ಸಾವಿರ ಹಾಡಿನ ಸರದಾರ ಬಾಳಪ್ಪ ಹುಕ್ಕೇರಿ

bal4

ಎಂಭತ್ತರ ದಶಕದಲ್ಲಿ ಬೆಂಗಳೂರಿನ ಬಿಇಎಲ್ ಕಾರ್ಖಾನೆಯ ಕಲಾಕ್ಷೇತ್ರದಲ್ಲಿ ಪ್ರತೀ ವರ್ಷ ಸಾಂಸ್ಕೃತಿಕ ಚಟುವಟಿಕೆಗಳ ಬೇಸಿಗೆ ಮೇಳವನ್ನು 10-12 ದಿನಗಳ ಕಾಲ ಆಯೋಜಿಸಿ ನಾಡಿನ ಪ್ರಖ್ಯಾತ ಕಲಾವಿದರುಗಳಿಂದ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಜನಪದಗೀತೆಗಳ ಜೊತೆಗೆ ಚಲನಚಿತ್ರ ಆರ್ಕೇಷ್ಟ್ರಾಗಳನ್ನು ಏರ್ಪಡಿಸುತ್ತಿದ್ದರು. ಆ ರೀತಿಯ ಬೇಸಿಗೆ ಮೇಳದಲ್ಲಿ ಅದೊಮ್ಮೆ ವಯಸ್ಸಾದ ಅಜಾನುಬಾಹು ವ್ಯಕ್ತಿ ತಲೆಗೆ ರುಮಾಲು ಕಟ್ಟಿಕೊಂಡು ಅಕ್ಕ ಪಕ್ಕದಲ್ಲಿ ಹಾರ್ಮೋನಿಯಂ ಮತ್ತು ತಬಲಗಳ ಪಕ್ಕವಾದ್ಯದೊಂದಿಗೆ ತಮ್ಮ ಕಂಚಿನ ಕಂಠದಲ್ಲಿ ಎತ್ತರದ ಧನಿಯಲ್ಲಿ ಹಾಡಲು ಶುರು ಮಾಡುತ್ತಿದ್ದಂತೆಯೇ ಗಜಿಬಿಜಿ ಎನ್ನುತ್ತಿದ್ದ ಇಡೀ ಸಭಾಂಗಣ ಒಮ್ಮಿಂದೊಮ್ಮೆಲ್ಲೆ ಗಪ್ ಚಿಪ್. ಪ್ರೇಕ್ಷಕರೆಲ್ಲರೂ ಬಾಲಪ್ಪನವರ ಗಾಯನ ಕೇಳುವುದರಲ್ಲಿಯೇ ತಲ್ಲೀನರಾಗಿಬಿಟ್ಟರು. ಅದರಲ್ಲೂ ರಾಷ್ಟ್ರಕವಿ ಕುವೆಂಪು ಅವರ ಬಾರಿಸು ಕನ್ನಡ ಡಿಂಡಿಮವಾ ಓ ಕರ್ನಾಟಕ ಹೃದಯ ಶಿವಾ ಹಾಡಿಗಂತೂ ಹುಚ್ಚೆದ್ದು ಕುಣಿದಾಡಿದ್ದಲ್ಲದೇ, ಒನ್ಸ್ ಮೋರ್ ಒನ್ಸ್ ಮೋರ್ ಎಂದು ಪುನಃ ಪುನಃ ಅದೇ ಹಾಡನ್ನು ಹಾಡಿಸಿ ಕೇಳಿ ಸಂತೋಷಟ್ಟಿದ್ದರು ಎಂದರೆ ಅವರ ಗಾಯನದ ಮಟ್ಟ ಹೇಗಿತ್ತು ಎಂಬುದು ಅರಿವಾಗುತ್ತದೆ. ಅಂತಹ ಮಹಾನ್ ಹಿರಿಯ ಗಾಯಕರಾದ ಶ್ರೀ ಬಾಳಪ್ಪ ಹುಕ್ಕೇರಿಯವರನ್ನು ನಮ್ಮ ಇಂದಿನ ಕನ್ನಡ ಕಲಿಗಳು ಮಾಲಿಕೆಯಲ್ಲಿ ತಿಳಿದುಕೊಳ್ಳೋಣ.

ಬಾಳಪ್ಪ ಹುಕ್ಕೇರಿಯವರು ಬೆಳಗಾವಿ ಜಿಲ್ಲೆಯ ಸವದತ್ತಿಯ ಮುರಗೋಡು ಎಂಬ ಪುಟ್ಟ ಹಳ್ಳಿಯಲ್ಲಿ ವೀರಭದ್ರಪ್ಪ ಮತ್ತು ಚೆನ್ನವೀರಮ್ಮ ದಂಪತಿಗಳ ಮಗನಾಗಿ ಆಗಸ್ಟ್ 21, 1911ರಲ್ಲಿ ಜನಿಸುತ್ತಾರೆ. ಸಂಗೀತ ಎಂಬುದು ಅವರ ವಂಶಪಾರಂಪರ್ಯವಾದ ಕಲೆಯಾಗಿದ್ದು ಅದಾಗಲೇ ಹೆಸರಾಂತ ಸಂಗೀತಗಾರ ಎಂಬ ಬಿರುದ್ದ ಪಡೆದಿದ್ದ ಅವರ ದೊಡ್ಡಪ್ಪನವರ ಹೆಸರನ್ನೇ ಆ ಪುಟ್ಟ ಕಂದನಿಗೂ ಇಡಲಾಯಿತು. ಬಾಳಪ್ಪನವರಿಗೆ ಗಾಯನ ಪ್ರತಿಭೆ ಹುಟ್ಟಿನಿಂದಲೇ ಬಂದಿದ್ದು ಅವರ ತಾಯಿಯ ಮಡಿಲಲ್ಲೇ ಜನಪದ ಗಾಯನದ ದೀಕ್ಷೆ ಪಡೆದವರು ಎಂದರೂ ತಪ್ಪಾಗದು. ದೊಡ್ಡಪ್ಪನವರಾದ ಬಾಳಪ್ಪನವರೇ ಇವರ ಸಂಗೀತ ಶಿಕ್ಷಣದ ಮೊದಲ ಗುರು ಆನಂತರ ಬಾಲ್ಯದಿಂದಲೇ ರಂಗಭೂಮಿಯತ್ತ ಆಕರ್ಷಿತರಾದ ಬಾಳಪ್ಪ ಅವರು ನಟ-ಗಾಯಕರಾಗಿ ಸ್ಥಳೀಯ ನಾಟಕ ಕಂಪನಿಗಳಲ್ಲಿ ಭಾಗವಹಿಸಲಾರಂಭಿಸಿದರು. ಅದರ ಜೊತೆಯಲ್ಲಿ ಶಿವಲಿಂಗಯ್ಯ ಗವಾಯಿ ಅವರಿಂದ ಹಿಂದೂಸ್ತಾನಿ ಸಂಗೀತವನ್ನೂ ಕಲಿಯಲಾರಂಭಿಸಿದರಾದರೂ ಅವರ ಒಲವೆಲ್ಲಾ ರಂಗಗೀತೆಗಳು, ಮರಾಠಿ ಅಭಂಗ್‌ಗಳು, ವಚನಗಳು ಮತ್ತು ಜಾನಪದ ಗೀತೆಗಳು ಮತ್ತು ಭಾವಗೀತೆಗಳನ್ನು ಹಾಡಲಾರಂಭಿಸಿದರು.

ಬಾಲಪ್ಪ ಹುಕ್ಕೇರಿಯವರು ಗಂಡು ಮೆಟ್ಟಿನ ನಾಡು ಉತ್ತರ ಕರ್ನಾಟಕದಲ್ಲಿ ಕನ್ನಡ ಭಾಷೆಯ ಜಾನಪದ ಗೀತೆಗಳು ಮತ್ತು ಭಾವಗೀತೆಗಳನ್ನು ಹಳ್ಳಿಹಳ್ಳಿಗಳಲ್ಲಿ ಹಾಡುತ್ತಾ ಬಹಳ ಕಡಿಮೆ ಸಮಯದಲ್ಲಿಯೇ ಪ್ರಖ್ಯಾತರಾದ ಗಾಯಕರಾಗಿ ಹೋದರು. ಹಳೇ ಮೈಸೂರು ಪ್ರಾಂತ್ಯದ ಪಿ. ಕಾಳಿಂಗರಾವ್ ಅವರಂತೆ ಉತ್ತರ ಕರ್ನಾಟಕದಲ್ಲಿ ಸುಗಮ ಸಂಗೀತವನ್ನು ಜನಪ್ರಿಯಗೊಳಿಸಿದ ಶ್ರೇಯ ಬಾಳಪ್ಪ ಹುಕ್ಕೇರಿಯವರಿಗೇ ಸಲ್ಲುತ್ತದೆ.

ಅವರ ಮೂವತ್ತರ ಹರೆಯದಲ್ಲಿ ಮಹಾತ್ಮಾ ಗಾಂಧಿಯವರ ನೇತೃತ್ವದಲ್ಲಿ ನಡೆಯುತ್ತಿದ್ದ ಸ್ವಾತಂತ್ರ ಚಳುವಳಿಯತ್ತ ಆಕರ್ಷಿತರಾದ ಬಾಳಪ್ಪನವರು 1932ರಲ್ಲಿ ತಮ್ಮ ಗೆಳೆಯರೊಡನೆ ಸೇರಿಕೊಂಡು ಮಹಾತ್ಮಾ ಸೇವಾ ಸಂಗೀತ ನಾಟಕ ಮಂಡಳಿ ಎಂಬ ನಾಟಕ ಕಂಪನಿಯನ್ನು ಆರಂಭಿಸಿ 1940ರವರೆಗೆ ಸುಮಾರು ಎಂಟು ವರ್ಷಗಳ ಕಾಲ ನಡೆಸಿದರು. ಗಾಯನ ಪ್ರಧಾನವಾಗಿರುತ್ತಿದ್ದ ಅವರ ಆ ನಾಟಕಗಳಲ್ಲಿ ಬಾಳಪ್ಪನವರು ಸ್ವಾತಂತ್ಯ್ರ ಚಳುವಳಿಯ ಸಂದೇಶಗಳನ್ನು ಕಂಚಿನ ಕಂಠದ ಮೂಲಕ ಸಾರುತ್ತಿದ್ದರು.

bal1

ನಾನಾ ಕಾರಣಗಳಿಂದ ನಾಟಕ ಕಂಪನಿ ಮುಚ್ಚಿ ಹೋದಾಗ, ಛಲಗಾರರಾದ ಬಾಳಪ್ಪನವರು 1941ರಿಂದ 45ರವರೆಗೆ ಕರ್ನಾಟಕ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಗಳಲ್ಲಿ ಲಾವಣಿ, ದೇಶಭಕ್ತಿಗೀತೆ, ಭಾವಗೀತೆಗಳನ್ನು ಹಾಡುತ್ತ ಜನರಿಗೆ ಸ್ವಾತಂತ್ಯ್ರದ ಅರಿವು ಹೆಚ್ಚಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸಿ ಜಪಪ್ರಿಯರಾಗಿದ್ದಲ್ಲದೇ, ಅನೇಕರನ್ನು. ಸ್ವಾತಂತ್ರ ಚಳುವಳಿಯಲ್ಲಿ ಧುಮುಕುವಂತೆ ಪ್ರೇರೇಪಿದ್ದನ್ನು ಕಂಡ ಅಂದಿನ ಬ್ರಿಟಿಷ್ ಸರ್ಕಾರ ಇವರನ್ನು ಬಂಧಿಸಿ ಆರು ತಿಂಗಳಗಳ ಕಾಲ ಸೆರೆಮನೆಗೆ ಅಟ್ಟಿತ್ತು. ಮುಂದೆ 1962ರಲ್ಲಿ ಭಾರತ ಮತ್ತು ಚೀನಾ ನಡುವಿನ ಯುದ್ಧದ ಸಮಯದಲ್ಲಿ ಬಾಳಪ್ಪನವರು ತಮ್ಮ ಹಾಡುಗಳಿಂದ ಜನರಲ್ಲಿ ಉತ್ಸಾಹ ತುಂಬಿದರಲ್ಲದೆ, ತಮಗೆ ಬಹುಮಾನವಾಗಿ ಬಂದಿದ್ದ ಬೆಳ್ಳಿ-ಬಂಗಾರದ ಪದಕಗಳನ್ನು ಸೈನಿಕರ ನಿಧಿಗೆ ದಾನಮಾಡಿ ತಮ್ಮ ದೇಶಭಕ್ತಿಯನ್ನು ಜಗ್ಗಜ್ಜಾಹೀರಾತು ಪಡಿಸುವ ಮೂಲಕ ಇತರೇ ಅನೇಕರಿಗೆ ಸ್ಪೂರ್ತಿದಾಯಕರಾಗಿದ್ದರು.

bal4

ಶಾಸ್ತ್ರೀಯ ಮತ್ತು ಜಾನಪದ ಸಂಪ್ರದಾಯ ಎರಡನ್ನೂ ಕರಗತ ಮಾಡಿಕೊಂಡಿದ್ದ ಬಾಳಪ್ಪನವರು, ತಮ್ಮ ಕಂಚಿನ ಕಂಠದ ಅಪರೂಪ ಮತ್ತು ಅನನ್ಯವಾದ ಶೈಲಿಯಿಂದಾಗಿ ಜನಪ್ರಿಯರಾಗಿದ್ದರು. ಕರ್ನಾಟಕ ಮತ್ತು ಮಹಾರಾಷ್ಟ್ರದ ಹಳ್ಳಿ ಹಳ್ಳಿಗಳಿಗೆ ಹೋಗಿ ಅಲ್ಲಿಯ ಜನಪದ ಗೀತೆಗಳನ್ನು ಸಂಗ್ರಹಿಸಿ ಅವುಗಳನ್ನು ತಮ್ಮ ಗಾಯನ ಕಛೇರಿಗಳಲ್ಲಿ ಹಾಡುವ ಮೂಲಕ ಆ ಹಾಡುಗಳನ್ನು ಜನಪ್ರಿಯಗೊಳಿಸುತ್ತಿದರು. ಕೇವಲ ತಬಲಾ ಮತ್ತು ಹಾರ್ಮೋನಿಯಂ ಪಕ್ಕವಾದ್ಯಗಳ ಜೊತೆ ಎಲ್ಲೇ ಕುಳಿತುಕೊಳ್ಳಲು ಜಾಗ ಮತ್ತು ಕೇಳಲು ಶ್ರೋತೃಗಳು ಇದ್ದರೆ ಸಾಕು ನಿರ್ಗಳವಾಗಿ ಬಾಳಪ್ಪನವರ ಸಂಗೀತ ಸುಧೆ ಹರಿಯುತ್ತಿತ್ತು.

bal3

ಬಹುತೇಕ ಹಾಡುಗಾರರು ಸಂಗೀತಕ್ಕೆ ಒತ್ತುಕೊಟ್ಟರೆ ಬಾಳಪ್ಪನವರು ಹಾಡಿನ ಭಾವಕ್ಕೆ ಬಹಳ ಒತ್ತು ನೀಡುವ ಮುಖಾಂತರ ಹಾಡಿನ ಪ್ರತೀ ಪ್ರತೀ ಪದಕ್ಕೂ ಅದಕ್ಕೆ ಸಲ್ಲಬೇಕಾದ ಹಾವ ಭಾವದ ಹೊತೆಗೆ ಏರಿಳಿತಗಳ ಮೂಲಕ ಜನರಿಗೆ ಪದ ಪದವೂ ತನ್ನ ಅರ್ಥ ವ್ಯಾಪ್ತಿಯನ್ನು ಹಬ್ಬಿಸುತ್ತಿದ್ದ ರೀತಿ ನಿಜಕ್ಕೂ ಅವಿಸ್ಮರಣೀಯವೇ ಸರಿ. ಓದಿ ಬ್ರಾಹ್ಮಣನಾಗು, ಕಾದಿ ಕ್ಷತ್ರಿಯನಾಗೂ, ಶೂದ್ರ ವೈಶ್ಯನೆ ಆಗು ದುಡಿದು ಗಳಿಸಿ, ಏನಾದರೂ ಆಗು ನಿನ್ನೊಲವಿನಂತಾಗು, ಏನಾದರೂ ಸರಿಯೇ ಮೊದಲು ಮಾನವನಾಗು ಎಂಬ ಹಾಡನ್ನು ಹಾಡುತ್ತಿದ್ದರೆ ಎದುರಿಗಿದ್ದ ಶ್ರೋತೃಗಳ ನರ ನಾಡಿಗಳು ಉಬ್ಬಿ ತಲ್ಲೀನರಾಗಿ ಹೋಗಿರುತ್ತಿದ್ದರು. ಹಳ್ಳಿಯಿಂದ ದಿಲ್ಲಿಯವರೆಗೂ ಇಡೀ ದೇಶಾದ್ಯಾಂತ ತಮ್ಮ ಗಾನ ಸುಧೆಯನ್ನು ಹರಿಸಿದ್ದರೂ ಒಂದು ಚೂರು ಹಮ್ಮು ಬಿಮ್ಮಿಲ್ಲದೇ ಸೀದಾ ಸಾದ ಸಾಧಾರಣ ಮನುಷ್ಯರಂತೆಯೇ ಇದ್ದ ಸರಳ ಜೀವಿಯಾಗಿದ್ದರು. ಸಾವಿರ ಹಾಡಿನ ಸರದಾರನೆಂದೇ ಖ್ಯಾತಿ ಪಡೆದ್ದರು.

bal5

ಉತ್ತರ ಕರ್ನಾಟಕದ ಪ್ರಸಿದ್ಧ ನೂರಾರು ಮಠಗಳ ಜಾತ್ರೆ, ಉತ್ಸವಗಳು ಅಥವಾ ಅಲ್ಲಿನ ಯಾವುದೇ ಪ್ರತಿಷ್ಠಿತ ಸಭೆ ಸಮಾರಂಭಗಳು ನಡೆದವೆಂದರೆ ಅಲ್ಲಿ ಖಡ್ಡಾಯವಾಗಿ ಹುಕ್ಕೇರಿ ಬಾಳಪ್ಪನವರ ಹಾಡುಗಾರಿಕೆ ಇರಲೇ ಬೇಕು ಎನ್ನುವಂತಾಗಿತ್ತು. ಅಕಸ್ಮಾತ್ ನಾನಾ ಕಾರಣಗಳಿಂದ ಬಾಳಪ್ಪನವರ ಕಛೇರಿ ಇಲ್ಲದಿದ್ದಲ್ಲೀ ಆ ಎಲ್ಲಾ ಸಭೆ ಸಮಾರಂಭಗಳು ಭಣ ಭಣವೆನ್ನತ ಬಿಕೋ ಎನ್ನುವಷ್ಟರ ಮಟ್ಟಿಗಾಗುತ್ತಿತ್ತು. ಆ ಆಜಾನುಬಾಹು ವ್ಯಕ್ತಿ ಬಿಳಿಯ ಧೋತರ, ಬಿಳಿಯ ಅಂಗಿ, ತಲೆಯ ಮೇಲೆ ಗಾಂಧಿ ಟೋಪಿ ಇಲ್ಲವೇ ಬಣ್ಣ ಬಣ್ಣದ ರುಮಾಲು, ಕೆಲವು ವಿಶೇಷ ಕಾರ್ಯಕ್ರಮಗಳಲ್ಲಿ ಧೋತರದ ಮೇಲೊಂದು ಕರಿಯ ಕೋಟು, ತಲೆಗೆ ಜರತಾರಿ ರುಮಾಲು ಕಟ್ಟಿದ ಸದಾ ಹಸನ್ಮುಖಿಯಾಗಿದ್ದರು ಬಾಳಪ್ಪನವರು.

ಗಾಯನದ ಜೊತೆ ಬಾಳಪ್ಪನವರು ಕೃಷಿ ಇಲಾಖೆಯಲ್ಲಿ ಕ್ಷೇತ್ರ ಕಾರ್ಯಕರ್ತರಾಗಿಯೂ ಕೆಲಸ ಮಾಡುತ್ತಾ, ಹಳ್ಳಿಯಿಂದ ಹಳ್ಳಿಗಳಿಗೆ ಹೋಗಿ ಕನ್ನಡದ ನವೋದಯ ಲೇಖಕರಾದ ದ.ರಾ. ಬೇಂದ್ರೆ, ಬೆಟಗೇರಿ ಕೃಷ್ಣಶರ್ಮ ಮತ್ತು ಆನಂದಕಂದ ಮುಂತಾದ ಕವಿಗಳ ಭಾವಗೀತೆಗಳಿಗೆ ತಮ್ಮದೇ ಶೈಲಿಯಲ್ಲಿ ರಾಗ ಸಂಯೋಜನೆ ಮಾಡಿ ಹಾಡುತ್ತಿದ್ದಿದ್ದಲ್ಲದೇ, ಅವುಗಳ ಮಧ್ಯೆ ಮಧ್ಯೆಯಲ್ಲಿ ಆಧುನಿಕ ಕೃಷಿ ವಿಧಾನಗಳು ಮತ್ತು ಕುಟುಂಬ ಯೋಜನೆಯ ಕುರಿತು ಹಾಡುಗಳನ್ನು ಹಾಡುವ ಮೂಲಕ ಜನಜಾಗೃತಿಯನ್ನು ಮಾಡುತ್ತಿದ್ದರು.

ಮೈಸೂರಿನ ಮಹಾರಾಜರ ದರ್ಬಾನಿಂದ ನಿಂದ ಹಿಡಿದು ದೇಶದ ಮೊದಲ ಪ್ರಧಾನಿಗಳಾಗಿದ್ದ ನೆಹರು, ಆವರ ಮಗಳು ಇಂದಿರಾಗಾಂಧಿ, ರಾಷ್ಟ್ರಪತಿಗಲಗಿದ್ದ ಝಾಕೀರ್ ಹುಸೇನ್, ರಾಜೇಂದ್ರ ಪ್ರಸಾದ್, ರಾಜ್ಯದ ಮಾಜಿ ಮುಖ್ಯಮಂತ್ರಿಗಳಾಗಿದ್ದ ನಿಜಲಿಂಗಪ್ಪ ಇನ್ನು ಹತ್ತು ಹಲವಾರು ಪ್ರತಿಷ್ಠಿತ ರಾಜ್ಯ ಮತ್ತು ರಾಷ್ಟ್ರನಾಯಕರುಗಳು ಬಾಳಪ್ಪನವರ ಶ್ರೋತೃಗಳ ಬಳಗದಲ್ಲಿದ್ದರು ಎನ್ನುವುದೇ ಹೆಮ್ಮೆಯ ಸಂಗತಿಯಾಗಿತ್ತು. 1955ರಲ್ಲಿ ದೆಹಲಿಯಲ್ಲಿ ನಡೆದ ಯುವಜನ ಮೇಳಕ್ಕೆ ಹೋಗಿದ್ದ ಬಾಳಪ್ಪನವರು ನಂತರ ಅಂದಿನ ಪ್ರಧಾನಿಗಳಗಿದ್ದ ಜವಹರಲಾಲ ನೆಹರು ಅವರ ಮನೆಯಲ್ಲಿ ಹಾಡುವ ಅವಕಾಶ ದೊರೆಕಿತ್ತು. ಬಾಳಪ್ಪನವರ ಗಾಯನಕ್ಕೆ ಮನಸೋತ ನೆಹರೂ ಆವರು ಶಹಬ್ಬಾಶ್ ಎಂದು ಬಾಳಪ್ಪನವರ ಬೆನ್ನು ತಟ್ಟಿದ್ದರಂತೆ. ಈ ಪ್ರಸಂಗವನ್ನು ಸಹಾ ಕಾಲವೂ ಸ್ಮರಿಸುತ್ತಿದ್ದ ಬಾಳಪ್ಪನವರು ನೆಹರು ಅವರು ಬೆನ್ನು ತಟ್ಟಿದ್ದ ಆ ಕೋಟು ಇನ್ನೂ ಒಗದಿಲ್ರಿ ನಾ ಎಂದು ಚಟಾಕಿ ಹಾರಿಸಿ ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸಿಬಿಡುತ್ತಿದ್ದರು ಭಾಳಪ್ಪನವರು. ಆಕಾಶವಾಣಿ, ದೂರದರ್ಶನಗಳಲ್ಲಿ ನಿಲಯದ ಕಲಾವಿದರಾಗಿದ್ದದ್ದರ ಜೊತೆಗೆ ಎಚ್.ಎಂ.ವಿ. ಸಂಸ್ಥೆಯ ಅನೇಕ ಧ್ವನಿ ಸುರಳಿಗಳಿಗೆ ಧ್ವನಿ ನೀಡಿದ ಹೆಗ್ಗಳಿಗೆ ಬಾಳಪ್ಪನವರದ್ದಾಗಿದೆ.

ಹುಣಸೇ ಮರಕ್ಕೆ ಮುಪ್ಪಾದರೆ ಹುಳಿಗೆ ಮುಪ್ಪೇ ಎನ್ನುವಂತೆ ಬಾಳಪ್ಪನವರಿಗೆ ವಯಸ್ಸಾಗುತ್ತಾ ಹೋದರೂ ಅವರ ಕಂಚಿನ ಕಂಠ ಇನ್ನೂ ಯುವಕರನ್ನು ನಾಚಿಸುವಂತಿದ್ದದ್ದನ್ನು ಗಮನಿಸಿದ ಹಿರಿಯ ಸಾಹಿತಿಗಳಾಗಿದ್ದ ಶ್ರೀ ಗೊ. ರು. ಚನ್ನಬಸಪ್ಪನವರು ಓಡಾಡಿ ಹಣ್ಣಾದವರು ಕೆಲವರು. ನಾಡಿನಾದ್ಯಂತ ಐವತ್ತು ವರ್ಷಗಳಿಂದ ಹಾಡಿದ ಬಾಳಪ್ಪ ಹುಕ್ಕೇರಿ ಅವರು ಮಾತ್ರ ಹಣ್ಣಾಗಿರಲಿಲ್ಲ. ತಮ್ಮ ಕಡೆಯುಸಿರಿನ ತನಕ ಅವರಲ್ಲಿತ್ತು ಇಪ್ಪತ್ತರ ಹರೆಯದ ಉತ್ಸಾಹ. ಮೋಜಿನ ಮಾತು, ನಗೆಯ ನುಡಿ! ಬಾಳಪ್ಪ ಓರ್ವ ಅಪರೂಪದ ಕಲಾವಿದ . ಮತ್ತೊಬ್ಬ ಬಾಳಪ್ಪನವರನ್ನು ಮುಂದೆ ಕಾಣುತ್ತೇವೆಂದು ಹೇಳಲಾಗದು ಎಂದು ಹೇಳಿದ್ದದ್ದು ಗಮನಾರ್ಹವಾಗಿತ್ತು.

ಹಾಡನ್ನೇ ತಮ್ಮ ಉಸಿರಾಗಿಸಿಕೊಂಡಿದ್ದ ಬಾಳಪ್ಪನವರಿಗೆ ಸಭಾಭೂಷಣ, ಜಾನಪದ ಜಾದೂಗಾರ, ಸಾವಿರ ಹಾಡಿನ ಸರದಾರ, ಜನಪದ ಸಾಹಿತ್ಯಾಚಾರ್ಯ, ಜನಪದ ಕಲಾನಿಧಿ, ಜನಪದ ಜ್ಯೋತಿ, ಬೆಲ್ಲದ ಮಾತಿನ ಕಂಚಿನ ಕಂಠದ ಬಾಳಪ್ಪ, ಹೊಂಗಲನಾಡಿನ ಹೆಜ್ಜೇನು, ಜೇನುದನಿಯ ಬಾಳಪ್ಪ ಹುಕ್ಕೇರಿ, ಸಂಗೀತಲೋಕದ ಧ್ರುವತಾರೆ-ಹೀಗೆ ನಾನಾ ಬಗೆಯ ಬಿರುದುಗಳು ಲಭಿಸಿದ್ದರೆ, ಅವರ ಸಂಗಿತದ ಸಾರ್ಥಕ ಸೇವೆಗೆಯನ್ನು ಮನ್ನಿಸಿ ಸರಕಾರದಿಂದ ನಾನಾ ಬಗೆಯ ಪ್ರಶಸ್ತಿ ಗೌರವಗಳು ಸಲ್ಲಿಕೆಯಾಗಿದೆ.

  • 1970ರಲ್ಲಿ ರಾಜ್ಯ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ
  • 1980-81ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ
  • 1982ರಲ್ಲಿ ದಕ್ಷಿಣ ಹಿಂದೂಸ್ಥಾನದ ಸಾಂಸ್ಕೃತಿಕ ಸಂಸ್ಥೆ (ತಿರುವಾಂಕೂರು-ಕೇರಳ) ಪ್ರಶಸ್ತಿ
  • 1986 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ
  • 1989 ರಲ್ಲಿ ಮಧ್ಯಪ್ರದೇಶ ಸರ್ಕಾರದ ತುಳಸಿ ಸಮ್ಮಾನ ಪ್ರಶಸ್ತಿಯೂ ಸೇರಿದಂತೆ ಹತ್ತು ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ.

ಮುದ್ದೇಬಿಹಾಳದ ಶ್ರೀ ವೀರಪ್ಪ ಹೊನವಾಡ ಇವರ ಪುತ್ರಿ ಶಾಂತಮ್ಮನವರನ್ನು ತಮ್ಮ ಬಾಳಸಂಗಾತಿಯನ್ನಾಗಿ ಮಾಡಿಕೊಂಡಿದ್ದ ಬಾಳಪ್ಪನವರಿಗೆ ಆರು ಮಕ್ಕಳು ಮತ್ತು ಹತ್ತಾರು ಮೊಮ್ಮಕ್ಕಳೊಂದಿಗೆ ಕಲಾಸೇವೆಯನ್ನು ಮಾಡಿಕೊಂಡಿದ್ದರು. ತಮ್ಮ 83ರ ಇಳಿವಯಸ್ಸಿನಲ್ಲಿಯೂ ಸಹ ಎಂದಿನ ಉತ್ಸಾಹದಿಂದಲೇ ತಮ್ಮ ಸ್ವಂತ ಊರಾದ ಮುರಗೋಡಿನ ದುರದುಂಡೇಶ್ವರ ಮಠದಲ್ಲಿ ಗಾಯನ ಕಾರ್ಯಕ್ರಮ ನೀಡಿದ ಎರಡು ದಿನಗಳ ನಂತರ 1992 ನವೆಂಬರ್ 13 ರಂದು ವಯೋಸಜವಾಗಿ ನಿಧನರಾದರು.

ತಮ್ಮ ಸರಳ, ಪ್ರಾಮಾಣಿಕ ವ್ಯಕ್ತಿತ್ವ, ನೇರ ನಡೆ, ನುಡಿಗಳಿಂದ ಹಾಗೂ ಎಲ್ಲರಲ್ಲಿಯೂ ಅಂತಃಕರಣ ತೋರುವ ಮನೋಭಾವದ ಜೊತೆಗೆ ಅಪಾರವಾದ ದೇಶಪ್ರೇಮವನ್ನು ಹೊಂದಿದ್ದ ಅಪರೂಪದ ಗಾನಗಾರುಡಿಗ, ರಂಗಕರ್ಮಿಯಾಗಿಯೂ ಜನಪ್ರಿಯರಾಗಿದ್ದ ಜನರಿಂದ ಪ್ರೀತಿಯಿಂದಲೇ ಜಾನಪದ ಸರದಾರ ಎಂದು ಕರೆಸಿಕೊಳ್ಳುತ್ತಿದ್ದ ಅಪರೂಪದ ಮತ್ತು ಅನುರೂಪದ ಕಲಾವಿದರಾಗಿದ್ದ ಬಾಳಪ್ಪ ಹುಕ್ಕೇರಿ ಯವರು ಖಂಡಿತವಾಗಿಯೂ ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s