ನಾನು ಚಿಕ್ಕವನಿದ್ದಾಗ, ರಥೋತ್ಸವಕ್ಕೆಂದು ನಮ್ಮೂರು ಬಾಳಗಂಚಿಗೆ ಹೋಗುತ್ತಿದ್ದೆ. ಊರಿಗೆ ಹೋದ ತಕ್ಷಣ ಅಕ್ಷರಶಃ ನಮ್ಮ ತಾತ ಗಮಕಿ ನಂಜುಂಡಯ್ಯನವರ ಬಾಲವಾಗಿ ಬಿಡುತ್ತಿದ್ದೆ. ರಾತ್ರಿ ಒಟ್ಟಿಗೆ ಒಂದೇ ಹಾಸಿಯಲ್ಲಿ ಮಲಗಿ, ಬೆಳಿಗ್ಗೆ ಎದ್ದು ಅವರ ಕೈಯಲ್ಲೇ ಸ್ನಾನ ಮಾಡಿಸಿಕೊಂಡು ಅವರ ಜೊತೆಯಲ್ಲಿಯೇ ಪೂಜೆಗೆ ಕುಳಿತು ಕೊಂಡು ಪೂಜೆಯ ಕಡೆಯಲ್ಲಿ ಮಂಗಳಾರತಿ ಮಾಡುವಾಗ ದೇವರ ಮನೆಯಿಂದ ಹೊರಬಂದು ಹಜಾರದ ಸಣ್ಣ ಗೂಡಿನಲ್ಲಿದ್ದ ಗಣೇಶನಿಗೂ ಮತ್ತು ಅದರ ಮೇಲೆ ಸಾಲಾಗಿ ತೂಗುಹಾಕಿದ್ದ ದೇವರ ಫೋಟೋಗಳು, ಶಂಕರಾಚಾರ್ಯರುಗಳು, ಶೃಂಗೇರೀ ಜಗದ್ಗುರುಗಳ ಜೊತೆ ಕಪ್ಪು ಕನ್ನಡಕ ಹಾಕಿಕೊಂಡು ರಾಜ ಗಾಂಭೀರ್ಯದಿಂದಿದ್ದ ಪೋಟೋವಿಗೂ ಮಂಗಳಾರತಿ ಮಾಡುತ್ತಿದ್ದರು.
ಅದೊಮ್ಮೆ ಕುತೂಹಲದಿಂದ ತಾತಾ, ಆ ಫೋಟೋದಲ್ಲಿ ಕಪ್ಪು ಕನ್ನಡಕ ಹಾಕಿಕೊಂಡಿದ್ದಾರಲ್ಲಾ ಅವರು ಯಾರು? ಅವರಿಗೆ ಕಣ್ಣು ಕಾಣ್ಸೋದಿಲ್ವಾ? ಅಂತಾ ಮುಗ್ಧವಾಗಿ ಪ್ರಶ್ನಿಸಿದ್ದೆ. ಛೇ! ಛೇ! ಛೇ!! ಬಿಡ್ತು ಅನ್ನು. ಹಾಗೇಲ್ಲಾ ಹೇಳ್ಬಾರ್ದು. ಮೊದಲು ತಪ್ಪಾಯ್ತು ಅನ್ನು. ಕೈ ಮುಗಿ ಎಂದು ನನ್ನ ಪುಟ್ಟ ಕರಗಳಿಂದ ಕೈ ಮುಗಿಸಿ ಮನೆಯ ಮುಂದಿನ ಜಗುಲಿಯ ಮೇಲೆ ತಮ್ಮ ತೊಡೆಯ ಮೇಲೆ ಕುಳ್ಳರಿಸಿಕೊಂಡು ಅವರು ನಮ್ಮ ಮೈಸೂರು ಮಹಾರಾಜರು. ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರು ಎಂದು ಮೊತ್ತ ಮೊದಲಬಾರಿಗೆ ನನಗೆ ನಮ್ಮ ಮೈಸೂರು ಮಹಾರಾಜರನ್ನು ಪರಿಚಯಿಸಿದ್ದರು.
ಕಂಠೀರವ ನರಸರಾಜ ಒಡೆಯರ್ ಮತ್ತು ಕೆಂಪು ಚೆಲುವಾಜಯಮ್ಮಣ್ಣಿ ಅವರ ಪುತ್ರರಾಗಿ 18.7.1919 ರಲ್ಲಿ ಮೈಸೂರಿನಲ್ಲಿ ಜನಿಸಿದ ಜಯಚಾಮರಾಜ ಒಡೆಯರ್ ಮೈಸೂರು ಸಂಸ್ಥಾನದ ಯದುವಂಶದ 25ನೆಯ ಮತ್ತು ಕಟ್ಟ ಕಡೆಯ ಮಹಾರಾಜರಾಗಿದ್ದಲ್ಲದೇ ಸದಾ ಸಮಾಜಮುಖಿ ಚಿಂತನೆಗಳಿಂದ, ಜನಪರ ಕಾರ್ಯಗಳಿಂದ ಜನರ ಮನ ಗೆದ್ದವರು. ಮೈಸೂರು ಯದುವಂಶದ ಮಹಾರಾಜರುಗಳಲ್ಲಿ ಅತ್ಯಂತ ಕಡಿಮೆ ಅವಧಿ 1940ರಿಂದ 1947ರ ವರೆಗೆ ಆಳ್ವಿಕೆ ನಡೆಸಿ, ತತ್ತ್ವಜ್ಞಾನಿ. ಸಂಗೀತಜ್ಞ, ರಾಜನೀತಿಜ್ಞ, ಉದಾರ ದಾನಿ, ರಾಜಕೀಯವಾಗಿ,ಸಾಮಾಜಿಕವಾಗಿ, ಸಾಹಿತ್ಯ ಮತ್ತು ಲಲಿತಕಲೆ ಹೀಗೆ ಎಲ್ಲದರಲ್ಲೂ ಅಗ್ರಗಣ್ಯರಾಗಿ ಮೈಸೂರು ಸಂಸ್ಥಾನದ ಹರಿಕಾರರಾಗಿದ್ದರು ಎಂದರೂ ತಪ್ಪಾಗಲಾರದು.
ಜಯಚಾಮರಾಜೇಂದ್ರ ಒಡೆಯರ್ ಮತ್ತು ಅವರ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಅವರ ಆಡಳಿತಾವಧಿಯಲ್ಲಿ ಜಾರಿಗೆ ತಂದ ಅನೇಕ ಸಾಮಾಜಿಕ ಸುಧಾರಣೆಗಳ ಮೂಲಕ ಅದಾಗಲೇ ಜಗತ್ಪ್ರಸಿದ್ಧವಾಗಿದ್ದ ಮೈಸೂರು ಸಂಸ್ಥಾನದ ಹಿರಿಮೆ ಗರಿಮೆಯನ್ನು ಮತ್ತಷ್ಟು ಮೇಲಕ್ಕೆ ತೆಗೆದುಕೊಂಡು ಹೋದರು ಎಂದರೆ ಉತ್ಪ್ರೇಕ್ಷೆಯೇನಲ್ಲ.
1940ರ ಆರಂಭದಿಂದಲೂ ರಾಜಕೀಯವಾಗಿ ಹರಿಜನರಿಗೆ ಮೀಸಲಾತಿ ಕಲ್ಪಿಸಬೇಕೆಂಬ ಕೂಗು ಕೇಳಿ ಬರುತ್ತಿದ್ದದ್ದಕ್ಕೆ ಸ್ಪಂದಿಸಿದ ಜಯ ಚಾಮರಾಜೇಂದ್ರ ಒಡೆಯರು ಹರಿಜನರಿಗಾಗಿ ರಾಜಕೀಯ ಆಡಳಿತ ಕ್ಷೇತ್ರದಲ್ಲಿ 30 ಸ್ಥಾನಗಳನ್ನು ಹಾಗೂ ಮೇಲ್ಮನೆಯಲ್ಲಿ 4 ಸ್ಥಾನಗಳನ್ನು ಮೀಸಲಿಟ್ಟಿದ್ದಲ್ಲದೇ, ಆಗ ಸಂಸ್ಥಾನದಲ್ಲಿದ್ದ 9 ಜಿಲ್ಲೆಗಳಿಂದಲೂ ರೋಟೆಷನ್ ಆಧಾರದ ಮೇಲೆ ಸದಸ್ಯರ ಆಯ್ಕೆ ಮಾಡುವಂತಹ ಕಾನೂನನ್ನು ಜಾರಿಗೆ ತಂದಿದ್ದರು. ಹರಿಜನರಲ್ಲಿಯೇ ಹಿಂದುಳಿದಿದ್ದ ಕೊರಚರು, ಬೋವಿ, ಲಂಬಾಣಿಗಳಿಗೂ ಒಂದೊಂದು ಸ್ಥಾನವನ್ನು ಮೀಸಲಿಡುವ ಮೂಲಕ, ಅಧಿಕಾರ ಸಮಾಜದ ಕಟ್ಟ ಕಡೆಯ ವ್ಯಕ್ತಿಯವರೆಗೂ ತಲುಪಬೇಕೆಂಬ ಹಂಬಲ ಅವರಿಗಿತ್ತು.
ಅಪರಾಧಗಳನ್ನು ಮಾಡಿ ಸೆರೆಮನೆಗೆ ಸೇರಿದ್ದ ಖೈದಿಗಳಿಗೆ ಯುರೋಪಿನ ಮಾದರಿಯಲ್ಲಿ ಅವರ ಮನಪರಿವರ್ತನೆಗೆ ಜೈಲಿನಲ್ಲಿಯೇ ಬಟ್ಟೆ ನೇಯುವುದು, ಶೂ, ಬೆಲ್ಟ್ ತಯಾರಿಕೆ, ತಿಂಡಿ ತಿನಸುಗಳ ತಯಾರಿ ಮಾಡುವುದನ್ನು ಕಲಿಸಿಕೊಡುವ ಮೂಲಕ ಖೈದಿಗಳು ಬಿಡುಗಡೆಯಾದ ನಂತರ ಗೌರವಯುತ ಜೀವನ ನಡೆಸಲು ಪೂರಕ ವಾತಾವರಣ ನಿರ್ಮಿಸುವ ಈ ಮಹತ್ಕಾರ್ಯ ದೇಶದಲ್ಲಿಯೇ ಮಾದರಿಯಾದ ಪುನಶ್ಚೇತನ ಕಾರ್ಯಕ್ರಮ ಎನಿಸಿಕೊಂಡಿತ್ತು.
ಅಂಗವಿಕಲರು ಮತ್ತು ನಿರಾಶ್ರಿತರಿಗಾಗಿ, ನಿರಾಶ್ರಿತರ ಪರಿಹಾರ ಕೇಂದ್ರವನ್ನು ಆರಂಭಿಸಿದ್ದದ್ದು, ಆಗಿನ ಕಾಲದಲ್ಲಿ ಭಾರತ ದೇಶದಲ್ಲಿಯೇ ಪ್ರಥಮ ಎಂಬ ಹೆಗ್ಗಳಿಕೆಗೆಗೂ ಪಾತ್ರವಾಗಿತ್ತು
ಗೋಹತ್ಯೆ ನಿಷೇಧ ಮತ್ತು ದೇವಾಲಯಗಳಲ್ಲಿ ಹರಿಜನರಿಗೆ ಮುಕ್ತ ಪ್ರವೇಶ ನೀಡುವ ಮೂಲಕ ಮಹತ್ತರವಾದ ಸಮಾಜ ಸುಧಾರಣೆಗಳನ್ನು ತಂದಿದ್ದಲ್ಲದೇ, ಕೂಲಿ ಕಾರ್ಮಿಕರಿಗೆ ವಿಮಾ ಸೌಲಭ್ಯ, ಗರ್ಭಿಣಿಯರಿಗೆ ಹೆರಿಗೆ ಆಸ್ಪತ್ರೆ ತೆರೆದಿದ್ದರು.
ನಾವೇನೂ ಈಗ ಸ್ವಚ್ಚ ಭಾರತ ಎಂದು ಮಾತನಾಡುತ್ತಿದ್ದೇವೆ. ಈ ಕಲ್ಪನೆಯನ್ನು ಅಂದೇ ಕಂಡಿದ್ದ ಮಹಾರಾಜರು ಗ್ರಾಮ, ಪಟ್ಟಣಗಳ ಸ್ವತ್ಛತೆಗೆ ಆದ್ಯತೆ ನೀಡಿ ಪ್ರತಿಯೊಂದೂ ಹಳ್ಳಿಗಳಿಗೂ ಸರ್ಕಾರದ ವತಿಯಿಂದ ಕನ್ನಡಿ ಮತ್ತು ಬಾಚಣಿಗೆಯನ್ನು ಕೊಟ್ಟು ಎಲ್ಲರೂ ಸ್ವಚ್ಛವಾಗಿರಬೇಕೆಂದು ಆಶಿಸಿದ್ದರು ತಮ್ಮ ಪೌರಕಾರ್ಮಿಕರಿಗೆಂದೇ ಉಚಿತವಾಗಿ ಅಚ್ಚುಕಟ್ಟಾದ ಮನೆಗಳನ್ನು ಕಟ್ಟಿಸಿಕೊಟ್ಟಿದರು.
1960 ರ ದಶಕದವರೆಗೂ ಏಷ್ಯಾದ ಅತಿದೊಡ್ಡ ನಗರ ವಸಾಹತುಗಳಲ್ಲಿ ಒಂದೆಂದು ಪರಿಗಣಿಸಲಾಗಿದ್ದ ಬೆಂಗಳೂರಿನ ಜಯನಗರ ಮತ್ತು ಕೈಗಾರಿಕೆಗೆ ಮತ್ತು ವಸತಿಗೆಂದು ನಿರ್ಮಿಸಲಾದ ರಾಜಾಜೀನಗರ ಈ ಎರಡೂ ಬಡಾವಣೆಗಳೂ ಜಯಚಾಮರಾಜೇಂದ್ರ ಒಡೆಯರ್ ಅವರ ಕಲ್ಪನೆಯ ಕೂಸುಗಳೇ.
ವನ್ಯ ಮೃಗಗಳ ಬಗ್ಗೆ ಅಪಾರ ಕಾಳಜಿ ಇದ್ದ ಪರಿಣಾಮವಾಗಿ ಅರು ಭಾರತೀಯ ವನ್ಯಮೃಗಗಳ ಮಂಡಳಿಯ ಅಧ್ಯಕ್ಷರಾಗಿದ್ದುದಲ್ಲದೆ, ತಮ್ಮ ಸ್ವಂತ ಮೃಗಾಲಯವನ್ನು ಸರ್ಕಾರದ ಅಧೀನಕ್ಕೆ ವಹಿಸಿಕೊಟ್ಟು ಅದರ ಅಭಿವೃದ್ದಿಗೆ ಕಾರಣರಾಗಿದ್ದಲ್ಲದೇ ಅದನ್ನು ಮೈಸೂರಿನ ಪ್ರಮುಖ ಆಕರ್ಷಣೀಯ ಕೇಂದ್ರವನ್ನಾಗಿಸಿದರು.
ಮೈಸೂರು ನಗರದಲ್ಲಿರುವ ಶ್ರೀ ಜಯಚಾಮರಾಜೇಂದ್ರ ಚಿತ್ರಶಾಲೆಗಾಗಿ ಇವರು ಅಮೂಲ್ಯ ವಸ್ತುಗಳನ್ನು ಸಂಗ್ರಹಿಸಿಕೊಟ್ಟರು. ಕೇಂದ್ರೀಯ ಆಹಾರ ಸಂಶೋಧನಾಲಯ, ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರ ಮುಂತಾದವುಗಳಿಗಾಗಿ ನಿವೇಶನ ಮತ್ತು ಕಟ್ಟಡಗಳನ್ನು ಉದಾರವಾಗಿ ದಾನ ನೀಡಿದರು.
ಇವರ ಕಾಲದಲ್ಲಿಯೇ ಮೈಸೂರಿನ ವೈಭವೋಪೇತ ದಸರಾ ಉತ್ಸವಕ್ಕೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಹತ್ತ್ವ ಬಂದಿತ್ತು.
ದಸರಾ ಸಮಯದಲ್ಲಿ ಪ್ರತಿನಿತ್ಯವೂ ಅರಮನೆಯಲ್ಲಿ ನಡೆಯುತ್ತಿದ್ದ ರಾಜಸಭೆಗಳು, ಸಂಗೀತ ಕಛೇರಿಗಳು, ಅದ್ದೂರಿಯ ಆಯುಧಪೂಜೆ ಮತ್ತು ವಿಜಯದಶಮಿಯಂದು ಸ್ವತಃ ಅಂಬಾರಿಯ ಮೇಲೆ ಕುಳಿತು ನಡೆಸುತ್ತಿದ್ದ ಜಂಬೂಸವಾರಿಗಳು ದೇಶ ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತಿತ್ತು.
ಇವರ ಆಡಳಿತಕಾಲದಲ್ಲಿಯೇ ಜಯಚಾಮರಾಜ ಗ್ರಂಥಮಾಲಾ ಎಂಬ ಯೋಜನೆ ರೂಪುಗೊಂಡು ಅದರ ಅಂಗವಾಗಿ ವೇದಶಾಸ್ತ್ರ, ಪುರಾಣ ಮುಂತಾದ ಉದ್ಗ್ರಂಥಗಳು ಪ್ರಸಿದ್ದ ಪಂಡಿತರ ಮೂಲಕ ಸಂಸ್ಕೃತದಿಂದ ಕನ್ನಡಕ್ಕೆ ತರ್ಜುಮೆ ಮಾಡಿಸಿ ಪ್ರಕಟಸಿದ್ದರು.
ಸ್ವತಃ ತಾವೇ, ದತ್ತಾತ್ರೇಯ ದಿ ವೇ ಅಂಡ್ ದಿ ಗೋಲ್, ದಿ ಗೀತಾ ಅಂಡ್ ಇಂಡಿಯನ್ ಕಲ್ಚರ್, ದಿ ರಿಲಿಜಿಯನ್ ಅಂಡ್ ದಿ ಮ್ಯಾನ್, ಆತ್ಮ ಅಂಡ್ ಬ್ರಹ್ಮ ಮುಂತಾದ ಗ್ರಂಥಗಳನ್ನು ರಚಿಸಿದ್ದಲ್ಲದೇ, ಸುಮಾರು 90ಕ್ಕೂ ಅಧಿಕ ಸಂಗೀತದ ಕೃತಿಗಳನ್ನು ರಚಿಸಿದ್ದಾರೆ ಮತ್ತು ಅವುಗಳಲ್ಲಿ ಅನೇಕ ಕೃತಿಗಳು ಇಂದಿಗೂ ಜನಪ್ರಿಯವಾಗಿವೆ.
ಭಾರತೀಯ ಸಂಸ್ಕೃತಿ ಮತ್ತು ತತ್ತ್ವಶಾಸ್ತ್ರದ ಅನಧಿಕೃತ ರಾಯಭಾರಿಯಾಗಿ,ದೇಶ ವಿದೇಶಗಳಲ್ಲಿ ಪ್ರವಾಸ ತಮ್ಮ ವಿದ್ವತ್ಪೂರ್ಣ ವಾಗ್ಝರಿಯಿಂದ ಎಲ್ಲರ ಮನಸೂರೆಗೊಂಡಿದ್ದವರು.
ಸ್ವತಃ ಅತ್ಯುತ್ತಮ ಸಂಗೀತಗಾರರಾಗಿದ್ದ ಮಹಾರಾಜರು ಮೈಸೂರು ಸಂಸ್ಥಾನದ ಪ್ರಖ್ಯಾತ ಸಂಗೀತಗಾರರನ್ನು ಲಂಡನ್ ಸೇರಿದಂತೆ ಯುರೋಪಿನ ಎಲ್ಲ ಪ್ರಮುಖ ನಗರಗಳಿಗೆ ಕರೆದುಕೊಂಡು ಹೋಗಿ ಅಲ್ಲಿ ಕರ್ನಾಟಕ ಸಂಗೀತದ ಅದ್ದೂರಿ ಕಾರ್ಯಕ್ರಮಗಳನ್ನು ನಡೆಸಿದ್ದಲ್ಲದೇ, ಅಲ್ಲಿನ ರೇಡಿಯೋ ವಾಹಿನಿಗಳಿಗೂ ಮೈಸೂರು ಸಂಸ್ಥಾನದ ಕಲಾವಿದರುಗಳನ್ನು ಪರಿಚಯಿಸಿ ಕರ್ನಾಟಕ ಸಂಗೀತದ ಸೌರಭವನ್ನು ವಿಶ್ವಾದ್ಯಂತ ಪಸರಿಸಿದ್ದರು. ಇದಲ್ಲದೇ ಜಯಚಾಮರಾಜೇಂದ್ರ ಒಡೆಯರ್ ಅವರಿಗೆ ಪಾಶ್ಚಾತ್ಯ ಸಂಗೀತ ಪ್ರಕಾರವು ತಿಳಿದಿದ್ದರಿಂದ ಅವರು ಕರ್ನಾಟಕ ಸಂಗೀತ ಮತ್ತು ಪಾಶ್ಚಾತ್ಯ ಸಂಗೀತವನ್ನು ಸಂಯೋಜಿಸಿ ಜಾಝ್ ರೀತಿಯ ಕಾರ್ಯಕ್ರಮಗಳನ್ನು ಆಗಿನ ಕಾಲದಲ್ಲಿಯೇ ಪ್ರಸ್ತುತ ಪಡಿಸಿ ಅಲ್ಲಿಯ ಕಲಾರಸಿಕರ ಮನ್ನಣೆಗೆ ಪಾತ್ರರಾಗಿದ್ದರು.
ಕನ್ನಡ ಸಾಹಿತ್ಯ ಪರಿಷತ್ತಿಗೆ ಹೊಸಾ ಮೆರಗನ್ನು ನೀಡಿದ್ದಲ್ಲದೇ, ಬಿ. ಎಂ ಶ್ರೀಕಂಠಯ್ಯನವರ ಸಾರಥ್ಯದಲ್ಲಿ ಹಳೆಯ ಮತ್ತು ಹೊಸಾ ಸಾಹಿತ್ಯದ ಪ್ರಚಾರ ಮತ್ತು ಪೋಷಣೆ, ವ್ಯಾಸಂಗ ಗೋಷ್ಠಿ, ವಿಮರ್ಶೆ, ಪರಿಶೋಧನೆ, ಸಮ್ಮೇಳನ, ವಸಂತೋತ್ಸವ, ಉಪನ್ಯಾಸ, ನಾಟಕ, ಗಮಕ ಕಲೆ, ಜನಪದ ಸಾಹಿತ್ಯ ಮಕ್ಕಳ ಸಾಹಿತ್ಯ ಎಲ್ಲವನ್ನೂ ಹಳ್ಳಿ ಹಳ್ಳಿಗಳಿಗೆ ತಲುಪುವಂತೆ ಮಾಡಿದ್ದರು.
1947ರಲ್ಲಿ ಬ್ರಿಟೀಷರು ಭಾರತಕ್ಕೆ ಸ್ವಾತಂತ್ರ್ಯವನ್ನು ಕೊಟ್ಟಾಗ, ಸರ್ದಾರ್ ವಲ್ಲಭಾಯಿಪಟೇಲ್ ಅವರ ನೇತೃತ್ವದಲ್ಲಿ 565 ಸಂಸ್ಥಾನಗಳನ್ನು ಭಾರತ ಗಣತಂತ್ರಕ್ಕೆ ಸೇರಿಕೊಳ್ಳಲು ಕೇಳಿಕೊಂಡಾಗ ಮೈಸೂರಿನ ಮಹಾರಾಜರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರು ಸಂತೋಷದಿಂದ ಮರು ಮಾತನಾಡದೇ, ಮೊತ್ತ ಮೊದಲಿಗರಗಿ ಭಾರತದ ಒಕ್ಕೂಟ ವ್ಯವಸ್ಥೆಗೆ ಸೇರಿಕೊಳ್ಳಲು ಒಪ್ಪಿಕೊಂಡಾಗ ಸ್ವತಃ ಅಂದಿನ ಪ್ರಧಾನಿಗಳಾಗಿದ್ದ ನೆಹರರವರೇ ಖುದ್ದಾಗಿ ಮೈಸೂರಿಗೆ ಬರುತ್ತಾರೆ ಎಂದರೆ ನಮ್ಮ ಮೈಸೂರಿನ ಖ್ಯಾತಿ ಎಷ್ಟಿತ್ತು ಎಂಬುದನ್ನು ಕಂಡು ಕೊಳ್ಳಬಹುದಾಗಿದೆ. ಮುಂದೆ ಭಾಷಾವಾರು ರಾಜ್ಯಗಳ ಪುನರ್ವಿಂಗಡಣೆಯಾದಾಗ ವಿಶಾಲ ಮೈಸೂರಿನ (ಇಂದಿನ ಕರ್ನಾಟಕ) ಪ್ರಥಮ ರಾಜ್ಯಪಾಲರಾದರು (1956). ಈ ಹುದ್ದೆಯಲ್ಲಿರುವಾಗ ಅವರು ಒಂದು ರೂಪಾಯಿ ಸಂಬಳವನ್ನೂ ಸ್ವೀಕರಿಸಲಿಲ್ಲ ಎಂಬುದು ಗಮನಾರ್ಯವಾದ ಅಂಶವಾಗಿದೆ. ಮುಂದೆ 1964ರಲ್ಲಿ ಮದ್ರಾಸಿನ ರಾಜ್ಯಪಾಲರಾಗಿ ನೇಮಕಗೊಂಡು ಕೆಲವು ಕಾಲ ಆ ಹುದ್ದೆಯಲ್ಲೂ ಇದ್ದರು.
1938 ರಲ್ಲಿ ಆಸ್ಟ್ರೇಲಿಯದ ಕ್ವೀನ್ಸ್ ಲ್ಯಾಂಡ್ ವಿಶ್ವವಿದ್ಯಾಲಯ ಮತ್ತು 1955 ರಲ್ಲಿ ಅಣ್ಣಾಮಲೈ ವಿಶ್ವವಿದ್ಯಾಲಯ ಡಿಲಿಟ್ ಪದವಿ, 1945ರಲ್ಲಿ ಬ್ರಿಟಿಷ್ ಸರ್ಕಾರದ ಜಿ.ಸಿ.ಎಸ್.ಐ ಬಿರುದು, 1946ರಲ್ಲಿ ಜೆ.ಸಿ.ಬಿ.ಬಿರುದು, 1947ರಲ್ಲಿ ಬನಾರಸ್ ವಿಶ್ವವಿದ್ಯಾಲಯ ಡಾಕ್ಟರ್ ಆಫ್ ಲಾಸ್ ಪದವಿಗಳಿಗೆ ಪಾತ್ರರಗಿದ್ದರು. ನೀಡಿ ಗೌರವಿಟ್ದವು.
ಸತ್ಯಪ್ರೇಮಕುಮಾರಿ ಮತ್ತು ತ್ರಿಪುರಸುಂದರಮ್ಮಣ್ಣಿ ಎಂಬ ಇಬ್ಬರು ಹೆಂಡಿರ ಮುದ್ದಿನ ಗಂಡನಾಗಿದ್ದ ಇವರಿಗೆ ಐದು ಮಂದಿ ಹೆಣ್ಣು ಮಕ್ಕಳು ಮತ್ತು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಎಂಬ ಮಗನಿದ್ದು, ತಮ್ಮ ಅಧಿಕಾರಾವಧಿಯ ನಂತರ ಪುರಾಣ ಮತ್ತು ಧಾರ್ಮಿಕ ಗ್ರಂಥಗಳ ಶ್ರವಣ ಮಾಡುತ್ತಾ ನೆಮ್ಮದಿಯಾಗಿ ಜೀವನ ಕಳೆಯುತ್ತಿದ್ದ ಸಂದರ್ಭದಲ್ಲಿಯೇ ಸೆಪ್ಟೆಂಬರ್ 23,1974 ರಂದು ಬೆಂಗಳೂರಿನಲ್ಲಿ ಶ್ವಾಸಕೋಶದ ಸಂಬಂಧಿತ ಖಾಯಿಲೆಗೆ ಬಲಿಯಾಗಿ ನಿಧನರಾಗುತ್ತಾರೆ.
ಬೆಂಗಳೂರಿನಲ್ಲಿ ಜೆ.ಸಿ ನಗರ, ಜೆ,ಸಿ ರಸ್ತೆಗಳಲ್ಲದೇ, ಜಯಚಾಮರಾಜೇಂದ್ರ ಇನಿಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇಂಜಿನಿಯರಿಂಗ್ ಕಾಲೇಜುಗಳಿಗೆ ಇವರ ಹೆಸರನ್ನು ಇಡುವ ಮೂಲಕ ಇವರ ಹೆಸರನ್ನು ಚಿರಸ್ಥಾಯಿಯನ್ನಾಗಿ ಮಾಡಿದ್ದಾರೆ. ಕಳೆದ ವರ್ಷ ಅವರ ಜನ್ಮಶತಾಬ್ಧಿಯ ಅಂಗವಾಗಿ ಲಾಲ್ ಬಾಗ್ ಫಲಪುಪ್ಷ ಪ್ರದರ್ಶನವನ್ನು ಮೀಸಲಿಡುವ ಮೂಲಕ ಅತ್ಯಂತ ಅರ್ಥಪೂರ್ಣವಾಗಿ ಗೌರವನ್ನು ಜನ್ಮಶತಮಾನೋತ್ಸವವನ್ನು ರಾಜ್ಯ ಸರ್ಕಾರ ಆಚರಿಸಿದೆ.
ಹೀಗೆ ಮೈಸೂರು ರಾಜ ಸಂಸ್ಥಾನದ ಮಹಾರಾಜ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಅವರ ಅಳ್ವಿಕೆಯಲ್ಲಿ ಮೈಸೂರು ಅರಸು ಸಂಸ್ಥಾನದ ಕೀರ್ತಿ ಪತಾಕೆ ವಿಶ್ವದ ಎಲ್ಲೆಡೆ ಝಗಮಗಿಸುವಂತಾದರೇ ಅದನ್ನು ಮತ್ತಷ್ಟೂ ಎತ್ತರಕ್ಕೇರಿಸಿದ ಕೀರ್ತಿಗೆ . ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರು ಪಾತ್ರರಾಗಿ ರಾಜಯೋಗಿಯಾಗಿ ನಿಜಕ್ಕೂ ಪ್ರಾತಃಸ್ಮರಣೀಯರಾಗಿದ್ದಾರೆ. ಅವರ 101ನೇ ಜಯಂತಿಯಾದ ಇಂದು ಆವರು ಮಾಡಿದಂತಹ ಸಾಮಾಜಿಕ ಸುಧಾರಣೆಗಳನ್ನು ಸ್ಮರಿಸಿಕೊಂಡು ಹೃತ್ಪೂರ್ವಕ ವಂದನೆಗಳನ್ನು ಅರ್ಪಿಸೋಣ.
ಏನಂತಿರೀ?
ಈ ಲೇಖನವನ್ನು ಬರೆಯಲು ಪ್ರೇರೇಪಿಸಿದ ಆತ್ಮೀಯರಾದ ಶ್ರಿಯುತ ಅರೇನಳ್ಳಿ ಧರ್ಮೇಂದ್ರ ಅವರಿಗೆ ಪ್ರೀತಿಪೂರ್ವಕ ಧನ್ಯವಾದಗಳು
My mother still remember .. when HH Shri. Srikanta Datta Narasimharaja Odeyar born,, all the Mysoreans received Sugar packet from palace…She is so thrilled to say this even today….I could see her happiness till now…. But she felt so bad when HH Shri. Srikantha Datta Odeyer left us couple of years back….
LikeLiked by 1 person