ಯಾರೇ ಆಗಲಿ ಒಮ್ಮೆ ತಪ್ಪು ಮಾಡಿದಲ್ಲಿ ಅದು ಕ್ಷಮಾರ್ಹವಾಗುತ್ತದೆ. ಅದೇ ತಪ್ಪನ್ನು ಎರಡನೇ ಬಾರಿ ಮಾಡಿದಲ್ಲಿ ಮೂರ್ಖತನ ಎನಿಸಿಕೊಳ್ಳುವ ಕಾರಣ ಸುಮ್ಮನೇ ಬಿಟ್ಟು ಬಿಡಬಹುದು. ಅದರೆ, ಹಿಂದಿನ ತಪ್ಪುಗಳಿಂದ ಸ್ವಲ್ಪವೂ ಬುದ್ದಿಯನ್ನು ಕಲಿಯದೇ, ಪದೇ ಪದೇ ಮಾಡಿದ ತಪ್ಪನ್ನೇ ಮಾಡುತ್ತಲೇ ಹೋದಲ್ಲಿ ಅದು ಪ್ರಮಾದ ಎನಿಸಿಕೊಳ್ಳುವ ಕಾರಣ ಅದಕ್ಕೆ ಕಠಿಣಾತಿ ಕಠಿಣ ಶಿಕ್ಷೆಗೆ ಒಳಪಡಿಸಲೇ ಬೇಕಾಗುತ್ತದೆ. ಹೀಗೆ ಪದೇ ಪದೇ ತಪ್ಪನ್ನು ಮಾಡುತ್ತಿರುವ ಚೇತನ್ ಅಹಿಂಸಾ ಎಂಬ ವಿದೇಶಿಗನನ್ನು ಗಡಿಪಾರು ಹೊರತು ಮತ್ತಾವ ಶಿಕ್ಷೆಯೂ ಕಡಿಮೆ ಎನಿಸಿಕೊಳ್ಳುತ್ತದೆ
24 ಫೆಬ್ರವರಿ 1983 ರಂದು ಅಮೇರಿಕಾದಲ್ಲಿ ಭಾರತೀಯ ಸಂಜಾತರಿಗೆ ಜನಿಸಿದ ಚೇತನ್ ಕುಮಾರ್, ಅನಿವಾಸಿ ಭಾರತೀಯ ಕನ್ನಡಿಗನಾದರೂ ಜನ್ಮತಃ ಅಮೇರಿಕಾ ದೇಶದ ಪ್ರಜೆ. ತಮ್ಮ ಬಾಲ್ಯದ ವಿದ್ಯಾಭ್ಯಾಸವೆಲ್ಲಾ ನಂತರ ಯೇಲ್ ವಿಶ್ವವಿದ್ಯಾನಿಲಯದಿಂದ ಸೌತ್ ಏಷ್ಯನ್ ಸ್ಟಡೀಸ್ನಲ್ಲಿ ಕಂಪ್ಯಾರೇಟಿವ್ ಥಿಯೇಟರ್ಗೆ ಒತ್ತು ನೀಡಿ 2005ರಲ್ಲಿ ಪದವಿ ಪಡೆಯುತ್ತಾರೆ. ಹೀಗೆ ಪದವಿಯನ್ನು ಮುಗಿಸಿದ ನಂತರ ನೇರವಾಗಿ ಭಾರತ ಅದಲ್ಲೂ ಕರ್ನಾಟಕಕ್ಕೆ ಬಂದು ಹನ್ನೆರಡು ತಿಂಗಳ ಫುಲ್ಬ್ರೈಟ್ ವಿದ್ಯಾರ್ಥಿ ವೇತನದೊಂದಿಗೆ, ಬೆಂಗಳೂರಿನ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾನಲ್ಲಿ ಕೆಲಸ ಮಾಡುತ್ತಾರೆ. ಹೀಗೆ ಬೆಂಗಳೂರಿನಲ್ಲಿರುವವಾಗ ಅಮೇರಿಕಾದಲ್ಲಿ ಹುಟ್ಟಿದರೂ ತಮ್ಮ ಸ್ಪಷ್ಟವಾದ ಕನ್ನಡ ಮತ್ತು ಉತ್ತಮವಾದ ನಡುವಳಿಕೆಯಿಂದ ಎಲ್ಲರ ಮನಸ್ಸನ್ನು ಗೆಲ್ಲುವ ಚೇತನ್, 2007 ರಲ್ಲಿ ಅಗ್ನಿ ಶ್ರೀಧರ್ ಅವರ ಕಥೆಯಾಧಾರಿತೆ ಚೈತನ್ಯರವರ ನಿರ್ದೇಶನದ ಆ ದಿನಗಳು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸುತ್ತಾರೆ. ತಮ್ಮ ಚೊಚ್ಚಲ ಚಿತ್ರಕ್ಕೇ ಉದಯ ಫಿಲ್ಮ್ ಅವರ ಅತ್ಯುತ್ತಮ ಚೊಚ್ಚಲ ನಟ ಪ್ರಶಸ್ತಿಯನ್ನು ಗಳಿಸಿದ ನಂತರ ಮತ್ತೆ 2013 ರಲ್ಲಿ ನಾಗಶೇಖರ್ ಅವರ ಮೈನಾ ಚಿತ್ರವೂ ಸಹಾ ಸೂಪಟ್ ಹಿಟ್ ಆಗುವ ಮೂಲಕ ಚೇತನ್ ಕನ್ನಡ ಚಿತ್ರರಂಗದಲ್ಲಿ ಭರವಸೆಯನ್ನು ಮೂಡಿಸುವ ನಟನಾಗಿ ಕಾಣಿಸಿಕೊಳ್ಳುವ ಹೊತ್ತಿನಲ್ಲೇ, ಬರ್ತಾ ಬರ್ತಾ ರಾಯರ ಕುದುರೆ ಕತ್ತೆ ಆಯ್ತು ಎನ್ನುವಂತೆ ತಮ್ಮ ಅಭಿನಯಕ್ಕಿಂತಲೂ ಸ್ವಘೋಷಿತ ಬುದ್ಧಿ ಜೀವಿ ಎನ್ನುವ ಮನಸ್ಥಿತಿಯನ್ನು ಬೆಳಸಿಕೊಂಡು ತಮ್ಮ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಂದಾಗಿ ಆಗ್ಗಾಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಕರ್ನಾಟಕದಲ್ಲಿ ಕುಖ್ಯಾತಿಯನ್ನು ಪಡೆಯುತ್ತಾರೆ.
ಕರ್ನಾಟಕದಲ್ಲಿ ನಟನಾಗಿ ವೃತ್ತಿಯನ್ನಾರಂಭಿಸಿ ನಂತರ ಸಾಮಾಜಿಕ-ರಾಜಕೀಯ ಕಾರ್ಯಕರ್ತರಾಗಿ ತಮ್ಮ ಪ್ರವೃತ್ತಿಯನ್ನು ಮುಂದುವರೆಸಿಕೊಂಡು ಹೋಗುತ್ತಾ, ಅನಗತ್ಯವಾಗಿ ಹಿಂದೂ ವಿಚಾರಧಾರೆಯ ವಿರುದ್ದ ತಮ್ಮ ನಾಲಿಗೆಯನ್ನು ಹೊರಚಾಚುತ್ತಾ ಎಲ್ಲರ ಕಂಗಣ್ಣಿಗೂ ಗುರಿಯಾಗುತ್ತಾರೆ. ಆರಂಭದಲ್ಲಿ ಕಮ್ಯೂನಿಸ್ಟ್ ವಿಚಾರಧಾರೆಗಳಿಂದ ಪ್ರಭಾವಿತರಾಗಿರಬಹುದು ಎಂದು ತೋರುತ್ತಿದ್ದರೂ ನಂತರದ ದಿನಗಳಲ್ಲಿ ಸಮಾನತೆ, ಅಸಹಿಷ್ಣುತೆ, ಭಾರತೀಯ ಸಂವಿಧಾನ ಎಂದು ಓತಪ್ರೋತವಾಗಿ ಮಾತನಾಡುತ್ತಾ, ನಂತರದ ದಿನಗಳಲ್ಲಿ, ಮನುವಾದವನ್ನು ಹತ್ತಿಕ್ಕಿ, ಬುದ್ಧ, ಬಸವಣ್ಣ ಅಂಬೇಡ್ಕರ್ ವಿಚಾರಧಾರೆಯನ್ನು ಈ ದೇಶದಲ್ಲಿ ಮತ್ತೆ ಚಾಲನೆಗೆ ತರುವುದೇ ತನ್ನ ಉದ್ದೇಶ ಎಂದು ಬಹಿರಂಗವಾಗಿ ಹೇಳುವ ಮೂಲಕ ತಾನೊಬ್ಬ ಕೇವಲ ಬೌದ್ಧಿಕವಾಗಿ ಅಲ್ಲದೇ ಮಾನಸಿಕವಾಗಿಯೂ ಅಸ್ವಸ್ಥ ಎಂಬುದನ್ನು ಜಗಜ್ಜಾಹೀರಾತು ಮಾಡಿಕೊಳ್ಳುತ್ತಾರೆ.
ಇನ್ನು ವಯಕ್ತಿಕ ಜೀವನದಲ್ಲಿ ತಾನೊಬ್ಬ ಸರಳ ಜೀವಿ ತನಗೆ ಯಾವುದೇ ಧರ್ಮದ ಹಂಗಿಲ್ಲ ಎಂದು ತೋರಿಸಿಕೊಳ್ಳುವ ಚೇತನ್ ಕುಮಾರ್ ಫೆಬ್ರವರಿ 2 2020 ರಂದು ತಮ್ಮ ದೀರ್ಘಕಾಲದ ಸಂಗಾತಿ ಮೇಘಾ ಅವರನ್ನು ಅನಾಥಾಶ್ರಮದಲ್ಲಿ ಲಿಂಗಾಯಿತ ಸಂಪ್ರದಾಯದ ಪ್ರಕಾರ ವಿವಾಹ ಆಗುವ ಮೂಲಕ ಆತನಲ್ಲೂ ಜಾತೀವಾದ ತುಂಬಿದ್ದು, ಹೇಳುವುದು ಶಾಸ್ತ್ರ, ತಿನ್ನುವುದು ಬದನೇಕಾಯಿ ಎಂಬಂತಾಗಿ ವಿವಾದಕ್ಕೆ ಕಾರಣವಾಗಿತ್ತು
ಇದಾದ ನಂತರ 2017ರಲ್ಲಿ ನೂರೊಂದು ನೆನಪು ಚಿತ್ರದಲ್ಲಿ ಶ್ರೇಯಸ್” ಎಂಬ ನಾಯಕನ ಪಾತ್ರದಲ್ಲಿ ಅಭಿನಯಿಸಿದರಾದರೂ, ಚಿತ್ರ ಓಡದಿದ್ದರೂ, ಚಾಮರಾಜನಗರದಲ್ಲಿ ಅವರ ಎಡಪಂಧೀಯ ರಾಜಕೀಯ ನಿಲುವುಗಳನ್ನು ಧಿಕ್ಕರಿಸಿದ ಕೆಲವು ಬಲಪಂತೀಯರು ಅ ಸಿನಿಮಾದ ಪೋಸ್ಟರ್ಗಳನ್ನು ಹರಿದು ಚಿತ್ರ ಪ್ರದರ್ಶನಕ್ಕೆ ತಡೆಯೊಡ್ಡುವ ಮೂಲಕ ಚಿತ್ರಕ್ಕೆ ಅಲ್ಪ ಸ್ವಲ್ಪ ನಕಾರಾತ್ಮಕ ಪ್ರಚಾರ ಸಿಕ್ಕಿದ್ದರ ಹೊರತಾಗಿ ಚಿತ್ರರಂಗದಲ್ಲಿ ಅಂತಹ ಹೆಸರನ್ನೇನೂ ಮಾಡಲಿಲ್ಲ.
ನಂತರ ದಿನಗಳಲ್ಲಿ, ಚೇತನ್ ಸಮಾನತೆ ಮತ್ತು ನ್ಯಾಯ ಎಂಬ ಧ್ಯೇಯದಡಿಯಲ್ಲಿ ಯುವ ಮತ್ತು ವಿದ್ಯಾರ್ಥಿ ಸಂಘಟನೆಗಳು, ಮಹಿಳಾ ಸಮೂಹಗಳು, ರೈತರ ಗುಂಪುಗಳು, ಕಾರ್ಮಿಕ ಸಂಘಗಳು ಮತ್ತು ದಲಿತ ಮತ್ತು ಆದಿವಾಸಿ ಚಳುವಳಿಗಳಲ್ಲಿ ನಂದೆಲ್ಲಿ ಇಡಲೀ ನಂದಗೋಪಾಲ ಎಂದು ಅಲ್ಲೊಂದು ಇಲ್ಲೊಂದು ವಿವಾದಾತ್ಮ ಹೇಳಿಕೆಗಳನ್ನು ನೀಡುತ್ತಾ, ವಯಕ್ತಿಯವಾಗಿ ಪ್ರಚಾರವನ್ನು ಪಡೆಯುತ್ತಾ ಅಂತಹ ಚಳುವಳಿಗಳ ದಿಕ್ಕನ್ನು ತಪ್ಪಿಸುದರೂ ಎಂದರೂ ತಪ್ಪಾಗದು.
ಇನ್ನು ಸಾಮಾಜಿಕ-ರಾಜಕೀಯ ವಿಷಯಗಳ ಕುರಿತು ಟಿವಿ ಮತ್ತು ಮಾಧ್ಯಮಗಳ ಚರ್ಚೆಗಳಲ್ಲಿ ಭಾಗವಹಿಸಿದಾಗ, ನಿರೂಪರು ಕೇಳಿದ ಪ್ರಶ್ನೆಗೂ ಚೇತನ್ ಕೊಡುತ್ತಿದ್ದ ಉತ್ತರಕ್ಕು ಒಂದಕ್ಕೊಂದು ಸಂಬಂಧವೇ ಇರದೇ ಕಡೆಗೆ ಚರ್ಚೆ ಮಧ್ಯದಲ್ಲೇ ಎದ್ದು ಹೋದ ಉದಾಹರಣೆಯೂ ಉಂಟು. ಬೆಂಗಳೂರಿನ ಸರ್ಕಾರಿ ಸಂಸ್ಥೆಗಳಲ್ಲಿ ಹಿಂದಿ ಹೇರಿಕೆಯ ವಿರುದ್ಧ ಪ್ರತಿಭಟನೆ ನಡೆಸಿದ್ದಲ್ಲದೇ, ಕನ್ನಡಕ್ಕೆ ಈಗಾಗಲೇ ಮ. ರಾಮಮೂರ್ತಿಗಳು ಸಿದ್ಧಪಡಿಸಿಕೊಟ್ಟ ಹಳದಿ ಮತ್ತು ಕೆಂಪು ಬಣ್ಣದ ಬಾವುಟವಿದ್ದರೂ, ಸಿದ್ದರಾಮಯ್ಯನವರ ಆಡಳಿತದ ಕಾಲದಲ್ಲಿ ಸರ್ಕಾರದಿಂದ ಅನುಮೋದಿಸಲ್ಪಟ್ಟ ಸ್ವತಂತ್ರ ಕರ್ನಾಟಕ ರಾಜ್ಯ ಧ್ವಜವನ್ನು ತರಲು ಹೊರಟಿದ್ದಕ್ಕೆ ಅನೇಕ ಕನ್ನಡಿಗರೂ ವಿರೋಧ ವ್ಯಕ್ತಪಡಿಸಿದಾಗ ಚೇತನ್ ಪ್ರತ್ಯೇಕ ಧ್ವಜದ ಪರ ಹೋರಾಟ ನಡೆಸುವ ಮೂಲಕ ತಾನೊಬ್ಬ ಎಡೆಬಿಡಂಗಿ ಹೋರಾಟಗಾರ ಎಂದು ತೋರಿಸಿಕೊಳ್ಳುತ್ತಾರೆ
ಹುಬ್ಬಳ್ಳಿ, ಬೆಳಗಾವಿ, ಮತ್ತು ಗದಗ ಜಿಲ್ಲೆಗಳಿಗೆ ಮಹದಾಯಿ ನದಿಯಿಂದ ಕುಡಿಯುವ ನೀರಿನ ಸೌಲಭ್ಯಗಳನ್ನು ಒದಗಿಸಲು ಮಾಡಿದ ಹೋರಾಟಕ್ಕೆ ಅಲ್ಲಿನ ಸ್ಥಳೀಯರ ಬೆಂಬಲ ದೊರೆತದ್ದೇ ತಡಾ, ತಾನೊಬ್ಬ ಮಹಾನ್ ಹೋರಾಟಗಾರ ಎಂಬ ಮನಸ್ಥಿತಿಯನ್ನು ಬೆಳಸಿಕೊಂಡು, ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಆದಾಗ ಅವರ ಸಾವಿನಲ್ಲಿ ತಮ್ಮ ಬೇಳೇ ಬೇಯಿಸಿಕೊಳ್ಳಲು ಹೊರಟ ಪ್ರಕಾಶ್ ರೈ ಅಂತಹ ಅನೇಕ ಹೋರಾಟಗಾರರ ಜೊತೆ ಚೇತನ್ ಸಹಾ “ನಾನು ಗೌರಿ” ಎಂಬ ಅಭಿಯಾನದಲ್ಲಿ ಬೆಂಗಳೂರು ಮತ್ತು ಕೋಲಾರದಲ್ಲಿ ಪ್ರತಿಭಟನೆ ಮತ್ತು ಭಾಷಣಗಳ ಮೂಲಕ ಗೌರಿ ಲಂಕೇಶ್ ಹತ್ಯೆಯ ಬೆಳಕಿನಲ್ಲಿ ಕಾರ್ಯಕರ್ತರು/ಪ್ರಗತಿಪರರು/ಬುದ್ಧಿಜೀವಿಗಳ ಮೇಲಿನ ಹಲ್ಲೆಗಳ ವಿರುದ್ಧ ಚೇತನ್ ಮಾತನಾಡುತ್ತಾ, “ಗೌರಿ ಲಂಕೇಶ್ ಅವರು ಭಿನ್ನಾಭಿಪ್ರಾಯದ ಧ್ವನಿಯನ್ನು ಪ್ರತಿನಿಧಿಸಿದರು, ಕರ್ನಾಟಕದಲ್ಲಿ ಹರಡುತ್ತಿರುವ ದ್ವೇಷದ ಸಂಸ್ಕೃತಿಯ ವಿರುದ್ಧದ ಧ್ವನಿ, ಅವರು ಹೇಡಿಗಳ ಬೆದರಿಕೆಗಳಿಗೆ ಅವರು ಬಗ್ಗಲಿಲ್ಲ. ಅವಳು ಬಲವಾಗಿ ನಿಂತಳು, ಅವಳ ಶೌರ್ಯಕ್ಕೆ ಅವರು ಹೆದರಿದರು ಮತ್ತು ಆದ್ದರಿಂದ ಅವರು ಅವಳನ್ನು ಕೊಂದರು ಎಂದು ಹೇಳಿದರಾದರೂ ಜನರು ಬಿಡಿ, ಗೌರಿಯ ಸಂಗಡಿಗರೇ ಚೇತನ್ ಅವರ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳದೇ ಹೋದಾಗ, ಚೇತನ ಒಂದು ರೀತಿಯಲ್ಲಿ ಭ್ರಮನಿರಸಾರಂತಾಗಿ ಹೋಗಿದ್ದರು. 2020-2021 ಕೇಂದ್ರ ಸರ್ಕಾರ ರೈತರಿಗಾಗಿ ತಂದ ಹೊಸಾ ಕಾನೂನುಗಳ ವಿರುದ್ಧ ಭಾರತೀಯ ರೈತರ ಪ್ರತಿಭಟನೆ ನಡೆದಾಗ, ತನಗೆ ಸಂಬಂಧವೇ ಇಲ್ಲದೇ ಹೋದರೂ., ರೈತರ ಆಂದೋಲನದಲ್ಲಿ ಮೂಗು ತೂರಿಸಿಕೊಂಡು ಹೋಗಿದ್ದೂ ಉಂಟು.
2022 ರಲ್ಲಿ, ಕರ್ನಾಟಕ ಹೈಕೋರ್ಟ್ನಲ್ಲಿ ಹಿಜಾಬ್ ಸಮಸ್ಯೆಯ ಕುರಿತಾಗಿ ವಾದ ವಿವಾದಗಳು ನಡೆಯುತ್ತಿದ್ದಂತಹ ಸಮಯದಲ್ಲಿ ಆ ಪ್ರಕರಣದಲ್ಲಿ ಪ್ರಮುಖ ನ್ಯಾಯಮೂರ್ತಿಗಳಾಗಿದ್ದ ಶ್ರೀ ಕೃಷ್ಣ ದೀಕ್ಷಿತ್ ಅವರು ಈ ಹಿಂದೆ ಅತ್ಯಾಚಾರ ಪ್ರಕರಣದ ಆರೋಪಿಗೆ ಜಾಮೀನು ನೀಡುವ ಸಂದರ್ಭದಲ್ಲಿ ನೀಡಿದ ಆದೇಶದಲ್ಲಿ ಸ್ತ್ರೀದ್ವೇಷದ ಕಾಮೆಂಟ್ಗಳನ್ನು ಬಳಸಿದ್ದಕ್ಕಾಗಿ ಸಾರ್ವಜನಿಕರಿಂದ ಟೀಕೆಗೆ ಗುರಿಯಾಗಿದ್ದನ್ನೇ ಪ್ರಮುಖವಾಗಿಟ್ಟುಕೊಂಡು ಚೇತನ್ ಆ ನ್ಯಾಯಾಧೀಶರ ವಿರುದ್ದ ಟ್ವೀಟ್ ಮಾಡಿದ್ದಕ್ಕಾಗಿ ಶೇಷಾದ್ರಿಪುರಂ ಠಾಣೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಚೇತನ್ ಅವರನ್ನು ಬಂಧಿಸಿ ಅವರನ್ನು ಕೋರ್ಟಿಗೂ ಹಾಜರುಪಡಿಸಿದ್ದರು. ಪೊಲೀಸರು ಹಾಕಿರುವ ಎಫ್ ಐಆರ್ ಆಧರಿಸಿ ನ್ಯಾಯಾಲಯವು ಚೇತನ್ ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನದ ನಂತರ ಎಚ್ಚರಿಕೆಯನ್ನು ನೀಡಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.
ಈಗ ಮತಾಂಧ ಟಿಪ್ಪುನನ್ನು ಉರಿಗೌಡ ಮತ್ತು ನಂಜೇಗೌಡ ಅವರು ಕೊಂದಿದ್ದಾರೆ ಎಂಬ ವಾದ ವಿವಾದಗಳು ನಡೆಯುತ್ತಿರುವ ಸಂದರ್ಭದಲ್ಲಿ ಅನಗತ್ಯವಾಗಿ ಚೇತನ್ ಹಿಂದುತ್ವವನ್ನು ಸುಳ್ಳಿನ ಆಧಾರದ ಮೇಲೆ ಕಟ್ಟಲಾಗಿದೆ. ಸಾವರ್ಕರ್ ಹೇಳಿಕೆ, ರಾಮನು ರಾವಣನನ್ನು ಸೋಲಿಸಿ ಅಯೋಧ್ಯೆಗೆ ಹಿಂದಿರುಗಿದ ಭಾರತೀಯ ರಾಷ್ಟ್ರ ಪ್ರಾರಂಭವಾಯಿತು ಎನ್ನುವುದು ಇದು ಒಂದು ಸುಳ್ಳು. 1992ರಲ್ಲಿ ಬಾಬರಿ ಮಸೀದಿ ರಾಮನ ಜನ್ಮ ಭೂಮಿ ಕುರಿತು ಇದು ಒಂದು ಸುಳ್ಳು. ಈಗ 2023ರಲ್ಲಿ ಉರಿಗೌಡ ಮತ್ತು ನಂಜೇಗೌಡರು ಟಿಪ್ಪುವನ್ನು ಕೊಂದರು ಎನ್ನುವುದು ಇದು ಕೂಡ ಒಂದು ಸುಳ್ಳು. ಹಿಂದುತ್ವವನ್ನು ಸತ್ಯದಿಂದ ಸೋಲಿಸಬಹುದು, ಸತ್ಯವೇ ಸಮಾನತೆ’ ಎಂದು ಪೋಸ್ಟ್ ಹಾಕಿದ್ದರು. ಈ ಕುರಿತು ಶಿವಕುಮಾರ್ ಎನ್ನುವವರು ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರನ್ನು ಆಧರಿಸಿ ಶೇಷಾದ್ರಿಪುರಂ ಪೊಲೀಸರು 21.03.2023ರಂದು ಮತ್ತೆ ವಶಕ್ಕೆ ಪಡೆದು, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್, ನ ಬ್ರೂಯಾತ್ ಸತ್ಯಮಪ್ರಿಯಮ್ ಅರ್ಥಾತ್ ಸತ್ಯವನ್ನು ಹೇಳಬೇಕು. ಪ್ರಿಯವಾದದ್ದನ್ನೇ ನುಡಿಯಬೇಕು. ಅಪ್ರಿಯವಾದ ಸತ್ಯವನ್ನು ಹೇಳಬಾರದು. ಪ್ರಿಯವೆಂದುಸುಳ್ಳನ್ನೂ ನುಡಿಯಬಾರದು ಎಂದು ನಮ್ಮ ಶಾಸ್ತ್ರದಲ್ಲಿ ಹೇಳಲಾಗಿದೆ. ವಾಕ್ ಸ್ವಾತಂತ್ರ್ಯ ಇದೇ ಎಂದು ಬಾಯಿಗೆ ಬಂದತೆ ಹಿಂದೂ ಧರ್ಮವನ್ನು ಮತ್ತು ಹಿಂದೂಗಳ ಕುರಿತಾಗಿ ಆವಹೇಳನ ಮಾಡುತ್ತಿರುವ ಚೇತನ್ ಅಹಿಂಸಾ ಅವರ ಪಾಪದ ಕೊಡ ತುಂಬಿ ತುಳುಕಾಡುತ್ತಿದ್ದು, ಈ ಬಾರಿ ಆತನನ್ನು ಗಡಿಪಾರು ಮಾಡಲೇ ಬೇಕು ಎನ್ನುವುದು ಎಲ್ಲಾ ಹಿಂದೂಗಳ ಒಕ್ಕೊರಲಿನ ಮನವಿಯಾಗಿದೆ. ಅಪರಾಧಿಗಳು ಯಾರೇ ಇರಲಿ ಅವರ ಮೇಲೆ ಕಠಿಣ ಶಿಕ್ಷೆ ಕೊಡಿಸುತ್ತೇವೆ ಎಂದು ಈ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಗೃಹಮಂತ್ರಿಗಳು ಪ್ರತೀ ಭಾರಿ ಹೇಳುವುದನ್ನು ಕೇಳುತ್ತಲೇ ಇರುವ ನಮಗೆ, ಈ ಚೇತನ್ ಅಹಿಂಸಾ ಎಂಬ ಕೋಮುವಾದಿ ಮತ್ತು ಸಮಾಜದಲ್ಲಿ ವಿಘಟನೆಗಳನ್ನು ತರಲು ಪ್ರಯತ್ನಿಸುತ್ತಿರುವಂತಹ ವ್ಯಕ್ತಿಯನ್ನು ಗಡಿಪಾರು ಮಾಡುವ ಮೂಲಕ ರಾಜ್ಯದ ಜನತೆಗೆ ಈ ಬಾರಿಯ ಯುಗಾದಿ ಹಬ್ಬದ ಕೊಡುಗೆಯನ್ನಾಗಿ ನೀಡಬೇಕು ಎನ್ನುವುದು ಪ್ರತಿಯೊಬ್ಬ ಹಿಂದೂಗಳ ಆಸೆಯಾಗಿದೆ.
ಪದೇ ಪದೇ ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡಲು ಇವನಿಗೇನು ಹಕ್ಕಿದೇ? 99 ಸಲಾ ಕ್ಷಮೆ ನೀಡಿ 100ನೇ ಸಲಾ ತಪ್ಪು ಮಾಡಿ ಅವನ ಪಾಪದ ಕೊಡ ತುಂಬಿದಾಗಲೇ ಶಿಶುಪಾಲನನ್ನು ಶ್ರೀ ಕೃಷ್ಣ ವಧಿಸಿದ ಹಾಗೇ, ಎಷ್ಟು ಸಲಾ ಅಂತಾ ಈ ವಿದೇಶಿಗನ ತಪ್ಪನ್ನು ಸಹಿಸೋದು?. ಈ ಬಾರಿ ಗಡಿಪಾರು ಮಾಡುವ ಮೂಲಕ ಮತ್ತೆಂದೂ ಆತ ಕರ್ನಾಟಕ್ಕೆ ಬಾರದಂತೆ ತಡೆ ನೀಡುವುದೇ ಆತನಿಗೆ ನೀಡಬಹುದಾದ ಶಿಕ್ಷೆಯಾಗಿದೆ.
ಸ್ನೇಹಕ್ಕೆ ಬದ್ಧ ಸಮರಕ್ಕೆ ಸಿದ್ಧ ಎನ್ನುವುದೇ ಹಿಂದೂ ಧರ್ಮದ ನಿಲುವು. ಧರ್ಮೋ ರಕ್ಷತಿ ರಕ್ಷಿತ:
ಏನಂತೀರೀ?
ನಿಮ್ಮವನೇ ಉಮಾಸುತ