ಸುಧೀರ್

ಅದು ಎಂಬತ್ತರ ದಶಕ ಮಲ್ಲೇಶ್ವರದ ಕೋದಂಡರಾಮಪುರದ ರಾಮಮಂದಿರದ ಎರುರಿಗಿದ್ದ ಕೆಲವು ಸಣ್ಣ ಸಣ್ಣ ಮನೆಯೊಂದರಲ್ಲಿ ರಂಗಭೂಮಿ ಮತ್ತು ಚಲನಚಿತ್ರದಲ್ಲಿ ಅಭಿನಯಿಸುತ್ತಿದ್ದ ನಟರೊಬ್ಬರು ಇದ್ದರು. ವರನಟ ರಾಜಕುಮಾರರ ತಮ್ಮ ವರದಪ್ಪನವರ ಮನೆ ಅಲ್ಲಿಂದ ಕೂಗಳತೆಯ ದೂರದಲ್ಲಿತ್ತು. ನಾಟಕ ಅಥವಾ ಚಿತ್ರೀಕರಣವಿಲ್ಲದಿದ್ದಲ್ಲಿ ಸಂಜೆ ನೀಟಾಗಿ ಡ್ರೆಸ್ ಮಾಡಿಕೊಂಡು ಕೈ ಬೆರಳಲ್ಲೊಂದು ಕೀ ಚೈನ್ ತಿರುಗಿಸಿಕೊಂಡು ಸಿಳ್ಳೇ ಹಾಕುತ್ತಾ ತಮ್ಮ ಮನೆಯಿಂದ ಹೊರಡುತ್ತಿದ್ದ ವೈಯ್ಯಾಳಿಕಾವಲ್ ರಾಜೇಶ್ ಹೋಟೆಲ್ ಕಡೆಗೆ ಹೋಗುತ್ತಿದ್ದ ಆ ಅಜಾನುಬಾಹು ನಟನನ್ನು ನೋಡಿದರೆ ನಿಜಕ್ಕೂ ಭಯವೆನಿಸುತ್ತಿತ್ತು. ನಮ್ಮಂತಹ ಚಿಕ್ಕಮಕ್ಕಳು ಆಶ್ಚರ್ಯ ಚಕಿತರಾಗಿ ನೋಡಿದರೆ ಕೆಲವೊಮ್ಮೆ ನಗುತ್ತಾ ಹಾಯ್ ಎಂದು ಹೇಳಿದರೆ, ಕೆಲವೊಮ್ಮೆ ದುರುಗುಟ್ಟಿ ನೋಡಿದರಂತೂ ಆ ಮಗು ರಾತ್ರಿ ಹಾಸಿಗೆ ಖಂಡಿತವಾಗಿಯೂ ಒದ್ದೇ ಮಾಡುತ್ತಿತ್ತು ಎನ್ನಬಹುದು. ಹೀಗೆ ನೋಡಲು ಭಯಂಕರವಾಗಿದ್ದ ಅಜಾನುಬಾಹು ಸುಧೀರ್ ಸಾಗರ್ ಆವರೇ ನಮ್ಮ ಇಂದಿನ ಕನ್ನಡದ ಕಲಿಗಳು ಕಥಾನಾಯಕ.

ವಯ್ಯಾಳಿಕಾವಲ್ಲಿನ ಆ ಸಣ್ಣ ಮನೆಯ ಮುಂದೆ ಸುಧೀರ್ ಸಾಗರ್ ಎಂಬ ಸಣ್ಣದಾದ ನಾಮಫಲಕವಿದ್ದರೆ, ಆದರೊಳಗೆ ಸಾಗರದ ಮೂಲದ ಅಜಾನುಬಾಹು ಮೇರು ನಟ ಸುಧೀರ್ ಎಲ್ಲರ ಪ್ರೀತಿಯ ಸಿಂಧೂರ ಲಕ್ಷ್ಮಣ ವಾಸಿಸುತ್ತಿದ್ದರು ಎಂದರೆ ನಂಬಲೂ ಆಶ್ವರ್ಯವಾಗುತ್ತದೆ. ತಮ್ಮ ಹುಟ್ಟೂರು ಸಾಗರದಲ್ಲೇ ತಮ್ಮ ವಿದ್ಯಾಭ್ಯಾಸ ಮುಗಿಸಿ ನಾಟಕಗಳ ಖಯಾಲಿಯಿಂದಾಗಿ, ಕರ್ನಾಟಕದ ನಾಟಕಗಳ ಕಾಶೀ ಎನ್ನಬಹುದಾದ ಉತ್ತರ ಕರ್ನಾಟಕದ ಕಡೆಗೆ ವಲಸೆ ಬಂದು ತಮ್ಮ ರಂಗಭೂಮಿ ವೃತ್ತಿ ಜೀವನವನ್ನು ಆರಂಭಿಸುತ್ತಾರೆ. ಆರಂಭದಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಆಭಿನಯಿಸುತ್ತಾ, ಇತರೇ ಸಹನಟರುಗಳ ಆಭಿನಯವನ್ನು ನೋಡುತ್ತಲೇ ಬೆಳೆದ ಸುಧೀರ್ ಅದೊಮ್ಮೆ ತಮ್ಮ ನಾಟಕದ ತಂಡದಲ್ಲಿ ಸಿಂದೂರ ಲಕ್ಷ್ಮಣ ನಾಟಕದ ನಾಯಕ ಅನಾರೋಗ್ಯಕ್ಕೆ ಪೀಡಿತನಾಗಿ ಆ ಪಾತ್ರ ಮಾಡುವವರು ಯಾರು? ಎಂದು ಎಲ್ಲರೂ ಯೋಚಿಸುತ್ತಿರುವಾಗ ಕಂಪನಿಯ ಮಾಲಿಕರ ಕಣ್ಣು ಕಟ್ಟು ಮಸ್ತಾಗಿದ್ದ, ಶರೀರ ಮತ್ತು ಶಾರೀರಗಳೆರಡೂ ಸಿಂಧೂರ ಲಕ್ಷ್ಮಣ ಪಾತ್ರಕ್ಕೇ ಹೇಳಿ ಮಾಡಿಸಿದ್ದಂತಹ ಸುಧೀರ್ ಕಡೆಗೆ ಬಿದ್ದು ಸುಧೀರ್ ಅವರನ್ನೇ ಆ ಪಾತ್ರ ಮಾಡಲು ಅವಕಾಶ ಕೊಡುತ್ತಾರೆ. ಸಿಕ್ಕ ಅವಕಾಶವನ್ನು ಅತ್ಯಂತ ಸೂಕ್ತವಾಗಿ ಬಳಸಿಕೊಂಡ ಸುಧೀರ್ ಸಿಂಧೂರ ಲಕ್ಷ್ಮಣ ಪಾತ್ರದಲ್ಲಿ ಸುಧೀರ್ ಅಲ್ಲದೇ ಮತ್ತೊಬ್ಬ ನಟನನ್ನು ಊಹಿಸಲೂ ಆಸಾಧ್ಯ ಎನ್ನುವಂತೆ ಅಭಿನಯಿಸುವ ಮೂಲಕ ಜನಮಾನಸದಲ್ಲಿ ಚಿರಸ್ಥಾಯಿಯಾಗುವುದರಲ್ಲಿ ಸಫಲರಾಗುತ್ತಾರೆ.

ಕೇವಲ ಪೌರಾಣಿಕ ಪಾತ್ರವಲ್ಲದೇ, ಸಾಮಾಜಿಕ ಪಾತ್ರಗಳಿಗೂ ಸೈ ಎನಿಸಿಕೊಳ್ಳುವ ಸುಧೀರ್ ಮತ್ತೊಬ್ಬ ಖ್ಯಾತ ನಟಿ ಮಿನುಗುತಾರೆ ಕಲ್ಪನ ಅವರ ನಾಟಕ ತಂಡಲ್ಲಿ ಇದ್ದಾಗ, ಆ ತಂಡದಲ್ಲಿ ಸಣ್ಣ ಪುಟ್ಟ ನಾಟ್ಯಗಳನ್ನು ಮಾಡುತ್ತಿದ್ದ ಮಾಲತಿ ಎಂಬ ಹುಡುಗಿಯನ್ನು ಮನಸಾರೆ ಇಷ್ಟಪಟ್ಟು ಗುರುಹಿರಿಯರ ಸಮ್ಮುಖದಲ್ಲಿ ಹುಬ್ಬಳ್ಳಿಯಲ್ಲಿ ಮದುವೆ ಮಾಡಿಕೊಳ್ಳುವ ಮೂಲಕ ಚರ್ತುಭುಜರಾಗಿ ಅವರ ಸುಖ ದಾಂಪತ್ಯದ ಫಲವಾಗಿ ನಂದ ಕಿಶೋರ್ ಮತ್ತು ತರುಣ್ ಕಿಶೋರ್ ಎಂಬ ಮುದ್ದಾದ ಮಕ್ಕಳು ಜನಿಸುತ್ತಾರೆ

ಇದೇ ಸಂದರ್ಭದಲ್ಲಿಯೇ ಅವರ ಆಭಿನಯವನ್ನು ನೋಡಿ ಮೆಚ್ಚಿದ ಕನ್ನಡ ಚಿತ್ರರಂಗವೂ ಅವರ ಶರೀರವನ್ನು ನೋಡಿ 1973ರಲ್ಲಿ ಬೀಸಿದ ಬಲೆ ಚಿತ್ರದಲ್ಲಿ ಖಳನಾಯಕನ ಸಹಾಯಕನ ಪಾತ್ರದಲ್ಲಿ ಸಣ್ಣ ಪುಟ್ಟ ಅವಕಾಶಗಳನ್ನು ನೀಡುವುದರ ಮೂಲಕ ತನ್ನತ್ತ ಬಲೆ ಬೀಸಿ ಸೆಳೆದುಕೊಳ್ಳುತ್ತದೆ. ಸಾಮಾನ್ಯವಾಗಿ ಒಂದು ಸಿನಿಮಾ ಹಿಟ್ ಆದ ತಕ್ಷಣವೇ, ಅದರ ಫಲವನ್ನು ನಾಯಕರಿಗೇ ಕೊಡುವುದು ಇದುವರೆಗೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಆದರೆ ಚಿತ್ರಕ್ಕೆ ನಾಯಕ ಎಷ್ಟು ಮುಖ್ಯವಾಗಿರುತ್ತಾರೋ, ಅಷ್ಟೇ ಮುಖ್ಯ ಪಾತ್ರವನ್ನು ಖಳನಾಯಕರೂ ವಹಿಸಿರುತ್ತಾರೆ. ದುಷ್ಟರನ್ನು ಸೆದೆ ಬಡಿದೇ ನಾಯಕ ಒಳ್ಳೆಯ ಸಂದೇಶವನ್ನು ನೀಡುತ್ತಾನೆ ಎಂದರೆ ದುಷ್ಟ ಪಾತ್ರ ಮಾಡುವವರೂ ಇರಲೇ ಬೇಕಲ್ಲವೇ? ಸುಧೀರ್ ಚಿತ್ರರಂಗಕ್ಕೆ ಖಳನಾಯಕರಾಗಿ ಬರುವ ಮೊದಲೇ, ದಿನೇಶ್ ವಜ್ರಮುನಿ, ತೂಗದೀಪ ಶ್ರೀನಿವಾಸ್ , ಶಕ್ತಿಪ್ರಸಾದ್, ಅಂಬರೀಶ್, ಟೈಗರ್‌ ಪ್ರಭಾಕರ್, ಧೀರೇಂದ್ರ ಗೋಪಾಲ್ ಅಲ್ಲದೇ ಹಾಸ್ಯ ಖಳನಾಯಕರಾಗಿ ಬಾಲಣ್ಣ ಮತ್ತು ಮುಸುರೀ ಕೃಷ್ಣಮೂರ್ತಿಗಳು ಮಿಂಚುತ್ತಿದ್ದರು. ಈ ದಿಗ್ಗಜರು ತರೆಯ ಮೇಲೆ ಬಂದು ಅಟ್ಟ ಹಾಸದಿಂದ ಗಹಗಹಿಸಿ ನಗುತ್ತಿದ್ದರೇ, ನಾಯಕಿ ಅಥವಾ ನಾಯಕನಿಗೆ ಕಿರುಕುಳ ಇಲ್ಲವೇ ಅವರ ಮನೆಯವರಿಗೆ ತೊಂದರೆ ಕೊಡುತ್ತಿದ್ದರೆ, ಸಿನಿಮಾ ನೋಡುತ್ತಿದ ಪ್ರೇಕ್ಷಕರಿಗೆ ರಕ್ತ ಕುದಿಯುವಷ್ಟರ ಮಟ್ಟಿಗೆ ಪರಕಾಯ ಪ್ರವೇಶ ಮಾಡುವ ಮೂಲಕ ಈ ಖಳನಾಯಕರು ಪಾತ್ರಕ್ಕೆ ಜೀವ ತುಂಬುತ್ತಿದ್ದರು. ಅದೆಷ್ಟೋ ಬಾರಿ ಈ ಖಳನಾಯಕರನ್ನು ಮುಖತಃ ಭೇಟಿಯಾದಾಗ, ಯಾವುದೋ ಚಿತ್ರದಲ್ಲಿ ಅವರ ದುಷ್ಟ ಪಾತ್ರವನ್ನು ಮನಸ್ಸಿನಲ್ಲಿ ನೆನೆಸಿಕೊಂಡು ಹಿಡಿ ಶಾಪ ಹಾಕಿರುವ ಉದಾಹರಣೆಗಳೆಷ್ಟೋ? ಇಂತಹ ದಿಗ್ಗಜರ ನಡುವೆ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳುವುದಕ್ಕೆ ಆರಂಭದಲ್ಲಿ ಹರಸಾಹ ಸಾಹಸ ನಡೆಸಿ, ತಮ್ಮ ಸಹಜ ಆಭಿನಯದಿಂದ ಕನ್ನಡ ಚಿತ್ರರಂಗದ ಶ್ರೇಷ್ಟ ಖಳನಾಯಕರಲ್ಲಿ ಒಬ್ಬರೆನಿಸಿದರು ಸುಧೀರ್.

ಶಂಕರ್ ನಾಗ್ ನಾಯಕತ್ವದ ನ್ಯಾಯಾ ಎಲ್ಲಿದೇ ಚಿತ್ರದಲ್ಲಿ ಖಳನಾಯಕರಾಗಿದ್ದ ಸುಧೀರ್ ಮಧ್ಯದ ಲೋಟಕ್ಕೆ ಸಿಗರೇಟ್ ಬೂದಿಯನ್ನು ಉದುರಿಸುತ್ತಾ ಅಟ್ಟಹಾಸದಿಂದ ಬೆರೆದದ್ದರು. ಅದೇ ರೀತಿ ಖಳನಾಯಕರುಗಳು ಎಂದರೆ, ಇಸ್ಪೀಟ್ ಆಟವಾಡುವವರು, ಜೂಜು ಕೋರರು, ಹೆಣ್ಣು ಬಾಕರು, ಅವರ ಕಣ್ಣುಗಳು ಸದಾ ನಿಗಿ ನಿಗಿ ಕೆಂಪಗಿರುವ ಕಾರಣ ಹುಟ್ಟಾ ಕುಡುಕರು, ಲಂಪಟರು, ಹೆಣ್ಣುಬಾಕರು ಎಂದೇ ಚಿತ್ರೀಕರಿಸಿರಿಸಿರುವ ಕಾರಣ, ಎಲ್ಲರೂ ಖಳನಾಯಕರು ನಿಜ ಜೀವನದಲ್ಲಿಯೂ ಹೀಗೇ ಇರುತ್ತಾರೆ ಎಂದೇ ಭಾವಿಸಿರುತ್ತಾರೆ. ಇದಕ್ಕೆ ಅಪವಾದ ಎಂಬಂತೇ, ಸುಧೀರ್ ಜೀವಮಾನವಿಡೀ ಒಂದೇ ಒಂದು ತೊಟ್ಟು ಮಧ್ಯ ಸೇವಿಸಿರಲಿಲ್ಲ. ಸಿನಿಮಾದಲ್ಲಿ ಪಾತ್ರ ಪೋಷಣೆಗಾಗಿ ಸಿಗರೇಟ್ ಸೇದಿದದ್ದನ್ನು ಬಿಟ್ಟರೇ, ಅವರಿಗೆಂದೂ ಸಿಗರೇಟ್, ಗುಟ್ಕಾ, ಜರ್ದಾ ದಾಸರಾಗಿರಲಿಲ್ಲ. ಇಸ್ಪೀಟ್ ಆಟವಾಗಲೀ, ಕುದುರೆ ರೇಸ್ ಆಟದ ಪರಿಚಯವೇ ಇರಲಿಲ್ಲ. ಪರಸ್ತ್ರೀಯರ ಮೇಲೆ ಎಂದೂ ಕಣ್ಣು ಹಾಕದೇ ಅವರೊಬ್ಬ ಸಕಲ ಸದ್ಗುಣಗಳಿರುವ ಕನ್ನಡದ ಸುಸಂಸ್ಕೃತ ಖಳನಾಯಕ ಎಂದರೂ ಅತಿಶಯೋಕ್ತಿಯೇನಲ್ಲ.

ಈಗಿನ ಕಾಲದಲ್ಲಿ ಬೇರೆಯವರಿಂದ ಸಹಾಯ ಪಡೆದದ್ದನ್ನು ಹೇಳಿಕೊಳ್ಳಲೂ ಮುಜುಗರ ಪಡುವಂತಹ ಜನರೇ ಹೆಚ್ಚಾಗಿರುವಗ, ತಾವು ಕಷ್ಟದಲ್ಲಿ ಇದ್ದಾಗ, ಸುಧೀರ್ ತಮಗೆ ಸಹಾಯ ಮಾಡಿದವರನ್ನು ಸದಾಕಾಲವೂ ನೆನೆಯುತ್ತಾ ಅವರಿಗೆ ಜೀವನಪೂರ್ತಿ ಚಿರ ಋಣಿಗಳಾಗಿದ್ದಂತಹ ಒಂದು ಪ್ರಸಂಗವನ್ನು ಹೇಳಿಕೊಳ್ಳಲೇ ಬೇಕು. ವಯ್ಯಾಳೀಕಾವಲ್ ಸಣ್ಣ ಬಾಡಿಗೆ ಮನೆಯಿಂದ ಬಸವೇಶ್ವರ ನಗರದ ಆವನೀ ಶಂಕರ ಮಠದ ಬಳಿ ತಮ್ಮ ಉಳಿತಾಯದಿಂದ ಒಂದು ನಿವೇಶನ ಖರೀದಿಸಿ ಅಲ್ಲೊಂದು ಮನೆಕಟ್ಟಲು ಪರದಾಡುತ್ತಿದ್ದದ್ದನ್ನು ಮೂರನೇ ವ್ಯಕ್ತಿಯ ಬಳಿ ಕೇಳಿ ತಿಳಿದ ಚಿತ್ರರಂಗದ ಕರ್ಣ ಎಂದೇ ಖ್ಯಾತರಾಗಿದ್ದ ಅಂಬರೀಷ್, ಸುಧೀರ್ ಅವರನ್ನು ಕರೆದು ನಾನಂತೂ ಇನ್ನೂ ಮದುವೆಯಾಗದೇ ಗುಂಡರಗೋವಿಯಾಗಿ ಅಲೆಯುತ್ತಿದ್ದೇನೆ. ನೀನಾದರೂ ನಿನ್ನ ಕುಟುಂಬಕ್ಕೆ ಒಂದು ನೆಮ್ಮದಿಯ ಸೂರನ್ನು ಕಟ್ಟಿಸಿಕೊಂಡು ಅವರ ಜೊತೆ ಆನಂದವಾಗಿರು ಎಂದು ಹಾರೈಸಿ ಉತ್ತಮ ಮೊತ್ತದ ಹಣವನ್ನು ಸಹಾಯ ಮಾಡಿದ್ದರು. ಅಂಬರೀಷ್ ಅವರ ಸಹಾಯದಿಂದ ತಮ್ಮ ಸ್ವಂತ ಮನೆಯನ್ನು ಕಟ್ಟಿಸಿದ ಸುಧೀರ್ ಆ ಮನೆಗೆ ಅಂಬರೀಷ್ ಅವರ ಹೆಸರನ್ನೇ ಇಡುವ ಮೂಲಕ ತಮಗೆ ಸಹಾಯ ಮಾಡಿದವರನ್ನು ನೆನೆಯುವಂತಹ ಸಹೃದಯಿಗಳಾಗಿದ್ದರು ಮತ್ತು ಜೀವಮಾನವಿಡೀ ಅವರ ಕುಟುಂಬ ಅದನ್ನು ನೆನೆಸಿಕೊಳ್ಳುತ್ತಲೇ ಇರುವುದು ಗಮನಾರ್ಹವಾದ ವಿಷಯ.

ಚಲನಚಿತ್ರರಂಗದಲ್ಲಿ ಎಷ್ಟೇ ಉತ್ತುಂಗದ ಸ್ಥಾನದಲ್ಲಿ ಇದ್ದರೂ, ಅವರೆಂದೂ ತಮಗೆ ಆರಂಭದಲ್ಲಿ ಅನ್ನವನ್ನು ನೀಡಿದ ರಂಗಭೂಮಿಯನ್ನು ಮರೆಯಲೇ ಇಲ್ಲ. ಇತರೇ ನಾಟಕ ಕಂಪನಿಗಳಲ್ಲಿ ನಟನೆ ಮಾಡುತ್ತಲೇ ತಮ್ಮದೇ ಸಮಾನ ಮನಸ್ಕ ಕಲಾವಿದರುಗಳ ತಂಡವನ್ನು ಕಟ್ಟಿಕೊಂಡು ಉತ್ತರ ಕರ್ನಾಟಕದಲ್ಲಿ ನಾಟಕಗಳನ್ನು ನಿರಂತರವಾಗಿ ಮಾಡುತ್ತಲೇ ತಮ್ಮ ಕಲಾ ಸೇವೆಯನ್ನು ಮಾಡುತ್ತಲೇ ಇದ್ದರು. ಕಂಠೀರವ ಸ್ಟುಡಿಯೋದಲ್ಲಿ ನಾಯಕನ ಜೊತೆ ಸಾಹಸಮಯ ಚಿತ್ರೀಕರಣದ ಸಂದರ್ಭದಲ್ಲಿ ಅಲ್ಲಿದ್ದ ವಿಪರೀತವಾದ ಧೂಳು ಸಹಜವಾಗಿ ಸುಧೀರ್ ಅವರಿಗೆ ಹೈರಾಣುಮಾಡಿದೆ. ಸುಧೀರ್ ಅವರಿಗೆ ಡಸ್ಟ್ ಅಲರ್ಜಿ ಇದ್ದ ಕಾರಣ, ಸಾಮಾನ್ಯ ರಸ್ತೆಯ ಧೂಳಿಗೆ ನೆಗಡಿಯಾಗಿ ವಾರಗಟ್ಟಲೇ ಹಾಸಿಗೆ ಹಿಡಿಯುತ್ತಿದ್ದ ಸುಧೀರ್ ಅವರಿಗೆ ಬೆಳಗಿನಿಂದ ಸಂಜೆಯವರೆಗೆ, ಬೆಳಗ್ಗಿನಿಂದ ಸಂಜೆಯ ವರೆಗೆ ಆ ಭಯಂಕರ ಧೂಳಿನಲ್ಲೇ ನಡೆದ ಎರಡು ದಿನಗಳ ಕಾಲದ ಚಿತ್ರೀಕರಣ ಅವರ ಆರೋಗ್ಯದ ಮೇಲೆ ಭಾರೀ ಪರಿಣಾಮ ಬೀರಿದ್ದಲ್ಲದೇ, ಶ್ವಾಸಕೋಶದ ತುಂಬಾ ಧೂಳು ತುಂಬಿ ಹೋಗಿ ಸೋಂಕು ತಗುಲಿ ಚಿಕಿತ್ಸೆಗೆಂದು ಆಸ್ಪತ್ರೆ ಹೋದ ಸುಧೀರ್ ಮತ್ತೆಂದೂ ಬಾರದ ಲೋಕಕ್ಕೆ ಸಾಯಬಾರದ ವಯಸ್ಸಿನಲ್ಲಿ ಚಿರಕಾಲ ಹೋಗಿ ಬಿಟ್ಟಿದ್ದು ಕನ್ನಡ ಚಿತ್ರರಂಗ ಮತ್ತು ಕಲಾ ಪ್ರಿಯರಾದ ಕನ್ನಡಿಗರು ಸಜ್ಜನ ನಟನನ್ನು ಕಳೆದುಕೊಂಡು ಖಂಡಿತವಾಗಿಯೂ ದುಃಖ ಪಟ್ಟಿದ್ದಂತೂ ಸುಳ್ಳಲ್ಲ.


ಒಂದು ಕಡೆ ಮಕ್ಕಳಿಬ್ಬರೂ ಹೈಸ್ಕೂಲ್ ಓದುತ್ತಿರುವಾಗ ಅಕಾಲಿಕವಾಗಿ ಮನೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದ ಯಜಮಾನರನ್ನು ಕಳೆದುಕೊಂಡು ದಿಗ್ಭ್ರಾಂತರಾದ ಮಾಲತಿ ಸುಧೀರ್ ಕೆಲಕಾಲ ಅಧೀರರಾದರೂ ನಂತರ ಧೃತಿಗೆಡದೇ ಯಜಮಾನರು ಆರಂಭಿಸಿದ್ದ ನಾಟಕದ ಕಂಪನಿಯನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ನಾಟಕಗಳನ್ನು ಮಾಡುತ್ತಾ ಸ್ವಾಭಿಮಾನಿಯಾಗಿ ತಮ್ಮ ಯಜಮಾನರಂತೆಯೇ ಮಕ್ಕಳನ್ನು ಬೆಳೆಸಿದ ಕಾರಣ, ಮಕ್ಕಳಿಬ್ಬರೂ ಇಂದು ಕನ್ನಡ ಚಿತ್ರರಂಗದ ಹೆಸರಾಂತ ಚಿತ್ರ ನಿರ್ದೇಶಕರಾಗಿ ತಮ್ಮ ಪೋಷಕರಿಗೆ ಹೆಮ್ಮೆಯನ್ನು ತಂದಿದ್ದಾರೆ. ತಮ್ಮ ಮಕ್ಕಳು ಈಗ ಖ್ಯಾತ ನಿರ್ದೇಶಕರಾಗಿದ್ದರೂ, ಶ್ರೀಮತಿ ಸುಧೀರ್ ತಮ್ಮ ಕಷ್ಟಕಾಲದಲ್ಲಿ ಕೈಹಿಡಿದ ವೃತ್ತಿ ರಂಗಭೂಮಿಯನ್ನು ಬಿಡದೇ, ಇಂದಿಗೂ ಸಹಾ ಶೇಷಾದ್ರೀಪುರದ ನಟರಾಜ ಸಿನಿಮಾ ಮಂದಿರದ ಹಿಂದಿರುವ ವರದಾಚಾರ್ ರಂಗಮಂಟಪದಲ್ಲಿ ತಮ್ಮ ನಾಟಕ ಕಂಪನಿಯನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿರುವುದು ನಿಜಕ್ಕೂ ಶ್ಲಾಘನೀಯವಾದ ಕಾರ್ಯವೇ ಸರಿ.

ಖಳನಾಯಕನಾಗಿದ್ದೂ, ಯಾವುದೇ ದುಶ್ವಟಗಳಿಲ್ಲದೇ, ಸದ್ಗುಣ ಸಂಪನ್ನರಾಗಿ, ಸದಭಿರುಚಿಯ ವೃತ್ತಿ ರಂಗಭೂಮಿ ಮತ್ತು ಚಲಚಿತ್ರರಂಗದಲ್ಲಿ ತನ್ನ ವಿಶಿಷ್ಟವಾದ ನಟನೆ ಮತ್ತು ಸಂಭಾಷಣೆಯಿಂದ ಖ್ಯಾತರಾಗಿ ಅಕಾಲಿಕವಾಗಿ ಮರೆಯಾಗಿದ್ದರೂ ಇಂದಿಗೂ ಯಾವುದೇ ಮಿಮಿಕ್ರಿ ಕಲಾವಿದರುಗಳು ಸುಧೀರ್ ಅವರ ಧ್ವನಿಯನ್ನು ಅನುಕರಿಸಿದೇ ಹೋದಲ್ಲಿ ಅವರ ಕಾರ್ಯಕ್ರಮಕ್ಕೆ ಮೆರುಗೇ ಇಲ್ಲವೇನೋ ಎನ್ನುವಂತೆ ಕನ್ನಡಿಗರ ಹೃನ್ಮನಗಳಲ್ಲಿ ಶಾಶ್ವತವಾಗಿ ಮನಮಾಡಿರುವ ಸುಧೀರ್ ಸಾಗರ್ ಅವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಲೇ ಸರಿ.

ಏನಂತೀರೀ?

3 thoughts on “ಸುಧೀರ್

  1. ಕನ್ನಡ ಚಿತ್ರರಂಗ ಕಂಡ ಅಪ್ರತಿಮ ನಟ ಮತ್ತು ಭಾವುಕ ಜೀವಿಯ ಅವಲೋಕನ ಬಾಳ ಸೊಗಸಾಗಿ ವರ್ಣನೆ ಮಾಡಿದ್ದೀರಿ.. ನಮಸ್ಕಾರ.

    Like

  2. ಕನ್ನಡ ಚಿತ್ರರಂಗ ಕಂಡ ಅಪ್ರತಿಮ ನಟ ಮತ್ತು ಭಾವುಕ ಜೀವಿಯ ಅವಲೋಕನ ಬಾಳ ಸೊಗಸಾಗಿ ವರ್ಣನೆ ಮಾಡಿದ್ದೀರಿ.. ನಮಸ್ಕಾರ.

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s