ಜನಸಾಮಾನ್ಯರಂತೆಯೇ ಇದೆ. ಅಧಿಕಾರಕ್ಕೆ ಏರುವ ಮೊದಲು ಅವರು ಹೇಳಿದ್ದ ನಾ ಮೇ ಖಾವುಂಗಾ ಔರ್ ನಾ ಖಾನೇ ದೂಂಗ ಎನ್ನುವ ಹೇಳಿಕೆಗೆ ಕಟಿ ಬದ್ಧರಾಗಿ ದುಡಿಯುತ್ತಿರುವುದು ಎಲ್ಲರಿಗೂ ತಿಳಿದೇ ಇದೆ.
ಮನೆಯಲ್ಲಿ ಕುಳಿತುಕೊಂಡು ಮತ್ತೊಬ್ಬರನ್ನು ಟೀಕಿಸುವುದು ಬಹಳ ಸುಲಭ. ಆದರೇ ಅದೇ ಜಾಗದಲ್ಲಿ ಕುಳಿತುಕೊಂದು ಸಮಸ್ಯೆಗಳನ್ನು ನಿಭಾಯಿಸುವುದು ಬಹಲ ಕಷ್ಟ. ಹಾಗಾಗಿ ಈ ದೇಶದ ಒಬ್ಬ ಜವಾಬ್ಧಾರಿ ಪ್ರಜೆಗಳಾಗಿ ಇಂತಹ ಕಠಿಣ ಪರಿಸ್ಥಿತಿಯಲ್ಲಿ ದೇಶದ ಜೊತೆಗೆ ಇರೋಣ. ಸುಮ್ಮನೇ ಟೀಕಿಸುತ್ತಾ ಜನರಲ್ಲಿ ನಕಾರಾತ್ಮಕ ಮನೋಭಾವನೆಗಳನ್ನು ಬಿತ್ತುವ ಬದಲು, ಸಮಸ್ಯೆಗಳನ್ನು ಪರಿಹರಿಸುವಂತಹ ಸಕಾರಾತ್ಮಕ ಕಂಪನಗಳನ್ನು ಜನರಲ್ಲಿ ಮೂಡಿಸೋಣ. ತನ್ಮೂಲಕ ಕೋವಿಡ್ -19 ವಿರುದ್ಧದ ಹೋರಾಟ ಮತ್ತು ಆರ್ಥಿಕ ಕಠಿಣ ಪರಿಸ್ಥಿತಿಯಿಂದ ಅತ್ಯಂತ ಯಶಸ್ವಿಯಾಗಿ ಹೊರಬರುವುದರಲ್ಲಿ ನಮ್ಮ ಜವಾಬ್ಧಾರಿಯನ್ನು ನಿಭಾಯಿಸೋಣ.
ಇಷ್ಟಾದರೂ ಈ ಸರ್ಕಾರಗಳು ಸುಧಾರಿಸದೇ ಹೋದಲ್ಲಿ ಮುಂದಿನ ಬಾರಿಯ ಚುನಾವಣೆಯಲ್ಲಿ ನಮ್ಮೆಲ್ಲರ ಶಕ್ತಿಯನ್ನು ಆವರಿಗೆ ತೋರಿಸೋಣ. 2024ರ ಚುನಾವಣೆಯಲ್ಲಿ ಮತ ಹಾಕುವುದಕ್ಕಾದರೂ ಜೀವಂತ ಇರಬೇಕಾದ್ದರಿಂದ ಸದ್ಯಕ್ಕೆ ಸರ್ಕಾರ ಹೇಳಿದ ರೀತಿಯಲ್ಲಿ ಕೇಳುತ್ತಾ ಸ್ವಘೋಷಿತ ಲಾಕ್ದೌನ್ ಮಾಡಿಕೊಂಡು ನಮ್ಮ ಆರೋಗ್ಯ ಕಾಪಾಡಿಕೊಳ್ಳೋಣ. ಜೀವ ಇದ್ದರೆ ಮಾತ್ರವೇ ಜೀವನ. ಜನ ಬೆಂಬಲವಿದ್ದಲ್ಲಿ ಮಾತ್ರವೇ ಸರ್ಕಾರ.
ಏನಂತೀರೀ?
ನಿಮ್ಮವನೇ ಉಮಾಸುತ
Very good article
LikeLiked by 1 person
Thank you so much
LikeLike