18 ರಿಂದ 22 ವರ್ಷಗಳ ನಡುವಿನ ಯುವ ಜನತೆಯ ಮನಸ್ಸು ಒಂದು ರೀತಿಯ ಮರ್ಕಟ ಮನಸ್ಸು ಎಂದೇ ಹೇಳಲಾಗುತ್ತದೆ. ಈ ವಯಸ್ಸಿನ ಬಹುತೇಕ ಮಕ್ಕಳಿಗೆ ತಮ್ಮ ಮುಂದಿನ ಭವಿಷ್ಯದ ಬಗ್ಗೆ ಅರಿವಿರದೇ ಅಡ್ಡದಾರಿಗಳನ್ನು ಹಿಡಿಯುವ ಸಂಭವವೇ ಹೆಚ್ಚಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಇಂದಿನ ಯುವ ಜನತೆಗೆ ಈ ದೇಶದ ಬಗ್ಗೆ ಅಭಿಮಾನವೇ ಇಲ್ಲಾ ರಾಷ್ಟ್ರೀಯತೆಯಂತೂ ಇಲ್ಲವೇ ಇಲ್ಲಾ ಎಂದು ಹೇಳುವವರಿಗೇನೂ ಕಡಿಮೆ ಇರಲಿಲ್ಲ.
ಇಂತಹ ಸಮಸ್ಯೆಗಳಿಗಾಗಿಯೇ ಕೇಂದ್ರ ಸರ್ಕಾರ ಮತ್ತು ಭಾರತೀಯ ರಕ್ಷಣಾ ಇಲಾಖೆ ಜಂಟಿಯಾಗಿ ಸುಮಾರು ಒಂದೂವರೆ ವರ್ಷಕಾಲ ಶ್ರಮಿಸಿ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೆಯುವಂತೆ ಅಗ್ನಿಪಥ್ ಎಂಬ ಯೋಜನೆಯನ್ನು ತರುವ ಮೂಲಕ ಯುವ ಜನತೆಗೆ ಆಶಾಕಿರಣವಾಗಿಯೂ ಮತ್ತು ಭಾರತೀಯ ಸೇನೆಯಲ್ಲಿ ಮಾನವ ಸಂಪನ್ಮೂಲ ನಿರ್ವಹಣೆ ಮಾಡುವಲ್ಲಿ ಬಹುದೊಡ್ಡ ಪಾತ್ರ ವಹಿಸುವಂತಹ ಯೋಜನೆಯನ್ನು ಜಾರಿಗೆ ತಂದಿದೆ. ತನ್ಮೂಲಕ ಸಶಸ್ತ್ರ ಪಡೆಗಳಿಗೆ ಹೊಸ ಸಾಮರ್ಥ್ಯದ ದಾರಿ ತೆರೆದರೆ, ಸೇನೆಯಲ್ಲಿ ಕೆಲಸ ಮಾಡುವ ಯುವಕರಿಗೆ ಹೊಸ ವೃತ್ತಿ ಮಾರ್ಗಗಳು ತೆರೆದುಕೊಳ್ಳಲಿವೆ.
ಈ ಯೋಜನೆಯಡಿಯಲ್ಲಿ 17.5 ರಿಂದ 21 ವರ್ಷದ ಒಳಗಿರುವವರು ಆಯ್ಕೆಯಾಗಿ 4 ವರ್ಷದ ತರಭೇತಿ ಪಡೆದ ನಂತರ ಉತ್ತಮವಾಗಿ ಸೇವೆ ಸಲ್ಲಿಸಿದ 25 % ಜನರಿಗೆ ನೇರವಾಗಿ ಸೇನೆಗೆ ಸೇರುವ ಅವಕಾಶದ ಜೊತೆ ಪೊಲೀಸ್ CAPFS ಮತ್ತು ಅಸ್ಸಾಂ ರೈಫಲ್ಸ್ನಲ್ಲಿ ಅಗ್ನಿವೀರರಿಗೆ ಮತ್ತು ಇತರ ಸಂಬಂಧಿತ ಸೇವೆಗಳಲ್ಲಿ ಆದ್ಯತೆ ನೀಡಲಾಗಿದೆ. ಇದರ ಜೊತೆ ವಿವಿಧ ರಾಜ್ಯ ಸರ್ಕಾರಗಳು ತಮ್ಮ ರಾಜ್ಯಗಳಲ್ಲಿ ಸರ್ಕಾರಿ ಉದ್ಯೋಗಗಳಿಗೆ ಆದ್ಯತೆ ನೀಡುವ ಭರವಸೆಯನ್ನು ನೀಡಿದೆ. ಇಲ್ಲಿ ತರಭೇತಿ ಮತ್ತು ಕೆಲಸದ ಜೊತೆ ಜೊತೆಯಲ್ಲಿಯೇ ತಾಂತ್ರಿಕ ತರಬೇತಿ, ಡಿಪ್ಲೊಮಾ ಮತ್ತು ಅಧ್ಯಯನಕ್ಕೆ ಅವಕಾಶಗಳು ಲಭ್ಯವಿರುವ ಕಾರಣ, ನಾಲ್ಕು ವರ್ಷಗಳ ಕಾಲದ ಸೇವೆಯ ನಂತರ ಹೊರಗಿನ ಕಾರ್ಪೊರೇಟ್ ಜಗತ್ತಿನಲ್ಲಿಯೂ ಉದ್ಯೋಗಗಳನ್ನು ಪಡೆಯುವ ಅವಕಾಶವಿರುತ್ತದೆ.
ತರಭೇತಿಯ ಸಮಯದಲ್ಲಿ ಅತ್ಯುತ್ತಮ ಸಾಮರ್ಥ್ಯ ತೋರಿದ 25ರಷ್ಟು ಅಗ್ನಿವೀರರಿಗೆ ವಿವಿಧ ಸೇನೆಯಲ್ಲಿ ಕಾಯಂ ಸೇವೆಗೆ ಅವಕಾಶ ಸಿಕ್ಕರೆ, 4 ವರ್ಷಗಳ ನಂತರ 11.71 ಲಕ್ಷ ಸೇವಾ ನಿಧಿ ಲಭ್ಯವಾಗಲಿದೆ. ಈ ಹಣದಿಂದ ಯುವಕರು ಹೆಚ್ಚಿನ ವಿದ್ಯಾಭ್ಯಾಸವನ್ನಾಗಲೀ ಇಲ್ಲವೇ ಸ್ವಂತ ಉದ್ಯಮವನ್ನು ಮಾಡಬಹುದಾಗಿದೆ. ಇಲ್ಲಿನ ತರಭೇತಿಯು ಸೇನಾ ಶಿಸ್ತಿನ ರೂಪದಲ್ಲಿ ಇರುವ ಕಾರಣ, ಯುವ ಜನತೆಯಲ್ಲಿ ಶಿಸ್ತು ಮತ್ತು ಸಂಯಮ ಮೂಡುವುದಲ್ಲದೇ ದೈಹಿಕವಾಗಿ ಸಧೃಢರಾಗುವ ಮೂಲಕ ಸ್ವಸ್ಥ ಯುವಕರನ್ನು ಕಾಣಬಹುದಾಗಿದೆ ಎಂದೇ ನಂಬಲಾಗಿದೆ. ಈ ಮೂಲಕ ಸೇನೆಯ ಸರಾಸರಿ ವಯಸ್ಸು 32ರಿಂದ 26ಕ್ಕೆ ಇಳಿಕೆಯಾಗಿ ಸೈನ್ಯವು ಯುವ ಉತ್ಸಾಹ ಮತ್ತು ಚಿಂತನೆಯನ್ನು ಪಡೆಯುವ ಮೂಲಕ ಸೇನೆಯ ಬಲದಲ್ಲಿ ಹೊಸತನವಿದ್ದು ಹೆಚ್ಚಿನ ತಾಂತ್ರಿಕ ಕೌಶಲ್ಯದ ಲಾಭ ಸೇನೆಗೆ ಸಿಗಲಿದೆ.
ಈ ಯೋಜನೆಯ ಕುರಿತಂತೆ ಸರಿಯಾಗಿ ಲೆಖ್ಖಾಚಾರ ಹಾಕಿದಲ್ಲಿ, 18 ನೇ ವಯಸ್ಸಿಗೆ ಸೇನೆಗೆ ಸೇರಿ ತರಭೇತಿ ಪಡೆಯುವುದರ ಕೊತೆಗೆ ನಾಲ್ಕು ವರ್ಷಗಳ ಕಾಲ ದೇಶದ ಸೇವೆ ಮಾಡುವುದರ ಜೊತೆಗೆ ಒಬ್ಬ ಜವಾಬ್ದಾರಿಯುತ ವ್ಯಕ್ತಿಯಾಗಿ 22 ರಿಂದ 24 ವಯಸ್ಸಿನಲ್ಲಿ ಹೊರೆಗೆ ಬರುವಾಗ ಪ್ರತಿಯೊಬ್ಬ ಅಗ್ನಿವೀರ ಬಳಿ 24,13,000/- ( 4 ವರ್ಷಗಳ ಸಂಬಳ 12,42,000 + ಸೇವಾ ನಿಧಿ 1171000) ಉಳಿತಾಯ ಇರುವ ಕಾರಣ ಆ ಹಣದಲ್ಲಿ ವಿದ್ಯಾಭ್ಯಾಸ ಇಲ್ಲವೇ ಸ್ವಂತ ಉದ್ಯಮವನ್ನು ಕಟ್ಟಿಕೊಳ್ಳುವ ಮೂಲಕ ಉಜ್ವಲವಾದ ಭವಿಷ್ಯವನ್ನು ರೂಪಿಸಿ ಕೊಳ್ಳಬಹುದಾಗಿದೆ. ಬಹುಶಃ 22 ವರ್ಷದ ವಯಸ್ಸಿನಲ್ಲಿ 20 ಲಕ್ಷ ರೂಪಾಯಿ ಸಾಮಾನ್ಯ ವೃತ್ತಿಯಲ್ಲಿ ಗಳಿಸುವುದು ದುರ್ಲಭವಾಗಿದೆ ಎಂದರೂ ಅತಿಶಯವಲ್ಲ.
2014ರಲ್ಲಿ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ, ತಾವು ಅಧಿಕಾರಕ್ಕೆ ಬಂದಲ್ಲಿ ದೇಶದ ಎಲ್ಲರಿಗೂ 15 ಲಕ್ಷ ರೂಪಾಯಿ ಕೊಡುತ್ತೇವೆ ಎಂದು ಎಲ್ಲೂ ಹೇಳದಿದ್ದರೂ, ಪ್ರಧಾನಿಗಳಾದ ಕೂಡಲೇ ಬಿಟ್ಟಿ ಭಾಗ್ಯಗಳ ಸೋಮಾರಿಗಳು, ಅನಾವಶ್ಯಕವಾಗಿ ಎಲ್ಲಿ 15 ಲಕ್ಷ? ಎಲ್ಲಿ 15 ಲಕ್ಷ? ಎಂದು ಹೋದ ಬಂದ ಕಡೆಯಲೆಲ್ಲಾ ಕೇಳುತ್ತಿದ್ದವರಿಗೆ, ಈಗ ಅದೇ ಪ್ರಧಾನಿಗಳು, 4 ವರ್ಷಗಳ ಕಾಲ ಮೈ ಬಗ್ಗಿಸಿ ಕೆಲಸ ಮಾಡಿ, 15 ಲಕ್ಷದ ಜೊತೆಗೆ ಬಡ್ಡಿ 15 ಲಕ್ಷದ ಜೊತೆಗೆ ಬಡ್ಡಿ ರೀತಿಯಲ್ಲಿ 9 ಲಕ್ಷ ಸೇರಿಸಿ, ಒಟ್ಟು 24 ಲಕ್ಷ ಲಕ್ಷದ ಜೊತೆಗೆ ಶಿಸ್ತು, ಸಂಯಮ, ದೇಶಾಭಿಮಾನದ, ಕೌಶಲ್ಯದ ತರಭೇತಿಯನ್ನು ಪಡೆದುಕೊಂಡು ಸ್ವಾವಲಂಭಿಗಳಾಗಿ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿ ಎನ್ನುತ್ತಿದ್ದಾರೆ. ಕೈ ಕೆಸರಾದರೆ ಬಾಯಿ ಮೊಸರು ಎನ್ನುವಂತಹ ಯೋಜನೆಯನ್ನು ಜಾರಿಗೆ ತರಲು ಮುಂದಾಗಿರುವುದು ನಿಜಕ್ಕೂ ಅಭಿನಂದನಾರ್ಹವಾಗಿದೆ.
ದುರಾದೃಷ್ಟವಷಾತ್, ಈ ಸೇನಾ ನೇಮಕಾತಿಯ ಹೊಸ ಯೋಜನೆ ಅಗ್ನಿಪಥ ಕುರಿತು ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು ಕೆಲ ಯುವಕರು ಕಾನೂನನ್ನು ಕೈಗೆ ತೆಗೆದುಕೊಂಡು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಬೆಂಕಿ ಹಚ್ಚುವ ಮೂಲಕ ಯುವಜನೆಯಲ್ಲಿ ಈ ಯೋಜನೆಯ ಕುರಿತು ತಪ್ಪು ಅಭಿಪ್ರಾಯವನ್ನು ಮೂಡಿಸುತ್ತಿದೆ. ಪಿಯೂಸಿ ಮುಗಿಸಿ ಕೆಲ ಸಮಯ ದೇಶ ಸೇವೆ ಮಾಡಲು ಬಯಸುವವರಿಗೆ ಇದು ಹೇಳಿ ಮಾಡಿಸಿದಂತಿದೆ. ಹಾಗೆ ಬೆಂಕಿ ಹಚ್ಚುವ ಯುವಕರಿಗೆ ಅಗ್ನಿಪಥಕ್ಕೆ ಸೇರಲು ಇಷ್ಟವಿಲ್ಲದಿದ್ದರೆ ಅಂತಹವರು ನೇಮಕಾತಿಗೆ ಹೋಗದೇ ತಮ್ಮ ಇಷ್ಟ ಬಂದ ಕಾರ್ಯದಲ್ಲಿ ತೊಡಗಿಸಿಕೊಳ್ಳಬಹುಗಿದೆ. ಸಾಧ್ಯವಾದರೆ ಬೇರೆಯವರ ಕನಸಿಗೆ ಮೆಟ್ಟಿಲಾಗ ಬೇಕೇ ಹೊರತು. ಅವರ ಮೆಟ್ಟಿಲುಗಳನ್ನು ಒಡೆಯುವ ಸುತ್ತಿಗೆಯಾಗ ಬಾರದು. ಈಗಲೂ ಅಗ್ನಿಪಥ್ ಕಡ್ಡಾಯವಾಗಿರದೇ, ಸಹಜವಾಗಿ ಯುವ ಜನತೆ ಈ ಯೋಜನೆಯಲ್ಲಿ ಸೇರದೇ ಹೋದಲ್ಲಿ ಸರ್ಕಾರವೂ ಸಹಾ ತನ್ನ ನೀತಿ ನಿಯಮಗಳನ್ನು ಬದಲಿಸುತ್ತದೆ. ಆದರೆ ಅದು ಬಿಟ್ಟು ಸಾರ್ವಜನಿಕ ಆಸ್ತಿಗಳನ್ನು ಹಾಳುಮಾಡುತ್ತಾ ದೊಂಬಿ ಎಬ್ಬಿಸಲು ಪ್ರಯತ್ನಿಸುತ್ತಿರುವುದರ ಹಿಂದೆ ಯಾವುದೋ ಒಂದು ಷಡ್ಯಂತ್ರವಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಓಟ್ ಬ್ಯಾಂಕಿನ ಆಸೆಯಿಂದಾಗಿ ನೂರಾರು ಉಚಿತ ಯೋಜನೆಗಳ ಮೂಲಕ ಜನರನ್ನು ಸೋಮಾರಿಗಳನ್ನಾಗಿಸಿರುವ ಬಹುತೇಕ ರಾಜಕೀಯ ಪಕ್ಷಗಳಿಗೆ ಹೀಗೆ ಸಣ್ಣ ವಯಸ್ಸಿನಲ್ಲೇ ಯುವಜನತೆಯ ಮನಸ್ಸುಗಳು ಬಲಿಯುವ ವೇಳೆಯಲ್ಲೇ ಅವರಿಗೆ ರಾಷ್ಟ್ರೀಯತೆಯ ತರಭೇತಿ ನೀಡಿದಲ್ಲಿ ಎಲ್ಲಿ ತಮ್ಮ ಓಟ್ ಬ್ಯಾಂಕ್ ಹೊಡೆತ ಬೀಳಬಹುದು ಎಂಬ ಕುಮ್ಮಕ್ಕಿನಿಂದಲೇ ರಾಜಕೀಯ ಪ್ರೇರಿತವಾಗಿ ವಿರೋಧವನ್ನು ವ್ಯಕ್ತ ಪಡಿಸುತ್ತಿರುವುದಲ್ಲದೇ, ಈ ರೀತಿಯ ದೊಂಬಿಗಳು ವಿರೋಧ ಪಕ್ಷಗಳು ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲೇ ಹೆಚ್ಚಾಗಿದೆ ಎನ್ನುವುದು ಇಲ್ಲಿ ಗಮನಿಸಬೇಕಾದಂತಹ ಅಂಶವಾಗಿದೆ.
ತಮ್ಮ ಊರುಗಳಲ್ಲಿ ಕಾಟಾಚಾರಕ್ಕೆ ಕಮೀಷನ್ ರೂಪದಲ್ಲಿ ನರೇಗ ಮೂಲಕ ದಿನಗೂಲಿ ಪಡೆಯುತ್ತಾ ಹಲವು ಭಾಗ್ಯಗಳ ಮೂಲಕ ಪುಕ್ಸಟ್ಟೆ ಅಕ್ಕಿ, ಬೇಳೆ ಎಣ್ಣೆ ತಿಂದು ಮೈ ಬೆಳೆಸಿ ಕೊಂಡವರಿಗೆ ಸೈನ್ಯದ ರೀತಿಯಲ್ಲಿ ಅಗ್ನಿವೀರರಾಗಿ ಕೆಲಸ ಮಾಡಿ ಎಂದಾಗ ಮೈ ಬಗ್ಗಿಸುವುದು ಕಷ್ಟವೇ ಅಗಿರುವುದರಿಂದ ಗಲಭೆ ಎಬ್ಬಿಸಿ ಎಲ್ಲವನ್ನೂ ಉಚಿತವಾಗಿಯೇ ಪಡೆಯುವ ಹುನ್ನಾರವಿದೆ ಎಂದರೂ ತಪ್ಪಾಗದು. ಕಂಡೋರ ತಲೆ ಒಡೆಯದೇ, ಇಂದಿನ ಯುವಜನತೆ ಸರ್ಕಾರೀ ಉದ್ಯೋಗಗಳಿಗೆ ಜೋತು ಬೀಳದೇ, ಕಷ್ಟ ಪಟ್ಟು, ಪಕೋಡಾ ಮಾರಿಯಾದರೂ, ಜೀವನ ನಡೆಸಬಹುದು ಎಂದು ಪ್ರಧಾನಿಗಳು ಎಂದಿದ್ದಕ್ಕೆ, ಈ ದೇಶದಲ್ಲಿ ವಿದ್ಯಾವಂತರಿಗೆ ಬೆಲೆಯೇ ಇಲ್ಲಾ, ಈ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಇದೆ ಎಂದು ಬೊಬ್ಬೆ ಹೊಡೆದವರೇ ಇಂದು ಸರ್ಕಾರೀ ಉದ್ಯೋಗ ಕೊಡ್ತೀವಿ ಎಂದರೆ ರೈಲು ಬಸ್ಸುಗಳನ್ನು ಸುಟ್ಟು ಹಾಕಿಸುತ್ತಿರುವುದು ನಿಜಕ್ಕೂ ಆಶ್ಚರ್ಯವನ್ನು ತರಿಸುತ್ತಿದೆ. ಈ ರೀತಿಯಾಗಿ ವಿವಿಧ ರಾಜಕೀಯ ಪಕ್ಷಗಳ ಹಣದ ಆಮೀಷದಿಂದಾಗಿ ಕಲ್ಲು ಹೊಡೆಯುವುದು, ರೈಲು, ಬಸ್ಸುಗಳಿಗೆ ಬೆಂಕಿ ಹಚ್ಚಿಸುವ ಮೂಲಕ ಪ್ರತಿಭಟನೆ ನಡೆಸುತ್ತಿರುವವರನ್ನು ಇದೇ ರಾಜಕೀಯ ಪಕ್ಷಗಳು ಅನಕ್ಷರಸ್ಥರು, ಅಮಾಯಕರು ಎಂದು ಬಿಂಬಿಸಲು ಮುಂದಾಗಿರುವುದು ನಿಜಕ್ಕೂ ಆಘಾತಕಾರಿಯಾದ ಬೆಳವಣಿಗೆಯಾಗಿದೆ.
ಇದು ಸೈನ್ಯಕ್ಕೆ ಸೇರಲು ಮಾರಕವಾಗಿರುವಂತಹ ಯೋಜನೆಯ ವಿರುದ್ದ ಬಡ ಜನರ ಆಕ್ರೋಶ ಎಂದು ಬಿಂಬಿಸುತ್ತಿರುವ ಇದೇ ಜನರು ಕಲ್ಲು ಹೊಡೆದು, ಸಾರ್ವಜನಿಕ ಆಸ್ತಿ ಹಾಳು ಮಾಡಿ ಪೋಲಿಸ್ ಕೇಸ್ ಹಾಕಿಸಿಕೊಂಡಲ್ಲಿ ನಿಜವಾಗಿಯೂ ಸೈನ್ಕಕ್ಕೆ ಸೇರುವ ಆಸೆಗೂ ಎಳ್ಳು ನೀರು ಬಿಡಬೇಕಾಗ ಬಹುದು ಎಂಬ ಪರಿಜ್ಞಾನವೂ ಇಲ್ಲವಾಗಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಇದರ ಕುರಿತಾದ ಹೆಚ್ಚಿನ ಮಾಹಿತಿಯನ್ನು ದಿ. ಪುನೀತ್ ರಾಜಕುಮಾರ್ ಅಭಿನಯದ ವಂಶಿ ಚಿತ್ರದಲ್ಲಿ ಎಲ್ಲಾ ಅರ್ಹತೆ ಇದ್ದರೂ, ಪರಿಸ್ಥಿತಿಯ ಪರಿಣಾಮ ಮತ್ತು ಕೆಲವು ಪಟ್ಟ ಭದ್ರಹಿತಾಸಕ್ತಿಗಳ ಕೈವಾಡದಿಂದಾಗಿ ಪೋಲೀಸ್ ಕೇಸುಗಳನ್ನು ಹಾಕಿಸಿಕೊಂಡು ತರಭೇತಿ ಪಡೆದು ಇನ್ನೇನು ಇನ್ಸ್ಪೆಕ್ಟರ್ ಆಗಬೇಕಾಗಬೇಕಾಗಿದ್ದವನು ರೌಡಿಯಾಗಿ ಬದಲಾಗಿ ಅದೇ ಪೋಲೀಸ್ ಠಾಣೆಯ ಸೆರೆಯನ್ನು ಕಾಣುವಂತಾಗುವುದನ್ನು ನೋಡಿ ಕಲಿಯಬೇಕಾಗಿದೆ.
ಇಷ್ಟು ವರ್ಷಗಳ ಕಾಲ ದೇಶಾದ್ಯಂತ ಅಧಿಕಾರ ಇದ್ದಾಗ ಇಂತಹ ದೂರದೃಷ್ಟಿಯುಳ್ಳ ಯೋಜನೆಯನ್ನು ಜಾರಿಗೆ ತಾರದೇ, ಕೇವಲ ತಾವಾಯಿತು ತಮ್ಮ ಕುಟುಂಬವಾಯಿತು ಎಂದು ಇದ್ದವರಿಗೆ ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ, ದೇಶ ಮೊದಲು ಉಳಿದದ್ದು ನಂತರ ಎಂಬ ಮನಸ್ಥಿತಿಯ ಸರ್ಕಾರವನ್ನು ಹೀಗೆಯೇ ಬಿಟ್ಟಲ್ಲಿ ತಾವು ಶಾಶ್ವತವಾಗಿ ಹತ್ತಾರು ವರ್ಷಗಳ ಕಾಲ ವಿರೋಧ ಪಕ್ಷದಲ್ಲೇ ಕುಳಿತುಕೊಳ್ಳಬೇಕಾಗುವುದು ಎಂಬ ಭಯದಿಂದಾಗಿಯೇ ದೇಶದಲ್ಲಿ ದೇಶವನ್ನು ಒಡೆಯಲು ಸನ್ನದ್ಧರಾಗಿರುವಂತಹ ದೇಶದ್ರೋಹಿ ಸಂಘಟನೆಗಳ ಜೊತೆಗೂಡಿ ದೇಶದಲ್ಲಿ ಆಂತರಿಕವಾಗಿ ನಾಶ ಮಾಡಲು ಮುಂದಾಗಿರುವುದು ಅಸಹ್ಯವನ್ನು ತರಿಸುತ್ತಿದೆ.
ತಾನು ಕಳ್ಳ ಪರರ ನಂಬ ಎನ್ನುವಂತೆ, ತಾನೂ ಮಾಡುವುದಿಲ್ಲ. ಮತ್ತು ಮತ್ತೊಬ್ಬರು ಮಾಡಿದರೂ ಸಹಿಸೋದಿಲ್ಲ ಎನ್ನುವಂತಾಗಿದ್ದು, ಇದೊಂದು ರೀತಿ ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು ಎನ್ನುವ ಗಾದೆ ಮಾತು ಇಂತಹವರಿಗೇ ಹೇಳಿ ಮಾಡಿಸಿದಂತಿದೆ. ಆಡಳಿತ ಪಕ್ಷದ ನೀತಿ ನಿಯಮಗಳ ಕುರಿತಾಗಿ ಸೈದ್ಧಾಂತಿಕ ವಿರೋಧವಿದಲ್ಲಿ ಮುಂಬರುವ ಚುನಾವಣೆಯಲ್ಲಿ ಪ್ರಜಾತಾಂತ್ರಿಕವಾಗಿ ಹೋರಾಟ ನಡೆಸಿ ಜನರ ಮನಸ್ಸನ್ನು ಗೆದ್ದು ಚುನಾವಣೆಯಲ್ಲಿ ಗೆಲ್ಲುವ ಮೂಲಕ ಆಡಳಿತಕ್ಕೆ ಬರುವ ಬದಲು ಈ ರೀತಿಯ ಕ್ಷುಲ್ಲಕ ಕಾರಣಕ್ಕೆ, ಮತ್ತಾರನ್ನೋ ವಿಚಾರಣೆಗೆ ಕರೆಸಿದ್ದಕ್ಕೆ ಪದೇ ಪದೇ ವಾರಕ್ಕೆ ಮೂರು ಬಾರಿ ಧರಣಿ ನಡೆಸುತ್ತಾ ದೊಂಬಿಗಳನ್ನು ಎಬ್ಬಿಸುತ್ತಿದ್ದರೆ, ತೋಳ ಬಂತು ತೋಳ ಎನ್ನುವ ಕಥೆಯಂತಾಗಿ ಅಂತಿಮವಾಗಿ ಜನರು ಇಂತಹವರನ್ನು ಶಾಶ್ವತವಾಗಿ ಮನೆಗೆ ಕಳಿಸುವ ಸಮಯ ಬರುವ ಸಾಧ್ಯತೆಯೇ ಹೆಚ್ಚಾಗಿದೆ.
ದೇಶದ ರಕ್ಷಣೆಗಾಗಿ ಸೈನಿಕರಾಗಲು ಮುಂದಾದವರು, ಅದೇ ರಕ್ಷಣಾ ಸಿಬ್ಬಂದಿಯ ಮೇಲೆ, ಶಾಸಕರು ಮತ್ತು ಸಾಂದರ ಮೇಲೆ ಹಲ್ಲೆ ಮಾಡಿ, ದೇಶದ ಸಾರ್ವಜನಿಕ ಆಸ್ತಿ ಪಾಸ್ತಿಗಳನ್ನು ಹಾಳು ಮಾಡುವ ಮನಸ್ಥಿತಿ ಹೊಂದಿದ್ದಲ್ಲಿ ಮುಂದೆ ಸೈನ್ಯಕ್ಕೆ ಸೇರಿ ಒಳ್ಳೆಯ ಸೈನಿಕರಾಗಿ ಈ ದೇಶವನ್ನು ಕಾಪಾಡ ಬಲ್ಲರೇ? ಇಂತಹ ದೇಶ ವಿದ್ರೋಹಿ ಮನಸ್ಥಿಯವರ ಕೈಯಲ್ಲಿ ಈ ದೇಶ ಸುರಕ್ಷಿತವಾಗಿ ಇರುತ್ತದೆಯೇ?
ಕೂಸು ಹುಟ್ಟುವ ಮೊದಲೇ ಕುಲಾವಿ ಎನ್ನುವಂತೆ ಯೋಜನೆ ಆರಂಭವಾಗುವ ಮುನ್ನವೇ, ಅನಾವಶ್ಯಕವಾಗಿ ಗಲಭೆ ಎಬ್ಬಿಸುತ್ತಾ, ಋಣಾತ್ಮಕವಾಗಿ ಯೋಚಿಸುವ ಬದಲು ಧನಾತ್ಮಕವಾಗಿಯೂ ನೋಡಬಾರದೇಕೇ?
ಸರ್ಕಾರ ಮತ್ತು ಸೇನೆ ಇದೊಂದು ಪ್ರಯೋಗಾತ್ಮಕ ಪ್ರಯತ್ನಕ್ಕೆ ಕೈ ಹಾಕಿದೆ. ಅದನ್ನು ಯಶಸ್ವಿಗೊಳಿಸುವ ಸಂಪೂರ್ಣ ಜವಾಬ್ದಾರಿ ನಮ್ಮ ಮೇಲೆಯೇ ಇದೆ ಅಲ್ವೇ?
ಚಿಂತನೆ ನಮ್ಮದು, ನಿರ್ಧಾರ ನಿಮ್ಮದು.
ಏನಂತೀರೀ
ನಿಮ್ಮವನೇ ಉಮಾಸುತ
[…] […]
LikeLike