ವಿಮಲ ಮಿಸ್

ಅದು ಎಂಭತ್ತರ ದಶಕ ಆರಂಭದ ಕಾಲ ನಾನು ಆಗ ತಾನೇ ನೆಲಮಂಗಲದ ಸರ್ಕಾರೀ ಪ್ರಾಥಮಿಕ ಶಾಲೆಯಿಂದ ಬೆಂಗಳೂರಿನ ಪ್ರತಿಷ್ಠಿತ ಬಿಇಎಲ್ ಪ್ರಾಥಮಿಕ ಶಾಲೆಗೆ ಸೇರಿಕೊಂಡಿದ್ದೆ. ಸ್ಲೇಟು ಬಳಪ ಹಿಡಿದುಕೊಂಡು ಯಾವುದೇ ರೀತಿಯ ಸಮವವಸ್ತ್ರ ಇಲ್ಲದೇ ಕಾಲಿಗೆ ಹವಾಯಿ ಚಪ್ಪಲಿ ಹಾಕಿಕೊಂಡು ನೆಲದ ಮೇಲೆ ಹಾಕಿದ್ದ ಮಣೆಯ ಮೇಲೆ ಪಾಠ ಕಲಿಯುತ್ತಿದ್ದ ನನಗೆ, ಏಕಾ ಏಕಿ ಸ್ಲೇಟು ಬಳಪ ಜಾಗದಲ್ಲಿ ನೋಟ್ ಪುಸ್ತಕ, ಪೆನ್ಸಿಲ್, ಸಮವಸ್ತ್ರದ ಜೊತೆ ಟೈ ಮತ್ತು ಶೂ ಹಾಕಿಕೊಂಡು ಡೆಸ್ಕಿನ ಮೇಲೆ ಕುಳಿತು ಕೊಂಡು ಪಾಠ ಕೇಳುವ ಸೌಭಾಗ್ಯ ಒಂದು ರೀತಿಯ ಭಯವನ್ನು ಹುಟ್ಟಿಸಿತ್ತು. ಹೊಸಾ ಶಾಲೆ ಅಪರಿಚಿತ ಸಹಪಾಠಿಗಳು ಮತ್ತುಪರಿಚಯವೇ ಇಲ್ಲದ ಗುರುಗಳು. ಹೇಗಪ್ಪಾ ಈ ಶಾಲೆಯಲ್ಲಿ ಕಲಿಯುವುದು? ಎಂದು ಯೋಚಿಸುತ್ತಿರುವಾಗಲೇ ನನ್ನ ಚಿಂತೆಯನ್ನು ದೂರ ಮಾಡಿದವರೇ, ನಮ್ಮ ವಿಮಲ ಮಿಸ್.

WhatsApp Image 2021-09-05 at 12.21.14 AM

ಆಗ ತಾನೇ ತಮ್ಮ ಚೊಚ್ಚಲು ಬಾಣಂತನವನ್ನು ಮುಗಿಸಿಕೊಂಡು ಬಹಳ ಉತ್ಸಾಹದ ಚಿಲುಮೆಯಾಗಿ ಶಾಲೆಗೆ ಪುನಃ ಬಂದು ನಮ್ಮ ತರಗತಿಯ ಉಪಾಧ್ಯಾಯಿನಿಯಾಗಿ ಬಂದಿದ್ದರು. ಬಿ. ಆರ್ ಛಾಯರವರು ಹಾಡಿದ್ದ ಶಿಶು ಗೀತೆಯಾದ, ಬಹಳ ಒಳ್ಳೆಯವರು ನಮ್ಮ ಮಿಸ್, ಎನ್ ಕೇಳಿದ್ರು ಎಸ್ ಎಸ್ಸು, ನಗುತ ನಗುತ ಮಾತಾಡ್ತಾರೆ! ಸ್ಕ್ಹೂಲಿಗೆಲ್ಲ ಫೇಮಸ್ಸು, ಸ್ಕ್ಹೂಲಿಗೆಲ್ಲ ಫೇಮಸ್ಸೂ !! ಹಾಡು ಬಹುಶಃ ನಮ್ಮ ವಿಮಲಾ ಮಿಸ್ ಅವರನ್ನು ನೋಡಿಕೊಂಡೇ ಬರೆದಿದ್ದರೇನೋ ಎನ್ನುವಂತಹ ಶಿಕ್ಷಕಿ ಎಂದರೂ ತಪ್ಪಾಗದು. ನೋಡಲು ಗೌರವ ವರ್ಣವಾದರೂ ಬಹಳ ಲಕ್ಷಣವಂತೆ ಮತ್ತು ಸದಾಕಾಲವೂ ಹಸನ್ಮುಖಿ.

ಏಳನೇ ತರಗತಿಯ ವರೆಗೂ ನಮ್ಮ ಕ್ಲಾಸ್ ಟೀಚರ್ ಆಗಿದ್ದಲ್ಲದೇ, ಕನ್ನಡ, ಹಿಂದಿ ಮತ್ತು ವಿಜ್ಞಾನವನ್ನು ನನಗೆ ಕಲಿಸಿಕೊಟ್ಟವರು. ನನಗೆ ತಿಳಿದಿದ್ದ ಹಾಗೆ ಆವರ ಮನೆಯ ಆಡು ಭಾಷೆ ತೆಲುಗು. ಆದರೆ ಅವರ ಕನ್ನಡ ಭಾಷೆಯ ವೈಖರಿ ಮಾತ್ರಾ ಅತ್ಯಂತ ಸುಸ್ಪಷ್ಟ. ಇನ್ನು ಅವರ ಕೈ ಬರಹವಂತೂ ಮುತ್ತು ಪೋಣಿಸಿದಂತೆ ಇರುತ್ತಿದ್ದ ಕಾರಣ ನಮ್ಮ ಬಿಇಎಲ್ ಪ್ರಾಥಮಿಕ, ಪೌಢ ಶಾಲೆ ಮತ್ತು ಕಾಲೇಜಿನ ಯಾವುದೇ ಸಭೆ ಸಮಾರಂಭಗಳ ಬರಹಗಳೆಲ್ಲವೂ ನಮ್ಮ ವಿಮಲಾ ಮಿಸ್ ಅವರದ್ದೇ ಇರುತ್ತಿತ್ತು. ಬರಹದ ಜೊತೆಗೆ ಚಿತ್ರಗಳನ್ನೂ ಅತ್ಯದ್ಭುತವಾಗಿ ಬಿಡಿಸುವ ಕಲೆ ಅವರಿಗೆ ಕರಗತವಾಗಿದ್ದ ಕಾರಣ ಬಣ್ಣ ಬಣ್ಣದ ಚಾಕ್ ಪೀಸಿನಲ್ಲಿ ಬೋರ್ಡಿನ ಮೇಲೆ ಅವರು ಬಿಡಿಸುತ್ತಿದ್ದ ಚಿತ್ತಾರ ಎಲ್ಲರ ಮನಸ್ಸನ್ನು ಸೂರೆಗೊಳ್ಳುತ್ತಿತ್ತು ಎಂದರೂ ಅತಿಶಯವಲ್ಲ.

ಇಂತಹ ಅದ್ಭುತ ಪ್ರತಿಭೆಗಳನ್ನು ಹೊಂದಿದ್ದ ವಿಮಲ ಮಿಸ್ ಅವರನ್ನು ನಮ್ಮ ಪ್ರಾಥಮಿಕ ಶಾಲೆಯ ಅಧ್ಯಾಪಕಿಯನ್ನಾಗಿ ಪಡೆದ ನಾವುಗಳು ನಿಜಕ್ಕೂ ಧನ್ಯರೇ ಸರಿ. ಅದಕ್ಕೇ ಅಲ್ಲವೇ ಮಾತೃ ದೇವೋಭವ, ಪಿತೃ ದೇವೋಭವ ನಂತರದ ಸ್ಥಾನವನ್ನು ಆಚಾರ್ಯ ದೇವೋಭವ ಎಂದು ಗುರುಗಳಿಗೆ ಪೋಷಕರ ನಂತರದ ಸ್ಥಾನವನ್ನು ನೀಡಿದ್ದಾರೆ ನಮ್ಮ ಪೂರ್ವಜರು. ವಿಮಲ ಮಿಸ್ ಅವರೇ ಹೇಳಿಕೊಳ್ಳುತ್ತಿದ್ದ ಹಾಗೆ ಅವರ ತಂದೆ ರೈಲ್ವೇ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಅವರ ವಿದ್ಯಾಭ್ಯಾಸ ತಂದೆಯವರು ವರ್ಗಾವಣೆಯ ಜೊತೆ ಜೊತೆಯಲ್ಲಿಯೇ ವಿವಿದೆಡೆಯಲ್ಲಿ ಆಗಿದ್ದ ಕಾರಣ, ಅದರಲ್ಲೂ ಮಲೆನಾಡಿನ ಪ್ರದೇಶಗಳಲ್ಲಿ ಆಗಿದ್ದ ಕಾರಣ ನಮ್ಮ ಪಾಠ ಪ್ರವಚನಗಳಲ್ಲಿ ಕಾಡು-ಮೇಡು, ನದಿ-ಝರಿ, ಸಾಕು ಪ್ರಾಣಿಗಳು ಮತ್ತು ವನ್ಯ ಮೃಗಗಳ ಕುರಿತು ಪ್ರಸ್ತಾವನೆ ಬಂದಿತೆಂದರೆ ಸಾಕು. ಆ ದಿನ ನಮಗೆ ಹಬ್ಬವೇ ಸರಿ. ಆದಿನ ನಮಗೆ ರಸಕವಳ ಎಂದೇ ತಿಳಿಯಬೇಕು. ಅವರು ತಮ್ಮ ಬಾಲ್ಯದಲ್ಲಿ ಕಂಡಿದ್ದ ಆ ಮಲೆನಾಡು. ಅಗೊಮ್ಮೆ ಈಗೊಮ್ಮೆ ರೈಲುಗಳು ಬಂದು ಹೋದ ಮೇಲೆ ನಿರ್ಜನವಾಗಿರುತ್ತಿದ್ದ ರೈಲ್ವೇ ನಿಲ್ಡಾಣದ ಬಳಿ ಬರುತ್ತಿದ್ದ ವನ್ಯಮೃಗಗಳು, ಅದನ್ನು ಕಂಡು ಅವರು ಮತ್ತು ಅವರ ಸಹೋದರ ಸಹೋದರಿಯರು ಬೆಚ್ಚಿ ಬೀಳುತ್ತಿದ್ದದ್ದು.‌ ರಾತ್ರಿಯ ನೀರವದಲ್ಲಿ ಟಾರ್ಚ್ ಹಾಕಿಕೊಂಡು ಇನ್ನೂ‌ ಮನೆಗೆ ಬಾರದೇ ಹೋದ ಹಸುವನ್ನು ಹುಡುಕಿಕೊಂಡು ಬರುತ್ತಿದ್ದುದನ್ನು ವರ್ಣಿಸಲು ಆರಂಭಿಸಿದರೆಂದರೆ ನಾವೇ ಅಲ್ಲಿ ಸ್ವತಃ ಅದನ್ನು ಅನುಭವಿಸುತ್ತಿದ್ದೇವೇನೋ ಇಲ್ಲವೇ ನಮ್ಮ ಕಣ್ಣ ಮುಂದೆಯೇ ಅದೆಲ್ಲವೂ ನಡೆಯುತ್ತಿದೆಯೇನೋ ಎನ್ನುವಂತೆ ಅವರು ಹೇಳುತ್ತಿದ್ದ ಪರಿ ನಿಜಕ್ಕೂ ಅವರ್ಣನೀಯ. ಅದನ್ನು ಅವರ ಬಾಯಿಂದಲೇ ಕೇಳಿದರೇ ಮಜ.

ಕನ್ನಡ ಭಾಷೆಯ ಮೇಲಿನ ಪ್ರೀತಿ ಮತ್ತು ಸಾಹಿತ್ಯಾಸಕ್ತಿ ಆನುವಂಶಿಕವಾಗಿ ತಾತ ಮತ್ತು ತಂದೆಯವರಿಂದ ಬಂದ ಬಳುವಳಿಯಾರೂ, ಶುದ್ಧವಾಗಿ ವ್ಯಾಕರಣಬದ್ಧವಾಗಿ ಕನ್ನಡ ಮಾತನಾಡಲು ಮತ್ತು ಬರೆಯಲು ಕಲಿಸಿಕೊಟ್ಟ ಶ್ರೇಯ ವಿಮಲ ಮಿಸ್ ಅವರಿಗೆ ಸಲ್ಲುತ್ತದೆ. ನಮಗೆ ಆಗ ಆವರು ಕಲಿಸಕೊಟ್ಟ ಸಂಧಿ ಸಮಾಸಗಳು, ಕೆಲವು ಪದಗಳನ್ನು ಕೊಟ್ಟು ವಾಕ್ಯ ರಚನೆ ಮಾಡಿಸುತ್ತಿದ್ದ ಪರಿ, ಕಠಿಣ ಒತ್ತಕ್ಷರಗಳಿರುವ ಪದಗಳ ಉಕ್ತಲೇಖನ ನೀಡಿ ಅದರ ಕಾಗುಣಿತ ತಿದ್ದಿ ಬೆಳಸಿದ ಕಾರಣದಿಂದಲೇ, ನಾನಿಂದು ಈ ಲೇಖನವನ್ನು ಬರೆಯಲು ಸಾಧ್ಯವಾಗಿದೆ ಎನ್ನುವುದು ಅಕ್ಷರಶಃ ಸತ್ಯ.

ಇನ್ನು ಹಿಂದಿ ಹೇಳಿಕೊಡುವಾಗಲೂ ಅಷ್ಟೇ. ಎಲ್ಲಾ ವಿದ್ಯಾರ್ಥಿಗಳೂ ಸ್ಪಷ್ಟವಾಗಿ ಓದಬೇಕು ಮತ್ತು ಸ್ಪಷ್ಟವಾಗಿ ಮತ್ತು ಸ್ಫುಟವಾಗಿ ಬರೆಯಲೇ‌ ಬೇಕು. ಓದುವಾಗ ಅಕಸ್ಮಾತ್ ಉಚ್ಚಾರವೇನಾದರೂ ತಪ್ಪಾದಲ್ಲಿ ಅದು ಸರಿಯಾಗುವವರೆಗೂ ಹತ್ತಾರು ಸಲಾ ಓದಿಸಿ ಅದು ನಮಗೆ ಸರಿಯಾಗಿ ಮನನವಾಗುವವರೆಗೂ ಬಿಡುತ್ತಲೇ ಇರಲಿಲ್ಲ. ಅದಕ್ಕಾಗಿಯೇ ನಾವೆಲ್ಲರೂ ಮೊದಲನೇ ಸಲವೇ ಸರಿಯಾಗಿ ಗಮನವಿಟ್ಟು ಓದುವ ಮೂಲಕ ಆ ರೀತಿಯ ಶಿಕ್ಷೆಯಿಂದ ಬಚಾವಾಗುತ್ತಿದ್ದೆವು.

ಇನ್ನು ವಿಜ್ಞಾನ ಹೇಳಿಕೊಡುವಾಗಲಂತೂ ಎಲ್ಲಾ ವಿಷಯಗಳೂ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುವಂತೆ ಹೇಳಿಕೊಡುತ್ತಿದ್ದರು. ಈ ಮೊದಲೇ ಹೇಳಿದ ಹಾಗೆ ಚಿತ್ರಕಲೆಯಲ್ಲಿ ಪ್ರಬುದ್ಧರಾಗಿದ್ದ ಕಾರಣ ವಿಜ್ಞಾನದ ಚಿತ್ರಗಳನ್ನು ಅತ್ಯಂತ ಸ್ಪುಟವಾಗಿ ಬಿಡಿಸುತ್ತಿದ್ದದ್ದಲ್ಲದೇ ನಮಗೂ ಸಹಾ ಅದೇ ರೀತಿ ಬಿಡಿಸಲು ಕಲಿಸಿಕೊಡುತ್ತಿದ್ದರು. ಅವರ ಮುಂದೆ ಶಹಭಾಷ್ ಪಡೆಯಲೆಂದೇ ನಾನು scientific stencils ಬಳಸಿಕೊಂಡು ಚಿತ್ರಗಳನ್ನು ಬಿಡಿಸಿ ತೋರಿಸಿ ಹಸಿರು ಬಣ್ಣದ ಪೆನ್ನಿನಲ್ಲಿ Good or Very Good ಹಾಕಿಸಿಕೊಂಡರೆ ಸಾಕು ಮುಂದೆ ನಾಲ್ಕೈದು ದಿನಗಳ ಮಟ್ಟಿಗೆ ಅದುವೇ ಓಲಂಪಿಕ್ಸ್ ಪದಕ ಗೆದ್ದಂತಾಗುತ್ತಿತ್ತು.

ಸತತವಾಗಿ ಮೂರ್ನಾಲ್ಕು ವರ್ಷಗಳ ಕಾಲ ನಮ್ಮ ಕ್ಲಾಸ್ ಟೀಚರ್ ಆಗಿದ್ದ ಕಾರಣ ಅವರು ಕೇವಲ ಟೀಚರ್ ಮಾತ್ರವೇ ಆಗಿರದೇ ನಮ್ಮ ತಾಯಿಯೋ ಇಲ್ಲವೋ ಚಿಕ್ಕಮ್ಮನಂತೆ ನಮ್ಮೆಲ್ಲರ ಗುಣ, ಸ್ವಭಾವಗಳು, ನಮ್ಮ ಶಕ್ತಿ ಮತ್ತು ಸಾಮರ್ಥ್ಯದ ಅರಿವು ಅವರಿಗೆ ಚೆನ್ನಾಗಿ ತಿಳಿದಿತ್ತು. ಹಾಗಾಗಿ ಪ್ರತಿಯೊಬ್ಬರನ್ನೂ ಅವರವರ ಪ್ರತಿಭೆ ಮತ್ತು ಶಕ್ತ್ಯಾನುಸಾರ ಕಲೆ, ಕ್ರೀಡೆ, ಕುಶಲ ಕಲೆಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸುತ್ತಿದ್ದದ್ದಲ್ಲದೇ, ಪ್ರತಿಯೊಬ್ಬರಲ್ಲಿದ್ದ ಅಳುಕನ್ನು ಹೋಗಲಾಡಿಸಿ, ಎಲ್ಲರ ಪ್ರತಿಭೆಗಳನ್ನು ಅನಾವರಣಗೊಳಿಸುತ್ತಿದ್ದರು.

ಅದರಲ್ಲೂ ನಾನು ಕ್ರೀಡೆಗಿಂತ ಕಲೆಯಲ್ಲಿ ಮಿಂಚಬಹುದು ಎಂದು ಗುರುತಿಸಿ ನನಗೆ ನಾಟಕ, ಫ್ಯಾನ್ಸಿ ಡ್ರೆಸ್ ಏಕಪಾತ್ರಾಭಿನಯ, ಮಿಮಿಕ್ರಿ, ಚರ್ಚಾಸ್ಪರ್ಥೆ, ಪ್ರಬಂಧ ಹೀಗೆ ಯಾವುದೇ ರೀತಿಯ ಸ್ಪರ್ಧೆಗಳಿದ್ದರೂ ನನಗೆ ತರಭೇತಿ ನೀಡಿ ಪ್ರಶಸ್ತಿ ಬರುತ್ತದೆಯೋ ಇಲ್ಲವೋ ಆದರೆ ಭಾಗವಹಿಸುವಿಕೆ ಮುಖ್ಯ. ಅಲ್ಲಿ ಇತರೇ ಶಾಲೆಗಳ ಮಕ್ಕಳ ಪ್ರತಿಭೆ ಹೇಗೆ ಇರುತ್ತದೆ ಅವರಿಂದ ಏನಾದಾರೂ ಒಳ್ಳೆಯದನ್ನು ಕಲಿತುಕೊಳ್ಳಿ ಎಂದು ಪ್ರೋತಾಹಿಸುತ್ತಿದ್ದರು. ನನಗೆ ಚೆನ್ನಾಗಿ ನೆನಪಿದ್ದಂತೆ ಅವರ ನಿರ್ದೇಶನದಲ್ಲೇ ಅಲೆಕ್ಶಾಂಡರ್ ಮತ್ತು ಪುರೂರವಾ ನಾಟಕದಲ್ಲಿ ಅಲೆಕ್ಶಾಂಡರ್ ಪಾತ್ರ, ಅರ್ಧ ನಾರೀಶ್ವರ ಫ್ಯಾನ್ಸಿ ಡ್ರೆಸ್, ಇನ್ನು 7ನೇ ತರಗತಿಯಲ್ಲಿ ಏಕಲವ್ಯ ನಾಟಕದಲ್ಲಿ ಏಕಲವ್ಯ ಏಕಲವ್ಯ ಮಾಡಿಸಿದ್ದಲ್ಲದೇ ಅನೇಕ ಏಕಪಾತ್ರಾಭಿನಯ, ಪ್ರಬಂಧ, ರಸಪ್ರಶ್ನೆ ‌ಮತ್ತು ಚರ್ಚಾ ಸ್ಪರ್ಧೆಗಳಿಗೆ ತಾವೇ ಕರೆದುಕೊಂಡು ಹೋಗಿ ಹತ್ತಾರು ಬಹುಮಾನಗಳನ್ನು ಗೆಲ್ಲಲು ಪ್ರೋತ್ಸಾಹ ನೀಡಿದ ಮಹಾಮಾತೆ ಎಂದರೂ ಅತಿಶಯವಲ್ಲ.

ಎಷ್ಟೇ ತಾಳ್ಮೆ ವಹಿಸಿದ್ದರೂ ಕೆಲವೊಂದು ಬಾರಿ ಅವರ ತಾಳ್ಮೆಯನ್ನೂ ಪರೀಕ್ಷಿಸುವಂತೆ ಗಲಾಟೆಯನ್ನು ಮಾಡಿದಾಗ ಎಲ್ಲರಿಗೂ ಬೆತ್ತದಿಂದ ಸರಿಯಾಗಿ ಬಾರಿಸುತ್ತಿದ್ದರೆ, ಅದರಲ್ಲೂ ಅವರ ಅಚ್ಚು ಮೆಚ್ಚಿನ ಶಿಷ್ಯನಾಗಿದ್ದ ಕಾರಣ ನನಗೆ ಸ್ವಲ್ಪ ಹೊಡೆತಕ್ಕಿಂತಲೂ ಕಿವಿ ಹಿಂಡಿಸಿ ಕೊಂಡಿರುವುದೇ ಹೆಚ್ಚು. ಬರೀ ಚೆನ್ನಾಗಿ ಓದಿದರೆ ಸಾಕಾಗುವುದಿಲ್ಲ. ಓದಿನ ಜೊತೆ ವಿನಯವಂತಿಕೆ ಮತ್ತು ಹಿರಿಯರಿಗೆ ಗೌರವವನ್ನು ಕೊಡುವುದನ್ನು ಕಲಿತು ಕೊಂಡಾಗಲೇ ಆತ ಒಳ್ಳೆಯ ವ್ಯಕ್ತಿ ಎನಿಸಿ ಕೊಳ್ಳುತ್ತಾನೆ ಎನ್ನುತ್ತಿದ್ದದ್ದು ಇಂದಿಗೂ ನನ್ನಂತಹ ಅನೇಕ ಶಿಷ್ಯರಿಗೆ ವೇದವಾಕ್ಯವಾಗಿದೆ.

ವಿದ್ಯಾರ್ಥಿಗಳೊಂದಿಗೆ ಮಾತ್ರವೇ ಅವಿನಾಭಾವ ಸಂಬಂಧವನ್ನು ಹೊಂದಿರುವುದಲ್ಲದೇ ತಮ್ಮ ವಿದ್ಯಾರ್ಥಿಗಳ ಪೋಷಕರೊಂದಿಗೂ ಅವರೂ ಉತ್ತಮ ಬಾಂಧವ್ಯವನ್ನು ಹೊಂದಿರುತ್ತಿದ್ದದ್ದು ನಮ್ಮ ವಿಮಲ ಮಿಸ್ ಅವರ ಮತ್ತೊಂದು ಹೆಗ್ಗಳಿಕೆ. ಅದರಲ್ಲೂ ನಮ್ಮ ತಾಯಿ ಮತ್ತು ವಿಮಲ ಮಿಸ್ ಅವರ ಸುಮಧುರ ಬಾಂಧವ್ಯ ನಿಜಕ್ಕೂ ಅನನ್ಯ. ಹಾಗಾಗಿಯೇ ನಮ್ಮಮ್ಮ ಕೈಯ್ಯಾರೆ ವಿಮಲಾ ಮಿಸ್ ಅವರ ಮಕ್ಕಳಿಗೆ ಕ್ರೋಷಾದಲ್ಲಿ ಉಲ್ಲನ್ ಟೋಪಿಯನ್ನು ಹಾಕಿ ಕೊಟ್ಟಿದ್ದನ್ನು ತಮ್ಮ ಮಕ್ಕಳಿಗೆ ಸುಮಾರು ವರ್ಷಗಳ ಕಾಲ ಹಾಕಿದ್ದಲ್ಲದೇ, ನಾನು ಮತ್ತು ನನ್ನ ತಂಗಿಯರು ಪ್ರಾಥಮಿಕ ಶಾಲೆಯನ್ನು ಮುಗಿಸಿ ಎಷ್ಟೋ ವರ್ಷಗಳ ನಂತರ ಸಿಕ್ಕಿದಾಗಲೂ ಅದನ್ನು ನೆನಪಿಸಿಕೊಳ್ಳುತ್ತಿದ್ದದ್ದು ಅವರ ದೊಡ್ಡತನವನ್ನು ತೋರಿಸುತ್ತಿತ್ತು.

ಸುಮಾರು 10-15 ವರ್ಷಗಳ ಹಿಂದೆ‌ ಗಂಟೆ ರಾತ್ರಿ 9 ಆಗಿತ್ತು.‌ಮನೆಯಿಂದಲೂ ಮೇಲಿಂದ‌ ಮೇಲೆ ಕರೆ ಬರುತ್ತಿದ್ದ ಕಾರಣ, ಕಛೇರಿಯ ಕೆಲಸವನ್ನು ಮುಗಿಸಿಕೊಂಡು, ಬೈಕಿನಲ್ಲಿ ಬಿಇಎಲ್ ರಸ್ತೆಯಲ್ಲಿ ಬರುತ್ತಿದ್ದಾಗ, ದೇವಸಂದ್ರ ಬಸ್‌ನಿಲ್ದಾಣ ‌ದಾಟುತ್ತಿದ್ದಾಗ ಬಸ್ ನಿಲ್ದಾಣದಲ್ಲಿ ನಮ್ಮ ವಿಮಲ‌ ಮಿಸ್ ಬಸ್ಸಿಗಾಗಿ ಕಾಯುತ್ತಿದ್ದ ಹಾಗಾಯ್ತು. ಸರಿ ನೋಡಿಯೇ ಬಿಡೋಣ ಎಂದು ಗಾಡಿಯನ್ನು ಹಿಂದಕ್ಕೆ ತಿರುಗಿಸಿಕೊಂಡು ಅವರ ಹತ್ತಿರ ಹೋಗಿ ನಮಸ್ಕಾರ ಮಿಸ್ ಹೇಗಿದ್ದೀರೀ? ಎಂದಾಗ ಹೆಲ್ಮೆಟ್ ಹಾಕಿದ್ದ ನನ್ನನ್ನು ಗುರುತಿಸಲಾಗದೇ ಒಂದು ಕ್ಷಣ ಬೆಚ್ಚಿ ಬಿದ್ದರೂ ಹೆಲ್ಮೆಟ್ ತೆಗೆದ ನಂತರ ಗುರುತಿಸಿ, ಓ ಶ್ರೀಕಂಠಾ.. ಏನೋ ಇಷ್ಟು ಹೊತ್ತಿನಲ್ಲೀ? ಎಂದು ಪ್ರೀತಿಯ ಕಕ್ಕಲುತೆಯನ್ನು ತೋರಿಸಿದ್ದರು.‌ ಅರೇ ನೀವೇನು ಮೇಡಂ ಇಷ್ಟು ಹೊತ್ತಿನಲ್ಲಿ‌ ಇಲ್ಲೀ.?  ಅದೂ ಒಬ್ಬರೇ ? ಎಂದಾಗ, ಅಲ್ಲೇ ನಮ್ಮ ಮತ್ತೊಬ್ಬ ಶಿಕ್ಷಕಿ ನಾಗರತ್ನ ಮೇಡಂ ಅವರ ಮನೆಗೆ ಬಂದು ಸುಮಾರು ಹೊತ್ತಿನಿಂದಲೂ ಬಸ್ಸಿಗೆ ಕಾಯುತ್ತಿದ್ದ ವಿಷಯ ತಿಳಿಸಿದರು. ಕೂಡಲೇ ಅವರನ್ನು ಬೈಕಿನಲ್ಲಿ ಕೂರಿಸಿಕೊಂಡು ಮನೆಯವರೆಗೂ ಬಿಟ್ಟು ಹೋಗುವ ಮಾರ್ಗದ ಮಧ್ಯದಲ್ಲಿ ಎಲ್ಲರ ಬಗ್ಗೆಯೂ ಮತ್ತದೇ ಪ್ರೀತಿಯಿಂದ ವಿಚಾರಿಸಿ ಎಲ್ಲರಿಗೂ‌ ಬಾಯಿ ತುಂಬ ಹರಸಿದ್ದರು.

ವಿಜ್ಞಾನದಲ್ಲಿ ಅತೀವವಾದ ಆಸಕ್ತಿ ಇದ್ದ ಕಾರಣ, ಆಕೆ ಮುಖ್ಯೋಪಾಧ್ಯಾಯಿನಿ ಆದ ನಂತರ ಮಕ್ಕಳಿಗೆ ಕೇವಲ ಪಾಠ ಹೇಳುವುದಕ್ಕಿಂತಲೂ ಪ್ರಾಥಮಿಕ ತರಗತಿಗಳಿಂದಲೇ ಪ್ರಾಯೋಗವಾಗಿ ತೋರಿಸಿದರೆ ಹೆಚ್ಚು ಪರಿಣಾಮಕಾರಿ ಎಂದು ತಮ್ಮ ಶಾಲೆಯಲ್ಲೇ ಅನೇಕ ವಿಜ್ಞಾನದ ಕಮ್ಮಟಗಳನ್ನು ಏರ್ಪಡಿಸಿ ತಮ್ಮ ಶಾಲೆಯ ಜೊತೆಗೆ ಸರ್ಕಾರೀ ಶಾಲೆಗಳನ್ನೂ ಒಳಗೊಂಡು ನೂರಾರು ಶಾಲೆಗಳ ವಿದ್ಯಾರ್ಥಿಗಳಿಗೆ ವಿಜ್ಞಾನದಲ್ಲಿ ಮತ್ತು ಪ್ರಯೋಗಗಳಲ್ಲಿ ಆಸಕ್ತಿ ಮೂಡಿಸಿ ಮುಂದೆ ಅವರ ಶಿಷ್ಯಂದಿರು ಹೆಸರಾಂತ ಡಾಕ್ಟರ್, ಇಂಜೀನಿಯರ್, ವಿಜ್ಞಾನಿಗಳಾಗಿ ದೇಶ ವಿದೇಶದಲ್ಲಿ ಭಾರತದ ಹೆಮ್ಮೆಯನ್ನು ಪಸರಿಸುತ್ತಿರುವ ಕೀರ್ತೀಯ ಶ್ರೇಯ ವಿಮಲ ಮಿಸ್ ಅವರಿಗೂ ಸಲ್ಲುತ್ತದೆ. ನಮ್ಮ ವಿಮಲ ಮಿಸ್ ಅವರ ಈ ಸಾಧನೆಗಳನ್ನು ತಾಲ್ಲೂಕ್ ಮಟ್ಟದಲ್ಲಿ ಗುರುತಿಸಿ ಅತ್ಯುತ್ತಮ ಶಿಕ್ಷಕಿ ಎಂಬ ಪ್ರಶಸ್ತಿಯನ್ನು ಕೊಟ್ಟಿರುವುದು ಗಮನಾರ್ಹವಾಗಿದೆ.

ಸೆಪ್ಟೆಂಬರ್ 5, ಭಾರತ ದೇಶದ ಮಾಜಿ ರಾಷ್ಟ್ರಪತಿಗಳು, ಹಿರಿಯ ವಿದ್ವಾಂಸರು, ತತ್ವಜ್ಞಾನಿಗಳು ಮತ್ತು ಭಾರತರತ್ನ ಪ್ರಶಸ್ತಿ ಪುರಸ್ಕೃತರಾಗಿದ್ದ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನ. ಅವರ ನೆನಪಿನಲ್ಲಿ ಸೆಪ್ಟೆಂಬರ್ 5ರಂದು ನಮ್ಮ ದೇಶದಲ್ಲಿ ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ. ಇಂತಹ ಶಿಕ್ಷಕರ ದಿನದಂದು ನಮಗೆ ಉತ್ತಮ ವಿದ್ಯೆಯ ಜೊತೆಗೆ ವಿನಯ ಮತ್ತು ವಿವೇಕವನ್ನು ಕಲಿಸಿಕೊಟ್ಟಿದ್ದಲ್ಲದೇ ಸಮಾಜದಲ್ಲಿ ಸ್ವಾವಲಂಭಿಗಳಾಗಿ ಮತ್ತು ಸ್ವಾಭಿಮಾನಿಗಳಾಗಿ ಬಾಳುವುದನ್ನು ಕಲಿಸಿಕೊಟ್ಟ ನಮ್ಮ ಮೆಚ್ಚಿನ ಶಿಕ್ಷಕಿಯಾದ ವಿಮಲ ಮಿಸ್ ಅವರಿಗೆ ಈ ಅಕ್ಷರಗಳ ಮೂಲಕ ನುಡಿ ನಮನಗಳನ್ನು ಸಲ್ಲಿಸಲು ಬಯಸುತ್ತೇನೆ.

WhatsApp Image 2021-09-05 at 12.22.27 AM

ನಮ್ಮ ಮನೆಯವರೆಲ್ಲಾ ಪ್ರಾಥಮಿಕ ಶಾಲೆಯನ್ನು ಮುಗಿಸಿ ಸುಮಾರು 35 ವರ್ಷಗಳೇ ಕಳೆದಿದ್ದರೂ ಇಂದಿಗೂ ನಮ್ಮ ಮತ್ತು ವಿಮಲ ಮಿಸ್ ಅವರೊಂದಿಗಿನ ಸಂಬಂಧ ಅಂದಿನಂತೆಯೇ ಇದೆ. ಅಗ್ಗಾಗ್ಗೆ ನಮ್ಮ ಕುಟುಂಬದ ಸದಸ್ಯರಲ್ಲೊಬ್ಬರು ಅವರನ್ನು ವಯಕ್ತಿಕವಾಗಿ ಭೇಟಿ ಮಾಡಿ ಅವರ ಆಶೀರ್ವಾದವನ್ನು ಪಡೆದುಕೊಂಡು ಬರುವುದನ್ನು ಮುಂದುವರೆಸಿಕೊಂಡು ಹೋಗಿದ್ದೇವೆ.

WhatsApp Image 2021-09-05 at 12.23.14 AM

ಶಿಕ್ಷಕಿಯಾಗಿ ವೃತ್ತಿಯನ್ನು ಆರಂಭಿಸಿ ಕಡೆಗೆ ಮುಖ್ಯೋಪಾಧ್ಯಾಯಿನಿಯಾಗಿ ನಿವೃತ್ತಿ ಹೊಂದಿ ಗಂಡ ಮಗಳು ಮತ್ತು ಮೊಮ್ಮಕ್ಕಳೊಂದಿಗೆ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದರೂ, ಪ್ರತಿ ಬಾರಿ ಅವರನ್ನು ಭೇಟಿ ಯಾದಾಗಲೂ ಹೇ.. ನಿಮ್ಮ ಬ್ಯಾಚಿನ ಅವನು ಸಿಕ್ಕಿದ್ದ, ಇವಳು ಸಿಕ್ಕಿದ್ದಳು. ಅವಳು ಹೇಗಾಗಿದ್ದಾಳೇ ಗೊತ್ತಾ? ಎಂದೋ ಇಲ್ಲವೇ, ಹೇ.. ಅವನಿದ್ದಲ್ಲಾ ಅವನು ಈಗ ಹೇಗಿದ್ದಾನೇ? ಎಂದು ಇಂದಿಗೂ ತಮ್ಮ ವಿದ್ಯಾರ್ಥಿಗಳ ಬಗ್ಗೆಯೇ ತುಡಿಯುವಂತಹ ಹೃದಯವಂತೆ ನಮ್ಮ ವಿಮಲ ಮಿಸ್. ಕೇವಲ ಶೈಕ್ಷಣಿಕವಾಗಿ ಕಲಿಸಿ‌ಕೊಡುವುದಲ್ಲದೇ, ಜೀವನದ ಮೌಲ್ಯಗಳನ್ನು ಕಲಿಸಿಕೊಟ್ಟಂತಹ ಅವರಂತಹ ಶಿಕ್ಷಕಿಯರ ಸಂಖ್ಯೆ ಆಗಣಿತವಾಗಲಿ ಮತ್ತು ಆ ಭಗವಂತ ನಮ್ಮ ವಿಮಲ ಮಿಸ್ ಅವರಿಗೆ ಆಯಸ್ಸು ಆರೋಗ್ಯ ನೀಡಿ ನೂರ್ಕಾಲ ಆನಂದಮಯವಾಗಿ ನಮ್ಮ ನಿಮ್ಮಂತಹ ಸಾವಿರಾರು ವಿದ್ಯಾರ್ಥಿಗಳಿಗೆ ಶ್ರೇಯೋಭಿಲಾಶಿಗಳಾಗಿರಲಿ ಎಂದು ಆಶಿಸೋಣ ಅಲ್ವೇ?

ಏನಂತೀರೀ?

ನಿಮ್ಮವನೇ ಉಮಾಸುತ

6 thoughts on “ವಿಮಲ ಮಿಸ್

  1. ಧನ್ಯವಾದಗಳು ಶ್ರೀಕಂಠ 🙏, ವಿಮಲಾ ಟೀಚರ್ ಬಗ್ಗೆ ಇಷ್ಟೊಂದು ವಿಷಯಗಳನ್ನು ತಿಳಿದ ಮೇಲೆ ಅವರ ಮೇಲಿನ ಗೌರವ ಇಮ್ಮಡಿಯಾಗಿದೆ. ೫ ರಿಂದ ೭ನೇ ತರಗತಿಯವರೆಗೆ ಮೂರು ವರ್ಷಗಳ ಕಾಲ ನಮ್ಮ ತರಗತಿಯ ಉಪಾಧ್ಯಾಯರಾಗಿ ನಮಗೆ ಕನ್ನಡ, ವಿಜ್ಞಾನ,ಹಿಂದಿ ಹಾಗು ಇಂಗ್ಲಿಷ್ ವಿಷಯಗಳನ್ನು ಬೋಧಿಸುತ್ತಿದ್ದರು. ಅವರ ಬೋಧನಾ ಕ್ರಮ, ನೇರ ಚುರುಕು ಸ್ವಭಾವ ಮತ್ತು ಪ್ರತಿ ವಿಷಯದಲ್ಲೂ ಅವರು ಬಯಸುತ್ತಿದ್ದ ಪರಿಪೂರ್ಣತೆ ನಮ್ಮನ್ನು ಉತ್ತೇಜನಗೊಳಿಸಿ ನಮ್ಮ ಪೂರ್ಣ ಸಾಮರ್ಥ್ಯ ಹೊರಹಾಕಲು ಪ್ರಚೋದಿಸುತಿತ್ತು. ಅವರು ಕಲಿಸಿದ ಶಿಸ್ತು ಮತ್ತು ಹಾಕಿ ಕೊಟ್ಟ ಭದ್ರ ಅಡಿಪಾಯ ನಮ್ಮನ್ನು ಸದಾ ಕಾಲ ಕಾಪಾಡಿದೆ ಹಾಗೂ ಮುಂದೆಯೂ ಕಾಯುವುದರಲ್ಲಿ ಸಂಶಯವಿಲ್ಲ. ಶಿಕ್ಷಕರ ದಿನಾಚರಣೆಯ ಶುಭಾಶಯಗಳನ್ನು💐💐 ಅವರಿಗೆ ಕೋರುತ್ತಾ ಅವರ ಪಾದಾರವಿಂದಗಳಿಗೆ ಶಿರ ಸಾಷ್ಟಾಂಗ ಪ್ರಣಾಮಗಳು 🙏🙏

    Liked by 1 person

  2. ನನಗೂ ಹಿಂದಿನ ನೆನಪುಗಳನ್ನು ನೆನಪಿಸಿ ಕೊಂಡು ಬಹಳ ಸಂತೋಷವಾಯಿತು.ಧನ್ಯವಾದಗಳು.

    Liked by 1 person

  3. ವಿಮಲಾ ಟೀಚರ್ ನಿಂದ ಕಲಿತು ಜೀವನ ರೂಪಿಸಿಕೊಂಡ ಹಲವರಲ್ಲಿ ನಾನು ಒಬ್ಬಳು ಎಂದು ಹೇಳಲು ಹೆಮ್ಮೆಯಾಗುತ್ತದೆ. ಶ್ರೀ ಗುರುಭ್ಯೋ ನಮ:.
    ಟೀಚರ್ ನ ಬಗ್ಗೆ ವಿವರವಾಗಿ ಬರೆದು ನೆನಪಿನಂಗಳಕ್ಕೆ ಕರೆದೊಯ್ದ ಸಹಪಾಠಿ ಶ್ರೀಕಂಠನಿಗೆ ಧನ್ಯವಾದಗಳು.

    Liked by 1 person

    1. ನಿಮ್ಮಿಬ್ಬಿರ ಹೆಸರೂ ವಿಮಲ ಎಂದೇ ಇರುವುದು ಕಾಕತಾಳೀಯವಾದರೂ ನಿಜಕ್ಕೂ ಬಾಲ್ಯದಲ್ಲಿ ವಿಮಲ‌ ಮಿಸ್ ಕಲಿಸಿದ ಪಾಠ ಮತ್ರು ಜೀವನದ ಮೌಲ್ಯಗಳ ಪ್ರಭಾವ ಇಂದಿಗೂ ನಮ್ಮೆಲ್ಲರಲ್ಲೂ ಅಚ್ಚಳಿಯದೆ ಉಳಿದಿದೆ ಎಂದರೆ ಅತಿಶಯವಲ್ಲ.

      ಏನಂತೀರೀ?

      Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s