ಇಂದು ಬೆಳಿಗ್ಗೆ ಎದ್ದು ವಿಜಯ ಕರ್ನಾಟಕ ಪತ್ರಿಕೆಯ ಮುಖ ಪುಟದ ಈ ವಿಷಯ ಓದುತ್ತಿದ್ದಂತೆಯೇ ಬಹಳ ದಿನಗಳಿಂದಲೂ ಬರೆಯಬೇಕೆಂದಿದ್ದ ವಿಚಾರಕ್ಕೆ ಪೂರಕವೆನಿಸಿ ಈ ಲೇಖನವನ್ನು ನಿಮ್ಮೊಂದಿಗೆ ಪ್ರಸ್ತುತ ಪದಿಸುತ್ತಿದ್ದೇನೆ.
ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಸುಮಾರು 2500 ಎಂಜಿನಿಯರಿಂಗ್ ಕಾಲೇಜುಗಳು, 1400 ಪಾಲಿಟೆಕ್ನಿಕ್ಗಳಿವೆ. ಈ ಕಾಲೇಜುಗಳಿಂದಾಗಿ ಭಾರತದಲ್ಲಿ ವಾರ್ಷಿಕವಾಗಿ ಸರಿಸುಮಾರು 15 ಲಕ್ಷ ಎಂಜಿನಿಯರಿಂಗ್ ಪದವೀಧರರು ಹೊರಬರುತ್ತಿದ್ದಾರೆ. ಇನ್ನು ಕರ್ನಾಟಕದಲ್ಲೇ ಸುಮರು 542 ಎಂಜಿನಿಯರಿಂಗ್ ಕಾಲೇಜುಗಳಿದ್ದು ಅವುಗಳಲ್ಲಿ 134 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳದರೆ, ಖಾಸಗೀ ಕಾಲೇಜುಗಳೇ 407 ಇದ್ದು ಸಿಂಹಪಾಲನ್ನು ಪಡೆದಿವೆ. ಇನ್ನು ಬೆಂಗಳೂರಿನಲ್ಲೇ ಸುಮಾರು 150 ಇಂಜಿನಿಯರಿಂಗ್ ಕಾಲೇಜುಗಳಿದ್ದು ಅದರಲ್ಲಿ ಕೇವಲ 9% ಸರ್ಕಾರಿ ಕಾಲೇಜುಗಳಾದರೆ ಇನ್ನು ಕಾಲೇಜುಗಳಲ್ಲಿ 91% ಖಾಸಗಿ ಮಾಲೀಕತ್ವದ ಕಾಲೇಜುಗಳಾಗಿದ್ದು ಇಂದಿನ ಲೇಖನದ ಶೀರ್ಷಿಕೆಯಂತೆ ನಾಯಿಕೊಡೆಗಳಂತೆ ಗಲ್ಲಿಗೊಂದರಂತೆ ಹಬ್ಬಿಕೊಂಡಿದೆ.
ಈ ಪರಿಯಾಗಿ ಇಂಜೀನಿಯರಿಂಗ್ ಕಾಲೇಜುಗಳು ಕರ್ನಾಟಕ ಮತ್ತು ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲೇ ಆರಂಭವಾಗಲು ಕಾರಣವೇನು? ಎಂದು ಯೋಚಿಸಿದಾಗ, 90ರ ದಶಕದಲ್ಲಿ ಜಾಗತೀಕರಣದಿಂದಾಗಿ ವಿದೇಶೀ ಬಹುರಾಷ್ಟ್ರೀಯ ಕಂಪನಿಗಳನ್ನು ಕೆಂಪುಹಾಸಿನ ಮೂಲಕ ಸ್ವಾಗತಿಸಿದ ಪರಿಣಾಮ, ಭಾರತದಲ್ಲಿ ಉತ್ಕೃಷ್ಟ ದರ್ಜೆಯ ತಂತ್ರಜ್ಞರು ಅತ್ಯಂತ ಕಡಿಮೆ ಸಂಬಳದಲ್ಲಿ ದೊರಕುವ ಕಾರಣ ಅನೇಕ ಕಂಪನಿಗಳು ಭಾರತದಲ್ಲಿ ಅವರ ಮಾಹಿತಿ ತಂತ್ರಜ್ಞಾನದ ಕಂಪನಿಗಳನ್ನು ಅರಂಭಿಸಿ ನಾಲ್ಕಂಕಿ ಸಂಬಳಕ್ಕೆ ಕೆಲಸ ಮಾಡುತ್ತಿದ್ದವರಿಗೆಲ್ಲಾ ಐದಾರಂಕಿಯ ಸಂಬಳ ಕೊಡಲಾರಂಭಿಸಿದ ಕೂಡಲೇ ಎಲ್ಲರೂ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡಲು ಮುಗಿಬಿದ್ದರು. ಬಾಯಾರಿದಾಗ ಕುಡಿಯಲು ನೀರು ಕೇಳಿದರೆ, ನೀರಿನ ಜೊತೆಗೆ ಬೆಲ್ಲವನ್ನೂ ಕೊಡುವಷ್ಟು ವಿಶಾಲ ಹೃದಯದ ಕರ್ನಾಟಕದದ್ದಾದರೆ, ಇನ್ನು ಭಾರತದ ಇತರೆಲ್ಲಾ ನಗರಳಿಗೆ ಹೋಲಿಸಿದಲ್ಲಿ ಬೆಂಗಳೂರಿನ ಹವಾಮಾನ ಅತ್ಯಂತ ಉತ್ಕೃಷ್ಟವಾಗಿರುವ ಕಾರಣ ಬೆಂಗಳೂರು ಭಾರತದ ಸಿಲಿಕಾನ್ ಸಿಟಿಯಾಗಿ ಮಾರ್ಪಾಟಾಯಿತು.
ಅಲ್ಲಿಯವರೆಗೂ ಬೆಂಗಳೂರಿನಲ್ಲಿ ಇದ್ದ ಮೂರ್ನಾಲ್ಕು ಸರ್ಕಾರಿ ಇಂಜಿನೀಯರಿಂಗ್ ಕಾಲೇಜು ಮತ್ತು ಬೆರಳೆಣಿಕೆಯ ಖಾಸಗಿ ಕಾಲೇಜುಗಳು ಈ ಬಹುರಾಷ್ಟ್ರೀಯ ಕಂಪನಿಗಳ ಅಗತ್ಯಕ್ಕೆ ತಕ್ಕಂತೆ ತಂತ್ರಜ್ಞರ ಬೇಡಿಕೆಯನ್ನು ಈಡೇರಿಸಲು ಸಾಧ್ಯವಾಗದೇ ಹೋದಾಗ, ಬಹುರಾಷ್ಟ್ರೀಯ ಕಂಪನಿಗಳು ಮತ್ತು ಇಂಜೀನಿಯರಿಂಗ್ ಕಾಲೇಜುಗಳು ಚಿನ್ನದ ಮೊಟ್ಟೆ ಇಡುವ ಕೋಳಿಗಳು ಎಂಬ ಸೂಕ್ಷ್ಮವನ್ನು ಅರಿತ ಕೆಲ ಮಠಾಧಿಪತಿಗಳು ಮತ್ತು ರಾಜಕೀಯ ಧುರೀಣರು ಈ ಸುವರ್ಣಾವಕಾಶವನ್ನು ಎರಡೂ ಕೈಗಳಲ್ಲಿ ಬಾಚಿಕೊಂಡು ನಾಯಿಕೊಡೆಗಳಂತೆ ಇಂಜಿನೀಯರಿಂಗ್ ಕಾಲೇಜುಗಳನ್ನು ಆರಂಭಿಸಿದರು. ಈ ರೀತಿ ನಾಯಿಕೊಡೆಯಂತೆ ಗಲ್ಲಿಗೊಂದು ಕಾಲೇಜುಗಳು ಆರಂಭವಾದಾಗ, ಯಾವ ಕಾಲೇಜು ಚೆನ್ನಾಗಿದೆ? ಯಾವ ಕಾಲೇಜಿನಲ್ಲಿ ಚೆನ್ನಾಗಿ ಪಾಠ ಮಾಡುತ್ತಾರೆ? ಯಾವ ಕಾಲೇಜಿನಲ್ಲಿ ಕಲಿತರೆ ತಮ್ಮ ಮಕ್ಕಳ ಬುದ್ಧಿ ಹೆಚ್ಚುತ್ತದೆ? ಎನ್ನುವುದಲ್ಲವನ್ನೂ ಗಾಳಿಗೆ ತೂರಿದ ಪೋಷಕರು. ಯಾವ ಕಾಲೇಜು ತಳುಕು ಬಳುನಿಂದ ಕೂಡಿದ್ದು, ಬಹುರಾಷ್ಟ್ರೀಯ ಕಂಪನಿಗಳನ್ನು ಆಕರ್ಷಿಸಿ ತಮ್ಮ ಮಕ್ಕಳಿಗೆ ಆರಂಭದಿಂದಲೇ, ಆರಂಕಿಯ ಸಂಬಳ, ವಿದೇಶೀ ಪ್ರವಾಸ ಮಾಡಿಸಿ ಐಶಾರಾಮ್ಯ ಜೀವನ ಮಾಡಲು ಅನುವು ಮಾಡಿಕೊಡುತ್ತವೋ ಅಂತಹ ಕಾಲೇಜುಗಳಿಗೇ, ಪೋಷಕರು ತಮ್ಮ ಮಕ್ಕಳನ್ನು ಕಾಲೇಜುಗಳು ಕೇಳಿದಷ್ಟು ಹಣವನ್ನು ನೀಡಿ ಈ ಇಂಜೀನಿಯರಿಂಗ್ ಕಾಲೇಜುಗಳಿಗೆ ಸೇರಿಸುವ ಮೂಲಕ ಕಾಲೇಜು ಆಡಳಿತ ಮಂಡಳಿಯ ತಿಜೋರಿಯನ್ನು ತುಂಬಿಸ ತೊಡಗಿದವು.
ಇಡೀ ದೇಶಕ್ಕೇ ಮಾದರಿಯಾಗುವಂತೆ Common Entrance Test (CET) ನಡೆಸಿ, ಅರ್ಹತೆಯ ಆಧಾರದ ಮೇಲೆ ಇಂಜಿನೀಯರಿಂಗ್ ಸೀಟುಗಳನ್ನು ಹಂಚುವ ಅತ್ಯಂತ ಪಾರದರ್ಶಿಕವಾದ ವ್ಯವಸ್ಥೆಯನ್ನು ಪ್ರಥಮಬಾರಿಗೆ ಕರ್ನಾಟಕದಲ್ಲಿ ಜಾರಿಗೆ ತಂದು ಜನಸಾಮಾನ್ಯರಿಗೆ ಕೈಗೆಟುಕುವ ಬೆಲೆಯಲ್ಲಿ ಇಂಜಿನೀಯರಿಂಗ್ ಸೀಟು ಸಿಗುವ ವ್ಯವಸ್ಥೆ ಕರ್ನಾಟಕದಲ್ಲಿ ಜಾರಿಗೆಯಲ್ಲಿದೆ.
ಆದರೆ CET ಮೂಲಕ ವಿದ್ಯಾರ್ಥಿಗಳನ್ನು ಸೇರಿಸಿಕೊಂಡಲ್ಲಿ ತಮ್ಮ ತಿಜೋರಿ ತುಂಬುದಿಲ್ಲ ಎಂಬ ಕಾರಣದಿಂದ ಖಾಸಗೀ ಇಂಜಿನೀಯರಿಂಗ್ ಕಾಲೇಜುಗಳ ಒಕ್ಕೂಟವು Comedk ಎಂಬ ಮತ್ತೊಂದು ಪರೀಕ್ಷೆಯನ್ನು ನಡೆಸಿ ಸಿಇಟಿಯ ಎರಡರಷ್ಟು ಬೆಲೆಗೆ ಸೀಟುಗಳನ್ನು ಹಂಚಲಾರಂಭಿಸಿದರು. ಹಾಗಾಗಿಯೇ ನಾನು ತಮಾಷೆಗಾಗಿ ಇದನ್ನೆಲ್ಲಾ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡುವುದರೊಂದಿಗೆ ಹೋಲಿಸಿ, CET Normal Delivery, Comedk-Cesarean Delivery, Management Quota- Complicated Cesarean Delivery ಎಂದು ಹೇಳುತ್ತಿರುತ್ತೇನೆ.
ಈಗಿನ ಮಕ್ಕಳ ಮನಸ್ಥಿತಿ ಹೇಗಾಗಿದೆ ಎಂದರೆ, ಕಷ್ಟ ಪಟ್ಟು ಓದದೇ, ಪಿಯೂಸಿಯಲ್ಲೂ ಮತ್ತು ಸಿಇಟಿಯಲೂ ಕೇವಲ 60-70% ತೆಗೆದುಕೊಂಡು 50-60 ಸಾವಿರಕ್ಕೂ ಅಧಿಕ ರ್ಯಾಂಕ್ ಗಳಿಸಿದ ಮೇಲೂ ಅವರೆಲ್ಲರಿಗೂ ಹಣದ ಥೈಲಿ ಎಣಿಸಬಲ್ಲ computer Science Engineeringಗೇ ಬೇಕು ಮತ್ತು ಅವರು ಓದುವ ಕಾಲೇಜುಗಳು ಪ್ರತಿಷ್ಠಿತ ಕಾಲೇಜುಗಳಾಗಿದ್ದು, ಅಲ್ಲಿನ campus selectionಗೆ ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಗಳು ಬಂದು ಇವರಿಗೆ ಆರಂಭದಲ್ಲೇ ಲಕ್ಷಾಂತರ ಸಂಬಳವನ್ನು ಕೊಡಬೇಕು ಎಂದೇ ಎಣಿಸುವುದು ನಿಜಕ್ಕೂ ವಿಪರ್ಯಾಸವಾಗಿದೆ. ಪ್ರತಿಷ್ಠಿತ ಕಾಲೇಜುಗಳಲಿ ಲಕ್ಷಾಂತರ ಫೀ ಕಟ್ಟಿ ಪಿಯೂಸಿಗೆ ಸೇರಿಕೊಂಡು ನಂತರ ಮತ್ತೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ Private Tutionಗಳಿಗೆ ಹೋಗಿಯೂ ಕೇವಲ 60-70% ತೆಗೆದುಕೊಂಡವರು, ಪ್ರತಿಷ್ಟಿತ ಇಂಜಿನೀಯರಿಂಗ್ ಕಾಲೇಜಿನಲ್ಲಿ Computer Science Engineering ಸೇರಿಕೊಂಡ ತಕ್ಷಣವೇ ಹೇಗೆ ಅಧಿಕ ಅಂಕಗಳನ್ನು ತೆಗೆದುಕೊಳ್ಳಬಹುದು ಎಂದು ಯೋಚಿಸುತ್ತಾರೆ? ಎನ್ನುವುದೇ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. ಹಾಗೆ ಓದುವವರು ಪಿಯೂಸಿಯಲ್ಲಿಯೇ ಚೆನ್ನಾಗಿ ಓದಿ ಸಿಇಟಿ ಮೂಲಕವೇ ಸೀಟ್ ಪಡೆದುಕೊಂಡು ಪೋಷಕರಿಗೆ ಆರ್ಥಿಕವಾಗಿ ಭಾರವನ್ನು ತಪ್ಪಿಸಬಹುದಲ್ಲವೇ? ಎನ್ನುವುದು ಬಹುತೇಕ ಪೋಷಕರ ಅಳಲಾಗಿದೆ.
ಇನ್ನು ಪೋಷಕರೋ, ಮಕ್ಕಳಿಗೆ ಸೂಕ್ತವಾದ ವಿದ್ಯಾಭ್ಯಾಸ ಕೊಡಿಸಬೇಕು ಎನ್ನುವುದಕ್ಕಿಂತಲೂ ಹೂಡಿಕೆಯ ಮೇಲಿನ ಲಾಭ (ROI) ಎಂಬ ಅಂಶವನ್ನು ಮನದಲ್ಲಿಟ್ಟುಕೊಂಡು ಸಾಲವೋ ಸೋಲವೋ ಮಾಡಿ ಮಕ್ಕಳು ಕೇಳಿದಂತಹ ಕಾಲೇಜುಗಳಲ್ಲಿ ಅವರ ಮೆಚ್ಚಿನ ಕೋರ್ಸುಗಳಿಗೇ ಸೇರಿಸಲು ಮುಂದಾದ ಕಾರಣ ಈ ಇಂಜೀನಿಯರಿಂಗ್ ಕಾಲೇಜುಗಳು ಸಹಾ Computer Science ಕೋರ್ಸನ್ನು Information Science, Software Engineering, Data Science and Analytics, Machine Learning, Artificial Intelligence, Networking, Cyber Security, Mobile and Web Computing, Human-Computer Interaction ಹೀಗೆ ನಾನಾ ವಿಭಾಗಗಳಾಗಿ ವಿಂಗಡಿಸಿ ಜನರನ್ನು ಮರಳು ಮಾಡಿಕೊಂಡ ಕಾರಣವೇ ನಾಯಿಕೊಡೆಗಳಂತೆ ಇಂಜಿನೀಯರಿಂಗ್ ಕಾಲೇಜುಗಳು ಹುಟ್ಟಿಕೊಂಡಿವೆ.
ಇತ್ತೀಚಿನ ಕೆಲವು ವರ್ಷಗಳಿಂದ ಇಂಜಿನೀಯರಿಂಗ್ ಕಾಲೇಜುಗಳು PUC, CET, ComedK ಫಲಿತಾಂಶ ಬರುವುದಕ್ಕೆ ಮುಂಚೆಯೇ ತಮ್ಮ ಕಾಲೇಜುಗಳ Admission Open ಮಾಡಿಕೊಂಡು ತರಕಾರಿ ವ್ಯಾಪಾರದಂತೆ ನಾಲ್ಕು ವರ್ಷದ ಕೋರ್ಸಿಗೆ ಇಷ್ಟು ಲಕ್ಷ ರೂಪಾಯಿಗಳು ಎಂದು ಚೌಕಾಸಿ ತರಕಾರಿ ವ್ಯಾಪಾರದಂತೆ ಇಳಿದಿದ್ದು, PUC, CET, ComedK ಫಲಿತಾಂಶ ಬಂದ ನಂತರ ಅವುಗಳ ಬೆಲೆ ಐದಾರು ಪಟ್ಟು ಹೆಚ್ಚಾಗಿಸಿ ಕೃತಕ ಕೊರತೆಯನ್ನು ಉಂಟು ಮಾಡುವ ಕಾರಣ ಬಹುತೇಕ ಪೋಷಕರು CET, ComedK ಫಲಿತಾಂಶಕ್ಕೂ ಕಾಯದೆ ತಮ್ಮ ಮಕ್ಕಳನ್ನು ಕಾಲೇಜುಗಳೊಂದಿಗೆ ಚೌಕಾಸಿ ಮಾಡಿ ತಮ್ಮ ಮಕ್ಕಳನ್ನು ಸೇರಿಸುತ್ತಿರುವುದು ನಿಜಕ್ಕೂ ಕಳವಳಕಾರಿಯಾಗಿದೆ.
ಹೀಗೆ ಕಾಸಿಗೊಂದು ಕವಡೆಗೆ ಎರಡು ಎನ್ನುವಷ್ಟು ಸಂಖ್ಯೆಯಲ್ಲಿ ಇಂಜಿನಿಯರ್ಗಳು ನಮ್ಮ ದೇಶದಲ್ಲಿ ಹೊರಬಂದು ಅವರೆಲ್ಲರೂ ಐದಾರಂಕಿಯ ಸಂಬಳವೇ ಬೇಕೆನ್ನುವ ಹಪಾಹಪಿಯಲ್ಲಿ ಸಿಕ್ಕ ಕೆಲಸಕ್ಕೂ ಸೇರಿಕೊಳ್ಳದೇ ಸುಮ್ಮನೇ ಮನೆಯಲ್ಲೇ ಕೂರುವ ಪರಿಣಾಮ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗಿದೆ. ಇನ್ನೂ ಸ್ವಲ್ಪ ಬುದ್ಧಿವಂತರು ಮತ್ತು ಹಣವಂತರು ವಿದೇಶಗಳಲ್ಲಿ ಉನ್ನತ ವ್ಯಾಸಂಗವನ್ನು ಮಾಡಿ ಅಲ್ಲಿನ ಐಶಾರಾಮ್ಯಕ್ಕೆ ಒಗ್ಗಿಹೋಗಿ ಅಲ್ಲಿಯೇ ಉಳಿದುಕೊಳ್ಳುವ ಮೂಲಕ ಪ್ರತಿಭಾ ಪಲಾಯನಕ್ಕೂ ಕಾರಣೀಭೂತರಾಗುತ್ತಿದ್ದಾರೆ.
ಇನ್ನು ಬಹುರಾಷ್ಟ್ರೀಯ ಕಂಪನಿಗಳ ಮಾನದಂಡಗಳು ಅಳವಡಿಸಿಕೊಂಡು ಅವುಗಳಿಗೆ ತಕ್ಕಂತೆ ವಿದ್ಯಾರ್ಥಿಗಳನ್ನು ಪೂರೈಸಲಾಗದ ಕಾರಣ ಆಂತಹ ಕಾಲೇಜುಗಳಿಗೆ ಹಲವು ಪ್ರತಿಷ್ಟಿತ ಕಂಪನಿಗಳು campus selectionಗೆ ಹೋಗುವುದನ್ನು ನಿಲ್ಲಿಸಿದಾಗ, ತಮಗೆ ವಿದ್ಯಾಭ್ಯಾಸಕ್ಕಿಂತಲೂ ಪ್ರತಿಷ್ಠಿತ ಕಂಪನಿಗಳಲ್ಲಿ ಆಳಾಗಿಸಬಲ್ಲಂತಹ ಕಾಲೇಜುಗಳ ಹುಡುಕಾಟದಲ್ಲಿ ಇದ್ದ ವಿದ್ಯಾರ್ಥಿಗಳು ಸರಿಯಾದ campus selection ಇಲ್ಲದ ಕಾಲೇಜುಗಳನ್ನು ತಿರಸ್ಕರಿಸಿದ ಕಾರಣ ಇಂದು ಅನೇಕ ಕಾಲೇಜುಗಳು ಮುಚ್ಚುತ್ತಿರುವುದು ನಿಜಕ್ಕೂ ಬೇಸರದ ಸಂಗತಿ ಎನಿಸಿದರೂ ಉತ್ತಮ ಬೆಳವಣಿಗೆಯಾಗಿದೆ.
ನನ್ನ ಮಕ್ಕಳೂ ಸಹಾ (ಮಗಳು architecture ಮಗ Electronics & Telecommunication engineering) ಇಂಜಿನಿಯರಿಂಗ್ ಓದುತ್ತಿದ್ದರೂ, ಶಿಕ್ಷಣ ಎಂದರೆ ಕೇವಲ engineering ಅದರಲ್ಲೂ Computer Science ಒಂದೇ ಅಲ್ಲಾ. ಅದರ ಹೊರತಾಗಿಯೂ ನೂರಾರು ಪದವಿಗಳಿವೆ ಎಂಬುದನ್ನು ಮನಗಾಣಬೇಕು. ಈ ರೀತಿಯಾಗಿ engineering ಓದಿಸಿ ಯಾವುದೋ ವಿದೇಶೀ ಕಂಪನಿಗಳಲ್ಲಿ ಹೆಚ್ಚಿನ ಕೂಲಿ (ನಾನು ಮಾಡುತ್ತಿರುವುದೂ ಅದೇ)ಗಾಗಿ ಕೆಲಸ ಮಾಡುವುದನ್ನು ಬಿಟ್ಟು ಗಣಿತ, ಭೌತಶಾಸ್ತ್ರ, ರಸಾಯನ ಶಾಸ್ಗ್ರದಂತಹ ಪದವಿ ಪಡೆದು ವಿಜ್ಣಾನಿಗಳೋ ಇಲ್ಲವೇ ಶಿಕ್ಷಕರೋ ಆಗಿ ದೇಶವನ್ನು ಮುನ್ನಡೆಸಬಹುದಾಗಿದೆ. ಇನ್ನೂ ಕೂತೂಹಲಕಾರಿಯಾದ ಸಂಗತಿ ಎಂದರೆ ಬಹುತೇಕ ಕಂಪನಿಗಳಲ್ಲಿ ವ್ಯವಹಾರಗಳನ್ನು ನೋಡಿಕೊಳ್ಳುವವರು Bcom, Mcom, CA, Cost accounting, Company secretory ಮಾಡಿರುವವರೇ ಆಗಿದ್ದು ತಮ್ಮ ಮಕ್ಕಳನ್ನು ಈ ಕೋರ್ಸಿಗೂ ಸೇರಿಸಬಹುದಾಗಿದೆ.
ಇನ್ನೂ ದೇಶ ಸೇವೆಗೆ ತಮ್ಮ ಮಕ್ಕಳನ್ನು ಕಳುಹಿಸಬೇಕು ಎನ್ನುವವರು ದೀರ್ಘಾವಧಿಯಲ್ಲಿ ಭೂಸೇನೆ, ನೌಕಾ ಪಡೆ ಇಲ್ಲವೇ ವಾಯುಪಡೆಗೂ ಸೇರಿಸುವ ಮೂಲಕ ತಮ್ಮ ದೇಶದ ಗಡಿಯನ್ನು ಕಾಯುವ ಕೆಲಸದಲ್ಲಿ ಭಾಗಿಗಳಾಗಬಹುದಾಗಿದೆ. ದೀರ್ಘಾವಧಿಯಲ್ಲಿ ಸೇವೆ ಸಲ್ಲಿಸಲು ಸಾಧ್ಯವಾಗದೇ ಹೋದಲ್ಲಿ ಇತ್ತೀಚೆಗೆ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ್ ನಲ್ಲಿ ನಾಲ್ಕುವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ಅದರಿಂದ ಲಭಿಸುವ ತರಭೇತಿ ಮತ್ತು ಹಣದಿಂದ ಸ್ವಂತ ಉದ್ಯೋಗವನ್ನು ಕಟ್ಟಿಕೊಳ್ಳಬಹುದಾಗಿದೆ
ಇನ್ನು ನಮ್ಮ ಆರೋಗ್ಯವನ್ನು ಕಾಪಾಡಲು ಡಾಕ್ಟರ್, ನರ್ಸ್, ಕೆಮಿಸ್ಟ್ ಗಳ ಅವಶ್ಯಕತೆ ಇದ್ದರೆ ನಮ್ಮ ದೈನಂದಿನ ಅವಶ್ಯಕತೆಗಳಾದ ಎಲೆಕ್ಟ್ರಿಷಿಯನ್, ಪ್ಲ೦ಬರ್, ಬಡಗಿ, ಡ್ರೈವರ್ ಮುಂತಾದ ವೃತ್ತಿಪರರ ಅವಶ್ಯಕತೆಯೂ ಇದೆ ಎಂಬುದನ್ನು ಮನಗಾಣಬೇಕಿದೆ. ಇನ್ನು ಊರಿನಲ್ಲಿ ಅಲ್ಪ ಸ್ವಲ್ಪ ಜಮೀನು ಇದ್ದಲ್ಲಿ ಅದನ್ನು ಬೇರೆ ಯಾರಿಗೋ ಗುತ್ತಿಗೆಗೆ ನೀಡಿ ಪಟ್ಟಾಣಗಳಲ್ಲಿ ಕೂಲಿಗೆ ಸೇರುವ ಬದಲು ಕೃಷಿ ವಿಜ್ಞಾನ, ಪಶುಸಂಗೋಪನೆ, ಹೈನುಗಾರಿಕೆಯಲ್ಲೂ ಪದವಿ ಪಡೆದು ತಮ್ಮ ಜಮೀನುಗಳಲ್ಲಿ ಪಾಲೇಕರ್ ಅವರು ಹೇಳಿದ ರೀತಿಯಲ್ಲಿ ಬಹು ಬೆಳೆಯಾಧಾರಿತ ಕೃಷಿಯನ್ನು ಮಾಡುವ ಮೂಲಕ ಆದಾಯ ತೆರಿಗೆ ರಹಿತ ಆದಾಯವನ್ನು ಗಳಿಸುವುದರ ಜೊತೆಗೆ ಅನ್ನದಾತ ಸುಖೀಭವ ಎನ್ನುವ ಆಶೀರ್ವಾದಕ್ಕೆ ಪಾತ್ರರಾಗ ಬಹುದಾಗಿದೆ.
ಈ ಲೇಖನ ಓದುತ್ತಿರುವ ಪೋಷಕರು ಏನಾದರೂ ಆಗು ಮೊದಲು ಇಂಜಿನಿಯರ್ ಆಗು ಎಂದು ದಯವಿಟ್ಟು ಹೇಳದೇ, ಅದರಲ್ಲೂ ತಮ್ಮ ಮಕ್ಕಳಿಗೆ ಕೇವಲ Computer Science ಮಾಡಲೇಬೇಕು ಎಂದು ಹೇರಿಕೆಯಾಗಲೀ ಬಲವಂತವನ್ನಾಗಲೀ ಮಾಡದೇ, ಉಳಿದ ವಿಷಯಗಳ ವಿಚಾರ ಮಾಡುವಂತಾದಲ್ಲಿ ಮತ್ತೆ ಭಾರತ ಯಾವುದೇ ವಿದೇಶಗಳನ್ನು ಆಶ್ರಯಿಸದೇ, ಸ್ವಾಭಿಮಾನಿಯಾಗಿ ತಲೆ ಎತ್ತುವ ಮೂಲಕ ವಿಶ್ವಗುರುವಾಗಬಲ್ಲದು ಎಂಬ ನಂಬಿಕೆ ನಮ್ಮದಾಗಿದೆ. ಮನಸ್ಸಿದ್ದಲ್ಲಿ ಖಂಡಿತವಾಗಿಯೂ ನೂರಾರು ಮಾರ್ಗವಿದೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
ಇಷ್ಟೆಲ್ಲಾ ಪಾಠ ಹೇಳುವ ನೀವು ಆರಂಕಿಯ ಸಂಬಳಕ್ಕೆ ಬಹುರಾಷ್ಟ್ರೀಯ ಕಂಪನಿಯಲ್ಲಿ ದುಡಿದು ಮಗನಿಗೂ ಇಂಜಿನಿಯರಿಂಗ್ ಮಾಡಿಸಿ ಬಹುರಾಷ್ಟ್ರ ಕಂಪನಿಯ ಕೆಲಸ ಸಿಗಲಿ ಎಂದು ಹಪಾಹಪಿಸುತ್ತ , ಬೇರೆ ಮಕ್ಕಳಿಗೆ ,ಪೋಷಕರಿಗೆ ಬುದ್ಧಿ ಹೇಳೆವುದು ಹಾಸ್ಯಾಸ್ಪದ. ನಮ್ಮಲ್ಲಿ ಪಕ್ಕದ ಮನೆಯವ ಸೈನ್ಯಕ್ಕೆ ಸೇರಲಿ ಮಡಿಯಲಿ ಆದರೆ ನಮ್ಮ ಮಕ್ಕಳು ಬೇಡ ಎನ್ನುವ ಬುದ್ದಿ ಹೋಗಬೇಕು , ಇದು ನಿಮಗೂ ನಮಗೂ ಅನ್ವಯ ಆಗುತ್ತೆ ಅಲ್ವೇ.. ಏನಂತೀರಿ. .?
LikeLiked by 1 person
ದಯವಿಟ್ಟು ಈ ಲೇಖನ ಓದಿದಲ್ಲಿ ನಿಮ್ಮ ಪ್ರಶ್ನೆಗೆ ಉತ್ತರ ದೊರೆಯುತ್ತದೆ.
https://enantheeri.com/2022/06/30/sainika/
LikeLike
Sir Good Approach to article and you written true fact and there are lot of opportunities are available in other Engineering branches to solve atma nirbhara bharath
Parents and upcoming job seekers should think more on sustainable jobs instead of short term jobs or else they choose more start up after Engineering courses instead of sitting in home
LikeLiked by 1 person
ತುಂಬ ಸೂಕ್ಷ್ಮ ಒಳನೋಟಗಳನ್ನು ಒಳಗೊಂಡಿರುವ ಅರ್ಥಗರ್ಭಿತ ಬರಹ
LikeLiked by 1 person
ಧನ್ಯೋಸ್ಮಿ
LikeLike
Desha bittu hoguva vichara thandavaru e rajakiya janarinda. Rajakiya sariyagiddare prathibhavantaru videsha bittu swadeshadalli nelesuththare
LikeLiked by 1 person