ಬೆಂಗಳೂರು ನಗರಕ್ಕೆ ದೇಶ ವಿದೇಶಗಳಿಂದ ಸರ್ಕಾರೀ ಅಥವಾ ಖಾಸಗೀ ಕೆಲಸಗಳಿಗೆಂದು ಬರುವ ಪ್ರಸಿದ್ಧ ವ್ಯಕ್ತಿಗಳು ಓಡಾಡುವುದಕ್ಕೆ ಐಶಾರಾಮಿ ಕಾರುಗಳನ್ನು ಬಳಸುವುದನ್ನು ನಾವೆಲ್ಲರೂ ಟಿವಿಯಲ್ಲಿಯೋ ಇಲ್ಲವೇ ಖುದ್ದಾಗಿ ನೋಡಿ ಸಂಭ್ರಮಿಸಿರುತ್ತೇವೆ. ವಾವ್ ಅಂತಹ ಕಾರುಗಳಲ್ಲಿ ಓಡಾಡುವವರೇ ಭಾಗ್ಯವಂತರು ಎಂದೇ ಭಾವಿಸಿರುತ್ತೇವೆ. ನಿಜ ಹೇಳ್ಬೇಕು ಅಂದರೆ ಅಂತಹ ಐಶಾರಾಮೀ ಕಾರುಗಳ ಒಡೆಯ ನಮ್ಮ ನಿಮ್ಮಂತೆಯೇ ಸಾಮಾನ್ಯ ಮಧ್ಯಮ ವರ್ಗದ ಕ್ಷೌರಿಕ ಕುಟುಂಬದಿಂದ ಬಂದು ತಮ್ಮ ಬುದ್ದಿವಂತಿಕೆ ಮತ್ತು ಕಾರ್ಯಕ್ಷಮತೆಯಿಂದ ಅಷ್ಟು ಎತ್ತರಕ್ಕೆ ಬೆಳೆದಿದ್ದಾರೆ ಎಂದರೆ ಅಚ್ಚರಿ ಮೂಡಿಸುತ್ತದೆ ಅಲ್ಲವೇ? ಹೌದು ಅಂತಹ ಅದ್ಭುತ ವ್ಯಕ್ತಿಯಾದ ಶ್ರೀ ರಮೇಶ್ ಬಾಬು ಅವರ ಯಶೋಗಾಥೆಯನ್ನು ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ
ರಮೇಶ್ ಬಾಬು ಅವರ ತಂದೆ ಗೋಪಾಲ್ ಅವರು ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ಸಣ್ಣದಾದ ಹೇರ್ ಕಟಿಂಗ್ ಅಂಗಡಿಯೊಂದನ್ನು ತಮ್ಮ ತಮ್ಮನೊಂದಿಗೆ ನಡೆಸಿಕೊಂಡು ಹೋಗುತ್ತಿದ್ದರು. ರಮೇಶ್ ಬಾಬು ಅವರಿಗೆ 7 ವರ್ಷ ವಯಸ್ಸಾಗಿರುವಾಗ 1979ರಲ್ಲಿ ದುರಾದೃಷ್ಟವಷಾತ್ ನಿಧನರಾದಾಗ, ಅವರ ಮನೆಯನ್ನು ನಿಭಾಯಿಸಲು ಬಹಳವಾದ ಕಷ್ಟವಾಗುತ್ತದೆ. ಪ್ರತೀ ದಿನ 5 ರೂಪಾಯಿ ಕೊಡುವ ಒಪ್ಪಂದದಂತೆ ಅವರ ಅಂಗಡಿಯನ್ನು ಚಿಕ್ಕಪ್ಪನವರು ವಹಿಸಿಕೊಳ್ಳುತ್ತಾರೆ. ಅವರು ಕೊಡುವ ಐದು ರೂಪಾಯಿಗಳಲ್ಲಿ ರಮೇಶ್ ಅವರ ತಾಯಿ, ಸಹೋದರ ಮತ್ತು ಸಹೋದರಿಯರ ದೈನಂದಿನ ಅವಶ್ಯಕತೆಗಳು ಮತ್ತು ವಿದ್ಯಾಭ್ಯಾಸಕ್ಕೆ ಸಾಲುತ್ತಿರಲಿಲ್ಲವಾದ್ದರಿಂದ ಅವರ ತಾಯಿಯವರು ನಾಲ್ಕಾರು ಮನೆಗಳಲ್ಲಿ ಮನೆಗೆಲಸ ಮಾಡಲು ಆರಂಭಿಸುತ್ತಾರೆ.
ತಾಯಿಯವರು ಕೆಲಸ ಮಾಡುತ್ತಿದ್ದ ಮನೆಯಾಕೆ ಉಡುಗೊರೆಯಾಗಿ ಕೊಡಿಸಿದ ಸೈಕಲ್ ಸಹಾಯದಿಂದ ಆ ಚಿಕ್ಕ ಹುಡುಗ ರಮೇಶ್ ಬೆಳ್ಳಂಬೆಳಿಗ್ಗೆ ದಿನಪತ್ರಿಕೆಗಳು ಮತ್ತು ಹಾಲನ್ನು ಸರಬರಾಜು ಮಾಡುವ ಮೂಲಕ ತನ್ನ ತಾಯಿಯ ಹೊರೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುವುದಲ್ಲದೇ ಹಾಗೂ ಹೀಗೂ ಹತ್ತನೇ ತರಗತಿ ಮುಗಿಸಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಸಂಜೆ ಕಾಲೇಜಿನಲ್ಲಿ ಪಿಯುಸಿಗೆ ಸೇರಿಕೊಳ್ಳುತ್ತಾರೆ. ಇದೇ ಸಮಯದಲ್ಲಿ ಅವರ ತಾಯಿಯವರಿಗೂ ಮತ್ತು ಚಿಕ್ಕಪ್ಪನೊಡನೆ ವ್ಯಾವಹಾರಿಕವಾಗಿ ವೈಮನಸ್ಯ ಉಂಟಾಗಿ ಆವರು ಪ್ರತೀ ತಿಂಗಳೂ ನೀಡುತ್ತಿದ್ದ ಹಣವನ್ನು ನಿಲ್ಲಿಸಿದಾಗ ವಿಧಿ ಇಲ್ಲದೇ ರಮೇಶ್ ಅವರೇ ತಮ್ಮ ಅಂಗಡಿಯ ವ್ಯವಹಾರವನ್ನು ವಹಿಸಿಕೊಳ್ಳಲು ಮುಂದಾದಾಗ, ಅವರ ತಾಯಿ, ವ್ಯವಹಾರ ಎಲ್ಲಾ ಬೇಡ ಮೊದಲು ಶಿಕ್ಷಣಕ್ಕೆ ಆದ್ಯತೆ ಕೊಡು ಎಂದು ಹೇಳಿದಾಗ, ಬೆಳಿಗ್ಗೆ ತಾನು ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ಸಂಜೆ ಕಾಲೇಜಿಗೆ ಹೋಗಿ ನನ್ನ ವಿದ್ಯಾಭ್ಯಾಸವನ್ನು ಮುಂದುವರೆಸುತ್ತೇನೆ ಎಂಬ ಭವರವಸೆ ನೀಡಿ ಅಂದಿನಿಂದ ರಮೇಶ್ ಬೆಳಿಗ್ಗೆ ಕ್ಷೌರಿಕ ವೃತ್ತಿಯನ್ನು ಮಾಡುತ್ತಾ ಸಂಜೆ ಕಾಲೇಜಿನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸುತ್ತಾ ಜೀವನವನ್ನು ನಡೆಸಿಕೊಂಡು ಹೋಗುತ್ತಿರುತ್ತಾರೆ.
1993ರಲ್ಲಿ ಅವರ ಚಿಕ್ಕಪ್ಪನವರು ಒಂದು ಚಿಕ್ಕ ಕಾರೊಂದನ್ನು ಕೊಂಡಾಗ, ತಾವೂ ಅವರಿಗಿಂತ ಏನು ಕಡಿಮೆ ಎಂದು ನಿರೂಪಿಸುವ ಸಲುವಾಗಿ ಅಲ್ಪ ಸ್ವಲ್ಪ ಉಳಿಸಿದ್ದ ಹಣದೊಂದಿಗೆ ಸ್ವಲ್ಪ ಕೈಸಾಲ ಮಾಡಿ ಸೆಕೆಂಡ್ ಹ್ಯಾಂಡ್ ಮಾರುತಿ ವ್ಯಾನ್ ವಾಹನವನ್ನು ಕೊಂಡು ಬೀಗುತ್ತಾರೆ. ಆರಂಭದಲ್ಲಿ ಎಲ್ಲವೂ ಸರಿ ಇದ್ದು ನಂತರ ಸಾಲದ ಕಂತನ್ನು ಕಟ್ಟುವ ಸಲುವಾಗಿ ತಮ್ಮ ತಾತನ ಆಸ್ತಿಯನ್ನು ಅಡಮಾನ ಇಡಬೇಕಾಗುತ್ತದೆ. ಆರು ಸಾವಿರದ ಎಂಟು ನೂರು ರೂಪಾಯಿಗಳಷ್ಟು ಸಾಲದ ಬಡ್ಡಿ ಪಾವತಿಸಲು ಪರದಾಡುವಂತಹ ಪರಿಸ್ಥಿತಿ ಬಂದಿರುತ್ತದೆ.
ಇದೇ ಸಮಯದಲ್ಲಿಯೇ ಅವರ ಪಾಲಿಗೆ ಆವರ ತಾಯಿ ಕೆಲಸ ಮಾಡುತ್ತಿದ್ದ ಇಂಟಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮನೆಯಾಕೆ ನಂದಿನಿಯವರು ಬೆಂಬಲಕ್ಕೆ ನಿಲ್ಲುತ್ತಾರೆ. ಸುಮ್ಮನೇ ಕಾರನ್ನು ಮನೆಯ ಮುಂದೆ ನಿಲ್ಲಿಸುವ ಬದಲು ಅದನ್ನು ಬಾಡಿಗೆಗೆ ಓಡಿಸಿ ಅದರಿಂದ ಬಂದ ಹಣದಿಂದ ಸಾಲದ ಕಂತನ್ನು ತೀರಿಸು ಎಂದು ಹೇಳಿದ್ದಲ್ಲದೇ, ಅವರೇ ಕೆಲಸ ಮಾಡುತ್ತಿದ ಕಂಪನಿಯಲ್ಲಿ ಗುತ್ತಿಗೆಯನ್ನೂ ಕೊಡಿಸುತ್ತಾರೆ. ಹೀಗೆ 1994ರಲ್ಲಿ ಸಣ್ಣ ಪ್ರಮಾಣದಲ್ಲಿ ಆರಂಭಿಸಿದ ಟ್ರಾವೆಲ್ಸ್ ಏಜೆನ್ಸಿ 2004 ರಷ್ಟರಲ್ಲಿ 5-6 ಕಾರುಗಳನ್ನು ಹೊಂದುವ ಮಟ್ಟಕ್ಕೆ ಬೆಳಿದಿದ್ದರೂ ರಮೇಶ್ ಅವರು ತಮ್ಮ ತಮ್ಮ ಕ್ಷೌರಿಕ ವೃತ್ತಿಯನ್ನೇ ಮುಂದುವರೆಸಿಕೊಂಡು ಹೋಗುತ್ತಿರುತ್ತಾರೆ.
ವ್ಯವಹಾರದಲ್ಲಿ ಎಲ್ಲೆಡೆಯೂ ಪೈಪೋಟಿ ಇದ್ದೇ ಇರುತ್ತದೆ. ತಾವು ಉಳಿದವರಿಗಿಂತಲೂ ವಿಭಿನ್ನವಾಗಿ ಏನಾದರು ಮಾಡ ಬೇಕೆಂದು ಯೋಚಿಸುತ್ತಿರುವಾಗಲೇ ಎಲ್ಲರ ಬಳಿಯೂ ಚಿಕ್ಕ ಚಿಕ್ಕ ಕಾರುಗಳಿವೆ. ಅದೊಮ್ಮೆ ಯಾರೋ ಮರ್ಸಿಡಿಸ್ ಕಾರನ್ನು ಬಾಡಿಗೆ ಕೇಳಿದಾಗ ಅದನ್ನು ಮತ್ತೊಬ್ಬರಿಂದ ಎರವಲು ಪಡೆದು ವ್ಯವಹಾರವನ್ನು ನಿಭಾಯಿಸಿದ್ದು ನೆನಪಾಗುತ್ತದೆ. ಜನರಿಗೆ ಹೊಚ್ಚ ಹೊಸಾ ಐಶಾರಾಮಿ ಕಾರನ್ನು ಬಾಡಿಗೆಗೆ ನೀಡಿದಲ್ಲಿ ವ್ಯವಹಾರವನ್ನು ದೊಡ್ಡ ಮಟ್ಟದಲ್ಲಿ ಮಾಡಬಹುದು ಎಂದು ನಿರ್ಥರಿಸಿ, 2004 ರಲ್ಲಿ 40ಲಕ್ಷದ ಐಷಾರಾಮಿ ಕಾರೊಂದನ್ನು ಖದೀದಿಸಲು ಮುಂದಾದಾಗ, ಎಲ್ಲರೂ ದೊಡ್ಡ ತಪ್ಪು ಮಾಡುತ್ತಿದ್ದೀಯೇ, ಎಂದೇ ಎಚ್ಚರಿಸಿದರೂ, ದೊಡ್ಡದಾದ ವ್ಯವಹಾರದ ಅವಕಾಶವನ್ನು ಬಿಡಬಾರದು. ಹಾಗೊಮ್ಮೆ ಏನಾದರೂ ತಪ್ಪಾದಲ್ಲಿ ಅದೇ ಕಾರನ್ನು ಮಾರಾಟ ಮಾಡಿ ನಿಭಾಯಿಸೋಣ ಎಂಬ ಭರವಸೆಯೊಂದಿಗೆ ಬೆಂಗಳೂರಿನಲ್ಲಿ ಹೊಚ್ಚ ಹೊಸ ಐಷಾರಾಮಿ ಕಾರನ್ನು ಬಾಡಿಗೆ ಕೊಡುವ Ramesh Tours & Travels, RTT ಸಂಸ್ಥೆಯನ್ನು ಭಂಡ ಧೈರ್ಯದಿಂದ ಆರಂಭಿಸುತ್ತಾರೆ.
ನೀರಿಗೆ ಇಳಿದ ಮೇಲೆ ಛಳಿಯೇನು? ಬಿಸಿಲೇನು? ಎನ್ನುವಂತೆ ವ್ಯಾಪಾರ ಮಾಡಲು ಸಿದ್ಧರಾದಾಗ, ಅಪಾಯಗಳನ್ನು ಎದುರಿಸಲು ಸಿದ್ಧರಾಗಿರಬೇಕು ಎನ್ನುವ ತತ್ವದಡಿಯಲ್ಲಿ ಅದುವರೆವಿಗೂ ಮರ್ಸಿಡಿಸ್, BMW, Audi, ಹೀಗೆ ಐದು ಮತ್ತು ಹತ್ತು ಆಸನಗಳ ಐಷಾರಾಮಿ ಕಾರುಗಳು ಇದ್ದರೂ ಅಂತಿಮವಾಗಿ ತಮ್ಮ ಹೆಮ್ಮೆ, ರೋಲ್ಸ್ ರಾಯ್ಸ್ 2011 ರಲ್ಲಿ ಖರೀದಿಸಿದಾಗ, ಅಂತಹ ದುಬಾರಿ ಕಾರನ್ನು ಖರೀದಿಸುವುದರ ವಿರುದ್ಧ ಮತ್ತೆ ಅನೇಕರು ಎಚ್ಚರಿಕೆ ನೀಡಿದರು. ವ್ಯವಹಾರದ ಗಂಧವೇ ಇಲ್ಲದಿದ್ದ 2004ರಲ್ಲಿಯೇ ಅಪಾಯವನ್ನು ತೆಗೆದುಕೊಂಡಿದ್ದೇನೆ. ಈಗ ತಕ್ಕ ಮಟ್ಟಿಗಿನ ವ್ಯವಹಾರ ಜ್ಞಾನವಿದೆ ಧೈರ್ಯತೆಗೆದು ಕೊಂಡು ಸುಮಾರು 4 ಕೋಟಿ ರೂಪಾಯಿ ವೆಚ್ಚದಲ್ಲಿ ಖರೀಧಿಸಿದ ಕಾರು ವರ್ಷಗಳ ನಂತರ ಆದಕ್ಕೆ ಮಾಡಿದ ಸಾಲವೆಲ್ಲಾ ತೀರಿ, ಲಾಭವನ್ನು ಗಳಿಸಲು ಆರಂಭಿಸಿದಾಗ ತೆಗೆದುಕೊಂಡು ಶ್ರಮಕ್ಕೆ ಬೆಲೆ ಸಿಕ್ಕಂತಾಗಿತ್ತು.
ಪ್ರತಿಯೊಂದು ವ್ಯವಹಾರದಲ್ಲೂ ಸವಾಲುಗಳು ಮತ್ತು ಅಪಾಯಗಳನ್ನು ಎದುರಿಸಬೇಕಾಗುತ್ತದೆ. ಪ್ರತೀ ವರ್ಷದ ಏಪ್ರಿಲ್ ತಿಂಗಳಿನಲ್ಲಿ ತಮ್ಮ ವಾಹನಗಳ ರಸ್ತೆ ತೆರಿಗೆಯೆಂದೇ, ಸುಮಾರು 3 ಕೋಟಿಗೂ ಅಧಿಕ ಹಣವನ್ನು ಪಾವತಿಸಬೇಕಾಗಿತ್ತು. ಅದನ್ನು ಹೊಂದಿಸಲು ಅವರು ತಮ್ಮ ಆಸ್ತಿಯ ದಾಖಲೆಗಳನ್ನು ಒತ್ತೆ ಇಟ್ಟು ಸಾಲ ಪಡೆದಿರುವುದಲ್ಲದೇ, ಅವರ ಮಡದಿಯ ಕೆಲವು ಆಭರಣಗಳನ್ನು ಒತ್ತೆ ಇಟ್ಟಿದ್ದರೂ ಅವೆಲ್ಲವೂ ವ್ಯವಹಾರಕ್ಕೆಂದು ಮಾಡಿದ ಖರ್ಚಾಗಿರುವ ಕಾರಣ ಅದನ್ನು ಮರಳಿ ಪಡೆಯುವ ಭರವಸೆ ಇದೆ ಎಂದು ನುಡಿಯುವಾಗ ಅವರ ಕಣ್ಗಳಲ್ಲಿದ್ದ ಕಾಂತಿ ನಿಜಕ್ಕೂ ವರ್ಣಿಸಲು ಆಸಾಧ್ಯವಾಗಿದೆ.
50ರ ಆಸುಪಾಸಿನಲ್ಲಿರುವ ರಮೇಶ್ ಬಾಬು ಅವರ 400 ಸಾಮಾನ್ಯ ಕಾರುಗಳು ಮತ್ತು 120 ಟಾಪ್ ಎಂಡ್ ಐಷಾರಾಮಿ ಕಾರುಗಳ ಹೆಮ್ಮೆಯ ಮಾಲೀಕರಾಗಿದ್ದು ಕಾರ್ಪೊರೇಟ್ ದೈತ್ಯರಿಗೆ ಮತ್ತು ಸರ್ಕಾರೀ ಅತಿಥಿಗಳು ಅವಾ ಐಷಾರಾಮಿ ವಾಹನಗಳ ಸೌಲಭ್ಯವನ್ನು ಪಡೆದಿದ್ದಾರೆ. ಈ ಪರಿಯಲ್ಲಿ ಟ್ರಾವೆಲ್ಸ್ ಉದ್ಯಮ ನಡೆಸುತ್ತಿದ್ದರೂ, ತಮ್ಮ ಕುಲವೃತ್ತಿಯನ್ನು ಮರೆಯದೇ, ಇಂದಿಗೂ ಸಹಾ ಬೆಂಗಳೂರಿನ ಬೌರಿಂಗ್ ಇನ್ಸ್ಟಿಟ್ಯೂಟ್ನಲ್ಲಿರುವ ತಮ್ಮ ಸಲೂನ್ನಲ್ಲಿ ವಾರಕ್ಕೆ 3 ದಿನಗಳ ಕಾಲ ಕ್ಷೌರಿಕವೃತ್ತಿಯನ್ನು ಮಾಡುವುದನ್ನು ರೂಢಿಯಲ್ಲಿಟ್ಟಿಕೊಳ್ಳುವ ಮಟ್ಟಿಗೆ ವೃತ್ತಿಪರರಾಗಿದ್ದಾರೆ. ಮುಂದಿನ ಒಂದು ದಶಕದಲ್ಲಿ ಸುಮಾರು 700 ಕಾರುಗಳನ್ನು ಹೊಂದುವ ಸಂಕಲ್ಪವನ್ನು ತೊಟ್ಟಿದ್ದಾರೆ. ಅವರ ವೃತ್ತಿಪರತೆ ಮತ್ತು ಕಠಿಣ ಪರಿಶ್ರಮವನ್ನು ನೋಡಿದಲ್ಲಿ ಅವರ ಆಸೆ ಇನ್ನು ಬೇಗನೇ ಈಡೇರುವ ಭರವಸೆ ಎಲ್ಲರಿಗಿದೆ.
ತಮ್ಮ ಕಂಪನಿಯ ಮೂಲಕ ದಿನದ 24 ಗಂಟೆಗಳು, ವರ್ಷದ 365 ದಿನಗಳು ಕಾರ್ಯನಿರ್ವಹಿಸುವುದಲ್ಲದೇ, ದೊಡ್ಡ ದೊಡ್ಡ ಸಮ್ಮೇಳನಗಳು ಮತ್ತು ನಿಯೋಗಗಳ ಎಲ್ಲಾ ರೀತಿಯ ವಾಹನಗಳ ಅವಶ್ಯಕತೆಗಳನ್ನು ನಿರ್ವಹಿಸಲು ವಿಶೇಷ ಸಮನ್ವಯ ಮತ್ತು ವ್ಯವಸ್ಥೆಗಳು ಅವರ ಬಳಿಯಲ್ಲಿದೆ. ಸೆಲ್ಫ್ ಡ್ರೈವ್ ಕಾರ್ ಗಳನ್ನೂ ಬಾಡಿಗೆ ಕೊಡಲು ಪರವಾನಗಿ ಪಡೆದಿರುವ ಭಾರತದಲ್ಲಿನ ಕೆಲವೇ ಕಾರು ಬಾಡಿಗೆ ಕಂಪನಿಗಳಲ್ಲಿ ರಮೇಶ್ ಅವರ ಕಂಪನಿಯೂ ಒಂದಾಗಿದ್ದು, ತಮ್ಮ ಗ್ರಾಹಕರ ಪ್ರಯಾಣ ಮತ್ತು ಪ್ರವಾಸೋದ್ಯಮ ಅವಶ್ಯಕತೆಗಳಿಗೆ ನಿರ್ದಿಷ್ಟವಾದ ಪ್ರವಾಸಗಳನ್ನು ಸಹ ನಾವು ವಿನ್ಯಾಸಗೊಳಿಸುವ ಮೂಲಕ ದಿನೇ ದಿನೇ ಪ್ರಸಿದ್ಧಿ ಪಡೆದುಕೊಳ್ಳುತ್ತಿದೆ.
ಅವರ ವಿನಮ್ರತೆ ಮತ್ತು ಕಠಿಣ ಪರಿಶ್ರಮದಿಂದ ಗಳಿಸಿರುವ ಅಸಾಧಾರಣ ಯಶಸ್ಸಿನಿಂದಾಗಿ ಅವರಿಗೆ ‘ಬಿಲೇನಿಯರ್ ಬಾರ್ಬರ್‘ ಎಂದೇ ಹೆಸರುವಾಸಿಯಾಗಿದ್ದಾರೆ. ವರ್ಷಕ್ಕೆ 3.78 ಕೋಟಿ ರೂಪಾಯಿಗಳ ರಸ್ತೆ ತೆರಿಗೆಯನ್ನು ಕಟ್ಟುವಾಗಲೂ ಅವರು ತಮ್ಮ ಹೆಂಡತಿಯ ಆಭರಣಗಳು ಮತ್ತು ಆಸ್ತಿಗಳನ್ನು ಅಡವು ಇಟ್ಟಿದ್ದಾರೆ ಇಲ್ಲವೇ ಮಾರಾಟ ಮಾಡಿದ್ದಾರೆಯೇ ಹೊರತು ಅವರೆಂದು ತಮ್ಮ ವಾಹನಗಳನ್ನು ಮಾರಿಲ್ಲ. ಇಂದಿಗೂ ಅವರ ಬಳಿ ಮೊತ್ತ ಮೊದಲ ಬಾರಿಗೆ ಖರೀದಿಸಿದ ಮಾರುತಿ ವ್ಯಾನ್ ಚಲಾಯಿವ ಸುಸ್ಥಿತಿಯಲ್ಲಿದೆ. ಗ್ರಾಹಕರೊಂದಿಗೆ ವಿನಮ್ರವಾಗಿ, ಕಷ್ಟಪಟ್ಟು ಕೆಲಸ ಮಾಡಿದಲ್ಲಿ ಅದೃಷ್ಟವೂ ತಾನಾಗಿಯೇ ಕೈ ಹಿಡಿಯುತ್ತದೆ. ಅದೇ ಕೇವಲ ಅದೃಷ್ಟವನ್ನೇ ನೆಚ್ಚಿ ಕುಳಿತರೇ ಏನನ್ನು ಸಾಧಿಸಲಾಗದು ಎಂದು ಹೇಳಿರುವ ರಮೇಶ್ ಬಾಬು ನಮ್ಮ ಇಂದಿನ ಯುವಜನತೆಗೆ ಜೀವಂತ ದಂತಕಥೆಯಾಗಿರುವ ಮೂಲಕ . ನಿಸ್ಸಂದೇಹವಾಗಿಯೂ ನಮ್ಮ ಹೆಮ್ಮೆಯ ಕನ್ನಡದ ಕಲಿಗಳಿಗಿದ್ದಾರೆ
ಏನಂತೀರೀ?
ನಿಮ್ಮವನೇ ಉಮಾಸುತ
Super, u did a real job that make the reader to come out of comfort zone and u vl have the responsibility to write about many ppl near future , where I vl also be
one amoung them in Q like Rtt Ramesh,. I vl also work hard n serve the mankind, “what I got vl be given back to it” I vl one day appear in your blog, for sure by my hard work and God’s blessing. Thank u friend.
LikeLiked by 1 person
Wow!! That’s the commitment. sure I wish that day comes very soon.
Good luck & all the best
LikeLike