ಇವತ್ತು ಬೆಳಿಗ್ಗೆ ವಾಟ್ಸಾಪ್ಪಿನಲ್ಲಿ ಸ್ನೇಹಿತರ ಸಂದೇಶಗಳನ್ನು ಓದುತ್ತಿದ್ದಾಗ ಅತ್ಯುತ್ತಮ ಕಲೆಗಾರ ಮತ್ತು ಕ್ರಿಯಾತ್ಮಕ ಗುಣವುಳ್ಳ ಗೆಳೆಯ ಅಶೋಕ್ ವಿಶ್ವ ತೆಂಗಿನ ದಿನದ ಶುಭಾಶಯಗಳು ಎಂದು ಕಳುಹಿಸಿದಾಗ, ತಕ್ಷಣವೇ, ಅರೇ ಹೀಗೂ ಉಂಟೇ? ಎಂದು ಪ್ರತ್ಯುತ್ತರ ನೀಡಿ ಅದರ ಕುರಿತಂತೆ ಹೆಚ್ಚಿನ ವಿವರಗಳನ್ನು ಗೂಗಲ್ ಮಾಡಿ ನೋಡಿದಾಗ ತಿಳಿದು ಬಂದ ವಿಷಯವನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಪ್ರತೀ ವರ್ಷದ ಸೆಪ್ಟೆಂಬರ್ 2ನೇ ದಿನವನ್ನು ಭಾರತ ಸೇರಿದಂತೆ ತೆಂಗಿನಕಾಯಿ ಬೆಳೆಯುವ ಸುಮಾರು 18 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿರುವ ಇಂಡೋನೇಷ್ಯಾದ ಜಕಾರ್ತಾದಲ್ಲಿದಲ್ಲಿ ಮುಖ್ಯ ಕಛೇರಿಯನ್ನು ಹೊಂದಿರುವ ಏಷ್ಯನ್ ಮತ್ತು ಪೆಸಿಫಿಕ್ ತೆಂಗಿನಕಾಯಿ ಸಮುದಾಯ (ಎಪಿಸಿಸಿ) ಮತ್ತು ಅದರ ಸದಸ್ಯ ರಾಷ್ಟ್ರಗಳು ವಿಶ್ವ ತೆಂಗಿನ ದಿನವನ್ನಾಗಿ ಆಚರಿಸುತ್ತವೆ. ಎಪಿಸಿಸಿಯ ಸದಸ್ಯ ರಾಷ್ಟ್ರಗಳಲ್ಲಿ ತೆಂಗಿನ ಬಗ್ಗೆ ಹೆಚ್ಚಿನ ಅರಿವು ಮೂಡಿಸುವುದು ಮತ್ತು ತೆಂಗಿನಕಾಯಿ ಉದ್ಯಮದ ಅಭಿವೃದ್ಧಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಮನೆಯಲ್ಲಿ ಒಂದು ತೆಂಗಿನ ಮರವಿದ್ದಲ್ಲಿ ಅದು ಅವರ ಜೀವನದಲ್ಲಿ ಎಂತಹ ಅದ್ಭುತ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ಎಲ್ಲರಿಗೂ ಅರ್ಥವಾಗುವಂತೆ ಮಾಡುವ ಸದುದ್ದೇಶವನ್ನು ವಿಶ್ವ ತೆಂಗಿನ ದಿನದಂದು ಮಾಡಲಾಗುತ್ತದೆ.
ವೈಜ್ಞಾನಿಕವಾಗಿ ಹೇಳಬೇಕೆಂದರೆ ತೆಂಗಿನಕಾಯಿ ತಾಳೆ ಮರದ ಕುಟುಂಬವಾದ ಅರೆಕೇಸಿಗೆ ಸೇರಿದೆ. ಕೊಕೊಸ್ ಕುಲದ ಏಕೈಕ ಜೀವಂತ ಜಾತಿ ತೆಂಗಿನಕಾಯಿ. ಇದು ಕೊಕೊಸ್ ನ್ಯೂಸಿಫೆರಾ ಪಾಮ್ನ ಪ್ರಬುದ್ಧ ಹಣ್ಣು. ಇದು ದಕ್ಷಿಣ ಮತ್ತು ಆಗ್ನೇಯ ಏಷ್ಯಾ ಮತ್ತು ಪೆಸಿಫಿಕ್ ದ್ವೀಪಗಳ ಜನರ ಜೀವನದ ಅನಿವಾರ್ಯ ಮತ್ತು ಅವಿಭಾಜ್ಯ ಆಹಾರ ಪದಾರ್ಥವಾಗಿದೆ. ಇದು ಉಷ್ಣವಲಯದ ಹವಾಮಾನದಲ್ಲಿ ಚೆನ್ನಾಗಿ ಬೆಳೆಯುತ್ತದೆ. ಹೆಚ್ಚು ತೇವಾಂಶವುಳ್ಳ, ಮರಳು ಮಿಶ್ರಿತ ಲವಣಯುಕ್ತ ಸಮೃದ್ಧ ಕರಾವಳಿ ಪ್ರದೇಶಗಳಲ್ಲಿ ಹೆಚ್ಚು ಫಲವತ್ತಾಗಿ ಬೆಳೆಯುತ್ತದೆ. ಚೆನ್ನಾಗಿ ಬೆಳೆಯುತ್ತದೆ. ಸುಮಾರು 60-75 ಅಡಿಗಳಷ್ಟು ಎತ್ತರಕ್ಕೆ ಬೆಳೆಯುವ ತೆಂಗಿನ ಮರ ಬಹಳ ದೀರ್ಘಾವಧಿಯ ಬೆಳೆಯಾಗಿದ್ದು ಒಂದು ಮರದ ಆಯಸ್ಸು ಅಜಮಾಸು 75 ರಿಂದ 100 ವರ್ಷಗಳಾಗಿರುತ್ತದೆ. ಇದೇ ಕಾರಣಕ್ಕೇ ನನ್ನನ್ನು ನೀನು 7 ವರ್ಷ ಚೆನ್ನಾಗಿ ಜತನದಿಂದ ಬೆಳೆಸು, ನಾನು ನಿನ್ನನ್ನು 70 ವರ್ಷಗಳು ನಿನ್ನನ್ನು ನೋಡಿಕೊಳ್ಳುತ್ತೇನೆ ಎಂಬ ಗಾದೆ ಮಾತಿದೆ.
ಸಾಂಪ್ರದಾಯಕ ತೆಂಗಿನ ಸಸಿಗಳು ಫಲ ಕೊಡಲು ಸುಮಾರು 7-8 ವರ್ಷಗಳಷ್ಟು ತೆಗೆದುಕೊಂಡರೆ, ಸುಧಾರಿತ ತಳಿಗಳು ನೆಟ್ಟ 4-5 ವರ್ಷಗಳಲ್ಲಿಯೇ ಫಲವನ್ನು ನೀಡಲು ಆರಂಭಿಸುತ್ತದೆ. ಆಧಿಕ ಜೀವಸತ್ವಗಳು, ಕ್ಯಾಲೊರಿಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿರುವ ತೆಂಗಿನ ಕಾಯಿಯ ಪ್ರತಿಯೊಂದು ಭಾಗವೂ ಉಪಯೋಗಕಾರಿಯಾಗಿದೆ ಎಳನೀರು, ತೆಂಗಿನಕಾಯಿ, ಕೊಬ್ಬರಿ, ಕೊಬ್ಬರೀ ಎಣ್ಣೆ, ತೆಂಗಿನ ಚಿಪ್ಪು, ತೆಂಗಿನ ಹೆಡೆಮಟ್ಟೆ, ತೆಂಗಿನ ನಾರು, ತೆಂಗಿನ ಗರಿ, ಕಡೆಗೆ ತೆಂಗಿನ ಮರದ ತೀರು ಹೀಗೆ ಪ್ರತಿಯೊಂದು ಭಾಗವೂ ಒಂದಲ್ಲಾ ಒಂದು ಕಾರ್ಯಕ್ಕೆ ಉಪಯೋಗವಾಗುವ ಕಾರಣ ತೆಂಗಿನ ಮರಕ್ಕೆ ಕಲಿಯುಗದ ಕಲ್ಪವೃಕ್ಷ ಎಂದೇ ಕರೆಯಲಾಗುತ್ತದೆ.
ಸರಿ ಸುಮಾರು 400 ಗ್ರಾಂ ತೂಕವಿರುವ ತೆಂಗಿನ ಕಾಯಿಯಲ್ಲಿ ತಿರುಳಿನ ಹೊರತಾಗಿ ಸುಮಾರು 30-150 ಮಿಲಿ ಎಳನೀರಿನಲ್ಲಿ 100 ಗ್ರಾಂ ಕರ್ನಲ್ 354 ಕ್ಯಾಲೊರಿಗಳನ್ನು ಹೊಂದಿರುವ ಕಾರಣ ನಮ್ಮ ಹಿರಿಯರು ನಮ್ಮ ಪ್ರತಿ ನಿತ್ಯದ ಆಹಾರದಲ್ಲಿ ತೆಂಗಿನ ಕಾಯಿ, ಕೊಬ್ಬರಿ ಮತ್ತು ತೆಂಗಿನ ಎಣ್ಣೆಯ ಬಳಕೆಯನ್ನು ರೂಢಿಯಲ್ಲಿ ತಂದಿದ್ದಲ್ಲದೇ ಔಷಧಿಯರೂಪದಲ್ಲಿಯೂ ಬಳಸುತ್ತಿದ್ದರು.
ತೆಂಗು ಭಾರತೀಯರ ಜೀವನ ಮತ್ತು ಸಂಪ್ರದಾಯಗಳ ಅವಿಭಾಜ್ಯ ಅಂಗವಾಗಿದೆ. ಬಹುತೇಕರ ಮನೆಗಳಲ್ಲಿ ಕಸ ಗುಡಿಸಲು ಇಂದಿಗೂ ತೆಂಗಿನ ಕಡ್ಡಿಪೊರಕೆಯನ್ನೇ ಬಳಸುತ್ತಾರೆ. ಇಂದಿಗೂ ಎಲ್ಲಾ ಶುಭ ಕಾರ್ಯಕ್ರಮಗಳಲ್ಲಿ ಚಪ್ಪರ ಹಾಕುವುದೇ ತೆಂಗಿನ ಗರಿಗಳಿಂದಲೇ. ಇನ್ನು ಪೂಜೆಯ ಸಮಯದಲ್ಲಿ ನೈವೇದ್ಯಕ್ಕೆ ತೆಂಗಿನಕಾಯಿ ಬಳಸಿದರೆ ಅದೇ ತೆಂಗಿನಕಾಯಿಯನ್ನು ಅಡುಗೆಗೂ ಉಪಯೋಗಿಸಿಕೊಳ್ಳುತ್ತಾರೆ. ಇಂಗು ಮತ್ತು ತೆಂಗು ಇದ್ದರೆ ಮಂಗವೂ ಚೆನ್ನಾಗಿ ಅಡುಗೆ ಮಾಡುತ್ತದೆ ಎನ್ನುವ ಗಾದೆ ಮಾತೂ ಇದೆ. ಬಹುತೇಕ ಸಾಂಪ್ರದಾಯಿಕ ಅಡುಗೆಗೆ ಮತ್ತು ಸಿಹಿತಿಂಡಿಗಳನ್ನು ತೆಂಗಿನಕಾಯಿ ಮತ್ತು ಕೊಬ್ಬರಿ ಇಲ್ಲದೆ ಊಹಿಸಿಕೊಳ್ಳಲೂ ಅಸಾಧ್ಯ ಎನ್ನುವಷ್ಟರ ಮಟ್ಟಿಗೆ ಅವಿಭಾಜ್ಯ ಅಂಗವಾಗಿದೆ.
ತೆಂಗಿನ ಚಿಪ್ಪನ್ನು ಅಲಂಕಾರಿಕ ವಸ್ತುಗಳನ್ನು ಮಾಡಲು ಬಳಸುತ್ತಾರೆ. ಇತ್ತೀಚೆಗೆ ತೆಂಗಿನಚಿಪ್ಪಿನಲ್ಲಿ ಮಾಡಿದ ಇಡ್ಲಿ ಬಹಳ ಜನಪ್ರಿಯತೆಯನ್ನು ಪಡೆದುಕೊಂಡಿದೆ. ತೆಂಗಿನ ಚಿಪ್ಪನಲ್ಲಿ ಕಾಫೀ/ಟೀ ಕುಡಿಯುವ ಹವ್ಯಾಸವೂ ಹೆಚ್ಚಾಗುತ್ತಿದೆ.
ತೆಂಗಿನ ನಾರನ್ನು ಹಗ್ಗವನ್ನು ತಯಾರಿಸಲು ಬಳಸಿಕೊಂಡರೆ ಅದೇ ನಾರಿನಿಂದ ಮಾಡಿದ ಬಣ್ಣ ಬಣ್ಣದ ಡೋರ್ ಮ್ಯಾಟ್ ಗಳು ಮತ್ತು ಚಿತ್ತಾರಗಳಿಗೆ ಬಹಳ ಬೇಡಿಕೆ ಇದೆ. ತೆಂಗಿನ ನಾರಿನಿಂದ ತಯಾರಿಸಿದ ಹಾಸಿಗೆಗಳು ಅರೋಗ್ಯಕರ ಮತ್ತು ಹಿತಾನುಭವ ನೀಡುತ್ತದೆ ಎನ್ನುವ ಕಾರಣದಿಂದಾಗಿ ತೆಂಗಿನನಾರು ಸಹಾ ಹೆಚ್ಚಿನ ಬಳಕೆಯಲ್ಲಿದೆ. ತೆಂಗಿನ ತ್ರಾಜ್ಯದ ಬೂದಿ ಗೊಬ್ಬರವನ್ನಾಗಿ ಬಳಸುತ್ತಾರೆ
ಕೊಬ್ಬರಿಯಂತೂ ಮನೆಯಲ್ಲಿ ಹಿರಿಯರು ಕಿರಿಯರು ಎನ್ನುವ ಬೇಧವಿಲ್ಲದೇ ಪ್ರತಿಯೊಬ್ಬರೂ ತಿನ್ನಲು ಬಯಸುವ ಪದಾರ್ಥವಾಗಿದದ್ದು, ಕೊಲೆಸ್ಟ್ರಾಲ್, ನಾರಿನಾಂಶ, ಕಾಪರ್, ಸೆಲೆನಿಯಂ ಎನ್ನುವ ಪೋಷಕಾಂಶಗಳಿರುವ ಕಾರಣ ಇದನ್ನು ಸೂಪರ್ ಫುಡ್ ಎಂದು ಕರೆದರೂ ತಪ್ಪಾಗುವುದಿಲ್ಲ. ಹಾಗಾಗಿ ಪ್ರತಿದಿನ 20 ರಿಂದ 25 ಗ್ರಾಂ ನಷ್ಟು ಒಣಕೊಬ್ಬರಿಯನ್ನು ಜಗಿದು ತಿನ್ನುವ ಅಭ್ಯಾಸವನ್ನು ರೂಢಿಸಿಕೊಳ್ಳುವ ಮೂಲಕ ನಿಶ್ಶಕ್ತಿ, ಆಯಾಸ, ಗಂಟುಗಳಲ್ಲಿ ನೋವು, ಸೊಂಟ ನೋವು, ರಕ್ತಹೀನತೆ, ಅಜೀರ್ಣ, ಕೂದಲು ಉದುರುವುದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೇ ಜ್ಞಾಪಕ ಶಕ್ತಿಯನ್ನೂ ವೃಧ್ದಿಸಲು ಸಹಾಯ ಮಾಡುತ್ತದೆ.
ಒಣಕೊಬ್ಬರಿ ಪ್ರತಿನಿತ್ಯ ಆಹಾರದಲ್ಲಿ ಬಳಸುವುದರಿಂದ ನಮ್ಮ ದೇಹದ ಮೂಳೆಗಳು ಬಲಶಾಲಿಯಾಗುವುದಲ್ಲಿದೇ, ಕೊಬ್ಬರಿಯಲ್ಲಿರುವ ನೈಸರ್ಗಿಕವಾದ ಎಣ್ಣೆಯ ಅಂಶ ಮತ್ತು ಖನಿಜಗಳು ಕೀಲುಗಳಿಗೆ ಅತ್ಯವಶ್ಯಕವಾದ ಕೀಲೆಣ್ಣೆಯನ್ನು ವೃದ್ಧಿಸುವುದರಲ್ಲಿ ಸಹಾಯ ಮಾಡುತ್ತದೆ. ಈ ಮೂಲಕ, ಮೂಳೆಗಳ ಗಂಟುಗಳ ಘರ್ಷಣೆಯನ್ನು ಕಡಿಮೆ ಮಾಡುವುದಲ್ಲದೇ, ಸವೆಯುವಿಕೆಯನ್ನು ತಡೆಯುತ್ತದೆ ಮತ್ತು ಮೂಳೆಗಳು ಕಟಕಟ ಎಂದು ಶಬ್ದಮಾಡುವುದನ್ನು ನಿವಾರಿಸುತ್ತದೆ ಮತ್ತು ಮೂಳೆಗಳನ್ನು ಬಲಶಾಲಿಯನ್ನಾಗಿಸುತ್ತದೆ. ಒಣ ಕೊಬ್ಬರಿಯಿಂದ ದೊರೆಯುವ ಖನಿಜಾಂಶಗಳು ದೇಹದಲ್ಲಿ ಬೇಗನೆ ಸೇರಿಕೊಳ್ಳುವ ಮೂಲಕ ಆರ್ಥರೈಟಿಸ್ ನಂತಹ ತೊಂದರೆಯಿಂದ ಪಾರು ಮಾಡುತ್ತದೆ.
ಇನ್ನು ಮಕ್ಕಳಿನ ಮೆದಳನ್ನು ಚುರುಕಾಗಿಸಲು ಮತ್ತು ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು ಕೊಬ್ಬರಿ ಸಹಾಯಕಾರಿಯಾಗಿದೆ. ಕೊಬ್ಬರಿಯಲ್ಲಿ ಹೇರಳವಾದ ನಾರಿನ ಅಂಶವಿರುವ ಕಾರಣ ವಯಸ್ಸಾದ ನಂತರ ಕಾಡುವ ಅಜೀರ್ಣತೆ, ಮಲಬದ್ಧತೆ ಮತ್ತು ಮೂಲವ್ಯಾಧಿ ರೋಗದ ಸಮಸ್ಯೆಯನ್ನು ಕೂಡ ಸರಿಪಡಿಸ ಬಹುದಾಗಿದೆ. ಪ್ರತೀ ತಿಂಗಳ ಋತುಸ್ರಾವದಿಂದಾಗಿ ಮಹಿಳೆಯರಲ್ಲಿ ಸಾಮಾನ್ಯವಾಗಿ ರಕ್ತಹೀನತೆಯ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ರಕ್ತಹೀನತೆಯ ಸಮಸ್ಯೆಯಿಂದಾಗಿ ನಿಶ್ಯಕ್ತಿಯಿಂದಾಗಿ ತಲೆಸುತ್ತು, ತಲೆನೋವನ್ನು ಅನುಭವಿಸುತ್ತಾರೆ. ಒಣ ಕೊಬ್ಬರಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿಣ ಅಂಶವಿರುವ ಕಾರಣ ಅದು ಶರೀರದಲ್ಲಿ ರಕ್ತವನ್ನು ಹೆಚ್ಚಿಸಲು ಪರಿಣಾಮಕಾರಿಯಾಗಿದೆ. ಮಹಿಳೆಯರ ಕೂದಲು ಉದುರುವ ಸಮಸ್ಯೆಗೂ ಕೊಬ್ಬರಿ ಉತ್ತಮ ಔಷಧವಾಗಿದೆ.
ಇನ್ನು ಪದೇ ಪದೇ ತಲೆನೋವು ಅಥವಾ ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಿದ್ದವರು ಪ್ರತೀ ದಿನ ಸೂರ್ಯೋದಯಕ್ಕಿಂತ ಮೊದಲು ಸುಮಾರು 20 ರಿಂದ 25 ಗ್ರಾಂ ನಷ್ಟು ಕೊಬ್ಬರಿಯನ್ನು ಅಷ್ಟೇ ಪ್ರಮಾಣದ ಕಲ್ಲು ಸಕ್ಕರೆಯ ಜೊತೆಗೆ ಸೇವಿಸುವುದರಿಂದ ಎಷ್ಟೇ ಹಳೆಯದಾದ ತಲೆನೋವು ಅಥವಾ ಮೈಗ್ರೇನ್ ಸಮಸ್ಯೆ ಇದ್ದರೂ ಅದನ್ನು ಪರಿಹರಿಸಿಕೊಳ್ಳ ಬಹುದಾಗಿದೆ.
ದೇಹದಲ್ಲಿ ಸೆಲೆನಿಯಂ ಕೊರತೆಯಿಂದಾಗಿ ಬಹುತೇಕರಲ್ಲಿ ಥೈರಾಯ್ಡ್ ಸಮಸ್ಯೆ ಉಂಟಾಗುತ್ತದೆ. ಒಣ ಕೊಬ್ಬರಿಯಲ್ಲಿ ಸೆಲೆನಿಯಂ ಅಧಿಕ ಪ್ರಮಾಣದಲ್ಲಿ ಇರುವ ಕಾರಣ, ಹೈಪರ್ ಥೈರಾಯ್ಡ್ ಅಥವಾ ಹೈಪೋ ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿರುವವರು, ಪ್ರತಿನಿತ್ಯ ಒಣಕೊಬ್ಬರಿಯನ್ನು ಸೇವಿಸುವ ಮೂಲಕ ತಮ್ಮ ಥೈರಾಯ್ಡ್ ಹಾರ್ಮೋನನ್ನು ಸರಿಯಾದ ಪ್ರಮಾಣದಲ್ಲಿ ಇಟ್ಟುಕೊಳ್ಳ ಬಹುದಾಗಿದೆ.
ಈಗಾಗಲೇ ತಿಳಿಸಿರುವಂತೆ ಕೊಬ್ಬರಿಯಲ್ಲಿ ಹೆಚ್ಚಿನ ನಾರಿನಂಶ ಇರುವ ಕಾರಣ ಹೃದಯವನ್ನು ಸುಸ್ಥಿತಿಯಲ್ಲಿ ಇಡುವಲ್ಲಿ ಸಹಾಯಕಾರಿಯಾಗಿದೆ. ಒಣಕೊಬ್ಬರಿಯ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದಲ್ಲದೇ, ಪುರುಷರಲ್ಲಿ ಹಾಗೂ ಮಹಿಳೆಯರಲ್ಲಿನ ಬಂಜೆತನದ ಸಮಸ್ಯೆಯನ್ನು ನಿವಾರಿಸುವುದರಲ್ಲಿಯೂ ಸಹಕಾರಿಯಾಗಿದೆ.
ಇನ್ನು ನಿದ್ರಾಹೀನತೆಯಿಂದ ಬಳಲುತ್ತಿರುವವರು, ರಾತ್ರಿ ಮಲಗುವ ಮೊದಲು ಒಂದು ಲೋಟ ಬಿಸಿ ಹಾಲಿಗೆ ಎರಡು ಚಮಚ ತುರಿದ ಒಣ ಕೊಬ್ಬರಿಯನ್ನು ಹಾಕಿ ಕುಡಿಯುವುದರಿಂದ ಚೆನ್ನಾಗಿ ನಿದ್ರೆ ಬರುತ್ತದೆ. ರಕ್ತದಲ್ಲಿರುವ ಅಧಿಕ ಗ್ಲುಕೋಸ್ ಮಟ್ಟವನ್ನು ಕಡಿಮೆ ಮಾಡುವ ಕಾರಣ, ಕೊಬ್ಬರಿಯ ಸೇವನೆ ಮಧುಮೇಹಿಗಳಿಗೆ ವರದಾನವಾಗಿದೆ.
ಒಣಕೊಬ್ಬರಿ ಒಂದು ಒಳ್ಳೆಯ ಆ್ಯಂಟಿ ಬಯಾಟಿಕ್ ಆಗಿರುವ ಕಾರಣ ಯಾವುದೇ ತರಹದ ಗಾಯಗಳಾಗಲೀ ಅಥವಾ ತುರಿಕೆ ಮತ್ತು ಚರ್ಮ ಸಂಬಂಧಿತ ಸಮಸ್ಯೆಗಳಿಗೆ ಕೊಬ್ಬರೀ ಎಣ್ಣೆ ರಾಮಬಾಣವಾಗಿದೆ. ಕೊಬ್ಬರೀ ಎಣ್ಣೆಹಚ್ಚುವುದರಿಂದ ಎಂತಹ ಗಾಯದ ಕಲೆಯೂ ಕೆಲವೇ ಕೆಲವು ದಿನಗಳಲ್ಲಿ ಮಾಯವಾಗುತ್ತದೆ. ಪ್ರತೀ ನಿತ್ಯ ತಲೆಗೆ ಕೊಬ್ಬರೀ ಎಣ್ಣೆಯನ್ನು ಹೆಚ್ಚಿಕೊಳ್ಳುವುದರಿಂದ ದೇಹವನ್ನು ತಂಪಾಗಿ ಇಟ್ಟುಕೊಳ್ಳಬಹುದಲ್ಲದೇ, ಕಣ್ಣನ್ನೂ ತಂಪಾಗಿಸುತ್ತದೆ.
ಇಷ್ಟೆಲ್ಲಾ ಅದ್ಭುತ ಅಂಶಗಳನ್ನು ಹೊಂದಿದ್ದರಿಂದಲೇ ನಮ್ಮ ಪೂರ್ವಜರು ತೆಂಗನ್ನು ನಮ್ಮ ಜೀವನದ ಅವಿಭಾಜ್ಯ ಅಂಗವನ್ನಾಗಿಸಿ ಶುಭ ಮತ್ತು ಅಶುಭ ಕಾರ್ಯದಲ್ಲಿ ತೆಂಗು ಮತ್ತು ತೆಂಗಿನ ಉತ್ಪನ್ನಗಳನ್ನು ನಮ್ಮ ಜೀವನದ ಅವಿಭಾಜ್ಯವನ್ನಾಗಿಸಿದ್ದರು. ಈಗಿನ ಜನಾ ತೆಂಗಿನಕಾಯಿಯ ಆರೋಗ್ಯ ಮತ್ತು ವಾಣಿಜ್ಯ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಲು ಅದಕ್ಕೆಂದೇ ಒಂದು ದಿನವನ್ನು ಮೀಸಲಾಗಿರಿಸಿ ವಿಶ್ವ ತೆಂಗಿನ ದಿನವನ್ನು ಆಚರಿಸಲಾಗುತ್ತದೆ.
ತೆಂಗಿನ ಬುಡವನ್ನು ಮನೆಗೆ ತೊಲೆಯಾಗಿ ಬಳಸಿದರೆ, ಹಳ್ಳಿಗಳಲ್ಲಿ ತೆಂಗಿನ ಚಿಪ್ಪಿನ ಜಾನಪದ ಕಲೆಯನ್ನು ಇಂದಿಗೂ ಪ್ರಸಿದ್ಧವಾಗಿದೆ. ತೆಂಗಿನ ನಾರನ್ನು ಹಾಸಿಗೆ, ತಲೆದಿಂಬು, ಕಾಲು ಒರೆಸುವ ಮ್ಯಾಟ್ ಗಳ ತಯಾರಿಕೆಯಲ್ಲಿ ಬಳಸಿದರೆ, ತೆಂಗಿನ ಚಿಪ್ಪನ್ನು ಸುಟ್ಟು ಕಪ್ಪು ಮಸಿಯನ್ನು ಬಣ್ಣಗಳಿಗೆ ಹಾಗೂ ಇದ್ದಿಲಾಗಿ ಮಾಡಲು ಬಳಸುತ್ತಾರೆ , ಇಂದಿಗೂ ಹಳ್ಳಿಗಳಲ್ಲಿ ತೆಂಗಿನ ಸೋಗೆ, ತೆಂಗಿನತ್ರಾಜ್ಯಗಳು ಉರುವಲಾಗಿ ಬಳಸಿದರೆ, ಎಷ್ಟೋ ಗುಡಿಸಲುಗಳ ಸೂರಾಗಿ, ತೆಂಗಿನ ಗರಿಗಳನ್ನು ಬಳಸಲಾಗುತ್ತದೆ.
ಬೆಂಗಳೂರಿನಲ್ಲಿ ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸಮಾಡುತ್ತಿರುವ ಗೆಳೆಯರೊಬ್ಬರಿಗೆ ಕರೆ ಮಾಡಿ, ಹೀಗೆ ಲೋಕಾಭಿರಾಮವಾಗಿ ಹರಟುತ್ತಾ ಹೇಗಿದೆ ಕೆಲಸ ಎಂದಾಗ, ಅರೇ ಕೆಲಸವೆಲ್ಲಾ ಮನೆಯಿಂದಲೇ ಆಗುತ್ತಿದೆ. ಆದರೂ ಈ ಕೆಲಸ ನಂಬಿಕೊಂಡು ಇರುವುದಕ್ಕೆ ಆಗುವುದಿಲ್ಲಾ ಎಂದೇ ಕಳೆದ ಮೂರ್ನಾಲ್ಕು ತಿಂಗಳಿನಿಂದಲೂ ಊರಿನಲ್ಲಿಯೇ ಝಾಂಡಾ ಊರಿ ನಮ್ಮ ತೋಟದಲ್ಲಿ 250 ತೆಂಗಿನ ಸಸಿಗಳನ್ನು ನೆಡಿಸಿದ್ದೇನೆ. ಈ ಮಳೆಗಾಲದಲ್ಲಿ ಆ ತೆಂಗಿನ ಗಿಡಗಳು ಚೆನ್ನಾಗಿ ಕಚ್ಚಿಕೊಂಡಲ್ಲಿ ಮುಂದಿನ ನಾಲ್ಕೈದು ವರ್ಷಗಳಲ್ಲಿ ಫಲ ಕೊಡಲು ಆರಂಭಿಸಿದರೆ ಈ ಕೆಲಸಕ್ಕೆಲ್ಲಾ ರಾಜೀನಾಮೆ ನೀಡಿ, ಊರಿನಲ್ಲಿ ನೆಮ್ಮದಿಯಿಂದ ಜೀವನ ನಡೆಸುತ್ತೇನೆ ಎಂದಾಗ, ಅವರಿಗೆ ಶುಭ ಹಾರೈಸಿದೆ. ನಿಜ ಅವರೇ ಭಾಗ್ಯವಂತರು. ಕೃಷಿಯನ್ನು ನಂಬಿದವರು ಎಂದೂ ಹಾಳಾಗಿಲ್ಲ ಅದರಲ್ಲೂ ಶ್ರಧ್ಧೆಯಿಂದ ಪಾಲಿಸಿದಲ್ಲಿ ಕಲಿಯುಗದ ಕಲ್ಪವೃಕ್ಷ ನಂಬಿದವರನ್ನು ಎಂದಿಗೂ ಕೈ ಬಿಡುವುದಿಲ್ಲ.
ಏನಂತೀರೀ?
ನಿಮ್ಮವನೇ ಉಮಾಸುತ
ಕೊಬ್ಬರಿ ಉಪಯುಕ್ತತೆಯ ಕುರಿತಾದ ಮಾಹಿತಿ ಅಂತರ್ಜಾಲದಿಂದ ಸಂಗ್ರಹಿಸಿದೆ.
ಲೇಖನ ಬಹಳ ಸೊಗಸಾಗಿ ಮೂಡಿ ಬಂದಿದೆ ..ಎಲ್ಲಾ ಬರಹಗಳನ್ನು ಓದಬಯಸಿದ್ದೇನೆ
LikeLike
ಧನ್ಯವಾದಗಳು. ನನ್ನ ಎಲ್ಲಾ ಲೇಖನಗಳನ್ನು ನೀವು http://enanrheeri.com ಬ್ಲಾಗಿನಲ್ಲಿ ಓದ ಬಹುದಾಗಿದೆ.
LikeLike