ಈ ಭೂಮಿಯಲ್ಲಿ ಜಾಗತಿಕವಾಗಿ ಅತ್ಯಂತ ವೇಗವಾಗಿ ಹೆಚ್ಚಾಗುತ್ತಿರುವ ಜನಸಂಖ್ಯೆ 1987ರ ಜುಲೈ 11ರಂದು ವಿಶ್ವದ ಜನಸಂಖ್ಯೆ 5 ಬಿಲಿಯನ್ ತಲುದಾಗ ಎಚ್ಚರಿಕೆಯ ಗಂಟೆಯಾಗಿ ಆ ದಿನವನ್ನು ವಿಶ್ವ ಜನಸಂಖ್ಯಾ ದಿನ ಎಂದು ಕರೆದು, ವಿಶ್ವದಲ್ಲಿ ಜನಸಂಖ್ಖಾ ಸ್ಪೋಟದ ಕುರಿತಾದ ವಿವಿಧ ಸಮಸ್ಯೆಗಳ ಬಗ್ಗೆ ವಿಶ್ವ ಸಮುದಾಯದ ಗಮನ ಸೆಳೆಯುವ ಆಶಯದಿಂದ ಈ ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಆರಂಭಿಸಲಾಯಿತು.
ವಿಶ್ವದ ಬಹುತೇಕ ಕಡೆಗಳಲ್ಲಿ ಕಳೆದ ಒಂದು ಶತಮಾನದಲ್ಲಿ ತೀವ್ರಗತಿಯಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ಇಂದು ಜಗತ್ತಿನಲ್ಲಿ ಸೀಮಿತವಾಗಿ ಲಭ್ಯವಿರುವ ಸಂಪನ್ಮೂಲಗಳ ಮೇಲೆ ತೀವ್ರ ಪರಿಣಾಮಗಳನ್ನು ಬೀರುತ್ತಿವೆ. ಐಷಾರಾಮ್ಯ ಜೀವನ ಶೈಲಿಯ ಈ ಯುಗದಲ್ಲಂತೂ ಇದರ ಪರಿಣಾಮ ಅತ್ಯಂತ ಕೆಟ್ಟದ್ದಾಗಿದೆ. ಈ ಹಿಂದೆ ಸೂಕ್ತ ರೀತಿಯ ಆರೋಗ್ಯ ಚಿಕಿತ್ಸೆಗಳಿಲ್ಲದಿದ್ದ ಕಾರಣ, ಜನನ ಸಂಖ್ಯೆಯ ತೀವ್ರತೆಯ ಜೊತೆ ಜೊತೆಯಲ್ಲೇ ಮರಣ ಸಂಖ್ಯೆಯ ತೀವ್ರತೆಯೂ ಇದ್ದ ಕಾರಣ ಜನನ ಮತ್ತು ಮರಣ ಎರಡೂ ಸರಿಸಮನಾಗಿತ್ತು. ವಿಜ್ಞಾನ ಮುಂದುವರಿದಂತೆಲ್ಲಾ, ಆಧುನಿಕ ವೈದ್ಯಕೀಯ ಚಿಕಿತ್ಸೆಗಳಿಂದಾಗಿ ಸಾಯುವವರ ಸಂಖ್ಯೆ ಕ್ಷೀಣವಾಗಿ ಉತ್ತಮವಾದರೆ, ಅತಿಯಾದ ಸ್ನೇಚ್ಚಾಚಾರಗಳಿಂದಾಗಿ ಜನನ ಪ್ರಕ್ತಿಯೆಯ ನಿಯಂತ್ರಣ ತಪ್ಪಿ ಜನನ ಮತ್ತು ಮರಣದ ಅನುಪಾತ ಏರು ಪೇರಾಗಿದೆ.
ವಿಶ್ವಸಂಸ್ಥೆಯ ಲೆಖ್ಖಾಚಾರದ ಪ್ರಕಾರ ಪ್ರಪಂಚದ ಜನಸಂಖ್ಯೆಯಲ್ಲಿ ಚೀನಾ ದೇಶ ಮೊದಲ ಸ್ಥಾನ ಗಳಿಸಿದಲ್ಲಿ ಭಾರತ ಎರಡನೇ ಸ್ಥಾನ ಪಡೆದಿದ್ದರೆ, ಇಂದು ಪತ್ರಿಕೆಯಲ್ಲಿ ಓದಿದ ವರದಿ ಪ್ರಕಾರ ಇನ್ನು ಕೆಲವೇ ಕೆಲವು ವರ್ಷಗಳಲ್ಲಿ ಚೀನಾವನ್ನು ಹಿಂದಿಕ್ಕಿ ಭಾರತವೇ ಮೊದಲ ಸ್ಥಾನ ಗಳಿಸುವತ್ತ ಧಾಪುಗಾಲು ಹಾಕುತ್ತಿದೆ ಎನ್ನುವ ವಿಷಯ ಕೇಳಿ ಕಳವಳಕಾರಿಯಾಗಿದ್ದಂತೂ ಸುಳ್ಳಲ್ಲ.
ಭಾರತದಲ್ಲಿ ಏರುತ್ತಿರುವ ಜನಸಂಖ್ಯೆಯನ್ನು ನಿಯಂತಿಸುವ ಸಲುವಾಗಿಯೇ. ನಮ್ಮ ದೇಶದಲ್ಲಿ 1952 ರಲ್ಲೇ ಕುಟುಂಬ ಯೋಜನೆಗಾಗಿ ರಾಷ್ಟ್ರೀಯ ಕಾರ್ಯಕ್ರಮವನ್ನು ಪ್ರಾರಂಭಿಸಿದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಒಂದು ಕಾಲದಲ್ಲಿ ಮಕ್ಕಳಿರಲವ್ವಾ ಮನೆ ತುಂಬಾ ಎನ್ನುತ್ತಿದ್ದದ್ದಲ್ಲದೇ, ಮದುವೆಯಲ್ಲಿ ನವ ದಂಪತಿಗಳಿಗೆ ಹರಸುವಾಗ ವರುಷದೊಳಗೇ ಮುದ್ದಾದ ಹಸುಕಂದನು ಮಡಲಲಿ ನಗುತಿರಲಿ ಎಂದು ಹಾರೈಸುತ್ತಿದ್ದವರು, ಕುಟುಂಬ ಕಲ್ಯಾಣ ಯೋಜನೆ ದೇಶದಲ್ಲಿ ಜಾರಿಗೆ ಆದ ಕೂಡಲೇ, ದೇಶದ ಜನಸಂಖ್ಯಾ ಸ್ಪೋಟವನ್ನು ತಡೆಯುವ ಉದ್ದೇಶದಿಂದ ಆರತಿಗೊಬ್ಭಳು ಮಗಳು, ಕೀರ್ತಿಗೊಬ್ಬ ಮಗ ಎನ್ನುವ ಧ್ಯೇಯ ವಾಕ್ಯವನ್ನು ಪಠಿಸತೊಡಗಿದರು. ನಂತರದ ವರ್ಷಗಳಲ್ಲಿ ಹೆಚ್ಚುತ್ತಿರುವ ಬೆಲೆಗಳಿಂದ ಮಕ್ಕಳನ್ನು ಸಾಕುವುದೇ ಕಷ್ಟ ಎನಿಸಿದಾಗ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಹೆಣ್ಣಾಗಲೀ, ಗಂಡಾಗಲೀ ಮಕ್ಕಳೊಂದೇ ಇರಲಿ ಎನ್ನುವಂತಾಯಿತು. ಇತ್ತೀಚೆಗೆ ಸುಖಃಸಂಸಾರ ನಡೆಸಲು ಗಂಡ ಹೆಂಡತಿ ಇದ್ದರೆ ಸಾಕು ಮಕ್ಕಳೇಕೆ ಬೇಕು? ಎನ್ನುವ ಮನೋಸ್ಥಿತಿಗೆ ಬಂದಿದ್ದರೂ ಈ ದೇಶದ ಜನಸಂಖ್ಯೆ ಹೆಚ್ಚುತ್ತಿರುವ ಕಾರಣ ಏನೂ ಎಂದು ಅರಿಯಲು ಮುಂದಾದಾಗ, ದೇಶಕ್ಕಿಂತಲೂ ನಮಗೆ ಧರ್ಮವೇ ಮುಖ್ಯ ಎಂದು ದೇಶದ ಕಾನೂನನ್ನೇ ಧಿಕ್ಕರಿಸಿ, ಇನ್ನೂ ತುಂಬಿ ತುಳುಕುತ್ತಿರುವ ಬಡತನದಿಂದ ಕೂಡಿದ ಅಜ್ಞಾನ, ಮೌಢ್ಯಯುತ ಧಾರ್ಮಿಕ ಶ್ರದ್ಧೆ, ಅಪಕ್ವ ಚಾಪಲ್ಯತೆ ಮುಂತಾದ ಕಾರಣಗಳು ಜನಸಂಖ್ಯೆಯ ಏರಿಕೆ ನಿರಂತರವಾಗಿ ಏರುಮುಖದತ್ತಲೇ ಇರುವಂತೆ ಮಾಡಿರುವುದು ನಿಜಕ್ಕೂ ನಮ್ಮ ದೇಶದ ಅಭಿವೃದ್ಧಿಗೆ ಕಳಕವಳಕಾರಿಯಾಗಿದೆ.
1986ರ ವರ್ಷದಲ್ಲಿ 500 ಕೋಟಿ, 1998ರಲ್ಲಿ 600 ಕೋಟಿ, 2011ರಲ್ಲಿ 700 ಕೋಟಿ ಇದ್ದು ಇದೀಗ 740ಕೋಟಿಗಳನ್ನು ದಾಟಿದೆ. ಇದೇ ಮುಂದುವರಿದ ಗತಿಯಲ್ಲಿ ಇದು 2024ರ ವೇಳೆಗೆ 800 ಕೋಟಿ, 2039ರ ವೇಳೆಗೆ 900 ಕೋಟಿ ತಲುಪಿ 2061ರ ವರ್ಷದಲ್ಲಿ 1000 ಕೋಟಿಯನ್ನು ತಲುಪುತ್ತದೆ ಎಂಬುದು ಸಂಖ್ಯಾಶಾಸ್ತ್ರಜ್ಞರ ಊಹೆಯಾಗಿದೆ.
ಹೇಗೆ ಜೀವ ಇದ್ದಲ್ಲಿ ಜೀವನವೋ ಹಾಗೆಯೇ ಈ ದೇಶ ಮತ್ತು ದೇಶದ ಸಂಪನ್ಮೂಲಗಳು ಇದ್ದಲ್ಲಿ ಮಾತ್ರವೇ ನಾವು ನೀವು ಸುಖ ಜೀವನವನ್ನು ನಡೆಸಬಹುದು ಮತ್ತು ನಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಆರೋಗ್ಯಗಳನ್ನು ಕೊಡಿಸಬಹುದು ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ಜನಸಂಖ್ಯಾ ನಿಯಂತ್ರಣತ್ತ ಗಮನ ಹರಿಸುವುದರ ಜೊತೆಗೆ, ಇತರರಿಗೂ ಆದರ ಅರಿವನ್ನು ಮೂಡಿಸೋಣ ಅಲ್ಲವೇ?
ಏನಂತೀರಿ?
ನಿಮ್ಮವನೇ ಉಮಾಸುತ