ಮೊನ್ನೆ ಪಂಜಾಬಿನಲ್ಲಿ ವಿವಿಧ ಯೋಜನೆಗಳನ್ನು ಉಧ್ಘಾಟಿಸುವ ಸಲುವಾಗಿ ನಮ್ಮ ದೇಶದ ಪ್ರಧಾನ ಮಂತ್ರಿಗಳು ನಿಗಧಿಯಂತೆ ಹೆಲಿಕ್ಯಾಪ್ಟರಿನಲ್ಲಿ ಪ್ರಯಾಣಿಸಲು ನಿರ್ಧಾರವಾಗಿದ್ದರೂ, ಹವಾಮಾನದ ವೈಪರೀತ್ಯದಿಂದಾಗಿ ಕೂಡಲೇ ರಸ್ತೆ ಮಾರ್ಗದಲ್ಲಿ ಪ್ರಯಾಣಿಸಲು ನಿರ್ಧರಿಸಿ, ಆದರ ಸಂಪೂರ್ಣ ಯೋಜನೆಯನ್ನು ರಾಜ್ಯ ಸರ್ಕಾರಕ್ಕೆ ತಿಳಿಸಿ ಅವರ ರಕ್ಷಣೆಯ ಜವಾಬ್ಛಾರಿಯನ್ನು ನೋಡಿಕೊಳ್ಳಲು ಸೂಚಿಸಲಾಗಿರುತ್ತದೆ. ನಂತರ ವಿವಿಧ ಕಾರಣಗಳಿಂದಾಗಿ ನಮ್ಮ ಪ್ರಧಾನ ಮಂತ್ರಿಗಳನ್ನು ರಸ್ತೆಯ ಮಾರ್ಗದ ಮಧ್ಯದಲ್ಲೇ ಸುಮಾರು 15-20 ನಿಮಿಷಗಳ ಕಾಲ ಮೇಲ್ಸೇತುವೆ ಮೇಲೆ ತಡೆದು ನಿಲ್ಲಿಸುವ ಮೂಲಕ ಈ ದೇಶದಲ್ಲಿ ಹಿಂದೆಂದೂ ಕಾಣದ ವಿಛಿದ್ರಕಾರಿ ಘಟನೆಗೆ ಸಾಕ್ಷಿಯಾಗುತ್ತದೆ.
ಇದು ಅಚಾನಕ್ಕಾಗಿ ನಡೆದ ದುರ್ಘಟನೆ ಎಂದು ಪಂಜಾಬ್ ಸರ್ಕಾರ ವಾದಿಸಿದರೆ, ಇದು ರಾಜ್ಯ ಸರ್ಕಾರದ ಸಂಪೂರ್ಣ ವೈಫಲ್ಯ ಎಂದು ಕೇಂದ್ರ ಸರ್ಕಾರ ವಾದಿಸುತ್ತದೆ. ಲಜ್ಜೆಗೆಟ್ಟ ಕಾಂಗ್ರೇಸ್ ನಾಯಕರು ಈ ದುರ್ಘಟನೆ ನಡೆದ ಕೇವಲ 10 ನಿಮಿಷಗಳಲ್ಲಿಯೇ ದೇಶಾದ್ಯಂತ ಸಂಭ್ರಮಿಸಲು ಆರಂಭಿಸಿದ್ದಲ್ಲದೇ, How is the Josh ಎಂದು ಸಾಮಾಜಿಕಜಾಲತಾಣಗಳಲ್ಲಿ ಪ್ರಧಾನಮಂತ್ರಿಗಳನ್ನೇ ಅಣಕಿಸುವ ಪೋಸ್ಟರ್ಗಳನ್ನು ಹರಿದುಬಿಡುವ ದುಸ್ಸಾಹಸಕ್ಕೂ ಕೈ ಹಾಕಿರುವುದು ನಿಜಕ್ಕೂ ದುರ್ದೈವವೇ ಸರಿ.
ಈ ಕುರಿತಾಗಿ ಕಾಂಗ್ರೇಸ್ ಮತ್ತು ಬಿಜೆಪಿ ನಾಯಕರುಗಳಲ್ಲದೇ ಅಯಾಯಾ ಪಕ್ಷದ ಸಮರ್ಥಕರು ಅವರವರ ಭಾವಕ್ಕೆ ಅವರವರ ಭಕುತಿ ಎನ್ನುವಂತೆ ಸಮರ್ಥನೆ ಮಾಡಿಕೊಂಡ ಲೇಖನಗಳನ್ನು ಈಗಾಗಲೇ ಓದಿದ್ದೇವೆ. ಆದರೆ ನಾವು ಇಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಾದ ಸಂಗತಿಯೇನೆಂದರೆ ಈ ರೀತಿಯ ರಾಜಕೀಯ ಪಕ್ಷಗಳ ತೆವಲುಗಳಿಂದಾಗಿ, ಪ್ರಪಂಚದ ಮುಂದೆ ನಮ್ಮ ದೇಶದ ಮಾನವನ್ನು ನಾವೇ ಹರಾಜಿಗೆ ಹಾಕುತ್ತಿರುವುದಲ್ಲದೇ ತಮ್ಮ ದೇಶದ ಪ್ರಧಾನಿಗಳಿಗೇ ರಕ್ಷಣೆ ಕೊಡಲಾಗದವರ ದೇಶದ ರಕ್ಷಣಾ ವ್ಯವಸ್ಥೆ ಇನ್ನು ಹೇಗೆ ಇರಬಹುದು ಎಂದು ನಮ್ಮ ಆಂತರಿಕ ರಕ್ಷಣೆಯ ಬಗ್ಗೆ ಬೆತ್ತಲೆ ಗೊಳಿಸುತ್ತಿದ್ದೇವೆ ಎಂಬುದರ ಅರಿವಿಲ್ಲದಿರುವುದು ನಿಜಕ್ಕೂ ಗಾಭರಿಯನ್ನುಂಟು ಮಾಡುತ್ತಿದೆ.
ಮೋದಿಯವರನ್ನು ಸೈದ್ಧಾಂತಿಕವಾಗಿಯೇ ಆಗಲಿ ಇಲ್ಲವೇ ಪ್ರಜಾತಾಂತ್ರಿಕವಾಗಿ ಮಣಿಸಲು ಸಾಧ್ಯವಿಲ್ಲ ಎಂಬುದನ್ನು ಮನಗಂಡೇ ವಿರೋಧ ಪಕ್ಷಗಳು ಶತ್ರುವಿನ ಶತ್ರು ನಮ್ಮ ಮಿತ್ರ ಎನ್ನುವಹಾಗೆ ಮೋದಿಯವರನ್ನು ಶತಾಯ ಗತಾಯ ಸೋಲಿಸಲೇ ಬೇಕು ಎಂದು ದೇಶ ವಿರೋಧಿಗಳ ಕೈ ಜೋಡಿಸುತ್ತಿರುವುದು ದೇಶದ ಭಧ್ರತೆ ನಿಜಕ್ಕೂ ಆಘಾತಕಾರಿಯಾಗಿದೆ.
80ರ ದಶಕದಲ್ಲಿ ಶತ್ರುಗಳನ್ನು ಮಣಿಸುವ ಸಲುವಾಗಿ ಬಿಂದ್ರನ್ ವಾಲೆ ಎಂಬ ಖಲಿಸ್ಥಾನಿಯನ್ನು ಪಂಜಾಬಿನಲ್ಲಿ ಪರೋಕ್ಷವಾಗಿ ಬೆಳೆಸಿದ ಕಾಂಗ್ರೇಸ್ ಕಡೆಗೆ ಅದೇ ಖಲೀಸ್ಥಾನಿ ಬಿಂದ್ರನ್ ವಾಲೆ ಅಮೃತಸರದ ಸಿಖ್ಖರ ದೇವಾಲಯವನ್ನೇ ಶಸ್ತ್ರಾಸ್ತ್ರಗಳ ಅಡುಗುತಾಣವನ್ನಾಗಿಸಿ ದೇಶಕ್ಕೆ ತಲೆ ನೋವಾದಾಗ ಅವನನ್ನು ಮಣಿಸಲು ಆಪರೇಷನ್ ಬ್ಲೂಸ್ಟಾರ್ ಕೈಗೆತ್ತಿಕೊಂಡ ಪರಿಣಾಮವಾಗಿಯೇ ಇಂದಿರಾಗಾಂಧಿಯವರನ್ನು ಕಳೆದುಕೊಂಡ ಅನುಭವವಿದ್ದರೂ ರೈತರಂತೆ ಛದ್ಮ ವೇಷ ಧರಿಸಿರುವ ಮತ್ತದೇ ಖಲಿಸ್ಥಾನಿಗಳೊಂದಿಗೆ ಕೈ ಜೋಡಿಸಿ ದೆಹಲಿಯಲ್ಲಿ ಹತ್ತಾರು ತಿಂಗಳುಗಳ ಕಾಲ ನಿರಂತರವಾದ ಚಳುವಳಿ ನಡೆಸಿದ್ದಲ್ಲದೇ ಈಗ ಪ್ರಧಾನ ಮಂತ್ರಿಯವರನ್ನು ನಡು ರಸ್ತೆಯಲ್ಲಿ ತಡೆದಿರುವುದು ನಿಜಕ್ಕೂ ಅಚ್ಚರಿಯ ಸಂಗತಿಯಾಗಿದೆ.
ಪಂಜಾಬ್ ಸರ್ಕಾರವೇ ರೈತರ ವೇಷದಲ್ಲಿ ಖಲಿಸ್ತಾನಿಗಳನ್ನು ಪ್ರಧಾನ ಮಂತ್ರಿಗಳು ಸಂಚರಿಸುತ್ತಿದ್ದ ರಸ್ತೆ ಕರೆತಂದು ಪ್ರಧಾನಿಗಳನ್ನು ಘೇರಾವ್ ಮಾಡಿ, SPG ಪಡೆಗಳು ಸಂಚಾರ ಕ್ಕೆ ಅಡ್ಡಿಮಾಡಿದ ರೈತರ ಮೇಲೆ ಅಕಸ್ಮಾತ್ ಫೈರಿಂಗ್ ಮಾಡಿ ಕೆಲ ರೈತರು ಬಲಿಯಾದಲ್ಲಿ, ಪ್ರತಿಭಟನಾ ನಿರತ ರೈತರ ಮೇಲೆ ಪ್ರಧಾನಿಗಳು ಗೋಲಿಬಾರ್ ನಡೆಸಿ ಅಮಾಯಕರ ಹತ್ಯೆ ನಡೆಸಿದರು ಎಂದು ಬಿಂಬಿಸಿ ದೇಶದ್ಯಂತ ಪ್ರತಿಭಟನೆ ಮಾಡಿ ರಾಜಕೀಯ ಲಾಭ ಪಡೆಯುವ ಹುನ್ನಾರವೂ ಅಡಗಿತ್ತು ಎನ್ನುತ್ತವೆ ಬಲ್ಲ ಮೂಲಗಳು. ಆದರೆ ಇಷ್ಟೆಲ್ಲಾ ಅವಘಡಗಳ ನಡುವೆಯೂ ತಾಳ್ಮೆಯನ್ನು ಕಳೆದು ಕೊಳ್ಳದೇ ಸಹನಾಮೂರ್ತಿಯಾಗಿ ಕುಳಿತಿದ್ದ ಮೋದಿಯವರು ಅಲ್ಲಿಂದ ಸದ್ದಿಲ್ಲದೇ ಹಿಂದಿರುಗುವ ಮೂಲಕ ವಿರೋಧಿಗಳ ತಂತ್ರವನ್ನು ಸಮರ್ಥವಾಗಿ ವಿಫಲ ಗೊಳಿಸಿದ್ದಾರೆ. ಉತ್ತರ ಪ್ರದೇಶ ದಲ್ಲಿ ಕೇಂದ್ರ ಮಂತ್ರಿಗಳ ಕಾರಿಗೆ ರೈತರ ಮೂಲಕ ಪ್ರತಿಭಟನೆ ಅಡ್ಡಿ ಪಡಿಸಿದ್ದಲ್ಲದೇ ಅವರ ವಾಹನದ ಮೇಲೆ ಕಲ್ಲು ಎಸೆದು ಪ್ರಚೋದನೆ ನೀಡಿ ರೈತರ ಮೇಲೆ ವಾಹನ ಹರಿಯುವಂತೆ ಮಾಡಿ ನಾಲ್ವರು ಅಮಾಯಕ ರೈತರು ಬಲಿಯಾಗಿದ್ದಲ್ಲದೇ ರೊಚ್ಚಿಗೆದ್ದ ಪ್ರತಿಭಟನಕಾರರು ಸಚಿವರ ಕಡೆಯ ನಾಲ್ವರನ್ನು ಬಡಿದು ಕೊಂದಿದ್ದ ಘಟನೆಯನ್ನು ಮರುಕಳಿಸಲು ಹೋಗಿ ವಿರೋಧಿಗಳು ಅಂಡು ಸುಟ್ಟ ಬೆಕ್ಕಿನಂತಾಗಿರುವುದಂತೂ ಸತ್ಯವಾಗಿದೆ.
ಈಗಾಗಲೇ ಹಲವಾರು ಬಾರಿ ಹೇಳಿರುವಂತೆ ಶತ್ರುಗಳು ಅಥವಾ ಭಯೋತ್ಪಾದಕರು ಹೊರ ದೇಶದವರಾಗಿದ್ದರೆ ಖಂಡಿತವಾಗಿಯೂ ಸುಲಭವಾಗಿ ಹಣಿಯಬಹುದಾಗಿದೆ ಆದರೇ ಈ ಆಂತರಿಕ ಹಿತಶತ್ರುಗಳನ್ನು ಮಣಿಸುವುದು ದುಸ್ಸಾಹಸವೇ ಸರಿ. ಅದರಲ್ಲೂ ತಮ್ಮ ಸೈದ್ಧಾಂತಿಕ ವಿರೋಧಕ್ಕಾಗಿ ರಾಜ್ಯಸರ್ಕಾರವೇ ಪರೋಕ್ಶವಾಗಿ ದೇಶದ ಪ್ರಧಾನಿಗಳ ಭದ್ರತೆಯೊಂದಿಗೆ ಚಲ್ಲಾಟವಾಡುವ ಮೂಲಕ ದೇಶದಲ್ಲಿ ಅಭದ್ರತೆಯನ್ನು ಮೂಡಿಸಿರುವುದು ನಿಜಕ್ಕೂ ದೌರ್ಭಾಗ್ಯವೇ ಸರಿ.
ಮೋದಿಯವರಿಗೆ ಈ ರೀತಿಯಾಗಿ ತೊಂದರೆ ಕೊಟ್ಟಲ್ಲಿ ಅಥವಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆವರ ಮೇಲೆ ಹಲ್ಲೆ ಅಥವಾ ಹತ್ಯೆ ಮಾಡಿದಲ್ಲಿ ಅದು ವಿರೋಧ ಪಕ್ಷದವರಿಗೆ ಉಪಯೋಗಕ್ಕಿಂತಲೂ ಉರುಳಾಗುವ ಸಂಭವವೇ ಹೆಚ್ಚು ಎಂದು ಈಗಾಗಲೇ ಭಾರತದ ಇತಿಹಾಸದಲ್ಲಿ ಕಂಡಾಗಿದೆ. ಇಂದಿರಾ ಎಂದರೆ ಇಂಡಿಯಾ, ಇಂದಿರಾ ಇಲ್ಲದಿದ್ದರೇ ದೇಶವೇ ಇಲ್ಲಾ ಎನ್ನುವಂತೆ ಭ್ರಮೆಯನ್ನು ಹುಟ್ಟಿಸಿದ್ದ ಕಾಲವೊಂದಿತ್ತು. ಆದರೆ ಅಂತಹ ನಾಯಕಿಯೇ ದೂರದೃಷ್ಟಿಯ ಕೊರತೆಯಿಂದಾಗಿ, ತನ್ನದೇ ಅಂಗರಕ್ಷಕರ ಕೈಯ್ಯಲ್ಲಿ ಭರ್ಭರವಾಗಿ ಹತ್ಯೆಯಾದ ನಂತರ ದಿನಗಳಲ್ಲಿ ಕಾಂಗ್ರೇಸ್ 400ಕ್ಕೂ ಹೆಚ್ಚಿನ ಸ್ಥಾನಗಳಿಸಿತ್ತು ಅದೇ ರೀತಿ ಚುನಾವಣೆಯ ಪ್ರಚಾರದ ಸಮಯದಲ್ಲಿಯೇ ಎಲ್.ಟಿ.ಟಿ.ಇ ಆತ್ಮಹತ್ಯಾದಳದಿಂದ ಅತ್ಯಂತ ದಯಾನೀಯವಾಗಿ ದೇಹವೂ ಸಿಗದಂತೆ ಛಿದ್ರ ಛಿದ್ರವಾಗಿ ರಾಜೀವ್ ಗಾಂಧಿಯವರು ಹತ್ಯೆಯಾದಾಗಲೂ ಭಾವುಕತೆಯಿಂದ ಜನರು ಕಾಂಗ್ರೇಸ್ಸನ್ನೇ ಅಧಿಕಾರಕ್ಕೆ ತಂದಿದ್ದರು ಎಂಬುದನ್ನು ಮನಗಾಣ ಬೇಕು.
ಸದ್ಯದ ಪರಿಸ್ಥಿತಿಯಲ್ಲಿ ಮೋದಿಯವರು ಕೇವಲ ಭಾರತದ ಪ್ರಧಾನಿಗಳಾಗಿಯಷ್ಟೇ ಅಗಿರದೇ ವಿಶ್ವ ನಾಯಕರಾಗಿರುವಾಗ ಅವರನ್ನು ಈ ರೀತಿಯಾಗಿ ಅಪಮಾರ್ಗದಲ್ಲಿ ಹಣಿಯಲು ಪ್ರಯತ್ನಿಸಿದರೆ ಕೆಲ ದಿನಗಳ ವರೆಗೆ ದೇಶದಲ್ಲಿ ಆಂತರಿಕ ಅಭದ್ರತೆ ಕಾಡ ಬಹುದಾದರೂ, ಅದರಿಂದ ವಿರೋಧ ಪಕ್ಷಕ್ಕೆ ಯಾವುದೇ ಪ್ರಯೋಜನವಾಗದೇ, ಜನರು ಮತ್ತೇ ಮೋದಿಯವವರ ಜಾಗದಲ್ಲಿ ಮತ್ತೊಬ್ಬ ಪ್ರಭಾವಿ ನಾಯಕನನ್ನು ಅಧಿಕಾರಕ್ಕೆ ತಂದೇ ತರುತ್ತಾರೆ ಎಂಬ ಸೂಕ್ಷ್ಮ ಪ್ರಜ್ಞೆಯೂ ಇಲ್ಲದಿರುವುದು ಅಶ್ಚರ್ಯವನ್ನು ಉಂಟು ಮಾಡುತ್ತದೆ
ಗುಂಡಾಗಿರಿ ಮಾಡಿ ಜನರನ್ನು ಹೆದರಿಸಿ ಬೆದರಿಸಿ ಮತ ಹಾಕಿಸಿಕೊಳ್ಳುವ ಇಲ್ಲವೇ ಹೆದರಿಸಿ ಬೆದರಿಸಿ ಮತ ಹಾಕಲು ಬರದಂತೆ ಮಾಡುವ ಮೂಲಕ, ಇಲ್ಲವೇ ಸರ್ಕಾರದ ವಿರುದ್ಧ ಸುಳ್ಳು ಪ್ರಚಾರವನ್ನು ಮಾಡುವ ಮೂಅಕ ಅಥಿಕಾರಕ್ಕೆ ಬರಬಹುದು ಎಂದು ವಿರೋಧ ಪಕ್ಷದವರು ಭಾವಿಸಿದಲ್ಲಿ ಅದು ಕೇವಲ ಅವರ ಭ್ರಮೆ ಎಂದರೂ ತಪ್ಪಾಗದು. ಈಗ ತಂತ್ರಜ್ಞಾನ ಬಹಳ ಮುಂದುವರಿದಿದ್ದು ಸಾಮಾಜಿಕ ಜಾಲತಾಣಗಳ ಮೂಲಕ ಇವರು ಮಾಡುವ ತಪ್ಪು ಒಪ್ಪುಗಳು ಕೆಲವೇ ಕ್ಷಣಗಳಲ್ಲಿ ದೇಶದ ಮೂಲೆ ಮೂಲೆಗೂ ತಲುಪಿ ಜನರಿಗೆ ಯಾರು ತಪ್ಪು ಮಾಡುತ್ತಿದ್ದಾರೆ, ಯಾರು ಸರಿ ಮಾಡುತ್ತಿದ್ದಾರೆ ಎಂಬುದು ತಲುಪುತ್ತಿರುವ ಕಾರಣ, ಈ ರೀತಿಯ ಕ್ಷುಲ್ಲಕ ಹೋರಾಟಗಳನ್ನು ಬದಿಗೊತ್ತಿ ರಚನಾತ್ಮಕವಾಗಿ, ಸಂವಿಧಾನಾತ್ಮಕವಾಗಿ ಹೋರಾಟ ಮಾಡುವ ಮೂಲಕ ಜನರ ಮನಗಳನ್ನು ಗೆಲ್ಲುವ ಮೂಲಕ ಅಧಿಕಾರಕ್ಕೆ ಬರಲು ಪ್ರಯತ್ನಿಸಲಿ. ಅಧಿಕಾರ ಎಂಬುದು ಎಂದಿಗೂ ಶಾಶ್ವತವಲ್ಲ ಎಂಬುದು 60 ವರ್ಷಗಳ ಕಾಲ ಇಡೇ ದೇಶವನ್ನೇ ಆಳಿದ ಕಾಂಗ್ರೇಸ್ಸು ಹೇಳ ಹೆಸರಿಲ್ಲದಂತಾಗಿದ್ದಲ್ಲಿ, 80ರ ದಶಕದಲ್ಲಿ ಕೇವಲ 2 ಸಂಸದರಿದ್ದ ಬಿಜೆಪಿ ಸಮರ್ಥವಾದ ವಿರೋಧಪಕ್ಷವಾಗಿ ಅಂದಿನ ಆಡಳಿತ ಪಕ್ಷದವನ್ನು ಸಮರ್ಥವಾಗಿ, ರಚನಾತ್ಮಕವಾಗಿ ಸಂವಿಧಾನಾತ್ಮಕವಾಗಿ ಎದುರಿಸಿದ ಪರಿಣಮವಾಗಿಯೇ ಇಂದು ಸತತವಾಗಿ ಎರಡು ಬಾರಿ ಅಧಿಕಾರಕ್ಕೇ ಎರಿರುವುದೇ ಜ್ವಲಂತ ಉದಾಹರಣೆಯಾಗಿದೆ.
ಜನರು ಮೋದಿಯವರಿಗೇನೂ ಪ್ರಧಾನ ಮಂತ್ರಿಯ ಪಟ್ಟವನ್ನು ಚಿನ್ನದ ತಟ್ಟೆಯಲ್ಲಿಟ್ಟು ಸುಖಾ ಸುಮ್ಮನೇ ಕೊಡಲಿಲ್ಲ. ಸಾರ್ವಜನಿಕ ಕ್ಷೇತ್ರದಲ್ಲಿ ಸುಮಾರು ವರ್ಷಗಳ ಕಾಲ ಸಂಘಟನೆಯಲ್ಲಿ ತೊಡಗಿಸಿಕೊಂಡವರು, ನಂತರ 3 ಬಾರಿಗೆ ಗುಜರಾತಿನ ಮುಖ್ಯಮಂತ್ರಿಗಳಾಗಿ ಸಾಕಷ್ಟು ಅವಮಾನಗಳನ್ನು ಅನುಭವಿಸಿ, ಅವೆಲ್ಲವನ್ನೂ ಲೀಲಾಜಾಲವಾಗಿ ಎದುರಿಸಿ, ಗುಜರಾತನ್ನು ಅಭಿವೃದ್ಧಿಯ ಪಥಕ್ಕೆ ಕರೆದೊಯ್ದದ್ದನ್ನು ನೋಡಿಯೇ ಜನ ಅಭೂತಪೂರ್ವವಾಗಿ ಬಹುಮತದಿಂದ ಎರಡು ಬಾರಿ ಆಯ್ಕೆ ಮಾಡಿದ್ದಾರೆ. ಒಂದು ಗೆರೆಯನ್ನು ಮುಟ್ಟದೇ ಸಣ್ಣದಾಗಿ ಮಾಡಬೇಕೆಂದರೆ ಅದರ ಪಕ್ಕದಲ್ಲಿ ಒಂದು ದೊಡ್ಡ ಗೆರೆಯನ್ನು ಎಳೆಯಬೇಕು ಎನ್ನುವಂತೆ ಮೋದಿಯವರನ್ನು ಅಧಿಕಾರದಿಂದ ಕೆಳಕ್ಕೆ ಇಳಿಸಬೇಕಾದಲ್ಲಿ ಅವರ ಸಾಧನೆಗಿಂತಲೂ ಅತ್ಯುತ್ತಮವಾದದ್ದನ್ನು ಅವರ ವಿರೋಧಿಗಳು ಮಾಡಿ ತೋರಿಸಿದಲ್ಲಿ ಮಾತ್ರವೇ ಜನರ ಹೃದಯ ಗೆಲ್ಲಬಹುದೇ ಹೊರತು ಈ ರೀತಿಯ ಹಿಂಬಾಗಿಲಿನ ಪ್ರಯತ್ನ ಎಂದೂ ಕೈಗೂಡದು.
ದೇಶವಾಸಿಗಳಿಗೆ ಈ ರೀತಿಯಾದ ಅಸಹ್ಯಕರವಾದ ಅಹಿತಕರವಾದ ಘಟನೆಗಳು ರಾಜಕೀಯ ವ್ಯವಸ್ಥೆಯ ಬಗ್ಗೆ ಆಸಹ್ಯವನ್ನೇ ಮೂಡಿಸಿ ಮತದಾನದಿಂದಲೂ ದೂರಾಗುವ ಸಂಭವವೇ ಹೆಚ್ಚಾಗಿದೆ. ಇದನ್ನೇ ಮೊನ್ನೆ ಪಬ್ಲಿಕ್ ಟಿವಿಯ ರಂಗನಾಥ್ ಅವರು ಭಾರತದಲ್ಲಿ ನೆಮ್ಮದಿಯಿಂದ ಬದುಕಬೇಕು ಎಂದರೆ ರಾಜಕೀಯದಲ್ಲಿ ಆಸಕ್ತಿ ಕಳೆದುಕೊಳ್ಳಬೇಕು. ರಾಜಕೀಯದಿಂದ ದೂರವಿದ್ದು ನಮ್ಮ ಪಾಡಿಗೆ ನಾವು ಬದುಕಬೇಕು. ಆಗ ಮಾತ್ರ ನೆಮ್ಮದಿಯಾಗಿರಲು ಸಾಧ್ಯ ಎಂದಿರುವುದು ನಿಜಕ್ಕೂ ಮಾರ್ಮಿಕವಾಗಿದೆ. ಆದರೆ ನಮ್ಮ ದೇಶ ಇಡೀ ಪ್ರಪಂಚದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರವಾಗಿದ್ದು ಇಲ್ಲಿ ಪ್ರಜೆಗಳೇ ಪ್ರಭುಗಳು ಹಾಗಾಗಿ ಅವರುಗಳೇ ಮತದಾನದಿಂದ ವಿಚಲಿತವಾದಲ್ಲಿ ಕ್ಷುದ್ರ ಶಕ್ತಿಗಳು ದೇಶದ ಅಧಿಕಾರವನ್ನು ಹಿಡಿದು ದೇಶವನ್ನು ಅಧೋಗತಿಗೆ ತರುವ ಸಾಧ್ಯತೆ ಇರುವ ಕಾರಣ, ನಾವೆಲ್ಲರೂ ಎಚ್ಚೆತ್ತು ದೇಶದ ಆಂತರಿಕ ಹಿತಶತ್ರುಗಳನ್ನು ಸಾಂವಿಧಾನಿಕವಾಗಿಯೇ ಬಗ್ಗು ಬಡಿಯುವ ಸಮಯ ಬಂದಿದೆ ಅಲ್ವೇ?.
ಏನಂತೀರೀ?
ನಿಮ್ಮವನೇ ಉಮಾಸುತ
ಪಂಜಾಬ್ ಮುಖ್ಯಮಂತ್ರಿ ಚುನ್ನಿ ಪ್ರಧಾನ ಮಂತ್ರಿಗಳ ತಮ್ಮ ರಾಜ್ಯಕ್ಕೆ ಭೇಟಿಯಿತ್ತಾಗ ಸ್ವಾಗತಿಸಲು ಬರದೇ ಹೋದದ್ದು ಸಾಂಪ್ರದಾಯಿಕ ನಡಾವಳಿಗಳ ಉಲ್ಲಂಘನೆಯೇ ಸರಿ. ಇದಕ್ಕೆ ಅವರು ನೀಡಿದ ಕಾರಣ ತಮ್ಮಲ್ಲಿ ಕೋವಿಡ್ ಲಕ್ಷಣಗಳು ಕಂಡಿದ್ದು ಪ್ರಧಾನಿಗಳ ಸುರಕ್ಷಾ ದೃಷ್ಟಿಯಿಂದ ಬರಲಿಲ್ಲವೆಂದು ಸಮರ್ಥಿಸಿಕೊಂಡಿದ್ದಾರೆ. ಆದರೆ ಮಾರನೇ ದಿನವೇ ಈ ಮುಖ್ಯಮಂತ್ರಿಗಳು ಜನ ಭರಿತ ರ್ಯಾಲಿಗೆ ಮಾಸ್ಕ್ ಹಾಕಿದೆ ಭಾಗವಹಿಸಿದ್ದರು. ಕಾಂಗ್ರೆಸ್ ಪಕ್ಷದ ಅಭಿಷೇಕ್ ಮನು ಸಿಂಘ್ವಿ ಮೋದಿಯವರು ನಿಂತಿದ್ದ ಮೇಲ್ಸೇತುವೆ ಪಾಕಿಸ್ತಾನದ ಆರ್ಟಿಲರಿಗಳ ಶೂಟಿಂಗ್ ರೇಂಜ್ ನಲ್ಲಿ ಇತ್ತು ಎಂದು ಒಪ್ಪಿಕೊಂಡಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಪ್ರಧಾನಿ ಮೋದಿಯವರ ಸ್ವಾಗತಕ್ಕೆ ಬರೆದೆ ಯಾವುದೋ ಬಾಲಿಶ ಕಾರಣ ನೀಡಿದ್ದು ಅವರಿಗೆ ಮುಜುಗರ ಉಂಟು ಮಾಡುವ ಉದ್ದೇಶದಿಂದ ಎನ್ನುವುದು ಆಕಾಶದಷ್ಟೇ ನಿಚ್ಚಳ. ಪಂಜಾಬ್ ಮುಖ್ಯಮಂತ್ರಿಗಳ ಉದ್ದೇಶ ಇನ್ನೂ ಬೇರೆ ಆಯಾಮಗಳನ್ನು ಒಳಗೂಡಿತ್ತು ಎನ್ನುವುದು ಅತ್ಯಂತ ದುರದೃಷ್ಟಕರ.
LikeLike
ಅತ್ಯುತ್ತಮ ಲೇಖನ
LikeLiked by 1 person