ವಿಜಯ ಸಂಕೇಶ್ವರ

vij4ಮಾಡುವ ಕೆಲಸ ಯಾವುದಾದರೂ ಏನಂತೆ, ಛಲವೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಸಾಧಕರಿಗೆ ಯಾವುದು ಅಸಾಧ್ಯವಲ್ಲ. ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೇ ಎನ್ನುವ ಅಣ್ಣವರ ಹಾಡಿನಂತೆ  ನಾನು ಏನಾದ್ರು ಸಾಧನೆ ಮಾಡೇ ಮಾಡ್ತೀನಿ ಅಂತ 19 ವರ್ಷದ ಯುವಕನೊಬ್ಬ ತನ್ನ ಕುಟುಂಬದ ವ್ಯಾಪಾರದಿಂದ ಹೊರ ಬಂದು ಕೈ ಕೆಸರಾದರೆ ಬಾಯ್ ಮೊಸರು ಎನ್ನುವಂತೆ 1975ರಲ್ಲಿ ಒಂದು ಟ್ರಕ್ ಖರೀದಿಸಿ  ಸಾರಿಗೆ ಉದ್ಯಮವನ್ನು ಆರಂಭಿಸಿ ಇಂದು  4,300 ವಾಹನಗಳನ್ನು ಹೊಂದಿರುವ ಭಾರತದಲ್ಲಿ ಅತ್ಯಂದ  ದೊಡ್ಡದಾದ  ಸಾರಿಗೆ ಉದ್ಯಮವನ್ನು ಕಟ್ಟಿರುವ ಶ್ರೀ ವಿಜಯ ಸಂಕೇಶ್ವರ ಅವರು ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯ ಕಥಾನಾಯಕರಾಗಿದ್ದಾರೆ, ಅವರ ಸಾಹಸ ಮತ್ತು ಯಶೋಗಾಥೆಗಳ ಬಗ್ಗೆ ತಿಳಿಯೋಣ ಬನ್ನಿ.

ವಿಜಯ ಸಂಕೇಶ್ವರ ಅವರದ್ದು  ಮೂಲತಃ ಉತ್ತರ ಕರ್ನಾಟಕದ ಗದಗ್ ಪ್ರಾಂತ್ಯವಾಗಿದ್ದು ತಂದೆ ಬಸವಣ್ಣೆಪ್ಪ ಹಾಗು ತಾಯಿ ಚಂದ್ರಮ್ಮ ಈ ದಂಪತಿಗಳ  5 ನೇ ಮಗನಾಗಿ 1950 ರಲ್ಲಿ ಜನಿಸುತ್ತಾರೆ. ಅಷ್ಟರಲ್ಲಾಗಾಲೇ ಅವರ ತಂದೆಯವರು ಬಿ.ಜಿ ಸಂಕೇಶ್ವರ ಪ್ರಿಂಟರ್ಸ್ ಎಂಬ ಮುದ್ರಣಾಲಯದ ಮಾಲೀಕರಾಗಿದ್ದರು. ಅರವತ್ತು ಮತ್ತು ಎಪ್ಪತರ ದಶಕದ ವಿದ್ಯಾರ್ಥಿಗಳಿಗೆ ಡಿ.ಕೆ. ಭಾರದ್ವಾಜ್ ಅವರ  ಇಂಗ್ಲೀಷ್ – ಇಂಗ್ಲೀಷ್ – ಕನ್ನಡ ನಿಘಂಟಿನ ಪರಿಚಯ ಇದ್ದೇ  ಇರುತ್ತದೆ.  ಆ ನಿಘಂಟು ಮುದ್ರಣವಾಗುತ್ತಿದ್ದದ್ದೇ ಗದಗಿನ ಇದೇ ಸಂಕೇಶ್ವರ ಪ್ಲಬಿಕೇಷನ್ನಿನಲ್ಲಿ ಎನ್ನುವುದು ಬಹುತೇಕರಿಗೆ ಗೊತ್ತೇ  ಇರುವುದಿಲ್ಲ. ಈ ಪ್ರಕಾಶನದ ಮುಖಾಂತರ ಅನೇಕ ಪುಸ್ತಕಗಳನ್ನು ಅದರಲ್ಲೂ ಶೈಕ್ಷಣಿಕ ಪುಸ್ತಕಗಳ ಪ್ರಕಟಣೆ, ಪ್ರಶ್ನೆ ಪತ್ರಿಕೆಗಳನ್ನು ಮುದ್ರಣ ಮಾಡುವ ಅತಿ ದೊಡ್ಡ ಪ್ರಕಾಶಕರಾಗಿರುತ್ತಾರೆ. ಮುದ್ರಣ ಉದ್ಯಮ ಒಂದು ರೀತಿಯಲ್ಲಿ ಅವರ ಕುಟುಂಬದ ವ್ಯವಹಾರವಾಗಿದ್ದು ಇಡೀ ಮನೆಯವರೆಲ್ಲಾ ಆದೇ ಕೆಲಸದಲ್ಲಿ ತೊಡಗಿಸಿಕೊಂಡಿರುತ್ತಾರೆ.  ವಿಜಯ ಸಂಕೇಶ್ವರ ಅವರ ತಂದೆ ತಮ್ಮ ಆಸ್ತಿಯನ್ನು ವಿಭಜಿಸಿ ಮಕ್ಕಳೊಂದಿಗೆ ಹಂಚಿಕೊಂಡಾಗ ಅವರ   ಅವರ ಅಣ್ಣಂದಿರೆಲ್ಲಾ ಅದೇ  ಊರಿನಲ್ಲಿ ಪ್ರತ್ಯೇಕವಾದ ಮುದ್ರಣದ ಪ್ರೆಸ್ ಆರಂಭಿಸಿದಾಗ ಅದೇ ತಾನೇ ಬಿ.ಕಾಂ ಪದವಿ ಮುಗಿಸಿದ್ದ ತರುಣ  ವಿಜಯ್ ತಾನೂ ಸಹಾ ತನ್ನ ಅಣ್ಣಂದಿರೊಂದಿಗೆ ಮತ್ತೊಂದು ಪ್ರೆಸ್ ತೆಗೆದು ವೃಥಾ ತಮ್ಮ ತಮ್ಮಲ್ಲೇ ಸ್ಪರ್ಥೆಯನ್ನು ಮಾಡಿಕೊಳ್ಳುವ ಬದಲು ಬೇರೆಯ ವ್ಯವಹಾರವನ್ನು ಮಾಡಬೇಕೆಂದು ಯೋಚಿಸುತ್ತಿರುವಾಗಲೇ ಅವರಿಗೆ ಹೊಳೆದದ್ದೇ  ಲಾರಿಯ ವ್ಯವಹಾರ.

19-20 ವರ್ಷದ ವಿಜಯ್ ಸಾರಿಗೆ ವ್ಯವಹಾರಕ್ಕೆ ಪ್ರವೇಶಿಸುವ ನಿರ್ಧಾರವು ಅವರ ತಂದೆಗೆ ದಿಗ್ಭ್ರಮೆಗೊಳಿಸಿತ್ತಾದರೂ ಮಗನ ನಿರ್ಧಾರಕ್ಕೆ ಬೆಂಬಲ ಸೂಚಿಸಿದಾಗ, ಸೆಕೆಂಡ್ ಹ್ಯಾಂಡ್ ಲಾರಿಯೊಂದನ್ನು ಖರೀದಿಸಿ, ಹುಬ್ಬಳ್ಳಿ – ಗದಗ್ ಮಧ್ಯೆ ಸ್ವತಃ ಚಾಲನೆ ಮಾಡಿಕೊಂಡು ಸರಕುಗಳನ್ನು ಸಾಗಿಸಲು ಆರಂಭಿಸಿದ ವಿಜಯ್  ಸಂಕೇಶ್ವರ ಇಂದು ರೂ.18,000 ಕೋಟಿಯ ವ್ಯವಹಾರವುಳ್ಳ  1500 ಉದ್ಯೋಗಿಗಳಿರುವ, 400 ಬಸ್‌ಗಳು ಮತ್ತು 3,900 ಟ್ರಕ್‌ಗಳೊಂದಿಗೆ ದೇಶದ ಖಾಸಗಿ ವಲಯದಲ್ಲಿ ವಾಣಿಜ್ಯ ವಾಹನಗಳ ಅತಿದೊಡ್ಡ  ಕಂಪನಿಯಾದ   VRL ಲಾಜಿಸ್ಟಿಕ್ಸ್ ಲಿಮಿಟೆಡ್ ಕಂಪನಿಯ CMD ಆಗಿರುವ ಸಾಹಸ ನಿಜಕ್ಕೂ ಅಧ್ಭುತ ಮತ್ತು ಅನುಕರಣಿಯವೇ ಸರಿ.

ತಮ್ಮ ಕೌಟುಂಬಿಕ ವ್ಯವಹಾರದಿಂದ ಹೊರಬಂದು ಅವರು ತೆಗೆದುಕೊಂಡ ನಿರ್ಧಾರ ನಿಜಕ್ಕೂ ಅಚ್ಚರಿ ಮೂಡಿಸುವಂತಿತ್ತು. ಬಿಕಾಂ ಓದಿದ್ದರೂ ಲಾರಿ ಓಡಿಸುವುದೇ ಎಂದು ಮೂಗು ಮುರಿದವರೇ ಹೆಚ್ಚು. ಆ ಅಸಂಘಟಿತ ವಲಯದಲ್ಲಿ ತಮ್ಮ ಅದೃಷ್ಟವನ್ನು ಪ್ರಯತ್ನಿಸುವುದು ನಿಜಕ್ಕು  ಕಷ್ಟಕರವಾಗಿತ್ತು. ಆರಂಭದಲ್ಲಿ ಗದಗದಿಂದ ಹುಬ್ಭಳ್ಳಿ , ಹುಬ್ಬಳ್ಳಿಯಿಂದ ಗದಗಿಗೆ ಕಿರಾಣಿ ಸಾಮಗ್ರಿ, ಇನ್ನಿತರ ಸಾಮಗ್ರಿಗಳನ್ನು ಸಾಗಿಸುತ್ತಿದ್ದರು. ಮೊದಲಿಗೆ ಅವರ ಈ ಕೆಲಸಕ್ಕೆ ಮನೆಯವರಿಂದಾಗಲಿ ಅಥವಾ ಸ್ನೇಹಿತರಿಂದಾಗಲಿ ಯಾವುದೇ ಪ್ರೋತ್ಸಾಹ ದೊರೆಯಲಿಲ್ಲ. ಅಲ್ಲದೆ ಆಗಿನ ಕಾಲದಲ್ಲಿದ್ದ ಪ್ರತಿಷ್ಠಿತ ಸರಕು ಸಾಗಾಣಿಕಾ ಸಂಸ್ಥೆಗಳಿಂದಲೂ ತೀವ್ರವಾದ ವಿರೋಧವನ್ನು ಎದುರಿಸಬೇಕಾಯಿತು. ಆದರೂ ಎದೆಗುಂದದೇ ಅದೇ ಕೆಲಸದಲ್ಲಿ ಮುಂದುವರೆದರು. ನಂತರ ಅವರಿಗೆ ಒಂದೇ ಲಾರಿಯನ್ನು ಸ್ವತಃ ಓಡಿಸುವುದರಿಂದ  ಹೆಚ್ಚಿನ  ಲಾಭ ಗಳಿಸಲು ಸಾಧ್ಯವಿಲ್ಲ ಎಂಬುದನ್ನು ಅರಿತು 1979ರಲ್ಲಿ ತಮ್ಮ ಪತ್ನಿ ಲಲಿತ ಅವರ ಹೆಸರಿನಲ್ಲಿ ಮತ್ತೊಂದು ಲಾರಿ ಖರೀದಿ ಮಾಡಿ ನಿಧಾನವಾಗಿ ತಮ್ಮ ಸರಕು ಸಾಗಣೆಯನ್ನು ಮಹಾರಾಷ್ಟ್ರದ ಕೊಲ್ಹಾಪುರ, ಸೊಲ್ಲಾಪುರ, ಪೂನಾದ ವರೆಗೂ ವಿಸ್ತರಿಸುತ್ತಾರೆ.

ಹೀಗೆ ತಮ್ಮ ಸಾರಿಗೆ ವ್ಯವಹಾರವನ್ನು ವಿಸ್ತರಿಸಿಕೊಂಡಾಗ ಅವರ ವಾಹನ ಅಪಘಾತವಾಗಿ ತೀವ್ರ ತರನಾದ ನಷ್ಟವನ್ನು ಅನುಭವಿಸುತ್ತಾರೆ. ಅದೆಷ್ಟೋ ಬಾರಿ ಅವರ ಬಳಿ ಲಾರಿಗಳು ರಿಪೇರಿಗೆ ಬಂದಾಗ, ಲಾರಿಗಳ ಟೈರ್ ಬದಲಿಸಲು ಹಣವಿಲ್ಲದಿದ್ದಾಗ ತಮ್ಮ ಮಡದಿಯ ಆಭರಣಗಳನ್ನು ಒತ್ತೆ ಇಟ್ಟು ಆ ಹಣವನ್ನು ಲಾರಿಗೆ ಸುರಿಯುತ್ತಾರೆ. ಇಷ್ಟೆಲ್ಲಾ ಕಷ್ಟಗಳಾದಾಗ ಅವರ ಪೋಷಕರು ಮತ್ತು ಹೆಂಡತಿಯವರು ಈ ಸಾರಿಗೆ ಉದ್ಯಮ ನಮಗೆ ಆಗಿಬರುವುದಿಲ್ಲ, ಹೇಗೂ ಕುಟುಂಬ ವ್ಯವಹಾರದಲ್ಲಿ ಅನುಭವವಿದೆ ಅದನ್ನೇ ಮುಂದುವರೆಸು ಎಂದು ದಂಬಾಲು ಬೀಳುತ್ತಾರೆ. ಆದರೆ ಅದಾಗಲೇ ನಾಲ್ಕೈದು ವರ್ಷಗಳ ಕಾಲ ಸಾರಿಗೆ ವ್ಯವಹಾರವನ್ನು ನಡೆಸಿದ್ದರಿಂದ ವ್ಯವಹಾರಗಳಲ್ಲಿ  ಅಪಾಯಗಳನ್ನು ತೆಗೆದುಕೊಳ್ಳದಿದ್ದರೆ, ಎಂದಿಗೂ ಯಶಸ್ವಿಯಾಗುವುದಿಲ್ಲ ಎಂಬುದನ್ನು ಅರಿತು ಕಳೆದುಕೊಂಡ ಜಾಗದಲ್ಲಿಯೇ ಮತ್ತೆ ಕಳೆದುಕೊಂಡದ್ದನ್ನು ಗಳಿಸಬೇಕು ಎಂಬು ಧೃಢ ಸಂಕಲ್ಪವನ್ನು ತೊಟ್ಟ ವಿಜಯ್ ಸಂಕೇಶ್ವರರು ಅದರಲ್ಲೇ ಮುಂದುವರೆಯುತ್ತಾರೆ.

vij6ಅಂದು ಅವರು ಮಾಡಿದ ನಿರ್ಧಾರ ಸರಿಯಾಗಿದ್ದು ಹಂತ ಹಂತವಾಗಿ ಆ ಉದ್ಯಮದಲ್ಲಿ ಬೆಳವಣಿಗೆ ಕಾಣುತ್ತಿದ್ದಂತೆಯೇ ತಾನೂ ಕೂಡಾ ಈ ಉದ್ಯಮದಲ್ಲಿ ಯಶಸ್ವಿಯಾಗಬಹುದು ಎಂಬ ಆಶಾಕಿರಣ ಅವರಲ್ಲಿ ಮೂಡಿತ್ತು. ಸುಮ್ಮನೇ  ಒಬ್ಬನೇ ದುಡಿಯುವುದರಿಂದ ಲಾಭವಿಲ್ಲ. ಆದರ ಬದಲು ಒಂದು ಕಂಪನಿಯನ್ನು  ಅರಂಭಿಸಿ ಸಂಘಟಿತವಾಗಿ ದುಡಿದಲ್ಲಿ ಹೆಚ್ಚಿನದ್ದನ್ನು ಸಾಧಿಸಬಹುದು ಎಂದು ನಿರ್ಧರಿಸಿ, 31-3-1983ರಂದು ವಿ ಆರ್ ಎಲ್  ಪ್ರೈವೇಟ್ ಲಿಮಿಟೆಡ್  ಎಂಬ ಸರಕು ಸಾಗಾಣಿಕಾ ಸಂಸ್ಥೆಯನ್ನು ಆರಂಭಿಸುತ್ತಾರೆ. ನಂತರ 1-7-1994 ರಲ್ಲಿ ಅದೇ ಕಂಪನಿ Deemend Public Ltd Co ಎಂದು ಪರಿವರ್ತನೆಯಾಗುತ್ತದೆ.  ಆ ಸಮಯದಲ್ಲಿ ಬೆಂಗಳೂರಿನಿಂದ ಹುಬ್ಬಳ್ಖಿಯ ಕಡೆಗೆ ರಾಜ್ಯ ರಸ್ತೆ ಸಾರಿಗೆಯ ವಾಹನಗಳು ಬಹಳ ಇಲ್ಲದಿದ್ದದ್ದನ್ನು ಗಮನಿಸಿ, ಕೇವಲ ಸರಕು ಸಾಗಾಣಿಕೆಯಲ್ಲದೇ, ಪ್ರಯಾಣಿಕರಿಗೂ ಅನುಕೂಲವಾಗುವ ಅತ್ಯುತ್ತಮವಾದ ಅಂದಿನ ಕಾಲಕ್ಕೆ ಆಧುನಿಕವಾದ ನಾಲ್ಕು ಬಸ್ ಗಳನ್ನು ಕೊಂಡು  ಆರಂಭದಲ್ಲಿ ಹುಬಳ್ಳಿಯಿಂದ ಬೆಂಗಳೂರಿಗೆ, ಬೆಂಗಳೂರಿಂದ ಹುಬ್ಬಳ್ಳಿಗೆ ಪ್ರಯಾಣಿಕರ ಬಸ್ ಸೇವೆ ಆರಂಭಿಸಿದರು. ಅಲ್ಲಿಂದ ಹಂತ ಹಂತವಾಗಿ ರಾಜ್ಯದ ಮೂಲೆ ಮೂಲೆಗೂ ವಿಸ್ತರಿಸಿ ಅಲ್ಲಿಂದ ಮುಂದೆ ನೆರ ರಾಜ್ಯಗಳಾದ ಮಹಾರಾಷ್ಟ್ರ, ಕೇರಳ, ತಮಿಳುನಾಡು ಮತ್ತು ಆಂಧ್ರಗಳಿಗೂ ತಮ್ಮ ಸೇವೆಯನ್ನು ಮುಂದುವರಿಸಿ ಇಂದು  ನೂರಾರು ಅತ್ಯುತ್ತಮ  ಬಸ್ ಗಳ  ಸೇವೆ ನೀಡುತ್ತಿರುವುದು ಶ್ಲಾಘನೀಯವಾಗಿದೆ.

vij3ಸಾರಿಗೆಯಲ್ಲಿ ಇಷ್ಟೆಲ್ಲಾ ಸಾಧಿಸಿದ್ದರೂ ಅವರಿಗೆ ಮತ್ತೇನಾದರೂ ಹೆಚ್ಚಿನದ್ದನ್ನು ಸಾಧಿಸಲೇ ಬೇಕು ಎಂದು ಯೋಚಿಸುತ್ತಿರುವಾಗಲೇ, ಅವರ ಗಮನ ದಿನಪತ್ರಿಯತ್ತ ಹರಿಯುತ್ತದೆ. ಅಂದೆಲ್ಲಾ ಬಹುತೇಕ ಪತ್ರಿಕೆಗಳು ಬೆಂಗಳೂರಿನಿಂದ ಮುದ್ರಣವಾಗುತ್ತಿದ್ದ ಕಾರಣ ಸ್ಥಳೀಯ ವಿಷಯಗಳತ್ತ ಹೆಚ್ಚಿನ ಪ್ರಾಧಾನ್ಯತೆ ನೀಡದಿರುವುದನ್ನು ಗಮನಿಸಿದ ಸಂಕೇಶ್ವರ್ ಅವರು ಅಕ್ಟೋಬರ್ 4, 1999 ರಂದು ವಿಜಯ ಕರ್ನಾಟಕ ಎಂಬ ಪತ್ರಿಕೆಯನ್ನು ಆರಂಭಿಸಿ ಕನ್ನಡ ಪತ್ರಿಕಾ ರಂಗದಲ್ಲೇ ಅತ್ಯಂತ ಕ್ರಾಂತಿಯನ್ನು ಉಂಟು ಮಾಡುತ್ತಾರೆ. ಮುದ್ರಣದ ಉದ್ಯಮದಲ್ಲಿ ಅವರಿಗಿದ್ದ ಅನುಭವವನ್ನು ಬಳಸಿಕೊಂಡು ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಮಂಗಳೂರು, ಬೆಳಗಾಂ, ಶಿವಮೊಗ್ಗ ಇನ್ನೂ ಹತ್ತು ಹಲವಾರು ಕಡೆಗಳಲ್ಲಿ ಆಧುನಿಕ ಆಫ್ ಸೆಟ್ ಪ್ರಿಂಟರ್ಗಳನ್ನು ಅಳವಡಿಸಿ ಅಲ್ಲಿಯ ಸ್ಥಳೀಯ ಮಾಹಿತಿಗಳ ಆವೃತ್ತಿಗಳನ್ನು ಕೇವಲ 1 ರೂಪಾಯಿ ಬೆಲೆಗೆ ಕೊಟ್ಟು ಕೆಲವೇ ಕೆಲವು ದಿನಗಳಲ್ಲಿ ಕನ್ನಡ ಪತ್ರಿಕಾ ರಂಗದಲ್ಲಿ ವಿಜಯ ಕರ್ನಾಟಕ ಪತ್ರಿಕೆಯನ್ನು ನಂಬರ್-1 ಪತ್ರಿಕೆಯನ್ನಾಗಿ ಮಾಡುತ್ತಾರೆ.

ಇಷ್ಟರ ಮಧ್ಯೆ ರಾಜಕೀಯದತ್ತ ಚಿತ್ತ ಹರಿಸಿ, ಭಾರತೀಯ ಜನತಾಪಕ್ಷದಿಂದ ಧಾರವಾಡದ ಲೋಕಸಭಾ ಸದಸ್ಯರೂ ಆಗುವು ಮೂಲಕ ಯಶಸ್ವಿ ರಾಜಕಾರಣಿ ಎನಿಸಿಕೊಳ್ಳುತ್ತಾರೆ. ಕೆಲವೇ ಕೆಲವು ದಿನಗಳಲ್ಲಿ ರಾಷ್ಟ್ರೀಯ ಪಕ್ಷಗಳಿಗಿಂತಲೂ ಪ್ರಾದೇಶಿಕ ಪಕ್ಷವಿದ್ದಲ್ಲಿ ಹೆಚ್ಚಿನದ್ದನ್ನು ಸಾಧಿಸಬಹುದು  ಎಂದು ಯೋಚಿಸಿ ತಮ್ಮದೇ ಆದ ಕನ್ನಡ ನಾಡು ಎಂಬ ಪ್ರಾದೇಶಿಕ ಪಕ್ಷವನ್ನೂ ಸ್ಥಾಪಿಸಿ ಯಶಸ್ಸು ಕಾಣದೇ ಹಳೇ ಗಂಡನ ಪಾದವೇ ಗತಿ ಎಂದು ಮತ್ತೆ ಬಿಜೆಪಿಯನ್ನು ಸೇರಿ ಸಂಸದರಾಗಿದ್ದಾರೆ.

ವಿಜಯ ಕರ್ನಾಟಕ ಯಶಸ್ಸಿನ ತುತ್ತತುದಿಯಲ್ಲಿ ಇರುವಾಗಲೇ ಉಷಾ ಕಿರಣ ಎಂಬ ಮತ್ತೊಂದು ವೃತ್ತಪತ್ರಿಕೆಯನ್ನು ಆರಂಭಿಸಿ ಕೆಲವೇ ಕೆಲವು ದಿನಗಳಲ್ಲಿ ಆವೆಲ್ಲವನ್ನೂ ಟೈಮ್ಸ್ ಆಫ್ ಇಂಡಿಯಾ ಸಮೂಹಕ್ಕೆ ಮಾರಿ ಬಿಡುತ್ತಾರೆ. ದಿನಪತ್ರಿಕೆಗಳಿಗಿಂತಲೂ ದೃಶ್ಯ ಮಾಧ್ಯಮದ ಮೂಲಕ ಜನರಿಗೆ ಇನ್ನು ಹತ್ತಿರವಾಗಬಹುದು ಎಂಬುದನ್ನು ಮನಗಂಡು ದಿಗ್ವಿಜಯ ನ್ಯೂಸ್ ಛಾನೆಲ್ ಆರಂಭಿಸಿ ಅದರಲ್ಲೂ ತಕ್ಕ ಮಟ್ಟಿಗಿನ ಯಶಸ್ಸನ್ನು ಕಂಡಿರುವಾಗಲೇ, ಮತ್ತೆ ವಿಜಯವಾಣಿ ಎಂಬ ದಿನಪತ್ರಿಕೆಯನ್ನೂ ನಡೆಸುತ್ತಿದ್ದಾರೆ. ಇವೆಲ್ಲದರ ಜೊತೆ ಏರ್ ಲೈನ್ಸ್ ಕೂಡಾ ನಡೆಸಬೇಕೆಂಬ ಹಂಬಲದಿಂದ  ಏರ್ ಲೈಸನ್ಸ್ ಕೂಡಾ ಪಡೆದಿದ್ದಾರಾದರೂ ಅದನ್ನು ಇನ್ನು ಕಾರ್ಯರೂಪಕ್ಕೆ ತಂದಿಲ್ಲದಿರುವುದು ನಿಜಕ್ಕೂ ಸೋಜಿಗವೆನಿಸಿದೆ.

vjay2ಸಮಯಕ್ಕೆ ಬಹಳ ಮಹತ್ವ ಕೊಡುವ ಸಂಕೇಶ್ವರ  ಅವರ ದಿನಚರಿ ಆರಂಭವಾಗುವುದು ಬೆಳಗಿನ ಜಾವ 4 ಗಂಟೆಗೆ ಎಂದರೆ ಬಹಳ  ಆಶ್ಚರ್ಯವಾಗ ಬಹುದು.  ಪ್ರತಿ ದಿನವು ಬೆಳ್ಳಂಬೆಳಿಗ್ಗೆ 4  ಕ್ಕೆ ಎದ್ದು ತಮ್ಮೆಲ್ಲಾ ಪ್ರಾತರ್ವಿಧಿಗಳನ್ನು ಮುಗಿಸಿ ಸ್ನಾನ ಜಪ ತಪಗಳನ್ನು ಮುಗಿಸಿ 4:30 ಕ್ಕೆಲ್ಲಾ ತಮ್ಮ ದೈನಂದಿನ ಕೆಲಸವನ್ನು ಆರಂಭಿಸಿದರೆ ಒಂದು ನಿಮಿಷವೂ ವ್ಯರ್ಥ ಮಾಡದೇ ರಾತ್ರಿ ೧೦.೦೦ರ ವರೆಗೆ ನಿರಂತರವಾಗಿ ದುಡಿಯುತ್ತಾರೆ. ದುಡ್ಡಿನ ಬೆಲೆಯನ್ನು ಚೆನ್ನಾಗಿ ಅರಿತಿರುವ ಸಂಕೇಶ್ವರರು ಎಂದಿಗೂ ಎಲ್ಲಿಯೂ  ಅನಾವಶ್ಯಕವಾಗಿ ಖರ್ಚು ಮಾಡುವುದಿಲ್ಲ ಎನ್ನುವುದಕ್ಕೆ ಒಂದು ಸುಂದರವಾದ ಉದಾಹರಣೆಯನ್ನು ನೀಡಲೇ ಬೇಕಾಗಿದೆ.   ಸ್ವತಃ ಟ್ರಕ್ ಚಾಲಕರಾಗಿದ್ದ ಕಾರಣ  ಅವರಿಗೆ ಟೈರ್ ಗಳನ್ನು ನೋಡಿದ ಕೊಡಲೇ  ಅದು ಎಷ್ಟು  ಕಿಮೀ ಓಡಿದೆ ಎನ್ನುವುದನ್ನು ಕರಾರುವಾಕ್ ಆಗಿ ಹೇಳುವ ಕಲೆ ಅವರಿಗೆ ಸಿದ್ಧಿಸಿರುವ ಕಾರಣ ಇಂದಿಗೂ ಸಹಾ ಅವರು ತಮ್ಮ ವಾಹನಗಳಿಗೆ ಟೈರ್ಗಳನ್ನು ಖುದ್ದಾಗಿಯೇ ಕೊಳ್ಳುವ ಮೂಲಕ ಪ್ರತಿಯೊಂದು ಟೈರನ್ನು ಸಹಾ ಸಂಪೂರ್ಣವಾಗಿ ಉಪಯೋಗಿಸಿಕೊಳ್ಳುತ್ತಾರೆ ಎನ್ನುವುದು ಗಮನಾರ್ಹವಾದ ವಿಷಯವಾಗಿದೆ.

vij5ನೀವು ಈ ಪರಿಯ ಯಶಸ್ಸನ್ನು ಪಡೆಯಲು ಏನು  ಕಾರಣ ಏನು ಎಂದು ಯಾರಾದರು ಅವರನ್ನು ಕೇಳಿದದಲ್ಲಿ ಕೊಂಚವೂ ವಿಚಲಿತರಾಗದೇ ಇದಕ್ಕೆಲ್ಲವೂ ನನ್ನಲ್ಲಿದ್ದ ಛಲ ಮತ್ತು ಪರಿಶ್ರಮವೇ ಕಾರಣ ಎಂದು ಹೆಮ್ಮೆಯಿಂದಲೇ ಹೇಳುತ್ತಾರೆ. ನಾನು ಯಾವತ್ತೂ ಹೀಗೇ ಬದುಕಬೇಕು ಎಂದು ಯೋಚಿಸಿರಲಿಲ್ಲ.  ಹೆತ್ತ ತಂದೆ, ತಾಯಿಗೆ ಮೂರು ಹೊತ್ತು ಊಟ ಹಾಕಿ, ಅವರನ್ನು ಚೆನ್ನಾಗಿ ನೋಡಿಕೊಂಡರೆ ಸಾಕು ಎಂಬುದೇ ನನ್ನ ಭಾವನೆಯಾಗಿತ್ತು. ಆದರೆ ಇಮ್ದು ಈ ಮಟ್ಟದಲ್ಲಿ ಬೆಳದಿರುವುದಕ್ಕೆ ನನ್ನ  ಪರಿಶ್ರಮವೇ ಮುಖ್ಯ ಕಾರಣ ಎಂದು ಹೇಳುವಾಗ ಅವರ ಕಣ್ಗಳಲ್ಲಿ ಮೂಡುವ ಹೊಳಪು ನಿಜಕ್ಕು ಅನನ್ಯ.

vijay1ಹಾಗಾಗಿಯೇ ಇವರು  ಏನೇ ಮಾಡಬೇಕು ಎಂದು ಕೊಂಡರೂ ಮುಟ್ಟಿದ್ದೆಲ್ಲಾ ಚಿನ್ನ ಎನ್ನುವಂತೆ ಎಲ್ಲೆಡೆಯಲ್ಲು  ವಿಜಯವನ್ನೇ ಸಾಧಿಸುತ್ತಿರುವ ಪರಿಣಾಮವಾಗಿ ತಮ್ಮೆಲ್ಲ ಕಾರ್ಯ, ಕಲಾಪಗಳಿಗೂ ಧನಾತ್ಮಕ ಚಿಂತನೆಯಿಂದ ವಿಜಯ ಎನ್ನುವ ಹೆಸರಿಂದಲೇ ಅರಂಭಿಸಿರುವುದು ಗಮನಿಸಬೇಕಾದ ಅಂಶವಾಗಿದೆ. ಆರಂಭದಲ್ಲಿ ಕೇವಲ ಒಂದು ಸೆಕೆಂಡ್ ಹ್ಯಾಂಡ್ ಲಾರಿಯಿಂದ ಆರಂಭಿಸಿ ಇಂದು. ನೂರಾರು ಬಸ್ಸುಗಳು, ಸಾವಿರಾರು ಲಾರಿಗಲು ಕೋಟ್ಯಾಂತರ ರೂಪಾಯಿಗಳ ಒಡೆಯನಾದರೂ,  ಇಂದಿಗೂ ಸಹಾ ಸರಳ ಸಜ್ಜನರಾಗಿ ಲಕ್ಷಾಂತರ ಜನರಿಗೆ ಪ್ರೇರಣಾದಾಯಕರಾಗಿರುವ ಕಾರಣ  ಅವರ ಸಾಧನೆಗಳನ್ನು ಗುರುತಿಸಿ ಭಾರತ ಸರ್ಕಾರ ೨೦೨೧ರ ಸಾಲಿನ ಪದ್ಮಶ್ರೀ ಪ್ರಶಸ್ತಿಯನ್ನು ಅವರಿಗೆ ನೀಡಿ ಗೌರವಿಸಿದೆ.  ಛಲ ಮತ್ತು ಕಠಿಣ ಪರಿಶ್ರಮ ಇದ್ದಲ್ಲಿ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಜ್ವಲಂತ ಉದಾರಣೆಯಾಗಿರುವ ಶ್ರೀ ವಿಜಯ ಸಂಕೇಶ್ವರ ಅವರು ಖಂಡಿತವಾಗಿಯೂ  ನಮ್ಮ ಹೆಮ್ಮೆಯ ಕನ್ನಡದ ಕಲಿಗಳು ಅಲ್ವೇ?

ಏನಂತಿರೀ?

ನಿಮ್ಮವನೇ ಉಮಾಸುತ

2 thoughts on “ವಿಜಯ ಸಂಕೇಶ್ವರ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s