ರಾಮಕೃಷ್ಣ ಹೆಗಡೆ

h6

ಕರ್ನಾಟಕ ಕಂಡ ಅತ್ಯಂತ ಚಾಣಕ್ಷ ರಾಜಕಾರಣಿ ಹಾಗೂ ರಾಜಕೀಯ ಮುತ್ಸದ್ಧಿಯಾಗಿದ್ದಂತಹ ಹಳ್ಳಿಯಿಂದ ದಿಲ್ಲಿಯವರೆಗೂ ಯುವಕರಿಂದ ವಯಸ್ಸಾದವರೂ ಇಷ್ಟಪಡುತ್ತಿದ್ದ ರಾಜ್ಯದ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿಯಾಗಿದ್ದ, ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದ, ಲೋಕಾಯುಕ್ತ ವ್ಯವಸ್ಥೆಯನ್ನು ರಾಜ್ಯಕ್ಕೆ ಒದಗಿಸಿದ, ರೈತರಿಗೆ ಸಾಲ ಮನ್ನ, ಕಡಿಮೆ ಬಡ್ಡಿ ಸಾಲ ಮುಂತಾದವುಗಳ ಮೂಲಕ ಇಂದಿಗೂ ರಾಜ್ಯದ ಜನಗಳ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿರುವ ಶ್ರೀ ರಾಮಕೃಷ್ಣ ಹೆಗಡೆಯವರ ವ್ಯಕ್ತಿ ಮತ್ತು ವ್ಯಕ್ತಿತ್ವದ ಪರಿಚಯ ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.

ಉತ್ತರಕರ್ನಾಟಕದ ಸಿದ್ದಾಪುರ ತಾಲೂಕಿನ ದೊಡ್ಮನೆ ಗ್ರಾಮದ ಕೃಷಿಕ ಕುಟುಂಬದ ಮಹಾಬಲೇಶ್ವರ ಹೆಗಡೆ ಹಾಗೂ ಸರಸ್ವತಿ ಹೆಗಡೆ ದಂಪತಿಗಳಿಗೆ 1926ರ ಅಗಸ್ಟ್ 29ರಂದು ರಾಮಕೃಷ್ಣ ಹೆಗಡೆಯವರು ಜನಿಸುತ್ತಾರೆ. ಓದಿನಲ್ಲಿ ಅತ್ಯಂತ ಚುರುಕಾಗಿದ್ದ ರಾಮಕೃಷ್ಣರಿಗೆ ನಾಯಕತ್ವ ಎನ್ನುವುದು ರಕ್ತಗತವಾಗಿ ಬರುವುದಕ್ಕೆ ಅವರ ಮನೆಯ ವಾತಾವರಣವೂ ಕಾರಣವಾಗಿತ್ತು ಎಂದರೂ ಎಂದರೂ ತಪ್ಪಾಗದು. ಅವರು ತಂದೆಯವರು ಸ್ವಾತ್ರಂತ್ರ ಹೋರಾಟಗಾರಾಗಿದ್ದರೆ, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಗಡಿ ಭಾಗಕ್ಕೆ ಅಂಟಿಕೊಂದ್ದಂತಹ ತೋಟದ ಮಧ್ಯೆಯಲ್ಲಿದ್ದ ಅವರ ಮನೆ ಅನೇಕ ಸ್ವಾತಂತ್ರ್ಯ ಹೋರಾಟಗಾರರಿಗೆ ಆಶ್ರಯತಾಣವಾಗಿತ್ತು. ಹಾಗಾಗಿಯೇ ಅವರ ಮನೆಗೆ ಪೋಲೀಸರ ಧಾಳಿ ಆಗ್ಗಿಂದ್ದಾಗೆ ನಡೆಯುತ್ತಿದ್ದವು.

h3

ಸ್ವಾತ್ರಂತ್ರ್ಯ ಹೋರಾಟಗಾರರನ್ನು ಮತ್ತು ಬ್ರಿಟೀಷರ ದಬ್ಬಾಳಿಕೆಯನ್ನು ಅತ್ಯಂತ ಹತ್ತಿರದಿಂದ ಕಂಡಿದ್ದ ರಾಮಕೃಷ್ಣರು ಚಿಕ್ಕಂದಿನಿಂದಲೇ, ಪತ್ರಕರ್ತರಾಗಬಯಸಿದ್ದರು. ಹಾಗಾಗಿಯೇ ಸಿರ್ಸಿಯ ಮಾರಿಕಾಂಬ ಪ್ರೌಢಶಾಲೆಯಲ್ಲಿ ಕಲಿಯುತ್ತಿದ್ದಾಗಲೇ ಕೈಬರಹದ ಪತ್ರಿಕೆ ಹೂವಿನ ಸರಕ್ಕೆ ಲೇಖನ ಬರೆಯುತ್ತಿದ್ದರು. ಮುಂದೆ ಬನಾರಸ್ ವಿದ್ಯಾಪೀಠದಲ್ಲಿ ಪದವಿ ವ್ಯಾಸಂಗ ಮಾಡುವಾಗಲೂ ಸ್ಥಳೀಯ ಪತ್ರಿಕೆಗಳಿಗೆ ಲೇಖನ ಬರೆಯುವ ಮೂಲಕ ಅವರ ಆಸೆಗಳನ್ನು ಪೂರೈಸಿಕೊಂಡಿದ್ದರು. ಕಾಶಿ ವಿದ್ಯಾಪೀಠದಲ್ಲಿ ಪದವಿ ಮುಗಿಸಿ ಅಲ್ಲಿಂದ ಲಕ್ನೋ ವಿಶ್ವವಿದ್ಯಾಲಯದಲ್ಲಿ ನ್ಯಾಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು ಮುಗಿಸಿಕೊಂಡು ಕರ್ನಾಟಕಕ್ಕೆ ಮರಳಿ ವಕೀಲ ವೃತ್ತಿಯೊಂದಿಗೆ ಕೆಲಕಾಲ ಸಿರ್ಸಿಯ ಸ್ಥಳೀಯ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸಿ ನಂತರ ರಾಜಕೀಯದತ್ತ ಮುಖ ಮಾಡಿದ ಕಾರಣ ಪತ್ರಕರ್ತನಾಗದೇ ಹೋದದ್ದಕ್ಕೆ ಅವರಿಗೆ ವಿಷಾಧವಿತ್ತು.

h1

1942ರ ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ ಸೆರೆಮನೆ ವಾಸವನ್ನು ಅನುಭವಿಸಿದ ಹೆಗಡೆಯವರು ತಮ್ಮ 20ನೇ ವಯಸ್ಸಿನಲ್ಲಿಯೇ ರೈತ ಚಳುವಳಿಯ ರೂವಾರಿಯಾಗಿದ್ದರು. ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ 1954ರಲ್ಲಿ ರಾಜಕೀಯಕ್ಕೆ ಪ್ರವೇಶಿಸಿದ ಹೆಗಡೆಯವರು 1957ರಲ್ಲಿ ಮೊದಲ ಬಾರಿಗೆ ಕರ್ನಾಟಕ ವಿಧಾನ ಸಭೆಗೆ ಆಯ್ಕೆಯಾಗಿ ನಿಜಲಿಂಗಪ್ಪ ಮತ್ತು ವೀರೇಂದ್ರ ಪಾಟೀಲರ ಮಂತ್ರಿಮಂಡಲಗಳಲ್ಲಿ ವಿವಿಧ ಖಾತೆಗಳನ್ನು ನಿರ್ವಹಿಸಿ ಜನಪ್ರಿಯರಾದರು. ಹೆಗಡೆ ಮತ್ತು ವೀರೇಂದ್ರ ಪಾಟೀಲರ ಜೋಡಿಯನ್ನು ಲವ-ಕುಶ ಜೋಡಿ ಎಂದೇ ಜನರು ಕರೆಯುತ್ತಿದ್ದರು.

1975ರಲ್ಲಿ ಅಂದಿನ ಪ್ರಧಾನ ಮಂತ್ರಿ ಇಂದಿರಾಗಾಂಧಿಯವರು ರಾಷ್ಟ್ರದ ಮೇಲೆ ಹೇರಿದ ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ್ದಕ್ಕಾಗಿ ಹೆಗಡೆಯವರು ಜೈಲುವಾಸಕ್ಕೆ ತಳ್ಳಲ್ಪಟ್ಟಾಗ, ಅಲ್ಲಿ ಅವರಿಗೆ ಹಿರಿಯ ನಾಯಕರಾದ ಜಯಪ್ರಕಾಶ ನಾರಾಯಣ್ ವಾಜಪೇಯಿ, ಮಧುದಂಡವತೆ, ಅಡ್ವಾಣಿ, ಚಂದ್ರಶೇಖರ್ ಮುಂತಾದ ಹಿರಿಯ ನಾಯಕರು ಬಹಳ ಹತ್ತಿರವಾಗಿ ಜೆಪಿಯವರ ನೇತೃತ್ವದಲ್ಲಿ ಆರಂಭಗೊಂಡ ಜನತಾ ಪಕ್ಷಕ್ಕೆ ಸೇರಿ ಪ್ರಧಾನ ಕಾರ್ಯದರ್ಶಿಗಳಾಗಿದ್ದರು.

h2

1983ರ ವಿಧಾನಸಭಾ ಚುನಾವಣೆಯಲ್ಲಿ ಜನತಾಪಕ್ಷ ಮತ್ತು ಕ್ರಾಂತಿರಂಗ ಜಂಟಿಯಾಗಿ ಹೆಚ್ಚಿನ ಸ್ಥಾನಗಳನ್ನು ಗೆದ್ದು ಬಹುಮತಕ್ಕೆ ಅಲ್ಪ ಸಂಖ್ಯೆಯ ಕೊರತೆ ಇದ್ದಾಗ, ಭಾರತೀಯ ಜನತಾ ಪಕ್ಷದ 18 ಶಾಸಕರ ಬೆಂಬಲದೊಂದಿಗೆ ರಾಜ್ಯದಲ್ಲಿ ರಾಮಕೃಷ್ಣ ಹೆಗಡೆಯವರ ನೇತೃತ್ವದಲ್ಲಿ ಪ್ರಪ್ರಥಮವಾದ ಕಾಂಗ್ರೆಸ್ಸ್ಯೇತರ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಮುಖ್ಯಮಂತ್ರಿಯಾದ ಸಮಯದಲ್ಲಿ ರಾಜ್ಯದಲ್ಲಿ ಕಾಡುತ್ತಿದ ಬರಕ್ಕೆ ಪರಿಹಾರವಾಗಿ ನೀರ್ ಸಾಬ್ ಎಂದೇ ಖ್ಯಾತಿಯಾದ ಅಬ್ದುಲ್ ನಜೀರ್ ಸಾಬ್ ಅವರೊಂದಿಗೆ ಹಳ್ಳಿ ಹಳ್ಳಿಗಳಲ್ಲಿ ಕೊಳವೇ ಭಾವಿಯನ್ನು ತೊಡಿಸಿ ಜನರ ದಾಹವನ್ನು ತೀರಿಸಿದ್ದಲ್ಲದೇ, ದೇಶದಲ್ಲೇ ಮೊದಲ ಬಾರಿಗೆ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದು ಕೆಲವೇ ದಿನಗಳಲ್ಲಿ ಜನಪ್ರಿಯ ಮುಖ್ಯಮಂತ್ರಿ ಎನಿಸಿಕೊಂಡರು.

ಇದೇ ಜನಪ್ರಿಯತೆಯನ್ನೇ ರಾಜಕಿಯವಾಗಿ ಬಳಸಿಕೊಳ್ಳಲು ನಿರ್ಧರಿ, ವಿಧಾನಸಭೆಯನ್ನು ವಿಸರ್ಜಿಸಿ ಮುಂದೆ ನಡೆದ ವಿದಾನಸಭೆ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಆರಿಸಿ ಬಂದು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದರು. ಅಧಿಕಾರದ ಹಿಂದೆ ಜೋತು ಬೀಳುವ ಅನೇಕ ರಾಜಕಾರಣಿಗಳ ಮಧ್ಯೆ ಅಧಿಕಾರವೇ ಹೆಗಡೆವರನ್ನು ಹುಡಿಕಿಕೊಂಡು ಬರುವಷ್ಟು ಅದೃಷ್ಟಶಾಲಿಯಾಗಿದ್ದರು ಎಂದರೂ ತಪ್ಪಾಗದು. ಕುರ್ಚಿಗಾಗಿ ಬಡಿದಾಡುವ ರಾಜಕಾರಣದಲ್ಲಿ ರಾಮಕೃಷ್ಣ ಹೆಗಡೆ ಅವರ ಈ ನಡೆ ಸಾರ್ವಕಾಲಿಕವಾಗಿ ಅಚ್ಚರಿ ಹುಟ್ಟಿಸುವಂತದ್ದಾಗಿತ್ತು. ವಿಧವಾ ಪಿಂಚಣಿ, ರಾಜ್ಯ ಅಲ್ಪಸಂಖ್ಯಾತರ ಆಯೋಗ, ಮತ್ತು ಅಭಿವೃಧ್ಧಿ ನಿಗಮ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡವರ ಅಭ್ಯುದಯಕ್ಕಾಗಿ ಆಯೋಗ ಹಾಗೂ ಅಭಿವೃದ್ಧಿ ನಿಗಮಗಳ ಸ್ಥಾಪನೆ, ಪೌರಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 25 ರ ಮೀಸಲಾತಿ, ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ, ದೇಶದಲ್ಲಿಯೇ ಮೊದಲ ಬಾರಿಗೆ ಭ್ರಷ್ಟಾಚಾರವನ್ನು ತಡೆಗಟ್ಟಲು ಕರ್ನಾಟಕ ಲೋಕಾಯುಕ್ತದ ಸ್ಥಾಪನೆ ಹೀಗೆ ಸಾಲು ಸಾಲು ಪ್ರಥಮಗಳು ಅವರ ಅಧಿಕಾರದಲ್ಲಿ ಸಂಭವಿಸಿವೆ.

ರಾಮಕೃಷ್ಣ ಹೆಗಡೆಯವರ ಕಾಲದಲ್ಲಿ ಅವರ ಬೆನ್ನು ಬಿಡದ ಬೇತಾಳದಂತೆ ಕಾಡಿದವರೆಂದರೆ ಎ.ಕೆ.ಸುಬ್ಬಯ್ಯನವರು. ರಾಮಕೃಷ್ಣ ಹೆಗಡೆಯವರ ಮೊದಲ ಬಾರಿಗೆ ಮುಖ್ಯ ಮಂತ್ರಿಗಳಾಗಿದ್ದಾಗ ರೇವಜೀತು ಹಗರಣ ಹಾಗೂ ಅವರ ಮಗ ಭರತ್ ಹೆಗಡೆ ಶಾಮೀಲಾಗಿದ್ದ ಎನ್ನಲಾದ ಮೆಡಿಕಲ್ ಸೀಟ್ ಹಗರಣ ಮುಂತಾದ ಅನೇಕ ಪ್ರಕರಣಗಳು ಅವರ ರಾಜಕೀಯ ನಾಯಕತ್ವಕ್ಕೆ ಕಪ್ಪು ಚುಕ್ಕಿ ಮೂಡಿಸಿದ್ದಲ್ಲದೇ, ಅವರ ಹಿರಿಯ ಸಹೋದರರಾಗಿದ್ದ ದೊಡ್ಮನೆ ಗಣೇಶ್ ಹೆಗಡೆಯವರ ಮೇಲೆ ಅಕ್ಕಿ ದಾಸ್ತಾನು ಮತ್ತು ಸಾಗಾಟದ ಆರೋಪಗಳು ಎದುರಾಗಿ ಅವರೆಲ್ಲರ ಮೇಲೆಯೇ ನ್ಯಾಯಾಂಗ ತನಿಖೆಗೆ ಆದೇಶಿಸಿ ರಾಜ್ಯಾದ್ಯಂತ ಮನೆ ಮಾತಾದರೆ, ಎರಡನೇ ಬಾರೀ ದೂರವಾಣಿ ಕದ್ದಾಲಿಕೆಯ ಹಗರಣದ ನೈತಿಕ ಹೊಣೆ ಹೊತ್ತು ರಾಮಕೃಷ್ಣ ಹೆಗಡೆಯವರು ರಾಜ್ಯರಾಜಕೀಯದಿಂದ ದೂರ ಸರಿಯುವಂತಾಯಿತು.

h5

ತಮ್ಮ ರಾಜಕೀಯ ಅವಧಿಯಲ್ಲಿ ಮಂತ್ರಿಗಳಾಗಿ ಸರಿ ಸುಮಾರು ಎಲ್ಲಾ ಖಾತೆಗಳನ್ನೂ ನಿರ್ವಹಿಸಿದ ರಾಮಕೃಷ್ಣ ಹೆಗಡೆಯವರು ಎರಡು ಬಾರಿ ಮುಖ್ಯಮಂತ್ರಿಗಳಾಗಿ, ನಂತರ ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ವಾಣಿಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದರು. ಹೆಗಡೆ ಕರ್ನಾಟಕ ರಾಜ್ಯದ ಶ್ರೇಷ್ಠ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರಾಗಿದ್ದರು. ಕರ್ನಾಟಕದ ರಾಜಕೀಯದಲ್ಲಿ 13 ಬಾರಿ ರಾಜ್ಯ ಆಯವ್ಯಯವನ್ನು ಮಂಡಿಸಿದ ಏಕೈಕ ಅರ್ಥ ಸಚಿವ ಎಂಬುದು ಅವರ ಹೆಗ್ಗಳಿಕೆಯಾಗಿದೆ. ರಾಜಕೀಯದ ಜೊತೆ ಜೊತೆಗೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಗಳಲ್ಲಿಯೂ ಅಪಾರವಾದ ಆಸಕ್ತಿ ಹೊಂದಿದ್ದವರಾಗಿದ್ದು ಅಂತಹ ಕಾರ್ಯಗಳಿಗೆ ತಮ್ಮ ಅಧಿಕಾರಾವಧಿಯಲ್ಲಿ ಅಪಾರವಾದ ಪ್ರೋತ್ಸಾಹ ನೀಡಿದ್ದರು. ಅದರ ಮುಂದು ವರೆದ ಭಾಗವಾಗಿಯೇ ಹೆಸರಘಟ್ಟದ ಬಳಿ ಖ್ಯಾತ ಒಡಿಸ್ಸೀ ನೃತ್ಯಗಾರ್ತಿ ಪ್ರೋತಿಮಾ ಬೇಡಿ ಅವರ ನೃತ್ಯಗ್ರಾಮಕ್ಕೆ ಸರ್ಕಾರಿ ಜಾಗವನ್ನು ನೀಡಿದ್ದರು. ಮತ್ತೊಬ್ಬ ನೃತ್ಯಗಾರ್ತಿ ಪ್ರತಿಭಾ ಪ್ರಹ್ಲಾದ್ ಅವರಿಗೂ ಹೆಗಡೆಯವರ ಕೃಪಾಶೀರ್ವಾದವಿತ್ತು ಎನ್ನುವುದು ಬಲ್ಲವರ ಮಾತಾಗಿದೆ. ಸ್ವತ: ಯಕ್ಷಗಾನ ಕಲಾವಿದರಾಗಿದ್ದ ಹೆಗಡೆಯವರು ಮರಣ ಮೃದಂಗ ಎನ್ನುವ ಸಿನಿಮಾ ಸೇರಿದಂತೆ ಕನ್ನಡದ ಎರಡು ಸಿನಿಮಾಗಳಲ್ಲಿ ನಟಿಸಿದ್ದಲ್ಲದೇ, ರಾಜ್ಯದ ಕಲಾವಿದರಿಗೆ ಮಾಶಾಸನ, ಕನ್ನಡ ಚಿತ್ರಗಳಿಗೆ ಶೇಕಡಾ50 ರ ರಿಯಾಯಿತಿ ಮುಂತಾದ ಯೋಜನೆಗನ್ನು ತರುವುದರ ಮೂಲಕ ಕಲಾ ಪೋಷಕರೆನಿಸಿಕೊಂಡರು.

ಈ ದೇಶ ಪ್ರಜಾಪ್ರಭುತ್ವ ದೇಶ ಎನಿಸಿದರು ಅನೇಕ ರಾಜಕೀಯ ನಾಯಕರು ತಮ್ಮ ಕುಟುಂಬಸ್ಥರನ್ನೇ ತಮ್ಮ ಉತ್ತರಾಧಿಕಾರಿಗಳನ್ನಾಗಿ ಮಾಡಿಕೊಂಡು ಅಧಿಕಾರ ತಮ್ಮ ಬಳಿಯೇ ಇರುವಂತೆ ನೋಡಿಕೊಳ್ಳುವಾಗ ಇದಕ್ಕೆ ಅಪರಾಧ ಎನ್ನುವಂತಿದ್ದರು ಹೆಗಡೆಯವರು. ರಾಮಕೃಷ್ಣ ಹೆಗಡೆಯವರು ತಮ್ಮ ಕಾಲದಲ್ಲಿ ಹಲವಾರು ನಾಯಕರನ್ನು ಬೆಳಸಿ ಹೋದರು. ಪ್ರಸ್ತುತ ರಾಜಕಾರಣದಲ್ಲಿರುವ ಹಲವಾರು ನಾಯಕರುಗಳು ಹೆಗಡೆಯವರ ಗರುಡಿಯಿಂದ ಹೊರಬಂದಿರುವ ಶಿಷ್ಯರೇ. ಮಾಜೀ ಮುಖ್ಯ ಮಂತ್ರಿಗಳಾದ ಎಸ್. ಆರ್. ಬೊಮ್ಮಾಯಿ, ಸಿದ್ದರಾಮಯ್ಯ, ಬಿ.ಸೋಮಶೇಖರ್, ಆರ್. ವಿ. ದೇಶಪಾಂಡೆ, ನಜೀರ್ ಸಾಬ್, ಜೀವಿಜಯ, ರಾಚಯ್ಯ, ಪಿ.ಜಿ.ಆರ್.ಸಿಂಧ್ಯ, ಜೀವರಾಜ್ ಆಳ್ವ ಹೀಗೆ ಇನ್ನೂ ಅನೇಕ ನಾಯಕರುಗಳನ್ನು ಬೆಳೆಸಿದರು. ಹೆಗಡೆ ತಾವೊಬ್ಬರೇ ಬೆಳೆಯದೇ ಇತರರನ್ನೂ ಬೆಳೆಸಿ ಅವರವರ ಶಕ್ತಿ ಸಾಮರ್ಥ್ಯದ ಅನುಗುಣವಾಗಿ ಅವರಿಗೆ ಅಧಿಕಾರವನ್ನು ನೀಡಿ ಬೆಳಸಿದರು.

ಬಾಯಿಮಾತಿನಲ್ಲಿ ಜಾತ್ಯಾತೀತರೆಂದು ಕೊಚ್ಚಿಕೊಳ್ಳುವ ರಾಜಕೀಯ ನಾಯಕರೇ ಹೆಚ್ಚಾಗಿರುವ ಇಂದಿನ ರಾಜಕಾರಣದಲ್ಲಿ ರಾಮಕೃಷ್ಣ ಹೆಗಡೆಯವರು ಅಪ್ಪಟವಾದ ಜಾತ್ಯತೀತರಾಗಿದ್ದರು ಎಂದರೆ ಅತಿಶಯವೆನಿಸಿದು. ಅವರೆಂದೂ ತಮ್ಮ ಸ್ವಜಾತಿಯಿಂದ ಗುರುತಿಸಿಕೊಳ್ಳಲೇ ಇಲ್ಲ, ಉತ್ತರ ಕರ್ನಾಟಕದ ಲಿಂಗಾಯಿತರ ನಾಯಕರೆಂದೇ ಪ್ರಸಿದ್ಧಿ ಪಡೆದಿದ್ದರು. ತಮ್ಮ ಇಬ್ಬರು ಹೆಣ್ಣುಮಕ್ಕಳು ಮತ್ತು ಮಗನಿಗೂ ಸಹಾ ಅಂತರ್ಜಾತಿ ವಿವಾಹವನ್ನು ಮಾಡಿಸಿದ್ದದ್ದು ಗಮನಾರ್ಹವಾಗಿತ್ತು.

h4

ಬದಲಾದ ರಾಜಕೀಯದಲ್ಲಿ ಯಾರನ್ನು ಹೆಗಡೆಯವರು ಬೆನ್ನು ತಟ್ಟಿ ಬೆಳೆಸಿದ್ದರೋ ಅದೇ ನಾಯಕರು ತಮ್ಮ ಬೆಂಬಲಿಗರ ಮೂಲಕ ಹೆಗಡೆಯವರಿಗೆ ವಿಧಾನಸೌಧದ ಮುಂದೆ ಚೆಪ್ಪಲಿಯ ಸೇವೆಯನ್ನು ಮಾಡಿಸಿ ಅವಮಾನಿಸಿದ್ದಲ್ಲದೇ ಮುಂದೆ ಅವರಿಗೆ ಅಚಾನಕ್ಕಾಗಿ ಕೇಂದ್ರದಲ್ಲಿ ಅಧಿಕಾರ ಸಿಕ್ಕಾಗ ತಾವು ಕಟ್ಟಿದ ಪಕ್ಷದಂದಲೇ ಉಚ್ಚಾಟಿಸುವ ಮೂಲಕ ಹೆಗಡೆಯವರ ರಾಜಕೀಯ ಜೀವನಕ್ಕೆ ಚರಮಗೀತೆ ಹಾಡಿದಾಗ, ಸ್ವಪಕ್ಷೀಯರಿಂದಲೇ ಬೆನ್ನಿಗೆ ಚೂರಿ ಹಾಕಿಸಿಕೊಂಡ ಕೊರಗಿನಲ್ಲೇ 2004ರ ವರ್ಷದ ಜನವರಿ 12ರಂದು ನಿಧನರಾದರು.

ರಾಜಕಾರಣದಲ್ಲಿದ್ದು ಜನಾನುರಾಗಿಯಾಗಿ, ಜನತೆಯ ಕೈಗೆ ಆಡಳಿತ ನೀಡಿ, ಸದುದ್ದೇಶಗಳಿಂದ, ಜಾತಿಯ ಹಂಗು ಮತ್ತು ಬೆಂಬಲವಿಲ್ಲದೇ, ಹೇಗೆ ಯಶಸ್ವೀ ಆಡಳಿತ ನಡೆಸಬಹುದು ಎಂಬುದಕ್ಕೆ ಸಾಕ್ಷಿಯಾದ ಶ್ರೀ ರಾಮಕೃಷ್ಣ ಹೆಗಡೆ ಅವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ

ಏನಂತೀರೀ?
ನಿಮ್ಮವನೇ ಉಮಾಸುತ

2 thoughts on “ರಾಮಕೃಷ್ಣ ಹೆಗಡೆ

  1. ದಿ . ಶ್ರೀ. ರಾಮಕೃಷ್ಣ ಹೆಗಡೆಯವರ ಬಗ್ಗೆ ಅದ್ಭುತವಾಗಿ ಬರೆದಿರುವ ಶ್ರೀ ಶ್ರೀಕಂಠ ಬಾಳಗಂಚಿರವರೇ ನಿಮಗೆ ವಂದನೆಗಳು 🙏
    ರಾಮಚಂದ್ರ. ಜಿ. ಹೆಚ್

    Liked by 1 person

  2. ಅತ್ಯುತ್ತಮ ಮಾಹಿತಿ ವರ್ಣರಂಜಿತ ಮುತ್ಸದ್ದಿ ತತ್ವಾಧಾರಿತ ರಾಜಕಾರಣಿ ರಾಮಕೃಷ್ಣ ಹೆಗಡೆ ಅವರ ಬಗ್ಗೆ ಧನ್ಯವಾದಗಳು ಸರ್.

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s