ಇಪ್ಪತ್ತೊಂದು ವರ್ಷಗಳ ಹಿಂದೆ ಹಿಮಾಚಲ ಪ್ರದೇಶದ ಹಳ್ಳಿಯಿಂದ ನಿವೃತ್ತ ಶಿಕ್ಷಕರೊಬ್ಬರು 07/07/2000 ದಂದು ರಕ್ಷಣಾ ಸಚಿವಾಲಯಕ್ಕೆ ಪತ್ರವೊಂದನ್ನು ಬರೆದಿದ್ದು ಅದರಲ್ಲಿ, ರಾಷ್ಟ್ರೀಯ ಭದ್ರತೆಗೆ ಯಾವುದೇ ತೊಂದರೆ ಇಲ್ಲದಿದ್ದಲ್ಲಿ, ಕಾರ್ಗಿಲ್ ಯುದ್ಧದಲ್ಲಿ ನಮ್ಮ ಏಕೈಕ ಪುತ್ರ ವೀರ ಮರಣ ಪಡೆದ ಸ್ಥಳವನ್ನು ನಾನು ಮತ್ತು ನನ್ನ ಧರ್ಮಪತ್ನಿ ಭೇಟಿ ನೀಡಿ ನಮ್ಮ ಮಗನ ಮೊದಲ ವರ್ಷದ ಪುಣ್ಯತಿಥಿಯನ್ನು ಆಚರಿಸಲು ಅನುಮತಿ ನೀಡಬಹುದೇ? ನಿಮಗೆ ತೊಂದರೆ ಎನಿಸಿದಲ್ಲಿ ನಮ್ಮ ಕೋರಿಕೆಯನ್ನು ಹಿಂಪಡೆಯುತ್ತೇವೆ ಎಂಬುದಾಗಿ ಬರೆದಿದ್ದರು.
ಇಂತಹ ಭಾವಾನಾತ್ಮಕ ಪತ್ರವನ್ನು ಓದಿದ ರಕ್ಷಣಾ ಇಲಾಖೆಯ ಅಧಿಕಾರಿಗಳು ಆ ವಯೋವೃದ್ಧರ ಭೇಟಿಯ ವೆಚ್ಚ ಎಷ್ಟೇ ಇರಲಿ, ಅದನ್ನು ನಾನು ನನ್ನ ಸಂಬಳದಿಂದ ಭರಿಸಲು ಸಿದ್ಧನಿದ್ದೇನೆ. ದಯವಿಟ್ಟು ಅವರಿಗೆ ಬರಲು ಹೇಳಿ ಎಂದು ಆದೇಶಿಸಿದರು. ನಿಗಧಿ ಪಡಿಸಿದ ದಿನದಂದು ವೀರ ಮರಣ ಹೊಂದಿದ ಆ ಯುವಕನ ವೃದ್ಧ ದಂಪತಿಗಳನ್ನು ಸರಿಯಾದ ಸಮಯಕ್ಕೆ ಆಗಮಿಸಿದಾಗ, ಅವರನ್ನು ಸಕಲ ಸರ್ಕಾರೀ ಗೌರವದಿಂದ ಪರ್ವತಶ್ರೇಣಿಯಲ್ಲಿ ಅವರ ಮಗ ಸತ್ತ ಜಾಗಕ್ಕೆ ಕರೆದುಕೊಂಡು ಹೋಗಲಾಯಿತು. ಆ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಪ್ರತಿಯೊಬ್ಬರೂ ಶಿಸ್ತಿನಿಂದ ನಿಂತು ನಮಸ್ಕರಿಸಿದರು. ಆದರೆ ಅವರಲ್ಲೊಬ್ಬ ಸೈನಿಕನು ಮಾತ್ರ ಆ ವೃದ್ಧ ದಂಪತಿಗಳಿಗೆ ಹೂವಿನ ಗುಚ್ಚವೊಂದನ್ನು ನೀಡಿ ಅವರ ಕಾಲುಗಳನ್ನು ಮುಟ್ಟಿ ತನ್ನ ಕಣ್ಣಿಗೆ ಒತ್ತಿಕೊಂಡು ನಮಸ್ಕರಿಸಿದನು.
ಒಬ್ಬ ಕರ್ತವ್ಯ ನಿರತ ಸೈನಿಕ ಈರೀತಿಯಾಗಿ ನಮಸ್ಕರಿಸಿದ್ದು ಆ ದಂಪತಿಗಳಿಗೆ ಆಶ್ಚರ್ಯ ತರಿಸಿ, ನೀವೇಕೆ ನನ್ನ ಪಾದಗಳನ್ನು ಮುಟ್ಟಿದಿರಿ? ಎಂದು ವಿಚಾರಿಸಿದಾಗ, ಸರ್, ನಾನಿಂದು ನಿಮ್ಮ ಮುಂದೆ ಈ ರೀತಿ ನಮಸ್ಕರಿಸುತ್ತಿರುವುದಕ್ಕೆ ನಿಮ್ಮ ಮಗನೇ ಕಾರಣ. ಯುದ್ಧದಲ್ಲಿ ನಿಮ್ಮ ಮಗನ ಶೌರ್ಯವನ್ನು ನೋಡಿರುವ ಬದುಕುಳಿದಿರುವ ಏಕೈಕ ವ್ಯಕ್ತಿ ನಾನು. ಅಂದು ಗುಡ್ಡದ ಮೇಲಿನಿಂದ ಶತ್ರು ಪಾಕಿಸ್ತಾನಿ ಸೈನಿಕರು ತಮ್ಮ ಎಚ್.ಎಂ.ಜಿ ಯೊಂದಿಗೆ ನಿಮಿಷಕ್ಕೆ ನೂರಾರು ಗುಂಡುಗಳನ್ನು ನಮ್ಮೆಡೆಗೆ ಹಾರಿಸುತ್ತಿದ್ದರು. ನಮ್ಮ ತಂಡದಲ್ಲಿದ್ದ ಐದೂ ಜನರು ಆ ಗುಂಡಿನ ಧಾಳಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಅಲ್ಲಿಯೇ ಇದ್ದ ಬಂಡೆಯ ಹಿಂದೆ ಅಡಗಿಕೊಂಡೆವು. ಆಗ ನಾನು, ಸರ್, ನಾನು ಡೆತ್ ಚಾರ್ಜ್ ಗೆ ಹೋಗುತ್ತಿದ್ದೇನೆ. ನಾನು ಅವರ ಗುಂಡುಗಳಿಗೆ ಎದೆಯೊಡ್ಡಿ ಅವರ ಬಂಕರ್ ಕಡೆಗೆ ಹೋಗಿ ಅದರ ಮೇಲೆ ಗ್ರೆನೇಡ್ ಎಸೆಯಲು ಹೋಗುತ್ತಿದ್ದೇನೆ. ಅದಾದ ನಂತರ ನೀವೆಲ್ಲರೂ ಅವರ ಬಂಕರನ್ನು ಸುಲಭವಾಗಿ ವಶಪಡಿಸಿಕೊಳ್ಳಬಹುದು ಎಂದು ಹೇಳಿ ಓಡಲು ಸಿದ್ಧನಾದೆ.
ನನ್ನ ಮಾತು ಮುಗಿಯುತ್ತಿದ್ದಂತೆಯೇ ನನ್ನ ಕಡೆಗೆ ತಿರುಗಿದ ನಿಮ್ಮ ಮಗ, ಏ ನಿನಗೇನು ತಲೆಗಿಲೆ ಕೆಟ್ಟಿದೆಯೇ? ನಿನಗೆ ಹೆಂಡತಿ ಮತ್ತು ಮಕ್ಕಳಿದ್ದಾರೆ. ನೀನು ಸತ್ತರೆ ಅವರ ಗತಿ ಏನು? ನಾನಿನ್ನೂ ಅವಿವಾಹಿತ. ಹಾಗಾಗಿ ನಾನು ಡೆತ್ ಚಾರ್ಚ್ ಗೆ ಹೋಗುತ್ತಿದ್ದೇನೆ. ನೀವು ನನ್ನ ಹಿಂದೆ ಬನ್ನಿ ಎಂದು ಹೇಳುತ್ತಲೇ ನನ್ನ ಕೈಯಿಂದ ಗ್ರೇನೇಡ್ ಕಿತ್ತುಕೊಂಡು ಶತ್ರುಗಳ ಬಂಕರ್ ಕಡೆಗೆ ಓಡುತ್ತಿದ್ದಂತೆಯೇ, ಪಾಕಿಸ್ತಾನದ ಎಚ್.ಎಂ.ಜಿ.ಯಿಂದ ಸಿಡಿದ ಗುಂಡುಗಳು ನಿಮ್ಮ ಮಗನ ದೇಹವನ್ನು ಛಿದ್ರ ಛಿದ್ರ ಗೊಳಿಸುತ್ತಿದ್ದರೂ, ಛಲದಿಂದ ಪಾಕಿಸ್ತಾನದ ಬಂಕರ್ ಇದ್ದ ಕಡೆಗೆ ಹೋಗಿ ಗ್ರೆನೇಡ್ನಿಂದ ಪಿನ್ ತೆಗೆದು ಬಂಕರ್ಗೆ ಎಸೆದಾಗ, ಪಾಕೀಸ್ಥಾನದ ಹದಿಮೂರು ಸೈನಿಕರಿಗೆ 72 ಅಪ್ಸರೆಯರಿದ್ದ ಜಾಗಕ್ಕೆ ಕಳುಹಿಸುವುದರಲ್ಲಿ ಸಫಲವಾದರು. ನಂತರ ನಾವು ಆ ಪ್ರದೇಶವನ್ನು ಆಕ್ರಮಣ ನಡೆಸಿ ಆ ಪ್ರದೇಶವನ್ನು ನಮ್ಮ ನಿಯಂತ್ರಣಕ್ಕೆ ತೆಗೆದುಕೂಂಡೆವು. ನಾನು ನಿಮ್ಮ ಮಗನ ಮೃತ ದೇಹವನ್ನು ಎತ್ತಿ ಹಿಡಿದಾಗ ಅವರ ದೇಹಕ್ಕೆ ನಲವತ್ತೆರಡು ಗುಂಡುಗಳು ಹೊಕ್ಕಿದ್ದವು. ಅವರ ತಲೆಯನ್ನು ನಾನು ಎತ್ತಿ ಹಿಡಿದಾಗ ಅವರ ಬಾಯಿಯಿಂದ ಕೊನೆಯದಾಗಿ ಜೈ ಹಿಂದ್ ಹೇಳುತ್ತಿದ್ದಂತೆಯೇ ಪ್ರಾಣ ಪಕ್ಷಿ ಹಾರಿಹೋಗಿತ್ತು.
ಅವರ ಶವಪೆಟ್ಟಿಗೆಯನ್ನು ನಿಮ್ಮ ಹಳ್ಳಿಗೆ ಕಳುಹಿಸಿಕೊಡಲು ಸೇನೆಯ ಉನ್ನತ ಅಧಿಕಾರಿಗಳು ಅನುಮತಿ ನೀಡದ ಕಾರಣ ಅವರ ಪಾದಗಳಿಗೆ ಕಡೆಯದಾಗಿ ಹೂವುಗಳನ್ನು ಅರ್ಪಿಸಿವ ಸೌಭ್ಯಾಗ್ಯ ನನ್ನದಾಗಲಿಲ್ಲ. ಹಾಗಾಗಿಯೇ ನಾನು ಇಂದು ಈ ಹೂವುಗಳನ್ನು ನಿಮ್ಮ ಪದತಲಕ್ಕೆ ಅರ್ಪಿಸಿದೆ ಎಂದು ಹೇಳಿದಾದ ಇಬ್ಬರೂ ಭಾವುಕರಾದರು.
ಈ ಸಂಭಾಷಣೆಯನ್ನು ದೂರದಿಂದಲೇ ಕೇಳಿಸಿಕೊಳ್ಳುತ್ತಿದ್ದ ಆ ಮಹಿಳೆಗೂ ದುಃಖ ಉಮ್ಮಳಿಸಿಬರುತ್ತಿದ್ದರೂ, ಅದನ್ನು ತಡೆದುಕೊಳ್ಳುತ್ತಿದ್ದರು. ಆಕೆ ಆ ಸೈನಿಕರನ್ನು ಹತ್ತಿರ ಕರೆದು, ಆತನ ಕೈಗೆ ಅಂಗಿಯೊಂದನ್ನು ಕೊಟ್ಟು, ನನ್ನ ಮಗ ರಜೆಯ ಮೇಲೆ ಬಂದಾಗ ಅವನಿಗೆ ಕೊಡಲೆಂದು ಈ ಅಂಗಿಯನ್ನು ಖರೀದಿಸಿದ್ದೆ. ಆದರೆ ಮುಂದೆಂದೂ ಬಾರದ ಲೋಕಕ್ಕೆ ಹೋದ ಕಾರಣ, ಈ ಅಂಗಿಯನ್ನು ಅವನು ಸತ್ತ ಸ್ಥಳದಲ್ಲಿ ಇಡಲು ತಂದಿದ್ದೆ. ಆದರೆ ನನಗಿಂದು ನಿನ್ನ ರೂಪದಲ್ಲಿ ಮತ್ತೊಬ್ಬ ಮಗ ದೊರಕಿದ್ದಾನೆ. ದಯವಿಟ್ಟು ಈ ಅಂಗಿಯನ್ನು ನೀನೇ ತೆಗೆದುಕೊಂಡು ಧರಿಸಿಬಿಡು ಎನ್ನುತ್ತಿದ್ದಂತೆಯೇ ಇಬ್ಬರಿಗೂ ಅರಿವಿಲ್ಲದಂತೆಯೇ ಕಣ್ಣಿರಧಾರೆ ಹರಿದಿತ್ತು ಎಂಬುದನ್ನು ಹೇಳಬೇಕಿಲ್ಲ.
ಅ ರೀತಿ ಕ್ಷಾತ್ರ ತೇಜದಿಂದ ಕಾರ್ಗಿಲ್ ಯುದ್ಧದಲ್ಲಿ ಶತ್ರುಗಳಿಗೆ ಎದೆ ಒಡ್ಡಿದ ವೀರ ನಾಯಕನ ಹೆಸರು ಕ್ಯಾಪ್ಟನ್ ವಿಕ್ರಮ್ ಬಾತ್ರಾ. ಅವರ ತಂದೆಯ ಹೆಸರು ಗಿರಿಧಾರಿ ಲಾಲ್ ಬಾತ್ರಾ. ಅವರ ತಾಯಿ ಹೆಸರು ಕಮಲ್ ಕಾಂತ.
ಕಾರ್ಗಿಲ್ ಯುದ್ಧದಲ್ಲಿ ಈ ರೀತಿಯಾಗಿ ಅಭೂತಪೂರ್ವ ಶೌರ್ಯವನ್ನು ಪ್ರದರ್ಶಿಸುವ ಮೂಲಕ ಶೌರ್ಯ ಸಾಧಿಸಿದ ಭಾರತೀಯ ಸೇನೆಯ ಅಧಿಕಾರಿಯಾಗಿ ಹೊರಹೊಮ್ಮಿದ ವಿಕ್ರಮ್ ಭಾತ್ರ . ಅವರಿಗೆ ಮರಣೋತ್ತರವಾಗಿ ಭಾರತದ ಅತ್ಯುನ್ನತ ಶೌರ್ಯ ಗೌರವವಾದ ಪರಮ್ ವೀರ್ ಚಕ್ರವನ್ನು ನೀಡಿ ಗೌರವಿಸಲಾಯಿತು.
ಪಾಲಂಪುರ ನಿವಾಸಿ ಜಿ.ಎಲ್ ಬಾತ್ರಾ ಮತ್ತು ಕಮಲಕಾಂತ ಬಾತ್ರ ದಂಪತಿಗಳಿಗೆ ಎರಡು ಹೆಣ್ಣು ಮಕ್ಕಳ ನಂತರ ಸೆಪ್ಟೆಂಬರ್ 9, 1974 ರಂದು ಅವಳಿ ಗಂಡು ಮಕ್ಕಳನ್ನು ಜನಿಸಿದಾಗ ಆ ಮಕ್ಕಳಿಗೆ ಲವ ಮತ್ತು ಕುಶ ಎಂದು ಹೆಸರಿಟ್ಟರೂ, ಪ್ರೀತಿಯಿಂದ ವಿಕ್ರಮ್ ಮತ್ತು ವಿಶಾಲ್ ಎಂದು ಕರೆಯಲಾರಂಭಿಸಿದರು. ತಮ್ಮ ತವರು ಊರಿನ ಸೆಂಟ್ರಲ್ ಶಾಲೆಯಲ್ಲಿಯೇ ವಿದ್ಯಾಭ್ಯಾಸ ಮಾಡಿ ಸೈನ್ಯದ ಶಿಸ್ತನ್ನು ಕಲಿತುಕೊಂಡರೆ ತಂದೆಯಿಂದ ದೇಶಭಕ್ತಿ ಕಥೆಗಳನ್ನು ಕೇಳುತ್ತಾ ಬೆಳೆದರು. ವಿಕ್ರಮ್ ಓದಿನಲ್ಲಿ ಅಗ್ರಸ್ಥಾನದಲ್ಲಿದ್ದಂತೆಯೇ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಅಗ್ರಗಣ್ಯನಾಗಿದ್ದನು.
ವಿಜ್ಞಾನದಲ್ಲಿ ಪದವಿ ಪಡೆದ ವಿಕ್ರಮ್ ಸಿಡಿಎಸ್ ಮೂಲಕ ಜುಲೈ 1996 ಡೆಹ್ರಾಡೂನಿನ ಭಾರತೀಯ ಮಿಲಿಟರಿ ಅಕಾಡೆಮಿಗೆ ಸೇರಿ, 1997ರ ಡಿಸೆಂಬರ್ನಲ್ಲಿ ತರಬೇತಿ ಮುಗಿಸಿ, 6 ಡಿಸೆಂಬರ್ ರಂದು ಜಮ್ಮುವಿನ ಸೊಪೋರ್ನಲ್ಲಿ ಸೇನೆಯ 13 ಜಮ್ಮು ಮತ್ತು ಕಾಶ್ಮೀರ ರೈಫಲ್ಸ್ನಲ್ಲಿ ಲೆಫ್ಟಿನೆಂಟ್ ಆಗಿ ನೇಮಕಗೊಂಡನು. 1999 ರಲ್ಲಿ ಕಮಾಂಡೋ ತರಬೇತಿಗೆ ಸೇರಿ ಹಲವಾರು ತರಬೇತಿಯನ್ನು ಪಡೆದ ಪರಿಣಾಮ 1 ಜೂನ್ 1999 ರಂದು, ಕಾರ್ಗಿಲ್ ಯುದ್ದದ ಸಮಯಲ್ಲಿ ಅವರ ಸೇನೆಯನ್ನು ಯುದ್ಧಕ್ಕೆ ಕಳುಹಿಸಲಾಯಿತು. ವಿಕ್ರಮ್ ನೇತೃತ್ವದಲ್ಲಿ ಹ್ಯಾಂಪ್ ಮತ್ತು ರಾಕಿ ನಾಬ್ ಸ್ಥಾನಗಳನ್ನು ಗೆದ್ದ ನಂತರ ವಿಕ್ರಮ್ ಅವರನ್ನು ನಾಯಕನನ್ನಾಗಿ ಮಾಡಲಾಯಿತು.
ಶ್ರೀನಗರ-ಲೇಹ್ ರಸ್ತೆಯಲ್ಲಿದ್ದ 5140 ಶಿಖರವನ್ನು ವಶಪಡಿಸಿಕೊಳ್ಳುವ ಜವಾಬ್ದಾರಿಯನ್ನು ಕ್ಯಾಪ್ಟನ್ ಬಾತ್ರಾ ಅವರ ದಳಕ್ಕೆ ನೀಡಿದಾಗ, ಕ್ಯಾಪ್ಟನ್ ಬಾತ್ರಾ ತನ್ನ ಕಂ ಪಡೆಯೊಂದಿಗೆ ಶತ್ರುಗಳು ಇಲ್ಲದಿರುವ ಕಡೆಯಿಂದ ಮುನ್ನುಗಿ ಧೈರ್ಯದಿಂದ ಶತ್ರುಗಳ ಮೇಲೆ ಮುಖಾಮುಖಿ ದಾಳಿ ನಡೆಸಿ ನಾಲ್ವರು ಶತ್ರುಗಳನ್ನು ಕೊಲ್ಲುವ ಮೂಲಕ ತನ್ನ ತಂಡಕ್ಕೆ ಆರಂಭಿಕ ಮುನ್ನಡೆಯನ್ನು ತಂದುಕೊಟ್ಟಿದ್ದಲ್ಲದೇ, ಅವರ ಪಡೆ 20 ಜೂನ್ 1999 ರಂದು ಮುಂಜಾನೆ 3.30 ಕ್ಕೆ 5140 ಶಿಖರವನ್ನು ಸಂಪೂರ್ಣವಾಗಿ ವಶಪಡಿಸಿಕೊಂಡು ರೇಡಿಯೂ ಮುಖಾಂತರ ವಿಜಯವನ್ನು ಅಂದಿನ ದಿನಗಳಲ್ಲಿ ಅತ್ಯಂತ ಜನಪ್ರಿಯ ಜಾಹೀರಾತಾಗಿದ್ದ, ಯೇ ದಿಲ್ ಮಾಂಗೆ ಮೋರ್ ಎಂದು ಹೇಳುತ್ತಾ 5140 ರ ಶಿಖರದಲ್ಲಿ ಭಾರತೀಯ ಧ್ವಜವನ್ನು ಎತ್ತಿ ಹಿಡಿದಿದ್ದ ವಿಕ್ರಮ್ ಬಾತ್ರಾ ಮತ್ತು ಅವರ ತಂಡದ ಫೋಟೋ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವ ಮುಖಾಂತರ ಇಡೀ ದೇಶಕ್ಕೆ ರವಾನಿದ ಕಾರಣ ರಾತಿ ಬೆಳಗಾಗುವುದರ ಒಳಗೆ ಭಾರತದಾದ್ಯಂತ ಪ್ರಸಿದ್ಧವಾಗಿದ್ದ. ಇದೇ ಕಾರಣಕ್ಕಾಗಿ ವಿಕ್ರಮ್ ಬಾತ್ರ ಅವರ ರಹಸ್ಯ ಹೆಸರಾಗಿದ್ದ ಶೇರ್ ಷಾ ಜೊತೆಗೆ ಅವರಿಗೆ ಲಯನ್ ಆಫ್ ಕಾರ್ಗಿಲ್ ಎಂಬ ಬಿರುದನ್ನು ನೀಡಲಾಗಿತ್ತು.
ಈ ಗೆಲುವಿನ ನಂತರ ಸ್ವಯಂ ಪ್ರೇರಿತವಾಗಿ ಪಾಯಿಂಟ್ 4875 ಅನ್ನು ವಶಪಡಿಸಿಕೊಳ್ಳುವ ಅಭಿಯಾನವನ್ನು ಕ್ಯಾಪ್ಟನ್ ವಿಕ್ರಮ್ ವಹಿಸಿಕೊಂಡು ಕಿರಿದಾದ ಶಿಖರದಿಂದ ಶತ್ರುಗಳನ್ನು ಎರಡೂ ಕಡೆ ಕಡಿದಾದ ಇಳಿಜಾರುಗಳಿಂದ ದಾಳಿ ನಡೆಸಲು ನಿರ್ಧರಿಸಿದರು. ಇದೇ ದಾಳಿಯ ಸಮಯದಲ್ಲಿಯೇ, ಮುಖಾಮುಖಿ ಯುದ್ಧದಲ್ಲಿ ಡೆತ್ ಚಾರ್ಚ್ ದಾಳಿಯಲ್ಲಿ ಕ್ಯಾ. ವಿಕ್ರಂ ಭಾತ್ರಾ ಜುಲೈ 7, 1990 ರಂದು ವೀರಮರಣ ಹೊಂದಿದರು. ವಿಕ್ರಮ್ ಅವರ ಅಸಾಧಾರಣ ನಾಯಕತ್ವದಿಂದ ಪ್ರೇರಿತರಾದ ಅವರ ಪಡೆ ವಿಕ್ರಮ್ ಅವರ ಸಾವಿನ ಸೇಡನ್ನು ತೀರಿಸಿಕೊಳ್ಳುವ ಸಲುವಾಗಿ ಶತ್ರುಗಳ ಮೇಲೆ ಭಯಂಕರವಾಗಿ ಧಾಳಿ ನಡೆಸಿ ಶತ್ರುಗಳನ್ನು ಅಳಿಸಿ ಹಾಕಿ ಪಾಯಿಂಟ್ 4875 ಅನ್ನು ವಶಪಡಿಸಿಕೊಂಡಿದ್ದು ಈಗ ಇತಿಹಾಸ.
ಚಲನಚಿತ್ರದಲ್ಲಿ ಮರ ಸುತ್ತುತ್ತಾ ನಕಲಿ ಹೋರಾಟ ಮಾಡುವ ಇಲ್ಲವೇ ಬ್ಯಾಟು ಮತ್ತು ಬಾಲನ್ನು ಹಿಡಿದು ಆಟವಾಡುವವರನ್ನೇ ನಮ್ಮ ಹೀರೋಗಳೆಂದು ಮೆರೆಸಾಡುವರಿಗೆ ದೇಶದ ರಕ್ಷಣೆಗಾಗಿ ತಮ್ಮನ್ನೇ ತಾವು ಅರ್ಪಿಸಿಕೊಂಡ ಕ್ಯಾಪ್ಟನ್ ವಿಕ್ರಮ್ ಭಾತ್ರಾ ರಂತಹ ಸಾವಿರಾರು ಅಸಲಿ ಹೀರೋಗಳ ಪರಿಚಯವನ್ನು ಇಂದಿನ ಯುವಜನಾಂಗಕ್ಕೆ ಮತ್ತು ಮುಂದಿನ ಪೀಳಿಗೆಯವರಿಗೆ ಮಾಡಿಸುವ ಜವಾಬ್ದಾರಿ ನಮ್ಮ ಮೇಲಿದೆ.
ಏನಂತೀರೀ?
ನಿಮ್ಮವನೇ ಉಮಾಸುತ