ಭಗವಂತ  ನಮ್ಮಿಂದ ಎಷ್ಟು ದೂರವಿದ್ದಾನೆ?

ಅದೊಂದು ಹೆಸರಾಂತ ಗುರುಕುಲ ಬಹಳಷ್ಟು ವಿದ್ಯಾರ್ಥಿಗಳು ಆ ಗುರುಗಳ ಬಳಿ ಹಲವಾರು ವಿಷಯಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದರು. ಒಮ್ಮೆ ಗುರುಗಳಿಗೆ ತಮ್ಮ ಶಿಷ್ಯಂದಿರನ್ನು ಪರೀಕ್ಷಿಸುವ ಮನಸಾಗಿ, ಎಲ್ಲರನ್ನೂ ಒಟ್ಟುಗೂಡಿಸಿ ನಮಗೂ ಮತ್ತು ಭಗವಂತನಿಗೂ ಇರುವ ಅಂತರವೆಷ್ಟು? ಎಂಬ ಸರಳ ಪ್ರಶ್ನೆಯನ್ನು ಕೇಳಿದರು. ಗುರುಗಳ ಈ ಸರಳ ಪ್ರಶ್ನೆಗೆ ಬಹಳವಾಗಿ ತಲೆಕೆಡಿಸಿಕೊಂಡ ಶಿಷ್ಯಂದಿರು, ಒಬ್ಬ ಭೂಮಿ ಆಕಾಶದಷ್ಟು ದೂರವೆಂದರೆ ಮತ್ತೊಬ್ಬ, ಭೂಮಿ ಪಾತಾಳದಷ್ಟು ದೂರ ಗುರುಗಳೇ ಎಂದ ಹೀಗೆ ಒಬ್ಬಬ್ಬೊರು ಒಂದೊಂದು ರೀತಿಯಾಗಿ ಉತ್ತರಿಸಿದಾಗ ಸಮಾಧಾನರಾಗದ ಗುರುಗಳು. ಆ ಭಗವಂತ ನಮ್ಮಿಂದ ಕೇವಲ ಕೂಗಳತೆಯ ದೂರದಲ್ಲಿದ್ದಾನೆ ಎಂದರು. ಭಗವಂತ ನಮ್ಮಿಂದ ಕೂಗಳತೆಯ ದೂರದಲ್ಲೇ? ಅದು ಹೇಗೆ ಗುರುಗಳೇ ಎಂದು ಶಿಷ್ಯರು ಪ್ರಶ್ನಿಸಿದಾಗ ಸಮಚಿತ್ತದಿಂದ ಗುರುಗಳು, ನಮಗೆ ಸಂಕಟ ಬಂದ ಕೂಡಲೇ ಭಗವಂತಾ ನಮ್ಮನ್ನು ಸಂಕಟದಿಂದ ಪಾರು ಮಾಡು ಎಂದು ಪ್ರಾರ್ಥಿಸುತ್ತೇವೆ. ಅದೇ ರೀತಿ ಸಂಭ್ರಮಿಸುವ ಸಂದರ್ಭದಲ್ಲಿ ಭಗವಂತಾ ಏನಿದು ನಿನ್ನ ಲೀಲೇ ಎಂದು ಕೊಂಡಾಡುತ್ತೇವೆ. ಯಾರಾದರೂ ನಮ್ಮ ಸ್ಥಿತಿ ಗತಿ ಮತ್ತು ಆರೋಗ್ಯ ಹೇಗಿದೆ ಎಂದು ವಿಚಾರಿಸಿದಲ್ಲಿ ಎಲ್ಲಾ ಭಗವಂತನ ದಯೆಯಿಂದ ಇಲ್ಲಿಯವರೆಗೂ ಚೆನ್ನಾಗಿದೆ ಎನ್ನುತ್ತೇವೆ. ಹೀಗೆ ಪ್ರತಿ ಕ್ಷಣದಲ್ಲೂ ನಾವು ಭಗಂತನ ಸ್ಮರಣೆ ಮಾಡಿದಾಗಲೆಲ್ಲಾ ಭಗವಂತನು ಯಾವುದೋ ಒಂದು ರೂಪದಲ್ಲಿ ಬಂದು ನಮ್ಮನ್ನು ಕಾಪಾಡಿಯೇ ತೀರುತ್ತಾನೆ. ಯಾವುದೋ ದೂರದ ಪ್ರಯಾಣದ ವೇಳೆಯಲ್ಲಿ ದಾರಿ ತಪ್ಪಿ ಅಯ್ಯೋ ಭಗವಂತಾ!! ಎಲ್ಲಿದ್ದೀನಪ್ಪಾ? ಇಲ್ಲಿಂದ ಪಾರಾಗುವುದು ಹೇಗಪ್ಪಾ? ಎಂದು ಯೋಚಿಸುತ್ತಿರುವಾಗಲೇ ದಾರಿ ಹೋಕನೊಬ್ಬ ಕಾಣ ಸಿಕ್ಕಿ, ನಾವು ಹೋಗಬೇಕಿದ್ದ ಸ್ಥಳದ ದಾರಿಯನ್ನು ತೋರಿದಾಗ ಆ ಸಂದರ್ಭದಲ್ಲಿ ಆತನೇ ದೇವರಹಾಗೆ ಕಾಣುತ್ತಾನಲ್ಲವೇ, ದುಷ್ಯಾಸನ ದ್ರೌಪತಿಯ ವಸ್ತ್ರಾಪಹರಣ ಮಾಡುತ್ತಿದ್ದಾಗ ದ್ರೌಪತಿಯನ್ನು ಕೃಷ್ಣ ರಕ್ಷಿಸಿದ್ದು ಭಕ್ತಿಯಿಂದ ಕರೆ ಮಾಡಿದಾಗಲೇ, ಮೊಸಳೆಯ ಬಾಯಿಯಿಂದ ಗಜೇಂದ್ರನನ್ನು ರಕ್ಷಿಸಿದ್ದೂ ಭಕ್ತಿಯಿಂದ ಕರೆ ಮಾಡಿದಾಗಲೇ , ಹಾಗಾಗಿ ಭಗವಂತ ನಮ್ಮ ಕೂಗಳತೆಯ ದೂರದಲ್ಲಿಯೇ ಇದ್ದಾನೆ. ನಾವು ಅವನನ್ನು ಭಕ್ತಿಯಿಂದ ಕೂಗಿ ಕರೆಯಬೇಕಷ್ಟೇ. ಎಂದಾಗ ಶಿಷ್ಯರೆಲ್ಲರೂ ಗುರುಗಳ ಉತ್ತರಕ್ಕೇ ಸಂತೃಪ್ತರಾಗಿ ಸಂತೋಷದಿಂದ ತಲೆದೂಗುತ್ತಾರೆ.

ನನ್ನನ್ನು ಹೆತ್ತು , ಹೊತ್ತು, ಸಾಕಿ, ಸಲಹಿ, ತಕ್ಕ ಮಟ್ಟಿಗೆ ವಿದ್ಯೆಯನ್ನು ಕಲಿಸಿ, ವಿವೇಕದೊಂದಿಗೆ ಸಂಸ್ಕಾರವಂತನನ್ನಾಗಿ ಮಾಡಿ, ನನ್ನ ಇಂದಿನ ಎಲ್ಲಾ ಏಳಿಗೆಗೆ ಕಾರಣಕರ್ತರಾದವರು ನನ್ನ ಪ್ರತ್ಯಕ್ಷ ದೇವರುಗಳಾದ ನನ್ನ ತಂದೆ ತಾಯಿಯರು. ಎಲ್ಲದ್ದಕ್ಕೂ ಅಮ್ಮನನ್ನೇ ಆಶ್ರಯಿಸಿ, ಅಮ್ಮನ ಮುದ್ದಿನ ಮಗನಾಗಿದ್ದ ನಾನು, 12 ವರ್ಷಗಳ ಹಿಂದೆ ಅಮ್ಮನನ್ನು ಕಳೆದುಕೊಂಡಾಗ, ನನ್ನ ಬೆನ್ನಲುಬಾಗಿ ನಿಂತವರೇ ನನ್ನ ತಂದೆಯವರು. ನೆಚ್ಚಿನ ಮಡದಿಯನ್ನು ಕಳೆದು ಕೊಂಡಿದ್ದ ಅವರು, ತಾಯಿಯನ್ನು ಕಳೆದು ಕೊಂಡಿದ್ದ ನಾನು ಪರಸ್ಪರ ಸಂತೈಸಿಕೊಳ್ಳುತ್ತಾ ತೀರಾ ಹತ್ತಿರದವರಾಗಿ ಬಿಟ್ಟೆವು.

ಅಪ್ಪನ ಮೇಲಿನ ಗೌರವಕ್ಕೂ ಮಿಗಿಲಾಗಿ, ತಂದೆ ಮಗನ ಸಂಬಂಧಕ್ಕೂ ಮಿಗಿಲಾಗಿ ಅತ್ಯುತ್ತಮ ಗೆಳೆಯರಾಗಿಬಿಟ್ಟೆವು. ಬೆಳಿಗ್ಗೆ ಒಟ್ಟೊಟ್ಟಿಗೇ ಏಳುತ್ತಾ, ವಾಯು ವಿಹಾರಕ್ಕೇ ಜೊತೆ ಜೊತೆಯಾಗಿಯೇ ಹೋಗುತ್ತಾ, ಮಾರ್ಗದ ನಡುವಿನಲ್ಲಿ ಪ್ರಸಕ್ತ ವಿದ್ಯಮಾನಗಳು, ದೇಶದ ಆಗುಹೋಗುಗಳು, ಕ್ರೀಡೆ, ಸಂಗೀತ, ಸಾಹಿತ್ಯ, ಬಿಡುಗಡೆಯಾದ ಹೊಸಾ ಪುಸ್ತಕಗಳನ್ನು ವಿಮರ್ಶಿಸುತ್ತಾ, ಕಡೆಗೆ ಯಾವುದೂ ಇಲ್ಲದಿದ್ದಲ್ಲಿ ನಮ್ಮ ಕುಟುಂಬದ ವಿಷಯಗಳನ್ನು ಚರ್ಚಿಸುತ್ತಾ ತೀರಾ ಒಬ್ಬರನ್ನೊಬ್ಬರು ಬಿಟ್ಟಿರಲಾದಷ್ಟು ಹತ್ತಿರವಾಗಿ ಬಿಟ್ಟೆವು. ಆರೋಗ್ಯ ತಪಾಸಣೆಗಿರಲಿ, ಅಂಗಡಿಗಿರಲೀ, ತವರಿನ ಜಾತ್ರೆಗಳಿಗಾಗಲೀ , ಯಾವುದೇ ಸಭೆ ಸಮಾರಂಭವಿರಲೀ ಒಟ್ಟಿಗೇ ಹೋಗಿ ಒಟ್ಟಿಗೇ ಬರುತ್ತಿದ್ದೆವು. ಕಛೇರಿಯಿಂದ ಅಕಸ್ಮಾತ್ ಒಂದೊಂದು ದಿನ ಬರಲು ತಡವಾಯಿತೆಂದರೆ ಹತ್ತಾರು ಸಲಾ ಕರೆ ಮಾಡಿ, ಮಗೂ ಎಲ್ಲಿದ್ದೀಯಾ? ಮನೆಗೆ ಬರಲು ಎಷ್ಟು ಹೊತ್ತಾಗುತ್ತದೆ? ಎಂದು ವಿಚಾರಿಸಿ ಮನೆಗೆ ಬರುವ ವರೆಗೂ ಎಚ್ಚರವಾಗಿರುತ್ತಿದ್ದು ಮನೆಗೆ ಬಂದಾಕ್ಷಣವೇ ದುಡು ದುಡು ಎಂದು ಬಂದು ಬಾಗಿಲು ತೆಗೆದು ನಾನು ಕಾರ್ ನಿಲ್ಲಿಸಿ ಮನೆಯೊಳಗೆ ಬರುವಷ್ಟರಲ್ಲಿ ಆ ದಿನದ ಎಲ್ಲಾ ವಿವರಗಳನ್ನು ಚುಟುಕಾಗಿ ಹೇಳಿಬಿಡುತ್ತಿದ್ದರು.

ಅಂದು 2017 ಆಕ್ಟೋಬರ್ 1, ಅಪ್ಪನಿಗೆ ಸ್ವಲ್ಪ ಜ್ವರವಿತ್ತು. ಮೇಲಿಂದ ಮೇಲೆ ಬಿಕ್ಕಳಿಗೆ ಬರುತ್ತಿತ್ತು. ಡಾಕ್ಟರ್ ಅವರಿಗೆ ಕರೆ ಮಾಡಿ ಔಷಧಿಗಳನ್ನು ಕೊಡಿಸಿಯಾಗಿತ್ತು. ಬೆಳಿಗ್ಗೆ ಮಗನನ್ನು ಸಂಘ ಶಿಕ್ಷಾ ವರ್ಗಕ್ಕೆ ಬಿಟ್ಟು ಬಂದಿದ್ದೆ. ಒಂದು ವಾರಗಳ ಕಾಲ ಮೊಮ್ಮಗನ್ನು ಬಿಟ್ಟಿರಬೇಕಲ್ಲಾ ಎಂಬ ಬೇಸರ. ಆದರೆ ಮನೆಯ ಮೂರನೇ ತಲೆಮಾರಿಗೂ ಸಂಘ ಶಿಕ್ಷಣ ದೊರೆಯುತ್ತಿದೆಯಲ್ಲಾ ಎನ್ನುವ ಸಂಭ್ರಮವೂ ಇತ್ತು. ಅಂದು ಮಧ್ಯಾಹ್ನ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಒಂದು ದಿನದ ಕ್ರಿಕೆಟ್ ಪಂದ್ಯ ಬೇರೆ.. ಎರಡೂ ತಂಡಗಳು ಅದಾಗಲೇ 2-2 ಪಂದ್ಯಗಳನ್ನು ಗೆದ್ದು ಅಂತಿಮ ಪಂದ್ಯ ಬಹಳ ಕುತೂಹಲವಾಗಿದ್ದು, ಮೊಮ್ಮಗನ ಕೊರತೆ ಬಾರದಂತೆ ಅಪ್ಪಾ ಮಗ ಒಟ್ಟಿಗೆ ಅವರದ್ದೇ ಕೊಠಡಿಯಲ್ಲಿ ಪಂದ್ಯ ನೋಡಿ ಸಂಭ್ರಮಿಸಿದ್ದೆವು. ಭಾರತ ತಂಡ ರೋಚಕವಾಗಿ 5ನೇ ಪಂದ್ಯ ಗೆದ್ದಾಗ, ಇಬ್ಬರೂ ಒಟ್ಟಿಗೆ ಸಂಭ್ರಮಿಸಿದ್ದು ಇನ್ನೂ ಹಚ್ಚ ಹಸಿರಾಗಿಯೇ ಕಣ್ಣಿಗೆ ಕಟ್ಟಿದ ಹಾಗಿದೆ. ತಡ ರಾತ್ರಿಯರೆಗೂ ಪಂದ್ಯಾವಳಿಯನ್ನೇ ಮೆಲುಕು ಹಾಕುತ್ತ ಜೋರಾಗಿ ಕೇಕೇ ಹಾಕುತ್ತಿದ್ದವರಿಗೆ, ನನ್ನ ಮಡದಿ ರೀ… ಎಂದಾಗಲೇ ಸಮಯದ ಪರಿವಾಗಿ ನಾವಿಬ್ಬರೂ ಪಂದ್ಯ ಗೆದ್ದ ಸಂತೋಷದಿಂದಲೇ ಮಲಗಿದ್ದ ಸವಿನೆನಪು. ಮಾರನೇಯ ದಿನ ಅಕ್ಟೋಬರ್ 2, ರಾಷ್ಟ್ರಪಿತ ಗಾಂಧೀಜಿ ಮತ್ತು ರಾಷ್ಟ್ರಕಂಡ ಅತ್ಯುತ್ತಮ ಧೈರ್ಯವಂತ ಪ್ರಧಾನಿಗಳಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿಗಳ ಹುಟ್ಟಿದ ಹಬ್ಬ.

ರಾತ್ರಿ ತಡವಾಗಿ ಮಲಗಿದ್ದ ವಯಸ್ಸಾದವರನ್ನು ಎಬ್ಬಿಸುವುದು ಬೇಡ ಎಂದು ಪ್ರತಿನಿತ್ಯದಂತೆ ಬೆಳಗಿನ ಜಾವವೇ ಎದ್ದು ಮೆಲ್ಲಗೆ ಬಾಗಿಲು ತೆಗೆದು ವ್ಯಾಯಮಕ್ಕೆಂದು ಹೊರಡಲು ಅನುವಾದಾಗ, ಮಗೂ ಬಂದೇ ತಡಿ ಎಂದಾಗ, ಅಣ್ಣಾ, ರಾತ್ರಿ ತುಂಬ ತಡವಾಗಿ ಮಲಗಿದ್ದೀರಿ, ನೀವು ಇನ್ನೂ ಸ್ವಲ್ಪ ಹೊತ್ತು ಆರಾಮವಾಗಿ ಮಲಗಿ, ನಾನು ಜಿಮ್ಗೆ ಹೋಗಿ ಬರುತ್ತೇನೆ ಎಂದು ಬಾಗಿಲಿಗೆ ಬೀಗ ಹಾಕಿಕೊಂಡು ಹೋಗಿದ್ದೆ. ಜಿಮ್ ಮುಗಿಸಿ ಬರುವಷ್ಟರಲ್ಲಿ ತಂದೆಯವರು ಎದ್ದು ಸ್ನಾನ ಸಂಧ್ಯಾವಂದನೆಗಳನ್ನು ಮುಗಿಸಿ ಎಂದಿನಂತೆ ಮನೆಗೆ ಬರುತ್ತಿದ್ದ ಮೂರು ದಿನಪತ್ರಿಕೆಗಳನ್ನು ತಿರುವಿ ಹಾಕುತ್ತಿದ್ದರು. ಅಷ್ಟರಲ್ಲಿ ಅಡುಗೆ ಮನೆಯಿಂದ ಘಮ ಘಮ ದೋಸೆಯ ವಾಸನೆ. ರೀ.. ಮಾವನವರಿಗೆ ತಿಂಡಿ ಕೊಟ್ಟು ನೀವು ಸ್ನಾನ ಮುಗಿಸಿಬಿಡಿ, ನಿಮಗೂ ಬಿಸಿ ಬಿಸಿ ದೋಸೆ ಹಾಕಿ ಕೊಡುತ್ತೇನೆ ಎಂದು ನಮ್ಮಾಕಿ ಹೇಳಿದಾಗ, ಅಡುಗೆ ಮನೆಯಿಂದ ದೋಸೆ ಚಟ್ನಿಯ ತಟ್ಟೆಯನ್ನು ತಂದೆಯವರಿಗೆ ತಂದು ಕೊಟ್ಟಿದ್ದೆ. ಎರಡು ಮೂರು ಬಾರಿ ದೋಸೆ ತಿಂದು ನೆತ್ತಿ ಹತ್ತಿದಂತಾಗಿ ತಿಂದ ದೋಸೆಯನ್ನು ಕಕ್ಕಿಕೊಂಡಾಗ ಅಲ್ಲಿಯೇ ಪಕ್ಕದಲ್ಲಿದ್ದ ನಾನು ಅವರನ್ನು ಸಂತೈಸಿ ಬೆನ್ನು ಸವರುತ್ತಿದ್ದಾಗ, ಅವರ ಮೈ ಸ್ವಲ್ಪ ಸುಡುತ್ತಿತ್ತು. ಕೂಡಲೇ ಕುಟುಂದ ವೈದ್ಯರಿಗೆ ಕರೆ ಮಾಡಿ ವಿಷಯ ತಿಳಿಸಿದಾಗ, ಗಾಬರಿ ಪಡುವಂತಹದ್ದೇನಿಲ್ಲಾ, ಆಸ್ಪತ್ರೆಗೆ ಕರೆದು ಕೊಂಡು ಬಂದು ಬಿಡು ಒಮ್ಮೆ ಪರಿಕ್ಷಿಸಿಯೇ ಬಿಡುವಾ ಎಂದಾಗ, ನಾನು ಮತ್ತು ನನ್ನ ಆಕೆ ತುರಾತುರಿಯಲ್ಲಿ ಸ್ನಾನ ಮುಗಿಸಿ ಮಗಳಿಗೆ ದೇವರ ಪೂಜೆ ಮಾಡಲು ತಿಳಿಸಿ ತಂದೆಯವರೇ ಸಹಜವಾಗಿ ನಡೆದುಕೊಂಡು ಬಂದು ಕಾರನ್ನೇರಿ, ಕ್ಷಣ ಮಾತ್ರದಲ್ಲಿಯೇ ಹತ್ತಿರದಲ್ಲಿದ್ದ ನರ್ಸಿಂಗ್ ಹೋಮ್ ತಲುಪಿದ್ದೆವು.

ತಂದೆಯವರನ್ನು ಕೂಲಂಕುಶವಾಗಿ ಪರೀಕ್ಷಿಸಿದ ಅಲ್ಲಿಯ ವೈದ್ಯರು ECG Report ನೋಡಿ ಭಯ ಪಡುವಂತಹದ್ದೇನಿಲ್ಲಾ, ಆದರೂ ನೀವು ದೊಡ್ಡ ಆಸ್ಪತ್ರೆಯಲ್ಲಿ ಯಾವುದಕ್ಕೂ ಒಮ್ಮೆ ಹೃದಯರೋಗ ತಜ್ಞರನ್ನು ನೋಡಲು ತಿಳಿಸಿ, ಪ್ರಥಮ ಚಿಕಿತ್ಸೆ ಕೊಟ್ಟು ಅವರದೇ Ambulanceನಲ್ಲಿ ತಂದೆಯವರನ್ನು ಕೂಡಲೇ ಕರೆದುಕೊಂಡು ಹೋಗಲು ಹೇಳಿದರು. ತಂದೆಯವರೇ ಖುದ್ದಾಗಿ ನಡೆದುಕೊಂಡು ಆಸ್ಪತ್ರೆಯಲ್ಲಿದ್ದ ಕೆಲವು ಪರಿಚಯಸ್ಥರನ್ನು ಮಾತನಾಡಿಸಿ Ambulanceನಲ್ಲಿ ಕುಳಿತು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀರಿ? ಎಂದು ವಿಚಾರಿಸಿ ರಾಮಯ್ಯ ಆಸ್ಪತ್ರೆಗೆ ಹೊಗುತ್ತಿರುವುದನ್ನು ಖಚಿತ ಪಡಿಸಿಕೊಂಡು, ಅವರೇ ಮುಖಕ್ಕೆ ಆಮ್ಲಜನಕದ ಮುಖವಾಡವನ್ನು ತಾವೇ ಧರಿಸಿ ಹಾಗೇ ಸುಮ್ಮನೆ ಮಲಗಿ ಕೊಂಡಾಗಲೂ ನನ್ನ ದೇವರು ನನ್ನ ಕೂಗಳತೆಯ ದೂರದಲ್ಲಿಯೇ ಇದ್ದರು

ಹಾಗೆ ಮಲಗಿಕೊಂಡಾಗಲೂ ನಿರಾಳವಾಗಿ ಮಗ ಮತ್ತು ಸೊಸೆಯನ್ನು ನೋಡಿ ಕೆಲ ನಿಮಿಷಗಳ ನಂತರ ಕಣ್ಣನ್ನು ಮುಚ್ಚಿದಾಗ, ಬಹುಶಃ ಆಸ್ಪತ್ರೆಯಲ್ಲಿ ಕೊಟ್ಟ ಇಂಗ್ಜೆಕ್ಷನ್ ಪ್ರಭಾವ ಎಂದೇ ನಾನು ಭಾವಿಸಿದ್ದೆ. ಆದರೆ ವಿಧಿಯಾಟವೇ ಬೇರಾಗಿದ್ದು ಅದರ ಮುಂದೆ ಯಾರದ್ದೂ ನಡೆಯುವುದಿಲ್ಲ ಎನ್ನುವಂತೆ ಅವರ ಕರ್ಮಭೂಮಿಯಾದ ಬಿಇಎಲ್ ಕಾರ್ಖಾನೆ ದಾಟುತ್ತಲೇ ಎರಡು ಬಾರಿ ಜೋರಾಗಿ ಉಸಿರಾಡಿದಾಗ, ಅಣ್ಣಾ ಅಣ್ಣಾ.. ಏನಾಗ್ತಿದೇ ಎಂದು ಕೇಳುತ್ತಿದ್ದಂತೆಯೇ, ಮೂರನೇ ಬಾರಿ‌ ಜೋರಾಗಿ ಉಸಿರು ಎಳೆದುಕೊಂಡು, ಉಸಿರು ಬಿಡದೇ ಸುಮ್ಮನಾದಾಗಲೂ ನಾನು ಅವರ ಕೂಗಳತೆ ಅಂತರದಲ್ಲಿಯೇ ನಾನಿದ್ದೆ. ಆದರೆ ಕೂಗಿದರೆ ಓಗೊಡಲು ನನ್ನ ದೇವರೇ ಬದುಕಿರಲಿಲ್ಲ.

ಇಂದಿಗೆ ಸರಿಯಾಗಿ ಐದು ವರ್ಷಗಳ ಹಿಂದೆ ನನ್ನನ್ನೂ ಮತ್ತು ನನ್ನ ತಂದೆಯವರನ್ನು ಆ ಭಗವಂತ ದೂರ ಮಾಡಿದ ದಿನವಿದು., ಅವರನ್ನು ನೆನಸಿಕೊಂಡಾಗಲೆಲ್ಲಾ ಮಗೂ ಎಂದು ನನ್ನನ್ನು ಕರೆಯುವುದು ನನಗೆ ಮಾತ್ರ ಕೇಳಿಸುತ್ತದೆ. ಹೊಸದದ್ದೇನಾದರೂ ಓದಿದಾಗ, ಯಾವುದೇ ಪದದ ಅರ್ಥ ತಿಳಿಯದಿದ್ದಾಗ, ಮನೆಯ ಮುಂದೆ ದುರ್ಗಾ ದೇವಿಯ ಮೆರವಣಿಗೆಯ ವಾದ್ಯದವರ ಸದ್ದಾದಾಗ, ನಮ್ಮ ಮಕ್ಕಳು ಹೆಚ್ಚಿನದ್ದೇನಾದರೂ ಸಾಧಿಸಿದಾಗ, ಮಗ ತಾತನ ರೀತಿಯಲ್ಲೇ ಅನುಸರಣೆ ಮತ್ತು ಅನುಕರಣೆ ಮಾಡಿದಾಗ, ಮನೆಯಲ್ಲಿ ವಿಶೇಷ ಅಡುಗೆ ಮಾಡಿದಾಗ, ಅದರಲ್ಲೂ ತಂಬುಳಿ, ರಾಗಿ ಮುದ್ದೆ ಬಸ್ಸಾರು ಮತ್ತು ಹುಗ್ಗಿಯನ್ನು ಮಾಡಿದಾಗ, ಜೋರಾಗಿ ಮಳೆ ಬೀಳುವಾಗ, ಮಲ್ಲೇಶ್ವರಂ ನೆಶ್ಯದ ಅಂಗಡಿ ಮುಂದೆ ಹಾದು ಹೋದಾಗ, ಎಲ್ಲಿಯಾದರೂ ಸಂಗೀತ ಇಲ್ಲವೇ ಗಮಕ ವಾಚನ ಕೇಳಿದಾಗ, ಟಿವಿಯಲ್ಲಿ ಕ್ರಿಕೆಟ್ ಪಂದ್ಯ ಪ್ರಸಾರವಾಗುತ್ತಿದ್ದಾಗ, ಯಾರಾದರೂ ತಂದೆಯವರ ಸ್ನೇಹಿತರು ಅಥವಾ ದೂರದ ಸಂಬಂಧಿಕರು ಎಲ್ಲಾದರೂ ಸಿಕ್ಕಿ, ನೀನು ಶಿವಮೂರ್ತಿಯವರ ಮಗ ಶ್ರೀಕಂಠ ಅಲ್ಲವೇ, ಪಾಪ ಒಳ್ಳೆಯ ದೇವರಂಥಾ ಮನುಷ್ಯ, ಒಳ್ಳೆಯ ಸಂಪ್ರದಾಯಸ್ಥರು, ವಾಗ್ಮಿಗಳು, ಸುಸಂಸ್ಕೃತರು, ಎಲ್ಲಕ್ಕೂ ಹೆಚ್ಚಾಗಿ ಕವಿಗಳು, ಗಮಕಿಗಳು ಅಷ್ಟು ಆರೋಗ್ಯವಂತರಾಗಿದ್ದವರನ್ನು ಆ ಭಗವಂತ ಇಷ್ಟು ಬೇಗ ಕರೆಸಿಕೊಂಡು ಬಿಟ್ಟನಲ್ಲಾ ಎಂದಾಗಲೆಲ್ಲಾ, ಹೇ ನನ್ನ ತಂದೆಯವರು ಎಲ್ಲಿ ಹೋಗಿದ್ದಾರೆ? ಅವರಿನ್ನೂ ನನ್ನ ಕೂಗಳತೆಯ ದೂರದಲ್ಲೇ ಇದ್ದಾರಲ್ಲಾ ಎನ್ನುವ ಭಾಸವಾಗುತ್ತದೆ. ಅಪ್ಪನ ನೆನಪಾದಾಗಲೆಲ್ಲಾ, ಅವರ ನೆಚ್ಚಿನ‌ ನಶ್ಯದ ಡಬ್ಬಿಯನ್ನು ತೆಗೆದರೇ ಸಾಕು. ಅದರ ಘಮಲು ಒಂದೇ ಕ್ಷಣದಲ್ಲಿ ಅಪ್ಪನನನ್ನು ಕಣ್ಣಮುಂದೆ ತಂದು ನಿಲ್ಲಿಸಿಬಿಡುತ್ತದೆ.

ನಮ್ಮ ಪೂಜ್ಯ ತಂದೆಯವರು ಇಂದು ನಮ್ಮೊಂದಿಗೆ ಭೌತಿಕವಾಗಿ ಇಲ್ಲವಾದರೂ, ಮಾನಸಿಕವಾಗಿ ಖಂಡಿತವಾಗಿಯೂ ನಮ್ಮ ಕೂಗಳತೆಯ ದೂರದಲ್ಲಿಯೇ ಇದ್ದಾರೆ. ಅವರ ಅಕಾಲಿಕ ಅಗಲಿಕೆ ನಮ್ಮನ್ನು ಕಾಡುತ್ತದಾದರೂ, ಅವರ ಆಶೀರ್ವಾದ ನಮ್ಮನ್ನು ಸದಾ ಕಾಪಾಡುತ್ತಲೇ ಇರುತ್ತದೆ.

ಇದ್ದಾಗ ನೋಡಿಕೊಳ್ಳದೇ ಸತ್ತಾಗ ಅತ್ತು ಕರೆದು,‌ನೂರಾರು ಜನರನ್ನು ಕರೆಸಿ ಭಕ್ಷ ಭೋಜನಗಳನ್ನು ಬಡಿಸಿ ಕೈತುಂಬಾ ದಾನ ಧರ್ಮ ಮಾಡಿದರೆ ಎದ್ದು ಬರುವವರೇ ಹೆತ್ತವರು?. ಹಾಗಾಗಿ ಇರುವಾಗ ಜನ್ಮ ಕೊಟ್ಟ ತಂದೆ ತಾಯಿಯರನ್ನು ಚೆನ್ನಾಗಿ ನೋಡಿಕೊಳ್ಳುವುದು, ಮಕ್ಕಳ ಆದ್ಯ ಕರ್ತವ್ಯವೇ ಸರಿ.

ಏನಂತೀರೀ?

ನಿಮ್ಮವನೇ ಉಮಾಸುತ.

4 thoughts on “ಭಗವಂತ  ನಮ್ಮಿಂದ ಎಷ್ಟು ದೂರವಿದ್ದಾನೆ?

  1. ಅದ್ಭುತವಾದ ಲೇಖನ. ನನ್ನ ಕಣ್ಣಂಚಿನಲ್ಲಿ ನೀರು ಇಣುಕಿದ್ದು ಸುಳ್ಳಲ್ಲ.ಕಾರಣಗಳು:
    ೧.ನನ್ನ ತಾಯಿ ತಂದೆ ಯವರನ್ನು ಹೆಚ್ಚು ಕಡಿಮೆ ಇದೇ ರೀತಿ ಕಳೆದು ಕೊಂಡ ನೆನಪು ಮರುಕಳಿಸಿತು.
    ೨.ನಿಮ್ಮ ತಾಯಿ ತಂದೆ ಯವರ ಪರಿಚಯವಿದೆ.
    ನಮ್ಮ ಚಂದ್ರು ಅಂಕಲ್ ಮೂಲಕ ಪರಿಚಯವಾಗಿ ನಮ್ಮ ಮನೆಗೆ ಅವರೊಡನೆ ಬಂದು, ಸುಶ್ರಾವ್ಯವಾಗಿ ಗಮಕ ವನ್ನು ಹಾಡಿದರು.ನಮ್ಮಗಳಿಗೆ ಬಹಳ ದಿನಗಳ ನಂತರ ಗಮಕ ಕೇಳಿ ಮಹದಾನಂದವಾಗಿತ್ತು.🙏 ಆಗಾಗ್ಗೆ ಬರುತ್ತಿರಿ ಎಂದು ಬೀಳ್ಕೊಟ್ಟಿದ್ದೆವು.
    ಆದರೆ ವಿಧಿ ಬರಹ ಬೇರೆ ಯೇ ಇತ್ತು ಎಂದು ತಿಳಿದಿರಲಿಲ್ಲ.

    Liked by 1 person

  2. ಜಾತಸ್ಯಮರಣಂ ದೃವಂ, ಅಪ್ಪಾಜಿಯವರ ಸ್ಥಾನ ಯಾರೂ ತುಂಬಲು ಸಾಧ್ಯವಿಲ್ಲ. ಶ್ರೀಕಂಠ ಜೀ. ನೀವು ನಂಬಿದ ದೈವ ನಿಮಗೆ ಶಕ್ತಿಕೊಡಲಿ….

    Liked by 1 person

  3. Great write up. The narration is so vivid that I could visualise every development in my mind. A true story with a true love.
    May the God Shivamurthy sir be with u always.
    H V venkatesh

    Liked by 1 person

  4. Really heartfelt after reading the article,have few memories of your beloved father during the refurbishment of your first floor. May the godess Durga give almighty strength to bear this pain and bless you all with health,wealth,joy and happiness for ever. Jaisriram

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s