ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದ ಇತಿಹಾಸದಲ್ಲಿ ಜುಲೈ 21 2022 ಅತ್ಯಂತ ಮಹತ್ವ ದಿನವಾಗಿದ್ದು ಇಂದು ಈ ದೇಶದ ಎರಡು ಪ್ರಭಲ ಮಹಿಳೆಯರಿಗೆ ಮೀಸಲಾಗಿದೆ. ಒಬ್ಬರು ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಸಹಾ ಪ್ರಜಾತಾಂತ್ರಿಕವಾಗಿ ಹೇಗೆ ದೇಶದ ಉನ್ನತ ಪದವಿಯನ್ನೇರಬಹುದು ಎಂಬುದಕ್ಕೆ ಜ್ವಲಂತ ಸಾಕ್ಷಿಯಾದರೆ, ಮತ್ತೊಬ್ಬರು ಈ ದೇಶವನ್ನು ಆಳಿದ ಅತಿದೊಡ್ಡ ಪಕ್ಷದ ಹಂಗಾಮಿ ಅಧ್ಯಕ್ಷೆಯಾಗಿ ತಮ್ಮ ಪಕ್ಷದ ಕಾರ್ಯಕರ್ತರ ಮೂಲಕ ಹೇಗೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕ ಮಾಡಬಹುದು ಎಂಬ ಕೆಟ್ಟ ಸಂಪ್ರದಾಯಕ್ಕೆ ಸಾಕ್ಷಿಯಾಗಿದ್ದಾರೆ. .
ದೇಶದ 15ನೇ ರಾಷ್ಟ್ರಪತಿಗಳ ಚುನಾವಣೆ ಘೋಷಣೆಯಾಗಿ ಆಡಳಿತ ಪಕ್ಷದಿಂದ ಒರಿಸ್ಸಾದ ಬುಡುಕಟ್ಟು ಜನಾಂಗದಲ್ಲಿ ಜನಿಸಿದ್ದರೂ ತನ್ನ ಸ್ವಸಾಮರ್ಧ್ಯದಿಂದ ಉನ್ನತ ಶಿಕ್ಷಣ ಪಡೆದು ಕೆಲವು ಕಾಲ ಶಿಕ್ಷಕಿಯಾಗಿದ್ದು ನಂತರ ತನ್ನ ಪಂಗಡವರಿಗೆ ಸರ್ಕರದಿಂದ ದೊರೆಯಬೇಕಾದ ಸಕಲ ಸ್ಲೌಲಭ್ಯಗಳನ್ನು ದೊರೆಕಿಸಿಕೊಡುವ ಸಲುವಾಗಿ ರಾಜಕೀಯಕ್ಕೆ ಪ್ರವೇಶಿಸಿ ಹಂತಹಂತವಾಗಿ ಪಂಚಾಯಿತಿ, ವಿಧಾನ ಸಭೆಗೂ ಆಯ್ಕೆಯಾಗಿ, ಒರಿಸ್ಸಾದ ಮಂತ್ರಿಯಾಗಿ ನಂತರ ಕೆಲವು ರಾಜ್ಯಗಳ ರಾಜ್ಯಪಾಲೆಯಾಗಿದ್ದ ದ್ರೌಪತಿ ಮುರ್ಮುರವರು ಅಯ್ಕೆಯಾದಾಗಲೇ ದೇಶದ ಬಹುತೇಕ ಸಾಂಸದರು ಆಕೆಯ ಪರವಾಗಿ ಬಹಿರಂಗವಾಗಿಯೇ ಬೆಂಬಲ ಸೂಚಿಸಿದಾಗಲೇ ಆಕೆಯ ಗೆಲುವು ನಿಶ್ಚಯವಾಗಿ, ಅಧಿಕಾರದಾಹಿ ಯಶವಂತ್ ಸಿನ್ಹಾರವರ ಸೋಲು ಕಟ್ಟಿಟ್ಟ ಬುತ್ತಿಯಾಗಿತ್ತು.
ಈ ಲೇಖನ ಬರೆಯುತ್ತಿರುವ ಸಮಯದಲ್ಲಿ ಪ್ರಾಥಮಿಕ ಹಂತರದ ರಾಷ್ಟ್ರಪತಿ ಚುನಾವಣೆಯ ಮತಗಳ ಎಣಿಕೆ ನಡೆಯುತ್ತಿದ್ದು. ಸಂಸದರ ಮತಗಳನ್ನು ಮೊದಲು ಎಣಿಕೆ ಮಾಡಿದ್ದರಿಂದ ಒಟ್ಟು 748 ಮತಗಳಲ್ಲಿ ದ್ರೌಪದಿ ಮುರ್ಮು 540 ಮತಗಳನ್ನು ಪಡೆದರೆ, ಯಶವಂತ್ ಸಿನ್ಹಾ 204 ಮತಗಳನ್ನು ಪಡೆಯುವ ಮೂಲಕ ಎನ್ಡಿಎಯ ದ್ರೌಪದಿ ಮುರ್ಮು ಗಮನಾರ್ಹ ಮುನ್ನಡೆಯನ್ನು ಪಡೆದುಕೊಂಡಿದ್ದು ಸಂಜೆ 4 ಗಂಟೆ ಸುಮಾರಿಗೆ ಅಧಿಕೃತವಾಗಿ ಫಲಿತಾಂಶಗಳು ಹೊರಬೀಳುವ ಮೂಲಕ ಈ ದೇಶದ 15ನೇ ರಾಷ್ಟ್ರಪತಿಗಳಾಗಿ ಮುಂದಿನ ತಿಂಗಳು ಶ್ರೀ ರಾಮನಾಥ್ ಕೋವಿಂದ್ ಅವರ ಉತ್ತರಾಧಿಕಾರಿಗಳಾಗಲಿದ್ದಾರೆ.
ಇನ್ನು ಮತ್ತೊಂದೆಡೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಹಣದ ವಹಿವಾಟು ಪ್ರಕರಣದ ಕುರಿತಂತೆ ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯ ಸ್ವಾಮಿಯವರು 1 ನವೆಂಬರ್ 2012 ರಂದು, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಇಬ್ಬರೂ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಎಂಬ ಸಾರ್ವಜನಿಕವಾಗಿ ಸೀಮಿತವಾದ ಕಂಪನಿಯನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ₹16 ಶತಕೋಟಿ (US$210 ಮಿಲಿಯನ್) ಮೌಲ್ಯದ ವಂಚನೆ ಮತ್ತು ಭೂಕಬಳಿಕೆ ಮಾಡಿದ್ದಾರೆ ಎಂದು ಆರೋಪಿಸಿ ದೆಹಲಿಯ ನ್ಯಾಯಾಲಯದಲ್ಲಿ ಖಾಸಗಿ ದೂರನ್ನು ಸಲ್ಲಿಸಿದರು. ಅಂದಿನಿಂದ ಕುಂಟುತ್ತಾ ತೆವಳುತ್ತಾ ಸಾಗಿದ್ದ ವಿಚಾರಣೆಯಲ್ಲಿ ಅಮ್ಮಾ ಮತ್ತು ಮಗ ಹಲವಾರು ಬಾರಿ ಬೇಲ್ ಪಡೆದುಕೊಂಡಿದ್ದರು. ಈ ಪ್ರಕರಣದ ಕುರಿತಂತೆ ಜಾರಿ ನಿರ್ದೇಶನಾಲಯವು ಕೆಲ ದಿನಗಳ ಹಿಂದೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತವರ ಮಗ ರಾಹುಲ್ ಗಾಂಧಿಯವರಿಗೆ ಸಮನ್ಸ್ ಕಳುಹಿಸಿ ಖುದ್ದಾಗಿ ವಿಚಾರಣೆಗೆ ಹಾಜರಾಗಲು ಸೂಚಿಸಿತ್ತು.
ಚಾರಿ ನಿರ್ದೇಶನಾಲಯದ ಸಮನ್ಸ್ ಜಾರಿಯಾಗುತ್ತಿದ್ದಂತೆಯೇ ಕಾಂಗ್ರೇಸ್ ಪಕ್ಷದ ವಿವಿಧ ಸ್ಥರದ ನಾಯಕರು ಮತ್ತವರ ಪಕ್ಷದ ಸದಸ್ಯರು ಇದು ಪ್ರಜಾಪಭುತ್ವದ ಕಗ್ಗೊಲೆ, ಆಡಳಿತ ಪಕ್ಷ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಬೊಬ್ಬೆ ಹೊಡೆಯುವುದಕ್ಕೆ ಆರಂಭಿಸಿತು. ಪ್ರಜಾಪ್ರಭುತ್ವದಲ್ಲಿ ಖಂಡಿತವಾಗಿಯೂ ಪ್ರತಿಭಟನೆಗಳಿಗೆ ಅವಕಾಶವಿದೆ. ಅದರಲ್ಲೂ ವಿರೋಧ ಪಕ್ಷ ಎಂದ ಮೇಲೆ ದೇಶದ ಹಿತದೃಷ್ಟಿಯಿಂದ ಹೋರಾಟ ಮತ್ತು ಪ್ರತಿಭಟನೆ ಮಾಡುವುದು ಸಹಜ ಪ್ರಕ್ತಿಯೆಯಾಗಿದೆ.
ಆದರೆ ದೇಶದ ಹಿತದೃಷ್ಟಿ ಇಲ್ಲದೇ ತಮ್ಮ ಪಕ್ಷದ ನಾಯಕರ ಗುಲಾಮರಾಗಿ ದೇಶಾದ್ಯಂತ ಕಾಂಗ್ರೆಸ್ ನಾಯಕರು ಪರ-ವಿರೋಧದ ಹೇಳಿಕೆಗಳನ್ನು ನೀಡುತ್ತಾ, ತಮ್ಮ ಪಕ್ಷದ ಮುಖ್ಯಸ್ಥರನ್ನು ಬೆಂಬಲಿಸಿ, ಇಡಿ ದುರುಪಯೋಗ ನಿಲ್ಲಿಸಿ ಎಂಬ ದೊಡ್ಡ ಬ್ಯಾನರ್ಗಳನ್ನು ಹಿಡಿದುಕೊಂಡು ರಾಷ್ಟ್ರವ್ಯಾಪಿ ಪ್ರತಿಭಟನೆಗಳನ್ನು ನಡೆಸುವ ಮೂಲಕ ಪಕ್ಷವು ಶಕ್ತಿ ಪ್ರದರ್ಶನವನ್ನು ಮಾಡುವುದಕ್ಕಷ್ಟೇ ಸೀಮಿತವಾಗದೇ, ದೇಶಾದ್ಯಂತ ಅನೇಕ ನಗರಗಳಲ್ಲಿ ಆವರ ಕಾರ್ಯಕರರ್ತರು ಪ್ರತಿಭಟನೆಯ ಹೆಸರಿನಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ನಷ್ಟ ಮಾಡುತ್ತಿರುವುದು ನಿಜಕ್ಕೂ ಪ್ರಜಾಪ್ರಭುತ್ವದ ನೀತಿ ನಿಯಮಗಳನ್ನು ಅಣಕ ಮಾಡುವಂತಿದೆ.
ತಮ್ಮ ನಾಯಕರುಗಳನ್ನು ಹೊಗಳುವ ಭರದಲ್ಲಿ ಸ್ವಾತಂತ್ರ ಹೋರಾಟದಲ್ಲಿ ಮುಂಚೂಣಿಯಲ್ಲಿ ಹೋರಾಡಿ ಈ ದೇಶಕ್ಕೆ ಬ್ರಿಟೀಷರಿಂದ ಸ್ವಾತ್ರಂತ್ರ ಕೊಡಿಸಿದ್ದು ಕಾಂಗ್ರೆಸ್ ಪಕ್ಷ. ಅದಾದ ನಂತರ ಈ ದೇಶವನ್ನು ಮುನ್ನೆಡೆಸಿದ್ದು ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅಂತಹ , ಗಾಂಧಿ ಕುಟುಂಬದ ತ್ಯಾಗ ಮತ್ತು ಹೋರಾಟಗಳನ್ನು ಅರ್ಥಮಾಡಿಕೊಳ್ಳಲು ಈ ದೇಶದ ಜನರು ಹಲವಾರು ಬಾರಿ ಮರುಹುಟ್ಟು ಪಡೆಯಬೇಕು ಎಂಬ ಬಾಲಿಷವಾದ ಹೇಳಿಯನ್ನು ಪತ್ರಿಕಾಗೋಷ್ಠಿಯಲ್ಲಿ ಹೇಳುವ ಮೂಲಕ ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರವೇ ಇರುವುದೇ ಪ್ರಜಾತಂತ್ರದ ವ್ಯವಸ್ಥೆ ಎನ್ನುವುದನ್ನೇ ಮರೆತು ಮತ್ತೆ ಇಡೀ ದೇಶ ಮತ್ತು ದೇಶದ ಅಧಿಕಾರ ಒಂದು ಕುಟುಂಬದ ಸ್ವತ್ತು ಎಂಬಂತೆ ವರ್ತಿಸುತ್ತಿರುವುದು ಕೇವಲ ಬೌದ್ಧಿಕ ದೀವಾಳಿತನವಲ್ಲದೇ ಮೂರ್ಖತನದ ಪರಮಾವಧಿಯಾಗಿದೆ ಎಂದರು ತಪ್ಪಾಗದು.
ಇನ್ನು ರಾಜಾಸ್ಥಾನದ ಮುಖ್ಯಮಂತ್ರಿಯಾಗಿರುವ ಅಶೋಕ್ ಗೆಹ್ಲೋಟ್, ಸೋನೀಯಾ ಗಾಂಧಿ ಕುಟುಂಬದ ಮೇಲೆ ತನ್ನ ಸ್ವಾಮಿ ನಿಷ್ಟೆಯನ್ನು ಜಗಜ್ಜಾಹೀರಾತು ಮಾಡುವ ಭರದಲ್ಲಿ ತಮ್ಮ ಪಕ್ಷದ ಹಿರಿಯ ನಾಯಕಿಗೆ ಸರ್ಕಾರ ನೀಡುತ್ತಿರುವ ಮರ್ಯಾದೆಯನ್ನು ಇಡೀ ದೇಶ ನೋಡುತ್ತಿದೆ. ಆಕೆಯ ವ್ಯಕ್ತಿತ್ವ ಹಾಗೂ ಸೆಳವು ಅದ್ಭುತ. 70 ವರ್ಷಕ್ಕಿಂತಲೂ ಹೆಚ್ಚಿನ ವಯಸ್ಸಾಗಿರುವ ಸೋನಿಯಾರವರನ್ನು ವಿಚಾರಣೆಗೆ ಇಡಿ ಕಛೇರಿಗೆ ಕರೆಯುವ ಬದಲು ಇಡಿ ಅಧಿಕಾರಿಗಳೇ ಸೋನಿಯಾ ಗಾಂಧಿ ಅವರ ಮನೆಗೆ ಹೋಗಬೇಕಿತ್ತು ಎನ್ನುವ ಮೂಲಕ ಸ್ವಾಯುತ್ತತೆ ಹೊಂದಿದ ತನಿಖಾ ಇಲಾಖೆಗಳೂ ಸಹಾ ಕುಟುಂಬದ ಅಡಿಯಾಳಾಗಿ ಇರಬೇಕು ಎನ್ನುವ ಮಟ್ಟಕ್ಕೆ ಇಳಿದಿದ್ದಾರೆ ಎಂದರೆ ಅವರನ್ನೇ ಅನುಸರಿಸುವ ಅವರ ಕಾರ್ಯಕರ್ತರನ್ನು ದೂಷಿಸುವುದರಲ್ಲಿ ಅರ್ಥವಿಲ್ಲ ಎನಿಸುತ್ತದೆ.
ಇನ್ನು ತನ್ನನ್ನೇ ತಾನು ಸತ್ಯ ಹರಿಶ್ಚಂದ್ರ ವಂಶದವನು ಎಂದು ಬಿಂಬಿಸಿಕೊಂಡೇ ಮೆರದಾಡುವ ಕಾಂಗ್ರೆಸ್ ಹಿರಿಯ ಶಾಸಕರಾದ ರಮೇಶ್ ಕುಮಾರ್ ಅವರೇ ಈ ದಿನದ ಪ್ರತಿಭಟನೆಯಲ್ಲಿ, ಗಾಂಧಿ ಕುಟುಂಬ ಅಧಿಕಾರದಲ್ಲಿದ್ದಾಗ 3-4 ತಲೆಮಾರಿಗೆ ಆಗುವಷ್ಟು ನೆಹರು , ಇಂದಿರಾ , ಹಾಗೂ ಸೋನಿಯಾ ಹೆಸರಲ್ಲಿ ನಾವು ಮಾಡಿಕೊಂಡಿದ್ದೇವೆ.ಗಾಂಧಿ ಕುಟುಂಬದ ಋಣ ತೀರಿಸದಿದ್ದರೆ ನಮ್ಮ ಅನ್ನಕ್ಕೆ ಹುಳ ಬೀಳುತ್ತದೆ. ಹಾಗಾಗಿ ಇಂದಿನ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೇನೆ ಎನ್ನುವ ಮೂಲಕ ಕಡೆಗೂ ಸತ್ಯವನ್ನು ಒಪ್ಪಕೊಂಡಿರುವುದು ಗಮನಿಸಬೇಕಾದ ಅಂಶವಾಗಿದೆ.
ಪ್ರತೀಭಾರಿಯೂ ಈ ದೇಶದ ಪ್ರಜಾಪ್ರಭುತ್ವ, ಈ ದೇಶದ ಸಂವಿಧಾನದ ಪ್ರಕಾರ ಎಂದು ಹೇಳುವ ಇದೇ ಕಾಂಗ್ರೇಸ್ಸಿಗರು ತಮ್ಮ ಅಧಿನಾಯಕರುಗಳು ತಪ್ಪು ಮಾಡಿಲ್ಲವೆಂದಾದಲ್ಲೇ ಪ್ರಜಾಪ್ರಭುತ್ವದ ಮೂರು ಅಂಗಗಳಲ್ಲಿ ಒಂದಾದ ನ್ಯಾಯಾಂಗಕ್ಕೆ ಗೌರವ ನೀಡಿ ಅಲ್ಲಿನ ವಿಚಾರಣೆಗೆ ಹಾಜರಾಗಿ ತಮ್ಮ ಪರವಾಗಿ ವಾದಿಸುವುದನ್ನು ಬಿಟ್ಟು ಈ ರೀತಿಯಾಗಿ ದೇಶದಲ್ಲಿ ದಳ್ಳುರಿ ಎಬ್ಬಿಸುವುದು ಅಕ್ಷಮ್ಯ ಅಪರಾಧವಾಗಿದೆ. 20 ವರ್ಷಗಳ ಹಿಂದೆ ಗುಜರಾಥ್ ಗೋದ್ರಾ ಹತ್ಯಾಕಾಂಡದಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿಗಳಾಗಿದ್ದ ಇಂದಿನ ಪ್ರಧಾನ ಮಂತ್ರಿಗಳನ್ನೂ ಸಹಾ ಇದೇ ಕಾಂಗ್ರೇಸ್ಸಿನ ಅಧಿನಾಯಕಿ ಸೋನಿಯಾ ಮತ್ತವರ ಛೇಲಾ ದಿವಂಗತ ಅಹ್ಮಮದ್ ಪಟೇಲ್ ಎಂಬಾತ ತೀಸ್ತಾ ಸೆತಲ್ವಾಡ್ ಎಂಬ ಮಹಿಳಿಗೆ ಹಣದ ಆಮಿಷ ಕೊಟ್ಟು ಸುಳ್ಳು ಸುಳ್ಳು ಕೇಸ್ ಗಳನ್ನು ಹಾಕಿಸಿ ಸುಮಾರು 20 ವರ್ಷಗಳ ಕಾಲ ಕೋರ್ಟ್ ಮತ್ತು ಕಛೇರಿಗಳನ್ನು ಅಲೆಸಿದ್ದಲ್ಲದೇ, ಹೊತ್ತಲ್ಲದ ಹೊತ್ತಿನಲ್ಲಿ ಗಂಟೆಗಟ್ಟಲೆ ವಿಚಾರಣೆ ನಡೆಸಿದಾಗಲೂ ನರೇಂದ್ರ ಮೋದಿಯವರಾಗಲೀ ಅವರ ಪಕ್ಷದ ಕಾರ್ಯಕರ್ತರಾಗಲೀ ಈ ರೀತಿಯ ದಾಂಧಲೆಯನ್ನು ನಡೆಸಿರಲಿಲ್ಲ ಎಂಬುದನ್ನು ಮನಗಾಣಬೇಕಿದೆ.
ಇಂದು ಬೆಳಿಗ್ಗೆ ಸಾಮಾಜಿಕಜಾಲ ತಾಣದಲ್ಲಿ ಒಂದಿದ ಸಂದೇಶದಲ್ಲಿ
ಈ ದಿನದ ವಿಶೇಷ:
ಒಬ್ಬ ಶ್ರೀಮಂತ ಮಹಿಳೆ ಇಡಿ ವಿಚಾರಣೆಗೆ ಹೋಗ್ತಾ ಇದ್ರೆ,
ಒಬ್ಬ ಸಾಮಾನ್ಯ ಮಹಿಳೆ ರಾಷ್ಟ್ರಪತಿ ಆಗ್ತಾ ಇದ್ದಾರೆ. ಎನ್ನುವುದು ಓದುವುದಕ್ಕೆ ಅತ್ಯಂತ ಸರಳ ಎನಿಸಿದರು, ಅಷ್ಟೇ ಅರ್ಥಗರ್ಭಿತವಾಗಿದೆ ಎನಿಸುತ್ತದೆ ಅಲ್ವೇ?
ಪ್ರಜಾಪ್ರಭುತ್ವದಲ್ಲಿ ದೇಶದ ಬಗ್ಗೆ ಆಡಳಿತ ಪಕ್ಷಕ್ಕೆ ಇರುವಷ್ಟೇ ಕಾಳಜಿ ವಿರೋಧ ಪಕ್ಷಕ್ಕೂ ಇರಬೇಕಾಗಿರುತ್ತದೆ. ಹಾಗಾಗಿ ವಿರೋಧ ಪಕ್ಷಗಳನ್ನು ಪ್ರಜಾಪ್ರಭುತ್ವದ ಕಾವಲು ನಾಯಿಗಳು ಎಂದೇ ಸಂಭೋಧಿಸುತ್ತಾರೆ. ಬಹುಶಃ ಕಾಂಗ್ರೇಸ್ ನಾಯಕರು ಅದನ್ನು ತಪ್ಪಾಗಿ ಅರ್ಧೈಸಿಕೊಂಡು ನಾಯಿಗಳಂತೆ ಬೀದಿಯಲ್ಲಿ ಕಚ್ಚಾಡುತ್ತಿರುವುದು ಪ್ರಜಾಪ್ರಭುತ್ವಕ್ಕೆ ಅಣಕ ಮಾಡಿತಂತಿದೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ