ರವಿ ಕಾಣದ್ದನ್ನು ಕವಿ ಕಂಡ ಎನ್ನುವ ಮಾತು ಎಲ್ಲರಿಗೂ ತಿಳಿದೇ ಇದೆ. ಆದೇ ಕವಿ ಸಾಲು ಸಾಲುಗಳಲ್ಲಿ ಹೇಳುವುದನ್ನು ಕೆಲವೇ ಕೆಲವು ಸಾಲುಗಳಲ್ಲಿ ಹನಿಗವಿ ಹೇಳುತ್ತಾನೆ ಎಂದು ಹೇಳಿದರೂ ತಪ್ಪಾಗದು ಕನ್ನಡದಲ್ಲಿ60-70ರ ದಶಕದಲ್ಲಿ ದಿನಕರದೇಸಾಯಿಗಳು ಚುಟುಕು ಕವಿ ಎಂದು ಹೆಸರಾಗಿದ್ದರೆ, ಸದ್ಯದಲ್ಲಿ ಚುಟುಕು ಚಕ್ರವರ್ತಿ, ಹನಿಗವನಗಳ ರಾಜ ಎಂಬೆಲ್ಲಾ ಕೀರ್ತಿ ಖಂಡಿತವಾಗಿಯೂ ಶ್ರೀ ಎಚ್. ಡುಂಡಿರಾಜ್ ಅವರಿಗೇ ಸಲ್ಲುತ್ತದೆ ಎಂದರೆ ಅತಿಶಯವೇನಲ್ಲ. ಪದ್ಯ ಹಾಗೂ ಗದ್ಯ ಎರಡರಲ್ಲೂ ಗಣನೀಯ ಕೃಷಿಮಾಡಿರುವ ಸಮಕಾಲೀನ ಕನ್ನಡ ಸಾಹಿತ್ಯದ ಪ್ರಮುಖ ಲೇಖಕರಲ್ಲಿ ಒಬ್ಬರಾಗಿರುವ ಎಚ್. ಡುಂಡಿರಾಜ್ ಅವರ ವ್ಯಕ್ತಿ ಮತ್ತು ವ್ಯಕ್ತಿತ್ವದ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.
ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಹಟ್ಟಿಕುದ್ರು ಎಂಬ ಸಣ್ಣ ಗ್ರಾಮದ ವೆಂಕಟರಮಣಭಟ್ ಮತ್ತು ರಾಧಮ್ಮ ಎಂಬ ದಂಪತಿಗಳಿಗೆ 18ನೇ ಆಗಸ್ಟ್, 1956 ರಂದು ಜನಿಸಿದ ಡುಂಡಿರಾಜರ ಮನೆಯಲ್ಲಿ ಆರ್ಥಿಕವಾಗಿ ಬಡತನವಿದ್ದರೂ, ಸಾಂಸ್ಕೃತಿಕವಾಗಿ ಶ್ರ್ರೀಮಂತರಾಗಿದ್ದಂತಹ ಕುಟಂಬ. ಆಗೆಲ್ಲಾ ಇಂದಿನಂತೆ ರೇಡಿಯೋ ಟಿವಿಗಳು ಇಲ್ಲದಿದ್ದಂತಹ ಕಾಲದಲ್ಲಿ ಮನೆಯ ಹತ್ತಿರವೇ ಇದ್ದ ದೇವಸ್ಥಾನದಲ್ಲಿ ಪ್ರತಿ ದಿನ ಸಂಜೆ ನೆಡೆಯುತ್ತಿದ್ದ ಭಜನೆಯಲ್ಲಿ ಪಾಲ್ಗೊಳ್ಳುತ್ತಿದ್ದಾಗಲೇ ಅವರಿಗೆ ಬರಯಲು ಪ್ರೇರೇಪಣೆಯಾಗಿ, ತಮ್ಮ 5ನೇ ತರಗತಿಯ ವೇಳೆಗೆ ತಮ್ಮ . ಗೆಳೆಯರೊಂದಿಗೆ ಸೇರಿ ಕೈಬರಹದ ಪತ್ರಿಕೆಯೊಂದನ್ನು ಆರಂಭಿಸಿ ಅದನ್ನು ಅವರು ಆಟವಾಡುವ ಅಂಗಡಿಯಲ್ಲಿ ಮಾರಾಟಮಾಡುತ್ತಿದ್ದರಂತೆ. ಡುಂಡಿರಾಜರ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದ ಶ್ರೀ ಸೀತಾರಾಮ ಎನ್ನುವರು ಪಠ್ಯಪುಸ್ತಕಗಳಲ್ಲದೇ ಇತರೇ ಪತ್ರಿಕೆಗಳಲ್ಲಿ ಪ್ರಕಟವಾಗಿರುತ್ತಿದ್ದ ಕಥೆ ಕವನಗಳನ್ನು ತಂದು ಮಕ್ಕಳ ಮುಂದೆ ಓದಿ ಅವರೆಲ್ಲರಿಗೂ ಈ ರೀತಿಯಾಗಿ ಓದುವುದನ್ನು ಪ್ರೋತ್ಸಾಹಿಸುವ ಪರಿಪಾಠ ಬೆಳೆಸಿದ್ದದ್ದು ಡುಂಡಿರಾಜರ ಮೇಲೆ ಭಾರೀ ಪ್ರಭಾವವನ್ನು ಬೀರಿತ್ತು.
ಮುಂದೆ ಬಸ್ರೂರು ಹೈಸ್ಕೂಲಿಗೆ ಹೋದಾಗಲೂ ಅಲ್ಲಿಯೂ ಇದ್ದ ಕೈಬರಹದ ಪತ್ರಿಕೆಯಲ್ಲಿ ಡುಂಡಿರಾಜರ ಬರವಣಿಗೆ ಮುಂದುವರೆದು ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ವಾರಪತ್ರಿಕೆಗಳಾದ ಉದಯವಾಣಿ, ಸುಧಾ ಪತ್ರಿಕೆಯ ಮಕ್ಕಳ ವಿಭಾಗಗಳಿಗೂ ತಮ್ಮ ಬರಹವನ್ನು ಕಳುಹಿಸಿಕೊಡುತ್ತಿದ್ದರು. ಅವರ ಮನೆಯಲ್ಲಿ ಆ ಪತ್ರಿಕೆಗಳು ಬರುತ್ತಿರಲಿಲ್ಲವಾದ್ದರಿಂದ ಅದೆಷ್ಟೋ ಬಾರಿ ಯಾರೋ ಅವರ ಬರಹಗಳನ್ನು ಓದಿ ಇವರಿಗೆ ತಿಳಿಸಿದಾಗಲೇ ವಾರಪತ್ರಿಕೆಯಲ್ಲಿ ಪ್ರಕಟವಾಗಿರುವ ವಿಷಯ ತಿಳಿದು ಅವರಿಗೆ ಸಂತೋಷವಾಗುತ್ತಿತ್ತು.
ಮನೆಯೇ ಮೊದಲ ಪಾಠ ಶಾಲೆ, ಪೋಷಕರೇ ಮೊದಲ ಗುರುಗಳು ಎಂಬ ಹಾಗೆ, ದೇವಸ್ಥಾನದ ಭಜನೆಯೊಂದಿಗೆ ಅವರ ತಂದೆಯವರು ಪ್ರತಿದಿನವೂ ಊರಿನವರೆಲ್ಲರನ್ನು ಮನೆಯಲ್ಲಿ ಸೇರಿಸಿಕೊಂಡು ಹೇಳುತ್ತಿದ್ದ ರಾಮಾಯಣ, ಮಹಾಭಾರತವೂ ಅವರ ಸಾಹಿತ್ಯಾಸಕ್ತಿಯನ್ನು ಹೆಚ್ಚಿಸಲು ಕಾರಣವಾಗಿತ್ತು. ಎಸ್.ಎಸ್.ಎಲ್.ಸಿ ಯಲ್ಲಿ ಅವರ ಶಾಲೆಗೇ ಅತಿಹೆಚ್ಚಿನ ಅಂಕಗಳಿಸಿ ತೇರ್ಗಡೆಯಾಗಿ ಪಿ.ಯು.ಸಿ. ಶಿಕ್ಷಣಕ್ಕಾಗಿ ಬೆಂಗಳೂರಿನ ಪ್ರತಿಷ್ಠಿತ ವಿಜಯ ಕಾಲೇಜಿಗೆ ಸೇರಿ ಅವರ ಅಣ್ಣ ಶಿವರಾಮ ಭಟ್ ಅವರ ಮನೆಯಲ್ಲಿ ಉಳಿದುಕೊಂಡರು. ಅವರ ಅಣ್ಣನ ಮನೆಗೆ ಅಡಿಗರು, ನಾಡಿಗರು, ನಿಸಾರ್ ಮುಂತಾದವರು ಬಂದು ಹೋಗುತ್ತಿದ್ದ ಕಾರಣ ಅವರೆಲ್ಲರ ಒಡನಾಟದಿಂದ ಅಲ್ಲೊಂದು ಉತ್ತಮ ಸಾಹಿತ್ಯಕ ವಾತಾವರಣ ಬೆಳೆದು ದುಂಡಿರಾಜರ ಸಾಹಿತ್ಯಕ್ಕೆ ಮತ್ತಷ್ಟು ಪ್ರೇರಣೆಯನ್ನು ನೀಡಿತು. ಪಿಯುಸಿ ಮುಗಿದ ನಂತರ ಇಷ್ಟವಿಲ್ಲದಿದ್ದರೂ ನಂತರ 1972-78ರಲ್ಲಿ ಹೆಬ್ಬಾಳದ ಗಾಂಧಿ ಕೃಷಿ ವಿಶ್ವವಿದ್ಯಾನಿಲಯ (GKVK) ಬಿ.ಎಸ್ಸಿ(ಕೃಷಿ) ಪದವಿಯನ್ನು ಪಡೆದು, 1978-80ರಲ್ಲಿ ಎಂ. ಎಸ್ಸಿ ಪದವಿಗಾಗಿ ಧಾರವಾಡದ ಕೃಷಿ ಕಾಲೇಜಿಗೆ ಸೇರಿಕೊಂಡಿದ್ದಾಗಲೂ ನಾಟಕವೊಂದನ್ನು ಬರೆದು ಅದನ್ನು ನಾ. ದಾಮೋದರ ಶೆಟ್ಟಿ ಅವರ ತಂಡ ಪ್ರದರ್ಶಸಿದಾಗ ಅದಲ್ಲಿ ದುಂಡಿರಾಜರು ನಟಿಸಿದ್ದರು. ಸಾಹಿತ್ಯದ ಕೃಷಿಯೊಂದಿಗೆ ಓದಿನಲ್ಲೂ ಅತ್ಯಂತ ಚುರುಕಾಗಿದ್ದ ಡುಂಡಿರಾಜರು, ಕಾಲೇಜಿಗೆ ಅತ್ಯಧಿಕ ಅಂಕ ಗಳಿಸಿ ಸ್ವರ್ಣ ಪದಕದೊಂದಿಗೆ ಎಂ.ಎಸ್ಸಿ (ಕೃಷಿ) ಪೂರೈಸಿದರು.
ಆರಂಭದಲ್ಲಿ ಕೆಲ ಕಾಲ ಉಪನ್ಯಾಸಕಾರನಾಗಿ ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಕೆಲಸಕ್ಕೆ ಸೇರಿದರಾದರೂ, ಕಾರ್ಪೋರೇಶನ್ ಬ್ಯಾಂಕ್ನಲ್ಲಿ ಕೃಷಿ ಅಧಿಕಾರಿಯಾಗಿ ವೃತ್ತಿ ಆರಂಭಿಸಿ ಮಂಗಳೂರು, ಉಡುಪಿ, ಕಾರ್ಕಳ, ಬ್ರಹ್ಮಾವರ, ಬೆಳಗಾವಿ, ನಾಸಿಕ್, ಮುಂಬೈ ಹಾಗೂ ಬೆಂಗಳೂರಿನಲ್ಲಿ ಹೀಗೆ ಸರಿ ಸುಮಾರು 36 ವರ್ಷಗಳ ಕಾಲ ಬ್ಯಾಂಕಿನಲ್ಲಿ ವಿವಿಧ ಹುದ್ದೆಗಳ ನಿರ್ವಹಿಸಿ, 2018ರಲ್ಲಿ ಸಹಾಯಕ ಪ್ರಧಾನ ವ್ಯವಸ್ಥಾಪಕರಾಗಿ ನಿವೃತ್ತಿ ಹೊಂದಿದ್ದಾರೆ.
ಹೀಗೆ ಕೆಲಸದ ನಡುವೆಯೂ ತಮ್ಮ ಸಾಹಿತ್ಯ ಕೃಷಿಯನ್ನು ಮುಂದುವರೆಸುತ್ತಲೇ, ಅವರ ಅನೇಕ ಬರಹಗಳು ರಾಜ್ಯದ ವಿವಿಧ ಪತ್ರಿಕೆಗಳಲ್ಲಿ ಅವುಗಳ ವಿಶೇಷಾಂಕಗಳಲ್ಲಿ ಪ್ರಕಟವಾದರೆ ಅವರು ನಾಟಕಗಳು ಆಕಾಶವಾಣಿ ಮತ್ತು ದೂರದರ್ಶನದಲ್ಲಿಯೂ ಪ್ರಸಾರವಾಗಿವೆ ಅದೆಷ್ಟೋ ಬಾರಿ ಅವರ ನಾಟಕಗಳಲ್ಲಿ ಅವರೇ ಅಭಿನಯಿಸಿದ ಉದಾರಣೆಗಳು ಇವೆ. ಆರಂಭದಲ್ಲಿ ಎಲ್ಲರಂತೆ ಸಾಮಾನ್ಯ ರೀತಿಯಲ್ಲಿಯೇ ಕವಿತೆಗಳನ್ನು ಬರೆಯುತ್ತಿದ್ದ ಡುಂಡಿರಾಜರು ದಿನಕರ ದೇಸಾಯಿಯವರ ಶೈಲಿಯಿಂದ ಪ್ರೇರಿತರಾಗಿ 1985ರಿಂದ ದೇಸಾಯಿಯವರ ಶೈಲ್ಲಿಯೇ ಹನಿಗವನಗಳನ್ನು ಬರೆಯಲು ಆರಂಭಿಸುತ್ತಾರೆ. ಆನಂತರ ಸುಬ್ರಾಯ ಚೊಕ್ಕಾಡಿಯವರ ಸಲಹೆಯಂತೆ ಇತರರ ಶೈಲಿಯನ್ನು ಅನುಸರಿಸುವುದನ್ನು ಬಿಟ್ಟು ತಮ್ಮದೇ ಶೈಲಿಯನ್ನು ರೂಢಿಸಿಕೊಂಡ ನಂತರ ಕೆಲವೇ ದಿನಗಳಲ್ಲಿ ಜನಪ್ರಿಯ ಚುಟುಕು ಕವಿಗಳಾಗುತ್ತಾರೆ.
ಯಾವುದೇ ವಿಷಯವನ್ನು ಪ್ರಸ್ತುತಪಡಿಸುವಾಗ ಅದನ್ನು ಗಂಭೀರವಾಗಿ ಹೇಳುವುದಕ್ಕಿಂತಲೂ ಹಾಸ್ಯದ ಮೂಲಕ ಹೇಳಿದರೆ ಅದು ಹೆಚ್ಚು ಜನರನ್ನು ತಲುಪುತ್ತದೆ ಎಂಬ ಕಾರಣಕ್ಕಾಗಿ ಅವರು ನಗೆಹನಿಗಳನ್ನು ಬರೆಯಲು ಆರಂಭಿಸಿದರು. ಹಾಸ್ಯವನ್ನು ಇನ್ನಷ್ಟು ಜನರಿಗೆ ತಲುಪಿಸುವುದು ಎಂದು ಯೋಚಿಸಿ, ಲಘು ಧಾಟಿಯ ಪ್ರಬಂಧಗಳನ್ನು ಜನ ಓದುತ್ತಾರೆ. ಹಾಗೆಯೇ ಅದರ ಜೊತೆ ಕೆಲವು ಪಂಚ್ ಗಳನ್ನು ಸೇರಿಸಿ ಸರಿಯಾದ ಒತ್ತು ಕೊಟ್ಟು ಓದಿದರೆ ಅದರ ಸ್ವಾರಸ್ಯ ಜನರಿಗೆ ಇನ್ನೂ ಹೆಚ್ಚಾದೀತು ಎಂಬ ಯೋಚನೆಯಿಂದ ಈ ನೂತನ ನಗೆ ಹನಿಯ ಪ್ರಯೋಗ ಮಾಡಿ ಅದರಲ್ಲೂ ಸಫಲತೆಯನ್ನು ಕಂಡು ಕೊಂಡಿದ್ದಾರೆ. ಕೆಲವೊಮ್ಮೆ ಅವರ ಹಾಸ್ಯ ಅಪಹಾಸ್ಯಕ್ಕೀಡಾಗುತ್ತದೆ ಎಂಬ ಅರಿವೂ ಸಹಾ ಅವರಿಗಿದೆ.
ಇವಲ್ಲದರ ನಡುವೆಯೇ ಭಾರತಿ ಎಂಬುವರೊಡನೆ ದಾಂಪತ್ಯಕ್ಕೆ ಕಾಲಿಟ್ಟು ಸಹಜಾ ಮತ್ತು ಸಾರ್ಥಕ್ ಎಂಬ ಇಬ್ಬರು ಮಕ್ಕಳಿದ್ದು ಅವರಿರೆಲ್ಲರಿಗೂ ಮದುವೆಯಾಗಿ ಅಳಿಯ ಮತ್ತು ಸೊಸೆಯೂ ಸಹಾ ಅವರ ಕುಟುಂಬಕ್ಕೆ ಜೋಡಣೆಯಾಗಿದ್ದಾರೆ. ಕಾರ್ಪೋರೇಷನ್ ಬ್ಯಾಂಕಿನಿಂದ ನಿವೃತರಾಗಿ ಮಂಗಳೂರಿನಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರೂ ಜೊತೆ ಜೊತೆಯಲ್ಲಿಯೇ ಪ್ರಸಕ್ತ ವಿಷಯಗಳಿಗೆ ಅನುಗುಣವಾಗಿ ತಮ್ಮ ಪಂಚ್ ಗಳನ್ನು ಹರಿದು ಬಿಡುತ್ತಲೇ ಇದ್ದಾರೆ.
ಹನಿಗವನಗಳ ಕೊತೆ ಅಂಕಣಕಾರರಾಗಿಯೂ ಪ್ರಸಿದ್ಧರಾಗಿರುವ ಡುಂಡಿರಾಜ್ ವಿಜಯಕರ್ನಾಟಕ, ಪ್ರಜಾವಾಣಿ, ಕಸ್ತೂರಿ, ತುಷಾರ, ವಿಜಯವಾಣಿ ಹಾಗೂ ಉದಯವಾಣಿ ಪತ್ರಿಕೆಗಳಿಗೆ ಅನೇಕ ಅಂಕಣಗಳನ್ನು ಬರೆದಿದ್ದಾರೆ ಮತ್ತು ಬರೆಯುತ್ತಲೇ ಇದ್ದಾರೆ. 2011ರಿಂದ ಆರಂಭಿಸಿ ಇಂದಿನವರೆಗೂ ಪ್ರತಿ ದಿನವೂ ಉದಯವಾಣಿ ಪತ್ರಿಕೆಯಲ್ಲಿ ‘ಹನಿದನಿ’ಎಂಬ ದೈನಿಕ ಅಂಕಣದಲ್ಲಿ ನಿರಂತರವಾಗಿ ಹೊಸ ಹನಿಗವನ ಬರೆಯುತ್ತಲೇ ಬಂದಿರುವುದು ಅವರ ಹೆಗ್ಗಳಿಕೆಯಾಗಿದೆ.
ಬರವಣಿಗೆಯೊಂದಿಗೆ ಹಾಸ್ಯ ಭಾಷಣಕಾರರಾಗಿಯೂ ಜನಪ್ರಿಯತೆ ಹೊಂದಿರುವ ಡುಂಡಿರಾಜ್ ಅವರು ಕೇವಲ ಕರ್ನಾಟಕವಲ್ಲದೇ ದೂರದ ದೆಹಲಿ, ಮುಂಬೈ, ಚೆನ್ನೈ, ಅಮೆರಿಕಾ, ಇಂಗ್ಲೇಂಡ್, ಸಿಂಗಾಪೂರ್, ದುಬೈ, ಕತಾರ್ ಹಾಗು ಬಹರೈನ್ ಗಳಲ್ಲಿಯೂ ಹಲವಾರು ಯಶಸ್ವಿ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ಇದುವರೆಗೂ ಡುಂಡಿರಾಜ್ ಅವರ 60 ಕೃತಿಗಳು ಪ್ರಕಟಗೊಂಡಿದ್ದು ಅವುಗಳಲ್ಲಿ 9 ಕವನ ಸಂಕಲನಗಳು, 12 ಹನಿಗವನಗಳ ಸಂಗ್ರಹ, 10 ನಾಟಕ ಕೃತಿಗಳು, 10 ನಗೆ ಬರಹ, ಲಲಿತ ಪ್ರಬಂಧ ಮತ್ತು ಅಂಕಣ ಬರಹಗಳ ಸಂಗ್ರಹ ಒಂದು ಸಂಪಾದಿತ ಕೃತಿಯೂ ಸೇರಿದೆ. ಒಟ್ಟು 4 ಧ್ವನಿ ಸುರುಳಿಗಳೂ ಬಿಡುಗಡೆಯಾಗಿವೆ. ನಕ್ಕಳಾ ರಾಜಕುಮಾರಿ, ಕೋತಿಗಳು ಸಾರ್ ಕೋತಿಗಳು, ನಿಂಬೆಹುಳಿ ಹಾಗೂ ಹಾರುವ ಹಂಸಗಳು ಇನ್ನು ಮುಂತಾದ ಚಲನಚಿತ್ರಗಳಿಗೆ ಹಾಡುಗಳನ್ನು ರಚಿಸುವ ಮೂಲಕ ಚಿತ್ರಗೀತೆಗಳ ರಚನೆಕಾರರಾಗಿಯೂ ಪ್ರಸಿದ್ಧಿಯನ್ನು ಪಡೆದಿದ್ದಾರೆ.
ಇಷ್ಟೆಲ್ಲಾ ಸಾಧನೆಗಳನ್ನು ಮಾಡಿರುವ ಡುಂಡಿರಾಜ್ ಅವರಿಗೆ ಹತ್ತು ಹಲವಾರು ಪ್ರಶಸ್ತಿ, ಗೌರವಗಳು ದೊರೆತಿವೆ ಅವುಗಳಲ್ಲಿ ಪ್ರಮುಖವಾದವುಗಳು ಹೀಗಿವೆ.
- ಕರ್ನಾಟಕ ನಾಟಕ ಅಕಾಡೆಮಿಯ ಗೌರವ ಪ್ರಶಸ್ತಿ
- ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ
- ಕಡೆಂಗೋಡ್ಲು ಕಾವ್ಯ ಪ್ರಶಸ್ತಿ
- ಮುದ್ದಣ ಕಾವ್ಯ ರಾಜ್ಯಪ್ರಶಸ್ತಿ
- ಚುಟುಕು ಸಾರ್ವಭೌಮ ಪ್ರಶಸ್ತಿ
- ಚುಟುಕು ಚಕ್ರವರ್ತಿ ಪ್ರಶಸ್ತಿ
- ಚುಟುಕು ರತ್ನ ಪ್ರಶಸ್ತಿ
- ವಿಶ್ವೇಶ್ವರಯ್ಯ ರಾಷ್ತ್ರೀಯ ಸಾಹಿತ್ಯ ಪ್ರಶಸ್ತಿ
ಡುಂಡಿರಾಜ್ ಕೆಲ ಹನಿಗವನಗಳು
ಗಾದೆ
ಚಳಿಗಾಲ ಎಂದರೆ ವಿನ್ಟರು
ಬೇಸಿಗೆ ಬಂದರೆ ನೆಂಟರು !
ಯಾರಿಗೆ
ದಾಂಪತ್ಯ ಜೀವನದಲ್ಲಿ ಅಂತಿಮ ಜಯ ಯಾರಿಗೆ?
ಗಂಡನಿಗಲ್ಲ ಹೆಂಡತಿಗೂ ಅಲ್ಲಾ, ಅವಳ ಕಣ್ಣಿರಿಗೆ!
ಮಿಂದದ್ದು
ಎಷ್ಟು ಬೆಳ್ಳಗಿದ್ದಾಳೆ!, ಹಾಲಲ್ಲಿ ಮಿಂದವಳೇ?
Hall ಅಲ್ಲಿ ಅಲ್ಲಾ ಸಾರ್, ಬಾತ್ ರೊಮಿನಲ್ಲೇ!
ಲಾಭ
ಬರೆದು ಬರೆದೂ ಕನ್ನಡ ಕವನ,
ಪಡೆದೆನು ಕನ್ನಡಕವನ್ನ !
ಅಪೇಕ್ಷೆ
ಮದುವೆಯಾಗುವ ಹುಡುಗ ಸ್ಲಿಮ್ ಆಗಿರಬೇಕು, ಟ್ರಿಮ್ ಆಗಿರಬೇಕು,
ಕೇಳಿದಾಗ ಕೊಡುವ, ATM ಆಗಿರಬೇಕು!
ನಾಡು ನುಡಿ ಸಾಹಿತ್ಯ ಇರುವುದರಿಂದಲೇ ಬದುಕು ಬಹಳ ಸುಂದರವಾಗಿ ಕಾಣುತ್ತದೆ. ಇಲ್ಲೊಂದು ಆಸಕ್ತಿ ಮೂಡಿದೆ. ಬುದುಕನ್ನು ಹೆಚ್ಚು ಸುಂದರಗೊಳಿಸೋದೆ ನಮ್ಮ ನಾಡು ನುಡಿ ಸಂಸ್ಕೃತಿ ಎಂದು ತಮ್ಮ ಚೆಂದನೆಯ ಪಂಚ್ ಗಳುಳ್ಳ ಹನಿಗನವನಗಳ ಮೂಲಕ ಎಲ್ಲರನ್ನು ನಗೆಗಡಲಲ್ಲಿ ತೇಲಿಸುತ್ತಲೇ ಎಚ್ಚರಿಕೆಯ ಗಂಟೆಯನ್ನೂ ಬಾರಿಸುತ್ತಿರುವ ಚುಟುಕು ಸಾರ್ವಭೌಮ, ಚುಟುಕು ಚಕ್ರವರ್ತಿ ಡುಂಡಿರಾಜರು ನಮ್ಮ ಹೆಮ್ಮೆಯ ಕನ್ನಡ ಕಲಿಗಳೇ ಸರಿ.
ಏನಂತೀರೀ?
ನಿಮ್ಮವನೇ ಉಮಾಸುತ