ರಂಗನಾಥ ಮೇಷ್ಟ್ರು

WhatsApp Image 2021-07-23 at 7.54.47 AM

ಸಾಧಾರಣವಾಗಿ ಹಿಂದಿನ ಕಾಲದಲ್ಲಿ ಆಷಾಢ ಮಾಸದಲ್ಲಿ ಯಾವುದೇ ಶುಭಕಾರ್ಯಗಳನ್ನೂ ಅಚರಿಸುತ್ತಿರಲಿಲ್ಲ. ಆದರೆ ಆಷಾಢ ಮಾಸದ ಹುಣ್ಣಿಮೆಯ ದಿನಕ್ಕಾಗಿ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದದ್ದಂತೂ ಸುಳ್ಳಲ್ಲ. ಆಷಾಢ ಮಾಸದಲ್ಲಿ ನಾವೆಲ್ಲರೂ ಆಚರಿಸಬಹುದಾದಂತಹ ಅತ್ಯಂತ ಶ್ರೇಷ್ಠವಾದ ಹಬ್ಬವೆಂದರೆ ಗುರು ಪೂರ್ಣಿಮೆ. ಈ ಗುರು ಪುರ್ಣಿಮೆಯಂದು, ನಮ್ಮನ್ನು ತಿದ್ದಿ ತೀಡಿ ನಮ್ಮಲ್ಲಿ ಜ್ಞಾನ ದೀವಿಗೆಯನ್ನು ಹಚ್ಚಿ ಅದನ್ನು ಬೆಳಗಿ, ನಮಗೆ ವಿದ್ಯಾ ಬುದ್ಧಿಗಳನ್ನು ಕಲಿಸಿ ಕೊಟ್ಟ ಗುರುಗಳಿಗೆ ವಂದನೆ ಸಲ್ಲಿಸುವ ದಿನವಿದು. ಗುರುವಿನ ಮಹತ್ವವನ್ನು ಅರಿಯುವ ದಿನವಿದು. ಜನ್ಮ ಕೊಟ್ಟ ತಂದೆ ತಾಯಿಯರ ಹೊರತಾಗಿ ನಮ್ಮನ್ನು ಕೈ ಹಿಡಿದು ನಮ್ಮ ನಮ್ಮ ಸ್ವಭಾವ ಮತ್ತು ಶಕ್ತಿಗನುಗುಣವಾಗಿ ನಮ್ಮ ಜೀವನಕ್ಕೆ ಒಂದು ಸರಿಯಾದ ದಿಕ್ಕನ್ನು ತೋರಿಸಿಕೊಟ್ಟವರಿಗೆ ಥನ್ಯತಾಪೂರ್ವಕವಾಗಿ ಕೃತಜ್ಞತೆಗಳನ್ನು ಅರ್ಪಿಸುವ ದಿನವಿದು. ಇಂತಹ ಪವಿತ್ರ ದಿನದಂದು ನನ್ನ ಜೀವನದಲ್ಲಿ ಅತ್ಯಂತ ಪ್ರಭಾವ ಬೀರಿದ ನನಗೆ ಗಣಿತದ ಗುರುಗಳಾಗಿದ್ದ ಪ್ರಾಥಸ್ಮರಣೀಯರಾದ ದಿ. ಶ್ರೀ ರಂಗನಾಥ ಮೇಷ್ಟ್ರನ್ನು ನಿಮ್ಮಲ್ಲರಿಗೂ ಪರಿಚಯಿಸುವ ಸಣ್ಣ ಪ್ರಯತ್ನ.

ಶಾಲೆಯಲ್ಲಿ ಕಲಿತದ್ದು ಎಲ್ಲವೂ ಜೀವನದಲ್ಲಿ ಅಳವಡಿಸಿಕೊಳ್ಳಲಾಗದಿದ್ದರೂ ಚಿಕ್ಕವಯಸ್ಸಿನಲ್ಲಿ ಕಲಿತ ಕೂಡುವುದು ಕಳೆಯುವುದು, ಗುಣಾಕಾರ ಮತ್ತು ಭಾಗಾಕಾರಗಳು ನಮ್ಮ ಜೀವ ಇರುವರೆಗೂ ನಮ್ಮೊಂದಿಗೆ ಇದ್ದೇ ಇರುತ್ತದೆ. ಅದೇಕೋ ಏನೋ ಅಂದಿಗೂ ಇಂದಿಗೂ ಎಲ್ಲಾ ಮಕ್ಕಳಿಗೂ ಗಣಿತ ಎಂದರೆ ಕಬ್ಬಿಣದ ಕಡಲೆ ಎಂದೇ ಭಾವಿಸುತ್ತಾರೆ. ನಿಜ ಹೇಳಬೇಕೆಂದರೆ, ಒಮ್ಮೆ ಗಣಿತದ ಸೂತ್ರಗಳನ್ನು ಸರಿಯಾಗಿ ಅರ್ಥಮಾಡಿಕೊಂಡರೆ, ಅದು ನಿಜವಾಗಿಯೂ ಸುಲಿದ ಬಾಳೇಹಣ್ಣಿನಂತೆ ಬಲು ಸೊಗಸಾಗಿರುತ್ತದೆ ಎನ್ನುವುದನ್ನು ತೋರಿಸಿಕೊಟ್ಟವರೇ ನಮ್ಮ ರಂಗನಾಥ ಮೇಷ್ಟ್ರು. ಈಗಲೂ ಸಹಾ ಯಾರಾದರೂ, ನಾನು ಹಾಕಿದ ಲೆಖ್ಖಾಚಾರವನ್ನು ತಪ್ಪೆಂದು ಹೇಳಿದರೆ, ಕೂಡಲೇ ನಾನು ತಪ್ಪು ಮಾಡಿದ್ದೇನೆ ಎಂದರೆ ಅದು ನಮ್ಮ ಗಣಿತದ ಮೇಷ್ಟ್ರು ರಂಗನಾಥರಿಗೆ ಮಾಡಿದ ಅವಮಾನ ಮತ್ತೊಮ್ಮೆ ಸರಿಯಾಗಿ ಲೆಖ್ಧ ಹಾಕಿ ನೋಡಿ ಎಂದು ಹೇಳುತ್ತೇನೆ. ನನಗೆ ನನ್ನ ಲೆಖ್ಖಾಚಾರಕ್ಕಿಂತಲೂ ನಮ್ಮ ರಂಗನಾಥ ಮೇಷ್ಟ್ರು ಹೇಳಿಕೊಟ್ಟ ಗಣಿತ ಮೇಲೆ ಭರವಸೆಯೇ ಹೆಚ್ಚು. ಅದಕ್ಕೇ ಅಲ್ವೇ ನಮ್ಮ ಹಿರಿಯರು ಹೇಳಿರುವುದು ಮುಂದೇ ಗುರಿ ಇರಬೇಕು. ಹಿಂದೆ ಗುರು ಇರಬೇಕು ಎಂದು.

ಅದು ಎಂಭತ್ತರ ದಶಕ. ನಾನು ಬಿಇಎಲ್ ಪ್ರೈಮರಿ ಶಾಲೆಯಲ್ಲಿ ಓದುತ್ತಿದ್ದ ಕಾಲ. ಅದೇ ಸಮಯದಲ್ಲಿ ಬಹಳಷ್ಟು ಹಿರಿಯ ಗುರುಗಳು ವಯೋಸಹಜ ನಿವೃತ್ತಿ ಹೊಂದಿದ ಪರಿಣಾಮವಾಗಿ ಅನೇಕ ಹೊಸಾ ಶಿಕ್ಷಕ/ಶಿಕ್ಷಕಿಯರನ್ನು ಶಾಲೆಗೆ ಸೇರಿಸಿಕೊಂಡ ಸಂಧರ್ಭದಲ್ಲಿಯೇ ನಮ್ಮ ಶಾಲೆಗೆ ಸೇರಿಕೊಂಡವರೇ ಆಗ ತಾನೇ ತಮ್ಮ ಪದವಿಯ ನಂತರ ಟಿಸಿಹೆಚ್ ಮುಗಿಸಿದ್ದ ಬಿಸಿ ರಕ್ತದ ತರುಣರೇ ನಮ್ಮ ರಂಗನಾಥ ಮೇಷ್ಟ್ರು. ಅಗೆಲ್ಲಾ ನಮ್ಮ ಶಾಲೆಯಲ್ಲಿ ಪೀಟೀ ಮೇಷ್ಟ್ರು ನಾರಾಯಣಪ್ಪ ಅವರ ಹೊರತಾಗಿ ಉಳಿದವರೆಲ್ಲರೂ ಶಿಕ್ಷಕಿಯರೇ ಇದ್ದು ಒಂದು ರೀತಿಯಲ್ಲಿ ಪ್ರಮೀಳಾ ಸಾಮ್ರಾಜ್ಯಕ್ಕೆ ಶಿಕ್ಷಕರಾಗಿ ಸೇರ್ಪಡೆಗೊಂಡವರು.

ಸುಮಾರು 5,5″ ಇಲ್ಲವೇ 5.6″ ಎತ್ತರದ, ಕೋಲು ಮುಖದ, ಸಪೂರದ ದೇಹದ ವಯಸ್ಸು ಇನ್ನೂ 23-24 ಇದ್ದರೂ ಬಾಲನೆರೆಯಿಂದ ಕೂಡಿದ ಮಧ್ಯಮವರ್ಗದ ರಂಗನಾಥ ಮೇಷ್ಟ್ರು ಮೊದಲ ಬಾರಿಗೆ ನಮ್ಮ ತರಗತಿಯ ಶಿಕ್ಷಕಿಯೊಂದಿಗೆ ಬಂದಾಗ ಎಂದಿನಂತೆಯೇ ಎಲ್ಲರೂ ಎದ್ದು ನಿಂತು ಒಕ್ಕೊರಲಿನಿಂದ ನಮಸ್ಕಾರ ಟೀಚರ್, ನಮಸ್ಕಾರ ಸಾರ್.. ಎಂದು ರಾಗಾವಾಗಿ ಹೇಳುತ್ತಾ ಅವರನ್ನು ತರಗತಿಗೆ ಸ್ವಾಗತಿಸಿದ್ದು ಇನ್ನೂ ಹಚ್ಚ ಹಸಿರಾಗಿಯೇ ಇದೆ. ಸಾಧಾರಣವಾಗಿ ಬಹುತೇಕ ಶಿಕ್ಷಕ/ಶಿಕ್ಷಕಿಯರು ತಮಗೆ ವಹಿಸಿಕೊಟ್ಟ ಪಾಠ ಪ್ರವಚನಗಳ ತಯಾರಿ ಮತ್ತು ಬೋಧನೆಯಲ್ಲಿ ಮಾತ್ರವೇ ನಿರತರಾಗಿ ತಮ್ಮ ಕೊಟ್ಟ ಕೆಲವನ್ನು ನಿಷ್ಥೆಯಿಂದ ಮಾಡಿ ಮುಗಿಸಿ ದೂರ ದೂರದ ಮನೆಗಳಿಗೆ ಹೋಗಿ ನೆಮ್ಮದಿಯಿಂದ ಇದ್ರೇ ಸಾಕಪ್ಪಾ ಎನ್ನುವವರೇ ಹೆಚ್ಚಾಗಿದ್ದಾಗ, ಅದಕ್ಕೆ ತದ್ವಿರುದ್ಧವಾಗಿದ್ದವರೇ ಆಗಿನ್ನೂ ಯುವಕರಾಗಿದ್ದ ಮೇಲಾಗಿ ಬ್ರಹ್ಮಚಾರಿಗಳೂ ಆಗಿದ್ದ ನಮ್ಮ ರಂಗನಾಥ ಮೇಷ್ಟ್ರು. ಅನೇಕ ಬಡ ಮಕ್ಕಳಿಗೆ ತಮ್ಮ ಕೈಯಿಂದಲೇ ಫೀ‌ ಮತ್ತು ಸಮವಸ್ತ್ರ ಕೊಡಿಸಿದ್ದೂ ಉಂಟು.

ಗಣಿತದ ತರಗತಿಗಳು ಆರಂಭವಾಗುವುದಕ್ಕೆ ಮುಂಚೆ ಎಲ್ಲರೂ ಒಕ್ಕೊರಿನಿಂದ ಖಡ್ಡಾಯವಾಗಿ ಎರಡೊಂದ್ ಎರಡು, ಎರೆಡೆರೆಡ್ಲಾ ನಾಲ್ಕು ರಿಂದ ಆರಂಭಿಸಿ, ಇಪ್ಪತ್ತೊಂಬೋತ್ಲಾ ನೂರಾ ಎಂಭತ್ತ್, ಇಪ್ಪತ್ತು ಹತ್ಲಾ ಇನ್ನೂರೂ.. ಎಂದು ರಾಗವಾಗಿ ಮುಗಿಸಲೇ ಬೇಕಾಗಿತ್ತು. ಹೀಗೆ ನಿತ್ಯವೂ ಎಲ್ಲರಿಗೂ ಒಟ್ಟಿಗೆ ಮಗ್ಗಿಯನ್ನು ಹೇಳುವ ಮುಖಾಂತರ ಇಡೀ ತರಗತಿಯ ವಿದ್ಯಾರ್ಥಿಗಳಿಗೆ ಅರಿವಿಲ್ಲದಂತೆಯೇ 2-20ರ ವರಗಿನ ಮಗ್ಗಿ ಕಂಠ ಪಾಠ ಅಗಿಬಿಡುತ್ತಿದ್ದಂತಹ ಕಾಲವಾಗಿತ್ತು, ಇಂದಿನ ಮಕ್ಕಳು ಪ್ರತಿಯೊಂದಕ್ಕೂ ಕ್ಯಾಲುಕ್ಲೇಟರ್ ಬಳಸುವುದನ್ನು ರೂಢಿ ಮಾಡಿಕೊಂಡಿರುವುದು ನಿಜಕ್ಕೂ ವಿಪರ್ಯಾಸ. ಹೀಗೆ ಮಗ್ಗಿ ಹೇಳುತ್ತಿದ್ದರೆ, ನಮ್ಮ ರಂಗನಾಥ ಮೇಷ್ಟ್ರು ತರಗತಿಗೆ ನೇರವಾಗಿ ಬರದೇ ನಮಗಾರಿಗೂ ತಿಳಿಯದಂತೆ ಮರೆಯಾಗಿ ಅಲ್ಲೇ ಕಿಟಕಿಯ ಪಕ್ಕದಲ್ಲೋ ಇಲ್ಲವೇ ಬಾಗಿಲ ಪಕ್ಕದಲ್ಲಿಯೋ ನಿಂತು ಯಾರೆಲ್ಲಾ ಹೇಳುತ್ತಿದ್ದಾರೆ, ಹೇಳುತ್ತಿಲ್ಲ, ಅಥವಾ ಹೇಳುವಾಗ ಯಾರೆಲ್ಲಾ ತಪ್ಪು ಮಾಡುತ್ತಿದ್ದಾರೆ ಎಂಬುದನ್ನು ಗಮನಿಸಿ ನಾವೆಲ್ಲಾ ಮಗ್ಗಿ ಮುಗಿಸಿದ ತರಗತಿ ಒಳಗೆ ಪ್ರವೇಶಿಸಿ ನಮ್ಮ ತಪ್ಪುಗಳನ್ನು ತಿದ್ದುತ್ತಿದ್ದರು.

ನನಗೇನೋ ನಮ್ಮ ತಂದೆ ತಾಯಿಯರು ಬಾಲ್ಯದಿಂದಲೇ ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆಯ ಹೊರತಾಗಿ ರಾಷ್ಟ್ರೋತ್ಥಾನದ ಬಾಲಭಾರತಿ ಪುಸ್ತಕಗಳಲ್ಲದೇ ವೀರ ದೇಶಭಕ್ತರು ಮತ್ತು ಅನೇಕ ಧಾರ್ಮಿಕ ಪುಸ್ತಕಗಳನ್ನು ಓದಲು ಕಲಿಸಿಕೊಟ್ಟಿದ್ದರು. ನಾನು ಅದನ್ನು ಕೇವಲ ಕಾಲ ಹರಣಕ್ಕಾಗಿ ಓದುತ್ತಿದ್ದೆನೇ ಹೊರತು ಅದರಿಂದಾಗುವ ಪ್ರಯೋಜನಗಳ ಅರಿವಿರಲಿಲ್ಲ. ಪಠ್ಯಪುಸ್ತಕಗಳ ಹೊರತಾಗಿಯೂ ಈ ರೀತಿಯ ಅನೇಕ ಪುಸ್ತಕಗಳನ್ನು ಮಕ್ಕಳು ಓದಿ ಜ್ಞಾನಾರ್ಜನೆ ಮಾಡುವುದು ಬಹಳ ಮುಖ್ಯ ಎಂದು ನಮ್ಮೆಲ್ಲರಿಗೂ ತೋರಿಸಿಕೊಟ್ಟವರೇ ನಮ್ಮ ರಂಗನಾಥ ಸರ್. ಶಾಲೆ ಮುಗಿಸಿ ಅವರ ಮನೆಗೆ ಹೋದರೆಂದರೆ ಊಟ, ತಿಂಡಿ, ನಿದ್ದೆ ಇದಾವುದರ ಪರಿವೆಯೇ ಇಲ್ಲದೇ ಎಲ್ಲಾ ರೀತಿಯ ವಾರಪತ್ರಿಕೆಗಳು ಮತ್ತು ಪುಸ್ತಕಗಳನ್ನು ಓದುವುದು ಅವರ ಮೆಚ್ಚಿನ ಹವ್ಯಾಸ. ಹಾಗಾಗಿ ಅವರ ಮನೆಗೆ ಬಹುತೇಕ ಎಲ್ಲಾ ರೀತಿಯ ವಾರಪತ್ರಿಕೆಗಳು ಮತ್ತು ಮಾಸಪತ್ರಿಕೆಗಳನ್ನು ತರಿಸುತ್ತಿದ್ದರಲ್ಲದೇ ಅವರ ಮನೆಯಲ್ಲಿಯೇ ಒಂದು ಸಣ್ಣ ಗ್ರಂಥಾಲಯದಷ್ಟು ಪುಸ್ತಗಳ ಸಂಗ್ರಹವನ್ನು ಇಟ್ಟುಕೊಂಡಿದ್ದರು.

ನಾವುಗಳು ಅವರ ಮನೆಗೆ ಹೋದರೆ ಸಾಕು. ಬಾರಯ್ಯಾ ಮಿತ್ರಾ… ಎಂದು ಬಾಯಿ ತುಂಬಾ ಕರೆದು ತಮ್ಮ ಪಕ್ಕದಲ್ಲಿ ಕೂರಿಸಿಕೊಂಡು ಮನೆಯವರ ಕ್ಷೇಮ ಸಮಾಚಾರಗಳನ್ನು ವಿಚಾರಿಸಿ ಬಂದ ಕೆಲಸವನ್ನು ಕೇಳಿದ ನಂತರ ಮನೆಗೆ ಹೋಗುವಾಗ ಅವರ ಜೋಬಿನಲ್ಲಿ ಇರುತ್ತಿದ್ದ ಮಿಂಠಿ ಇಲ್ಲವೇ ಯಾವುದಾದರು ಚಾಕ್ಲೆಟ್ ಕೊಡುವುದರ ಜೊತೆಗೆ, ನಮ್ಮ ನಮ್ಮ ಅಭಿರುಚಿಗೆ ತಕ್ಕಂತೆ ಪುಸ್ತಕಗಳನ್ನು ಅವರು ನಮಗೆ ಓದಲು ಕೊಡುತ್ತಿದ್ದರಲ್ಲದೇ, ಆ ಪುಸ್ತಕವನ್ನು ಓದಿ ಮುಗಿಸಿದ ನಂತರ ಅದರ ಬಗ್ಗೆ ಅನೌಪಚಾರಿಕವಾಗಿ ಒಂದು ರೀತಿಯ ಆರೋಗ್ಯಕರವಾದ ಚರ್ಚೆಯನ್ನು ನಡೆಸಿ ನಾವು ಆ ಪುಸ್ತಕವನ್ನು ಹೇಗೆ ಅರ್ಥಮಾಡಿಕೊಂಡಿದ್ದೇವೆ ಅದರಿಂದ ಏನನ್ನು ಕಲಿತಿದ್ದೇವೆ ಎಂಬುದರ ಮನನವನ್ನು ಮಾಡಿಸುತ್ತಿದ್ದಂತಹ ವ್ಯಕ್ತಿ ಅವರು. ಇದರ ಜೊತೆ ಆ ಪುಸ್ತಕದ ಬಗ್ಗೆ ಅವರ ಅಭಿಪ್ರಾಯವನ್ನು ಮಂಡಿಸುತ್ತಿದ್ದದ್ದಲ್ಲದೇ, ಅದನ್ನು ಬರೆದ ಲೇಖಕರ ದೃಷ್ಟಿಕೋನ ಹೀಗೂ ಇತ್ತೇನೂ ಎಂಬುದನ್ನು ಎತ್ತಿ ತೋರಿಸುತ್ತಿದ್ದಂತಹ ವ್ಯಕ್ತಿಯವರು.

ಹೀಗೆ ಶಾಲೆಯಲ್ಲಿ ಇರುವಷ್ಟು ಸಮಯ ಅವರು ನಮಗೆ ಶಿಕ್ಷಕರಾದರೇ, ಶಾಲೆ ಮುಗಿದ ಕೂಡಲೇ ಅವರು ನಮಗೊಬ್ಬ ಹಿತೈಷಿ ಅಥವಾ ನಮ್ಮ ಶ್ರೇಯೋಭಿಲಾಶಿಗಳಾಗಿದ್ದರು. ಎಲ್ಲದ್ದಕ್ಕೂ ಹೆಚ್ಚಾಗಿ ಒಬ್ಬ ಸೋದರ ಮಾವನೋ ಇಲ್ಲವೇ ಚಿಕ್ಕಪ್ಪನಂತೆ ಇದ್ದರು ಎಂದರೂ ತಪ್ಪಾಗಲಾರದು.

ಅವರು ಬೋರ್ಡಿನ ಕಡೆಗೆ ತಿರುಗಿ ಲೆಖ್ಖಗಳನ್ನು ಬಿಡಿಸುತ್ತಿದ್ದ ಸಂದರ್ಭದಲ್ಲಿ ಯಾದಾದ್ರು ಅನಾವಶ್ಯಕವಾಗಿ ಗಲಾಟೆ ಮಾಡಿದ್ರಂರೂ ಶಾಂತಮೂರ್ತಿ ರಂಗನಾಥರು, ಉಗ್ರ ನರಸಿಂಹ ರೂಪ ತಾಳುತ್ತಿದ್ದದ್ದೂ ಉಂಟು. ಸಹಿಸಲಾರದ ಮಟ್ಟದ್ದಷ್ಟು ಗಲಾಟೆ ಮಾಡುತ್ತಿದ್ದಾಗ ವಿದ್ಯಾರ್ಥಿಗಳ ಕಡೆಗೆ ತಿರುಗಿ ಚಾಕ್ ಪೀಸ್ ಬೀಸುತ್ತಿದ್ದದ್ದು ಇನ್ನೂ ಕಣ್ಣಿಗೆ ಕಟ್ಟಿದ ಹಾಗಿದೆ. ಅದೇ ರೀತಿ ಅವರು ಒಂಟಿ ಕಾಲಿನ ಮೇಲೆ ಸೊಟ್ತಗೆ ನಿಂತು ಒಂದು ಕಣ್ಣನ್ನು ಮುಚ್ಚಿಕೊಂಡು ಒಕ್ಕಣ್ಣಿನಲ್ಲಿ ನಮ್ಮನ್ನು ಒಂದು ರೀತಿ ದುರುಗುಟ್ಟಿಕೊಂಡು ನೋಡುತ್ತಿದ್ದ ರೀತಿಯೇ ನಮ್ಮೆಲ್ಲರ ಸದ್ದನ್ನು ಅಡಗಿಸಿಬಿಡುತ್ತಿತ್ತು.

ಏಳನೇ ಕ್ಲಾಸ್ ಪರೀಕ್ಷೆ ಬರೆದು ಫಲಿತಾಂಶದ ದಿನ ಗಣಿತದಲ್ಲಿ 92 ಅಂಕಗಳನ್ನು ಗಳಿಸಿದ್ದದ್ದಕ್ಕೆ ಕರೆದು ನಿಧಾನವಾಗಿ ನೋಡಿಕೊಂಡು ಬರೆದಿದ್ದರೆ 100ಕ್ಕೆ 100 ಗಳಿಸಬಹುದಾಗಿತ್ತು ಎಂದಿದ್ದಲ್ಲದೇ, ಹೈಸ್ಕೂಲಿನಲ್ಲಿ ಈ ರೀತಿಯಾಗಿ ಆತುರ ಪಡಬೇಡ ಎಂದು ಬುದ್ದಿವಾದ ಹೇಳಿದ್ದರು. ನಿಜಕ್ಕೂ ಹೇಳ್ಬೇಕೂ ಅಂದ್ರೇ ಪ್ರೈಮರಿ ಶಾಲೆ ಮುಗಿಸಿದ ನಂತರವೇ ಅವರೊಂದಿಗಿನ ಒಡನಾಟ ನನಗೆ ಹೆಚ್ಚಾಗಿದ್ದು. ಆ ಸಮಯದಲ್ಲೇ ಮಾತು ಚೆನ್ನಾಗಿ ಆಡ್ತೀನಿ ಅಂತಾ ಚುನಾವಣಾ ಪ್ರಚಾರಕ್ಕೆ ಕರೆದುಕೊಂಡು ಹೋಗಿದ್ದನ್ನು ಗಮನಿಸಿದ ನಮ್ಮ ಮೇಷ್ಟ್ರು ತಾವೂ ಸಹಾ ಯಲಹಂಕದ ಅಂದಿನ ದಲಿತ ಶಾಸಕರಾಗಿದ್ದ ಬಸವಲಿಂಗಪ್ಪನವರ ಪರ ಚುನಾವಣ ಪ್ರಚಾರ ಮಾಡಿದ್ದನ್ನು ತಿಳಿಸಿದ್ದಲ್ಲದೇ ಚಿಕ್ಕ ವಯಸ್ಸು ರಾಜಕೀಯ ಎಲ್ಲಾ ಬೇಡ. ಸುಮ್ಮನೆ ನಮ್ಮನ್ನು ಉಪಯೋಗಿಸಿಕೊಂಡು ಕಾಸಿಗೂ ಕಿಮ್ಮತ್ತಿಲ್ಲದೇ ಬಿಸಾಡುತ್ತಾರೆ ಎಂದು ಎಚ್ಚರಿಕೆಯ ಮಾತುಗಳನ್ನು ಹೇಳಿ ಕಳುಹಿಸಿದ್ದರು. ಇಷ್ಟರ ಮಧ್ಯೆ ಅವರಿಗೂ ಸಹಾ ಮದುವೆಯಾಗಿ ಮುದ್ದಾದ ಎರಡು ಗಂಡು ಮಕ್ಕಳಾಗಿದ್ದರು.

ಹೈಸ್ಕೂಲ್ ಮುಗಿಸಿ ಕಾಲೇಜಿಗೆ ಸೇರಿಕೊಂಡಾಗಲೂ ಅಗ್ಗಾಗ್ಗೆ ಮೇಷ್ಟ್ರನ್ನು ಮಾತನಾಡಿಸಿಕೊಂಡು ಬರ್ತಿದ್ದ ನನಗೆ, ಡಿಪ್ಲಮೋ ಕಡೆ ವರ್ಷದಲ್ಲಿ ಇದ್ದಾಗ ಸ್ವಲ್ಪ ಹುಷಾರು ತಪ್ಪಿ ಒಂದು ವಾರಗಳ ಮಟ್ಟಿಗೆ ಆಸ್ಪತ್ರೆಗೆ ಸೇರುವಂತಾಯಿತು. ಎಂದಿನಂತೆ ನನ್ನ ಆರೋಗ್ಯ ವಿಚಾರಿಸಲು ನನ್ನ ಆಪ್ತಮಿತ್ರ ಹಾಗೂ ರಂಗನಾಠ ಮೇಷ್ಟ್ರ ಬಲಗೈ ಬಂಟ ಹರಿ (ನರಹರಿ) ಆಸ್ಪತ್ರೆಗ ಬಂದಿದ್ದಾಗ ಬಹಳ ಬೇಜಾರಾಗುತ್ತಿದೆ ಎಂದಿದ್ದೆ. ಈ ವಿಷಯವನ್ನು ಯಥಾವತ್ತಾಗಿ ರಂಗನಾಥ ಮೇಷ್ಟ್ರ ಬಳಿ ಹೇಳಿದಾಗ ಮಾರನೇ ದಿನವೇ ಚಂದ್ರಶೇಖರ್ ಆಜಾದ್ ಅವರ ಅಜೇಯ ಪುಸ್ತಕವನ್ನು ಓದಲು ಕಳುಹಿಸಿಕೊಟ್ಟಿದ್ದರು. ಅಪರೂಪಕ್ಕೆ ಇಂದು ಚಂದ್ರಶೇಖರ್ ಆಜಾದ್ ಅವರ ಜಯಂತಿ, ಗುರುಪೂರ್ಣಿಮೆ ಒಟ್ಟೊಟ್ಟಿಗೆ ಬಂದಿದೆ. ಇವೆಲ್ಲದರ ಸವಿನೆನಪಿನಲ್ಲಿ ನಾನೀ ಲೇಖನ ಬರೆಯುತ್ತಿರುವುದು ಕಾಕತಾಳೀಯ ಎನ್ನುವುದಕ್ಕಿಂತಲೂ ಪೂರ್ವಜನ್ಮದ ಸುಕೃತವೇ ಎಂದು ನಾನು ಭಾವಿಸುತ್ತೇನೆ.

ಅಂತಹ ಅನಾರೋಗ್ಯದ ಸಮಯದಲ್ಲೂ ಬಾಬು ಕೃಷ್ಣಮೂರ್ತಿಗಳ ವಿರಚಿತ 582 ಪುಟಗಳ ಚಂದ್ರಶೇಖರ ಆಝಾದ್ ಅವರ ಪುಸ್ತವನ್ನು ಒಂದೇ ಗುಕ್ಕಿನಲ್ಲಿ ಊಟ ತಿಂಡಿ ನಿದ್ರೆಗಳ ಪರಿವೇ ಇಲ್ಲದೇ, ಕೇವಲ 24 ಗಂಟೆಗಳಲ್ಲಿ ಓದಿ ಮುಗಿಸಿದ್ದೆ. ಓದಿ ಮುಗಿಸಿದ್ದೇ ಎನ್ನುವುದಕ್ಕಿಂತಲು ನನ್ನ ಮೇಲಿನ ರಂಗನಾಥ ಮೇಷ್ಟ್ರು ಮತ್ತು ಗೆಳೆಯ ಹರಿಯ ಪ್ರೀತಿ ಮತ್ತು ಆಝಾದ್ ಅವರ ಸಾಧನೆ ಮತ್ತು ವ್ಯಕ್ತಿತ್ವ ನನ್ನನ್ನು ಓದಿಸಿಕೊಂಡು ಹೋಗಿತ್ತು ಎಂದರೂ ತಪ್ಪಾಗಲಾರದು. ಬಹುಶಃ ಅಂತಹ ವೀರಪುರುಷರ ಕಥೆಯನ್ನು ಓದಿದ್ದ ಪರಿಣಾಮವೋ ಏನೋ? ಕೆಲವೇ ಕೆಲವು ದಿನಗಳಲ್ಲಿ ಸಂಪೂರ್ಣವಾಗಿ ಚೇತರಿಸಿಕೊಂಡು ಅವರ ಪುಸ್ತಕವನ್ನು ಚೊಚ್ಚಲು ತುಂಬು ಗರ್ಭಿಣಿಯಾಗಿದ್ದ, ನಮ್ಮ ಮನೆಗೆ ಬಾಣಂತನಕ್ಕೆ ಬಂದಿದ್ದ ನನ್ನ ತಂಗಿಯೂ ಓದಿ ಮುಗಿಸಿದ ನಂತರ ನಾನೇ ಖುದ್ದಾಗಿ ರಂಗನಾಥ ಮೇಷ್ಟ್ರ ಮನೆಗೆ ಹೋಗಿ ಹಿಂದಿರುಗಿಸಿ ಕೃತಜ್ಞನೆಗಳನ್ನು ಹೇಳಿ ಬಂದಿದ್ದೆ.

ಹೊರಗಿನ ಪ್ರಪಂಚಕ್ಕೆ ಬಹಳ ಚೆನ್ನಾಗಿಯೇ ಕಾಣಿಸಿಕೊಳ್ಳುತ್ತಿದ್ದ ನಮ್ಮ ರಂಗನಾಥ ಮೇಷ್ಟ್ರಿಗೆ ವಯಕ್ತಿಕವಾಗಿ ಅನೇಕ ಕೌಟುಂಬಿಕ ಸಮಸ್ಯೆಗಳ ಜೊತೆಗೆ ಆರ್ಥಿಕ ಸಮಸ್ಯೆಗಳೂ ಇದ್ದ ಕಾರಣ ಕಾರಣ ಶಾಲೆ ಮುಗಿದ ನಂತರ ಪರಿಚಯಸ್ಥರ ಫೈನಾನ್ಸಿನಲ್ಲಿ ಲೆಖ್ಖ ಬರೆಯುತ್ತಿದ್ದಲ್ಲದೇ ಅನೇಕ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದ ವಿಷಯ ತಿಳಿದಿತ್ತು. ಅದೊಮ್ಮೆ ತಮ್ಮ ನೆಚ್ಚಿನ ಹೀರೋ ಪುಕ್ ನಲ್ಲಿ (ಗುರುಗಳಿಂದಲೇ ಪ್ರೇರಿತನಾಗಿ ನಾನೂ ಸಹಾ ನನ್ನ ಮೊತ್ತ ಮೊದಲ ದ್ವಿಚಕ್ರವಾಹನವಾಗಿ ಹೀರೋ ಪುಕ್ ಸ್ವಂತ ದುಡಿಮೆಯಲ್ಲಿ ಅದಾಗಲೇ ಖರೀದಿಸಿದ್ದೆ) ಪ್ರಯಾಣಿಸುತ್ತಿದ್ದಾಗ ಅಪಘಾತವಾಗಿ ಸ್ಥಳದಲ್ಲಿಯೇ ಮೃತಪಟ್ಟ ವಿಷಯ ಕೇಳಿ ನಿಜಕ್ಕೂ ಮನಸ್ಸಿಗೆ ದುಃಖವುಂಟಾಗಿತ್ತು. ಕಡೆಯದಾಗಿ ಅದೇ ಹೀರೋ ಪುಕ್ಕಿನಲ್ಲಿಯೇ ಹೋಗಿ ಅವರ ಅಂತಿಮ ದರ್ಶನ ಪಡೆದು ಬಂದಿದ್ದೆ

ಚಟ ಎನ್ನುವುದು ಮನುಷ್ಯರೊಂದಿಗೆ ಅಂಟಿ ಕೊಂಡು ಬಂದ ಜಾಡ್ಯ. ಬಹುತೇಕ ಎಲ್ಲರೂ ಒಂದಲ್ಲಾ ಒಂದು ಚಟಕ್ಕೆ ಬಲಿಯಾಗಿರುತ್ತಾರೆ. ಹಾಗೆಯೇ ನಮ್ಮ ರಂಗನಾಥ ಮೇಷ್ಟ್ರಿಗೂ ಸಹಾ ಸಿಗರೇಟ್ ಸೇದುವ ಅಭ್ಯಾಸವಿತ್ತು. ಹಾಗಾಗಿಯೇ ಆವರ ಜೋಬಿನಲ್ಲಿ ಸದಾಕಾಲವೂ ಮಿಂಟಿ ಇಲ್ಲವೇ ಚಾಕ್ಲೇಟ್ ಇಟ್ಟುಕೊಳ್ಳುತ್ತಿದ್ದ ರಹಸ್ಯ ಅವರ ಸಾವಿನ ನಂತರ ತಿಳಿದು ಬಂದಿತ್ತು. ಶಾಲೆಯಲ್ಲಿ ತರಗತಿ ಮುಗಿಸಿದ ನಂತರ ಸಿಗುವ ಸಣ್ಣ ಸಮಯದಲೇ ಅದೆಲ್ಲೋ ಹೋಗಿ ಬರುತ್ತಿದ್ದದ್ದು ಒಂದೆರಡು ಧಮ್ ಎಳೆಯಲು ಎಂದು ಆನಂತರವೇ ನಮಗೆ ಗೊತ್ತಾಗಿದ್ದು. ನಾವು ವಿಧ್ಯಾರ್ಥಿಗಳಾಗಿದ್ದಾಗ ಅಷ್ಟೆಲ್ಲಾ ಅವರೊಂದಿಗೆ ಒಡನಾಟ ಇಟ್ಟುಕೊಂಡಿದ್ದರು ಅವರು ಸಿಗರೇಟ್ ಸೇದುತ್ತಿದ್ದ ವಿಷಯವನ್ನು ತಿಳಿದಿರಲಿಲ್ಲ ಎಂದರೆ ಎಷ್ಟರ ಮಟ್ಟಿಗೆ ತಮ್ಮ ಗೌಪ್ಯತೆಯನ್ನು ಕಾಪಾಡಿಟ್ಟುಕೊಳ್ಳುತ್ತಿದ್ದರು ಎಂಬುದು ಅರಿವಾಗುತ್ತದೆ.

ಬಹುಶಃ ಅದೇ ಗೌಪ್ಯತೆಯೇ ಅವರ ಅಕಾಲಿಕ ಮರಣಕ್ಕೂ ಕಾರಣವಾಗಿ ಹೋಯಿತೇ? ಎಂಬ ಅನುಮಾನವೂ ಅವರ ಸಾವಿನ ನಂತರ ಕಾಡಿದ್ದಂತೂ ಸುಳ್ಳಲ್ಲ. ಅವರ ಆರ್ಥಿಕ ಸಮಸ್ಯೆ ಮತ್ತು ಕೌಟುಂಬಿಕ ಸಮಸ್ಯೆಯನ್ನು ಮತ್ತೊಬ್ಬರ ಬಳಿ ಹಂಚಿಕೊಂಡಿದ್ದರೆ ಖಂಡಿತವಾಗಿಯೂ ಅದನ್ನು ಪರಿಹರಿಸಬಹುದಿತ್ತೇನೋ? ಪರಿಹಾರವಿಲ್ಲದ ಸಮಸ್ಯೆಗಳೇ ಇಲ್ಲ,ಪ್ರತಿಯೊಂದು ಸಮಸ್ಯೆಗೂ ಹತ್ತಾರು ಪರಿಹಾರವಿರುತ್ತದೆ ಎಂದು ಗಣಿತ ಕಲಿಸಿ ಕೊಡುವಾಗ ಹೇಳಿದ್ದ ಪರಮ, ಸ್ವಾಭಿಮಾನಿ ಮತ್ತು ಅತ್ಮಾಭಿಮಾನಿ ರಂಗನಾಥ ಮೇಷ್ಟ್ರು ಎಲ್ಲವನ್ನೂ ತಮ್ಮ ಒಡಲೊಳಗೇ ಅಡಗಿಸಿಟ್ಟುಕೊಂಡು ಸಮಸ್ಯೆಯೊಂದಿಗೆ ಅಕಾಲಿಕವಾಗಿ ಸಾಯಬಾರದ ವಯಸ್ಸಿನಲ್ಲಿ ನಮ್ಮೆಲ್ಲರನ್ನು ಅಗಲಿ ಹೋಗಿದ್ದು ನಿಜಕ್ಕೂ ದುಃಖಕರವೇ ಸರಿ.

ಉಪನಿಷತ್ತಿನ ಪ್ರಕಾರ “ಗು” ಎಂದರೆ ಅಂಧಕಾರವೆಂದೂ “ರು” ಎಂದರೆ ದೂರೀಕರಿಸುವವ ಅಥವಾ ಅಜ್ಞಾನದ ಅಂಧಕಾರವನ್ನು ನಿವಾರಿಸಿ ಜ್ಞಾನದ ಹಾದಿಗೆ ನಡೆಸುವವ ಎಂಬ ಅರ್ಥವಾಗುತ್ತದೆ. ಸಂಸ್ಕೃತದಲ್ಲಿ “ಗುರು” ಪದಕ್ಕೆ ಭಾರವಾದ ಎನ್ನುವ ಅರ್ಥವೂ ಇದೆ. ಯಾರು ಜ್ಞಾನದಿಂದ ಭಾರವಾಗಿರುವನೋ ಅವರೇ ಗುರು ಎಂದೂ ಅರ್ಥೈಸಬಹುದು.

ಹೀಗೆ ಅಗಣಿತ ಜ್ಞಾನ ಸಂಪನ್ನರಾಗಿದ್ದ ನಮ್ಮ ಗಣಿತದ ಗುರುಗಳಾಗಿದ್ದ ನಮ್ಮ ರಂಗನಾಥ ಮೇಷ್ಟ್ರಿಗೆ ಆಷಾಡ ಪೌರ್ಣಮಿಯ ದಿನದಂದು ಭಕ್ತಿಯಿಂದ ಗೌರವಾದರಗಳನ್ನು ಸಲ್ಲಿಸುವುದು ನನ್ನ ಆದ್ಯ ಕರ್ತವ್ಯವೇ ಸರಿ. ಗುರು ಚರಿತ್ರೆಯಲ್ಲಿಯೇ ಹೇಳಿರುವಂತೆ ನಮ್ಮ ಮುಂದೆ ಸಾಕ್ಷಾತ್ ದೇವರು ಮತ್ತು ನಮ್ಮ ಗುರುಗಳು ಇಬ್ಬರೂ ಇದ್ದಾಗ, ಮೊದಲಿಗೆ ದೇವರನ್ನು ಪೂಜಿಸದೇ ನೇರವಾಗಿ ಗುರುಗಳನ್ನು ಪೂಜಿಸಿದರೆ ಸಾಕು. ನಾವು ಮಾಡಿದ ಪೂಜೆ ಗುರುಗಳ ಮೂಲಕ ಭಗವಂತನನ್ನು ತಲುಪುತ್ತದೆ. ಅದನ್ನೇ ಪುರಂದರ ದಾಸರು ಸರಳವಾಗಿ ಗುರುವಿನ ಗುಲಾಮನಾಗದ ತನಕ ದೊರೆಯದಣ್ನ ಮುಕುತಿ. ಗುರುವಿನಲ್ಲಿ ಶರಣಾದರೆ ಮಾತ್ರ ನಮ್ಮ ಗುರಿ ಮುಟ್ಟುವ ಪ್ರಯತ್ನ ಸಫಲವಾಗುತ್ತದೆ ಎಂದು ತಿಳಿಸಿದ್ದಾರೆ

WhatsApp Image 2021-07-23 at 11.10.04 AM

ಇಂದು ಸ್ವರಾಜ್ಯ ನಮ್ಮ ಸಿದ್ದ ಹಕ್ಕು ಅದನ್ನು ನಾವು ಪಡದೇ ತೀರುತ್ತೇವೆ ಎಂದು ಸಾರಿ ಹೇಳಿದ ಶ್ರೀ ಬಾಲ ಗಂಗಾಧರ ತಿಲಕ್ ಮತ್ತು ಮೈ ಆಜಾದ್ ಹೂಂ ಔರ್ ಆಜಾದ್ ಹೀ ರಹೂಂಗ ಎಂದು ಹೇಳುತ್ತಾ ಬ್ರಿಟೀಷರ ಕೈಗೆ ಸೆರೆ ಸಿಕ್ಕದೇ ವೀರ ಸ್ವರ್ಗವನ್ನು ಸೇರಿದ ಶ್ರೀ ಚಂದ್ರಶೇಖರ್ ಆಜಾದ್ ಅಂತಹ ಪ್ರಾಥಃಸ್ಮರಣಿಯರ ಜನ್ಮ ದಿನ. ಅದಕ್ಕೆ ಮುಗುಟಪ್ರಾಯವಾಗಿ ಆಷಾಡ ಪೌರ್ಣಿಮೆ ಅರ್ಥಾತ್ ಗುರು ಪೌರ್ಣಿಮೆ. ಹಾಗಾಗಿ ನಾವೆಲ್ಲರೂ ಈ ಮೂವರಿಗೂ ಭಕ್ತಿ ಪೂರ್ವಕವಾದ ಪ್ರಣಾಮಗಳನ್ನು ಸಲ್ಲಿಸೋಣ ಅಲ್ಲವೇ?

ಏನಂತೀರೀ?
ನಿಮ್ಮವನೇ ಉಮಾಸುತ

One thought on “ರಂಗನಾಥ ಮೇಷ್ಟ್ರು

  1. ನಮಸ್ಕಾರ ಶ್ರೀಕಂಠ, ನಮ್ಮ ದೈವ ಸ್ವರೂಪಿ ರಂಗನಾಥ್ ಮೇಷ್ಟ್ರ ಬಗ್ಗೆ ಈ ವಿಶೇಷ ದಿನದಂದು ಪರಿಚಯಿಸಿ ಪುನೀತ ಭಾವ ಮೂಡಿಸಿದ್ದಕ್ಕೆ ಧನ್ಯವಾದಗಳು. ಈ ಲೇಖನ ಹಳೆಯ ದಿನಗಳ ನೆನಪುಗಳ ಮೆರವಣಿಗೆಗೆ ಹೊತ್ತೊಯ್ಯಿತು.
    ಮೇಷ್ಟ್ರ ಅಪಾರ ಶಿಷ್ಯ ವೃಂದದಲ್ಲಿ ನಾನೂ ಒಬ್ಬನಾಗದೆ ಅವರ ನಿಕಟವರ್ತಿಗಳಲ್ಲಿ ಒಬ್ಬನೆನಿಸಿದ್ದು ಅಭಿಮಾನದ ವಿಷಯವೇ ಸರಿ. ಮೇಷ್ಟ್ರು ನಮ್ಮ ನೆರೆಯ ಮನೆಯಲ್ಲೇ ನೆಲೆಸಿದ್ದು ಸಹಜವಾಗಿ ಅವರ ಸಾಮೀಪ್ಯ ಸಾಂಗತ್ಯ ದೊರಕಿತು. ಸಾಹಿತ್ಯಾಸಕ್ತಿ ಮತ್ತು ಪುಸ್ತಕ ಪ್ರೀತಿ ನಮ್ಮನ್ನು ಇನ್ನಷ್ಟು ಹತ್ತಿರವಾಗಿಸಿತು. ಉತ್ತಮ ಹಾಸ್ಯಪ್ರಜ್ಞೆ ಇದ್ದ ಅವರು ತರಗತಿಗಳಲ್ಲಿ ಎಲ್ಲರನ್ನು ನಗಿಸುತಿದ್ದ ಪರಿ ಅನನ್ಯ. ಸರ್ ನುರಿತ ಪಾಕಶಾಸ್ತ್ರ ಪ್ರವೀಣರು ಅವರ ಕೈ ರುಚಿ ಸವಿದ ನಂತರ ಮೆಚ್ಚುಗೆಯ ನುಡಿಗೆ ಹಿಗ್ಗುತ್ತಿದ್ದರು (ನನ್ನನ್ನು ಭೋಜನದಲ್ಲಿ ತೃಪ್ತಿಪಡಿಸುವುದು ಅಷ್ಟು ಸುಲಭವಲ್ಲ). ಅವರು ಮಾನವೀಯ ಗುಣಗಳು ಮತ್ತು ತಾವು ನಂಬಿದ ಸಿದ್ಧಾಂತಗಳನ್ನು ಪ್ರಾಮಾಣಿಕವಾಗಿ ಪಾಲಿಸಿದ ರೀತಿ ಈಗಲೂ ನನಗೆ ಪ್ರೇರಣೆಯಾಗಿ ದಾರಿ ತೋರಿಸುತ್ತಿದೆ. ಅವರು ಅನೇಕ ಬಡಮಕ್ಕಳ ಸಮವಸ್ತ್ರ, ಶಾಲಾ ಫೀಸು ತಮ್ಮ ಸ್ವಂತ ಹಣದಲ್ಲಿ ಭರಿಸಿದ್ದು ಕಣ್ಣಾರೆ ಕಂಡಿದ್ದೇನೆ. ಅವರ ಕಡೆಯ ಕಾಲದಲ್ಲಿ ಪಾದದಲ್ಲಿ ಆಣಿಯಾಗಿ ಕುಂಟುತ್ತಲೇ ನಡೆದಾಡುತ್ತಿದ್ದರು. ನನ್ನ ಬಗ್ಗೆ ವಿಶೇಷ ಅಕ್ಕರೆ, ಪ್ರೀತಿ ಹೊಂದಿದ್ದ ಮೇಷ್ಟ್ರಿಗೆ ನಾನೆಷ್ಟು ಜನ್ಮವೆತ್ತಿ ಅವರ ಸೇವೆ ಮಾಡಿದರೂ ಋಣ ತೀರಿಸಲು ಸಾಧ್ಯವಿಲ್ಲ.

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s