
ಅದು 1936 ಇಡೀ ಪ್ರಪಂಚದಲ್ಲಿ ತಾನು ಹೆಚ್ಚು ನಾನು ಹೆಚ್ಚು ಎನ್ನುವ ಉತ್ತುಂಗಕ್ಕೇರಿದ ರಾಜಕೀಯ ಬೆಳವಣಿಗೆಗಳ ಪರ್ವ. ಇಡೀ ಪ್ರಪಂಚವೇ ಭಾರಿ ಆರ್ಥಿಕ ಕುಸಿತ ಎದುರಿಸುತ್ತಿದ್ದರೂ, ಜರ್ಮನಿಯನ್ನು ಆಳುತ್ತಿದ್ದ ಅಡಾಲ್ಫ್ ಹಿಟ್ಲರ್ ತನ್ನ ರಾಷ್ಟ್ರ ಉಳಿದೆಲ್ಲಾ ರಾಷ್ಟ್ರಗಳಿಗಿಂತಲೂ ಅತ್ಯಂತ ಶಕ್ತಿಶಾಲಿ ರಾಷ್ಟ್ರವೆಂದು ಪ್ರಸ್ತುತಪಡಿಸಲು ತನ್ನೆಲ್ಲಾ ತಾಂತ್ರಿಕ ಮತ್ತು ಮಿಲಿಟರಿ ಶಕ್ತಿಯನ್ನು ಫಣಕ್ಕಿಟ್ಟಿದ್ದಂತಹ ಕಾಲ. 1932ರಲ್ಲಿ ಅಮೇರಿಕಾದ ಲಾಸ್ ಏಂಜಲೀಸ್ ನಡೆದ ಓಲಂಪಿಕ್ಸ್ ಕ್ರೀಡಾಕೂಟಕ್ಕಿಂತಲೂ ಅತ್ಯಂತ ವಿಜೃಂಭಣೆಯಿಂದ ತನ್ನ ದೇಶದಲ್ಲಿ ನಡೆಯಬೇಕೆಂದು 1936 ರಲ್ಲಿ ಬರ್ಲಿನ್ ನಗರದಲ್ಲಿ ಓಲಂಪಿಕ್ಸ್ ಬಹಳ ಅದ್ದೂರಿಯಿಂದ ಕ್ರೀಡಾ ಏರ್ಪಡಿಸಲಾಗಿತ್ತು.
1936ರ ಆಗಸ್ಟ್ 15 ರಂದು ಬರ್ಲಿನ್ ನಗದಲ್ಲಿ ಭಾರತ ಮತ್ತು ಆತಿಧೇಯ ಜರ್ಮನಿ ದೇಶದೊಂದಿಗೆ ನಡೆದ ಹಾಕಿ ಫೈನಲ್ ಪಂದ್ಯವನ್ನು ವೀಕ್ಷಿಸಲು ಸ್ವತಃ ಅಡಾಲ್ಫ್ ಹಿಟ್ಲರ್ ಮೈದಾನದಲ್ಲಿದ್ದ. ಧ್ಯಾನ್ ಚಂದ್ ನಾಯಕತ್ವದ ಭಾರತೀಯ ತಂಡ, ನಾಜಿ ಜರ್ಮನ್ನರನ್ನು 8-1 ಅಂತರದಿಂದ ಸೋಲಿಸಿ ಚಿನ್ನದ ಪದಕವನ್ನು ಗೆದ್ದಿತ್ತು. ಭಾರತದ ಪರ ಬಂದ 8 ಗೋಲುಗಳಲ್ಲಿ 6 ಗೋಲುಗಳನ್ನು ನಾಯಕ ಮತ್ತು ಭಾರತದ ಹಾಕಿ ಮಾಂತ್ರಿಕ, ಧ್ಯಾನ್ ಚಂದ್ ಗಳಿಸಿದ್ದರು. ಇಡೀ ಮೈದಾನದಲ್ಲಿ ಪಾದರಸದಂತೆ ಚುರುಕಿನಂತೆ ಓಡಾಡುತ್ತಾ, ತಂಡವನ್ನು ಹುರಿದುಂಬಿದುತ್ತ್ನಾ ಅದ್ಭುತವಾದ ನಾಯಕತ್ವವನ್ನು ಪ್ರದರ್ಷಿಸಿದ ಧ್ಯಾನ್ ಚಂದ್ ಅವರ ಆಟದ ಪ್ರದರ್ಶನದಿಂದ ಹಿಟ್ಲರ್ ಸಂಪೂರ್ಣವಾಗಿ ಪ್ರಭಾವಿತರಾದರು. ಪ್ರಶಸ್ತಿಯನ್ನು ವಿತರಿಸುವ ಸಮಯದಲ್ಲಿ ಹಿಟ್ಲರ್ ಧ್ಯಾನ್ ಚಂದ್ ಅವರು ಹಾಕಿ ಆಡುವುದರದ ಹೊರತಾಗಿ ಯಾವ ಕೆಲಸ ಮಾಡುತ್ತಿದ್ದಾರೆಂದು ಕೇಳಿದಾಗ. ಧ್ಯಾನ್ ಚಂದ್ ಅತ್ಯಂತ ಹೆಮ್ಮೆಯಿಂದ ಭಾರತ ಸೈನ್ಯದಲ್ಲಿ ನಾನೊಬ್ಬ ಸೈನಿಕ ಎಂದು ಹೇಳಿದ್ದನ್ನು ಕೇಳಿದ ಕೂಡಲೇ, ಹಿಟ್ಟರ್ ನೀನು ಜರ್ಮನಿಗೆ ಬಂದರೆ, ನಿನ್ನನ್ನು ನಾನು ಜರ್ಮನ್ ಸೇನೆಯ ಫೀಲ್ಡ್ ಮಾರ್ಷಲ್ ಮಟ್ಟದ ಸೈನ್ಯಾಧಿಕಾರಿಯನ್ನಾಗಿಸುವೆ ಎಂದಾಗ, ಅತ್ಯಂತ ಧೃಢ ನಿರ್ಧಾರದಿಂದ ಭಾರತ ಮಾರಾಟಕ್ಕಿಲ್ಲ ಎಂದು ಹಿಟ್ಲರ್ ಅಂತಹ ಸರ್ವಾಧಿಕಾರಿಗೆ ಮಾರುತ್ತರ ನೀಡಿದಾಗ ಕೆಲವು ಕ್ಷಣ ಅಲ್ಲಿ ಮೌನ ಆವರಿಸಿತ್ತು. ನಂತರ ಸಾವರಿಸಿಕೊಂಡ ಹಿಟ್ಲರ್, ಧ್ಯಾನ್ ಚಂದ್ ಅವರಿಗೆ ವಿಝಾರ್ಡ್ ಆಫ್ ಹಾಕಿ ಎಂಬ ಪ್ರಶಸ್ತಿಯನ್ನು ನೀಡಿ ಪರಿಸ್ಥಿತಿಯನ್ನು ನಿಭಾಯಿಸಿದ್ದರು. ಆ ಬರ್ಲಿನ್ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕವನ್ನು ಗೆದ್ದ ಭಾರತೀಯ ತಂಡ ಇಡೀ ಪಂದ್ಯಾವಳಿಯಲ್ಲಿ ಭಾರತೀಯರು 38 ಗೋಲುಗಳನ್ನು ಗಳಿಸಿದ್ದರೆ, ಭಾರತದ ವಿರುದ್ಧ ಕೇವಲ ಒಂದು ಗೋಲು ಮಾತ್ರ ಜರ್ಮನಿ ದೇಶ ಗಳಿಸಲು ಸಾಧ್ಯವಾಗಿತ್ತು ಎಂದರೆ ಭಾರತೆ ತಂಡ ಎಷ್ಟು ಬಲಿಷ್ಟವಾಗಿತ್ತು ಎಂಬುದರ ಅರಿವಾಗುತ್ತದೆ.
ಇಂತಹ ಧ್ಯಾನ್ ಚಂದ್ ಅವರು ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಆಗಸ್ಟ್ 29, 1905 ರಂದು ಭಾರತೀಯ ಸೈನ್ಯದಲ್ಲಿ ಸುಬೇದಾರ್ ಆಗಿದ್ದ ಸಮೇಶ್ವರ್ ದತ್ ಸಿಂಗ್ ಮತ್ತು ಶಾರದಾ ಸಿಂಗ್ ದಂಪತಿಗಳಿಗೆ ಜನಿಸುತ್ತಾರೆ. ಆಟಪಾಟಗಳಲ್ಲಿ ಅತ್ಯಂತ ಚುರುಕಾಗಿದ್ದ ಧ್ಯಾನ್ ಚಂದ್ ಅವರ ತಂದೆಯವರಿಗೆ ಸೇನೆಯಲ್ಲಿ ಆಗಾಗ್ಗೆ ಆಗುತ್ತಿದ್ದ ವರ್ಗಾವಣೆಯಿಂದಾಗಿ, ಕೇವಲ ಆರು ವರ್ಷಗಳ ಕಾಲ ಶಾಲಾ ವಿದ್ಯಾಭ್ಯಾಸವನ್ನು ಹೋದರು ಮತ್ತು ಶೀಘ್ರದಲ್ಲೇ ಶಿಕ್ಷಣವನ್ನು ಕೊನೆಗೊಳಿಸಬೇಕಾಯಿತಾದರೂ ಅವರ ಸಹೋದರರಾದ ಮೂಲ್ ಸಿಂಗ್ (ನಂತರ ಹವಾಲ್ದಾರ್) ಮತ್ತು ರೂಪ್ ಸಿಂಗ್ (ನಂತರ ಖ್ಯಾತ ಹಾಕಿ ಆಟಗಾರ) ಅವರೊಂದಿಗೆ ಹಾಕಿ ಆಟವನ್ನು ಆಡುತ್ತಿದ್ದರು.
ಕೇವಲ 16 ನೇ ವಯಸ್ಸಿನಲ್ಲಿಯೇ ಧ್ಯಾನ್ ಚಂದ್ ತಮ್ಮ ತಂದೆಯವರಂತೆಯೇ ಭಾರತೀಯ ಸೇನೆಗೆ ಸೇರಿದ ನಂತರವೂ ತಮ್ಮ ಕೆಲಸದ ಪಾಳಿ ಮುಗಿದ ಮೇಲೆ ರಾತ್ರಿಯ ಸಮಯದಲ್ಲಿ ಬೆಳದಿಂಗಳಲ್ಲಿ ಹಾಕಿ ಅಭ್ಯಾಸ ಮಾಡುತ್ತಿದ್ದರು. ಹೀಗೆ ಕತ್ತಲೆಯಲ್ಲಿ ಅಭ್ಯಾಸ ಮಾಡುವುದರಿಂದ ಚೆಂಡಿನ ಮೇಲಿನ ಗಮನ ಮತ್ತು ನಿಯಂತ್ರಣವನ್ನು ಚುರುಕುಗೊಳ್ಳುತ್ತದೆ ಎನ್ನುವುದು ಧ್ಯಾನ್ ಚಂದ್ ಅವರ ನಂಬಿಕೆಯಾಗಿತ್ತು. ಅವರು ರೈಲ್ವೇ ಹಳಿಗಳ ನಡುವೆ ಡ್ರಿಬ್ಲಿಂಗ್ ಮಾಡುವ ಮೂಲಕ ಅಭ್ಯಾಸ ಮಾಡುತ್ತಿದ್ದರು, ಏಕೆಂದರೆ ಅವುಗಳು ಅಸಮವಾದ ಬೌನ್ಸ್ ಅನ್ನು ನೀಡುತ್ತವೆಹೀಗೆ ಚಂದ್ರನ ಬೆಳದಿಂಗಳಲ್ಲಿ ಅತ್ಯಂತ ಸುಲಲಿತವಾಗಿ ಮತ್ತು ಅಷ್ಟೇ ಆಕರ್ಷಣಿಯವಾಗಿ ಹಾಕಿ ಆಡುತ್ತಿದ್ದದ್ದನ್ನು ಗಮನಿಸಿದ ಅವರ ಸಹ ಆಟಗಾರರರು ಅವರನ್ನು ಚಾಂದ್ ಎಂದೇ ಪ್ರೀತಿಯಿಂದ ಕರೆಯುತ್ತಿದ್ದರು.
ತಪಸ್ಸಿನಂತೆ ಹಾಕಿ ಆಟದಲ್ಲಿ ಧ್ಯಾನ ಮಗ್ನರಾಗಿರುತ್ತಿದ್ದ ಧ್ಯಾನ್ ಚಂದ್ ಅತ್ಯಂತ ಶೀಘ್ರವಾಗಿ ಭಾರತೀಯ ಹಾಕಿ ತಂಡಕ್ಕೆ ಸೇರ್ಪಡೆಯಾಗಿ 1928, 1932 ರಲ್ಲಿ ಭಾರತದ ತಂಡದ ಪರ ಮುಖ್ಯ ಆಟಗಾರರಾಗಿ ಆಡಿದರೆ, 1936 ರಲ್ಲಿ ತಂಡದ ನಾಯಕತ್ವ ವಹಿಸಿ ಸತತ ಮೂರು ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಭಾರತ ತಂಡ 3 ಚಿನ್ನದ ಪದಕಗಳನ್ನು ಗಳಿಸಲು ನೆರವಾಗಿದ್ದರು. 1928 ರ ಆಮ್ಸ್ಟರ್ಡ್ಯಾಮ್ನಲ್ಲಿ ನಡೆದ ಒಲಿಂಪಿಕ್ಸ್ನಲ್ಲಿ ಭಾರತ ತಂಡವು 29 ಗೋಲುಗಳನ್ನು ಗಳಿಸಿದ್ದರೆ, ಎದುರಾಳಿ ತಂಡಕ್ಕೆ ಯಾವುದೇ ಗೋಲನ್ನು ಬಿಟ್ಟುಕೊಟ್ಟಿರಲಿಲ್ಲ ಎಂಬ ಹೆಗ್ಗಳಿಕೆ ಪಾತ್ರವಾಗಿತ್ತು.
1936 ರ ಒಲಿಂಪಿಕ್ಸ್ನಲ್ಲಂತೂ ಧ್ಯಾನ್ ಚಂದ್ ಅವರ ಆಟ ಅತ್ಯಂತ ಉಚ್ಛ್ಹ್ರಾಯ ಸ್ಥಿತಿಯಲ್ಲಿದ್ದರು. ಆವರ ಮಾಂತ್ರಿಕ ಸ್ಟಿಕ್-ವರ್ಕ್ ಮತ್ತು ಪಾದರದಂತೆ ಓಟ ಮತ್ತು ಪಾಸ್ ಗಳನ್ನು ನೋಡಲೆಂದೇ ಪ್ರೇಕ್ಷಕರರು ಮೈದಾನಕ್ಕೆ ಬರುತ್ತಿದ್ದರು. ಧ್ಯಾನ್ ಚಂದ್ ಅವರ ಆಟದ ಬಗ್ಗೆ ಅಂದಿನ ಕಾಲದ ಜರ್ಮನ್ ಪತ್ರಿಕೆಯೊಂದು ತನ್ನ ಶೀರ್ಷಿಕೆಯಲ್ಲಿ ಒಲಂಪಿಕ್ ಸಂಕೀರ್ಣವು ಈಗ ಮ್ಯಾಜಿಕ್ ಶೋ ಆಗಿದೆ ಎಂದು ಬರೆದಾಗ ಅದೇ ಬರಹದ ಪೊಸ್ಟರ್ಗಳು ಮರುದಿನ ಬರ್ಲಿನ್ನಾದ್ಯಂತ ರಾರಾಜಿಸಿ, ಧ್ಯಾನ್ ಚಂದ್ ಭಾರತ ಹಾಕೀ ಮಾಂತ್ರಿಕ ಅರ್ಥಾತ್ ಹಾಕಿ ಜಾದೂಗಾರ ಎಂದೇ ವಿಶ್ವವಿಖ್ಯಾತರಾದರು.
ಟೆಸ್ಟ್ ಕ್ರಿಕೆಟ್ಟಿನ ವೃತ್ತಿಜೀವನದಲ್ಲಿ ಬ್ಯಾಟಿಂಗ್ ಸರಾಸರಿ 99.94 ಹೊಂದಿರುವ ಕ್ರಿಕೆಟ್ಟಿನ ದಂತಕತೆ ಸರ್ ಡಾನ್ ಬ್ರಾಡ್ಮನ್ ಅವರು ಮತ್ತು ಧ್ಯಾನ್ ಚಂದ್ 1935 ರಲ್ಲಿ ಅಸ್ಟ್ರೇಲಿಯಾದ ಅಡಿಲೇಡ್ನಲ್ಲಿ ಪರಸ್ಪರ ಮುಖಾಮುಖಿಯಾದಾಗ, ಧ್ಯಾನ್ ಚಂದ್ ಅವರ ನೈಪುಣ್ಯ ವೀಕ್ಷಿಸಿದ ಡಾನ್ ಬ್ರಾಡ್ಮನ್, ಧ್ಯಾನ್ ಚಂದ್ ಅವರು ಕ್ರಿಕೆಟ್ನಲ್ಲಿ ನಾವು ರನ್ ಗಳಿಸುವಂತೆ ಗೋಲುಗಳನ್ನು ಗಳಿಸುತ್ತಾರೆ. ಹಾಕಿ ಚೆಂಡಿನ ಮೇಲಿನ ಅವರ ನಿಯಂತ್ರಣ ಅದ್ಭುತ ಎಂದು ವರ್ಣಿಸಿ ಶ್ಲಾಘಿಸಿದ್ದರು.
ಸೈನ್ಯದಲ್ಲಿ ಸಾಮಾನ್ಯ ಸೈನಿಕನಾಗಿ ಸೇರಿ ಹಂತ ಹಂತವಾಗಿ ಮೇಜರ್ ಹುದ್ದೆಗೇರಿದ್ದ ಧ್ಯಾನ್ ಚಂದ್ ತಮ್ಮ ವಯಸ್ಸು 40ಕ್ಕೆ ಸಮೀಪಿಸಿದ್ದರೂ, ಧ್ಯಾನ್ ಚಂದ್ 1949 ರವರೆಗೆ ಹಾಕಿಯನ್ನು ಆಡುವುದನ್ನು ಮುಂದುವರೆಸಿದ್ದರು. ನಿಜ ಹೇಳಬೇಕೆಂದರೆ, ಅವರ ಕೊನೆಯ ದಿನಗಳಲ್ಲೇ ಅತ್ಯುನ್ನತ ಮಟ್ಟದಲ್ಲಿ ಆಡುತ್ತಿದ್ದರು. ಅವರ ಪ್ರಮುಖ ದಾಖಲೆಗಳು ಹೀಗಿವೆ
- 1926 ರಿಂದ 1949ರ ವರಗಿನ ತಮ್ಮ ವೃತ್ತಿಜೀವನದಲ್ಲಿ ಸುಮಾರು 400 ಅಂತಾರಾಷ್ಟ್ರೀಯ ಪಂದ್ಯಗಳನ್ನೂ ಒಳಗೊಂಡಂತೆ, ಸುಮಾರು 1000ಕ್ಕೂ ಅಧಿಕ ಗೋಲುಗಳನ್ನು ಗಳಿಸಿದ್ದಾರೆ,
- ಸತತವಾಗಿ 3 ಒಲಿಂಪಿಕ್ ಚಿನ್ನದ ಪದಕಗಳನ್ನು ಗೆದ್ದ ತಂಡ ಭಾಗವಾಗಿದ್ದಾರೆ.
- 1928 ರ ಆಮ್ಸ್ಟರ್ಡ್ಯಾಮ್ ಒಲಿಂಪಿಕ್ಸ್ನಲ್ಲಿ 14 ಗೋಲುಗಳೊಂದಿಗೆ ಮತ್ತು 1936 ರ ಬರ್ಲಿನ್ ಒಲಿಂಪಿಕ್ಸ್ನಲ್ಲಿ ಪ್ರಮುಖ ಗೋಲ್ ಸ್ಕೋರರ್ ಆಗಿದ್ದರು.
- 1935 ರ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಪ್ರವಾಸದಲ್ಲಿ, ಧ್ಯಾನ್ ಚಂದ್ ಕೇವಲ 43 ಪಂದ್ಯಗಳಲ್ಲಿ 201 ಗೋಲುಗಳನ್ನು ಗಳಿಸಿದರು, ಇದು ಸಾರ್ವಕಾಲಿಗ ವಿಶ್ವ ದಾಖಲೆಯಾಗಿದೆ.
ಡಿಸೆಂಬರ್ 3, 1979ರಂದು ತಮ್ಮ 74ನೇ ವಯಸ್ಸಿನಲ್ಲಿ ನವದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ನಲ್ಲಿ ಯಕೃತ್ತಿನ ಕ್ಯಾನ್ಸರ್ಗೆ ಬಲಿಯಾದರು.
- ಮೇಜರ್ ಧ್ಯಾನ್ ಚಂದ್ ಅವರ ನೆನಪಿನಾರ್ಥವಾಗಿ ದೆಹಲಿಯ ಫೀಲ್ಡ್ ಹಾಕಿ ಕ್ರೀಡಾಂಗಣಕ್ಕೆ ಅವರ ಹೆಸರನ್ನೇ ಇಡಲಾಗಿದೆ.
- 1980ರಲ್ಲಿ ಧ್ಯಾನ್ ಚಂದ್ ಸ್ಮರಣಾರ್ಥ ಅಂಜೆ ಚೀಟಿಯನ್ನು ಭಾರತ ಸರ್ಕಾರ ಹೊರತಂದಿದೆ
- ಕ್ರೀಡೆಗಾಗಿ ಭಾರತದಲ್ಲಿ ಕೊಡುವ ಅತ್ಯುನ್ನತ ಪ್ರಶಸ್ತಿಯಾಗಿದ್ದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು 2021ರಲ್ಲಿ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಮರುನಾಮಕರಣ ಗೊಳಿಸಲಾಗಿದೆ.
ಭಾರತದ ಪರಂಪಾರಾಗತ ಕ್ರೀಡೆಯಾದ ಹಾಕಿಯನ್ನು ವಿಶ್ವ ಕ್ರೀಡಾ ಭೂಪಟದಲ್ಲಿ ನ ಭೂತೋ ನ ಭವಿಷ್ಯತಿ ಎಂದು ಆಚಂದ್ರಾರ್ಕವಾಗಿ ಬೆಳಗಿಸಿದ ಕೀರ್ತಿ ಭಾರತೀಯ ಹಾಕಿಯ ದಂತಕಥೆ ಮತ್ತು ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಅವರಿಗೇ ಸಲ್ಲುತ್ತದೆ. ಅವರ ಕ್ರೀಡಾಸ್ಪೂರ್ತಿ ಮತ್ತು ಅವರ ಸಾಧನೆಗಳು ಇಂದಿನ ಯುವಕರಿಗೆ ಪ್ರೇರಣೆಯಾಗಿ ಭಾರತದ ಹಾಕಿ ತಂಡ ಮತ್ತೆ ಪ್ರಜ್ವಲಿಸಲಿ ಎಂದೇ ಸಕಲ ಭಾರತೀಯರ ಆಶಯವಾಗಿದೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ