16ನೇ ಶತಮಾನದಲ್ಲಿ ಮೊಘಲರು ಹೂಣರು ಶಕರು, ಡಚ್ಚರು, ಫೆಂಚರು ಸತವಾಗಿ ಭಾರತ ದೇಶದ ಮೇಲೆ ದಂಡೆತ್ತಿ ಬಂದು ಭಾರತ ದೇಶದ ಸಂಪತ್ತನ್ನು ಕೊಳ್ಳೆ ಹೊಡೆದುಕೊಂಡು ಹೋದರೂ, ಅತ್ಯಂತ ಸಂಪತ್ಭರಿತವಾದ ದೇಶವಾಗಿತ್ತು. ಅದರಲ್ಲೂ ಭಾರತದ ಸಾಂಬಾರು ಪದಾರ್ಥಗಳಿಗೆ ಯುರೋಪಿಯನ್ ರಾಷ್ಟ್ರಗಳಲ್ಲಿ ಚಿನ್ನದ ಬೆಲೆ ಇದ್ದದ್ದನ್ನು ಗಮನಿಸಿದ ಇಂಗ್ಲೇಂಡ್ ಮೂಲದ ಈಸ್ಟ್ ಇಂಡಿಯಾ ಕಂಪನಿ ಅರಬ್ಬಿ ಸಮುದ್ರದ ಮೂಲಕ, ಭಾರತದೊಂದಿಗೆ ಸಾಂಬಾರು ಪದಾರ್ಥಗಳಲ್ಲದೇ, ಹತ್ತಿ, ರೇಷ್ಮೆ, ಚಹಾ ಮತ್ತು ಅಫೀಮು ಮುಂತಾದ ಪರಾರ್ಥಗಳ ವ್ಯಾಪಾರ ಮಾಡುವ ಸಲುವಾಗಿ ಆಗಸ್ಟ್ 24, 1608 ರಂದು ಇಂದಿನ ಗುಜರಾತಿನ ಸೂರತ್ ಬಂದರಿನಲ್ಲಿ ಮೊತ್ತ ಮೊದಲಬಾರಿಗೆ ಭಾರತ ಉಪ ಖಂಡಕ್ಕೆ ಬಂದಿಳಿದರು.
ಅರಂಭದಲ್ಲಿ ವ್ಯಾಪಾರವನ್ನೇ ಮೂಲ ಉದ್ದೇಶವನ್ನಾಗಿಸಿಕೊಂಡು ನೂರಾರು ಸಣ್ಣ ಸಣ್ಣ ರಾಜ್ಯಗಳಾಗಿ ಹರಿದು ಹಂಚಿಹೋಗಿದ್ದ ರಾಜರುಗಳ ಸ್ನೇಹ ಸಖ್ಯವನ್ನು ಸಂಪಾದಿಸಿದ ನಂತರ ಕ್ರಮೇಣ ಆ ರಾಜರುಗಳ ನಡುವೆ ಪರಸ್ಪರ ವೈಮನಸ್ಯ ಬರುವಂತೆ ಮಾಡಿದ ಪರಿಣಾಮ, 1757 ರಲ್ಲಿ ಪ್ಲಾಸಿ ಯುದ್ಧದ ನಂತರ, ಬ್ರಿಟಿಷರು ಭಾರತದಲ್ಲಿ ತಮ್ಮ ಪ್ರಾಬಲ್ಯವನ್ನು ಸ್ಥಾಪಿಸಿದ್ದಲ್ಲದೇ, ಭಾರತವನ್ನು ತಮ್ಮ ವಸಾಹತುಶಾಹಿ ರಾಷ್ಟ್ರವನ್ನಾಗಿಸಿಕೊಳ್ಳಗೊಡಗಿದರು. 1857ರಲ್ಲಿ ಮಂಗಳ ಪಾಂಡೆ ಎಂಬ ಬ್ರಿಟಿಷ್ ಸೇನೆಯಲ್ಲಿದ್ದ ಸೈನಿಕ ಬ್ರಿಟೀಷರ ವಿರುದ್ಧ ತಿರುಗಿ ಬಿದ್ದು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಹುಟ್ಟು ಹಾಕಿದಾಗ, ಇನ್ನು ಮುಂದೆ ತಾವು ಈ ದೇಶವನ್ನು ಆಳುವುದು ಕಷ್ಟ ಎಂಬುದನ್ನು ಅರಿತ ಈಸ್ಟ್ ಇಂಡಿಯಾ ಕಂಪನಿ ಭಾರತದ ಸಂಪೂರ್ಣ ಅಧಿಕಾರವನ್ನು ಅಂದಿನ ಬ್ರಿಟಿಷ್ ರಾಣಿಗೆ ಸುಪರ್ದಿಗೆ ವಹಿಸಿದ ನಂತರ ಸುಮಾರು 89 ವರ್ಷಗಳ ಕಾಲ ಆಳಿದ ನಂತರ ಅಂತಿಮವಾಗಿ ಆಗಸ್ಟ್ 15, 1947 ರಂದು ಭಾರತ ದೇಶಕ್ಕೆ ಸ್ವಾತ್ರಂತ್ರ್ಯ ದೊರೆಯುವ ಮೂಲಕ 339ವರ್ಷಗಳ ಕಾಲದ ಬ್ರಿಟೀಷ್ ಆಡಳಿತಕ್ಕೆ ಕೊನೆಹಾಡಲಾಯಿತು.
ಈ ರೀತಿಯಾಗಿ ಬ್ರಿಟೀಷರಿಂದ ಭಾರತ ದೇಶಕ್ಕೆ ಸ್ವಾತ್ರಂತ್ರ್ಯ ಪಡೆದುಕೊಳ್ಳುವುದು ಸುಲಭದ ಕಾರ್ಯವಾಗಿರದೇ, ಲಕ್ಷಾಂತರ ದೇಶಭಕ್ತರು, ಕ್ರಾಂತಿಕಾರಿಗಳು ಹೋರಾಟದ ಫಲವಾಗಿ. ಈ ರೀತಿಯ ಹೋರಾಟವನ್ನು ನಾವುಗಳು ಇತಿಹಾಸದಲ್ಲಿ ಓದಿದ್ದೇವೆ ಮತ್ತು ನಾಟಕ ಮತ್ತು ಸಿನಿಮಾಗಳಲ್ಲಿ ಸಣ್ಣ ಸಣ್ಣ ತುಣುಕಾಗಿ ನೋಡಿದ್ದೇವೆ. ಆದರೆ, ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾರತೀಯರು ಬ್ರಿಟಿಷ್ ಸಾಮ್ರಾಜ್ಯದಿಂದ ಸ್ವಾತಂತ್ರ್ವನ್ನು ಪಡೆಯಲು ನಡೆಸಿದ ಸಂಪೂರ್ಣ ಉಗ್ರ ಹೋರಾಟವನ್ನು ಕಲಾತ್ಮಕವಾಗಿ ಸುಮಾರು 4 ಗಂಟೆಗಳ ಅವಧಿಯ ಕಾಲದಲ್ಲಿ ಒಂದೇ ವೇದಿಕೆಯ ಮೇಲೆ ನೃತ್ಯ ರೂಪಕದಲ್ಲಿ ನೋಡುವ ಸೌಭಾಗ್ಯವನ್ನು ಬೆಂಗಳೂರಿನ ಯಶವಂತಪುರದಲ್ಲಿ ಸುಮಾರು 5 ದಶಕಗಳಿಂದಲೂ ಕಲೆ ಮತ್ತು ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವಂತಹ ಶಾಂತಲಾ ಆರ್ಟ್ಸ್ ಅಕಾಡೆಮಿ ಇದೇ ಆಗಸ್ಟ್ 11 ಮತ್ತು 12 ರಂದು ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದದಲ್ಲಿ ಬೆಳಿಗ್ಗೆ ಮತ್ತು ಸಂಜೆ ಸುಮಾರು 120ಕ್ಕೂ ಹೆಚ್ಚಿನ ಕಲಾವಿದರು ಮತ್ತು ತಂತ್ರಜ್ಞರೊಂದಿಗೆ ನಾಲ್ಕು ಪ್ರದರ್ಶನಗಳನ್ನು ಪ್ರಸ್ತುತಪಡಿಸಲಿರುವುದು ಹೆಮ್ಮೆಯ ಸಂಗತಿಯಾಗಿದೆ.
80ರ ದಶಕದಲ್ಲೇ ಸತತವಾಗಿ 24 ಘಂಟೆಗಳ ಕಾಲ ಭರತನಾಟ್ಯಪ್ರದರ್ಶನ ಮಾಡಿ ಗಿನ್ನೆಸ್ ಬುಕ್ ದಾಖಲೆಯನ್ನು ಮಾಡಿದ್ದಂತಹ ವಿದ್ವಾನ್ ಪ್ರಸನ್ನ ಕಸ್ತೂರಿ ನಂತರ ವಿದೇಶಕ್ಕೆ ಹೆಚ್ಚಿನ ವ್ಯಾಸಂಗಕ್ಕೆಂದು ಹೋಗಿ ನಂತರ ಅಲ್ಲಿನವರಿಗೆ ತಮ್ಮ ಭಾರತೀಯ ನೃತ್ಯಕಲೆಗಳನ್ನು ಹೇಳುಕೊಡುವ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ. ಕಳೆದ ವರ್ಷ ಭಾರತದ ಅಮೃತ ಮಹೋತ್ಸವದ” ನೆನಪಿನಲ್ಲಿ ಅಮೆರಿಕಾದ ಸೈನ್ಟ್ ಲೂಯಿಸ್ ಪಟ್ಟಣದಲ್ಲಿ ಸಾವಿರಾರು ಪ್ರೇಕ್ಷಕರ ಸಮಕ್ಷಮದಲ್ಲಿ, ಆಗಸ್ಟ್ 13, 2022 ಶನಿವಾರದಂದು ಸುಪ್ರಸಿದ್ದ ಬ್ಲಾಂಚೆ ಎಂ. ಟೌಹಿಲ್ ಪರ್ಫಾರ್ಮಿಂಗ್ ಆರ್ಟ್ಸ್ ಸೆಂಟರ್ (Blanche M. Touhill Performing Arts Center) ಕಲಾ ಕೇಂದ್ರದಲ್ಲಿ ಸಮರ್ಪಣ – ಭಾರತದ ಸ್ವತಂತ್ರ ಸಂಗ್ರಾಮದ ಕಥಾನಕ – 2022 ಎಂಬ ಹೆಸರಿನಲ್ಲಿ ಅತ್ಯಂತ ಯಶಸ್ವಿಯಾಗಿ ಪ್ರದರ್ಶನಗೊಂಡ ನೃತ ರೂಪಕವನ್ನು ಈ ಬಾರಿಯ ಸ್ವಾತ್ರಂತ್ರ್ಯೋತ್ಸವದ ಸಮಯದಲ್ಲಿ ನಮ್ಮ ಬೆಂಗಳೂರಿನ ಚೌಡಯ್ಯ ಸ್ವಾರಕ ಭವನದಲ್ಲಿ ಆಯೋಜಿಸಲಾಗಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ.
ಈ ಸಮರ್ಪಣ ನೃತ್ಯ ರೂಪಕದ ಮೂಲಕ ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾರತೀಯರು ಬ್ರಿಟಿಷ್ ಸಾಮ್ರಾಜ್ಯದಿಂದ ಸ್ವಾತಂತ್ರ್ವನ್ನು ಪಡೆಯಲು ನಡೆಸಿದ ಉಗ್ರ ಹೋರಾಟವನ್ನು ಕಲಾತ್ಮಕವಾಗಿ ನಿರೂಪಿಸಲಾಗಿದೆ. ಇದೊಂದು ಎಣೆಯಿಲ್ಲದ ನೃತ್ಯ ರೂಪಕವಾಗಿದ್ದು, ಇದರಲ್ಲಿ ಕಲಾವಿದರು ಭಾರತ ಮಾತೆಯ ಮಣ್ಣಿನ ಮೇಲೆ ಬ್ರಿಟಿಷರ ವಸಾಹತುಶಾಹಿಯನ್ನು ಗಮನದಲಿಟ್ಟುಕೊಂಡು ಎಳೆ ಎಳೆಯಾಗಿ ಕಲಾಭಿಮಾನಿಗಳ ಮುಂದೆ ಪ್ರದರ್ಶಿಸಲಿದ್ದಾರೆ. ಈಗಾಗಲೇ ತಿಳಿಸಿದಂತೆ 16 ನೇ ಶತಮಾನದಲ್ಲಿ ಬ್ರಿಟಿಷರ ಈಸ್ಟ್ ಇಂಡಿಯಾ ಕಂಪೆನಿಯ ಆಗಮನದಿಂದ ಆರಂಭವಾಗಿ 1860ರಲ್ಲಿ ಬ್ರಿಟಿಷ್ದರು ದಬ್ಬಾಳಿಕೆಯ ಮೂಲಕ ಭಾರತದ ಪೂರ್ವ-ಪಶ್ಚಿಮ, ಉತ್ತರ-ದಕ್ಷಿಣ ಹೀಗೆ ಎಲ್ಲಾ ಭಾಗದ ಭಾರತೀಯರ ಸ್ವಾತಂತ್ರ್ಯ ಹೋರಾಟಗಾರರನ್ನು ಹತ್ತಿಕ್ಕುವ ಪ್ರಯತ್ನ ಅದಕ್ಕೆ ಸ್ವಾತ್ರಂತ್ಯ್ರ ಹೋರಾಟಗಾರರ ಪ್ರತಿರೋಧದ ಜೊತೆಯಲ್ಲಿ ಹೋರಾಟದ ಪರಾಕಾಷ್ಟೆ ಮುಟ್ಟಿದ ಘಟನೆಗಳು ಮತ್ತು ಲಕ್ಷಾಂತರ ಹೋರಾಟಗಾರರ ತ್ಯಾಗ ಮತ್ತು ಬಲಿದಾನಗಳಿಗೆ ಮಣಿದು ಅಂತಿಮವಾಗಿ 1947 ರಲ್ಲಿ ಭಾರತ ಮಾತೆಗೆ ದಕ್ಕಿದ ಸ್ವಾತಂತ್ರ್ಯ, ಈ ಎಲ್ಲಾ ಸನ್ನಿವೇಶಗಳು ಸಮರ್ಪಣದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ವೇದಿಕೆಯ ಮೇಲೆ ತರಲು ಎಲ್ಲಾ ಕಲಾವಿದರುಗಳು ಉತ್ಶಾಹದಿಂದಿದ್ದಾರೆ.
ಈ ರೂಪಕ ಮಾತೃಭೂಮಿಗಾಗಿ ಭರಿಸಲಾಗದ ತ್ಯಾಗ ಮಾಡಿದ, ಗುಲಾಮಗಿರಿ ಸಂಕೋಲೆಗಳಿಂದ ಬಿಡಿಸಿದ ಕೆಚ್ಚೆದೆಯ ಧ್ಯೆರ್ಯಶಾಲಿ ಪುರಷರು ಮತ್ತು ಮಹಿಳಾ ಮಣಿಗಳ ಶೌರ್ಯದ ಹೋರಾಟವನ್ನು ನಮ್ಮ ಕಣ್ಣಿಗೆ ಕಟ್ಟುವಂತೆ ಮಾಡುತ್ತದೆ ಎನ್ನುವುದರಲ್ಲಿ ಸಂದೇಹವೇ ಇಲ್ಲದೇ, ಈ ರೂಪಕದ ಮೂಲಕ ಹಿಂದೆಂದೂ ನೋಡಿರಿದ ಅಧ್ಭುತವಾದ ಇತಿಹಾಸವನ್ನು ನಮ್ಮ ಇಂದಿನ ಪೀಳಿಗೆಗೆ ತೋರಿಸುವ ವಿಶೇಷ ಪ್ರಯತ್ನವಾಗಿದ್ದು ಗುರುಗಳಾದ ಪ್ರಸನ್ನರವರು ಕಥೆ ಚಿತ್ರಕತೆ ಸಾಹಿತ್ಯವನ್ನು ರಚಿಸಿ, ನೃತ್ಯ ಸಂಯೋಜನೆಯನ್ನು ಮಾಡಿದ್ದರೆ, ಈ ಅಭೂತಪೂರ್ವ ನೃತ್ಯ ರೂಪಕಕ್ಕೆ ಭಾರತ ದೇಶದ ಖ್ಯಾತ ಅನುಭವಿ ಸಂಗೀತಗಾರರಾದ ಶ್ರೀ ತಿರುಮಲೆ ಶ್ರೀನಿವಾಸ್ (ಚಾಮಿ) ರವರು ಸಂಗೀತವನ್ನು ಸಂಯೋಜಿಸಿದ್ದಾರೆ.
ಸಮರ್ಪಣೆಯಲ್ಲಿ ಮೂಡಿಬರಲಿರುವ ಐತಿಹಾಸಿಕ ಘಟನೆಗಳನ್ನು ಭಾರತ, ಅಮೇರಿಕಾ ದೇಶದ ಸುಮಾರು 120ಕ್ಕೂಹೆಚ್ಚು ಕಲಾವಿದರು ಒಗ್ಗೂಡಿ ಭಾರತದ ವಿಭಿನ್ನ ಭಾಷೆಗಳಾದ ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಬೆಂಗಾಲಿ ಭಾಷೆಯ ಸಂಭಾಷಣೆಗಳು ಮತ್ತು ಹಾಡುಗಳೊಂದಿಗೆ ಎಲ್ಲರ ಮನರಂಜಿಸುವುದಲ್ಲದೇ, ಅವರಲ್ಲಿ ದೇಶಭಕ್ತಿಯನ್ನು ಜಾಗೃತಿಗೊಳಿಸುವ ಸಲುವಾಗಿ ಶಾಂತಲಾ ನೃತ್ಯ ಅಕಾಡೆಮಿಯಲ್ಲದೇ, ಬೆಂಗಳೂರಿನ ಹತ್ತಕ್ಕೂ ಹೆಚ್ಚು ನೃತ್ಯ ಶಾಲೆ, ಸಂಗೀತ ಹಾಗು ನಾಟಕ ಸಂಸ್ಥೆಗಳು ಕೈ ಜೋಡಿಸಿರುವುದು ವಿಶೇಷವಾಗಿದೆ.
ಸ್ವಾತ್ರಂತ್ಯ್ರಕ್ಕಾಗಿ ಕ್ರಾಂತಿಕಾರಿ ಉಗ್ರಹೋರಾಟವೇ ಅಂತಿಮವಾಗಿರದೇ, ಅಹಿಂಸಾತ್ಮಕವಾಗಿ, ಸತ್ಯಾಗ್ರಹ, ಅಸಹಕಾರ ಚಳುವಳಿಗಳ ಮೂಲಕವೂ ಶಾಂತಿಯುತವಾಗಿ ಹೇಗೆ ಒತ್ತಡವನ್ನು ಹೇರಬಹುದು ಎಂಬುದನ್ನು ಈಗಾಗಲೇ, ಭಾರತದಲ್ಲಿ ಮಹಾತ್ಮಾಗಾಂಧಿ, ಅಮೇರಿಕಾದಲ್ಲಿ ಮಾರ್ಟಿನ್ ಲೂಥರ್ ಕಿಂಗ್, ದಕ್ಷಿಣ ಆಫ್ರಿಕಾದಲ್ಲಿ ನೆಲ್ಸನ್ ಮಂಡೇಲಾ ಹೀಗೆ ವಿಶ್ವದ ಅನೇಕ ನಾಯಕರು ತೋರಿಸಿಕೊಟ್ಟಿರುವುದನ್ನೂ ಸಹಾ ಸಮರ್ಪಣಾ ರೂಪದಕ್ಕಿ ಅಳವಡಿಸಿಕೊಂಡಿರುವುದು ಗಮನಾರ್ಹವಾಗಿದೆ
ಅನಿವಾಸಿ ಭಾರತೀಯ ಅದರಲ್ಲೂ ವಿಶೇಷವಾಗಿ ಕನ್ನಡಿಗರಾದ ಶ್ರೀ ಪ್ರಸನ್ನ ಕಸ್ತೂರಿಯವರು ಅವರು ಭಾರತದ ಹೆಮ್ಮೆಯ ವಿಚಾರಗಳನ್ನು ವಿಶ್ವಕ್ಕೆ ತಿಳಿಸುವ ಮಹತ್ತರ ಕಾರ್ಯವನ್ನು ಈ ರೀತಿಯಾಗಿ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯವಾಘಿದೆ. ಭಾರತದ ಪ್ರೌಢ ಸಾಧನೆಗಳ ಪರಿಚಯವನ್ನು ಪಾಶ್ಚಿಮಾತ್ಯರಿಗೆ ಅರಿವು ಮಾಡಿಕೊಡುವ ನಿಟ್ಟಿನಲ್ಲಿ ಬಹಳ ಯಶಸ್ವಿಯೂ ಆಗಿದ್ದಾರೆ. ಗುರೂಜಿ ಪ್ರಸನ್ನ ಅವರು ಅಮೇರಿಕಾದಲ್ಲಿ 1994ರಿಂದ ಕಲಾ ಸೇವೆಯನ್ನು ನಿರಂತರವಾಗಿ ಮುಂದುವರೆಸಿಕೊಂಡು ಭಾರತೀಯ ನೃತ್ಯ ಪ್ರದರ್ಶನ ಕಲೆಯ ಮೂಲಕ ಭಾರತದ ಹಲವಾರು ಸಾಹಿತ್ಯತ್ನಕ ಸಾಧನೆಗಳ ಪರಿಚಯ ಮಾಡಿಸಿಕೊಟ್ಟಿದ್ದಾರೆ. ಶ್ರೀ ಪ್ರಸನ್ನ ಮತ್ತು ಶ್ರೀಮತಿ ಸೀಮಾ ಪ್ರಸನ್ನಾ ದಂಪತಿಗಳು ಕನ್ನಡದ ಪ್ರಖ್ಯಾತ ಕವಿ ಶ್ರೇಷ್ಠರುಗಳಾದ ಕುವೆಂಪು, ಮಾಸ್ತಿ, ಬೇಂದ್ರೆ, ಪುತಿನ, ಕೆ.ಎಸ್.ಎನ್ ಹಾಗೂ ಶ್ರೀರಂಗ, ಅಲ್ಲದೆ, ೧೫ನೇ ಶತಮಾನದ ಕುಮಾರ ವ್ಯಾಸ, ರಾಘವಾಂಕ ಅವರ ಕಾವ್ಯಗಳ ಪರಿಚಯವವನ್ನು ಅಮೆರಿಕಾದ ಜನರಿಗೆ ತೋರಿಸಿದ್ದಾರೆ. ತಮಿಳಿನ ಶ್ರೇಷ್ಠ ಕಾವ್ಯಗಳಾದ – ಶಿಲಪ್ಪದಿಕ್ಕಾರಮ್, ಬೆಂಗಾಲಿನ ಟಾಗೋರ್ ಅವರ ಚಂಡಾಲಿಕ, ಹಿಂದಿಯ ತುಳಸಿ ರಾಮಾಯಣ, ಅಮಿರ್ ಖುಸ್ರೋ ಅವರ ರಚನೆ ಹಾಗು ಮತ್ತಿತರ ಮಹಾನ್ ಭಾರತೀಯ ಪರಂಪರೆಯನ್ನು ಪಾಶ್ಚಿಮಾತ್ಯರಿಗೆ ಅತ್ಯಂತ ಪರಿಣಾಮಕಾಯಾಗಿ ಪರಿಚಯಿಸಿಸಿರುವ ಹೆಗ್ಗಳಿಕೆ ಅವರದ್ದಾಘಿದೆ, ಅವರ ತನು ಪರದೇಶದಲ್ಲಿದ್ದರೂ ಮನ ಮಾತ್ರಾ ಸಂಪೂರ್ಣವಾಗಿ ಭಾರತೀಯತೆಯ ಮೃದು ಶಕ್ತಿಯನ್ನು (ಸಾಫ್ಟ್ ಪವರ್) ಮೇಲೆ ಎತ್ತಿ ಹಿಡಿದಿದ್ದಾರೆ ಎಂದರೂ ಅತಿಶಯವಲ್ಲ. ಇಂತಹ ಸಾಧನೆಗಳಿಗಾಗಿಯೇ ಪ್ರಪಂಚಾದ್ಯಂತ ವಿವಿಧ ಪ್ರಶಸ್ತಿ ಪುರಸ್ಕಾಗಳಿಗೆ ಪಾತ್ರರಾಗಿರುವುದಲ್ಲದೇ, ಅಮೇರಿಕಾದ ಪ್ರಸಿದ್ಧ ಅಕ್ಕ ಸಮ್ಮೇಳನದಲ್ಲಿ ನಾಲ್ಕು ಬಾರಿ ಪ್ರದಶನ ನೀಡಿರುವುದು ಅವರ ಸಾಧನೆಯಾಗಿದೆ.
ಇದೇ ಆಗಸ್ಟ್ 11 ಮತ್ತು 12 ರಂದು ಬೆಂಗಳೂರಿನ ಚೌಡಯ್ಯ ಸ್ಮಾರಕ ಭವದದಲ್ಲಿ ಬೆಳಿಗ್ಗೆ ಮತ್ತು ಸಂಜೆ ಆಯೋಜಿಸಲಾಗಿರುವ ಸಮರ್ಪಣ ಐತಿಹಾಸಿಕ ನೃತ್ಯ ನಾಟಕ ಸಂಗೀತ ಸಂಭ್ರಮದಲ್ಲಿ ಕುಟುಂಬ ಸಮೇತ ಭಾಗಿಗಳಾಗುವುದು ಭಾರತ ಮಾತೆಯ ಸ್ವಾತಂತ್ರ್ಯ ಹೋರಾಟಕ್ಕಾಗಿ ಹೋರಾಡಿದ ವೀರರಿಗೆ, ಅವರ ದೇಶ ಪ್ರೇಮಕ್ಕೆ ಸಲ್ಲಿಸುತ್ತಿರುವ ಗೌರವ ಹಾಗು ದೇಶಕ್ಕಾಗಿ, ಸ್ವಾತಂತ್ರ್ಯಕ್ಕಾಗಿ ಪ್ರಪಂಚದಾದ್ಯಂತ ತಮ್ಮ ಪ್ರಾಣಾರ್ಪಣೆ ಮಾಡಿದ ವೀರಯೋಧರಿಗೆ ಸಲ್ಲಿಸುತ್ತಿರುವ ಅತಿ ದೊಡ್ಡ ಕಲಾ ಕೃತಜ್ಞತೆಯನ್ನು ಸಲ್ಲಿಸುವುದು ಎಂದರೂ ತಪ್ಪಾಗದು. ಸ್ವಾತಂತ್ರ್ಯ ನಮ್ಮ ಜನ್ಮ ಸಿದ್ಧ ಹಕ್ಕು. ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂಬ ತಿಲಕರ ಘೋಷಣೆಯನ್ನು ಖುದ್ದಾಗಿ ಕೇಳಿ ಅದರ ಅನುಭವಿಸುವುದಕ್ಕಾಗಿ ನಾನು ಆ ಕಾರ್ಯಕ್ರಮದಲ್ಲಿ ಇರ್ತೀನಿ, ನೀವು ನನ್ನ ಜೊತೆ ಕಾರ್ಯಕ್ರಮಕ್ಕೆ ಬರ್ತೀರೀ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
ಕಾರ್ಯಕ್ರಮದ ಕುರಿತಾದ ಹೆಚ್ಚಿನ ಮಾಹಿತಿ ಮತ್ತು ಟಿಕೆಟ್ ವಿವರಗಳಿಗೆ ಶಾಂತಲಾ ಆರ್ಟ್ಸ್ ಟ್ರಸ್ಟಿನ ಕಾರ್ಯದರ್ಶಿಶಿಗಳಾದ ಶ್ರೀ ಕೆ. ಆರ್. ವಿ. ಪುಲಿಕೇಶಿ ( 94480 74748) ಅಥವಾ http://www.shantala.org ಮೂಲಕವೂ ಅವರನ್ನು ಸಂಪರ್ಕಿಸಬಹುದಾಗಿದೆ.
A very good article
LikeLiked by 1 person
ಛೇ, ಸುವರ್ಣಾವಕಾಶ ತಪ್ಪಿತಲ್ಲ! ಲೇಖನ ಓದಿದ್ದೇ ಈಗ 🙁🙁
LikeLiked by 1 person